ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, September 9, 2024

ಗಂಡ ತೀರಿಕೊಂಡವಳ ಮೊದಲ ಸ್ವಾತಂತ್ರ್ಯ ಸಂಗ್ರಾಮ


ಗಂಡ ತೀರಿಕೊಂಡ ಹದಿನಾರನೆಯ ದಿನ
ಮನೆಯೊಂದು ಅಕ್ಷರಶಃ ಶ್ಮಶಾನವೆನಿಸಿತವಳಿಗೆ

ತಿಥಿಯೂಟ ಉಂಡು ಹಸಿವು ನೀಗಿಸಿಕೊಂಡ
ಕಾಗೆಗಳೂ 
ಹಲಸಿನ ಕೊಂಬೆಯಲ್ಲಿ ಕುಳಿತು
ದುರುಗುಟ್ಟಿ ನೋಡುತ್ತಿರುವುದು ಕಾಣಿಸಿತವಳಿಗೆ 

ಎಲ್ಲ ತೆರಳಿದ ಮೇಲೆ
ಆಚೆ ಈಚೆ ಮಕ್ಕಳಿಬ್ಬರನ್ನು ಎದೆಗಪ್ಪಿಕೊಂಡು
ಮಲಗಲು ಹೊರಟಾಗ 
ಮನೆಯ ಹೊರಗೆ
ಚಪ್ಪಲಿಗಳು ಮಣ್ಣ-ಮರಳ ಕಣಗಳ ತುಳಿತುಳಿದು
ಉಸಿರುಗಟ್ಟಿಸುವ ಸದ್ದು ಕೇಳಿಸಿತವಳಿಗೆ

ದಿನಸಿ ಅಂಗಡಿಯಲ್ಲಿ 
ಪದಾರ್ಥಗಳ ಪಟ್ಟಿ ಹೇಳುವಾಗ
ಸಿಗರೇಟಿನ ಕರೆಯಂಟಿದ
ಕಪ್ಪುತುಟಿಯೊಂದು ಬಳಿಬಂದು
 ವಿಕೃತ ನಗುವೊಂದನ್ನು ಎಸೆದುಹೋಯಿತು

ಮುಂಜಾನೆ ಎದ್ದು
ಟೈಲರ್ ಅಂಗಡಿಗೆ ಕೆಲಸಕ್ಕೆ ತೆರಳುವಾಗ
'ನೋಡ್ನೋಡು.. ಶೀಲಾವತಿ ಹೇಗೆ ಡ್ರೆಸ್ ಮಾಡ್ಕೊಂಡು ಹೋಗ್ತಿದ್ದಾಳೆ
ಯಾರನ್ನು ಮರುಳು ಮಾಡ್ಲಿಕ್ಕೋ ಏನೋ'
ಎಂಬ ಅಪವಾದದ ಬಾಣ ನೇರ ಎದೆಗೇ ಬಿತ್ತು

ಪಡಿತರ ಚೀಟಿಯಲ್ಲಿ
ಗಂಡನ ಹೆಸರು ತೆಗೆದುಹಾಕಿ
ಅಕ್ಕಿ ಗೋಧಿಯನ್ನು ಕಡಿತಗೊಳಿಸಿದಾಗಲೇ
ಅವರು ಬಹುದೂರ ಕೆಲಸಕ್ಕೆ ತೆರಳಲಿಲ್ಲವೆಂದೂ
ಮತ್ತೆ ಮರಳಿ ಬರುವುದಿಲ್ಲವೆಂದೂ
ಮನದಲ್ಲಿ ಅಂದುಕೊಂಡಿದ್ದು

ಮಕ್ಕಳ ಪ್ರಗತಿ ಪತ್ರದಲ್ಲಿ 
ಸಹಿಮಾಡುವಾಗ
ಏಕಾಂಗಿಯೊಬ್ಬಳು ಏರಬೇಕಾದ
ಹಿಮಾಲಯದ ಮೆಟ್ಟಿಲುಗಳು
ಹಿಮಸುರಿದು ಭಾರವೆನಿಸಿದವು

ಸಂಜೆ ಮನೆಗೆ ತೆರಳಲು
ಗಡಿಬಿಡಿಯಿಂದ ನಡೆಯುವಾಗ 
ಒಳಿತಿನ ಮರಗಳ ಕೊಂಬೆಗಳು
ಹಿಂದೆ ಸೇರಿಕೊಂಡು 
ಹಗಲಿನ ಬಿಸಿಲಿನುರಿಯಲ್ಲಿ 
ದಕ್ಕಿದ ನೆರಳನ್ನು ನೆನೆದು
ತಾನೇ ಹೊಗಳಿಕೊಂಡು
ಒಂದು ರಾತ್ರಿಗೆ ಬೆಲೆಕಟ್ಟುತ್ತಿದ್ದವು.

'ಚಾವಣಿಯ ಆಧಾರಸ್ತಂಭಕ್ಕೆ ಗೆದ್ದಲುಹಿಡಿದ
ಮನೆಯಂತೆ ಆಗಿಬಿಟ್ಟೆ ನೀನು'
ಎಂಬೆಲ್ಲಾ ಕನಿಕರದ ನುಡಿಗಳನ್ನು
ಸ್ತ್ರೀಶಕ್ತಿಸಂಘದ ಮಹಿಳೆಯರು 
ಚಹಾದೊಂದಿಗೆ ಸೇವಿಸುತ್ತಿದ್ದರು


ಗಂಡನಿಲ್ಲದವಳ ಸ್ವಾತಂತ್ರ್ಯ
ಬಲೆಗೆ ಸಿಲುಕಿದ ಹೆಣ್ಣು ಹರಿಣದಂತೆ
ಎಂದುಕೊಂಡು
ಗಂಡ ಸತ್ತವಳ ಮೊದಲ ಸ್ವಾತಂತ್ರ್ಯ ಸಮರಕ್ಕೆ ಸೇನಾನಿಯಾಗಿ ನಿಂತಳು.
*


ಮಲಯಾಳಂ ಮೂಲ- ವಿನೀತಾ ಬಿಜು

ಕನ್ನಡಕ್ಕೆ- ಕಾಜೂರು ಸತೀಶ್

Sunday, September 8, 2024

ಹುಳು



'ನನ್ಹೆಸ್ರು ಹುಳು'

'ಹುಳುನಾ?'
ಎತ್ತರದ ದನಿಯಲ್ಲಿ ಕೇಳಿದರು ಟೀಚರ್
ತರಗತಿಯಲ್ಲಿ ಮಕ್ಕಳ ಜೋರು ನಗೆಬುಗ್ಗೆ.

'ಹ್ಮ್
ನನ್ಹೆಸ್ರು ಹುಳು ಅಂತ'

'ಓಹ್ ನಿಜ
ಹಾಜರಿ ಪುಸ್ತಕದಲ್ಲೂ ಅದೇ ಹೆಸರು;
ಹುಳು!'

'ಇದೆಂಥ ಹೆಸ್ರು
ಅದೆಂಥ ಅಪ್ಪ ಅಮ್ಮನೋ'
ಗೊಣಗಿದರು ಟೀಚರ್

'ಸರಿ ಪೆನ್ಸಿಲ್ ತೆಗಿ' ಟೀಚರ್ ಅಂದರು
ಹುಳು ತೆಗೆಯಲಿಲ್ಲ
'ಪುಸ್ತಕ ತೆಗಿ' ಎಂದರು
ಹುಳು ಹೊರತೆಗೆಯಲಿಲ್ಲ
ಬರೆಯಲು ಹೇಳಿದರು
ಹುಳು ಬರೆಯಲಿಲ್ಲ

ಹುಳು
ಆಕಾಶಕ್ಕೆ ಮರಗಳಿಗೆ
ಎಲೆಗಳಿಗೆ
ಎಲೆಗಳಿಂದ ಸುರಿವ ಬೆಳಕಿನೆಡೆಗೆ
ಕಣ್ಣುನೆಟ್ಟು ಕಿವಿ ತೆರೆದು ಬೆರಳ ಚಾಚಿ ಓದಿಕೊಂಡನು

'ಅಪ್ಪ ಅಮ್ಮನ ಕರ್ಕೊಂಡು ಬಾ'
ಮನೆಗೆ ಕಳಿಸಿದರು ಟೀಚರ್ 

ಮರುದಿನ ಬೆಳಿಗ್ಗೆ  ಬಂದನು ಹುಳು 

'ಅಪ್ಪ ಅಮ್ಮ ಎಲ್ಲಿ?'
'ಬರ್ತಾರೆ'
ಖಚಿತವಾಗಿ ನುಡಿದನು

ಮಧ್ಯಾಹ್ನದ ಬುತ್ತಿ ಬಿಚ್ಚಿದಾಗ
ಎರಡು ದೊಡ್ಡ 'ಚಿಟ್ಟೆ'ಗಳು
ನುಗ್ಗಿ ಬಂದವು ಆಫೀಸಿನೊಳಗೆ.
ಅವುಗಳ ರೆಕ್ಕೆಗಳು ರೇಷ್ಮೆಯ ವಸ್ತ್ರಗಳು

ಮಧ್ಯಾಹ್ನ ಮೆಲ್ಲನೆ ಕರಗಿಹೋಯಿತು

 'ನಾವು ಹುಳುವಿನ
ಅಪ್ಪ ಅಮ್ಮ'
ಚಿಟ್ಟೆಗಳೆಂದವು
'ನಾವು ಅವನನ್ನು 
ತುಂಬಾ ಪ್ರೀತಿಯಿಂದ ಸಾಕ್ತಿದ್ದೇವೆ
ಅವನು ಚುಂಬಿಸುತ್ತಲೇ
ಮಕರಂಧವನ್ನು ವರ್ಗಾಯಿಸಬಲ್ಲ
ಒಂದು ಸ್ಪರ್ಶದಿಂದ
ಎಲೆಗಳನ್ನು  ಮರಗಟ್ಟಿಸಬಲ್ಲ
ದೊಡ್ಡವನಾದ ಮೇಲೆ 
ಅವನಿಗೆ ಪ್ಯೂಪ ಎಂಬ ಹೆಸರಿಡುತ್ತೇವೆ
ಆಮೇಲೆ ಚಿಟ್ಟೆ ಎಂಬ ಹೆಸರಿಡುತ್ತೇವೆ'

'ಏನು ಹುಡುಕ್ತಿದ್ದೀಯಾ?'
ಮನೆಗೆ ತಲುಪಿ
ಬೀರುವಿನೊಳಗೆ ಹುಡುಕುತ್ತಿರುವುದನ್ನು ಗಮನಿಸಿ
ಗಂಡ ಕೇಳಿದ

'ನನ್ನ ರೆಕ್ಕೆಗಳನ್ನು'
 ಮೆಲ್ಲನೆ ನುಡಿದರು ಟೀಚರ್ 
*


ಮಲಯಾಳಂ ಮೂಲ- ಅರುಣ್ ಭಾಸ್ಕರ್ ಪಿ

ಕನ್ನಡಕ್ಕೆ- ಕಾಜೂರು ಸತೀಶ್

Friday, September 6, 2024

ಕಣ್ಣಲ್ಲಿಳಿದ ಮಳೆಹನಿಯ ಕುರಿತು ರಾಜು ಸರ್

ಎಲ್ಲಾ ಕವಿತೆಗಳೂ ಹೀಗೆ. ತಮ್ಮ ಪಾಡಿಗೆ ತಾವೇ ಹಾಡಿಕೊಳ್ಳುಬಹುದಾದ, ಏಕಾಂತಕ್ಕೆ ತನುಕೊಟ್ಟಂತೆ.
ಬರೆದವರೇ ಹೇಳುವಂತೆ:
ಅಳುವವರ ಅಳುವಲ್ಲಿ ಹರಿದು ಕಡಲ ಸೇರುವುದಾದರೆ ಎಷ್ಟು ಚೆಂದ ಎಷ್ಟು ಚೆಂದ

ಒಂದಲ್ಲ ಒಂದು ರೀತಿಯಲ್ಲಿ ಇಲ್ಲಿನ ಕವಿತೆಗಳೆಷ್ಟು ಕಾಡಬಲ್ಲವೋ,ಕವಿಯೂ ಹಾಗೆ ಕಾಡಬಲ್ಲ. ಅದೆಷ್ಟು ಕವಿತೆಯ ವ್ಯಾವೋಹ ಇರಬಹುದು, ಅದೆಷ್ಟು ವ್ಯಾಪಕವಾಗಿ ಅವರನ್ನು ವ್ಯಾಪಿಸಿರಬಹುದು. ಪದ ,ಮೌನ ,ಹುಡುಕಾಟ, ಸುತ್ತಾಟ ,ಕೋಪ ಕವಿತೆಯೊಳಗೆ ನಾನು ಜೀವಿಸಿದ್ದೆನೆ ಎಂದು ಹೇಳುವಷ್ಟು ಮಾತುಗಾರ. ಇವೆಲ್ಲವೂ ಸತೀಶ್ ರನ್ನು ಕವಿತೆಗಳೊಟ್ಟಿಗೆ 'ಕವಿ'ಯನ್ನೂ ನಮಗೆ ಪರಿಚಯಿಸುತ್ತವೆ. ಎಲ್ಲಾ ಕವಿತೆಗಳು ಹೊಸ ಜಾಯಮಾನಕ್ಕೆ ತಕ್ಕ ಎನ್ನಬಹುದಾದ ಅನೂಹ್ಯ ಬೆಳವಣಿಗೆಯಾಗಿದೆ. ಹೊಸ ರೀತಿಯ ಕವಿತೆಗಳನ್ನು ಓದಿಸಿದ ಸಂಗಾತದವರಿಗೂ, ಹೊಸ ಪುಸ್ತಕವನ್ನು ಪದೇ ಪದೇ ಕೊಟ್ಟು ಓದಿಸುವ Krishna Chengadi ಅಣ್ಣನವರಿಗೂ ರಾಶಿ ಧನ್ಯವಾದಗಳನ್ನಷ್ಟೇ ನಾನಿಲ್ಲಿ ಹೇಳಬಹುದು .

ಯಾರ ತಿಂದು ಬದುಕುತ್ತವೆ ನನ್ನ ಕವಿತೆಗಳು ನಾನು ಸತ್ತ ಮೇಲೆ
ಯಾರ ಕಣ್ಣೀರ ಪೇಯ ಅವುಗಳಿಗೆ ನಾನು ಸತ್ತ ಮೇಲೆ
*


✍️ ರಾಜು