ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, June 9, 2024

ಯಮ

ಯಮ ಎದುರಿಗೆ ಬಂದು ನಿಂತಾಗ
ಅವಳು ಸೀರೆ ಉಡುತ್ತಿದ್ದಳು

ಪೂರ್ಣ ಉಟ್ಟೇ ಇರಲಿಲ್ಲ
ಸಾಕು ಸಾಕು
ಬಾ ಜೊತೆಗೆ
ಎಂದನು ಯಮ


ಅವಳು ಯಮನನ್ನೇ ನೋಡಿದಳು
ಚಿತ್ರದಲ್ಲಿ ಕಂಡಂತೆ ಇರಲಿಲ್ಲ
ಎಷ್ಟು ಚಂದ ಗೊತ್ತಾ
ಒಳ್ಳೆಯ ಎತ್ತರ
ಅದಕ್ಕೆ ಸರಿಯಾದ ತೂಕ


ಯಮ ಒಮ್ಮೆ ನಕ್ಕ
ಸಾಕು ಸಾಕು
ಬಾ ಜೊತೆಗೆ


ಸ್ವಲ್ಪ ಇರಿಯಪ್ಪ
ಸ್ವಲ್ಪ ಜಡೆ ಕಟ್ಕೋತೇನೆ..

ನಿಮ್ದು ಮದ್ವೆ ಆಗಿದ್ಯಾ?
ಯಾಕೆ?
ಸುಮ್ನೆ ಕೇಳ್ದೆ
ಆಗಿದೆ
ಹೆಂಡ್ತಿ ಅಂದ್ರೆ ಇಷ್ಟನಾ?
ಹೌದು

ಸಾಕು ಸಾಕು
ಬಾ ಜೊತೆಗೆ

ಈ ಬೊಟ್ಟು ಹಾಕೋತೇನೆ
ಕನ್ನಡಿಯಲ್ಲಿ ಅಂಟಿಸಿಟ್ಟ ಬೊಟ್ಟನ್ನು
ಹಣೆಗಿಟ್ಟಳು

ಇಷ್ಟು ಸಾಕು
ಬಾ ಜೊತೆಗೆ

ಯಮ ಅವಳ ಮುಖವನ್ನೊಮ್ಮೆ ನೋಡಿದ
ಅವಳ ಕಣ್ಣುಗಳು ತುಂಬಿದ್ದವು

ಯಮ ಅವಳ ಕಣ್ಣೀರು ಒರೆಸಿದ
ಅವಳನ್ನಾಲಂಗಿಸಿ
 ಹಣೆಗೆ ಮುತ್ತನ್ನಿಟ್ಟ


ಇಷ್ಟು ಪ್ರೀತಿಯಿಂದ
ಯಾರೂ ನೋಡಿಕೊಂಡಿರಲಿಲ್ಲ ನನ್ನನ್ನು 
ಮುದ್ದಿಸಿರಲಿಲ್ಲ 


ಯಮ ನಕ್ಕು ನುಡಿದ
ಅದಕ್ಕೇ ಎಲ್ಲರೂ ನನ್ನ ಹಿಂದೆ ಬರುವುದು
ಜಗದ ಎಲ್ಲವನ್ನೂ 
ಎಲ್ಲರನ್ನೂ ತೊರೆದು


ಅವಳು ಆ ಕೈಹಿಡಿದು ನಡೆದಳು
 ದೂರ ಬಹುದೂರ
*
ಮಲಯಾಳಂ ಮೂಲ -ನಯನಾ ವೈದೇಹಿ



ಕನ್ನಡಕ್ಕೆ- ಕಾಜೂರು ಸತೀಶ್

Monday, May 27, 2024

ಅವ್ಯವಸ್ಥೆ ಎಂದರೆ..


ಆ ಮೇಷ್ಟ್ರನ್ನು ಆ... ಶಾಲೆಗೆ ನಿಯೋಜಿಸಿದ್ದರು! (ಅಷ್ಟು ಹೊಟ್ಟೆಕಿಚ್ಚು?)

ಅಲ್ಲಿ ಇಬ್ಬರು ಮಕ್ಕಳು. ಒಂದೇ ಮನೆಯ ಇಬ್ಬರು ಮಕ್ಕಳು! ತಂತ್ರಜ್ಞಾನ/ facebook/whatsappಗಳನ್ನೇ ಅರಿಯದ ಇಬ್ಬರು. ಗುದ್ದಲಿ ತೆಗೆದು ಅಗೆಯುವುದೆಂದರೆ ಅಷ್ಟು ಇಷ್ಟ ಆ ಮಕ್ಕಳಿಗೆ.

ಅಲ್ಲಿ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸುವವರಿಲ್ಲ. ಇದ್ದರೂ ಊರುಬಿಟ್ಟು ಹೊರಟುಹೋಗಿದ್ದಾರೆ. ಯಾರನ್ನಾದರೂ ಕೇಳೋಣವೆಂದರೆ ಮೊಬೈಲ್ ಸಿಗ್ನಲ್ ಇಲ್ಲ. ನೇಮಿಸೋಣವೆಂದರೆ ಅಂಥವರು ಆ ಊರಲ್ಲಿಲ್ಲ.

ಮೇಷ್ಟ್ರು ಅಂದಿನಿಂದ ಅಡುಗೆ ಭಟ್ಟರಾದರು.(ಇದನ್ನೆಲ್ಲ ವಿಚಾರಿಸಬೇಕಾದ ಮಂದಿ ಮನೆಯಲ್ಲೇ ಕುಳಿತು ಭರ್ಜರಿ ಅಡುಗೆ ಮಾಡಿ ಊಟಮಾಡಿ ಹಾಯಾಗಿದ್ದರು!).
ಅಡುಗೆ ಸಾಮಗ್ರಿಗಳನ್ನು ತಂದು, ಗ್ಯಾಸ್ ತಂದು ( ಅಡುಗೆ ಸಿಬ್ಬಂದಿ ಇಲ್ಲದಿದ್ದರೆ ಹಣ ಮುಟ್ಟುವಂತಿಲ್ಲ!) ಅಡುಗೆ ಮಾಡಿ ,ಪಾತ್ರೆ ತೊಳೆದು ಎರಡು ತಿಂಗಳು professional cook ಆದ ಆ ಮೇಷ್ಟ್ರು ಹೊಸ ಕೆಲಸಕ್ಕೆ ಒಗ್ಗಿಕೊಳ್ಳುತ್ತಿರುವಾಗಲೇ ಆ ಮಕ್ಕಳೆರಡು ದೂರದ ವಸತಿನಿಲಯಕ್ಕೆ ಸೇರಿಕೊಂಡರು. ಆ ಮೂಲಕ ಆ ಶಾಲೆಯ ಬಾಗಿಲು ಸಂಪೂರ್ಣವಾಗಿ ಮುಚ್ಚಿಕೊಂಡಿತು.

ಇತ್ತ ಮೂಲ ಶಾಲೆಯ ಮಕ್ಕಳು ಒಬ್ಬರಾದ ಮೇಲೆ ಒಬ್ಬರು ವರ್ಗಾವಣೆ ಪತ್ರ ಪಡೆದುಕೊಂಡು ಬೇರೆ ಕಡೆಗೆ ಹೊರಟುಹೋಗಿದ್ದರು.

ಪ್ರತೀ ಮಾನ್ಸೂನ್ ಆರಂಭದಲ್ಲಿ ಇದು ಮುಂದುವರಿಯುವಾಗ ಆ ಮೇಷ್ಟ್ರು ಇರುವ ಮೂಲ ಶಾಲೆಯ ಬಾಗಿಲು 'ಮುಚ್ಬಿಡ್ಲಾ ಮೇಷ್ಟ್ರೇ' ಎಂದು ಮುಗ್ಧವಾಗಿ ಕೇಳಿದಂತೆ ಅನ್ನಿಸುತ್ತದೆ.