ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, April 28, 2026

ಆಸ್ಪತ್ರೆ

ತಿಮ್ಮನನ್ನು ಗ್ರಾಮ ಸಮಿತಿಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು.

ಮೊದಲ ಸಭೆಯಲ್ಲಿ ಗ್ರಾಮದಲ್ಲೊಂದು ದೇವಸ್ಥಾನ ಕಟ್ಟುವ ಪ್ರಸ್ತಾವ ಬಂತು. 'ಅದರ ಬದಲಿಗೆ ಒಂದು ಆಸ್ಪತ್ರೆ ಕಟ್ಟಿಸೋಣ' ಎಂದ ತಿಮ್ಮ. ಆದರೆ ಅದಕ್ಕೆ ಯಾರೂ ಒಪ್ಪಲಿಲ್ಲ. ತಿಮ್ಮ ಪಟ್ಟುಬಿಡದೆ ಕುಳಿತಿದ್ದರಿಂದ ಊರಿನ ಜನಗಳ ಅಭಿಪ್ರಾಯ ಪಡೆಯಲಾಯಿತು.

ಎಲ್ಲರೂ ದೇವಾಲಯ ನಿರ್ಮಾಣವೇ ಸರಿ ಎಂದರು.

ತಿಮ್ಮನಿಗೆ ಮುಖಭಂಗವಾಯಿತು. ಬೇಸರದಿಂದ ಇದ್ದ. ಬಿಸಿಲ ಕಾವಿಗೆ ತಲೆತಿರುಗಿ ಬಿದ್ದ. ದೂರದ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ತೀರಿಹೋಗಿದ್ದ.

'ದೇವಾಲಯ ಬೇಡ ಎಂದಿದ್ದಕ್ಕೆ ಈ ಸಾವು' ಜನ ಹೇಳಿದರು.

ಮನೆಮಂದಿ ಮಾತ್ರ 'ಊರಲ್ಲೊಂದು ಆಸ್ಪತ್ರೆ ಇದ್ದಿದ್ದರೆ ತಿಮ್ಮ ಬದುಕುಳಿಯುತ್ತಿದ್ದ' ಎಂದು ಕಣ್ಣೀರಿಟ್ಟರು.
*
✍️ ಕಾಜೂರು ಸತೀಶ್

No comments:

Post a Comment