ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, June 2, 2018

ಮಣಿಯಾಣಿ ಮೇಷ್ಟ್ರು


'ನಿಮಗೆ ಕೃಷ್ಣ ಮಣಿಯಾಣಿ ಮೇಷ್ಟ್ರನ್ನು ಗೊತ್ತಾ?' ಎಂದು ಅಧಿಕಾರಿಗಳೆದುರು ಪ್ರಶ್ನೆಯನ್ನು ಎಸೆದರೆ, 'ಇಲ್ಲ' ಎಂಬ ಉತ್ತರವೇ ಬರುತ್ತದೆ.

ಯಾಕೆಂದರೆ ಅವರೊಬ್ಬರು ನಿಷ್ಠಾವಂತ ಮೇಷ್ಟ್ರಾಗಿದ್ದರು!
*
ಕಾಜೂರು ಶಾಲೆಯಲ್ಲಿ ಅವರು ಮುಖ್ಯ ಶಿಕ್ಷಕರಾಗಿದ್ದಾಗ ಅವರ ಜೊತೆಗೆ ಕೆಲಕಾಲ ಕೆಲಸಮಾಡುವ ಭಾಗ್ಯ ನನ್ನದಾಗಿತ್ತು. ಒಂದಿಷ್ಟೂ ಅಹಂಕಾರವಿರದ, ಸದಾ ನಗುಮೊಗದ ಮೇಷ್ಟ್ರಿಗೆ ಶಾಲೆಯ ಮಕ್ಕಳೆಲ್ಲರೂ ಗೆಳೆಯ ಗೆಳತಿಯರು! ಅವರು ಬರುತ್ತಿದ್ದಂತೆಯೇ  ಓಡಿಹೋಗಿ ಶೇಕ್ ಹ್ಯಾಂಡ್ ಮಾಡುವುದು ಮಕ್ಕಳ ನಿತ್ಯದ ಅಭ್ಯಾಸ. ಸಹೋದ್ಯೋಗಿಗಳಿಗೆ ಮೊದಲೇ ನಮಸ್ಕರಿಸುತ್ತಾ ಎಂತಹ ಒತ್ತಡದ ಕ್ಷಣದಲ್ಲೂ ಸಮಚಿತ್ತದಿಂದ ಸ್ಫೂರ್ತಿಯನ್ನು ತುಂಬುವ ಮಣಿಯಾಣಿ ಮೇಷ್ಟ್ರು ಎಂದೂ ಪ್ರಶಸ್ತಿಗಾಗಿ ಅರ್ಜಿಹಾಕಿದವರಲ್ಲ; ಬಕೇಟು ಹಿಡಿದವರಲ್ಲ. ಅವರ ಪ್ರಾಮಾಣಿಕತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೆಲವು ಅಧಿಕಾರಿಗಳು ಅಧಿಕಾರ ಚಲಾಯಿಸುವಾಗಲೂ 'ಸರಿ ಸರ್ ಮಾಡುತ್ತೇನೆ' 'ಆಯ್ತು ಸರ್' ಎಂದು ಪುಟ್ಟ ಮಗು ಹೇಳುವ ಹಾಗೆ ಹೇಳುತ್ತಿದ್ದರು!
*
ಹುಣ್ಣಿಮೆ ಅಮಾವಾಸ್ಯೆಗಳಿಗೊಮ್ಮೆ ಬಂದು ಮುಖತೋರಿಸಿ ಹೋಗುವ ಪ್ರಶಸ್ತಿ ವಿಜೇತ ಮೇಷ್ಟ್ರುಗಳ ನಡುವೆ ಇರುವಾಗ ಕೃಷ್ಣ ಮಣಿಯಾಣಿ ಮೇಷ್ಟ್ರನ್ನು ನೆನಪಿಸಿಕೊಳ್ಳದಿದ್ದರೆ ನನ್ನಂಥವರು ಮಾಡುವ ಬಹುದೊಡ್ಡ ಪಾಪಗಳಲ್ಲೊಂದೆನಿಸುತ್ತದೆ!
*

ಕಾಜೂರು ಸತೀಶ್

No comments:

Post a Comment