ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, November 4, 2018

ಗಾಯದ ಹೂವುಗಳು ಕುರಿತು ಡಾ. ಮಹಾಂತೇಶ ಪಾಟೀಲ

ಕೊಡಗಿನ ಕುಶಲ ಕವಿ- ಕಾಜೂರು ಸತೀಶ್. ಇದು ಅವರ ಮೊದಲ ಸಂಕಲನವಾದರೂ, ಹೂವು ಅರಳುವ ಸಹಜಗಾರಿಕೆ, ಇಲ್ಲಿನ ಕವಿತೆಗಳಲ್ಲಿದೆ. ವ್ಯವಸ್ಥೆಯ ಬಗೆಗೆ ವಿಷಾದವನ್ನೂ ವ್ಯಕ್ತಪಡಿಸುವಲ್ಲಿಯೂ ಬದುಕಿನ ಕುರಿತು ಒಲವಿದೆ. ಈ ಗಾಯದ ಹೂಗಳಿಗೆ ಕವಿತ್ವದ ಗಂಧ ಮೆತ್ತಿಕೊಂಡಿದೆ.

ಕೊಡಗಿನ ಕಾವೇರಿ ನದಿ, ಈ ಸಂಕಲನದಲ್ಲಿ ನೇರವಾಗಿ ಕಾಣಿಸಿಕೊಳ್ಳದಿದ್ದರೂ, ಆ ನದಿಯ ಲವಣಗಳನ್ನುಂಡು ಗಾಯದ ಹೂಗಳ ಪರಿಮಳ ಓದುಗನ ಮನಸ್ಸನ್ನು ಆವರಿಸುತ್ತದೆ.

*ಚಪ್ಪಲಿಗಳು, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ಬೇಲಿ, ನಿನ್ನ ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಗಾಯದ ಹೂವುಗಳು, ಯಾರದಿದು?, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ- ಕವಿತೆಗಳು 'ಇಜಮ್' ಗಳ ಅಹಮ್ಮಿಕೆಯನ್ನು ಮೀರಿ, ಬದುಕನ್ನು ಎದುರುಗೊಳ್ಳುತ್ತವೆ.

'ಓದುವ ದೇವದಾಸರಿಗೆ, ರಿಂಗಣಿಸುವ ಕವಿತೆಯೊಂದು ಹೊಸ ಗೆಳತಿಯಂತೆ ತೋರಿದ್ದು' - ಕಾಜೂರ ಸತೀಶ್ ರ ' ಗಾಯದ ಹೂವುಗಳು' ಕವನ ಸಂಕಲನ. ನನ್ನ ಗಾಯಗಳನ್ನು ಮುಟ್ಟಿ ನೆನಪಿಸಿಕೊಳ್ಳಲು ಇಲ್ಲಿನ ಕವಿತೆಗಳು ಕಾರಣವಾದುದರಿಂದ, ಈ ಹೂಗಳಿಗೆ, ಈ ಕವಿಗೆ ಆಭಾರಿಯಾಗಿರುವೆ.
*

ಡಾ. ಮಹಾಂತೇಶ ಪಾಟೀಲ

Saturday, September 8, 2018

ಛಾಯೆ

ಮೊದಲ ಸಲ ಮನೆಗೆ ಬಂದ ಗೆಳೆಯ
ಗೋಡೆಗೆ ನೇತುಹಾಕಿದ
ನನ್ನ ಹಳೆಯ ಭಾವಚಿತ್ರ ನೋಡಿ ಕೇಳಿದ :
‘ನಿನ್ನ ತಮ್ಮನಲ್ವಾ?’

“ಹೌದು!”

“ಅಲ್ಪ-ಸ್ವಲ್ಪ ನಿನ್ನದೇ ಮುಖ,
ಅಡ್ಡಾದಿಡ್ಡಿ ಸರಿದ ನಿನ್ನಂಥದ್ದೇ ಕೂದಲು,
ನಿನಗಿಂತಲೂ ಸವಿನೆನಪುಗಳ ಹೊತ್ತ ಮುಖಭಾವ,
ನಿನ್ನಷ್ಟು ಗುಳಿಬೀಳದ ಕಣ್ಣುಗಳು ,
ನಿನಗಿಂತಲೂ ಚೆಲುವ…”

ಅವನ ಆತ್ಮವಿಶ್ವಾಸ ಹೆಚ್ಚುತ್ತಿದ್ದಂತೆ
ಮಾತಿಗೆ ವೇಗ ಹೆಚ್ಚಿತು
ಹೋಲಿಕೆಯ ಕುರಿತ ತರ್ಕಕ್ಕೆ ದೃಢತೆ ಹೆಚ್ಚಿತು
ಆ ಏಕಾಂತದಲ್ಲೂ
ಅವನಿಗೆ ಸುಮ್ಮನಿರಲಾಗಲಿಲ್ಲ.


ಮತ್ತೆ ಭಾವಚಿತ್ರವನ್ನು ದಿಟ್ಟಿಸಿ
ದನಿ ಕುಗ್ಗಿಸಿ ಕೇಳಿದ:
“ಇವನು ಬದುಕಿಲ್ವಾ?”

“ಇಲ್ಲ
ಬಹುತೇಕ ಇಲ್ಲ!”



ಮಲಯಾಳಂ ಮೂಲ-
ಕಲ್ಪೆಟ್ಟ ನಾರಾಯಣನ್

ಕನ್ನಡಕ್ಕೆ - 
ಕಾಜೂರು ಸತೀಶ್

Wednesday, August 15, 2018

ಒಂಟಿತನ ಮತ್ತು ಸೃಜನಶೀಲತೆಯ ಸಾವು

ಮೊನ್ನೆ ಹೀಗೇ ದಿನವಿಡೀ ಕಚೇರಿಯಲ್ಲಿ ಕುಳಿತು ಲೆಕ್ಕಾಚಾರಗಳ ಜೊತೆ ಗಂಟುಮುಖ ಮಾಡಿಕೊಂಡು ಕುಳಿತಿದ್ದೆ. ತಾಲೂಕು ಕೇಂದ್ರ; ಸಂತೆಯ ದಿನ; ಎಷ್ಟೊಂದು ಜನರು! ನನಗೋ- ವಿಪರೀತ ಒಂಟಿತನ. ಹತ್ತನ್ನೊಂದು ವರ್ಷ ಒಬ್ಬನೇ ಇದ್ದರೂ ಕಾಡದ ಒಂಟಿತನವದು.

ಹಾಗೆ ನೋಡಿದರೆ, ಕಳೆದ ಹನ್ನೊಂದು ವರ್ಷ ನನ್ನನ್ನೆಂದೂ ಒಂಟಿತನ ಕಾಡಿಸಲಿಲ್ಲ. ದಿನಗಳು ಯಾಕಿಷ್ಟು ಬೇಗ ಸರಿದು ಹೋಗುತ್ತಿವೆ ಎಂದು ವ್ಯಥೆಪಡುತ್ತಿದ್ದೆ! ನನ್ನೊಳಗೆ ನೂರಾರು ಮಂದಿ ಇರುತ್ತಿದ್ದರು. ಒಬ್ಬ ಸೃಜನಶೀಲವಾಗಿ ಬಡವಾದರೆ ಮತ್ತೊಬ್ಬ ಜೀವಂತವಾಗುತ್ತಿದ್ದ. ಒಂದು ಕೂಡುಕುಟುಂಬವದು! ಅವರೆಲ್ಲರೂ ಬಡಕಲಾದಾಗ ಹೊರಗಿನ ಗೆಳೆಯರ ಜೊತೆ ಪೆದ್ದುಪೆದ್ದಾಗಿ ಎಸ್ಸೆಮ್ಮೆಸ್ಸುಗಳಲ್ಲಿ ಬದುಕಿಕೊಳ್ಳುತ್ತಿದ್ದೆ. 

ಮೊನ್ನೆ ಕಾಡಿದ ಏಕಾಂತ ನನ್ನನ್ನು ದಿಗಿಲಿಗೆ ಹಚ್ಚಿದೆ. ಅದು ನನ್ನ ಸೃಜನಶೀಲತೆಯ ಸೋಲು;ಸಾವು!  ಅಂಕಿ-ಸಂಖ್ಯೆಯ ಬದುಕು, ಮುಖವಾಡ ಧರಿಸಿದ ಲೋಕ ಒಳಗನ್ನು ಆಕ್ರಮಿಸಿಬಿಡುತ್ತದೆ. ನಿಜಕ್ಕೂ ಮನುಷ್ಯ ಒಂಟಿಯಾಗುವುದು ಆಗ. ಅದು ಸಂತೆಯಲ್ಲಾದರೂ ಸರಿ!
*

-ಕಾಜೂರು ಸತೀಶ್ 

Tuesday, August 14, 2018

ಕೋರಿಕೆ

ಕಳೆದುಹೋದ ನನ್ನ ಪರ್ಸಿನಲ್ಲಿ
'ನಾನು' ಎಂದರೆ ನನ್ನ ಹೆಸರು
ಅದ ಹೊತ್ತ ಗುರುತಿನ ಚೀಟಿ

ಬೇರೆ ದೇಶಗಳ
ಬಗೆಬಗೆಯ ಕರೆನ್ಸಿ ನೋಟುಗಳು

ಮದುವೆಯಾಗಿ ಹೋದ
ನನ್ನ ಪ್ರೇಯಸಿಯರ ಬಣ್ಣದ ಭಾವಚಿತ್ರ

ಏನೇನೋ ತುಂಬಿಕೊಂಡು
ಉಬ್ಬಿಕೊಂಡ ವಿಸಿಟಿಂಗ್ ಕಾರ್ಡು

ಮಾವೋತ್ಸೆ ತುಂಗನ ಚಿತ್ರವಿರುವ
ಎರಡು ರೂ. ಅಂಚೆಚೀಟಿ

ಮಾವಿನ ಮರಕ್ಕೆ ನೇಣುಬಿಗಿದು ಸತ್ತ
ಸಹೋದರಿಯ ಕಿವಿಯೋಲೆ

ಅಸ್ತಮಾದ ಮಾತ್ರೆ
ರಕ್ತಪರೀಕ್ಷೆಯ ನೆಗೆಟಿವ್ ರಿಪೋರ್ಟ್

ಇವಿಷ್ಟೇ ಆಗಿದ್ದಿದ್ದರೆ
ತೊಡೆಗಳ ನಡುವೆ ಕೈಯಿಟ್ಟು ಗೊರಕೆ ಹೊಡೆಯುತ್ತಿದ್ದೆ

ಆದರೆ
ಪ್ರಿಯ ಸಹೋದರಾ
ಕಪ್ಪು ಶಾಯಿಯ ನನ್ನ ಕೆಂಪು ಕವಿತೆಯನ್ನು
ದಯವಿಟ್ಟು ಓದಿ ಹಿಂತಿರುಗಿಸಿಬಿಡು.
*
ಮಲಯಾಳಂ ಮೂಲ- ಪ್ರಮೋದ್ ಕೆ.ಎಂ


ಕನ್ನಡಕ್ಕೆ - ಕಾಜೂರು ಸತೀಶ್


ಪರಿಚಯ : ಪ್ರಮೋದ್ ಕೆ.ಎಂ. (1982)

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕಡೂರು ಇವರ ಹುಟ್ಟೂರು. ರಸಾಯನಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್(ದಕ್ಷಿಣ ಕೊರಿಯಾ) ಪಡೆದಿರುವ ಇವರು ಈಗ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಪ್ರಮಾದಂ’ ಬ್ಲಾಗ್ ಬರವಣಿಗೆಯ ಮೂಲಕ ಹೊಸ ಬಗೆಯ ಕವಿತೆಗಳಿಗೆ ಚಾಲನೆ ನೀಡಿ ಮನೆಮಾತಾದ ಪ್ರಮೋದ್ ಅವರ ಮೊದಲ ಕವನ ಸಂಕಲನ ‘ಅಡಿಯಂದಿರಾವಸ್ಥ ನಷ್ಟಪ್ಪೆಡುತ್ತಿಯ ಆರು ವರ್ಷಂಗಳ್’(2009). ಈ ಸಂಕಲನವು ವಿ.ಟಿ. ಕುಮಾರನ್ ಮಾಸ್ಟರ್ ಸ್ಮಾರಕ ಪ್ರಶಸ್ತಿ, ನವಮಲಯಾಳಿ ಯುವ ಪ್ರಶಸ್ತಿ ಮತ್ತಿತರ ಗೌರವಗಳನ್ನು ಪಡೆದಿದೆ.

Monday, August 13, 2018

ಅನಿಸುತಿದೆ

ಅಮ್ಮನಮ್ಮ ‘ಅಮ್ಮಮ್ಮ’ ಹೋಗೇಬಿಟ್ಳು .

ಎಷ್ಟೋ ಕಾಲ ಅಪ್ಕೊಂಡಿದ್ರೂನೂ
ಇನ್ನೂ ಸ್ವಲ್ಪ ಹೊತ್ತು ಜೊತೆಗಿರ್ಬೇಕಿತ್ತು ಅನ್ನಿಸ್ತಿದೆ
ದೂರ ಪ್ರಯಾಣಕ್ಕೆ ಅಂತ ನಾನು ಹೊರಟು ನಿಂತಾಗ್ಲೆಲ್ಲ
ಅವಳ ಕಣ್ಣಿಂದ ತಪ್ಪಿಸಿಕೊಳ್ಳದೇ ಉಳಿದುಬಿಡುವ
ದುಂಡುಹನಿಗಳ ಹಾಗೆ .

ಎಷ್ಟೋ ಕಾಲ ಮಾತಾಡಿದ್ರೂನೂ
ಇನ್ನೂ ಸ್ವಲ್ಪ ಹೊತ್ತು ಮಾತಾಡ್ಬೇಕಿತ್ತು ಅನ್ನಿಸ್ತಿದೆ
ಮನೆ, ಅಂಗಳ, ಸುತ್ತಮುತ್ತೆಲ್ಲ ಗುಡಿಸಿಯಾದ್ಮೇಲೆ
ಗುಡಿಸಿದ್ದಲ್ಲೇ ಮತ್ತೆ ಮತ್ತೆ ಗುಡಿಸ್ಕೊಂಡು ಬರೋ ಹಾಗೆ .

ಎಷ್ಟೋ ಸಲ ಮುತ್ತು ಕೊಟ್ಟಿದ್ರೂನೂ
ಮತ್ತೊಂದ್ಸಲ ಸಿಹಿಮುತ್ತು ಕೊಡ್ಬೇಕಿತ್ತೂಂತ ಅನ್ನಿಸ್ತಿದೆ
‘ಸಾಕೂ .. ಸಾಕೂ ...’ ಅಂದ್ರೂ ಅಮ್ಮಮ್ಮ ಬಡಿಸಿಕೊಡೋ
ಒಂದು ಚಮಚ ಸಿಹಿಸಿಹಿ ಪಾಯಸದ ಹಾಗೆ .

ಇನ್ನೂ ಸ್ವಲ್ಪ ಹೊತ್ತು ಜೊತೆಗಿದ್ಕೊಂಡು
ಅಮ್ಮಮ್ಮನ ನೆನಪುಗಳ್ನೆಲ್ಲ ಹೀರಬಹುದಿತ್ತೂಂತ ಅನ್ನಿಸ್ತಿದೆ
ಎಷ್ಟೋ ಹೊತ್ತು ನೀರಲ್ಲಿ ನೆನೆಸಿಟ್ಟಾಗ ಮಾತ್ರ
ಕತ್ತರಿಸ್ಲಿಕ್ಕೆ ಸಾಧ್ಯವಾಗೋ ಅವಳ ಉಗುರುಗಳ ಹಾಗೆ .

ಕೈಬೆರಳಿಟ್ಟು ಪಿಚಕ್ಕಂತ ಅವಳು ಉಗುಳೋ ಶೈಲಿ
‘ಜಟ್ಟ್ ಜಟ್ಟ್ ’ ಅಂತ ಅಡಿಕೆ ಜಜ್ಜೋ ಕಲ್ಲು
ನಿಂತೇ ನಿಂತ ಒನಕೆಗಳ ಹಾಗೆ
ಅಮ್ಮಮ್ಮನಿಲ್ಲ ದ ಮನೆಯಲ್ಲಿ
ಉಳಿದವ್ರ್ಯಾರೂ ಬಳಸದ ಮಾತು ,
ಬೈಗುಳ, ತುಂಟತನ ...
ಎಲ್ಲಾನೂ ಮತ್ತೆ ಕೇಳ್ಬೇಕೂಂತ ಅನ್ನಿಸ್ತಿದೆ
ಮತ್ತೆ ಮತ್ತೆ ನೋಡ್ಬೇಕು ಅಂತ್ಲೂ .

ಅಮ್ಮಮ್ಮನ ಕುರಿತು ಎಷ್ಟು ಬರ್ದಿದ್ರೂನೂ
ಮತ್ತೊಂದು ಕವಿತೆನಾದ್ರೂ ಬರೀಬಹುದಿತ್ತು ಅನ್ನಿಸ್ತಿದೆ
ತೀರಿಹೋದವ್ರ ಬಗ್ಗೆ ಅವ್ಳು ಹೇಳ್ತಿದ್ದ ಕತೆಗಳ ಹಾಗೆ .
*

ಮಲಯಾಳಂ ಮೂಲ - ಪ್ರಮೋದ್ ಕೆ.ಎಂ


ಕನ್ನಡಕ್ಕೆ - ಕಾಜೂರು ಸತೀಶ್

Thursday, August 2, 2018

ಅಂತರ್ಜಾಲ ಬಳಕೆ: ಓದು ಮತ್ತು ಬರಹದ ಸಾಧ್ಯತೆಗಳು

ಈಚೆಗೆ ನಡೆದ ಸಾಹಿತ್ಯ ಸಂವಾದವೊಂದರಲ್ಲಿ ‘ನಮಗೇಕೆ ಇಂದು ನಮ್ಮ ಪೂರ್ವಿಕರಂತೆ ಮಹಾಕಾವ್ಯಗಳನ್ನೂ, ದಟ್ಟ ಜೀವನಾನುಭವವುಳ್ಳ ಕಾದಂಬರಿಗಳನ್ನೂ ಬರೆಯಲಾಗುತ್ತಿಲ್ಲ?’ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ‘ಇಂದಿನ ಒತ್ತಡದ ಸನ್ನಿವೇಶದಲ್ಲಿ ನಾವು ಬರೆಯುತ್ತಿರುವುದೇ ಮಹತ್ಕಾರ್ಯ. ನಮಗೆ ಆಗಿನ ಸಮಚಿತ್ತತೆ ಇಲ್ಲ, ಅಂತಹ ಸ್ಥಿತಿಯ ನಿರ್ಮಾಣವೂ ಇಂದು ಅಸಾಧ್ಯ’, ತಣ್ಣಗೆ ಉತ್ತರಿಸಿದ್ದರು ತರುಣ ಪೀಳಿಗೆಯ ಲೇಖಕರು.

ಇಂದು ಅಂತರ್ಜಾಲ ಸರ್ವವ್ಯಾಪಿಯಾಗಿ ಅಭಿವ್ಯಕ್ತಿಯ ಸಾಧ್ಯತೆಗಳು ವ್ಯಾಪಕವಾಗಿವೆ. ನಮ್ಮ ಅಭಿವ್ಯಕ್ತಿಗೆ ದೊಂದು ಒಳ್ಳೆಯ ಮಾಧ್ಯಮ. ಆದರೆ, ಪ್ರತಿಯೊಬ್ಬರೂ ಸ್ವಘೋಷಿತ ಕವಿಗಳಾಗುವ/ ವರದಿಗಾರರಾಗುವ ಅವಕಾಶವನ್ನು ಅದು ಕಲ್ಪಿಸಿದೆ. ಒಂದು ಕವಿತೆ/ವರದಿಯ ‘ಹೆರಿಗೆ’ ನಡೆಯುತ್ತಿರುವಾಗಲೇ ನಡುನಡುವೆ ನುಸುಳುವ ನೋಟಿಫಿಕೇಷನ್‍ಗಳು ಈ ಕಾರ್ಯವು ಸುಸೂತ್ರವಾಗಿ ನಡೆಯುವುದನ್ನು ತಡೆಯುತ್ತದೆ. ಇಂತಹ ಧಾವಂತದ, ಧ್ಯಾನ ತಪ್ಪಿದ ಅಭಿವ್ಯಕ್ತಿ ಕ್ರಮ ಮತ್ತು ಅವುಗಳ ಸ್ವೀಕರಣದ ನಡುವೆ ನಾವಿದ್ದೇವೆ.

‘ಓದು’ ಮತ್ತು ‘ಬರಹ’ ತಾಳ್ಮೆಯನ್ನು ಬೇಡುವ ಪ್ರಕ್ರಿಯೆ. ಅದೊಂದು ಧ್ಯಾನ. ಏಕೆಂದರೆ ಧ್ಯಾನಸ್ಥವಾಗಿ ಹುಟ್ಟುವ ಬರಹಕ್ಕೆ ಇಳಿಯುವುದಕ್ಕೂ ಓದುಗನಿಗೆ ಧ್ಯಾನಸ್ಥ ಮನಸ್ಥಿತಿ ಬೇಕಾಗುತ್ತದೆ. ಬರಹಗಾರರ ಮನೋವಲಯದೊಳಕ್ಕೆ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ. ಅಂಥದ್ದರಲ್ಲಿ ಆನ್‍ಲೈನ್‍ನಲ್ಲಿದ್ದುಕೊಂಡೇ ಓದುತ್ತಿದ್ದೇವೆ ಮತ್ತು ಬರೆಯುತ್ತಿದ್ದೇವೆ ಎಂಬ ತರುಣ ಪೀಳಿಗೆಯ ಮಾತೇ ವಿಚಿತ್ರವೆನಿಸುತ್ತದೆ. ಈ ಹೊತ್ತಿನಲ್ಲೂ ತರುಣರು ಓದು ಮತ್ತು ಬರಹಕ್ಕೆ ಚಾಚಿಕೊಳ್ಳುತ್ತಿದ್ದಾರಲ್ಲಾ ಎಂಬುದು ಖುಷಿ ಕೊಡುವ ಸಂಗತಿಯಾದರೂ, ಸದ್ಯ ಅವು ಯಾವ ನೆಲೆಯಲ್ಲಿ ಏರ್ಪಡುತ್ತಿವೆ ಎನ್ನುವುದೂ ಇದರಿಂದ ಸ್ಪಷ್ಟವಾಗುತ್ತಿದೆ.

ಬೆಳಿಗ್ಗೆ ಎದ್ದಾಕ್ಷಣ ನಾವು ಅಂತರ್ಜಾಲ ಪತ್ರಿಕೆಗಳ ಮೊರೆಹೋಗುತ್ತೇವೆ. ಅದು ಕೇವಲ ಮುಖ್ಯಾಂಶಗಳ ಓದಿಗಷ್ಟೇ ಸೀಮಿತವಾಗಿರುತ್ತದೆ. ಗಂಭೀರವಾದ ಲೇಖನಗಳನ್ನು ಅನುಭವಿಸಲು ಒಂದೋ ಆಫ್‍ಲೈನಿನಲ್ಲಿ ಅಥವಾ ಪತ್ರಿಕೆಯನ್ನೇ ಕೊಂಡು ಓದಬೇಕಾಗುತ್ತದೆ. ಎಷ್ಟೆಷ್ಟೋ ಮಹತ್ವದ ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿರುವುದು ಒಳ್ಳೆಯ ಬೆಳವಣಿಗೆಯಾದರೂ, ಪುಸ್ತಕವನ್ನು ಕೈಗೆತ್ತಿಕೊಂಡು ಓದುವಾಗಿನ ಸುಖ, ರಸಾಸ್ವಾದ ಅಲ್ಲಿ ಸಾಧ್ಯವಾಗುವುದಿಲ್ಲ.

ಸಾಹಿತ್ಯ ಕೃತಿಗಳ ಪ್ರಕಟಣೆ ಮತ್ತು ಓದು ಇವತ್ತು ವಿಚಿತ್ರ ಸ್ಥಿತಿಯನ್ನು ತಲುಪಿಬಿಟ್ಟಿದೆ. ಬರೆಯುವವರೆಲ್ಲರೂ ಪುಸ್ತಕ ಪ್ರಕಟಣೆಯತ್ತ ಹೊರಳುತ್ತಿದ್ದಾರೆ. ಅದನ್ನು ಓದುವವರಾದರೂ ಯಾರು? ‘ನಾನೂ ಬರೆಯುತ್ತೇನೆ ನೀನೂ ಬರೆಯುತ್ತೀಯ ನಾವಿಬ್ಬರೂ ಓದಿಕೊಳ್ಳೋಣ’ ಎಂದು ಪರಸ್ಪರ ಹಂಚಿಕೊಂಡು ಓದಿಕೊಳ್ಳುವಲ್ಲಿಗೇ ಇದು ನಿಂತುಬಿಡುತ್ತಿದೆಯೋ ಏನೋ. ಅದರಲ್ಲೂ ಸುಲಭಕ್ಕೆ ಸಿಗುವ ಪ್ರಕಾರ ಕಾವ್ಯ. ಹೀಗಾಗಿಯೇ ಕವಿತೆಗಳನ್ನು ಪ್ರಕಟಿಸಲು ಪ್ರಕಾಶಕರು ಹಿಂದೇಟು ಹಾಕುತ್ತಿರುವುದು.

ಅಂತರ್ಜಾಲವು ಅನೇಕ ಗುಂಪುಗಳಲ್ಲಿ ಜನರನ್ನು ಸಂಘಟಿಸುತ್ತಿದೆ(ಒಡೆಯತ್ತಲೂ ಇದೆ!). ಆ ಮೂಲಕ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಅಂತರ್ಜಾಲವು ನಮ್ಮ ನಮ್ಮ ಮನೆಭಾಷೆಗಳಲ್ಲಿ ಸಾಹಿತ್ಯವನ್ನು ಬರೆಯುವ ಮತ್ತು ಓದುವ ಅವಕಾಶವನ್ನು ಹೆಚ್ಚು ಹೆಚ್ಚು ಕರುಣಿಸಿದೆ. ಮೊಬೈಲ್ ಫೋನ್ ಈ ನಿಟ್ಟಿನಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಡುತ್ತಿದೆ. ಪುಸ್ತಕ ಪರಾಮರ್ಶೆಗೂ ಇರುವ ದಾರಿಗಳನ್ನು ಅತ್ಯಂತ ಸುಲಭವಾಗಿಸಿದೆ. ಗ್ರಂಥಾಲಯಕ್ಕೆ ಭೇಟಿ ಕೊಡುತ್ತಿರುವವರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. ಗ್ರಂಥಾಲಯವೂ ‘ಡಿಜಟಲೀಕರಣ’ಕ್ಕೊಳಪಡುವ ಹಂತದಲ್ಲಿದೆ.

ಸಾಹಿತ್ಯಿಕ ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ‘ಲೈಕು’ಗಳು ಭ್ರಮೆಗಳನ್ನು ಬಿತ್ತುತ್ತಿವೆ. ಅದು ಕಳಪೆ ಸಾಹಿತ್ಯದ ಹುಟ್ಟಿಗೂ ಕಾರಣವಾಗುತ್ತಿದೆ. ‘ಬ್ಲಾಗ್’ ಬರವಣಿಗೆಯ ಕಾಲದಲ್ಲಿ ಸಾಹಿತ್ಯದ ಗಂಭೀರ ಓದು ಮತ್ತು ಬರವಣಿಗೆ ಸಾಧ್ಯವಾಗಿತ್ತು. ಕ್ರಮೇಣ ಈ ವ್ಯವಧಾನ ಕಡಿಮೆಯಾಗಿ ಫೇಸ್ಬುಕ್, ವಾಟ್ಸಾಪ್‍ಗಳಂಥ ಜಾಲತಾಣಗಳ ಕಡೆಗೆ ಆಸಕ್ತಿ ಹೊರಳಿತು. ಸದ್ಯದ ಮಟ್ಟಿಗೆ ಅದು ‘ಓದುವಿಕೆ’ಯಿಂದ ‘ನೋಡುವಿಕೆ’ಯ ಕಡೆಗೆ ಜಿಗಿಯುತ್ತಿದೆ. ಚಿತ್ರ ಮತ್ತು ವೀಡಿಯೋ ಕ್ಲಿಪ್‍ಗಳೇ ಅಕ್ಷರಗಳ ಕತ್ತು ಹಿಸುಕಿ ಮೇಲ್ಪಂಕ್ತಿಗೆ ಬರಲಾರಂಭಿಸಿವೆ.

ನಾವೆಲ್ಲಾ ಅಂತರ್ಜಾಲಕ್ಕೆ ದಾಸರಾಗಿಬಿಟ್ಟಿದ್ದೇವೆ. ದಿನಕ್ಕೆ ಒಂದೆರಡು ಗಂಟೆಗಳ ಏಕಾಂತವಾದರೂ ನಮಗೆ ಅಗತ್ಯವಾಗಿದೆ. ಅಂತಹ ಸ್ಥಿತಿಯಲ್ಲಿಯೇ ನಾವು ಓದು, ಬರಹ ಮುಂತಾದ ಸೃಜನಶೀಲ ಚಟುವಟಿಕೆಗಳಿಗೆ ಒಡ್ಡಿಕೊಳ್ಳಬೇಕಿದೆ. ಆ ಮೂಲಕ ನಮ್ಮತನವನ್ನು ಕಂಡುಕೊಳ್ಳಬೇಕಿದೆ.
*

ಕಾಜೂರು ಸತೀಶ್

Thursday, July 19, 2018

ನಷ್ಟ

ಮೊದಲ ನೋಟದಲ್ಲಿ
ಅಥವಾ
ಪ್ರೀತಿಯ ಮೊದಲ ಪರ್ವದಲ್ಲಿ
ನನಗೆ ನನ್ನ ಕಣ್ಣುಗಳು ನಷ್ಟವಾದವು.

ಎರಡನೇ ಭೇಟಿಯಲ್ಲಿ
ಅಥವಾ
ಪ್ರೀತಿಯ ಮಧ್ಯ ಪರ್ವದಲ್ಲಿ
ನನಗೆ ನನ್ನ ಹೃದಯ ನಷ್ಟವಾಯಿತು.

ಮೂರನೆಯ ಸಮಾಗಮದಲ್ಲಿ
ಅಥವಾ
ಪ್ರೀತಿಯ ಮೂರನೇ ಪರ್ವದಲ್ಲಿ
ನನಗೆ ನಾನೇ ನಷ್ಟವಾದೆ.

ನಾಲ್ಕನೆಯ ಭೇಟಿಯ ಮೊದಲು
ಅಥವಾ
ಪ್ರೀತಿಯ ಅಂತ್ಯ ಪರ್ವದ ಮೊದಲು
ಗೇರುಮರದ ಕೊಂಬೆಯಲ್ಲಿ
ನಾನು ನೇತಾಡಿಕೊಂಡಿದ್ದೆ.
*

ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ - ಕಾಜೂರು ಸತೀಶ್

ഉദ്യാനപാലക൯

അഞ്ചാറ് പൂ പറിച്ചതിനു ശേഷം
ഇന്നു മകളുടെ ജന്മദിനം എന്നോർത്തു ഉദ്യാനപാലക൯.

സ്നേഹംകൊണ്ടു ആറാമത്തെ പൂ പറിച്ച് മകള്‍ക്കെന്നു കീശയിലിട്ടു

പിറ്റേദിവസം തുണി അലക്കും മുമ്പ് കീശയിൽ തപ്പുമ്പോൾ
അവള്ക്കത് കിട്ടി.
*

കന്നഡ കവിത - ജയന്ത് കായ്കിണി

പരിഭാഷ - കാജൂരു സതീശ്

ನೀರಿನಿಂದೆದ್ದದ್ದು

ಬಿರುಸು ಮಳೆ
ರಭಸ ಪ್ರವಾಹದಿಂದೆದ್ದ ಒಂದು ಹುಳು
ಗಡಗಡ ಚಳಿಯ ತಾಳಲಾರದೆ
ಕರಿಮೆಣಸು ಬಳ್ಳಿಯ ಮೇಲೆ ಹತ್ತಿ ಮರೆಯಲ್ಲಿ ಕುಳಿತಿದೆ.

ಅಲುಗಾಡುತ್ತಿಲ್ಲ ಅದು.

ಮೆಣಸುಬಳ್ಳಿಯ ಸುತ್ತಿದ ಮರಕ್ಕೀಗ
ಗಡಗಡಗಡ ಚಳಿ!
*

ಮಲಯಾಳಂ ಮೂಲ- ಎಂ.ಪಿ.ಪ್ರತೀಷ್

ಕನ್ನಡಕ್ಕೆ - ಕಾಜೂರು ಸತೀಶ್

Friday, July 13, 2018

ಯಾನ ಮುಗಿಸಿದ ಮಂಜುನಾಥ

ಆಗಷ್ಟೇ  ಫೇಸ್ಬುಕ್ಕಿಗೆ ಮುಖ ತೋರಿಸಿದ್ದೆ. ಎಲ್ಲೆಲ್ಲೋ ಹರಿದು ಹಂಚಿಹೋದವರೆಲ್ಲ ಒಟ್ಟಿಗೆ ಠಿಕಾಣಿ ಹೂಡತೊಡಗಿದ್ದ ಕಾಲ.

ಒಂದು ಹೊಸ ಹೆಸರಿನ 'ರಿಕ್ವೆಸ್ಟ್' ಬಂದಿತ್ತು. 'ಯಾರು?' ಎಂದು ಯೋಚಿಸುತ್ತಿರುವಾಗಲೇ ಇನ್ಬಾಕ್ಸಿಗೆ ಒಂದು ಸಂದೇಶ!

ಎಂದೋ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಕವಿತೆಯನ್ನು ನೆನಪಿಟ್ಟುಕೊಂಡು ಬದುಕುತ್ತಿದ್ದವರೊಬ್ಬರು ಸಿಕ್ಕರು.

ಕುತೂಹಲದಿಂದ ಅವರ ಕವಿತೆಗಳನ್ನು ಓದಿದೆ. ಕವಿತೆಗಳ ಮೇಲಿರುವ ನನ್ನ ನಕಾರಾತ್ಮಕ ಧೋರಣೆಯಿಂದಲೋ ಏನೋ, ಅಷ್ಟೇನೂ ಕಾಡಲಿಲ್ಲ.

ಅವರ ಮೊದಲ ಕಥಾಸಂಕಲನ 'ಮುಗಿಲ ಮಾಯೆಯ ಕರುಣೆ' ನನ್ನ ಕೈಸೇರಿತು. ಅವರ ಕಥಾಪ್ರತಿಭೆಯ ಎದುರು ಮೂಕನಾದೆ; ರೋಮಾಂಚನಗೊಂಡೆ!

ಸ್ವಲ್ಪ ದಿನಗಳ ನಂತರ ಕೇಂದ್ರವೇ ಇಲ್ಲದ ನನ್ನ ಕತೆಯೊಂದನ್ನು ಕಳಿಸಿದ್ದೆ. ಕತೆ ಇಷ್ಟವಾಗದ್ದನ್ನು ತಿಳಿಸಿದರು. ಅವರ ಪ್ರಾಮಾಣಿಕತೆಯನ್ನು ತುಂಬಾ ಮೆಚ್ಚಿಕೊಂಡೆ.

ಮೊನ್ನೆ ಮೊನ್ನೆ ಬದುಕನ್ನು ಬದುಕಲಾರದೆ ಹೋಗಿಬಿಟ್ಟರು. ಒಂದು ಸೂಚನೆಯನ್ನು ಕೂಡ ನೀಡಲಿಲ್ಲ. ಕರುಣೆಯಿಲ್ಲದ ಬದುಕು ಅವರನ್ನು ನುಂಗಿ ಗಟಗಟ ನೀರು ಕುಡಿದಿತ್ತು!

ಪ್ರಿಯ ಮಂಜುನಾಥ ಪಿ. ಬೆಳಗಾವಿ ( Manjunath P Belagavi), ಹೀಗಾಗಬಾರದಿತ್ತು!

Sunday, July 1, 2018

ಒಂದು ಕವಿತೆಯ ಚರಮಗೀತೆ

ನನ್ನ ಕವಿತೆ ತೀರಿಕೊಂಡ ದಿನ
ಮಳೆ, ಕಣ್ಣು, ನದಿ, ಹೆಂಚು, ಮರ...
ಮತ್ತ್ಯಾರನ್ನೂ ಅಳಲು ಬಿಡಲಿಲ್ಲ 
ಶಬ್ದಕೋಶದ ಅವರ ಪದಗಳ ರಾಶಿ ಹಾಕಿ
ಮೈಕುಸದ್ದನ್ನು ಸುರಿದು ಬೆಂಕಿಹಚ್ಚಿದೆ


ನನ್ನ ಪ್ರೀತಿಯ ಮಳೆ ತೊಟ್ಟಿಕ್ಕತೊಡಗಿದೆ-
ಎಷ್ಟು ಅದುಮಿಟ್ಟುಕೊಂಡರೂ ಗಾಳಿಯ ಕಣ್ಣುಗಳಿಂದ.
ಇನ್ನೂ ಅರ್ಧ ಬೆಂದಿದ್ದಷ್ಟೆ
ಹೊಗೆಯಾಡುತ್ತಿದೆ
ತಲೆ ಸಿಡಿಯಿತೋ ಏನೋ
ಹಾಗೇ ಬಿಟ್ಟರೆ ತೋಳಗಳು ಎಳೆದೊಯ್ಯುತ್ತವೆ


ನಿದ್ದೆಗೆಟ್ಟು ಕಾಯುತ್ತಿದ್ದೇನೆ.

ಈ ತಡರಾತ್ರಿಯಲ್ಲಿ ಕತ್ತಲಿನ ಒಳಗೆ ಹಗಲು ನುಸುಳದ ಹಾಗೆ
ಯಾವುದೋ ನಾಯಿಯೊಂದು ಬೊಗಳುತ್ತಾ ಕಾಯುತ್ತಿದೆ
ವಿದ್ಯುತ್ತು - ಕಂಬಗಳ ಕಂಬಿಗಳಲ್ಲಿ ಬಾವಲಿಯೊಂದಿಗೆ ಜೋತಾಡುತ್ತಾ ಮಲಗಿದೆ

ಹಾಡುತ್ತಿರುವ ಮತ್ತದೇ ಮಿಡತೆಯನ್ನು ಕರೆದು
ಕವಿತೆ ಸತ್ತ ನೆನಪನ್ನು ಮರುಕಳಿಸಿಕೊಳ್ಳಲು ಇಷ್ಟವಿಲ್ಲ ನನಗೆ.

ಈ ಪದಕ್ಕೆ ಪೌಡರ್ ಬಳಿಯಬೇಕಿತ್ತು
ಈ ವಾಕ್ಯಕ್ಕೆ ಕೋಟು ಇದ್ದಿದ್ದರೆ ಚೆನ್ನಿತ್ತು
ಇದರ ಹಿಂದೆ ಮುಂದೆ ಇನ್ನೊಂದಿಷ್ಟು ಉಬ್ಬಿಕೊಂಡಿರಬೇಕಿತ್ತು
ಎಂದೆಲ್ಲಾ ನುಡಿದವರ ಎಂಜಲು ಬತ್ತಿದೆ
ಅಲ್ಲೀಗ ಒಂದು ಕ್ಯಾಕ್ಟಸ್ಸು ಕೂಡ ಬೆಳೆಯುತ್ತಿಲ್ಲ.

ತಪ್ಪಿತಸ್ಥರ ಮೊದಲ ಸಾಲಿನಲ್ಲಿರುವ ನನ್ನ ಹೆಸರು
ಈಗಾಗಲೇ ನೇಣುಬಿಗಿದುಕೊಂಡಿದೆ ಡೆತ್ ನೋಟ್ ಕೂಡ ಬರೆದಿಡದೆ
*

ಸತ್ತುಹೋದ, ಅರ್ಧಬೆಂದ ಕವಿತೆಯಲ್ಲೊಂದು ಗಿಡಹುಟ್ಟಿದೆ
ನನ್ನ ಕಣ್ಣಗುಡ್ಡೆಗಳಂಥಾ ಎರಡು ಕಪ್ಪು ಹೂವುಗಳು ಅದರ ಮುಖದಲ್ಲಿ.

ನಾನೀಗ ಹೂವಿನ ಕಣ್ಣುಗಳಲ್ಲಿ ನೋಡುತ್ತಿದ್ದೇನೆ ಅದನ್ನು.
*

ಕಾಜೂರು ಸತೀಶ್

Hotel

ಊಟಕ್ಕೆಂದು ಹೋಟೆಲಿನ ಬಳಿಬಂದೆ
ಬಾಗಿಲು ಹಾಕಿ ಎಲ್ಲೋ ಹೊರಟುಹೋಗಿದೆ!

ಎಲ್ಲಿ ಹೋಗಿರಬಹುದು ಅದು
ಬೆವರಲ್ಲಿ ತೋಯ್ದ ತನ್ನ ಅಂಗಿಯ ಕಳಚಿಟ್ಟು?

ಮುತ್ತುತ್ತಿರಬಹುದು ಈಗಲೂ
ಆ ಅನಾಮಿಕ ನೊಣಗಳು
ಅದನ್ನೇ ಹಿಂಬಾಲಿಸಿಕೊಂಡು.

ಪಿಚಕ್ಕೆಂದು ಉಗುಳುತ್ತಿದ್ದ ವಾಶ್ ಬೇಸಿನ್
ಯಾವ ಬರಗಾಲದ ಧ್ಯಾನದಲ್ಲಿರಬಹುದು ಈಗ?

ಪಾಪ, ಉಸಿರಾಡಿ-ಬಿಡಲು ಒಂದು 'ಧಮ್ಮು' ಹೊಗೆಯೂ ಸಿಕ್ಕಿರಲಿಕ್ಕಿಲ್ಲ

ಹೋಗಿರಬಹುದು ಮುದ್ದಾಡಿಬರಲು
ಟವಲಿನ ಬೆವರು ಸೂರ್ಯನನ್ನು!

ತಿಂದಿದ್ದು ಹೆಚ್ಚಾಗಿ 'ಅರ್ಜೆಂಟಾ'ಯಿತೇ?
ಅಥವಾ ಊರಿನ ಉಸಾಬರಿ ಇದಕೂ ಅಂಟಿತೇ?

ಆ ಒಲೆಗೆ ಇಂದು ಊಟವಿರಲಿಕ್ಕಿಲ್ಲ!
ನನಗಾದರೋ ಉಪವಾಸ ಇದ್ದೂ ಇದ್ದೂ ಅಭ್ಯಾಸವಿದೆ!
*

ಕಾಜೂರು ಸತೀಶ್

(ಕಳೆದ ಸೋಮವಾರ. ಗ್ಯಾಸ್ ಮುಗಿದಿತ್ತು. ಅಂಗಡಿಗಳೆಲ್ಲ ಮುಚ್ಚಿದ್ದವು. ಹೋಟೆಲಿಗೆ ಹೋದರೆ ಅದೂ ಕೂಡ ಬಾಗಿಲು ಹಾಕಿ ಎಲ್ಲೋ ಹೊರಟುಹೋಗಿತ್ತು!)

Saturday, June 2, 2018

ಮಣಿಯಾಣಿ ಮೇಷ್ಟ್ರು


'ನಿಮಗೆ ಕೃಷ್ಣ ಮಣಿಯಾಣಿ ಮೇಷ್ಟ್ರನ್ನು ಗೊತ್ತಾ?' ಎಂದು ಅಧಿಕಾರಿಗಳೆದುರು ಪ್ರಶ್ನೆಯನ್ನು ಎಸೆದರೆ, 'ಇಲ್ಲ' ಎಂಬ ಉತ್ತರವೇ ಬರುತ್ತದೆ.

ಯಾಕೆಂದರೆ ಅವರೊಬ್ಬರು ನಿಷ್ಠಾವಂತ ಮೇಷ್ಟ್ರಾಗಿದ್ದರು!
*
ಕಾಜೂರು ಶಾಲೆಯಲ್ಲಿ ಅವರು ಮುಖ್ಯ ಶಿಕ್ಷಕರಾಗಿದ್ದಾಗ ಅವರ ಜೊತೆಗೆ ಕೆಲಕಾಲ ಕೆಲಸಮಾಡುವ ಭಾಗ್ಯ ನನ್ನದಾಗಿತ್ತು. ಒಂದಿಷ್ಟೂ ಅಹಂಕಾರವಿರದ, ಸದಾ ನಗುಮೊಗದ ಮೇಷ್ಟ್ರಿಗೆ ಶಾಲೆಯ ಮಕ್ಕಳೆಲ್ಲರೂ ಗೆಳೆಯ ಗೆಳತಿಯರು! ಅವರು ಬರುತ್ತಿದ್ದಂತೆಯೇ  ಓಡಿಹೋಗಿ ಶೇಕ್ ಹ್ಯಾಂಡ್ ಮಾಡುವುದು ಮಕ್ಕಳ ನಿತ್ಯದ ಅಭ್ಯಾಸ. ಸಹೋದ್ಯೋಗಿಗಳಿಗೆ ಮೊದಲೇ ನಮಸ್ಕರಿಸುತ್ತಾ ಎಂತಹ ಒತ್ತಡದ ಕ್ಷಣದಲ್ಲೂ ಸಮಚಿತ್ತದಿಂದ ಸ್ಫೂರ್ತಿಯನ್ನು ತುಂಬುವ ಮಣಿಯಾಣಿ ಮೇಷ್ಟ್ರು ಎಂದೂ ಪ್ರಶಸ್ತಿಗಾಗಿ ಅರ್ಜಿಹಾಕಿದವರಲ್ಲ; ಬಕೇಟು ಹಿಡಿದವರಲ್ಲ. ಅವರ ಪ್ರಾಮಾಣಿಕತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೆಲವು ಅಧಿಕಾರಿಗಳು ಅಧಿಕಾರ ಚಲಾಯಿಸುವಾಗಲೂ 'ಸರಿ ಸರ್ ಮಾಡುತ್ತೇನೆ' 'ಆಯ್ತು ಸರ್' ಎಂದು ಪುಟ್ಟ ಮಗು ಹೇಳುವ ಹಾಗೆ ಹೇಳುತ್ತಿದ್ದರು!
*
ಹುಣ್ಣಿಮೆ ಅಮಾವಾಸ್ಯೆಗಳಿಗೊಮ್ಮೆ ಬಂದು ಮುಖತೋರಿಸಿ ಹೋಗುವ ಪ್ರಶಸ್ತಿ ವಿಜೇತ ಮೇಷ್ಟ್ರುಗಳ ನಡುವೆ ಇರುವಾಗ ಕೃಷ್ಣ ಮಣಿಯಾಣಿ ಮೇಷ್ಟ್ರನ್ನು ನೆನಪಿಸಿಕೊಳ್ಳದಿದ್ದರೆ ನನ್ನಂಥವರು ಮಾಡುವ ಬಹುದೊಡ್ಡ ಪಾಪಗಳಲ್ಲೊಂದೆನಿಸುತ್ತದೆ!
*

ಕಾಜೂರು ಸತೀಶ್

Saturday, April 21, 2018

ಕಡಲ ಕರೆಯ ಕುರಿತು ಡಾ.ಎಚ್.ಎಸ್.ಅನುಪಮಾ

Listen to Dr HS Anupama, speaking on kajooru Sathish's 'kadala kare', a kannada translation of contemporary malayalam poems #np on #SoundCloud
https://soundcloud.com/kajooru-sathish/dr-hs-anupama-speaking-on

ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನ

ಹೆಸರಾಂತ ನಾಟಕಕಾರ, ನಟ, ನಿರ್ದೇಶಕ ಶ್ರೀ ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನವು ನಾನು ಓದಿದ ಮಹತ್ವದ ಕೃತಿಗಳಲ್ಲೊಂದು.

ಸಂಕಲನದಲ್ಲಿರುವ ಆರು ಕಥೆಗಳೂ ಓದುಗರನ್ನು ತೀವ್ರವಾಗಿ ಕಾಡಿಸುವಂಥವುಗಳು. ನಮ್ಮ ಸಜ್ಜನಿಕೆಯ ಮುಖವಾಡಗಳನ್ನು ಕಳಚಿಡುವ ಕಥನಗಳವು. ನಮ್ಮೊಳಗಿನ ಪ್ರಜ್ಞೆಯನ್ನು ಎಬ್ಬಿಸುವ 'ಮನಸ್ಸಿನ ಮಾತು'ಗಳವು.

ಅಭೂತಪೂರ್ವ ಕಥೆ ಹೇಳುವ ಶೈಲಿ, ಕೆಂಡದುಂಡೆಗಳಂಥ ಭಾಷೆ ಮತ್ತು ಸಂಭಾಷಣೆಗಳಿಂದಾಗಿ ಈ ಕೃತಿಯು ನಾಲ್ಕು ಮುದ್ರಣಗಳನ್ನು ಕಂಡಿದೆ. ಅವರ 'ಕಾತ್ಯಾಯಿನಿ'ಯು ಕನ್ನಡ ಕಥಾಪರಂಪರೆಯ ಪ್ರಮುಖ ಕಥೆಗಳ ಸಾಲಿಗೆ ಸೇರಬಲ್ಲ ಕಥೆ.

ಹೆಣ್ಣಿನ ಆತ್ಮವನ್ನು ಧರಿಸಿ ಮಾತನಾಡುವ ಸೇತುರಾಮ್ ಅವರ ಕಥೆಗಳು ಹೆಣ್ಣಿನ ಮೇಲಾಗುವ ದೌರ್ಜನ್ಯಗಳನ್ನು ಅತಿಸೂಕ್ಷ್ಮವಾಗಿ,  ಸಶಕ್ತವಾಗಿ ವಿವರಿಸುತ್ತವೆ. ಕೌಟುಂಬಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿರುವ ಕ್ರೌರ್ಯ ಮತ್ತು ಅಸಮಾನತೆಗಳನ್ನು ಆಳವಾಗಿ ವಿಶ್ಲೇಷಿಸುತ್ತವೆ.

ಸ್ವಯಂ ಭ್ರಷ್ಟರಾಗಿದ್ದುಕೊಂಡು 'ನಾವಲ್ಲ' ಎನ್ನುತ್ತಾ ಮತ್ತೊಬ್ಬರ ಭ್ರಷ್ಟತೆಯನ್ನು ಬಯಲಿಗೆಳೆಯಲು ಹೊರಡುವ ನಮ್ಮಂಥವರ ಮುಖವಾಡಗಳು ಇಲ್ಲಿ ಬಟಾಬಯಲಾಗುತ್ತವೆ.

ತಾಯ್ತನವನ್ನು ತುಂಬಿಕೊಂಡ , ಮಾನವೀಯತೆಗಾಗಿ ಹಪಹಪಿಸುವ ಕಥೆಗಳಿವು.
*

ಕಾಜೂರು ಸತೀಶ್

Friday, April 20, 2018

ಡೆಮಾಕ್ರಸಿ ಅಳಿಯುತ್ತಿರುವ ಲಕ್ಷಣಗಳು

* ಕೋಟಿಕುಳಗಳಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ; ಅಂಥವರಿಗೇ ಗೆಲುವಿನ ಪ್ರಾಪ್ತಿ.

* ಜಾತಿ ಮತ್ತು ಧರ್ಮಾಧಾರಿತ ಮತ ಚಲಾವಣೆ.

* ಒಂದೇ ಪಕ್ಷಕ್ಕೆ ಮತ ಚಲಾಯಿಸುವುದು. ಎಂಥಾ ಭ್ರಷ್ಟನೇ ಸ್ಪರ್ಧಿಸಲಿ, ಮತ ಅವನಿಗೇ ಮೀಸಲು.

* ಹಣ, ಹೆಂಡ ಮತ್ತಿತರ ಆಮಿಷಗಳಿಗೆ ಬಲಿಯಾಗುವ ಮತದಾರ.

* ಗೆದ್ದ ತಕ್ಷಣವೇ ಸರ್ವಾಧಿಕಾರಿಯಾಗುವ ರಾಜಕಾರಣಿ.

* ಬಹುತೇಕ ಸೌಲಭ್ಯಗಳೆಲ್ಲ ಗೆದ್ದವರ ಸಂಬಂಧಿಕರಿಗೆ, ಆಪ್ತ ಕಾರ್ಯಕರ್ತರುಗಳಿಗೆ ಹಂಚಿಕೆ.

* ವಂಶಪಾರಂಪರ್ಯಾಧಾರಿತ ರಾಜಕಾರಣ.

* ಇವರಲ್ಲಿ ಯಾರೂ ಅರ್ಹರಲ್ಲ ಎಂದು 'NOTA'ವನ್ನು ಬೆಂಬಲಿಸುವ ಮತದಾರ.

* ಚುನಾವಣಾ ಸಂದರ್ಭವಷ್ಟೇ ಬಿರುಸಿನಿಂದ ನಡೆಯುವ ಕಾಮಗಾರಿಗಳು.

*

ಕಾಜೂರು ಸತೀಶ್

ಮದುವೆ ಊಟ

ಸುಡುವ ಈ ಬೇಸಿಗೆಯಲ್ಲಿ ಎಷ್ಟೋ ಮದುವೆಗಳಲ್ಲಿ ಭಾಗಿಯಾಗಿದ್ದೇನೆ. ಮತ್ತಷ್ಟೂ ಸುಡುವ ಅಲ್ಲಿನ ಅಡುಗೆ ಕೋಣೆಗಳಲ್ಲಿ ಬೆವರಿನ ಮಳೆ ಸುರಿಸುವ ಕೆಲಸಗಾರರನ್ನು ನೋಡಿದ್ದೇನೆ.

ನೀವು ನಂಬಲಾರಿರಿ: ನಾವು ಉಣ್ಣುವ ಮದುವೆ ಊಟದಲ್ಲಿ ಅವರ ಬೆವರಿನ ಒಂದು ಹನಿಯಾದರೂ ಜಾಗ ಪಡೆದುಕೊಂಡಿರುತ್ತದೆ! ಅಷ್ಟೆಲ್ಲ ಜನಗಳಿಗೆ ಬೇಯಿಸಿ ಹಾಕುವುದೆಂದರೇನು ಸಾಮಾನ್ಯ ಕೆಲಸವೇ?

ಲಿಪ್ಸ್ಟಿಕ್ ಬಳಿದು ಬಂದು ಎರಡೇ ಎರಡು ಬೆರಳುಗಳಲ್ಲಿ ಸ್ವಲ್ಪ ತಿಂದು ಮುಕ್ಕಾಲು ಭಾಗವನ್ನು ತಟ್ಟೆಯಲ್ಲೇ ಉಳಿಸಿಬರುವ ಈ ಕಾಲದ ಹುಡುಗಿಯರ ಮೇಲೆ ಇನ್ನಿಲ್ಲದ ಸಿಟ್ಟು ಬರುತ್ತದೆ.

ಸಾವು ಮತ್ತು ಮದುವೆ



ಸಾವು ಮತ್ತು ಮದುವೆ ನನ್ನನ್ನು ದಾರುಣವಾಗಿ ಕಾಡುವ ಕೌಟುಂಬಿಕ ಸಂದರ್ಭಗಳು. ಈ ಎರಡೂ ಕೂಡ ಶೋಷಣೆಯ ದಾರಿಗಳು. ಸಮಾಜವು ಈ ಸನ್ನಿವೇಶಗಳಿಗೆ ಒಳಗಾಗುವ ಕುಟುಂಬವನ್ನು ಗರಿಷ್ಟ ಮಟ್ಟದಲ್ಲಿ ಶೋಷಿಸುತ್ತದೆ.

Saturday, April 7, 2018

ಮರ ಮತ್ತು ಜನ

ಮರ ಹೂವಾಗಿ ನಕ್ಕಿತು
ಮುಡಿದು ತೆಪ್ಪಗಾದರು ಜನ

ಮರ ಹಣ್ಣಾಗಿ ಉಲಿಯಿತು
ತಿಂದು ತೇಗಿ ನಿದ್ದೆಹೋದರು ಜನ

ಮರ ನೊಂದು ಎಲೆಯುದುರಿಸಿತು
'ಉದುರಿತಂತೆ ಹೆಹ್ಹೆಹ್ಹೇ'
ಎದ್ದೆದ್ದು ಕೇಕೆ ಹಾಕಿದರು ಜನ 
*

- ಕಾಜೂರು ಸತೀಶ್

ಆಟ

ಅವಳತ್ತ ಚೆಂಡನ್ನೆಸೆದೆ
ಅವಳು ನನ್ನತ್ತಲೂ.

ಸುಮಾರು ಹೊತ್ತಾದ ಮೇಲೆ
ಚೆಂಡನ್ನೇ ಬಳಸದೆ
ಎಸೆಯುವ ಹಿಡಿಯುವ ಆಟ ಆಡಿದೆವು.

ಇನ್ನೂ ಸ್ವಲ್ಪ ಹೊತ್ತಾದ ಮೇಲೆ
ನಾವು
ನಾವಿಬ್ಬರೂ ಇಲ್ಲದೆ
ಚೆಂಡನ್ನಷ್ಟೇ ಎಸೆದುಕೊಂಡೆವು
ಚೆಂಡನ್ನಷ್ಟೇ ಹಿಡಿದುಕೊಂಡೆವು.
*

ಮಲಯಾಳಂ ಮೂಲ - ಎಂ. ಆರ್. ವಿಷ್ಣು ಪ್ರಸಾದ್

ಕನ್ನಡಕ್ಕೆ - ಕಾಜೂರು ಸತೀಶ್

Sunday, March 25, 2018

ಸೂರ್ಯಪದ್ಯಗಳು

ನೆಕ್ಕಿ ನೋಡಿದ ಸೂರ್ಯ
'ಸಪ್ಪೆ' ಎನುತ ಇವಳೊಡನೆ ಕೆಂಡಾಮಂಡಲನಾದ.
ಈಗ 'ಉಪ್ಪು' ಎನ್ನುತ್ತಾ ಮೋಡಗಳ ಹುಡುಕುತ್ತಿದ್ದಾನೆ.
*
ಹೊಲದ ಬಿರುಕು ಪಾದಗಳ ನೆಕ್ಕಿದ ಸೂರ್ಯ
'ಇನ್ನೆಷ್ಟು ಒಡೆದು ಆಳಬಹುದು' ಯೋಚಿಸುತ್ತಿದ್ದಾನೆ.
*
ನಿಂತಲ್ಲೇ ಮೂರ್ಛೆಹೋಗಿದೆ ಮರ
ಉಪಚರಿಸುವ ನೆಪದಲ್ಲಿ ಬೆತ್ತಲಾಗಿಸಿದ್ದಾನೆ ಸೂರ್ಯ.
*
ಅವನಿಗೆ 'ಕಪ್ಪು' ಎಂದರೆ ತುಂಬುಪ್ರೀತಿ
ಒಣ ಕುಂಚದ ಬಿಳಿರೋಮದ ತುದಿಯಲ್ಲಿನ್ನೂ
ಕಡುಗಪ್ಪು ಹಾಗೇ ಉಳಿದಿದೆ.
*
'ಬಿಸಿಲಲ್ಲಿ ನೆನೆವವರು ಬೇಕಾಗಿದ್ದಾರೆ'
ಬಂಗಲೆಗಳ ಹೊರಗೆ ಬೋರ್ಡು ನೇತುಹಾಕಿದ್ದಾನೆ ಕವಿ.
ಕಾದೂ ಕಾದ ಅವನೀಗ ಥೇಟ್ ಕಪ್ಪು ಡಾಂಬರು ರಸ್ತೆ.
ಅವರೆಲ್ಲ ಕಾರು ಓಡಿಸಿಕೊಂಡು ಹೋಗುತ್ತಿದ್ದಾರೆ.
*
ಮುಟ್ಟಿದ್ದನ್ನೆಲ್ಲ ಅಳುವಂತೆ ಮಾಡಿಯಾದ ಮೇಲೆ
ಕಾಡಿನ ಮೌನವನ್ನೂ ಸಹಿಸದ ಸೂರ್ಯ
ಹೊಟ್ಟೆಕಿಚ್ಚಿನ ಕಿಡಿಹಚ್ಚಿ ಬಂದಿದ್ದಾನೆ.
*
ಕೆಲಸವಿಲ್ಲದ ನದಿಯೀಗ ಪ್ರಜೆಗಳಾಗಿ 'ಗುಸುಗುಸು ಪಿಸಪಿಸ'.
ಲೋಕದ ಸದನದಲ್ಲಿ ಸೂರ್ಯನದ್ದೇ 'ಚುರ್ರ್ಚುರ್ರ್' ಸಂಗೀತ.
*

ಕಾಜೂರು ಸತೀಶ್

Wednesday, March 21, 2018

ಪ್ರೇಮ ಪತ್ರ!

ಚುನ್ನು

    ಮಧ್ಯಾಹ್ನದ ಊಟ ಆಗಿ ಇನ್ನೂ ಕೈಯೇ ಸರಿ ಒಣಗ್ಲಿಲ್ಲ, ನಿಂಗೆ ಪತ್ರ ಬರೀತಿದ್ದೀನಿ (ಈಗ ಒಂದ್ಗಂಟೆ ಇಪ್ಪತ್ತೆರಡ್ನಿಮಿಷ).ಇವತ್ತೇನಾಯ್ತು ಗೊತ್ತಾ? ಕಾಫಿ ಕುಯ್ದು ಒಣಗಿಸ್ತಿದ್ನಾ_ ಉಗುರಿನ ಮೇಲಿರೋ ಸಿಪ್ಪೆಯೆಲ್ಲಾ ಎದ್ದ್ಹೋಗ್ತಿದೆ! ನೀನ್ನೋಡಿದ್ರೆ ವಾರ್ದಿಂದಾನೂ ಅದೇ ಕೆಲ್ಸ ಮಾಡ್ತಿದ್ದೀಯ , ನಿನ್ಕತೆ ಏನಾಗ್ಬೇಕು ಹೇಳು! ಆಮೇಲೆ ನಾನೇನಾದ್ರೂ ನೋಡ್ಬಿಡ್ತೀನಿ ಅಂತ ಕೈತುಂಬ ಮದರಂಗೀಲಿ ಚಿತ್ರ ಕೆತ್ಬುಡ್ತೀಯ ನೋಡು. ಎಷ್ಟು ಹುಷಾರು ನೀನು!

‘ನಿನ್ನ ನಂಗಿಷ್ಟ ಕಣೋ’ ಅಂತ ಒಂಚೂರೂ ಭಯ, ಗಾಬ್ರಿ ಇಲ್ದೆ ಹೇಳ್ದಾಗ ನನ್ನ ಹೃದಯದಲ್ಲಿ ಬುಲೆಟ್  ಓಡ್ತಿತ್ತು ಕಣೇ. (ಗಟ್ಟಿಗಿತ್ತಿ ನೀನು!) ಅದ್ಕೇ ಏನೂ ಹೇಳಿರ್ಲಿಲ್ಲ ನಿಂಗೆ. ಅವತ್ತು ಮನೆಗೆ ಬಂದು ನಿನ್ಹೆಸ್ರಲ್ಲಿ ಒಂದು ‘ಕಾಚಂಪುಳಿ’ ಗಿಡ ನೆಟ್ಟಿದ್ದೆ. ಎಷ್ಟೆತ್ರ ಬೆಳ್ದಿದೆ ಗೊತ್ತಾ ಈಗ ಅದು!

ನೀನ್ಬೇಜಾರ್ಮಾಡ್ಕೋತೀಯ ಅಂತ ಹೇಳಿರ್ಲಿಲ್ಲ: ನಿನ್ಗೆ ಅಂತ ಬರ್ದಿಟ್ಟಿದ್ದ ಪತ್ರಗಳ್ನೆಲ್ಲ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಇಟ್ಟಿದ್ನಾ. ಮೊನ್ನೆ ಗುಜರಿ ಮಾಮ ಬಂದಾಗ ಅಮ್ಮ ಎಲ್ಲಾ ಬಾಚ್ಕೊಟ್ಬಿಟ್ಟಿದ್ದಾಳೆ. ಅದ್ರಲ್ಲೊಂದು ಗುಲಾಬಿ ಬಿಡ್ಸಿದ್ದೆ ಕಣೇ, ನಿಂಗಿಷ್ಟ ಅಲ್ವಾ ಅಂತ ಹಸಿರು ಬಣ್ಣಾನೇ ಹಚ್ಚಿದ್ದೆ ಅದಕ್ಕೆ. ಇರ್ಲಿಬಿಡು ಅದೆಲ್ಲಿದ್ರೂ, ಯಾರ್ಕೈಲಿದ್ರೂ ಹಸ್ರೇ ಆಗಿರ್ಲಿ.

ನಮ್ಮೂರಲ್ಲಿ ಟವರ್ ಹಾಕ್ತಾರಂತೆ. ಆದ್ರೂ ಇಲ್ಲಿಗೆ ಸಿಗ್ನಲ್ ಬರೋದು ಡೌಟು ಅಂತಿದ್ರು. ಒಳ್ಳೇದೇ ಆಯ್ತು ಬಿಡು. ಇಲ್ದಿದ್ರೆ ನೀನು ‘ಪಟಪಟಪಟ’ ಅಂತಾ ಮಾತಾಡೊದು ನಾನು ‘ಊಂ ಊಂ’ ಅಂತ ಹೂಂಗುಟ್ಟೋದೇ ಆಗ್ಬಿಡುತ್ತೆ. 

ಮುಂದಿನ್ವಾರ ಈ ಪಿಳ್ಳೆ ಐಕ್ಳನ್ನೆಲ್ಲಾ ಕರ್ಕೊಂಡು ಬೆಟ್ಟಕ್ಕ್ಹೋಗ್ತಿದ್ದೀನಿ. ಎಲ್ಲಾರ್ನೂ ಕೇಳ್ದೆ, ಯಾರ್ಗೂ ಗೊತ್ತಿಲ್ಲ ನೋಡು ಅದ್ರ ಹೆಸ್ರು. ಅದ್ಕೇ, ನಿನ್ಹೆಸ್ರೇ ಇಟ್ಬಿಡೋಣಾ ಅಂತ. ಎಷ್ಟ್ಚಂದ ಅಲ್ಲಾ! ದಿನಾ ಬೆಳಿಗ್ಗೆ ಕಣ್ಬಿಟ್ರೆ ಅದೇ ಕಾಣ್ಸೋದು ನಂಗೆ. ನಿನ್ಥರಾನೇ ನೋಡುತ್ತೆ ನನ್ನ! ಆದ್ರೆ ಮಾತಿನ ವಿಚಾರ್ದಲ್ಲಿ ಥೇಟ್ ನನ್ಥರಾನೇ!

ನೀನಿದನ್ನ ಓದಿ ಆಗ್ಲೇ ಇಷ್ಟಗ್ಲಾ ಬಾಯ್ತೆರ್ದು ‘ಕಟಕಟಕಟಾ’ ಅಂತ ನಗ್ತಿರ್ತೀಯ ಅಂತ ಗೊತ್ತು. ಹಿಂಗಾ ಲವ್ಲೆಟರ್ ಬರಿಯೋದು ಅಂತ.  ನೀನ್ಹುಡ್ಗ ಆಗಿ ನಾನ್ಹುಡ್ಗಿ ಆಗ್ಬೇಕಿತ್ತೇನೋ! ಹೋಗ್ಲಿಬಿಡು.

ಏೀ! ನೆನ್ಪಾಯ್ತು: ಇವತ್ಬೆಳಿಗ್ಗೆ ತೋಟ್ದಲ್ಲಿ ಎರಡ್ಗಿಳಿಗಳು ಅತ್ತಿ ಮರ್ದಲ್ಲ್ಕೂತು ಇದು ಅದಕ್ಕೆ ಅದು ಇದಕ್ಕೆ ಅಂತ ಹಣ್ನ ಕಿತ್ಕಿತ್ತು ಕೊಡ್ತಿದ್ವು. ಅದ್ರಲ್ಲಿ ನೀನ್ಯಾವ್ದು ನಾನ್ಯಾವ್ದು ಅಂತ ಹುಡುಕ್ತಿದ್ದೆ. ಗೊತ್ತೇ ಆಗ್ಲಿಲ್ಲ ಕಣೇ, ಯಾಕಂದ್ರೆ ನೀನಿದ್ದಿದ್ರೆ ಎಲ್ಲಾ ನಂಗೇ ತಿನ್ಸ್ಬಿಡ್ತಿದ್ದೆ!

ಇನ್ನೂ ಏನೇನೋ ಬರೀಲಿಕ್ಕಿತ್ತು. ಆ ಎರಡು ಗಿಳಿಗಳ ಚಿತ್ರಾನೂ ಬಿಡ್ಸ್ಬೇಕು ಅಂದ್ಕೊಂಡಿದ್ದೆ, ಆಗ್ತಿಲ್ಲ. ಅಮ್ಮ ಕರೀತಿದ್ದಾರೆ, ಸ್ವಲ್ಪ ಸೌದೆ ಒಡಿಯೋ ಕೆಲ್ಸಾ ಬಾಕಿ ಇದೆ, ಹೋಗ್ತೇನೆ.

ಇದನ್ನ ಓದ್ಬಿಟ್ಟು ಏನಾದ್ರೂ ಬರಿ. ಸುಮ್ನೆ ನಗ್ತಾ ಕೂರ್ಬೇಡ. 

ಇತಿ ನಿನ್ನ,
ಪೆದ್ದು

ಕಾಜೂರು ಸತೀಶ್

Saturday, February 24, 2018

ಎರಡು ಸಾಲಿನ ಗಪದ್ಯ

ಮನೆಗೆ ಬೀಗ ಹಾಕುವಾಗ
ಜೇಬು ಮುಟ್ಟಿ ನೋಡಿಕೊಳ್ಳುತ್ತೇನೆ
ಪರ್ಸು, ಪೆನ್ನು, ಮೊಬೈಲು...
'ಹ್ಞಾಂ... ಇವೆ!'

'ಏನೋ ಮರೆತೆ' ಎಂಬ ವಸ್ತು
ಮಿದುಳ ತುದಿಯಲ್ಲೆಲ್ಲೋ
ಕೋಣೆಯ ಕಪಾಟಿನಲ್ಲೆಲ್ಲೋ
ಉಳಿಯದ ಹಾಗೆ
ಚೀಟಿಯಲ್ಲಿ ಎರಡು ಸಾಲುಗಳಾಗಿ ಹಡೆದು
ಮಡಿಸಿ ಜೇಬಲ್ಲಿಟ್ಟುಕೊಳ್ಳುತ್ತೇನೆ.

'ಈ ದೇಹ ಇಂದೇ ಮಣ್ಣಿಗೆ ಬಿದ್ದರೆ
ಹುಟ್ಟಲು ಬಿಡಿ'
ಎಂದರೆ ಪದ್ಯವಷ್ಟೇ ಆಗುತ್ತದೆ.
'ನಂಗೆ ಗದ್ದಲ ಅಂದ್ರೆ ಆಗಲ್ಲ
ಪದ್ಯದ್ಹಾಗೆ ಇದ್ದುಬಿಡಿ'
ಎಂದರೂ.

ಅದಕ್ಕೋಸ್ಕರವೇ ಎರಡು ಸಾಲು:
'ಈ ದೇಹವನ್ನು ಮೆಡಿಕಲ್ ಕಾಲೇಜಿಗೆ ಕೊಟ್ಟುಬಿಡಿ
ದಯವಿಟ್ಟು ಮನೆಗೆ ಒಯ್ಯದಿರಿ'.

(ನನ್ನ ಎಟಿಎಂ ಪಿನ್ - )

*

ಕಾಜೂರು ಸತೀಶ್

ಗೋಡೆಚಿತ್ರ

ಗೋಡೆಚಿತ್ರ
------------
ಕೂದಲ ಹರಡಿದ್ದಾಳೆ ಹುಡುಗಿ.
ಅವಳ ಕಣ್ಣಲ್ಲಿ ಬಿರಿದ ಹೂಬಿಸಿಲು.
ಒಂದೇ ಒಂದು ನೋಟ ಸಾಕು
ಗೋಡೆ ದಾಟಿ ಒಳಗಿಳಿದೇಬಿಡುವಳು.

ನುಗ್ಗಿ ಬರುತ್ತದೆ ಸಲಗಗಳ ಗುಂಪು
ಗೋಡೆಯ ಕೆಡವಿ.
ಉಕ್ಕೇರಿ ಬರುತ್ತದೆ
ಅಲೆಗಳ ಹೊತ್ತು ಸರೋವರ.
ಮೀನು ಸಿಗದ ಮಿಂಚುಳ್ಳಿ
ಅಡಗುತ್ತದೆ ಎಲೆಮರೆಯಲ್ಲಿ.
ಕಾಡಿಗೆ ಇನ್ನಿಲ್ಲದ ತುಡಿತ.

ಕೋಣೆಗೆ ಹಾರುತ್ತದೊಂದು ಚಿಟ್ಟೆ.
ತೇವಗೊಂಡ ಕಲ್ಲಿನಲ್ಲಿ
ಹಬ್ಬಿದ ಬಳ್ಳಿಯಲ್ಲಿ
ಬಿಸಿಲುಪರ್ವತದ ನೆತ್ತಿಯಲ್ಲಿ
ಕೊಕ್ಕು ಅಲುಗಾಡುವ ಸದ್ದಿನಲ್ಲಿ
ಮಳೆಹನಿಗಳ ತುಂಬಿಕೊಳ್ಳುವ ಎಲೆಯಲ್ಲಿ
'ಮುಟ್ಟಿದರೆ ಮುನಿ'ಯ ನೆನಪಿನಲ್ಲಿ
ಹಾರಿಕೊಂಡಿರುತ್ತದೆ ಚಿಟ್ಟೆ.

ಕತ್ತಲು ಬೀಳುವ ಮುನ್ನವೇ
ಗೋಡೆಗಂಟಿಕೊಳ್ಳುತ್ತದೆ.
ಚಿಟ್ಟೆಯ ರೆಕ್ಕೆಯ ಒಳಗಿಳಿದರೆ
ಕಣ್ಣೊಂದು ಹೂವು
ಅದರೊಳಗೆ ಜೇನು
ಹಾರುವ ಪರಾಗ.

ಕೋಣೆಯ ಒಳಗೆ
ಅರಳುತ್ತದೊಂದು ಲೋಕ
*

ಮಲಯಾಳಂ ಮೂಲ- ಚಿತ್ರಾ ಕೆ.ಪಿ

ಕನ್ನಡಕ್ಕೆ - ಕಾಜೂರು ಸತೀಶ್

ಮರುನೋಟ

ಬಿರುಬೇಸಿಗೆಯ ಬರ.
ಬಿರಿದ ಹೂವೊಂದು
ಕಿಟಕಿಯೆಡೆಗೆ ನೋಡುತಿದೆ.

ಮೊಟ್ಟಮೊದಲ ಸಲ
ಹೂವಿನ ಕಣ್ಣಿಗೆ ಸಿಕ್ಕ
ಕಿಟಕಿಯೊಳಗಿನ ಚಿತ್ರವಾಗುತ್ತೇನೆ.

ಗಾಳಿಗೆ ಹೊಯ್ದಾಡುವ ಹೂವಿಗೆ
ಇನ್ನಿಲ್ಲದ ಕನಿಕರ ನನ್ನ ಮೇಲೆ.

ಕಣ್ಣುಗಳಲ್ಲಿ ಅದು
ನನ್ನ ನಗ್ನತೆಯ ಗೀಚುತ್ತದೆ
ಈ ಒಡಲ ಕಳಚಿಡುತ್ತೇನೆ ನಾನು.
ಒಡಲು ನನ್ನ ಕಳಚಿಟ್ಟುಬಿಡುತ್ತದೆ.

ನಿದ್ದೆಯಲ್ಲಿ
ನಾನು
ವಸಂತದ ಪೈರುಗಳ
ಕೊಯ್ದು ರಾಶಿಹಾಕುತ್ತೇನೆ.
*

ಮಲಯಾಳಂ ಮೂಲ : ಚಿತ್ರಾ ಕೆ.ಪಿ.

ಕನ್ನಡಕ್ಕೆ : ಕಾಜೂರು ಸತೀಶ್

ಮಾತ್ರೆ

ಜ್ವರ ಒಲೆ ಉರಿಸುತ್ತಿದೆಯೇ?
ಹೃದಯ ಶವಾಸನದಲ್ಲಿದೆಯೇ?
ಶ್ವಾಸಕೋಶ ಬಲೂನು ಊದುತ್ತಿದೆಯೇ?
ಮೂತ್ರಪಿಂಡ ವಿಚ್ಛೇದನೆ ಕೊಟ್ಟಿತೇ?
ಸಿಹಿ ಹೆಚ್ಚಿ ಹೆಜ್ಜೇನುಗಳು ದಾಳಿಯಿಟ್ಟವೇ?
ಕೀಲು ನೂಲು ಪೋಣಿಸಿ ಮೂಳೆಗಳ ಹೊಲಿಯುತ್ತಿದೆಯೇ?

ಮುಟ್ಟಿ ನೋಡಿದೆ-
ಪುಟ್ಟ ಮಾತ್ರೆ.
ತೆರೆದೇ ಇರುವ
ಪುಟ್ಟ ಬಾಯಿ.
ತಿನ್ನಬೇಕು ನೋವು
ಅಹೋರಾತ್ರಿ.
ಪಾಪ!

ಹೊಟ್ಟೆ ತುಂಬಿದ ಮೇಲೆ
ಅದರ ಗಡಿಯಾರದಾಕಾರದ
'ಟಿಕ್ ಟಿಕ್' ಮಾತಿನ ಮೂತಿಗೆ
ಲಕ್ವಾ ಹೊಡೆದು
ಉದರದೊಳಗಿಟ್ಟುಕೊಂಡು
ಅದರ ತಾಯಿಯಾದವರಿಗೆ
ದೀರ್ಘ ಕುಂಭಕ!

ಅಂದ ಹಾಗೆ
ನನ್ನ ಟೋಕನ್ ಸಂಖ್ಯೆಯನ್ನು ಮರೆತೇಬಿಟ್ಟೆ!
*


ಕಾಜೂರು ಸತೀಶ್

Monday, February 12, 2018

ಇರುಳ ಹಿಂಡಿ ಬೆಳಕ ಹರಡಿ

ಇಡೀ ರಾತ್ರಿ
ಹಳೆಯ ಬಟ್ಟೆಗಳನ್ನು ತಂದು ಮುಳುಗಿಸಿ
ಸ್ವಲ್ಪ ಸ್ವಲ್ಪವೇ ಹಿಂಡತೊಡಗಿದೆ
ಮನೆಯ ಹಿಂದಿರುವ ತೊಟ್ಟಿಯಲ್ಲಿ.

ಸಾಕುಸಾಕಾಗಿ ಹೋಯ್ತು...
ಆಕಾಶ, ಭೂಮಿಗಳಿಗೆ
ಸ್ವಲ್ಪ ಸ್ವಲ್ಪವೇ ಬೆಳಕಿನ ಸಿಂಚನ
ಶುಭ್ರವಾಗೆದ್ದು ಬಂದ ಸೂರ್ಯ
ಮರದ ಕೊಂಬೆಗಳ ನಡುವೆ
ಇಣುಕಿನೋಡಿತು ನನ್ನನ್ನು ಮಾತ್ಸರ್ಯದಿಂದ.

ಭೂಮಿಗೆ ಬೆಳಕು ತರಿಸಿ
ನನ್ನನ್ನು ನಾನು ಮರೆತುಬಿಟ್ಟೆ
ಮಧ್ಯಾಹ್ನ, ಸಂಜೆಗಳನ್ನೆಲ್ಲ ಮರೆತುಬಿಟ್ಟೆ
ಮನೆಯ ಹಿಂದಿರುವ ತೊಟ್ಟಿಯಲ್ಲಿ ಅಡಗಿಸಿಟ್ಟ ಕತ್ತಲು
ಮೆಲ್ಲಮೆಲ್ಲಗೆ ಹಬ್ಬುವುದನ್ನೂ ಕೂಡ.

ಬಂತು ಅದು
ಎರಡು ಕಣ್ಣುಗಳಿಗೂ
ತಡಕಾಡಿ ಹುಡುಕಲು ಹೊರಟಿರುವೆ
ಆ ಹಳೆಯ ಬಟ್ಟೆಗಳನ್ನು.
*

ಮಲಯಾಳಂ ಮೂಲ- ಸೆಬಾಸ್ಟಿಯನ್

ಕನ್ನಡಕ್ಕೆ- ಕಾಜೂರು ಸತೀಶ್

Saturday, February 10, 2018

ಮದುವೆ

ಕಾಗೆ ಮತ್ತು ಬೆಳ್ಳಕ್ಕಿಯ
ಮದುವೆಯು ನಡೆಯಿತು
ಊರ ಮಂದಿಯೆಲ್ಲ ಬಂದು
ಉಂಡು ಹರಸಿ ಹೋದರು.

ಕಾಗೆಗೆ ಬಿಳಿಯಂಗಿ
ಬೆಳ್ಳಕ್ಕಿಗೆ ಕಪ್ಪು ಸೀರೆ
ಏನು ಅಂದ ಏನು ಚಂದ ಅಬ್ಬಬ್ಬಬ್ಬಬ್ಬಾ
ಥೇಟ್ ರಾಜ ರಾಣಿಯರಂತೆ ಹಹ್ಹಹ್ಹಹ್ಹಹ್ಹಾ.

ಕುಡಿಯಲು ಅತ್ತಿ ಬೇರಿನ ನೀರು
ತಿನ್ನಲು ಕಾಡಿನ ಹಣ್ಣುಗಳು
ಜೊತೆಗೆ ಹುರಿದ ಏಡಿ ಮೀನು
ಗಮ್ಮತ್ತೋ ಗಮ್ಮತ್ತು.

ಮರಕುಟಿಗ ಡೋಲು ಬಾರಿಸಿ
ಕೋಗಿಲೆ ಪೀಪಿ ಊದಿ
ಕಪ್ಪೆಗಳೆಲ್ಲ ಹಾಡು ಹಾಡಿ
ಸಂಭ್ರಮವೋ ಸಂಭ್ರಮ.

ಉದ್ದ ಉಗುರಿನ ಪಾರು ಜೊತೆ
ಹುಲಿಯಣ್ಣನ ತಕತಕ ಕುಣ ತ
ಡೊಳ್ಳು ಹೊಟ್ಟೆ ಮಾರನ್ಜೊತೆ
ಆನೆಯಕ್ಕನ ತಕಥೈ ಕುಣಿತ .

ಕಾಗೆ ಮತ್ತು ಬೆಳ್ಳಕ್ಕಿಯ
ಮದುವೆಯು ಮುಗಿಯಿತು
ಊರ ಮಂದಿಯ ಬಾಯ್ತುಂಬ
ಮದುವೆಯದೇ ಮಾತು.
*

ಕಾಜೂರು ಸತೀಶ್

ನಮ್ಮ ಪಿಂಕು

ನಮ್ಮ ಪಿಂಕುವಿಗೆ ಇಂದು ಒಂದು ವರ್ಷ ತುಂಬುತ್ತೆ
‘ಹ್ಯಾಪಿ ಬರ್ತ್‍ಡೇ’ ಅಂದ್ರೆ ಬಾಲ ಅಲ್ಲಾಡ್ಸುತ್ತೆ.

ಕೇಕು ತಂದು ಕ್ಯಾಂಡಲ್ ಹಚ್ಚಿ ಚಾಕು ಕೊಟ್ಟುಬಿಟ್ಟರೆ
ಕುಂಯ್ಕುಂಯ್ಗುಟ್ಟಿ ಜೊಲ್ಲು ಸುರಿಸಿ ಬಾಲ ಅಲ್ಲಾಡ್ಸುತ್ತೆ.

‘ಹಂಚಿ ಬಾ ತಗೋ’ ಎಂದು ಕೇಕು ಕೊಟ್ಟುಬಿಟ್ಟರೆ
ಮರದ ಕೆಳಗೆ ಎಲ್ಲಾ ತಿಂದು ಮೂತಿ ಒರೆಸಿ ಬರುತ್ತೆ.

‘ಅಯ್ಯೋ ಪೆದ್ದು ಹೀಗೇಕ್ಮಾಡ್ದೆ’ ಎಂದು ಕೇಳಿಬಿಟ್ಟರೆ
ಕಿವಿ ಬಾಗ್ಸಿ ಶರಣೆಂದು ಮುದುರಿ ಮಲ್ಕೊಳ್ಳುತ್ತೆ.
*

ಕಾಜೂರು ಸತೀಶ್

Tuesday, January 30, 2018

ಎಲೆ

ಎಲೆ
ಉದುರಿ ಪತಿಯ ಕಿರುಬೆರಳನೂ ಬಿಡಿಸಿಕೊಂಡಂತೆ
ತವರ ನೆನೆನೆನೆದು ಗಾಳಿಯಲ್ಲದೆಷ್ಟು ಸಲ ಕುಣಿವಳು!

ಕಾಲುಂಗುರವಿರುವ ಬೆರಳ ತುದಿ ಸ್ಪರ್ಶಿಸಲು ತವರ
ಮಣ್ಣು, ಬೇರು, ಕಾಂಡ, ಕೊಂಬೆಯ ತುತ್ತ ತುದಿ
ಹಸಿರು
ಮತ್ತೆ ಮತ್ತೆ ಹಸಿರು
ಮತ್ತೆ ಮತ್ತೆ ಬೆಳಕು!
*

ಕಾಜೂರು ಸತೀಶ್

Friday, January 26, 2018

ಸ್ತ್ರೀಕೇಂದ್ರಿತ ದಲಿತಪ್ರಜ್ಞೆ: ಕಳಂಕದ ಪೊರೆಹರಿದು ಹೊರಬರುವ ಓಟಗಳು

ನಮ್ಮ ಸಾಹಿತ್ಯದ ಎಲ್ಲ ಪರಂಪರೆಗಳಲ್ಲೂ ಸೃಜನಶೀಲವಾದ ಹಾಗೂ ತಾತ್ತ್ವಿಕವಾದ ಬಂಡಾಯದ ಚಹರೆಗಳಿವೆ. ಸುತ್ತಲಿನ ಆತಂಕಗಳಿಗೆ ಸ್ಪಂದಿಸುವ, ಪ್ರತಿಕ್ರಿಯಿಸುವ ಪ್ರಕ್ರಿಯೆಯು ಇಂದೂ ಕೂಡ ವ್ಯಾಪಕತೆಯನ್ನು ಪಡೆದುಕೊಳ್ಳುತ್ತಾ, ಶೋಷಿತರ-ದಮನಿತರ ಪರವಾದ ‘ಸೃಜನಶೀಲ ಬಂಡಾಯ’ ವೊಂದು ಧಾರೆಯಾಗಿ ಹರಿಯುತ್ತಿದೆ.


ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸಿದಾಗ- ಸುಮಾರು ಹತ್ತನೇ ಶತಮಾನದಲ್ಲೇ ಜಾತಿಪದ್ಧತಿಯನ್ನು ನಿರಾಕರಿಸುವ, ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪರಿಭಾವಿಸುವ ಧೋರಣೆಗಳು ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ವ್ಯಕ್ತಗೊಂಡಿವೆ. ಆ ನಂತರದ ಎಲ್ಲ ಹರಿವುಗಳೂ ಜಾತಿಸಮಾನತೆ, ವ್ಯಕ್ತಿಘನತೆ, ಲಿಂಗತಾರತಮ್ಯದ ನಿರಾಕರಣೆ, ಕಾಯಕದ ಅಗತ್ಯತೆಗಳನ್ನು ತಾತ್ತ್ವಿಕ ನೆಲೆಗಳಿಂದ ಶೋಧಿಸಿ ಹೇಳುತ್ತಾ ಜನಸಾಮಾನ್ಯರ ಏದುಸಿರುಗಳಿಗೆ ಸಾಂತ್ವನದ ಬೀಜಗಳನ್ನು ಬಿತ್ತಿಹೋಗಿವೆ.


‘ಜಾತಿ'ಯೆಂಬ ಶೂಲಕ್ಕೆ ಸಿಕ್ಕು ಅಸ್ಪೃಶ್ಯತೆಯ ನೋವುಣ್ಣುತ್ತಿದ್ದ ದಲಿತರು ಅಕ್ಷರದ ಅಂಗಳಕ್ಕಿಳಿದು ತಮ್ಮ ಒಳಗುದಿಗಳಿಗೆ ಭಾಷೆಯ ಆಕಾರ ನೀಡಿದ್ದು ಸಾಹಿತ್ಯ ಪರಂಪರೆಯ ಒಂದು ಮಹತ್ಕ್ರಾಂತಿಯೇ ಸರಿ. ಹೊಸಗನ್ನಡದಲ್ಲಿ ದೇವನೂರು ಮಹಾದೇವ, ಸಿದ್ದಲಿಂಗಯ್ಯರಿಂದ ಮೊದಲುಗೊಂಡ ಈ ವೈಚಾರಿಕ ಸಂಘರ್ಷ, ಈಗ- ಜಾಗತೀಕರಣ ಒಡ್ಡುತ್ತಿರುವ ಸಂಕೋಲೆಗಳಿಂದ ಬಿಡುಗಡೆ ಹೊಂದಲು- ಅನೇಕ ಗೊಂದಲಗಳ ನಡುವೆಯೂ (ಒಳಜಾತಿಗಳ ಉಗಮ, ಸೀಮಿತ ದಲಿತಾನುಭವ ಇತ್ಯಾದಿ) ವಿಭಿನ್ನ ಸಾಧ್ಯತೆಗಳನ್ನು ಸೃಷ್ಟಿಸುತ್ತಾ ಮುನ್ನಡಿಯಿಟ್ಟಿದೆ.


‘ದಲಿತ ಸಂವೇದನೆ’ಯು ಇಂದು ದಲಿತೇತರ ಬರಹಗಾರರ ಚಿಂತನಾಕ್ರಮವಾಗಿಯೂ ರೂಪುಗೊಂಡಿದೆ. ಕನ್ನಡ ಕಥನ ಪರಂಪರೆಯಲ್ಲಿ ಚದುರಂಗ, ಚಿತ್ತಾಲ, ನಿರಂಜನ, ಕುವೆಂಪು, ಕಾರಂತ, ಕಟ್ಟೀಮನಿ , ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಕುಂ.ವೀ., ಗೀತಾ ನಾಗಭೂಷಣ, ವೈದೇಹಿ ಮುಂತಾದವರ ಭಾವನಾತ್ಮಕ ಅಭಿವ್ಯಕ್ತಿಯಲ್ಲಿ ದಲಿತ ಸಂವೇದನೆಯು ಸುಳಿದುಹೋಗಿದೆ. ಈ ಧಾರೆ ಇಂದಿಗೂ ಪ್ರವಹಿಸುತ್ತಿದೆ; ಹೊಸ ತಲೆಮಾರಿನ ಇಂತಹ ಮಾದರಿಗಳಂತೂ ನವೀನ ತಂತ್ರಗಳಲ್ಲಿ ಸುತ್ತ ಉರಿಯುತ್ತಿರುವ ಪುರೋಹಿತಶಾಹಿ, ಯಾಜಮಾನಿಕೆ, ಜಮೀನ್ದಾರಿಕೆ, ಅಧಿಕಾರಶಾಹಿತ್ವಗಳ ಮೇಲೆ ತಣ್ಣನೆಯ ನೀರು ಚೆಲ್ಲಿ ನಂದಿಸುತ್ತಿದೆ. ಎಂಬತ್ತು-ತೊಂಬತ್ತರ ದಶಕದಷ್ಟು ಚಳುವಳಿಗಳ ಕಾವಿಲ್ಲದ ಸದ್ಯದ ಕಾಲಘಟ್ಟದಲ್ಲಿ ಜಾತಿ, ಭಾಷೆ, ಪ್ರಾದೇಶಿಕತೆ, ಸಂಸ್ಕೃತಿ ಮುಂತಾದ ಅಸ್ಮಿತೆಗಳು ಸಶಕ್ತವಾಗಿ ರೂಪುಪಡೆಯುತ್ತಾ ‘ಸಾಮಾಜಿಕ ನ್ಯಾಯ’ದ ಹೊರಳುಗಳಿಗೆ ಸಿದ್ಧಗೊಳ್ಳುತ್ತಿದೆ. ಮಹಿಳಾ ಹಾಗೂ ಮುಸ್ಲಿಂ ಧಾರೆಯೂ ದಲಿತಪ್ರಜ್ಞೆಯ ಭಾಗವೆಂಬಂತೆ ಹರಿದುಬರುತ್ತಿದೆ.



ಡಾ.ಕವಿತಾ ರೈ - ಈ ತಲೆಮಾರಿನ, ಬರಹವನ್ನು ಗಂಭೀರವಾಗಿ ಪರಿಗಣಿಸಿಕೊಂಡಿರುವ ಬರಹಗಾರ್ತಿ. ಹಕ್ಕಿಹರಿವ ನೀರು, ನೀರ ತೇರು, ನೀರ ತೇಜಿಯನೇರಿ, ಲೋಕಾಮುದ್ರಾ ಮುಂತಾದ ನೀರಿನ ಹರಿವುಳ್ಳ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವ ಇವರು, ಕಾವ್ಯ, ಕತೆ, ನಾಟಕ, ವಿಮರ್ಶೆ, ಸಂಪಾದನೆ ಮುಂತಾದ ಪ್ರಕಾರಗಳಲ್ಲಿ ಅನನ್ಯ ಒಳನೋಟಗಳನ್ನು ಬಿತ್ತಿದವರು. ವಿಭಿನ್ನ ಪ್ರಾದೇಶೀಕತೆ, ಸ್ಥಾಪಿತ ವ್ಯವಸ್ಥೆಯ ವಿರುದ್ಧದ ತಾತ್ವಿಕ ಪ್ರತಿರೋಧ(ಸ್ತ್ರೀತ್ವದ ಹಿನ್ನೆಲೆಯಲ್ಲಿ) ಇವರ ಬರಹ ಮಾದರಿಗಳ ಪ್ರಮುಖ ಲಕ್ಷಣಗಳು.


ನಾಟಿ ಓಟ - ಕವಿತಾ ರೈಯವರ ಮಹತ್ವದ ಕತೆಗಳಲ್ಲೊಂದು. ಅದು 2010ರ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ಪಡೆದ ಕತೆ. ಸಾಮಾಜಿಕ-ಸಾಂಸ್ಕೃತಿಕ ಪಟ್ಟಭದ್ರರ ಕೈಯ್ಯಾಳುಗಳಾಗಿ ದುಡಿಯುತ್ತಾ ಎಲ್ಲ ಅ ಪಮಾನಗಳನ್ನು ಕರುಳಿನೊಳಗೆ ಹೂತಿಟ್ಟುಕೊಂಡು ಬದುಕಿಕೊಳ್ಳುತ್ತಿರುವ ದಲಿತರ; ದಲಿತ ವಿಧವೆಯೊಬ್ಬಳ ದೇಹ ಮತ್ತು ಶ್ರಮಶಕ್ತಿ ಪುರುಷ ಯಾಜಮಾನಿಕೆಯ ಭೋಗವ್ಯವಸ್ಥೆಗೆ ಬಲಿಯಾಗುವ ಮತ್ತು ಆಕೆ ಅದರಿಂದ ಸ್ವಯಂ ಬಿಡುಗಡೆಗೊಳ್ಳುವ ವಸ್ತುವನ್ನೊಳಗೊಂಡ ಕತೆ ಅದು. ಬದುಕುವುದೇ ಮುಖ್ಯ ಎಂದಷ್ಟೇ ಪರಿಭಾವಿಸುವ ಆಕೆಯು ಹಣ ಮತ್ತು ಹೆಂಡದ ಮೇಲಿನ ಮೋಹಕ್ಕಾಗಿ ಪ್ರತೀಬಾರಿ ಆಂತರಿಕವಾಗಿ ಪ್ರತಿಭಟಿಸಿಕೊಂಡರೂ,ಅದನ್ನು ಬಹಿರಂಗಗೊಳಿಸಲಾಗದಷ್ಟು ನಿರ್ವಾತಗೊಂಡು ಲೈಂಗಿಕ ಅತ್ಯಾಚಾರಗಳನ್ನು ಸಹಿಸಿಕೊಳ್ಳುತ್ತಾಳೆ, ಬಿಡುಗಡೆಯ ಹಂಬಲವೊಂದು ಅವಳ ಆಂತರ್ಯದಲ್ಲಿ ದಟ್ಟೈಸಿ ಜೀವನದ ಹೊಸ ದಿಕ್ಕಿಗೆ ಮಗ್ಗಲು ಬದಲಾಯಿಸುತ್ತಾಳೆ – ಇದು ಈ ಕತೆಯ ಹಂದರ.



‘ನಾಟಿ ಓಟ’ ಕತೆಯ ನಾಯಕಿ ದೇವಣಿ ಯ ಮೂಲಕ ಕೊಡಗಿನ ಸಾಂಸ್ಕೃತಿಕ ಪರಿಸರದಲ್ಲಿ ಕೆಂಬಟ್ಟಿ ಜನಾಂಗದ ಬದುಕಿನ ಸಂಕಷ್ಟವನ್ನು ಬಯಲಿಗೆಳೆಯುತ್ತಾರೆ ಲೇಖಕಿ. “ಕೊಡಗಿನ ಮೂಲನಿವಾಸಿಗಳೆಂದರೆ ಕೊಡವರು, ಕುಡಿಯರು ಮತ್ತು ಕೆಂಬಟ್ಟಿ ಹೊಲೆಯರು” ಎನ್ನುತ್ತದೆ ನಡಿಕೇರಿಯಂಡ ಚಿಣ್ಣಪ್ಪ ವಿರಚಿತ ಪಟ್ಟೋಳೆ ಪಳಮೆ . ಕೊಡವರ ಪ್ರವೇಶದ ಮುನ್ನವೇ ಈ ಜನಾಂಗಗಳು ಇಲ್ಲಿ ನೆಲೆಯೂರಿದ್ದವು ಎಂಬುದು ಈ ಜನಾಂಗದ ಹಿರಿಯರ ಅಭಿಮತ.


ಕೆಂಬಟ್ಟಿ, ಎರವ, ಕುರುಬ ಮುಂತಾದ ಬುಡಕಟ್ಟು ಜನಾಂಗಗಳ ಪರಿಮಿತವಾದ ಜನಸಂಖ್ಯೆಯಿಂದಾಗಿ ಅವು ರಾಜಕೀಯ ವ್ಯವಸ್ಥೆಯ ಕಣ್ಣುಕುಕ್ಕಿಲ್ಲ. ಅವರ ಬಡತನ ಮತ್ತು ಸಂಖ್ಯಾತ್ಮಕ ಮಿತಿಯಿಂದಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಐಡೆಂಟಿಟಿಯೂ ಸಿಗದೆ ಮುಖ್ಯವಾಹಿನಿಯಿಂದ ದೂರವೇ ಉಳಿದುಹೋಗಿವೆ.


ವಾಟೆಬಿದಿರು, ಬೆತ್ತಗಳಿಂದ ಬುಟ್ಟಿ ನೇಯುವುದು, ವಾಲೆಗರಿಯಿಂದ ಚಾಪೆ ಹೆಣೆಯುವುದು ಕೆಂಬಟ್ಟಿಗರ ಮೂಲ ಕಸುಬುಗಳು. ಇಂದಿಗೂ ಅದನ್ನು ರೂಢಿಸಿಕೊಂಡು ಹೋಗುತ್ತಿದ್ದರೂ ಅದು ಪೂರ್ಣಕಾಲಿಕವಲ್ಲ. ಸರ್ಕಾರದ ಅನೇಕ ಕಾಯ್ದೆಗಳಿಂದ ಅ ವರು ಕಾಡಿನಿಂದಾಚೆಯೇ ಉಳಿದು ತಮ್ಮ ‘ಕುಮೆರಿ’ ಮಾದರಿಯ ಬೇಸಾಯ ಕ್ರಮವನ್ನೂ, ಮೂಲ ಸಂಸ್ಕೃತಿಯನ್ನೂ ಮರೆತು ಶ್ರೀಮಂತ ಕೊಡವ ಕುಟುಂಬಗಳ ಗದ್ದೆ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ತಮ್ಮ ಭೌಗೋಳಿಕ ಪರಿಸರದ ಆಸುಪಾಸಿನಲ್ಲಿರುವ ಕೊಡವರನ್ನೇ ಆದರ್ಶಪ್ರಾಯರನ್ನಾಗಿಸಿ, ಅವರನ್ನು ಅನುಕರಿಸುತ್ತಾ ,ಅನುಸರಿಸುತ್ತಾ ಬದುಕಿಕೊಳ್ಳುತ್ತಿದ್ದಾರೆ.


ಒಂದು ಸಂಸ್ಕೃತಿಯ ವಿನಾಶ; ಅದರಲ್ಲೂ ದಲಿತ ಸಂಸ್ಕೃತಿಯೊಂದು ತನ್ನ ಮೂಲ ನೆಲೆಯನ್ನು ಕಳೆದುಕೊಂಡು ಪರಕೀಯತೆಯೊಂದಿಗೆ ವಿಲೀನಗೊಳ್ಳುವ ಸಂಗತಿ ಘೋರವಾದದ್ದು. ಈ ಕತೆಯಲ್ಲಿ ಬರುವ ಎರವ, ಕುರುಬ ಜನಾಂಗಗಳೂ ಇದಕ್ಕೆ ಹೊರತಾಗಿಲ್ಲ.



ದುಡಿದು ಜೋಮುಗಟ್ಟಿದ ಕೀಲುಗಳನ್ನು ಬಿಡಿಸಿಕೊಂಡು
ಸೀಳೊಡೆದು ಮಸಿತುಂಬಿ ದೊರಗುಗಟ್ಟಿದ ಅಂಗೈಗಳ ದೇವಣಿಗೆ ಗಟ್ಟಿ ತೇಗದ ಮರದಂತಹ ರಟ್ಟೆ, ತೋಳು, ತೊಡೆ, ಕೈಕಾಲುಗಳೇ ಆಸ್ತಿ . ಕೊಡವ ಕುಟುಂಬದ ಮುಕ್ಕಾಟಿರ ಕರುಂಬಯ್ಯ-ಗೌರವ್ವ ದಂಪತಿಗಳ ಗದ್ದೆಗೆ ಮುಂಜಾನೆ ಕೆಲಸಕ್ಕೆ ಹೋಗುವ ಮುನ್ನ ರೈಟರ್ ಅಚ್ಚಣ್ಣ ನ ವಿಕೃತ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದು ಅವಳ ನಿತ್ಯ ಕಾಯಕ. ಸನ್ನು, ಚಂದ್ರ ರೆಂಬ ಇಬ್ಬರು ಮಕ್ಕಳ ತಾಯಿ. ಪತಿ ಕುಟ್ಟಡ ತಿಮ್ಮ ನೆನಪು ಮಾತ್ರ.


ವಾರಕ್ಕೊಮ್ಮೆ ಸಂತೆಗೆ ಹೋಗಿ ಚಾಪೆ ಮತ್ತು ಬುಟ್ಟಿ (
ಕುಳಿಯ, ಬರಿಪೊಡ, ಕೂರಿ, ಮಕ್ಕರಿ, ಬತ್ತದ ತಡಿಕೆ ) ಗಳನ್ನು ಮಾರುವ ಕಾಯಕವನ್ನು ದೇವಣಿ ಚರಿತ್ರೆಯ ಪಳಯುಳಿಕೆಯಾಗಿ ಉಳಿಸಿಕೊಂಡಿದ್ದಾಳೆ. ಜಾಗತೀಕರಣದ ಹಸ್ತ ಸಂತೆಕಟ್ಟೆಯನ್ನು ತನ್ನ ಬೆರಳ ಸಂದುಗಳಲ್ಲಿ ಬಿಗಿಯಾಗಿ ಸಿಕ್ಕಿಸುತ್ತಿರು ವ ಈ ಹೊತ್ತಲ್ಲಿ ಅವಳ ಗುಡಿಕೈಗಾರಿಕೆಯ ಉತ್ಪನ್ನಗಳು ರೂ.75ನ್ನು ಮೀರುವುದಿಲ್ಲ.


ಆಪವಂಗೆ ಆಕು ಆಕಪಣಿ (ಬಲ್ಲವನೇ ಬಲ್ಲ ಗದ್ದೆಯ ಕೆಲಸ) ಎಂಬ ನಾಣ್ಣುಡಿಯಂತೆ ‘ ನೇರವಿಟ್ಟುಕೊಳ್ಳದ ಕಣ್ಣೋಟವು ಕೈಯ ಕೌಶಲದಿಂದಲೇ ಬಿರುಸಿನಿಂದ ಮೂರುನುಲಿಯಂತೆ ಬರಬರನೆ ಊರುವ’ ಸಾಮರ್ಥ್ಯವನ್ನು ದೇವಣಿ ದಕ್ಕಿಸಿಕೊಂಡಿದ್ದಳು.


ರೈಟರ್ ಅಚ್ಚಣ್ಣ ದಲಿತರ ಶೋಷಕನಾಗಿ, ಅವಕಾಶವಾದಿಯಾಗಿ, ಭೂತ-ವರ್ತಮಾನಗಳ ಆಳುವ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ.
ಬಡಪಾಯಿ ಕೆಂಬಟ್ಟಿ, ಎರವ, ಕುರುಬ ಆಳುಗಳ ಜುಟ್ಟುಬಿಡಿಸಿ ನಯಗೊಳಿಸುವ , ನೋಟದಲ್ಲೇ ಹೆಣ್ಣಾಳುಗಳನ್ನು ಮರಗಟ್ಟುವಂತೆ ಮಾಡುವ ಯಾಜಮಾನಿಕೆ ಅವನದು.


ನಾಟಿಮಾಡುವ ಮಧ್ಯಾಹ್ನ ಭರ್ಜರಿ ಊಟಕ್ಕೆಂದು ಒಡೆಯನ ಮನೆಗೆ ತೆರಳುತ್ತಿದ್ದಾಗ ಅ ಚ್ಚಣ್ಣನ ಕಾಲಿಗೆ ಚುಚ್ಚಿದ ಮುಳ್ಳು ತೆಗೆಯಲು ದೇವಣಿ ಒಲ್ಲೆನೆಂಬ ಸೂಚನೆಕೊಟ್ಟಾಗ, ಗುಬ್ಬಿ ವಿಧಿಯಿಲ್ಲದೆ ಆ ಕೆಲಸಕ್ಕಿಳಿದು ವಿಫಲಳಾಗುತ್ತಾಳೆ. ಮುಳ್ಳುತೆಗೆಯುವಾಗ ಆತನ ಭಾರವನ್ನೆಲ್ಲ ಅವಳ ಪುಟ್ಟ ದೇಹದ ಮೇಲಿಳಿಸಿ ‘ಹಲ್ಕಟ್ ರಂಡೆ’, ‘ಮೋಟು ಶನಿ’ ಎಂದೆಲ್ಲ ಬೈಗುಳಗಳ ಭಾರವನ್ನೂ ಹೊರಿಸುತ್ತಾನೆ. ಮುಳ್ಳಿಟ್ಟವರನ್ನು ಪತ್ತೆಹಚ್ಚಲು ಸಂಶಯದ ಅವನ ನೋಟ ಎಲ್ಲ ದಲಿತರನ್ನು ಹೊಕ್ಕುತ್ತದೆ.


ಮೂರ್ನಾಡಿನ ಸಂತೆಯಲ್ಲಿ ಅಚ್ಚಣ್ಣ ನೀಡಿದ 50ರ ನೋಟುಗಳು ದೇವಣಿಯನ್ನು ತಬ್ಬಿಬ್ಬು ಮಾಡಿ ಅವನ್ನು ಸ್ವೀಕರಿಸುವಂತೆ ಮಾಡುತ್ತವೆ. ಸಂತೆಯಿಂದ ಹಿಂತಿರುಗುವಾಗ ಕುಡಿದು ಮತ್ತಿನಲ್ಲಿದ್ದ ದೇವಣಿಯನ್ನು ಬಲವಂತವಾಗಿ ಕೂಡುತ್ತಾನೆ ಅಚ್ಚಣ್ಣ. ಆಮೇಲೆ ‘ಮರೆಗಳಿರಲಿಲ್ಲ ಪೊದೆಗಳಿರಲಿಲ್ಲ’ ಎಂಬಂತೆ ಅವರು ಕೂಡತೊಡಗುತ್ತಾರೆ.


ದೇವಣಿಯ ಕನಸುಗಳಿಗೆ, ಚಿಂತನೆಗಳಿಗೆ ನಾಟಿ ಮುಗಿದ ಮೇಲಿನ ನಾಟಿ ಓಟದ ಸಂದರ್ಭ ರೆಕ್ಕೆ ಮೂಡುತ್ತದೆ. ತೀರಿಹೋದ ತನ್ನ ಗಂಡ ತಿಮ್ಮನ ಜಿಂಕೆಯ ಓಟ ಕಣ್ಣೊಳಗೆ ಓಡತೊಡಗುತ್ತದೆ. ಮನೆಗೆ ಹಿಂತಿರುಗುವಾಗ ಸಿಕ್ಕ ಕೊಕ್ಕರ್ಚಿ ಮುಳ್ಳಿನ ಗೆಲ್ಲನ್ನು ಒಲೆಯಲ್ಲಿಟ್ಟು ಸುಡುತ್ತಾಳೆ. ಮಗ ಚಂದ್ರ ಹೆಗಲಿಗೆ ಜೋತುಬಿದ್ದಿರುತ್ತಾನೆ.




‘ನಾಟಿ ಓಟ’ದ ಸ್ತ್ರೀಕೇಂದ್ರಿತ ದಲಿತಪ್ರಜ್ಞೆ ಕೇವಲ ಜಾತಿ, ಶೋಷಣೆಗಳ ಸಂವೇದನೆಗಳನ್ನಲ್ಲದೆ ಅದರಾಚೆಗೂ ವಿಸ್ತರಣೆಗೊಂಡು ಪ್ರಕಟಣೆಗೊಂಡಿದೆ:

ಪ್ರತಿಭಟನಾ ನೆಲೆ :

ಇಲ್ಲಿನ ಪ್ರತಿಭಟನಾ ಸ್ವರೂಪವು ತಣ್ಣಗೆ ಹೊಗೆಯಾಡುತ್ತಲೇ ಕಡೆಗೆ ಒಮ್ಮೆಲೇ ಹೊತ್ತಿಕೊಳ್ಳುತ್ತದೆ. ಅದೊಂದು ಸ್ತ್ರೀಬಂಡಾಯ. ಸಾಂಸ್ಕೃತಿಕ ಪಲ್ಲಟವೊಂದರ ಮುನ್ನುಡಿ. ದಲಿತ ವಿಧವೆಯೊಬ್ಬಳ ಪ್ರತಿಭಟನೆ ಒಳಮುಖಿಯಾಗಿ, ಶಾಂತಸ್ವರೂಪಿಯಾಗಿ ಸಾಗಿದರೂ ಅದರ ಕಾವು ಮಾತ್ರ ಪ್ರಕರವಾದದ್ದು. ಅಲ್ಲಿ ಕಥನಗಾರಿಕೆಯ ಏರುಸ್ವರವಿಲ್ಲ; ಹುಸಿಕ್ರಾಂತಿಯಿಲ್ಲ. ಲೇಖಕಿಯು ದಲಿತ ವರ್ಗದ ಮೂಢ ಹಾಗೂ ಶೋಷಣಾಯುಕ್ತ ಜೀವನವನ್ನು, ಸಂಸ್ಕೃತಿಯ ಇಂಚಿಂಚಿನ ಸೂಕ್ಷ್ಮತೆಗಳನ್ನು ಮೈಕ್ರೋಸ್ಕೋಪಿಕ್ ಕಣ್ಣುಗಳಲ್ಲಿ ಸೆರೆಹಿಡಿಯುವ ಪ್ರಯತ್ನವನ್ನು ಮಾಡುತ್ತಾರೆ.


ದೇವಣಿಯ ಪ್ರತಿಭಟನೆಯು ಅಚ್ಚಣ್ಣನ ಕಾಲಿಗೆ ಚುಚ್ಚಿದ್ದ ಕೊಕ್ಕರ್ಚಿ ಮುಳ್ಳ ನ್ನು ತೆಗೆಯಲು ಕರೆದಾಗ ಅ ದಕ್ಕೆ ಸ್ಪಂದಿಸದೆ ಮುನ್ನುಗ್ಗುವ ಮೂಲಕ ಮೊದಲ್ಗೊಳ್ಳುತ್ತದೆ. ಅವನ ಕಾಲಿಗೆ ಹೊಕ್ಕುವುದು ಅ ವಳ ಆಕ್ರೋಶದ ಮುಳ್ಳು. ವಿಧವೆಯೊಬ್ಬಳು ಪರಪುರುಷನೊಂದಿಗೆ ‘ ಕಳ್ಳಸಂಬಂಧ ’ವನ್ನು ಗಟ್ಟಿಯಾಗಿಯೇ ಧೃಢೀಕರಿಸುವುದೂ ಕೂಡ ಬಂಡಾಯವೇ. ಬೇಕಿದ್ರೆ ಹೇಳಿ, ರೈಟ್ರಯ್ಯನಿಗೆ ನಿಮ್ಮ ಪೊರೆಗೆ ಬರೋದಕ್ಕೆ ಹೇಳ್ತೇನೆ ಎಂಬ ಮಾತು ಉಳಿದ ಹೆಂಗಸರ ಗಂಟಲು ಕಟ್ಟಿಸುತ್ತದೆ. ಕಾರಣ, ಅವಳ ಒಪ್ಪಿಗೆಯಿಲ್ಲದೆ ಮಾಡುವ ಆಕ್ರಮಣ ಅದು. ಅಂತಹ ಸಂದರ್ಭದಲ್ಲಿ ‘ ಸಿಟ್ಟಿನಿಂದ ಅವನ ಕೈಯನ್ನು ಕಚ್ಚಲು, ಕಾಲುಗಳನ್ನು ಒದೆಯಲು ’ ಯತ್ನಿಸುತ್ತಾಳೆ. ಸಿಟ್ಟು, ವಿವಶತೆ, ದ್ವೇಷ, ನೋವು, ಅವಮಾನ ಎಲ್ಲವನ್ನೂ ಚೀರಬೇಕೆನಿಸುತ್ತದೆ . ಹೀಗಾಗಿ ಮೂಕ ಪಶುವಿನ ಮೇಲೆ ಎರಗುವ ಆತನ ಲಜ್ಜೆಗೇಡಿತನದ ಅವಮಾನಕ್ಕೆ ಮದ್ದೆರೆಯಲು ಸರಿಯಾದ ಸಮಯಕ್ಕೆ ಕಾಯುತ್ತಾಳೆ.


ಬಿಡುಗಡೆಯ ಹಂಬಲ :

ಬಿಡುಗಡೆಯೆಂಬುದು ದಲಿತ ಸಮಾಜದ ಸದಾಕಾಲದ ಹಂಬಲ. ಇಲ್ಲಿ ಅದು ದೇವಣಿಯೊಳಗೆ ಕಾವುಗೊಂಡು ಪೊರೆಹರಿದು ಹೊರಬರುತ್ತದೆ. ಚರಿತ್ರೆಯ ದಾರಿದ್ರ್ಯತೆ ಇಲ್ಲಿ ತೆರೆದುಕೊಳ್ಳುತ್ತದೆ. ಹಸಿವು, ದುಡಿತ, ರಕ್ತಹೀನತೆ, ಗಂಡನ ಜ್ವರ, ಸಾವು, ಮತ್ತು ಅವೆಲ್ಲವುಗಳನ್ನು ಮೀರಿಸಿದ ಅಚ್ಚಣ್ಣ ನೆಂಬ ನಿರಂಕುಶವಾದಿಯ ಭಯ . ತನ್ನ, ತನ್ನವರ ಕೊಕ್ಕರ್ಚಿ( ಕಾಲನ್ನೇ ಕೊಳೆಯಿಸುವ) ಮುಳ್ಳಿನಂತಹ ‘ಅಜ್ಜನ ಕಾಲದ’ ಚರಿತ್ರೆಯ ಹಿಂಸೆಯನ್ನು ‘ಒಲೆ’ಯ ವ್ಯಕ್ತಿಗತವಾದ ಹಾಗೂ ಆಂತರಂಗಿಕ ನೆಲೆಯಲ್ಲಿ ಸುಟ್ಟು ಹೊಸಯುಗವೊಂದಕ್ಕೆ ಯುಗಪಲ್ಲಟಗೊಳ್ಳುತ್ತಾಳೆ; ಮಕ್ಕಳಿಬ್ಬರ ಭಾರವನ್ನು ಹೆಗಲಿಗೇರಿಸಿಕೊಳ್ಳುತ್ತಾ ಬಿಡುಗಡೆಗೊಳ್ಳುತ್ತಾಳೆ.


ಆಯ್ಕೆಯ ಸ್ವಾತಂತ್ರ್ಯ :

ದಲಿತ ಸ್ತ್ರೀಯರಿಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲ. ವಿಧವೆಯಾಗಿ ಬೇರೊಬ್ಬ ಗಂಡಿನ ಮರದ ತೋಳುಗಳಿಂದ ಬಿಡಿಸಿಕೊಳ್ಳುವ ಸ್ವಾತಂತ್ರ್ಯವಿಲ್ಲ. ಅ ವರು ಶೋಷಣೆಯ ಭಾರವನ್ನು ಹೊರಬೇಕು; ಹೊರುತ್ತಲೇ ಅವರ ಕಾಲಿಗೆ ಹೊಕ್ಕಿರುವ ಇ ವರದೇ ದ್ವೇಷದ ಮುಳ್ಳನ್ನು ಕಿತ್ತುಕೊಡಬೇಕು. ದೇವಣಿಯ ಗೆಳತಿ ಗುಬ್ಬಿಯ ಪುಟ್ಟ ದೇಹದ ಮೇಲೆ ಭಾರವನ್ನು ಹೊರಿಸಿ ಮುಳ್ಳುಸಿಗದಿದ್ದಾಗ ಅಚ್ಚಣ್ಣನ ಬಾಯಿಂದ ಹೊರಬರುವ ‘ಹಲ್ಕಟ್ ರಂಡೆ’, ‘ಮೋಟು ಶನಿ’ ಎಂಬ ಶಬ್ದಗಳು ದಲಿತ ಲೋಕದ ಸ್ವಾತಂತ್ರ್ಯಹರಣದ ಸಂಕೇತಗಳು.


ದೇವಣಿಯು ಕಳ್ಳಿನ ಹದ ಮಧುರದ ನೆನಪನ್ನು ಮೀರಿಸುವಂತೆ ನಕ್ಕು ಅಚ್ಚಣ್ಣ ನೀಡಿದ 50ರ ನೋಟುಗಳನ್ನು ಸ್ವೀಕರಿಸಿದ್ದು ಸೋಜಿಗವೆನಿಸುತ್ತದೆ. ಅವಳ ಆಯ್ಕೆ ,ಒಳಸಂಘರ್ಷಗಳು ಇದ್ದಕ್ಕಿದ್ದಂತೆ ಕುಸಿದು ಸಮಾಧಿಸ್ಥಿತಿಗೆ ತಲುಪುವುದು ಪ್ರಶ್ನಾರ್ಹವಾದರೂ, ಅಜ್ಞಾನದ ಕೂಪದೊಳಗಿನ ಅವಳ ಸಮುದಾಯದ ಪ್ರತಿಭಟನೆಗಳಿಗೆ ಯಾವುದೇ ತಾತ್ತ್ವಿಕವಾದ ರೂಪುರೇಷೆಗಳಿಲ್ಲದಿರುವುದರಿಂದ ಮತ್ತದೇ ಎಡವುವಿಕೆ ನಡೆದುಬಿಡುತ್ತದೆ.


ನಿಷ್ಠೆ ಮತ್ತು ಮುಗ್ಧತೆಯ ಅನಾವರಣ :

ಬುಟ್ಟಿ ಚಾಪೆಗಳನ್ನು ನೇಯುವ ಕಥಾನಾಯಕಿ ತನ್ನ ಒಡೆಯನಿಗೆ ಕಟ್ಟಿಕೊಡುವುದು ‘ಗಟ್ಟಿಕುಕ್ಕೆ’ಯನ್ನು. ಅವಳ ನಿಷ್ಠೆ ಮತ್ತು ದಲಿತ ಲೋಕದ ‘ಮಗುತನ’ವನ್ನು ಇದು ನೆನಪಿಗೆ ತರುತ್ತದೆ. ಅದು ಆಳುವ ವರ್ಗದ ದಂಡನೆಗಳಿಂದ ಇನ್ನೂ ಹೊರತಾಗದ ಅ ಸ್ತಿತ್ವದ ಪ್ರಶ್ನೆಯೂ ಹೌದು. ಕಾಸು ಎಣಿಸುವ ಆ ಸೆಗೆ ಬಿದ್ದ ದೇವಣಿಯ ಅಂಗೈಯಲ್ಲಿ ‘ಬಿದಿರ ಮುಳ್ಳಿನ ಗಾಯದ ಗೀರುಗಳು’ ಮಾಸುವುದಿಲ್ಲ. ಅಂತಹ ನೋವಿನ ಗೀರುಗಳನ್ನು ಸಹಿಸುತ್ತಾ ಬದುಕು ಕಟ್ಟಿಕೊಳ್ಳಲು ಕನಸು ಕಾಣುವ ಭೂಮಿಯ ಗುಣದವಳು ಆಕೆ.


ದೇವಣಿ, ಗುಬ್ಬಿ, ಸಾಬ, ಐತಪ್ಪು, ಚೋಮಣಿ, ಅಕ್ಕಮ್ಮ ಮಾತು ಮರೆತವರಾಗಿ ನಾಟಿನೆಡುವ ಹುರುಪು ತೋರಿಸುವುದು ತಳವರ್ಗದವರ ಮುಗ್ಧ ಕರ್ತವ್ಯಪ್ರಜ್ಞೆಯನ್ನು ಬಿಂಬಿಸುತ್ತದೆ. ವಾಸ್ತವವಾಗಿ ಕೆಂಬಟ್ಟಿ, ಕುಡಿಯ ಜನಾಂಗಗಳಲ್ಲಿ ಪ್ರಚಲಿತವಿರುವ ಉಪ್ಪದೇ ಬುಟ್ಟ್ ಞಂಡ್ ಪುಡಿಚ ( ಉಳುವುದ ಬಿಟ್ಟು ಏಡಿಹಿಡಿದಂತೆ), ಕಾಲ್ಕ್ ಬುದ್ದವಂಡ ಎದೆ ಚವುಟತೆ (ಕಾಲಿಗೆ ಬಿದ್ದವನ ಎದೆಗೆ ತುಳಿಯದಿರು) ಮುಂತಾದ ಗಾದೆಮಾತುಗಳು ಅವರ ಜೀವನಕ್ರಮದಲ್ಲಿ ಅಂಟಿಕೊಂಡಿರುವ ಮುಗ್ಧತೆ ಮತ್ತು ಪ್ರಾಮಾಣಿಕತೆಯನ್ನು ಸಾರಿಹೇಳುತ್ತವೆ.


ಶ್ರಮ ಪರಿಹಾರ ಮಾರ್ಗ :

ಓಲೋಹೊಯ್ಯ ಹೋಹಯ್ಯ ಓವಯ್ಯ ಓಹೋವಯ್ಯಾ ಎಂಬ ನಾಟಿಪದ ಶುರುವಾದಂತೆ ಅವರ ಮೈನರಗಳಲ್ಲಿ ಉತ್ಸಾಹ ಪುಟಿಯುತ್ತದೆ. ದಣಿವಿನ ಮರೆವಿಗಾಗಿ ಇಸ್ಮಾಲಿ ಅಯ್ಯನ ಅರಬಿಪಾಟ್, ಎರಟ್ಟಿಪಾಟ್ಟ್ಗಳ ಮೊರೆಹೋಗುತ್ತಾರೆ.


‘ನಾಟಿ ಓಟ’ ಎನ್ನುವುದು ನಾಟಿಕೆಲಸವಾದ ನಂತರದ ಮನರಂಜನಾ ಸ್ಪರ್ಧೆಯಷ್ಟೇ ಅಲ್ಲ , ಅದು ಈ ನೆಲದ ಸಂಸ್ಕೃತಿ ; ಬದುಕು. ಅದೊಂದು ಶ್ರಮವಿಮೋಚನೆಯ ಮಾರ್ಗವೂ ಹೌದು.


ಪ್ರಾಂತೀಯ ನುಡಿವೈಶಿಷ್ಟ್ಯ :

ಅಕ್ಷರದ ಹೊಸ್ತಿಲು ತುಳಿಯದ ದಲಿತರ ಆಡುನುಡಿಯ ಬೆರಕೆಯೊಂದಿಗೆ ಪ್ರಾಂತೀಯ ಜೀವನಾನುಭವಗಳನ್ನು ಅತಿವಾಸ್ತವಿಕ ನೆಲೆಯಿಂದ ಲೇಖಕಿ ಕಟ್ಟಿಕೊಡುತ್ತಾರೆ. ಕೊಡವ ಸಾಂಸ್ಕೃತಿಕ ಪರಿಸರದಲ್ಲಿ ಮಿಳಿತಗೊಂಡು ಬದುಕುವ ಇವರ ಭಾಷೆಯು ಕನ್ನಡದಲ್ಲಿ ಅಭಿವ್ಯಕ್ತಗೊಳ್ಳುವಾಗಲೂ ಅದರದ್ದೇ ಆದ ಶಬ್ದಗಳನ್ನು ಒಳಗೊಳ್ಳುತ್ತದೆ: ಆಪುಲೆ ಅವ್ವಯ್ಯಾ; ತುಪ್ಪಿದಳು; ತುಳಿಯ, ಬರಿಪೊಡ; ಮಂಡೆಪೊಡ, ಕುತ್ತುಂಬೊಳ್ಳ; ಕಾಕೋಟಜ್ಜ, ಇಗ್ಗುತಪ್ಪ, ಕಾವೇರಮ್ಮೆ, ಮುಕ್ಕಾಟಿರ, ಕುಟ್ಟಡ ಇತ್ಯಾದಿ.


ಹಸಿವು ಮತ್ತು ಆಹಾರ ಕ್ರಮ :

ಹಸಿವಿನ ಚಿತ್ರಣ ಕತೆಯಲ್ಲಿ ಕೆಲವೆಡೆ ತಣ್ಣಗೆ ಕಾಣಸಿಗುತ್ತವೆ. ಓಟಕ್ಕೆ ಮುನ್ನ ದೇವರಿಗೆ ‘ಮೀದಿ ಇಡು’ವಾಗಲೇ ಗದ್ದೆಯಲ್ಲಿದ್ದವರ ಹೊಟ್ಟೆ ಚುರುಗುಟ್ಟಿದ್ದು, ಐತಪ್ಪುವಿನ ಹೊಟ್ಟೆಯೊಟ್ಟಿಸಿಕೊಂಡ ನಾಯಿ ಏನೋ ನೋಡಿ ಬೊಗಳಿದ್ದು- ಇವು ಕೆಲವು ಮಾದರಿಗಳು.


ನಿಸರ್ಗದೊಂದಿಗೆ ಅವಿನಾಭಾವ ಸಂಬಂಧವನ್ನಿಟ್ಟುಕೊಂಡ ಕೆಂಬಟ್ಟಿ, ಎರವ, ಕುರುಬ ಮುಂತಾದ ಬುಡಕಟ್ಟು ಜನಾಂಗಗಳಿಗೆ ಅದರ ಉ ತ್ಪನ್ನಗಳೇ ಆಹಾರವಸ್ತುಗಳು. ತಪಲೆಯಲ್ಲಿದ್ದ ತಂಗಳನ್ನಕ್ಕೆ ಅಕ್ಕಿಹಿಟ್ಟು ಕೂಡಿಸಿ ನಾದಿ, ರೊಟ್ಟಿ ಬೇಯಿಸುವಷ್ಟು ಆಧುನೀಕತೆಯನ್ನು ಗಳಿಸಿಕೊಳ್ಳುತ್ತಾರಾದರೂ, ಓಟೆಹುಳಿ, ಗಾಂದಾರಿ ಮೆಣಸಿನ ಚಟ್ನಿ, ಬೆಲ್ಲ ಹಾಕಿದ ಕಾಫಿಯನ್ನು ಮರೆತಿಲ್ಲ. ಹೊಗೆಸೊಪ್ಪು, ಹೆಂಡ(ಬೈನೆಕಳ್ಳು, ಬಟ್ಟಿ ಸಾರಾಯಿ, ಅರ್ಮಿಕ್ಯಾಂಟೀನಿನ ರಮ್ಮು) – ಇವು ನೋವಿನ ಪರಿಹಾರಕ್ಕಾಗಿ ಕಂಡುಕೊಂಡ ಮಾರ್ಗಗಳು. ನಾಟಿ ದಿನದ ‘ಗದ್ದಳ’ ಊಟದ ಸಂದರ್ಭ ಹಂಚಿ ಉಳಿದ ‘ಅರ್ಧಬಾಟ್ಲಿ’ ರಮ್ಮು ಮೊಣ್ಣನ ಚಡ್ಡಿಯೊಳಗಿನ ಸೊಂಟದ ಹಗ್ಗವನ್ನು ಸೇರುತ್ತದೆ. ದೇವಣಿಯ ಕಳ್ಳಿನ ಚಟದಿಂದ ಅಚ್ಚಣ್ಣ ಅವಳ ಬೆನ್ನುಬೀಳುತ್ತಾನೆ.


‘ಕಳ್ಳು’ ದಲಿತ ಜನಾಂಗದ ಹಿನ್ನಡೆಯ ಮೂಲವೂ ಆಗಿ ವ್ಯಕ್ತಗೊಂಡಿದೆ. ಮಳೆಗಾಲದಲ್ಲಾದರೆ ತೋಡುನೀರಿನ ‘ಕೊಯಿಲೆ, ಕಂಡಿ, ಐಮೀನು, ಕಳಚೆ, ಹಾವುಮೀನು, ಚಾಪಳೆ, ಗೆಂಡೆ, ಕಣ್ಣಿಮೀನು, ಏಡಿ’ ಮುಂತಾದವು ಅವರ ಆಹಾರವಸ್ತುಗಳು.ದೇವಣಿಗೆ ‘ಕೇಚಕ್ಕಿ ಮೀಂಗರಿ ಕೂಳು’ ಎಂದರೆ ಪ್ರಾಣ.


ಅವರ ಆಹಾರಕ್ರಮ ಮೋಜಿನ ಸ್ವರೂಪದಲ್ಲ; ಅದು ಕಳ್ಳೇ ಇರಲಿ, ಮೀಂಗರಿಯೇ ಇರಲಿ, ಅದು ಹಸಿವನ್ನು ನೀಗಿಸಿಕೊಳ್ಳುವ ಕ್ರಮವಷ್ಟೆ. ಕಲಬೆರಕೆಯಿಲ್ಲದ ನೆಲಮೂಲದ ಆಹಾರವೇ ದಲಿತ ಕುಲದ ಜೀವಾಳ.

**

‘ನಾಟಿ ಓಟ’ ಕತೆಯು ದಲಿತ ಜನಾಂಗದ ನೈಜಗ್ರಹಿಕೆ, ಸೂಕ್ಷ್ಮಜ್ಞತೆಯ ಫಲ. ಶತಮಾನದಿಂದಲೂ ಅಲಕ್ಷಿತವಾದ ಜಾತಿಪಂಗಡಗಳು ಕಾಲದ ಕಾಲ್ತುಳಿತಕ್ಕೆ ಕೆಸರುಗದ್ದೆಯಲ್ಲಿ ಹೂತುಹೋದರೂ, ಮತ್ತೆ ಎದ್ದೆದ್ದು ಓಡುವ ಓಟವಿದೆಯಲ್ಲಾ- ಅದು ಈ ಕಾಲದಲ್ಲಿ ಬದುಕಿಕೊಳ್ಳುತ್ತಿರುವ ಅಂತಹದ್ದೇ ಜನರಿಗೆ ಆತ್ಮವಿಶ್ವಾಸ ತುಂಬುವ ‘ಟಾನಿಕ್’. ಪತಿಯ ಸಾವಿನೊಂದಿಗೆ ಸ್ವಾತಂತ್ರ್ಯವೂ ಸಡಿಲಗೊಳ್ಳುವ , ಸಾಮಾಜಿಕ ಅಭದ್ರತೆಯಲ್ಲೇ ಕಾಲ ತಳ್ಳಬೇಕಾದ ದಯನೀಯ ಸ್ಥಿತಿ ದಲಿತ ಹೆಣ್ಣಿನದು. ಇಂತಹ ಪಾತ್ರವೊಂದನ್ನು ಕೇಂದ್ರವಾಗಿಸಿಕೊಂಡ ಕತೆಯ ಅಂತಿಮ ಹೊರಳುವಿಕೆ ದಲಿತರ ಉದ್ಧಾರದ ಮುನ್ನುಡಿಯಾಗುತ್ತದೆ; ಅದು ಸದ್ಯೋವರ್ತಮಾನದ ತುರ್ತೂ ಹೌದು.
*

ಕಾಜೂರು ಸತೀಶ್
(26/06/2012)

Thursday, January 11, 2018

ಮೃತರ ಮನೆಯ ಗಾನ

(ಒಂದು ಅಸಂಗತ ಪದ್ಯ)


ಅವಳ ಚಿಕ್ಕಮ್ಮ ತೀರಿದ ದಿನ
ಭೇಟಿಯಾದೆವು ನಾವು
ಶವದ ಆಚೆ-ಈಚೆ ಕುಳಿತು
ಸಿಕ್ಕಾಪಟ್ಟೆ ಅತ್ತೆವು
ಸಿಕ್ಕಾಪಟ್ಟೆ ನಕ್ಕೆವು
ಕಣ್ಣುಕಣ್ಣುಗಳ ಕಲೆಸಿದೆವು
ಎಲ್ಲೋ ದೂರ ಇದ್ದವಳವಳು
ಸುದ್ದಿ ತಿಳಿದು ಬಂದಳು
ನಾನು ಇಲ್ಲೇ ಊರಲ್ಲಿರುವೆ
ಕೆಲಸ-ಕೂಲಿಯಿಲ್ಲದ ಸುಖದಲಿ...
ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಲ್ಲಲ್ಲಾ...

ಬಾವಿಯ ಬಳಿ ಚಿಕ್ಕಮ್ಮನಿಗೆ
ಬಿಳಿಬಟ್ಟೆಯ ಪರದೆಯ ಆಚೆ
ಸ್ನಾನ ಮಾಡಿಸಿ ಪೌಡರು ಬಳಿಯಲು
ಮರೆಯಲಿ ನಿಂತು ಮೂಲೆಯಲಿ ನಿಂತು
ಅವಳಿಗೆ ನಾನು ನನಗೆ ಅವಳು
ಗುಲಾಬಿಯನ್ನು ಕೊಟ್ಟುಕೊಂಡೆವು...
ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಲ್ಲಲ್ಲಾ...

ಜನಜಂಗುಳಿಯಲಿ ಕಾಣದ ಹಾಗೆ
ಅವಳ ಕೈಯ ಬೆರಳನು ಹಿಡಿದು
ಚಿಕ್ಕಮ್ಮನ ಸುತ್ತು ಬಂದೆ
ತಾಳಿ ಕಟ್ಟಿ ಸುತ್ತಿದ ಹಾಗೆ...
ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಲ್ಲಲ್ಲಾ...

ಶವಸಂಸ್ಕಾರ ಮುಗಿದೇ ಹೋಯಿತು
ಹದಿನಾರನೇ ದಿನ ಬರುವ ವೇಳೆಗೆ
ಅವಳಿಗೆ ಮುಡಿಸಲು ಹೂವೊಂದನ್ನು
ಶವದ ಮೇಲಿಂದ ಎತ್ತಿಟ್ಟಿರುವೆ...
ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಲ್ಲಲ್ಲಾ...
ಲಾಲಲ್ಲಾ ಲಾಲಲ್ಲಾ ಲಾಲಲ್ಲಾಲಲ್ಲಾ...
*

ಮಲಯಾಳಂ ಮೂಲ: ಅಜೀಶ್ ದಾಸನ್

ಕನ್ನಡಕ್ಕೆ- ಕಾಜೂರು ಸತೀಶ್

ವ್ಯವಸ್ಥೆ

'ತೆಂಗಿನ ಮರ'ದ ಬಗ್ಗೆ ಎಷ್ಟು ಹೇಳಿದರೂ ಶಿಷ್ಯಂದಿರಿಗೆ ಅರ್ಥವಾಗುತ್ತಿರಲಿಲ್ಲ.

'ಗುರುಗಳಿಗೆ ತರಬೇತಿ ಕೊಡುವುದೊಂದೇ ಇದಕ್ಕೆ ಪರಿಹಾರ' ಎಂದರು ಶಿಕ್ಷಣ ತಜ್ಞರು.

ಒಂದು ತಿಂಗಳ ತರಬೇತಿ. ಪಕ್ಕದ ಊರಿನ ಮಹಾಗುರುಗಳಿಂದ ತರಬೇತಿಯನ್ನು ಕೊಡಿಸಲಾಯಿತು.

ಮಹಾಗುರುಗಳು "ಹಸುವಿನ ಕುರಿತು ನಿಮಗೇನೇನು ತಿಳಿದಿದೆಯೋ ಪಟ್ಟಿ ಮಾಡಿ" ಎಂದು ನಿತ್ಯ ಪಟ್ಟಿ ಮಾಡಿಸತೊಡಗಿದರು.

ಗುರುವಿಗೆ ಬೇಜಾರಾದಾಗ ಮಹಾಗುರುಗಳು, 'ಇಟ್ಟರೆ ಸೆಗಣಿಯಾದೆ..' ಎಂದು ಜೋರಾಗಿ ಹಾಡುತ್ತಾ, ಇಷ್ಟೆತ್ತರ ಕಾಲೆತ್ತಿ ಕುಣಿಯುವುದನ್ನು ಹೇಳಿಕೊಟ್ಟರು.

ತರಬೇತಿಯ ಕಡೆಯ ದಿನದ ಕಡೆಯ ಕ್ಷಣದಲ್ಲಿ 'ಹಸುವನ್ನು ತೆಂಗಿನ ಮರಕ್ಕೆ ಕಟ್ಟಬಹುದು' ಎಂಬ ವಿಷಯವನ್ನು ಹೇಳಿಕೊಟ್ಟರು.

ಆ ಒಂದು ತಿಂಗಳಲ್ಲಿ ಗುರುವಿಗೂ 'ತೆಂಗಿನ ಮರ' ಹೇಗಿರುತ್ತದೆ , ಏನು ಕೊಡುತ್ತದೆ ಅನ್ನೋದೆಲ್ಲ ಮರೆತುಹೋಗಿತ್ತು.

ಹಿಂತಿರುಗಿ ಬಂದ ಗುರು ಶಿಷ್ಯಂದಿರೊಂದಿಗೆ ಮರಕೋತಿ ಆಟ ಆಡಲು ತೊಡಗಿದರು!
*

ಕಾಜೂರು ಸತೀಶ್

Wednesday, January 10, 2018

ಕನಸ ಬೆನ್ನತ್ತಿ ಕಾವ್ಯದ ಪಯಣ

ಆತ್ಮೀಯ ಸಿದ್ದು ಸತ್ಯಣ್ಣವರ ಅವರ ಮೊದಲ ಕವನ ಸಂಕಲನ 'ಕನಸ ಬೆನ್ನತ್ತಿ ನಡಿಗೆ' ಈಚೆಗೆ 'ಅಭಿನವ' ಪ್ರಕಾಶನದಿಂದ ಬೆಳಕು ಕಂಡಿತು. 'ಹೊಲ, ಅಪ್ಪ ಮತ್ತು ನಾನು'(ಪ್ರಬಂಧ), 'ಮಹಾನದಿಯ ಅರಿವಿನಗುಂಟ'(ಛತ್ತೀಸ್ಗಡ್ ಪ್ರವಾಸ ಕಥನ) ಇವರ ಪ್ರಕಟಿತ ಕೃತಿಗಳು.

'ಕನಸ ಬೆನ್ನತ್ತಿ ನಡಿಗೆ' ಕೃತಿಗೆ 2015ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಿ. ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ ಲಭಿಸಿದೆ.
ದಟ್ಟ ಜೀವನ ಪ್ರೀತಿ, ಅಸಹನೆ ಮತ್ತು ಆಕ್ರೋಶಗಳನ್ನು ಗರ್ಭೀಕರಿಸಿಕೊಂಡ ಕವಿತೆಗಳಿವು. ಮೊದಲ ಸಂಕಲನದ ಸಹಜ ಅಬ್ಬರ ಮೊದಮೊದಲ ಕವಿತೆಗಳಲ್ಲಿ ಕಾಣಿಸಿಕೊಂಡರೂ, ಕವಿತೆಯ ಮೇಲಿನ ಅಧ್ಯಯನದ ಹಸಿವು ಅವರಿಗಿರುವುದು ಸುಸ್ಪಷ್ಟ ; ಅತೃಪ್ತಿಯೂ ಕೂಡ. ಹಾಗಾಗಿ, ಭರವಸೆ ಮೂಡಿಸುವ ಕವಿತೆಗಳನ್ನು ಇವರು ಹೆರಬಲ್ಲರು:

ಒಂದು ತಪ್ಪು ಸಂದೇಶ
ಅಥವಾ ಗೊಂದಲ
ಸಾವಿರ ಅನಾಹುತಗಳಿಗೆ ರಹದಾರಿ
ಹಾಗಾಗಿ
ನಾನು ಕವಿತೆಗಳ ತಿದ್ದುತ್ತೇನೆ ಮತ್ತೆ ಮತ್ತೆ

( ಕವಿತೆ ಮತ್ತು ನಾನು)


ಜಾಗವಿಲ್ಲದೆ ನಾವೇ ಸಾಯುವ ದಿನಗಳಲಿ
ದಟ್ಟಡವಿ, ಮೇರು ಪರ್ವತದ ಮೇಲೆ
ಬಾವುಟ ನೆಡುವ ಕನಸು

(ಹೃದಯ ಒಂದು ಮುಷ್ಠಿ,ಜೀವ ಹಿಡಿ ಗಾತ್ರ)

ವಾಮನನ ಹೆಜ್ಜೆ ಇಟ್ಟರು ತಲೆ ಮೇಲೆ
ಫೀನಿಕ್ಸ್ ಹಕ್ಕಿ ಕಂಡಿತು ಮೇಲೆ

(ನಮ್ಮ ಶಕ್ತಿ)

ಕಜ್ಜಿಭೂಮಿಯ ಬಯಲ ಶರೀರದಲಿ
ಸೇಬುಗಳ ಸಮಾನ ಹಂಚಿಕೆ
ನನ್ನ ಪಾಲಿಗಾಗಿ ಸರದಿಯಲಿ ನಿಂತು ಕಾಯುತ್ತಿರುವೆ

(ಕಾಯುತ್ತಿರುವೆ)

ಕತ್ತಲೆ ಕುರುಡು, ತಪ್ಪು ಮಾಡದು
(ಕತ್ತಲೆಯ ಕವಿತೆ)

ಅಳು ಹಸಿವು, ನಗು ಉಪವಾಸ
(ನಿರುತ್ತರ)

ಹುಟ್ಟು ಹುಲ್ಲಾದರೆ ಸಾವು ಬೆಂಕಿ
(ಹರಿವು)

*

ಕಾಜೂರು ಸತೀಶ್

ಕ್ರಿಸ್ತಪೂರ್ವದೆಡೆಗೆ

'ನಾಡಿದ್ದು ಬೆಳಿಗ್ಗೆ ಕಳಿಸ್ತೇನೆ' ಮಾತುಕೊಟ್ಟಿದ್ದೆ.

ಟೈಪಿಸಿಯಾದ ಮೇಲೆ ಕಡತವು13kb ತೂಗುತ್ತಿತ್ತು. ಬೆಳ್ಳಂಬೆಳಿಗ್ಗೆ . Send ಗುಂಡಿಯನ್ನು ಅದುಮಿದೆ.

ದಿನವಿಡೀ DATA ಕಣ್ತೆರೆದೇ ಇರುವಂತೆ ನೋಡಿಕೊಂಡೆ.

ಹಾಗೆ ಆ ದಿನವೂ ಕಣ್ಮುಚ್ಚಿತು. ನನ್ನ ಉಸಿರಿನಷ್ಟೇ ತೂಕವಿದ್ದ ಆ ಕಡತವು ಭೂಮಿಯ ಜೊತೆಗೆ ತಿರುಗುತ್ತಲೇ ಇತ್ತು!

ಮರುದಿನವಿಡೀ ಇದೇ 'ಇದರ' ಪುನರಾವರ್ತನೆ!

ನನ್ನ ಬಿಟ್ಟುಹೋಗುವ ಯಾವ ಇರಾದೆಯೂ ಅದಕ್ಕಿರಲಿಲ್ಲ.

ಮೂರನೇ ದಿನದ ಪ್ರಯತ್ನದಲ್ಲಿ ಯಶಸ್ವಿಯಾದೆ. ಅಷ್ಟರಲ್ಲಾಗಲೇ ವಚನಭ್ರಷ್ಟನಾಗಿದ್ದೆ.

ಟವರ್ ಕೆಳಗೆ ನಿಂತರೂ ಸಿಗ್ನಲ್ಲು ಸಿಗದ 'ಕರಿಕೆ'ಯ ಬಿಎಸ್ಎನ್ಎಲ್ಲಿಗೆ ನಮನ!
RIP!
*
ಕಾಜೂರು ಸತೀಶ್