ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, December 5, 2025

ನಗರ

ತಿಮ್ಮ ನಗರಕ್ಕೆ ಹೋದ. ಅಷ್ಟು ಜನರನ್ನು ನೋಡಿ ಗಾಬರಿಗೊಂಡರೂ ಅವರ್ಯಾರೂ ಇವನ ಮುಖ ನೋಡಲಿಲ್ಲವಾದ್ದರಿಂದ ಸಮಾಧಾನದಿಂದಿದ್ದ.

ಆ ಮೌನದಲ್ಲಿ ಹೇಳಿಕೊಂಡ:

" ನಗರವೂ ಒಂದು ಕಾಡು!"
*
✍️ ಕಾಜೂರು ಸತೀಶ್

Tuesday, November 18, 2025

ಕಣ್ಣಲ್ಲಿಳಿದ ಮಳೆಹನಿ ಕುರಿತು ಕಿರುಟಿಪ್ಪಣಿ - ಡಾ. ಮಹಾಂತೇಶ ಪಾಟೀಲ

ನವೆಂಬರ- ೧೮, ೨೦೨೫.


@ಕಾಜೂರು ಸತೀಶ್ 
@ಸಂಗಾತ ಪುಸ್ತಕ, ರಾಜೂರು.

ಈ ಲೋಕಕ್ಕೆ ತುಂಬಾ ಅಗತ್ಯವಾಗಿರುವುದು ಕಾಡು ಮತ್ತು ಕವಿತೆ. ಭೂಮಿ ಮತ್ತು ಮನುಷ್ಯರನ್ನು ಅವೆರಡೂ ತಂಪಾಗಿ ಇಡಬಲ್ಲವು. ಅವುಗಳ ಸಾಂಗತ್ಯದಿಂದ ಹೊರತಾದ ಜಗತ್ತು ಏನಾಗುತ್ತಿದೆ ಅಂತ ನಿತ್ಯ ನರಕಗಳ ನೋಡಿದರೆ ಅರ್ಥವಾಗುತ್ತದೆ. ಇಂತಹ ಹೊತ್ತಲ್ಲಿ ನಮಗೆ ಕಾಜೂರು ಸತೀಶ್ ಅವರ 'ಕಣ್ಣಲ್ಲಿಳಿದ ಮಳೆಹನಿ ' ಎದೆಗಿಳಿಯುವ ದೆಸೆಯಿಂದ ಗುರುತರ ರಚನೆಗಳೆನಿಸುತ್ತವೆ. ಕಾಡನ್ನು, ಕವಿತೆಯನ್ನು, ಜೀವನ ಕೊನೆಯನ್ನು ಕ್ಯಾಮೆರಾ ಕಣ್ಣಿನ ಮೂಲಕ ಲೋಕವನ್ನು ನೋಡುವ ಕವಿಗೆ ಕಾಣಿಸುವ ಜಗತ್ತು ಬೇರೆಯದೇ ಬಗೆಯದು. ಅಂತಹ ಬೇರೊಂದು ಲೋಕದರ್ಶನ ಮಾಡಿಸುತ್ತಾನೆ ಕವಿ.

ಹೊಸ ತಲೆಮಾರಿನ ಕವಿಗಳಲ್ಲಿ ಅಪ್ಪಟ ಪರಿಸರ ಸಂವೇದನೆಯಿಂದ ಬರೆಯುತ್ತಿರುವ ಏಕೈಕ ಇಕೋಪೊಯಟ್ ಕಾಜೂರು ಸತೀಶ್. ಈ ಮಾತು ಉತ್ಪ್ರೇಕ್ಷೆಯಲ್ಲ ಎನ್ನುವುದು ಅವರ 'ಗಾಯದ ಹೂವುಗಳು, ಕಣ್ಣಲ್ಲಿಳಿದ ಮಳೆಹನಿ' ಸಂಕಲನಗಳನ್ನು ಓದಿದವರು ಬಲ್ಲರು. ವರ್ತಮಾನದ ತಲ್ಲಣಗಳಿಗೆ ಪ್ರಕೃತಿ ಆಪ್ತತೆಯಿಂದ ನಿರ್ವಾಣ ಹೊಂದಲು ಸಾಧ್ಯವೆನ್ನುವುದನ್ನು ನಿವೇದಿಸುತ್ತವೆ. ಒಂದು ಪದ, ಸಾಲು, ನುಡಿ, ಪಂದ್ಯವೊಂದರಲ್ಲಿ ಅಗಾಧವಾದುದನ್ನು ಭಾಷಿಕ ಶಕ್ತಿಯಲ್ಲಿ ಸಾಧ್ಯವಾಗಿಸಬಲ್ಲರು.

ಮರ ಯಾರದು?, ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ, ಒಂದಾದರೂ ಬರಬಾರದೇ?, ನನ್ನೊಳಗೆ ಇಳಿಯುವಾಗ, ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ, ಹೊಟೇಲ್, ಎಷ್ಟು ಸುಖಿ ನೀನು ಕವಿತೆಯೇ?, ಒಂದು ಕವಿತೆ ಹುಟ್ಟುವುದರಲ್ಲಿತ್ತು, ಕುರ್ಚಿ, ನನ್ನ ಶವಸಂಸ್ಕಾರದ ದಿನ, ನಾನು ಸತ್ತ ಮೇಲೆ, ಕಾಡುಗಳಿದ್ದವು ಕವಿತೆಯಲ್ಲಿ - ಇವೆಲ್ಲವೂ ಚೇತೋಹಾರಿ ರಚನೆಗಳು. ಒಂದು ಎಲೆ, ಚಿಗುರು, ಹೂವು, ಮರವನ್ನು ಕವಿತೆಯಾಗಿ ಧ್ಯಾನಿಸಬಲ್ಲ ಗುಣ ಬೆರಗು ಮೂಡಿಸುತ್ತದೆ. ಕಾಡಿನ ಹಾಗೆ ಕಾಂಕ್ರೀಟ್ ಬಗ್ಗೆಯೂ ಈ ಕವಿ ಬರೆಯಬಲ್ಲ. ಸಾವು ಇವರ ಕಾವ್ಯದ ಶೋಧಗಳಲ್ಲಿ ಒಂದು. ಈ ಸಾವು ಮಾಗಿಕಾಲದಂತೆ, ಮತ್ತೆ ವಸಂತದ ಮೂಲಕ ಮರುಹುಟ್ಟು ಪಡೆಯುವ ದಿವ್ಯ ಹಂಬಲವುಳ್ಳದ್ದು.


ಕಾಡುಗಳಿದ್ದವು ಕವಿತೆಗಳಲ್ಲಿ
ಮಾತಿಗಿಳಿದ ಮಾನವ ಬೇಲಿಕಟ್ಟಿ ಬಂದ.....

ನೇರಳೆಯ ಪೊಟರೆಯೊಳಗಿಟ್ಟ ಹೃದಯ
ಅಲ್ಲೇ ಇದೆ ಈಗಲೂ

ಕಾಡುಗಳಿಲ್ಲ ಕವಿತೆಗಳಲ್ಲಿ
ಮೃಗಾಲಯವಿದೆ (ಕಾಡುಗಳಿದ್ದವು ಕವಿತೆಯಲ್ಲಿ).
*

ಯಾರು ಹಡೆಯುತ್ತಾರೆ
ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ
ಯಾರು ಸುಡುತ್ತಾರೆ ಅವುಗಳನ್ನು
ನಾನು ಸತ್ತ ಮೇಲೆ

ಯಾರು ಕೈಹಿಡಿದು ಬರೆಸುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ
ಯಾರು ಮತ್ತೆ ಮತ್ತೆ ಓದಿಸುತ್ತಾರೆ
ಅವುಗಳನ್ನು ನಾನು ಸತ್ತ ಮೇಲೆ. (ನಾನು ಸತ್ತ ಮೇಲೆ).

*

ಈ ರಾತ್ರಿ
ಮಿಡತೆಯ ಹಾಡು
ಕಾಡಾನೆಯ ಘೀಳು
ನಾಯಿಗಳ ಬೊಗಳು
ಮೈಸೋಕುವ ಗಾಳಿ
ಮಳೆಯ ಸಪ್ಪಳ
ಇರದಿದ್ದರೆ
ಕವಿತೆ ಬರೆಯುತ್ತಿದ್ದೆ
ನಿನ್ನ ಕುರಿತು (ಬರೆಯಲಾರೆ).
*

ಊಟಕ್ಕೆಂದು ಹೊಟೇಲಿನ ಬಳಿಬಂದೆ
ಬಾಗಿಲು ಹಾಕಿ ಎಲ್ಲೋ ಹೊರಟುಹೋಗಿದೆ.

ಎಲ್ಲಿ ಹೋಗಿರಬಹುದು ಅದು
ಬೆವರಲ್ಲಿ ತೋಯ್ದ ತನ್ನ ಅಂಗಿಯ ಕಳಚಿಟ್ಟು.
(ಹೋಟೆಲ್).
*

ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ...
ಎಲ್ಲ ಕಳೆದುಕೊಂಡ ಕಾಡು ನಡೆದು ಬಂದಿರಬಹುದು ಕಂಬಗಾಲುಗಳಲ್ಲಿ/
 ಹೆಜ್ಜೆ ಎತ್ತಿಟ್ಟಲ್ಲೆಲ್ಲ ಲದ್ದಿ ಹಾಕಿ
ಹಿಂತಿರುಗಿಸುತ್ತಿರಬಹುದು ಯಾರೋ ಮರೆತು ಬಂದ ಗರಗಸವನ್ನು (ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ...).
*

ಎಷ್ಟೊಂದು ಹಕ್ಕಿಗಳಿವೆ ಇಲ್ಲಿ
ಒಂದಾದರೂ ಬರಬಾರದೇ?

ಒಂದು ಮರಕುಟಿಗವಾದರೂ ಬಂದು
ಕುಟುಕುಟು ಕುಟುಕಿ
ಮೊಬೈಲಿನಲ್ಲೊಂದು ತೂತು ಮಾಡಿ ನುಗ್ಗಿ
ಜೋರಾಗಿ ಹಾಡಿ....
ಆಮೇಲೆ ಅದರ ಹಾಡೇ ರಿಂಗ್ಟೋನಾಗಿ
ಅದರ ಚಿತ್ರವೇ ಡಿಪಿಯಾಗಿ
(ಒಂದಾದರೂ ಬರಬಾರದೇ).
*

ಚಿಕ್ಕವನಿದ್ದಾಗ
ಈ ಮರ ನನ್ನದಾಗಿತ್ತು

ಅದರ ನೆರಳಲ್ಲಿ ಕುಳಿತು
ಪುಸ್ತಕ ಓದಿದೆ
ಕೊಂಬೆಗಳ ಮೇಲೆ ಕುಳಿತು
ಜಗದ ಸುದ್ದು ಮರೆತೆ (ಮರ ಯಾರದು).

ಕೊಡಗಿನ ಕವಿ ಕಾಜೂರು ಸತೀಶ್ ಕಾವ್ಯ ದಟ್ಟ ಕಾಡಿನ ಮಂಜಿನಂತೆ, ಜೇಡರ ಬಲೆಯಲ್ಲಿ ಹೆಣೆದ ನೀರ್ಮುತ್ತಿನಂತೆ, ಮರದ ಎಲೆಗಳ ನಡುವೆ ಸುಳಿದ ಸೆಳೆಯುವ ಕುಳಿರ್ಗಾಳಿಯಂತೆ- ಈ ದಿವ್ಯತೆ ಅನುಭೂತಿ ಪಡೆಯಲು ಓದಬೇಕಾದ ಕವಿತೆಗಳಿವು.
*


✍️ಮಹಾಂತೇಶ ಪಾಟೀಲ