ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, January 10, 2022

ಅಳು

ಪ್ರೀತಿಯ ಗೆಳೆಯ ತೀರಿಕೊಂಡಿದ್ದ .ಹಾಗಾಗಿ ರಜೆ ಹಾಕಿದ್ದ.

Online ಸಭೆಯಲ್ಲಿ ಭಾಗವಹಿಸಬೇಕಿತ್ತು. ಹೇಗೆ ಭಾಗವಹಿಸುವುದು? ಅಲ್ಲಿದ್ದುಕೊಂಡೇ Join ಆಗಿ ಮೊಬೈಲನ್ನು ಜೇಬಿನಲ್ಲಿಟ್ಟುಕೊಂಡ. ಮ್ಯೂಟ್ ಮಾಡಲು ಮರೆತ.

ಸಭೆಯ ಆಯೋಜಕರಿಗೆ ಮ್ಯೂಟ್ ಮಾಡಲು ತಿಳಿದಿರಲಿಲ್ಲ.
'ಮ್ಯೂಟ್ ಮಾಡ್ರೀ.. 'ಎಂದು ಹತ್ತಾರು ಬಾರಿ ಕೂಗಿದ್ದು ಯಾರಿಗೂ ಕೇಳಿಸಲಿಲ್ಲ!

ಸಭೆಯಲ್ಲಿದ್ದ ಕೆಲವರು ಅತ್ತರು!
*

ಕಾಜೂರು ಸತೀಶ್

Thursday, January 6, 2022

ಗಾಯದ ಹೂವುಗಳ ನೋಯದ ನಗು- ಚಾಂದ್ ಕವಿಚಂದ್ರ



ಕವಿತೆ, ಹೇಳುತ್ತಲೇ ಕೇಳಿಸಿಕೊಳ್ಳುವ ಗುಣವಿರುವುದು ಕೆಲವು ಪರಿಪೂರ್ಣತೆಯ ಮತ್ತು ಪರಿಪಕ್ವತೆಯ ಕವಿತ್ವಕ್ಕೆ ಮಾತ್ರ ಅನ್ನಿಸುತ್ತದೆ. ಕಾಜೂರು ಸತೀಶ್ ಅವರ ಗಾಯದ ಹೂವುಗಳಲ್ಲಿಯೂ ಅಂಥದೇ ಗುಣವಿದೆ. ಮನುಷ್ಯನೊಂದಿಗೆ ವಾದಕ್ಕಿಳಿಯಬಹುದಾದ ನೂರಾರು ಭಾವಗಳು ಇಲ್ಲಿನ ಕವಿತೆಗಳ ಕೇಂದ್ರವಸ್ತು. ಹಾಸಿಗೆಯಿಂದ ಎದ್ದಾಗಲೂ ಇನ್ನೂ ಉಳಿದಿರುವ ತೀರಾ ಖಾಸಗಿ ಕನಸಿನಂತೆ ಕಾಡುವ ಕವಿತೆಗಳು ಕಾಣಸಿಗುತ್ತವೆ. ಕೆಲವು ಹಗಲುಗನಸಂತೆ ಕಣ್ಣು ಮಿಟುಕಿಸಿದರೆ ಮತ್ತೆ ಕೆಲವು ಮತ್ತೇರಿಸುವಂಥವು. ನೊಂದವರ ಎದುರಿಟ್ಟ ಕನ್ನಡಿಯಂತೆ ಕಾಣುತ್ತವೆ ಮತ್ತು ಕಾಡುತ್ತವೆ. ಲೋಕ ಮೀಮಾಂಸೆಯನ್ನು ನವಿರಾಗೆ ವ್ಯಂಗ್ಯ ಮಾಡಬಲ್ಲ ಕವಿಗೆ ಹೊಸದೇನೋ ಬೇಕು ಅನ್ನಿಸುವುದು ಸುಳ್ಳಲ್ಲ, ಇದು ಅವರ ಕಾವ್ಯಮೀಮಾಂಸೆಗೂ ಅನ್ವಯವಾಗಬಹುದು. ಸಿದ್ದ ಮಾದರಿಯ ಕಾವ್ಯ ನಿರೂಪಣಾ ತಂತ್ರವನ್ನು ಮುರಿಯುವ ಮತ್ತು ಮುರಿಯುತ್ತಲೇ ಹೊಸದಾಗಿ ಕಟ್ಟುವ ಗಾರೆತನ ಸತೀಶ್ ಅವರ ಸೃಜನಶೀಲತೆಗೆ ಇದೆ ಎನ್ನಬಹುದು!

ಗಾಯದ ಹೂವುಗಳ ಕವಿತೆಗಳಲ್ಲಿ ಹೊಸ ರೂಪಕಗಳ ಘಮಲಿದೆ ಮತ್ತು ಹಳೆ ಪ್ರತಿಮೆಗಳ ಬೇರಿದೆ. ಹೂವಿನ ಸುತ್ತ ಕೆಲವು ಸಲ ಮಾತ್ರ ಕ್ಲೀಷೆ ಎನ್ನುವಂಥ ಮುಳ್ಳೂ ಇವೆ, ಆದರೆ, ಓದಗರನ್ನು ಸದಾ ಸೆಳೆಸುವ ದುಂಬಿಯಂತ ಹೊಸತನವೂ ಇದೆ.


   ಚಾಂದ್ ಕವಿಚಂದ್ರ