ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, April 5, 2025

ಲೆಕ್ಕ ಪರೀಕ್ಷೆ

ಇವತ್ತು ಗಣಿತ ಪರೀಕ್ಷೆ
ಕ್ಯಾಲ್ಕುಲೇಟರ್ ತರ್ಲಿಲ್ಲ.
ಕೈಯಲ್ಲೇ ಲೆಕ್ಕ ಮಾಡ್ತಿರೋದು
ಕಮಲಾಕ್ಷಿ ಟೀಚರ್ ಕಣ್ಣಿಗೆ ಬಿತ್ತು

ಎಲ್ಲೋ ನಿನ್ನ ಕ್ಯಾಲ್ಕುಲೇಟರ್?
ಕೈಯಲ್ಲೇ ಲೆಕ್ಕ ಹಾಕ್ತೇನೆ ಮಿಸ್.
ಕೈಯಲ್ಲಿ ಎಣಿಸ್ಲಿಕ್ಕೆ ಆಗದೆ ಇರೋದು?
ಕಾಲಲ್ಲಿ ಎಣಿಸ್ತೇನೆ ಮಿಸ್
ಅಧಿಕ ಪ್ರಸಂಗಿ
ಜೊತೆಗೆ ಬೆನ್ನಿಗೊಂದು ಗುದ್ದು

ಕೈಯಲ್ಲಿ ಎಣಿಸಿ ಮುಗಿದ ಮೇಲೆ
ಎಣಿಕೆಗೆ ಸಿಗದವುಗಳನ್ನೆಲ್ಲ
ಈಗ ಕಾಲಲ್ಲೆಲ್ಲ ಸರ್ಕಸ್ ಮಾಡುವುದಿಲ್ಲ
ಮರ್ಯಾದೆ ಪ್ರಶ್ನೆ
ಎಣಿಸಿದಷ್ಟೂ ಮುಗಿಯದ
ನಕ್ಷತ್ರಗಳನ್ನು ಕೂಡ

ಬದುಕು ಅಲ್ವಾ ಇದು
ಇದೇನು ಜ್ಯಾಮಿತಿ ಬಾಕ್ಸಿನೊಳಗಿನ
ಪೆನ್ಸಿಲ್ ಅಲ್ವಲ್ಲಾ

ಆದ್ರೂ ಲೆಕ್ಕ ತಪ್ಪುವಾಗ
ಬೆನ್ನ ಹಿಂದೆ ನಿಂತು
ನಮಗರಿಯದ ಹಾಗೆ ನೋಡುವ
ಒಬ್ಬರಿರ್ತಾರಲ್ವಾ

ಹಾಗೆ ನಿಂತು ನೋಡೋದು ಒಳ್ಳೇದೇ ಅನ್ಸುತ್ತೆ.
*


ಮಲಯಾಳಂ ಮೂಲ- ವಿಜಿಷಾ ವಿಜಯನ್

ಕನ್ನಡಕ್ಕೆ - ಕಾಜೂರು ಸತೀಶ್ 

Monday, March 3, 2025

1998

ಗುಂಡ ಶಿಕ್ಷಣಮಂತ್ರಿಯಾದ. 'ಶಿಕ್ಷಕರಿದ್ದರೆ ಮಾತ್ರ ಗುಣಾತ್ಮಕ ಶಿಕ್ಷಣ' ಎನ್ನುತ್ತಾ ಒಂದು ಲಕ್ಷ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದ. ತರಬೇತಿ ಪಡೆದು ಸರ್ಟಿಫಿಕೇಟುಗಳನ್ನು ಎಲ್ಲೆಲ್ಲೋ ಎಸೆದು ಬೇರೆ ಬೇರೆ ವೃತ್ತಿಗ ಳಲ್ಲಿ ತೊಡಗಿದವರೆಲ್ಲರೂ ಹೇಗೋ ಎಲ್ಲೋ ಹುಡುಕಿ ಅರ್ಜಿ ಸಲ್ಲಿಸಿದರು.ಹಲವರು ಪುಸ್ತಕ ಓದುವುದನ್ನೇ ನಿಲ್ಲಿಸಿ ಬಿಟ್ಟಿದ್ದರು. ಎಷ್ಟೋ ಮಂದಿಗೆ ಕಾಗುಣಿತವೇ ಮರೆತುಹೋಗಿತ್ತು.

ಅವರೆಲ್ಲರೂ ಮೇಷ್ಟ್ರಾದರು.

'ಗುಣಾತ್ಮಕ ಶಿಕ್ಷಣ ನಮ್ಮ ನಡೆ' ಎಂದು ಗುಂಡ ತನ್ನ ಕಾರಿನಲ್ಲಿ ಬರೆಸಿಕೊಂಡ.
*

✍️ ಕಾಜೂರು ಸತೀಶ್