ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, March 3, 2025

1998

ಗುಂಡ ಶಿಕ್ಷಣಮಂತ್ರಿಯಾದ. 'ಶಿಕ್ಷಕರಿದ್ದರೆ ಮಾತ್ರ ಗುಣಾತ್ಮಕ ಶಿಕ್ಷಣ' ಎನ್ನುತ್ತಾ ಒಂದು ಲಕ್ಷ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದ. ತರಬೇತಿ ಪಡೆದು ಸರ್ಟಿಫಿಕೇಟುಗಳನ್ನು ಎಲ್ಲೆಲ್ಲೋ ಎಸೆದು ಬೇರೆ ಬೇರೆ ವೃತ್ತಿಗ ಳಲ್ಲಿ ತೊಡಗಿದವರೆಲ್ಲರೂ ಹೇಗೋ ಎಲ್ಲೋ ಹುಡುಕಿ ಅರ್ಜಿ ಸಲ್ಲಿಸಿದರು.ಹಲವರು ಪುಸ್ತಕ ಓದುವುದನ್ನೇ ನಿಲ್ಲಿಸಿ ಬಿಟ್ಟಿದ್ದರು. ಎಷ್ಟೋ ಮಂದಿಗೆ ಕಾಗುಣಿತವೇ ಮರೆತುಹೋಗಿತ್ತು.

ಅವರೆಲ್ಲರೂ ಮೇಷ್ಟ್ರಾದರು.

'ಗುಣಾತ್ಮಕ ಶಿಕ್ಷಣ ನಮ್ಮ ನಡೆ' ಎಂದು ಗುಂಡ ತನ್ನ ಕಾರಿನಲ್ಲಿ ಬರೆಸಿಕೊಂಡ.
*

✍️ ಕಾಜೂರು ಸತೀಶ್ 

ಕವಿತೆ

ತಿಮ್ಮ ದಾರಿಯಲ್ಲಿ ಹೋಗುತ್ತಿದ್ದಾಗ ಕಾರುಗಳು ಒಂದಾದ ಮೇಲೆ ಒಂದರಂತೆ ಹೋಗುತ್ತಿದ್ದವು. 

ಕೈ ತೋರಿಸಿ ಕಾರು ನಿಲ್ಲಿಸಿ ವಿಚಾರಿಸಿದ ತಿಮ್ಮ.

"ಎಲ್ಲಿಗೆ?"

"ಕವಿಗೋಷ್ಠಿಗೆ"

"ಅಲ್ಲಿ ಏನು ಮಾಡುವುದು?"

"ಕವಿತೆ ಓದುವುದು"

"ನಾನೂ ನೋಡಲು ಬರಲೇ?"

"ಬನ್ನಿ".


ಅಲ್ಲಿಂದ ಮರಳಿದ ಮೇಲೆ ತಿಮ್ಮ ಹೀಗೆ ಬರೆದ :
ನಾಲ್ಕು ಪದಗಳಿದ್ದರೆ ಒಂದು ಕವಿತೆ ಬರೆಯಬಹುದು - 'ಭಾವ, ಆತ್ಮ, ಮಧುಬಟ್ಟಲು ಮತ್ತು ಪ್ರೀತಿ'.

'ಅದರ ಜೊತೆಗೆ ಒಂದು ಮೊಬೈಲ್ ಇರಬೇಕು!'
*
✍️ಕಾಜೂರು ಸತೀಶ್