ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, August 1, 2014

ಮಹಜರು

ಯಾರು ಬಾಗಿಲು ಮುರಿದು ಒಳಹೋಗಿದ್ದು?
ನಾನು ,ಸಾಬು ಮತ್ತು ಲಾಡ್ಜ್ ಮ್ಯಾನೇಜರ್.
ಬಾಡಿ ಮೊದಲು ಕಂಡಿದ್ದು ಯಾರು ?
ನಾನು ಮತ್ತು ಈ ರೂಂ ಬಾಯ್.
ಎಲ್ಲಿ ?
ಒಂದು ಮಂಚದಲ್ಲಿ
ಇನ್ನೊಂದು ನೆಲದಲ್ಲಿ .
ಹೇಗೆ?
ಊದಿಕೊಂಡು,ವಾಸನೆ ಬಂದಿತ್ತು .
ಮೈಮೇಲೆ ಬಟ್ಟೆಯಿರಲಿಲ್ಲ.
ಓಹೋ..ಆಗ ಎಲ್ಲ ಮುಗಿದಿತ್ತು?
ಆಮೇಲೆ ?
ಮೈಮೇಲೆ ಬಟ್ಟೆ ಮುಚ್ಚಿದೆವು.
ತಪ್ಪು..ಸಾಕ್ಷಿ ನಾಶಪಡಿಸಬಾರದಿತ್ತು.
ಹುಂ..ಆಮೇಲೆ ?
ಸ್ಟೇಷನ್ನಿಗೆ ಫೋನ್ ಮಾಡಿ ಹೇಳ್ದೆ.
ಏನಾದ್ರೂ ಪತ್ರ-ಗಿತ್ರ ಸಿಕ್ತಾ?
ಈ ಕಾಗದದ ಚೂರು ಸಿಕ್ತು.
'ಅಮ್ಮಾ,ದಯವಿಟ್ಟು ಕ್ಷಮಿಸು' ಅಂತ ಇದೆ.
ಯಾರು ಇವ್ರಿಬ್ರು?
ಆಶಿಕ್ ಮತ್ತು ರಾಧ.
ಬೆಂಗಳೂರಿನವ್ರು.
ಪ್ರಾಯ?
20, 25.






ಕಷ್ಟ ,ಹೂವಿನಂಥ ಯೌವ್ವನದಲ್ಲಿ
ಯಾಕೆ ಹೀಗೆ ಮಾಡ್ಕೊಂಡ್ರು?
ಅದೂ ಈ ಪುಣ್ಯಕ್ಷೇತ್ರದಲ್ಲಿ.
ರತಿಯೂ ಇವರ ಪ್ರಣಯಲೀಲೆಗಳನ್ನು
ಅನುಭವಿಸಲಿಲ್ಲ ಅನ್ಸುತ್ತೆ.
ಇಲ್ದಿದ್ರೆ ಸಾಯ್ತಿರ್ಲಿಲ್ಲ.
ರತಿಯಲ್ವೆ ಪ್ರಣಯಕಥೆಯ ಏರಿಳಿತಗಳ ಸಾರ?
ಹೋಗ್ಲಿ ಬಿಡಿ,
ಪೊಲೀಸ್ರಿಗೆ ಅವೆಲ್ಲ ಯಾಕೆ?




ಮುಖಭಾವ ಹೇಗೆ?
ಹತಾಶೆ?ದುಃಖ ?ಖಿನ್ನತೆ?
ಅದೆಲ್ಲ ಸಹಜ ಸಾರ್ ಈಗ-
ಭಕ್ತರ ಮುಖದಲ್ಲೂ ಕೂಡ .
ಇಲ್ಲೆಷ್ಟು ದಿನ ಇದ್ರು?
ಹತ್ತು.




ಏಯ್ ರೂಂ ಬಾಯ್..
ನಗು ,ಅಳು ಅಥವಾ
ಏನಾದ್ರೂ ಕಿರುಚಾಟ ಕೇಳಿಸ್ತಾ ಅಲ್ಲಿಂದ?
ಹುಚ್ಚುಹುಚ್ಚಾದ ಒಂದು ಹಾಡು ಕೇಳಿದ್ದೆ.
ಯಾವ ಹಾಡು?
'ಅಮ್ಮ ಲೂಸಾ..
ಅಪ್ಪ ಲೂಸಾ..'
ಹಾಗಾದ್ರೆ ನೀನು ಬಾಗಿಲಿಗೆ ಕಿವಿಗೊಟ್ಟು ನಿಂತಿದ್ದೆ;
ಏನ್ ನಿನ್ನ್ ಹೆಸ್ರು?
ಇಲ್ಲ ಸಾರ್.. ನಾನಂಥವನಲ್ಲ.
ಹೆಸ್ರು?
ಭವದಾಸ್.
ಭವದಾಸಾ..ಹೇಳು ,ಏನು ಕೇಳಿಸ್ಕೊಂಡೆ?
ಹೊಸ ಗೆಸ್ಟುಗಳನ್ನು ರೂಮಿನೊಳಗೆ ಬಿಟ್ಟು
ವೆರಾಂಡದಲ್ಲಿ ಬರ್ತಿದ್ದಾಗ
ಆ ಹಾಡಿನ ಬಾಕಿ ಕೇಳಲು ಕಿವಿಗೊಟ್ಟೆ.
ಆದರೆ ಕೇಳಿದ್ದು:
ರಿಪೇರಿಯಾಗಿದ್ದ ಫ್ಯಾನ್
ಗಾಳಿ ಸಿಗದೆ ನರಳುತ್ತಿದ್ದದ್ದು,
ರಾತ್ರಿಯೆಂಬೊ ಹಕ್ಕಿಯ
ಕಡೆಗಾಲದ ಬಿಕ್ಕುವಿಕೆ.
ಹಾಡಿನ ದನಿ ಕಡಿಮೆಯಾಗುತ್ತಾ
ನಿಂತೇ ಹೋದದ್ದನ್ನು ಕೇಳಿ
ಅತ್ತುಬಿಟ್ಟೆ..
ಆ ಅಳು ನನ್ನ ಸಾವಿನ ಹಾಗೆ ಸಾರ್.







ಈಚೆ ಬಾ.
ನೀನೇನೊ ಮುಚ್ಚಿಡ್ತಿದ್ದೀಯ.
ಕವಿತೆಯ ಹಾಗೆ ಮಾತಾಡಿ
ಮರೆಮಾಚಬೇಡ.
ಕೀ ಹಾಕುವ ಕಿಂಡಿಯೊಳಗೆ
ಕಣ್ಣು ತೊರಿಸಿ ನೋಡಿಲ್ವಾ ನೀನು ?
ಇಲ್ಲ ಸಾರ್.
ನಿಜ ಹೇಳು-
ನಿನಗೂ ,ಆ ಹುಡುಗಿಗೂ ಸಂಬಂಧವಿರ್ಲಿಲ್ವಾ?
ಅದಕ್ಕಲ್ವಾ ಅವ್ರಿಬ್ರೂ ಸತ್ತಿದ್ದು?
ಹೇಳು, ಎಷ್ಟು ಮಂದಿಗೆ ನೀನವಳ ಬಿಟ್ಟುಕೊಟ್ಟೆ?
ಅವರಲ್ಲಿ ಯಾರು ಯಾರನ್ನು ಕೊಂದರು?
ನಿಜ ಹೇಳು,ನೀನು ಯಾರನ್ನು ಕೊಂದೆ?




ಅಯ್ಯೋ ಸಾರ್
ನನಗ್ಗೊತ್ತೇ ಇಲ್ಲ ಅವ್ರು.
ಸುಂಟಿಕೊಪ್ಪದವ್ನು ನಾನು,
ಮಡಿಕೇರಿಯ ಹತ್ರ.



ನಿಮ್ಮಲ್ಲಿ ಎಷ್ಟು ಜನ ಸ್ಟಾಫ್?
ನಲ್ವತ್ತು.
ಅಷ್ಟೇನಾ?
ಅಷ್ಟೆ.
ನೀವೇನಾ ಆಲಿಬಾಬಾ ಮತ್ತು ನಲ್ವತ್ತು ಕಳ್ಳರು ?
ಏನ್ ಸಾರ್?
ಇನ್ನೂ ಕೇಳಲು ಬಾಕಿಯಿದೆ-
ಹಾಡಿನ ಬಗ್ಗೆ ,ಸಾವಿನ ಬಗ್ಗೆ ..
ಪೋಸ್ಟ್ ಮಾರ್ಟಂ ರಿಪೋರ್ಟ್ ಬರಲಿ.




ಆತ್ಮಹತ್ಯೆ ಯಾವತ್ತೂ ನಡೆಯುತ್ತಾ ಇಲ್ಲಿ?
ಇದೇ ಮೊದ್ಲು ಸಾರ್.
ಇಲ್ಲಿಯವರೆಗೆ
ಎಲ್ಲೂ ಸಿಗದ
ಸಾವಿಲ್ಲದ ಲಾಡ್ಜಿನ ಸಾಸಿವೆ
ಇಲ್ಲೇ ಸಿಗುತ್ತಿತ್ತು ಸಾರ್.



ಏನು?
ಸಾರಿ ಸಾರ್.




ಸಂದರ್ಶಕರ ರಿಜಿಸ್ಟರ್ ಇದೆಯಾ?
ಇದೆ ಸಾರ್.
ರಾತ್ರಿ ಗೇಟಿಗೆ ಬೀಗ ಹಾಕ್ತೀರಾ?
ಹಾಕ್ತೇವೆ ಸಾರ್.
ಬೀಗ ಹಾಕಿದ್ರೂ
ವಿಐಪಿಗಳಿಗೆ ಬರಬಹುದಲ್ವೇ?
ರಿಜಿಸ್ಟರ್ನಲ್ಲಿ ಹೆಸರು ಬರೆಯಬಾರದಂಥವರಿಗೆ?




ಕಡೆಯ ಬಾರಿಗೆ
ಯಾರು ಆ ಕೋಣೆಗೆ ಹೋಗಿದ್ದು?
ಯಾವಾಗ?





ಸಾರ್..
ಮೂರನೇ ತಾರೀಕು ರಾತ್ರಿ;
ಮರೆತುಬಿಟ್ರಾ?!
ಫುಲ್ ಟೈಟ್ ಆಗಿದ್ರಿ ನೀವು.
ಮತ್ತೆ
ಇವತ್ತು ಬಾಗಿಲು ಮುರಿದು
ನಾನು ಮತ್ತು ಮ್ಯಾನೇಜರ್.




ಮತ್ತೆ..
ಎರಡನೇ ಸಲ ನೀವು!!
**
ಮಲಯಾಳಂ ಮೂಲ- ಕೆ.ಜಿ. ಶಂಕರಪಿಳ್ಳೆ



ಕನ್ನಡಕ್ಕೆ - ಕಾಜೂರು ಸತೀಶ್

No comments:

Post a Comment