ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, May 31, 2025

ರೇಷ್ಮೆಯ ಹಾದಿ

ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳು ಜಾರಿದ ಮೇಲೆ 'ಈ ಕೆಲಸ ನನ್ನಂಥವರಿಗಲ್ಲ' ಅನ್ನಿಸಿದರೆ ಹೇಗಿರುತ್ತದೆ? ಅದೂ ಮದುವೆ ಆಗಿ ಮಗು ಹುಟ್ಟಿದ ಮೇಲೆ ಇಂಥದ್ದೊಂದು ಬಂದು ಮನಸ್ಸನ್ನಾಕ್ರಮಿಸಿಬಿಟ್ಟರೆ!

ಹಾಗೆ ಆದರೆ ಮತ್ತೇನಿಲ್ಲ: ಪದವಿ ಮುಗಿಸುತ್ತಾರೆ, ಬಿ.ಇಡಿ ಮುಗಿಸುತ್ತಾರೆ, KES ಪಾಸುಮಾಡುತ್ತಾರೆ, 'ಹಸಿರು ಸಹಿ' ಮಾಡುವ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗುತ್ತಾರೆ, ಮತ್ತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕರಾಗುತ್ತಾರೆ, ಪ್ರಭಾರ ಪ್ರಾಂಶುಪಾಲರ ಹುದ್ದೆಯನ್ನೂ ನಿರ್ವಹಿಸುತ್ತಾರೆ!

ಇನ್ನೇನು ನಿವೃತ್ತಿ ಎನ್ನುವಾಗ ಈಗಷ್ಟೇ ಕೆಲಸಕ್ಕೆ ಸೇರಿದ ಹುಡುಗರೊಂದಿಗೆ ಓಟ ಓಡಿ ಜಯಿಸಿ ರಾಜ್ಯಮಟ್ಟದಲ್ಲೂ ಅದೇ ಹುರುಪನ್ನು ತೋರುತ್ತಾರೆ! ತಮ್ಮ ಮಗ ಕ್ರಿಕೆಟ್ ಆಟಗಾರನಾದರೂ ಆಗಲಿ ಎಂದು ಪ್ಯಾಡು ಕಟ್ಟಿ ಹೆಲ್ಮೆಟ್ ಧರಿಸಿ ಕ್ರಿಕೆಟ್ ಆಡುತ್ತಾರೆ, ಸತತವಾಗಿ ಮೂರ್ನಾಲ್ಕು ಗಂಟೆಗಳ ಕಾಲ ಬೌಲಿಂಗ್ ಮಾಡುತ್ತಾರೆ.


1975 ರಿಂದ 1996/1999ರವರೆಗೂ ಕ್ರಿಕೆಟ್ ದಿಗ್ಗಜರ ಕುರಿತು ಗಂಟೆಗಟ್ಟಲೆ ಮಾತನಾಡುವ ಸಾಮರ್ಥ್ಯವುಳ್ಳವರು(ವಿವ್ ರಿಚರ್ಡ್ಸನ ಕುರಿತ ಅವರ ಮಾತು ಕೇಳಿ youtubeನಲ್ಲಿ ಹುಡುಕಿ ಹುಡುಕಿ ನೋಡಿದ್ದೇನೆ).

ಅಡುಗೆಯಲ್ಲೂ ಅದೇ ಹುರುಪು!

ಡಾ.ರಾಜ್ ಕುಮಾರ್ ಅವರ ಎಲ್ಲಾ ಚಿತ್ರಗಳನ್ನು ತಲ್ಲೀನರಾಗಿ ನೋಡುತ್ತಾರೆ ;ಎದೆಗಿಳಿಸಿಕೊಂಡು ಬದುಕುತ್ತಾರೆ. ಪಿ.ಬಿ.ಶ್ರೀನಿವಾಸ್ ಹಾಡುಗಳೆಂದರೆ ಜೀವ. ಎಷ್ಟೆಷ್ಟೋ ಗಾಯಕರ/ಸಂಗೀತ ಸಂಯೋಜಕರ ಕುರಿತ ವಿಶಿಷ್ಟ ಗ್ರಹಿಕೆಗಳು ಅವರೊಳಗಿವೆ.
'ಹಾಡಿ ಸರ್' ಎಂದರೆ ತಮಾಷೆಯ ಒಂದು ಮುನ್ನುಡಿಯೊಂದಿಗೆ 'ಚಂದ' ಹಾಡುತ್ತಾರೆ.


ಓದುವುದೆಂದರೆ ಅಷ್ಟು ಪ್ರೀತಿ. ಅದಕ್ಕಾಗಿಯೇ ನಾಲ್ಕು ಜನರ ನಡುವೆ ನಿಂತಾಗ, ತರಬೇತಿ-ಸಭೆ-ಸಮಾರಂಭಗಳಲ್ಲಿ ಕುಳಿತಾಗ ತುಸು ಎತ್ತರ! (ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಂದು ವೇದಿಕೆಯಲ್ಲಿದ್ದ ಅಷ್ಟು ಜನರ ಪೈಕಿ ನಮ್ಮ ಪೋಷಕರೊಬ್ಬರು 'ಅವರು ಯಾರು? ಏನು ಕೆಲಸ ಮಾಡೋದು? ತುಂಬಾ ವಿಷಯ ಇದೆ ಅವರ್ಹತ್ರ' ಎಂದು ಅವರ ಬಗ್ಗೆ 'ಮಾತ್ರ' ವಿಚಾರಿಸಿದ್ದರು!).


ಸಾಹಿತ್ಯ ಮಾಸಿಕವೊಂದನ್ನು ಮೂರು(?) ದಶಕಗಳಿಂದ ಸತತವಾಗಿ ಓದುತ್ತಾ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಷ್ಟು ತಾಳ್ಮೆ ಮತ್ತು ಶ್ರದ್ಧೆಯುಳ್ಳವರು. ಪರ್ಸು ನೋಡುವವರ, ತುಂಬಿಸಿಕೊಳ್ಳುವವರ ನಡುವೆ ಗ್ರಂಥಾಲಯದ ಪುಸ್ತಕಗಳನ್ನು ತಡಕಾಡಿ ತಲೆತುಂಬಾ ತುಂಬಿಸಿಕೊಳ್ಳುವವರು.



ತೀರ್ಥಯಾತ್ರೆ ಎಂದರೂ ಅಷ್ಟೇ ಪ್ರೀತಿ; ಭಕ್ತಿ.

ಅನ್ನ ನೀರು ಬಿಟ್ಟು ದಿನಗಟ್ಟಲೆ ನಿಲ್ಲಬಲ್ಲ ಕಠಿಣ ಮನಸ್ಸು( ಕೆಲವು ಹೂವುಗಳು ಎಷ್ಟೋ ದಿನಗಳವರೆಗೆ ಬಾಡದೆ ಇರಬಲ್ಲದು, ಈ👇 ಹೂವನ್ನೇ ಗಮನಿಸಿ!)


*
ಕಾಯಕವೇ ಕೈ'ಲಾಸ್'

-೧-
ಬನ್ನಿ ಊಟಮಾಡೋಣ.
ಸರಿ ಸರ್
ಆದ್ರೆ ಒಂದು ಕಂಡೀಷನ್. ಒಪ್ಕೊಂಡ್ರೆ ಸರಿ ಇಲ್ದಿದ್ರೆ ಬೇಡ.
ಏನು ಸರ್
ನಾನು ಹಣ ಕೊಡ್ತೇನೆ..


-೨-
ಮೈಸೂರಿನಿಂದ ಕೆ ಆರ್ ನಗರ ಹೋಗಿ ಬಂದೆ
ಅದ್ಯಾಕೆ ಅಲ್ಲಿಗೆ ಹೋದ್ರಿ ಸರ್
'___' ಅವ್ರನ್ನು ಪಿಕ್ ಅಪ್ ಮಾಡ್ಬೇಕಿತ್ತು...
**

ದಾಖಲೆ ಭೇಟಿ

ನಾನು ಕಂಡಂತೆ ,ಕೊಡಗಿಗೆ ಬಂದಿದ್ದು 2019ರಲ್ಲಿ. ಅನೇಕ ಕೆಲಸಗಳ ನಡುವೆಯೂ ಇವರು ಕಾಲಿಡದ ಶಾಲೆಗಳಿಲ್ಲ; ಇದ್ದರೂ ವಿರಳ. ಡಯಟ್ ಹಿರಿಯ ಉಪನ್ಯಾಸಕರೊಬ್ಬರು ಇಷ್ಟು ಶಾಲಾ ಭೇಟಿ ಮಾಡಿರುವುದು ಒಂದು ದಾಖಲೆಯೇ ಸರಿ.


*
ಇಷ್ಟು ಹೊತ್ತು ಅಭಿಮಾನದಿಂದ ನೆನಪಿಸಿಕೊಳ್ಳುತ್ತಿರುವ ಶಿವಕುಮಾರ್ ಸರ್ ಅವರಿಗೆ ಇಲಾಖೆಯ ಯಾವ ಕೆಲಸದಲ್ಲೂ ನನ್ನಿಂದ ನೆರವಾಗಲಿಲ್ಲ. ಯಾವ ತರಬೇತಿಗೂ ಅವರೊಂದಿಗೆ ಭಾಗಿಯಾಗಲಿಲ್ಲ. ನನ್ನ ಮೌನ ಅವರನ್ನು ಕಾಡಿದೆ. ಹಾಗಾಗಿ ಅವರು ನನ್ನನ್ನು ಒತ್ತಾಯಿಸಲಿಲ್ಲ(ಸಹಿಸಿಕೊಂಡರು!).


ಒಮ್ಮೆ ನಾನು ಕೇಳಿದ್ದೆ: ಸರ್ ಒಂದು ವೇಳೆ '_'ಕೆಲಸಕ್ಕೆ ನಿಮ್ಮನ್ನು ನೇಮಿಸಿದರೆ ಏನು ಮಾಡುತ್ತೀರಿ?'
'ನಾನು ಮಾಡುವುದಿಲ್ಲ. ಮಾಡಲೇಬೇಕು ಎಂದಾದರೆ ನಾನು ರಾಜೀನಾಮೆ ಕೊಡುತ್ತೇನೆ'.

ಇದು ತಪ್ಪಿಸಿಕೊಳ್ಳುವಿಕೆ ಅಲ್ಲ, ತಮ್ಮ ಎದೆಯ ದನಿಯಂತೆ ಬದುಕಲು ಅವರು ಮನಸ್ಸಿನಲ್ಲೇ ಮಾಡಿಟ್ಟುಕೊಂಡಿದ್ದ ಪೂರ್ವನಿರ್ಧಾರ.

ಸದ್ಯ ಅವರು ಆ ಕೆಲಸಕ್ಕೆ ಇಳಿಯಲಿಲ್ಲ. ತಮ್ಮ ಶುದ್ಧತೆಯನ್ನು ಕಾಪಾಡಿಕೊಂಡೇ ನಿವೃತ್ತರಾದರು. 40 ವರ್ಷಗಳ ದೀರ್ಘ ದುಡಿಮೆ ಇದು.


ಪ್ರಿಯ ಶಿವಕುಮಾರ್ ಸರ್, ಏನು ಹೇಳಬೇಕೋ ತಿಳಿಯುತ್ತಿಲ್ಲ...🙏💐
*

✍️ಕಾಜೂರು ಸತೀಶ್

Tuesday, May 20, 2025

Sound of Silence!

Every day on my way to work, I see a man who never fails to greet me with a raised hand and a warm smile. This silent gesture has been part of my mornings for the past three years!

Yesterday,he came by as I was riding my bike.Curious,I stopped and asked where he was headed. He didn’t reply. I asked again-still no answer. That’s when I realized: the man couldn’t speak!
*
I heard the sound of silence-a silent greeting that had spoken volumes all these years.A quiet connection, wordless yet powerful.
*
✍️ Kajooru Sathish 

Thursday, May 15, 2025

ಯಾವ ಒಲುಮೆ

ಯಾವ ಒಲುಮೆ ನನ್ನ ನಿನ್ನ ಸೆಳೆಯುವಂತೆ ಇಲ್ಲಿ ಸುಳಿದು
ಮರದ ಬಳ್ಳಿಯಂತೆ ಸೆಳೆದು ಬೆಳೆಯುತಿರುವುದು
ಯಾವ ಮೋಹ ಜಗವನೆಲ್ಲ ನೆರಳಿನಂತೆ ಸುತ್ತಿ ಹಿಡಿದು
ಜೀವ ಜೀವದೊಡನೆ ಬಂಧ ಬೆಸೆಯುತಿರುವುದು||ಯಾವ||

ಬಾನ ಒಲುಮೆಯೊಂದು ಬಂದು ಹನಿಗಳಾಗಿ ಬುವಿಗೆ ಉದುರಿ
ನೆಲದ ತುಂಬ ಹಸಿರ ಕುಡಿಗಳೆದ್ದು ನಗುವವು
ಹಸಿರ ಒಡಲಿನಿಂದ ಬಂದ ಹಕ್ಕಿಯದರ ಹಾಡನುಲಿದು
ನಭಕೆ ಮತ್ತೆ ನೆನಪನೆಲ್ಲ ಕಳಿಸುತಿರುವುದು||ಯಾವ||

ಕಡಲ ನಡುವಲೆಲ್ಲೋ ಅಲೆವ ದೋಣಿಗೆಷ್ಟು ಅಲೆಯ ಮೋಹ
ಕುಣಿದು ನಲಿದು ಮೈಯ್ಯನೆಲ್ಲ ನುಲಿಯುತಿರುವುದು
ತೀರದಂಥ ಮೈಯ್ಯ ಮೋಹ ಮತ್ತೆ ತೀರದತ್ತ ಚಾಚಿ
ನೆಲದ ಸಖ್ಯಕ್ಕಾಗಿ ಹಂಬಲಿಸುತಿರುವುದು||ಯಾವ||

ಬಾನು ನೆಲದಿ ಹುಟ್ಟಲೆಳಸಿ ಜಾರುತಿರುವುದು
ನೆಲವು ಮೈಯ್ಯ ಕಳಚಿ ನಭಕೆ ಹಾರುತಿರುವುದು
ಒಲುಮೆ ಚಕ್ರದಂತೆ ಜಗವ ಸುತ್ತುತಿರುವುದು
ಹುಟ್ಟು ಸಾವ ನಾಣ್ಯ ಚಿಮ್ಮಿ ಬೀಳುತಿರುವುದು||ಯಾವ||
*

✍️ಕಾಜೂರು ಸತೀಶ್

ನೀನು -ನಾನು



ಮೋಡಗಟ್ಟಿದ ಬಾನು ನೀನು
ಸುಡುಜ್ವರದ ನೆಲವು ನಾನು


ಕಣ್ಣ ತುಂಬಿಸಿ ನಿಂತೆ ನೀನು
ಬತ್ತಿದೆದೆನದಿ ಇಲ್ಲಿ ನಾನು


ಮಿಂಚನು ಹೊತ್ತಿಸಿಬಿಟ್ಟೆ ನೀನು
ಸಿಡಿಲು ಗುಡುಗು ಇಲ್ಲಿ ನಾನು


ಜಾರಿಸಿದ ಹನಿಯ ತಂಪು ನೀನು
ನೆನ್ನೆದೆಯ ಸೋಂಕಲು ನೀನೇ ನಾನು


ನೀನಿಲ್ಲದ ನಾನಿಲ್ಲದ ನಾವೇ ನಾವು
ನಾವೂ ಅಲ್ಲದ ಹಸಿರೇ ನಾವು
*

✍️ಕಾಜೂರು ಸತೀಶ್