ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, January 24, 2021

ಭತ್ತದ ರಾಶಿಯೂ ಮತ್ತು ನೆನಪಿನ ರಾಶಿಯೂ..

ಶಾಲೆಗೆ ನಡೆದುಹೋಗುತ್ತಿದ್ದಾಗ ದೂರದಲ್ಲಿ ಕಾಣಿಸುತ್ತಿದ್ದ ಅದನ್ನು ನೋಡಿ 'ಅದೇನು?' ಎಂದು ಕೇಳುತ್ತಿದ್ದೆ. 'ಭತ್ತ ರಾಶಿ' ಎನ್ನುತ್ತಿದ್ದಳು ಅಕ್ಕ.


ನಾನು ನಿಜಕ್ಕೂ ಅದು ಭತ್ತದ ರಾಶಿಯೇ ಎಂದುಕೊಂಡಿದ್ದೆ. ನೋಡಲು ಹಾಗೇ ಕಾಣಿಸುತ್ತಿತ್ತು. ಹತ್ತಿ ಉರುಳಾಡಬೇಕೆನಿಸುವಂತಿತ್ತು.
*


ಮೊನ್ನೆ ಯೂಟ್ಯೂಬಿನಲ್ಲಿ ಹುಡುಕಿದರೆ ರಾಶಿ ರಾಶಿ ಏನೇನೇನೋ ಸಂಗತಿಗಳು ಸಿಕ್ಕಿದ್ದರೂ 'ಭತ್ತದ ರಾಶಿ' ಎಂಬ ಗಿರಿಧಾಮ ಮಾತ್ರ ಕಾಣಸಿಗಲಿಲ್ಲ. ಇನ್ಸ್ಟಾಗ್ರಾಂನಲ್ಲೂ.
*


ಜನ ಅವರವರ ಲೋಕದಲ್ಲಿ ತಲ್ಲೀನರಾಗಿರುತ್ತಾರೆ. ಹಣ, ಹೆಂಡ, ಆಸ್ತಿ... ಹೀಗೆ. ಅವರನ್ನು ಕರೆದು ಅವರ ಧ್ಯಾನಕ್ಕೆ ಭಂಗ ತರಲು ನನಗೆ ಇಷ್ಟವಿಲ್ಲ. ಹಾಗಾಗಿ, ಭತ್ತದ ರಾಶಿ ಗಿರಿಧಾಮಕ್ಕೆ ಒಬ್ಬನೇ ಹೊರಡಬೇಕೆಂದು ತೀರ್ಮಾನಿಸಿದ್ದೆ.
*


ನನ್ನನ್ನು ಜೀವಂತವಾಗಿರಿಸುವುದು ಮಾನಸಿಕ ಸಿದ್ಧತೆ. ಹಲವರಿಂದ ವಿವರವನ್ನು ಸಂಗ್ರಹಿಸಿಕೊಂಡಿದ್ದೆ. ಹೊರಡುವಾಗ ಸ್ನೇಹಿತರಾದ ಮಂಜುನಾಥ್  ಮತ್ತು ಸಚಿನ್  ಜೊತೆಯಾಗಿದ್ದರು.


ಪ್ರವಾಸಿಗರಿಗೆ ತೆರೆದುಕೊಳ್ಳದ ಸ್ಥಳವಾದ್ದರಿಂದ ಎಣ್ಣೆಕುಪ್ಪಿಗಳು, ಕುರ್ಕುರೆ , ಸಿಗರೇಟು ,ಪರಾಗು, ಚೈನೀ ಕೈನೀಗಳ ಪ್ಯಾಕೆಟ್ಟುಗಳು ಅಲ್ಲಿ ಅಷ್ಟಾಗಿ ಕಾಣಿಸಲಿಲ್ಲ. ಮನುಷ್ಯರನ್ನು ತಾಕಿಸಿಕೊಳ್ಳದ ಭತ್ತದ ರಾಶಿಯು ಆರೋಗ್ಯವನ್ನು ಕಾಪಾಡಿಕೊಂಡಿತ್ತು.


ಎಷ್ಟೆಲ್ಲ ಗುಡ್ಡಗಳನ್ನು ಏರಿದ್ದರೂ, ಬಾಲ್ಯದ ಅದೇನು ಎಂಬ ನನ್ನ ಪ್ರಶ್ನೆ, ಅದು ಹೇಗಿರಬಹುದು ಎಂದು ಕಲ್ಪಿಸಿಕೊಂಡಿದ್ದ ನನ್ನ ಕಲ್ಪನಾಲೋಕ, ಅದನ್ನು ತಲುಪುವ ಮಾರ್ಗದ ಕುರಿತ ನನ್ನ ಜಿಜ್ಞಾಸೆ.. ಎಲ್ಲವೂ ಈಗ ಪರಮಸುಖವೊಂದರ ಅಲೆಗಳಾಗಿ ಆವರಿಸುತ್ತಿವೆ.
*
ಕಾಜೂರು ಸತೀಶ್

No comments:

Post a Comment