ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, February 5, 2022

ಮುಟ್ಟದೆಯೇ ಮುತ್ತಿಡುವ ಮೋಹಕತೆ



ಮಂಜುಳಾ ಹುಲಿಕುಂಟೆ ಅವರ ದೀಪದುಳುವಿನ ಕಾತರ ಕವನ ಸಂಕಲನವನ್ನು ಈ ಬೆಳಿಗ್ಗೆ ಓದಿದೆ. ಮುಗ್ಧ ಹುಡುಗಿಯೊಬ್ಬಳ  ಪ್ರೇಮದ ಕುರಿತ ಭಾಷ್ಯ, ಲೋಕ ಗ್ರಹಿಕೆ, ದಿನಚರಿ, ಆತ್ಮಕಥಾನಕಗಳಿವು. ಪ್ರೇಮ-ವಿರಹ, ಹತಾಶೆ-ಜೀವಂತಿಕೆಗಳ ಮಿಶ್ರಣ, 
'ಮುಟ್ಟದೆಯೇ ಮುತ್ತಿಡುವ ಮೋಹಕತೆ'

ಹಾಡಿಕೊಳ್ಳಲು ಬಿಟ್ಟುಬಿಡಿ
ನನ್ನ ಪಾಲಿನ ಹಾಡುಗಳ
*

ಹಚ್ಚಿಟ್ಟ ಹಣತೆಯಲ್ಲಿ
ನನ್ನ ನಾನೇ ಸುಟ್ಟುಕೊಳ್ಳುವಾಗ
ಬೆಳಕೆಂದು ಭ್ರಮಿಸುವ ಅವನು
ಮುಗ್ಧನೋ ಕ್ರೂರಿಯೋ
ಅರಿವಾಗುವುದಿಲ್ಲ.
*


'ದೀಪದ ಹುಳು' ಹೆಣ್ಣಿನ ಕುರಿತ ಸಶಕ್ತ ಪ್ರತೀಕ . ದೀಪದ ಹುಳುವಿನ ಕನಸು ಬಗೆಬಗೆಯದಾದರೂ ಕಡೆಗೆ ಸುಟ್ಟು ಕರಕಲಾಗುವ ಹಿಂಸೆ. ಆದರೆ ಕರಕಲಾಗುವ ಮೊದಲಿನ ಕ್ಷಣಗಳ ಉತ್ಕಟ ಪ್ರೇಮದ ಧ್ಯಾನ ಈ ಕವಿತೆಗಳು.


ನನ್ನವ್ವ ನನ್ನ ಹೆರುವ ಮೊದಲೇ
ಸ್ವಾಭಿಮಾನವನ್ನು ಹೆತ್ತಿದ್ದಳು

ಪ್ರೇಮ
ಕೊರಳ ಮೇಲಿನ ಕುಣಿಕೆಯಾದಾಗಲೂ
ಸಾವ ಕ್ಷಣಕ್ಷಣವನ್ನು ಇನ್ನಿಲ್ಲದಂತೆ ಅಪ್ಪಿಕೊಂಡಿದ್ದೇನೆ.
*
ಇನ್ನೂ deep ಆಗಿ ಈ ಮುಗ್ಧ ಲೋಕದೊಳಗೆ ಇಳಿದಾಗ ಪದ್ಯಗಳು ಹೆಚ್ಚು ಕಾಡುತ್ತವೆ. ಮಂಜುಳಾ ಹುಲಿಕುಂಟೆ  ಅವರಿಗೆ ಶುಭಾಶಯಗಳು 

*
ಕಾಜೂರು ಸತೀಶ್ 



ಪ್ರೀತಿ ಮತ್ತು ಪ್ರಾಯಶ್ಚಿತ್ತ ಮತ್ತು ಉಲುಹಿನ ವೃಕ್ಷದ ನೆಳಲು


'ಸಂಕಥನ'ದ ಗೆಳೆಯ ರಾಜೇಂದ್ರ ಪ್ರಸಾದ್ ಅವರ 'ಪ್ರೀತಿ ಮತ್ತು ಪ್ರಾಯಶ್ಚಿತ್ತ' ಮತ್ತು 'ಉಲುಹಿನ ವೃಕ್ಷದ ನೆಳಲು' ಎಂಬ ಎರಡು ಕೃತಿಗಳನ್ನು ಓದಿದೆ. ಸಿದ್ಧಮಾದರಿಯ 'ಮುನ್ನುಡಿ ಬೆನ್ನುಡಿ'ಗಳ ಬದಲಿಗೆ ಕೃತಿಯ ಕೇಂದ್ರಪ್ರಜ್ಞೆಯ ಕುರಿತು ಮಾತುಗಳನ್ನು ತಾವೇ ಬರೆದುಕೊಂಡಿದ್ದಾರೆ. "ಉಲುಹಿನ ವೃಕ್ಷದ ನೆಳಲು' ಕೃತಿಯ ಬಗೆಗಿನ ಮಾತುಗಳು mature ಆಗಿವೆ. ಸೃಜನಶೀಲ ಅಭಿವ್ಯಕ್ತಿಯ ನಡುನಡುವೆ ವೈಚಾರಿಕ ನೆಲೆಗಳನ್ನು ಶೋಧಿಸಿ ಹೇಳುವ ಗದ್ಯಕ್ರಮವೂ ಈ ತಲೆಮಾರಿಗೆ ಬೇಕು. ರಾಜೇಂದ್ರ ಪ್ರಸಾದ್ ಮುಂದೆ ಇಂತಹ ಆಲೋಚನೆಗಳಿರುವ ಗದ್ಯಕೃತಿಗೆ ಮುಂದಾಗಲಿ.