(ಪೆರುಮಾಳ್ ಮುರುಗನ್ ಅವರಿಗೆ )
ಕ್ಷಮಿಸಿಬಿಡಿ ನನ್ನನ್ನು
ಬರೆದದ್ದಕ್ಕೆ
ಬರೆಯದಿದ್ದುದಕ್ಕೆ
ಬರೆಯಲು ಸಾಧ್ಯವಿರುವುದಕ್ಕೆ
ಬರೆಯಲು ಸಾಧ್ಯವಿಲ್ಲವಿರುವುದಕ್ಕೆ.
ಕ್ಷಮಿಸಿ
ಮರಗಳು ಹೂಬಿಡುವುದಕ್ಕೆ
ಹೂವು ಕಾಯಾಗುವುದಕ್ಕೆ
ವಸಂತವನ್ನೂ, ಚಿನ್ನವನ್ನೂ, ನೀರನ್ನೂ
ಮಣ್ಣಿನಾಳದಲ್ಲಿ ಹೂತಿಟ್ಟಿದ್ದಕ್ಕೆ
ಚಂದ್ರ ವೃದ್ಧಿಸುವುದಕ್ಕೆ, ಕ್ಷಯಿಸುವುದಕ್ಕೆ
ಸೂರ್ಯ ಅಸ್ತಮಿಸುವುದಕ್ಕೆ
ಚರಗಳ ಚಲನೆಗೆ
ಅಚರಗಳ ಸ್ಥಿರತೆಗೆ.
ಭೂಮಿಯಲ್ಲಿ ಇಷ್ಟೊಂದು ಬಣ್ಣಗಳ ತುಂಬಿದ್ದಕ್ಕೆ
ರಕ್ತವನ್ನು ಇಷ್ಟೊಂದು ಕೆಂಪಾಗಿಸಿದ್ದಕ್ಕೆ
ಎಲೆಯಲ್ಲಿ ಕಾಡನ್ನೂ, ಮಳೆಯಲ್ಲಿ ಆಕಾಶವನ್ನೂ,
ಮಣ್ಣ ಕಣಕಣದಲ್ಲಿ ನಕ್ಷತ್ರಗಳನ್ನೂ ಹುದುಗಿಸಿದ್ದಕ್ಕೆ
ಶಾಯಿಯಲ್ಲಿ ಕನಸ ತುಂಬಿದ್ದಕ್ಕೆ.
ಮಾತುಗಳಲ್ಲಿ ಇಷ್ಟೆಲ್ಲ ಅರ್ಥವನ್ನು
ಮೊಗೆಮೊಗೆದು ತುಂಬಿಟ್ಟಿದ್ದಕ್ಕೆ
ದಿನ-ದಿನಾಂಕಗಳಲ್ಲಿ
ಚರಿತ್ರೆಯನ್ನು ಕಟ್ಟಿಟ್ಟಿದ್ದಕ್ಕೆ
ನೆನ್ನೆಯಲ್ಲಿ ಇವತ್ತನ್ನೂ
ಇವತ್ತಿನಲ್ಲಿ ನಾಳೆಯನ್ನೂ ಅಡಗಿಸಿಟ್ಟಿದ್ದಕ್ಕೆ
ಭಂಗಿಯಲ್ಲಿ ನೃತ್ಯವನ್ನೂ
ನಿಸರ್ಗದಲ್ಲಿ ಪ್ರತೀಕವನ್ನೂ ತುಂಬಿ
ಸೃಷ್ಟಿಕರ್ತನ ಸೃಷ್ಟಿಸಿದ್ದಕ್ಕೆ.
ಕ್ಷಮಿಸಿಬಿಡಿ ಭೂಕಂಪಗಳ, ಸುನಾಮಿಗಳ
ಕ್ಷಮಿಸಿಬಿಡಿ ಬಿರುಗಾಳಿಗಳ, ಚಂಡಮಾರುತಗಳ.
ಈ ಭೂಮಿಯೊಂದು
ಕೆಟ್ಟುಹೋದ ಯಂತ್ರ
ನನ್ನೊಬ್ಬನಿಂದ ಮಾತ್ರ
ಇದು ರಿಪೇರಿಯಾಗುವುದಿಲ್ಲ.
ನಾನಾದರೋ ರಾಜ್ಯವೇ ಇಲ್ಲದ ರಾಜ ಪೆರುಮಾಳ್
ಆಯುಧಗಳೇ ಇಲ್ಲದ ದೈವ ಮುರುಗ
ದನಿಯೇ ಇರದ ಜೀವ.
ಹುಡುಕಿಕೊಡಿ
ಬಲಿ ಕೇಳದ ದೇವರನ್ನು
ಭಯಕ್ಕೆ ತತ್ತರಿಸದ ಮನುಷ್ಯರನ್ನು.
ಕಂಡುಹಿಡಿಯಿರಿ ಈಗ
ಹೊಸ ಭಾಷೆಯನ್ನು
ಲಿಪಿಯನ್ನು.
**
ಮಲಯಾಳಂ ಮೂಲ- ಕೆ. ಸಚ್ಚಿದಾನಂದನ್
ಕನ್ನಡಕ್ಕೆ- ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Sunday, January 3, 2016
ಕ್ಷಮಿಸಿಬಿಡಿ
Subscribe to:
Post Comments (Atom)
-
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
-
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...
No comments:
Post a Comment