ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, October 12, 2024

ಜಿಗಣೆ


ಸಾ ಸಾ ಇದೇನು ಸಾ ಬೆರಳಿಗಂಟಿಕೊಂಡಿದ್ದು
ಚೂರೂ ನೋವು ಆಗದ ಹಾಗೆ ರಕ್ತಹೀರಿಕೊಂಡಿದ್ದು

ಸಾ ಸಾ ಇದ್ಯಾಕೆ ಸಾ ಬೆರಳ ತಿನ್ನೋದಿಲ್ಲ ಇದು
ಬರೀ ರಕ್ತ ಕುಡ್ಕಂಡಿದ್ರೆ ಬದ್ಕೋದ್ಹೇಗೆ ಹೇಳಿ ಇದು

ಸಾ ಸಾ ಇದೆಲ್ಲಿ ಸಾ ರಾತ್ರಿಯಲ್ಲಿ ಮಲ್ಗೋದು
ಚಳಿಚಳಿ ಆಗಲ್ವೇನು ಮಳೆಗಾಲ ಅಲ್ವಾ ಇದು

ಸಾ ಸಾ ಅದ್ಯಾಕೆ ಸಾ ಇಲ್ಲೀತನಕ ಬಂದಿದ್ದು
ಮನೆಕಟ್ಟೋ ಯೋಚ್ನೆ ಬಂತಾ ಅದ್ಕೂ ಇಲ್ಲಿಗೆ ಬಂದು.

*
ಕಾಜೂರು ಸತೀಶ್

ಆ ಹುಡುಗ

ನಾನು ಪ್ರಥಮ ಪಿ ಯು ಸಿ ಯಲ್ಲಿದ್ದಾಗ ಸಹಪಠ್ಯ ಸ್ಪರ್ಧೆಗೆಂದು ಮಡಿಕೇರಿಗೆ ಹೋಗಿದ್ದೆ. (ಜೂನಿಯರ್ ಕಾಲೇಜು FMC ಸಭಾಂಗಣದಲ್ಲಿ ಕಾರ್ಯಕ್ರಮ.)

ಅಲ್ಲಿ ,ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತರನ್ನು ಮತ್ತೊಮ್ಮೆ ವೇದಿಕೆಯಲ್ಲಿ ಹಾಡಿಸುತ್ತಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ವಿರಾಜಪೇಟೆಯ ಹುಡುಗನೊಬ್ಬ 'ನೀಲಗಗನದೊಳು ಮೇಘಗಳಾ..' ಗೀತೆಯನ್ನು ಅದ್ಭುತವಾಗಿ ಹಾಡಿದ(ಅವನ ಬಲಗೈ ಮುರಿದಿತ್ತು, ಅದನ್ನು ಹೊಟ್ಟೆಗೆ ಆತುಕೊಂಡೇ ಹಾಡಿದ್ದ).

ಅಷ್ಟು ಗಾಢವಾಗಿ ಅವನು ನನ್ನನ್ನು ಕಲಕಿದ್ದ!

ಆಮೇಲೆ ಅವನು ಎಲ್ಲಾದರೂ ಸಿಗುತ್ತಾನೆಯೇ ಎಂದು ಕಾಯುತ್ತಿದ್ದೆ; ಹಲವು ವೇದಿಕೆಗಳಲ್ಲಿ ಹುಡುಕುತ್ತಿದ್ದೆ.


ಮೊನ್ನೆ ಮಡಿಕೇರಿ ದಸರಾ ಕವಿಗೋಷ್ಠಿಯಲ್ಲಿ ಅದೇ ಹುಡುಗನನ್ನು ಹೋಲುವ ವ್ಯಕ್ತಿಯೊಬ್ಬರು ಬಂದು ತಮ್ಮ ಸಂಗೀತ ಯಾನದ ಜಾಡುಗಳನ್ನು ಭಾವುಕವಾಗಿ ನೆನಪಿಸಿಕೊಳ್ಳುತ್ತಿದ್ದರು! ನನ್ನ ನೆನಪುಗಳಲ್ಲಿ ಬಾಳುತ್ತಿರುವ ಆ ಹುಡುಗ ಇವರೇ ಆಗಿದ್ದರೆ, ಈ ನೆನಪಿನಿಂದ ಬಿಡುಗಡೆಗೊಂಡು ಕೃತಾರ್ಥನಾಗುತ್ತೇನೆ!
*
ಹೀಗೆ ಬರೆದು ಗೆಳೆಯ ರಂಜಿತ್ ಕವಲಪಾರ ಅವರಿಗೆ ಕಳಿಸಿದ್ದೆ. ಅವರು ಅದನ್ನು ನಾನು ಅಂದುಕೊಂಡಿದ್ದ ಸಂಗೀತ ನಿರ್ದೇಶಕರ ತಾಯಿಯೊಂದಿಗೆ ಚರ್ಚಿಸಿ 'ಅವರ ತಾಯಿಯೊಡನೆ ಈಗ ಮಾತನಾಡಿದೆ. ಆ ಹುಡುಗ ಚರಣ್ ಅವರು ಅಲ್ಲ... ಹುಡುಕಾಟ ಮುಂದುವರೆಯಲಿ..' ಎಂದು ಸಂದೇಶ ಕಳುಹಿಸಿದರು!

ಆ ಹುಡುಗನಿಗೂ ಈ ಸಂಗೀತ ನಿರ್ದೇಶಕರಿಗೂ ಹೆಚ್ಚು ತಾಳೆಹೊಂದುತ್ತದಾದ್ದರಿಂದ ಮತ್ತೊಂದು ಸಂದೇಶ ಎಸೆದೆ - 'ಉಳಿದದ್ದು ಮರೆತಿರಬಹುದು. ಕೈ ಮುರಿದಿದ್ದು ನೆನಪಿನಲ್ಲಿರುತ್ತೆ' .



ಈ ದಿನ ರಂಜಿತ್ ಕಡೆಯಿಂದ ಮತ್ತೊಂದು ಸಂದೇಶ : ' ನೀವು ಹುಡುಕುತ್ತಿದ್ದ ವ್ಯಕ್ತಿ ಇವರೇ!' ಹೀಗೆನ್ನುತ್ತಾ ಆ ಹುಡುಗನೆಂಬೋ ಪ್ರತಿಭಾವಂತ ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಅಮ್ಮನ ದೂರವಾಣಿ ಸಂಖ್ಯೆ ನೀಡಿ ಮಾತನಾಡಿ ಎಂದರು.


'ಅವನ ಕೈ ಮುರಿದಿಲ್ಲ' ಎಂದರಂತೆ ಅವರ ಅಮ್ಮ. ಖಚಿತಪಡಿಸಿಕೊಳ್ಳಲು ಮಗನನ್ನೇ ಕೇಳಿದರಂತೆ. ಮಗ ' ನಾನೇ ಅವನು' ಎಂದರಂತೆ.

ಈಗ ಮಾತನಾಡಿದೆ. ಚರಣ್ ರಾಜ್ ( ಇಲ್ಲಿ ಕ್ಲಿಕ್ಕಿಸಿ) ಅವರೊಂದಿಗೂ!

ಇನ್ನು , ಎರಡು ದಶಕಗಳಿಂದ ಜೊತೆಗಿದ್ದ ಆ ನೆನಪುಗಳನ್ನು ಬಿಡುಗಡೆಗೊಳಿಸುವೆ. ಅದೇ ಬುತ್ತಿಯಲ್ಲಿ ಚರಣ್ ರಾಜ್ ಅವರ ಸಂಗೀತಯಾನದ ದಾರಿಗಳನ್ನು ಮತ್ತದರ ನೆನಪುಗಳನ್ನು ತುಂಬಿಕೊಳ್ಳುವೆ.
*
ಕಾಜೂರು ಸತೀಶ್


Saturday, October 5, 2024

ಸಾವು

ಮಗು ತಪ್ಪಿಸಿಕೊಂಡಿತ್ತು.

ಶವಾಗಾರದಿಂದ ಕರೆ ಬಂದಿತು:
'ಇದು ನಿಮ್ಮ ಮಗುವನ್ನೇ ಹೋಲುತ್ತದೆ, ಬಂದು ಪರೀಕ್ಷಿಸಿಕೊಳ್ಳಿ '

ರಾತ್ರಿಯಿಡೀ ಅತ್ತು ಬೆಳಿಗ್ಗೆ ಅಲ್ಲಿಗೆ ಹೋಗಿ ಮಗುವನ್ನು ನೋಡಿದ ದಂಪತಿ ' ಸದ್ಯ ಇದು ನಮ್ಮದಲ್ಲ ' ಎಂದು ನಗುತ್ತಾ ಹಿಂತಿರುಗಿದರು.
*

ಕಾಜೂರು ಸತೀಶ್