ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, September 4, 2014

'ಗುರು' ಎಂಬೋ ಬೆಳಕಿನ ಬೀಜ.

-1-
ಮತ್ತೆ ಶಿಕ್ಷಕರ ದಿನ ಎದುರಿಗೆ ಬಂದಿದೆ .ಎಂಥವರೂ ತಮ್ತಮ್ಮ ಆದರ್ಶ ಶಿಕ್ಷಕರನ್ನು ನೆನೆದು ಭಾವುಕರಾಗುವ ದಿನವಿದು.


ಕಳೆದೆರಡು ವರ್ಷಗಳ ಹಿಂದೆ ನನ್ನ ಗೆಳೆಯನೊಬ್ಬ ನಮಗೆ ಹೈಸ್ಕೂಲಿನಲ್ಲಿ ಗಣಿತ ಪಾಠ ಹೇಳಿಕೊಡುತ್ತಿದ್ದ 'ಗುರುಸ್ವಾಮಿ ಮಾಸ್ಟ್ರ' ಮೊಬೈಲ್ ನಂಬರ್ ಕೊಟ್ಟಿದ್ದ . ಈವರೆಗೂ ನಾನವರಿಗೆ ಕರೆಮಾಡಲು ಹೋಗಲಿಲ್ಲ ; ಎಷ್ಟೋ ಬಾರಿ ಕರೆಮಾಡೋಣವೆಂದು ಮೊಬೈಲ್ ಕೈಗೆತ್ತಿಕೊಂಡರೂ ಮತ್ತೆ ಸುಮ್ಮನಾಗಿದ್ದೆ.


ನನ್ನ ಹೈಸ್ಕೂಲು ವಿದ್ಯಾಭ್ಯಾಸ ಮುಗಿದು ಮೂರು ವರ್ಷಗಳ ಮೇಲೆ ನಾನು ಮತ್ತು ಅವರು ಸಂಜೆಗತ್ತಲಿನಲ್ಲಿ ಭೇಟಿಯಾಗುತ್ತಿದ್ದೆವು.ಅವರ ಕೈಯಲ್ಲೊಂದು ಸಣ್ಣ ಟಾರ್ಚ್ ಇರುತ್ತಿತ್ತು .ನಾನು ಕಾಲೇಜು ಮುಗಿಸಿ ಮನೆಗೆ ಹಿಂತಿರುಗಲು ಗಡಿಯಾರದ ಮುಖವನ್ನೇ ನೋಡಿರದ ಸರ್ಕಾರಿ ಬಸ್ಸನ್ನು ಕಾಯುತ್ತಾ ಕೂತಿರುತ್ತಿದ್ದೆ. ಅವರೂ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಯ ಹಾದಿ ಹಿಡಿದಿರುತ್ತಿದ್ದರು .ರಾತ್ರಿ ಮನೆ ತಲುಪುತ್ತಿದ್ದದ್ದು 8ಕ್ಕೆ.ಬೆಳ್ಳಂಬೆಳಿಗ್ಗೆಯೇ ಮನೆಬಿಟ್ಟು ಶಾಲೆ ತಲುಪುತ್ತಿದ್ದರು. ಅವರ Dedication ನೆನೆದಾಗ ನಿಜಕ್ಕೂ ಮಾತು ಹೊರಳೋದಿಲ್ಲ.


ಗುರುಸ್ವಾಮಿ ಮಾಸ್ಟ್ರು ಮೂರು ವರ್ಷಗಳಲ್ಲಿ ನಮಗೆ ಹೇಳಿದ್ದು ಒಂದೇ ಒಂದು ಜೋಕ್-'ಭಾರತೀಯನ ಮೆದುಳು ಸವೆಯೋದಿಲ್ಲ'! [ತಮಾಷೆ ಅಂದ್ರೆ ,ನಾನು ಶಿಕ್ಷಕನಾದ ಮೇಲೆ ನನ್ನ ವಿದ್ಯಾರ್ಥಿಗಳಿಗೂ ಇದನ್ನು ಹೇಳಿಕೊಟ್ಟಿದ್ದೆ. ಮುಂದೆ ಅದೇ ಜೋಕನ್ನು ಅದೇ ಮಕ್ಕಳಿಗೆ ಮಾಸ್ಟ್ರು ಹೇಳಲು ಹೊರಟಾಗ 'ಇದನ್ನು ಸತೀಶ್ ಮಾಸ್ಟ್ರು ಹೇಳಿಕೊಟ್ಟಿದ್ದಾರೆ' ಎಂದರಂತೆ!]


ಒಮ್ಮೆ ಪ್ರಿನ್ಸಿಪಾಲರಾದ್ದ ಕೆಂಪಯ್ಯ ಸರ್ ಎಲ್ಲರ ಎದುರಿಗೆ 'ಗುರುಸ್ವಾಮಿ ಮಾಸ್ಟ್ರು ಈಗ ಒಂದು ಹಾಡು ಹಾಡುತ್ತಾರೆ' ಎಂದುಬಿಟ್ಟರು! ಮುಜುಗರಕ್ಕೊಳಗಾದ ಮಾಸ್ಟ್ರು ' ಭೂಮಿ ಹುಟ್ಟಿದ್ದು ಹೇಗೆ? ಹೇಗೆ? ಹೇಗೆ?' ಎಂದು ಹಾಡಲು ತೊಡಗಿದಾಗ ಒಂದು ಕ್ಷಣ ನಾವೆಲ್ಲರೂ ನಕ್ಕುಬಿಟ್ಟಿದ್ದೆವು!


ಒಂದು ಇರುವೆಯನ್ನೂ ನೋಯಿಸದ ವ್ಯಕ್ತಿ ಅವರು . ಆದರೆ ,ಸಿಟ್ಟು -ಸಂತೋಷದ ಸಂದರ್ಭಗಳಲ್ಲಿ ಇದ್ದಕ್ಕಿದ್ದಂತೆ ಭಾವುಕರಾಗಿಬಿಡುತ್ತಿದ್ದರು. ಗಾಂಧಿಯ ಪ್ರತಿರೂಪದಂತಿರುವ ಅವರು ಈಗ ಕುಶಾಲನಗರದ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಯಾವ ಪ್ರಶಸ್ತಿಗೂ ಅರ್ಜಿ ಸಲ್ಲಿಸದೆ ಮತ್ತದೇ ಸೇವಾ ಮನೋಭಾವದಿಂದ ದುಡಿಯುತ್ತಿದ್ದಾರೆ.


-2-

ಇಂತಹ ಅನೇಕ ಶಿಕ್ಷಕರುಗಳ ಬೆಳಕನ್ನು ಕಡೆಪಡೆದವರಂತೆ ಪಡೆದು ಬದುಕುತ್ತಿದ್ದೇವೆ. ಆದರೆ , ವಾಸ್ತವ ಅತ್ಯಂತ ಭೀಕರವಾಗಿದೆ. ಶಿಕ್ಷಕರ ನಡವಳಿಕೆಯ ಮೇಲೆ ಸಮಾಜ ಸಂಶಯಪಡುವಂತಾಗಿದೆ. ವೃತ್ತಿಯ ಒತ್ತಡ 'ಅತೃಪ್ತಿ'ಯನ್ನು ಉಡುಗೊರೆಯಾಗಿ ನೀಡುತ್ತಿದೆ .ಶಿಕ್ಷಕರೇ ಹಳೆಯ ವಿದ್ಯಾರ್ಥಿಗಳು ಸಿಕ್ಕಾಗ ಪರಿಚಯ ಹೇಳಿಕೊಳ್ಳುವ ಕಾಲ ಸೃಷ್ಟಿಯಾಗುತ್ತಿದೆ! ಅದರ ನಡುವೆ ಹುಣ್ಣಿಮೆ- ಅಮವಾಸ್ಯೆಗಳಂದು ಶಾಲೆಯ ಕಡೆ ಮುಖಮಾಡುವ 'ಶಿಕ್ಷಕ'ರೆನಿಸಿಕೊಂಡ ಕೆಲವರು 'ರಾಜ್ಯ ಪ್ರಶಸ್ತಿ'ಯನ್ನು 'ಪಡೆದು' ಬೀಗುತ್ತಿದ್ದಾರೆ.

ಈ ಕೊರತೆಗಳನ್ನು ಮೀರುವ ಕಾಲ ಬರುತ್ತದೆ ಎಂದು ನನಗೇನೂ ಅನ್ನಿಸುವುದಿಲ್ಲ. ಇಡೀ ವ್ಯವಸ್ಥೆಯೇ ಖಾಸಗೀಕರಣದ ಮುಖವನ್ನು ಧರಿಸುತ್ತಿದೆ. 'ಏಕರೂಪದ ವ್ಯವಸ್ಥೆ' ಈ ಶತಮಾನ ಕಳೆದರೂ ಜಾರಿಯಾಗುವುದಿಲ್ಲ ಎನ್ನಿಸುತ್ತಿದೆ.


ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು!


-ಕಾಜೂರು ಸತೀಶ್

No comments:

Post a Comment