ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, July 4, 2014

ಆ ಗಾಯ ಮತ್ತು ಆ ಹುಡುಗನ ನಿರ್ಲಿಪ್ತತೆ..

ನಿನ್ನೆ ಮಧ್ಯಾಹ್ನ ನಾವು 'ಅಕ್ಷರ ದಾಸೋಹ' ಬಿಸಿಯೂಟ ಸವಿಯುತ್ತಿದ್ದಾಗ ತರಗತಿಯಲ್ಲಿ ಹುಡುಗನೊಬ್ಬ ಜಾರಿಬಿದ್ದು ಮಣೆಯ ನೆತ್ತಿಗೆ ಹಣೆಯನ್ನು ಚಚ್ಚಿಸಿಕೊಂಡಿದ್ದ. ಈ ಗುಡ್ಡದಲ್ಲಿ ಇಂತಹ ಘಟನೆಗಳು ನಮಗೆ ಹೊಸದಲ್ಲವಾದರೂ,ರಕ್ತ ಚಿಮ್ಮಿ ಕಣ್ಣಿಗಿಳಿಯುತ್ತಿದ್ದ ಸ್ಥಿತಿಯಲ್ಲಿ -ಆಚೀಚೆ ಒಬ್ಬೊಬ್ಬ ಅವನ ಕೈಹಿಡಿದು ನಮ್ಮ ಮುಂದೆ ತಂದು ನಿಲ್ಲಿಸಿದಾಗಲೂ,ಏಳು ವಸಂತಗಳನ್ನೂ ಕಾಣದ ಆ ಪುಟ್ಟ ಹುಡುಗ ಏನೂ ಆಗಿಲ್ಲವೆಂಬಂತೆ ನಿಂತುಕೊಂಡಿದ್ದನಲ್ಲಾ- ಅದು ನನ್ನನ್ನು ತುಂಬಾ ಕಲಕಿತು! ಕಣ್ಣಿಗೆ ,ಮೂಗಿಗೆ ಇಳಿಯುತ್ತಿದ್ದ ರಕ್ತವನ್ನು
ಗಮನಿಸಿಯಾದರೂ ,ಅಥವಾ ಅವನನ್ನು ನೋಡಲು ಕಿಟಕಿ-ಬಾಗಿಲುಗಳ ಬಳಿ ಗುಡ್ಡೆಹಾಕಿಕೊಂಡು ಕಾಯುತ್ತಿದ್ದ ಮಕ್ಕಳನ್ನು ನೋಡಿಯಾದರೂ ಅವನ ಭಾವನೆಯಲ್ಲಿ ಒಂದಷ್ಟು ಬದಲಾವಣೆ ಕಾಣಬೇಕಿತ್ತು. ಉಹೂಂ.. ಆ ಗಾಯ ಅವನ ಮನಸ್ಸಿಗೆ ನಾಟಿರಲಿಲ್ಲ. ಅವನ ನಿರ್ಲಿಪ್ತತೆ ನನ್ನ ಹೃದಯದಲ್ಲೊಂದು ಗಾಯ ಮಾಡಿಬಿಟ್ಟಿತ್ತು,ಅಷ್ಟೆ ..



ಅವನ ಕೈಹಿಡಿದು ನೆರೆಯ ಕೇರಳ ರಾಜ್ಯದ ಒಂದು ಖಾಸಗಿ ಕ್ಲಿನಿಕ್ಕಿಗೆ ಕರೆದುಕೊಂಡು ಹೋದೆ. ಪದೇಪದೇ 'ನೋವಿದ್ಯಾ?' ಎಂದು ಕೇಳುತ್ತಿದ್ದೆ. 'ಇಲ್ಲ' ಎನ್ನುತ್ತಿದ್ದ. ಸಣ್ಣಗೆ ಮಳೆಯಾಗುತ್ತಿದ್ದರೂ ಅವನ ಮೈಯ ಬಿಸಿ ಏರುತ್ತಿತ್ತು.



ಪುಟ್ಟ ಹುಡುಗ .
'ಸಾರ್..ಇಲ್ಲಿ ನೋಡು..ಸಾರ್.. ಇಲ್ಲಿ ಬಾ..'
ಎಂಬ ಸಣ್ಣಪುಟ್ಟ ವ್ಯಾಕರಣ ದೋಷ ಬಿಟ್ಟರೆ ಕನ್ನಡವನ್ನು ಮಾತನಾಡಲು ಕಲಿತುಕೊಂಡಿದ್ದ. ಮಲಯಾಳಂ ಮಾತೃಭಾಷೆ . ಮರಾಠಿಗರೇ ಬಹುತೇಕ ಇರುವ ಕಾರಣ ಅದನ್ನೂ ಅಲ್ಪಸ್ವಲ್ಪ ತಲೆಗೆ ತುಂಬಿಸಿಕೊಂಡಿದ್ದ.



ವೈದ್ಯರು ಬಂದು ಅನಸ್ತೇಷಿಯಾ ಕೊಡುವಾಗಲೂ , ಹೊಲಿಯುವಾಗಲೂ ಸುಮ್ಮನೆ ಮಲಗಿದ್ದ . ಅಷ್ಟರಲ್ಲಿ ಅವನ ಮಾವನಿಗೆ ಈ ಸುದ್ದಿ ತಲುಪಿ ,ಅಲ್ಲಿಗೆ ಬಂದಾಗಲೂ ಅದೇ ನಿರ್ಲಿಪ್ತತೆ!




ಅಪ್ಪನ ಸಂಪರ್ಕವಿರದ ಆ ಮಗುವಿನ ಭಾವನಾತ್ಮಕ ಒಳ ಸಂಘರ್ಷಗಳು ಅವನನ್ನು ಇಡಿಯಾಗಿ ಹೇಗೆ ಕದಡಿಹಾಕಿದೆ ಎಂಬುದನ್ನು ಊಹಿಸುತ್ತಿದ್ದೇನೆ. ಇತ್ತ ಕೆಲಸದ ನಿಮಿತ್ತ ದೂರದಲ್ಲಿರುವ ಅಮ್ಮನ ಮುಖವೂ ನಿತ್ಯ ಕಾಣುವುದಿಲ್ಲ . ಒಂದು ನಿಮಿಷವೂ ಕೂತಲ್ಲಿ ಕೂರದ ಅವನ ಅಷ್ಟು Hyper-activeness ಗೆ ಸೂಕ್ತ ಮಾರ್ಗ ತೋರಿಸುವುದಕ್ಕೆ ಸದ್ಯದ ವ್ಯವಸ್ಥೆಯಲ್ಲಿ ನಮಗೆ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಮತ್ತೊಂದು ಗಾಯ ನನ್ನಾಳಕ್ಕೆ ಇಳಿಯುತ್ತಲೇ ಇದೆ..



**
-ಕಾಜೂರು ಸತೀಶ್

No comments:

Post a Comment