ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, March 23, 2014

ಸ್ವಾತಂತ್ರ್ಯ

ಬಾಗಿಲು ಮುಚ್ಚುವಾಗಿನ ಸದ್ದು
ನಮ್ಮ ಸ್ವಾತಂತ್ರ್ಯವನ್ನು ಅಣಕಿಸುತ್ತದೆ.


*


ಗಡಿಯಲ್ಲಿ ಕಾವಲು ಕಾಯುತ್ತಿದ್ದಾರೆ
ಆಚೆ ಈಚೆಗೂ ದುಂಬಿಯೊಂದು
ಹಾಯಾಗಿ ಹಾರಾಡಿಕೊಂಡಿದೆ.


*


ಚರಿತ್ರೆಯ ಕಾಲಿಗೆ ಬಿಗಿದ
ಸರಪಳಿಯ ಬೀಗದ ಕೀ ಕಾಣೆಯಾಗಿದೆ
ಅದೀಗ ವಂಶವಾಹಿನಿಗೆ ಹಬ್ಬುತ್ತಿದೆ.


*


ಕೊಲೆಯಾದವನು ಮಣ್ಣಾದ ಮಣ್ಣಲ್ಲಿ
ಹುಟ್ಟಿದ ಹೂಗಳು ಕೊಲೆಯಾಗುವುದಿಲ್ಲ.


*


ಸುಡುವ ಬೀದಿಗಳಲ್ಲಿ
ಪಾದಗಳ ಊರಿ ನಡೆದುಹೋಗುತ್ತೇನೆ
ಊರಿದ ಒಂದು ಪಾದದಡಿಯ ನೆಲ ಯಾರದು?
ಗಾಳಿಯಲ್ಲಿರುವ ಇನ್ನೊಂದು ಪಾದದ ಬಗ್ಗೆ ನನಗೆ ಭಯವಿಲ್ಲ
ಅಲ್ಲಿ ಯಾರೂ ಬೇಲಿ ಹಾಕುವುದನ್ನು ಕಲಿತಿಲ್ಲ!


*


-ಕಾಜೂರು ಸತೀಶ್



ಚಿತ್ರ: ದಿನೇಶ್ ಕುಕ್ಕುಜಡ್ಕ
[ನನ್ನ ಕವಿತೆಯೊಂದಕ್ಕೆ ಬರೆದ ಚಿತ್ರ]

No comments:

Post a Comment