ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, August 14, 2018

ಕೋರಿಕೆ

ಕಳೆದುಹೋದ ನನ್ನ ಪರ್ಸಿನಲ್ಲಿ
'ನಾನು' ಎಂದರೆ ನನ್ನ ಹೆಸರು
ಅದ ಹೊತ್ತ ಗುರುತಿನ ಚೀಟಿ

ಬೇರೆ ದೇಶಗಳ
ಬಗೆಬಗೆಯ ಕರೆನ್ಸಿ ನೋಟುಗಳು

ಮದುವೆಯಾಗಿ ಹೋದ
ನನ್ನ ಪ್ರೇಯಸಿಯರ ಬಣ್ಣದ ಭಾವಚಿತ್ರ

ಏನೇನೋ ತುಂಬಿಕೊಂಡು
ಉಬ್ಬಿಕೊಂಡ ವಿಸಿಟಿಂಗ್ ಕಾರ್ಡು

ಮಾವೋತ್ಸೆ ತುಂಗನ ಚಿತ್ರವಿರುವ
ಎರಡು ರೂ. ಅಂಚೆಚೀಟಿ

ಮಾವಿನ ಮರಕ್ಕೆ ನೇಣುಬಿಗಿದು ಸತ್ತ
ಸಹೋದರಿಯ ಕಿವಿಯೋಲೆ

ಅಸ್ತಮಾದ ಮಾತ್ರೆ
ರಕ್ತಪರೀಕ್ಷೆಯ ನೆಗೆಟಿವ್ ರಿಪೋರ್ಟ್

ಇವಿಷ್ಟೇ ಆಗಿದ್ದಿದ್ದರೆ
ತೊಡೆಗಳ ನಡುವೆ ಕೈಯಿಟ್ಟು ಗೊರಕೆ ಹೊಡೆಯುತ್ತಿದ್ದೆ

ಆದರೆ
ಪ್ರಿಯ ಸಹೋದರಾ
ಕಪ್ಪು ಶಾಯಿಯ ನನ್ನ ಕೆಂಪು ಕವಿತೆಯನ್ನು
ದಯವಿಟ್ಟು ಓದಿ ಹಿಂತಿರುಗಿಸಿಬಿಡು.
*
ಮಲಯಾಳಂ ಮೂಲ- ಪ್ರಮೋದ್ ಕೆ.ಎಂ


ಕನ್ನಡಕ್ಕೆ - ಕಾಜೂರು ಸತೀಶ್


ಪರಿಚಯ : ಪ್ರಮೋದ್ ಕೆ.ಎಂ. (1982)

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕಡೂರು ಇವರ ಹುಟ್ಟೂರು. ರಸಾಯನಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್(ದಕ್ಷಿಣ ಕೊರಿಯಾ) ಪಡೆದಿರುವ ಇವರು ಈಗ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಪ್ರಮಾದಂ’ ಬ್ಲಾಗ್ ಬರವಣಿಗೆಯ ಮೂಲಕ ಹೊಸ ಬಗೆಯ ಕವಿತೆಗಳಿಗೆ ಚಾಲನೆ ನೀಡಿ ಮನೆಮಾತಾದ ಪ್ರಮೋದ್ ಅವರ ಮೊದಲ ಕವನ ಸಂಕಲನ ‘ಅಡಿಯಂದಿರಾವಸ್ಥ ನಷ್ಟಪ್ಪೆಡುತ್ತಿಯ ಆರು ವರ್ಷಂಗಳ್’(2009). ಈ ಸಂಕಲನವು ವಿ.ಟಿ. ಕುಮಾರನ್ ಮಾಸ್ಟರ್ ಸ್ಮಾರಕ ಪ್ರಶಸ್ತಿ, ನವಮಲಯಾಳಿ ಯುವ ಪ್ರಶಸ್ತಿ ಮತ್ತಿತರ ಗೌರವಗಳನ್ನು ಪಡೆದಿದೆ.

No comments:

Post a Comment