ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, September 21, 2014

ನನ್ನ ಜೀವನದ ಮೊಟ್ಟಮೊದಲ ಸ್ತ್ರೀಯು ಕಟ್ಟಕಡೆಯ ಸ್ತ್ರೀಗೆ ಹೇಳಿದ್ದು

ಮಗಳೇ,
ಅದು ಕಡಲ ತೀರ
ಕಗ್ಗತ್ತಲು
ಉರಿದುರಿದು ಹೋಗುತ್ತಿರುವ
ಕೋಣೆಯ ಮೇಣದ ಬತ್ತಿಗಳು.





ಪರ್ವತಾರೋಹಿಗಳು
ಕೈಕೊಡಲಿಯಿಂದ ಕೊಚ್ಚಿ ಊರುತ್ತಾ
ನನ್ನಾಳಕ್ಕೆ ನುಗ್ಗಿ ಮೇಲೇರುತ್ತಿದ್ದರು.
ಸುಟ್ಟು ಕರಿದರೂ
ಒಂದೆಲೆಯನ್ನು ಗಟ್ಟಿಯಾಗಿ ಹಿಡಿದು ನಿಂತ ಮರದಂತೆ
ಅವನನ್ನು ಹಸಿರಾಗಿಯೇ ನಿಲ್ಲಿಸಿದ್ದೆ.






ಕಡೆಗೆ ,
ಅವನು ಇಳಿದು ಹೋದ-
ನನ್ನಾಳದ ನೋವಿನಿಂದ
ನೋವೇ ಇಲ್ಲದ ಹಾಗೆ.
ತುಂಡಾದ ಕಳ್ಳುಬಳ್ಳಿ
ಮುಂಭಾಗದಲ್ಲೇ ಬಾಲವಿರುವ
ಒಂದು ಹಂದಿಯಾಗಿಸಿತು ನನ್ನನ್ನು .







ಈಗ ,
ಅದೇ ಹಂದಿ
ವಾರ್ಧಕ್ಯದ ಕೆಸರುಗುಂಡಿಯಲ್ಲಿ
ಮೈಮುದುರಿ ಮಲಗಿದೆ.
ನನಗೀಗ ಸಾವಿರ ಸಾವಿರ ಬಾಲಗಳು-
ಉಸಿರಾಡಲು
ಉಚ್ಚೆ ಉಯ್ಯಲು
ಊಟ ಮಾಡಲು
ಔಷಧಿ ಒಯ್ಯಲು.





ಮಗಳೇ,
ಈ ವಾರ್ಧಕ್ಯ ಅಂದ್ರೆ ಹಾಗೇನೇ.
ಅಲ್ಲಿ
ಬಾಲವೇ ತಲೆಗಿಂತ ದೊಡ್ಡದು
ನಿಶ್ಚಲತೆ ಚಲನೆಗಿಂತ ಸ್ಥಾಯಿ
ಫ್ಯಾನಿನ ಹೂದಳಗಳಂಥ ರೆಕ್ಕೆಗಳು
ಮಗನ ಕೈಗಳೆಂಬೊ ರೆಕ್ಕೆಗಳಿಗಿಂತ
ಪ್ರೀತಿಯನ್ನುಣಿಸುತ್ತದೆ.






ಮಗಳೇ,
ಅವನು
ನಿನ್ನ ಬೆರಳುಗಳಲ್ಲಿ ಬೆರಳು ಸೇರಿಸಿ
ಕೂರುವನೇ ನಿನಗಂಟಿಕೊಂಡು?
ನಾಲ್ಕೈದು ಮಾತ್ರೆಗಳ ಬದಲಿಗೆ
ಒಂದು ಚುಂಬನದಿಂದ
ಗುಣಪಡಿಸುವನೇ ನಿನ್ನ ಕಾಯಿಲೆಯನ್ನು ?
ಕಸಬಿದ್ದ ಕಣ್ಣಿಗೆ
ಫೂ..ಫೂ.. ಊದುವನೇ ನಿನ್ನನ್ನಪ್ಪಿ?
ಎಷ್ಟೆಷ್ಟೋ ಅಗ್ನಿಕುಂಡಗಳ
ಧಗಧಗಿಸುವ ಗಾಳಿಯನ್ನು
ಅವನೊಳಗೆ ಕೂಡಿಟ್ಟಿದ್ದೆ ನಾನು .






ಇಷ್ಟಾದರೂ ಅವನಿಗೆ ತಿಳಿದಿಲ್ಲ .
ಪ್ರಿಯ ಮಗಳೇ,
ಸುಮ್ಮನೆ ಅವನ ತೊಡೆಯನ್ನೊಮ್ಮೆ ಅಪ್ಪಿಕೊಂಡಿದ್ದಿದ್ದರೆ
ಸಾವು ಅವನ ಮುಖದ ಮೇಲೆ
ಮಂಜುಗಡ್ಡೆಯನ್ನಿಡುತ್ತಿತ್ತೇನೊ.






ಮುದ್ದು ಮಕ್ಕಳು
ಉತ್ತೀರ್ಣರಾಗುತ್ತಿದ್ದರೂ
ಅನುತ್ತೀರ್ಣಗೊಳ್ಳುತ್ತಲೇ ಇರುವ
ಶಾಲೆಗಳಂತೆ
ಏನಾದರೂ ಸರಿ
ನಾವು ತಳವೂರಿ ನಿಲ್ಲುತ್ತಿದ್ದೇವೆ.






ತೋಯ್ದು ತೊಪ್ಪೆಯಾಗಿ ಬರುವ
ಒಂದು ಬಲಿಷ್ಠ ನಾಯಿಗೆ
ಮುರಿದ ಗುಡಿಸಲಿನ ಕೆಳಗೆ
ಆಶ್ರಯ ಇನ್ನೂ ಇದ್ದೇಯಿದೆ.





ಆ ನಾಯಿ
ಅವನೇ ಆಗಿದ್ದರೂ ಕೂಡ .

**

ಮಲಯಾಳಂ ಮೂಲ: ಪಿ. ಎನ್. ಗೋಪಿಕೃಷ್ಣನ್

ಕನ್ನಡಕ್ಕೆ : ಕಾಜೂರು ಸತೀಶ್

No comments:

Post a Comment