ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, November 26, 2017

ಸಾಹಿತ್ಯ ಸಮ್ಮೇಳನ ಮತ್ತು...

ಮೈಸೂರಿಗೆ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆಂದು ತಿಂಗಳ ಮುಂಚೆಯೇ ನಿರ್ಧರಿಸಿದ್ದೆ. ಹೋಗಲು ಸಾಧ್ಯವಾಗಲಿಲ್ಲ. ಆ ಕುರಿತ ಕೊರಗೇನೂ ನನ್ನೊಳಗೆ ಅಂಟಿಕೊಂಡಿಲ್ಲ.
*

ಅದು ೭೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ನನ್ನನ್ನು ನಮ್ಮ ಜಿಲ್ಲೆಯಿಂದ ಕವಿಗೋಷ್ಠಿಗೆ ಆಯ್ಕೆ ಮಾಡಿದ್ದರು.

ಹೊರಡಬೇಕಾದ ದಿನದಂದು ಇಲಾಖೆಯ ತುರ್ತು ಕೆಲಸವೊಂದಿತ್ತು. ಮುಗಿಸಿ, ಹೊರಟು, ರಾಜಧಾನಿಗೆ ತಲುಪಿ, ವಸತಿಗೃಹ ಸೇರುವಷ್ಟರಲ್ಲಿ ರಾತ್ರಿಯೂಟದ ಸಮಯ ಮೀರಿತ್ತು.

ಆ ರಾತ್ರಿಯ ಉಪವಾಸ, ತಲೆತುಂಬಿಕೊಂಡಿದ್ದ ಕವಿತೆ, ದಿಗಿಲು ಹುಟ್ಟಿಸುತ್ತಿದ್ದ ಟ್ರಾಫಿಕ್ಕು, ಅಪರಿಚಿತ ಸ್ಥಳ... ಇವೆಲ್ಲ ಒಟ್ಟಿಗೆ ಸೇರಿ ಸುಖನಿದ್ದೆ ಕಣ್ಣ ತುಂಬಿಕೊಂಡಿತ್ತು.

ಮರುದಿನ ಗೆಳೆಯ ಜಗದೀಶ್ ಜೋಡುಬೀಟಿ ಸಿಕ್ಕರು. ಕವಿಗೋಷ್ಠಿಯ ಸಂದರ್ಭ ಕಿಕ್ಕಿರಿದು ತುಂಬಿದ ಸಭಾಂಗಣ. ಒಂದು ಗಂಭೀರವಾದ ಪದ್ಯವನ್ನು ಓದಿದೆ.

ಅಲ್ಲಿದ್ದ ಮಂದಿಗೆ ಫೊಟೊ ಹುಚ್ಚು ಇರಲಿಲ್ಲ.ಎಂದಿನಂತೆ ಭಾವೋದ್ರೇಕದ, ಏರುಸ್ವರದ ಸಾಲುಗಳಿಗೆ ಹೆಚ್ಚು ಚಪ್ಪಾಳೆ ಬಂದರೂ, ಒಳ್ಳೆಯ ಕೇಳುಗರವರು. ಮುಗಿಯುವವರೆಗೆ ಕುಳಿತು ಕವಿತೆಗಳಲ್ಲಿ ಮಿಂದರು. ಅದರ ಪಟವನ್ನು ಕವಿತೆ ಓದಿದ ನಾವ್ಯಾರೂ ಇಟ್ಟುಕೊಳ್ಳಲಿಲ್ಲ. (ಗೆಳೆಯ ದೂರದಿಂದ ಕ್ಲಿಕ್ಕಿಸಿದ ಮಬ್ಬುಚಿತ್ರವೊಂದು ಸಾಕ್ಷಿಗಿದೆ, ಅಷ್ಟೆ !)

*

ಈಗ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸ್ನೇಹವಲಯದ ಸಮ್ಮಿಲನ ಸಾಧ್ಯವಾದರೂ, ಸಾಹಿತ್ಯ ಪ್ರಜ್ಞೆ ದೂರವಾಗುತ್ತಿದೆ. ಯುವಸಮೂಹ ಫೊಟೊಗಳಿಗಾಗಿ ವಿವಿಧ ಭಂಗಿಗಳಲ್ಲಿ ಪೋಸು ಕೊಡುತ್ತಾ ಸೀಮಿತ ನಿಲುವಿನ ಗುಂಪುಗಳಲ್ಲಿ ಕಳೆದುಹೋಗುತ್ತಿರುವುದು ದಿಗಿಲು ಹುಟ್ಟಿಸುತ್ತಿದೆ.
*

ಕಾಜೂರು ಸತೀಶ್

No comments:

Post a Comment