ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, August 21, 2017

ಘಾಟಿಲ್ಲದ ಪರಿಮಳ - ಪಾರಿಜಾತದಂಥದೇ ಸ್ನಿಗ್ಧ ಸುವಾಸನೆ

ಒಂದೇ ವಿಷಯವನ್ನಾಧರಿಸಿ ಹಲವರು ಬರೆದ ಲೇಖನಗಳನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸುವುದಕ್ಕೂ, ಸಂಪಾದಕರು ಸೂಚಿಸಿದ ವಿಷಯವನ್ನು ಕುರಿತು ಆಹ್ವಾನಿತರು ಬರೆದದ್ದನ್ನು ಪ್ರಕಟಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದೇ ಇವೆ. ಇನ್ನು ಪ್ರಬಂಧ, ಕತೆ, ಕವಿತೆಗಳನ್ನು ಒಂದು ಸೂಚಿತ ವಿಷಯಾಧಾರಿಸಿ ಬರೆಸಿ ಸಂಪಾದಿಸಿ ಪ್ರಕಟಿಸುವುದಂತೂ ಅಪಾರ ಪರಿಶ್ರಮ, ತಾಳ್ಮೆ ಮತ್ತು ಲೇಖಕರ ಒಡನಾಟಗಳನ್ನಿಟ್ಟುಕೊಂಡ ಸಂಪಾದಕನಿಂದ ಮಾತ್ರ ಸಾಧ್ಯವಿರುವ ಸಂಗತಿ. ಇಂಥ ಕೆಲಸಗಳನ್ನು ಸಹಜವಾಗಿ ಪರಿಷತ್ತು ಅಥವ ಅಕಾಡೆಮಿಗಳು ಈಗಾಗಲೇ ಆಯಾ ಕ್ಷೇತ್ರದಲ್ಲಿ ಹೆಸರು ಮಾಡಿರುವವರಿಂದ ಒಂದು ವಿಶೇಷ ಸಂದರ್ಭಕ್ಕಾಗಿ ಮಾತ್ರ ಹಮ್ಮಿಕೊಳ್ಳುತ್ತವೆ. ಉದಾರಹರಣೆಗೆ ಹೇಳಬೇಕೆಂದರೆ ಸ್ವಾತಂತ್ರ್ಯ-೬೦, ಹಿಂದ್ ಸ್ವರಾಜ್-೧೦೦, ಮೈಸೂರುಮಲ್ಲಿಗೆಗೆ ಐವತ್ತು, ಗಾಂಧೀ ಸ್ತವನ, ಇತ್ಯಾದಿ ಇತ್ಯಾದಿ. ಆದರೆ ವ್ಯಕ್ತಿಯೊಬ್ಬರ ಖಾಸಗಿ ಸಮಾರಂಭಕ್ಕೆ ಒಂದು ವಿಷಯವನ್ನಾಧರಿಸಿ ಹಲವರ ಲೇಖನ/ಕವಿತೆಗಳನ್ನು ಪ್ರಕಟಿಸುವುದು ವಿಶೇಷವೇ ಸರಿ. ಶಿವಮೊಗ್ಗೆಯ ಸಾಹಿತ್ಯಾಭಿಮಾನಿಯೊಬ್ಬರು ಅವರ ಮನೆಯ ಗೃಹಪ್ರವೇಶಕ್ಕೆ ಮನೆ ಕುರಿತಂತೆ ರವಿ ಬೆಳಗೆರೆ ಯವರ ವಿಚಾರ ಸಿಡಿ ಮಾಡಿಸಿ ಉಡುಗೊರೆ ಕೊಟ್ಟ ಉದಾಹರಣೆಯಿದೆ.

ಈಗ ಅಂಥದೇ ಒಂದು ಖಾಸಗಿ ಉದ್ದೇಶಕ್ಕಾಗಿ ಪ್ರಕಟಿಸಲಾಗಿರುವ ಕವನ ಸಂಕಲನ " ಪಾರಿಜಾತ- ಪರಿ ಕವಿತೆಗಳು". ಕವಿ ವಾಸುದೇವ ನಾಡಿಗ್ ಸಂಪಾದಕತ್ವದಲ್ಲಿ ಕೆ.ಪಿ.ಮಂಜುನಾಥ ಮತ್ತು ಶುಭಮಂಗಳ ದಂಪತಿಯ ಹೊಸ ಮನೆ "ಪಾರಿಜಾತ" ದ ಗೃಹಪ್ರವೇಶ ಸಮಾರಂಭಕ್ಕಾಗಿ ನಾಡಿನ ಹಿರಿಕಿರಿಯ ಕವಿಗಳಿಂದ ಪಾರಿಜಾತ ಹೂವನ್ನು ಕುರಿತಂತೆ ಕವಿತೆಗಳನ್ನು ಆಹ್ವಾನಿಸಿ ಪ್ರಕಟಿಸಿರುವ ಕವನ ಸಂಕಲನ.


೨೯ ಕವಿಗಳು ಪಾರಿಜಾತ ಹೂವನ್ನು ಕುರಿತಂತೆ ಚಿಂತಿಸಿರುವ ಕ್ರಮವೇ ಚೇತೋಹಾರಿಯಾಗಿದೆ. ಸಹಜವಾಗಿ ಪಾರಿಜಾತ ಪುರಾಣದ ಹಿನ್ನೆಲೆ ಇರುವ ಹೂವಾಗಿರುವುದರಿಂದ ಕೃಷ್ಣ ಸತ್ಯಭಾಮೆ ರುಕ್ಮಿಣಿಯರ ಪ್ರಸಂಗ ನೆನಪಾಗುತ್ತದೆ. ಸ್ವರ್ಗದಿಂದ ಭೂಮಿಗೆ ತಂದ ಹೂ ಇದಾದ್ದರಿಂದ ಮತ್ತು ರಾತ್ರಿಯಲ್ಲರಳಿ ಹಗಲ ಬೆಳಕಿಗೆ ನಲುಗಿ ಹೋಗುವ ಸೂಕ್ಷ್ಮತೆಯ ಈ ಹೂವು ತನ್ನ ಪರಿಮಳಕ್ಕೆ ಹೆಸರುವಾಸಿ.

ಕಾಜೂರು ಸತೀಶ್, ಕೃಷ್ಣ ದೇವಾಂಗಮಠ, ಸ್ವಾಮಿ ಪೊನ್ನಾಚಿಯಂಥ ಭರವಸೆಯ ಯುವ ಕವಿಗಳ ಜೊತೆಗೇ ಸ್ವತಃ ಸಂಪಾದಕ ವಾಸುದೇವ ನಾಡಿಗ್, ಸತ್ಯನಾರಾಯಣ ರಾವ್ ಅಣತಿ, ಸುಬ್ರಾಯ ಚೊಕ್ಕಾಡಿ ಮುಂತಾದ ಹಿರಿಯರ ಕವಿತೆಗಳೂ ಈ ಸಂಕಲನದಲ್ಲಿರುವ ಕಾರಣ ಕುತೂಹಲ ಹುಟ್ಟಿಸುತ್ತದೆ. ಪಾರಿಜಾತದ ನೆವದಲ್ಲಿ ಪುರಾಣದೊಂದಿಗೆ ಮುಖಾಮುಖಿಯಾಗುತ್ತಲೇ ವರ್ತಮಾನದ ಸಂಕಟಗಳನ್ನು ಒಳಗೊಂಡಿರುವ ಈ ಸಂಕಲನದ ಬಹುತೇಕ ಕವಿತೆಗಳು ಅದನ್ನು ಪ್ರಕಟಿಸಿರುವ ವ್ಯಾಪ್ತಿಯಾಚೆಗೂ ನಿಂತು ಹಲವು ಕಾಲ ಕಾಡುತ್ತಲೇ ಇರುತ್ತವೆ.

ಆಗಾಗ ರೆಂಬೆ ಕತ್ತರಿಸಬೇಕು ಕಾಲದ
ಹೂವಿಗಾಗಿ
ಬೆಳಕಿಗಾಗಿ


ಎನ್ನುವ ನಿಲುವು ಕಾಜೂರು ಸತೀಶ ಅವರದ್ದಾದರೆ
ನಿನ್ನೆಯ ನೆನಪೇ ಇಲ್ಲದಂತೆ
ಹವಳದಂಟಿನ ಪಾರಿಜಾತ
ಎನ್ನುವ ಗಾಯತ್ರೀ ರಾಘವೇಂದ್ರ, ಆಗಸದ ಅಂಗೈ ಕೆಳಗೆ ಮಣ್ಣ ಹೂವಿನ ಬಂಧ ಎನ್ನುವ ಚೀಮನಹಳ್ಳಿ ರಮೇಶಬಾಬು, ಪಾರಿಜಾತದಲ್ಲಿ ರಾಧೆಯನ್ನರಸುವ ದೇವಯಾನಿಯವರ ಪ್ರಯತ್ನ, ನಿರ್ಮಲಾ ಶೆಟ್ಟರ್ ಮುಂದುವರೆಸಿ

ಉತ್ತರ ತಿಳಿದೂ ಗೊತ್ತಿಲ್ಲದಂತೆ ಕಾಡುತ್ತಲಿರಬಹುದು
ನಿನ್ನೊಳಗೂ
ಕತ್ತಲಿಗಷ್ಟೇ ಯಾಕೆ ನೀ ಮೀಸಲು
ಅಂತ ಕೇಳುತ್ತಾರೆ.

ಪುರಾಣವನ್ನೇ ಆಶ್ರಯಿಸಿದ ಸಿ.ಪಿ.ರವಿಕುಮಾರ್ ತಮ್ಮ " ಸತ್ಯಭಾಮೆ ಮತ್ತು ಪಾರಿಜಾತ" ದಲ್ಲಿ ರುಕ್ಮಿಣಿಯನ್ನು ತಾರದೆಯೂ ಪಾರಿಜಾತಕ್ಕೆ ಮತ್ತೊಂದು ಆಯಾಮವನ್ನೇ ನೀಡಿದ್ದಾರೆ.

ಇದ್ದರೆ ಇರಬೇಕು ಮರಳಿ ಏನನ್ನೂ ಬೇಡದೆ
ಹರ್ಷ ಸುರಿಸುವ ಪಾರಿಜಾತದಂತೆ
ಎಂದು ಮುಂದುವರೆಯುತ್ತದೆ.

ಹಗಲ ಬೆಳಕಲ್ಲರಳದ ಪಾರಿಜಾತ
ಇರುಳ ಸೆರಗಲ್ಲೇ ಅರಳಿ ನಗುವ ಹಾಗೇ
ಬದುಕ ಬೆದೆಯಲ್ಲರಳದ ಕವಿತೆ
ವಿಷಾದದ ಹಬೆಯಲ್ಲೇ ಕುಡಿಯೊಡೆಯುವುದು ಏಕೆ
(ಡಿ.ಎಸ್.ರಾಮಸ್ವಾಮಿ)ಎನ್ನುವ ಜಿಜ್ಞಾಸೆಯೂ ಇಲ್ಲಿದೆ.

ಒಬ್ಬೊಬ್ಬರಿಗೆ ಒಂದೊಂದು ವಾಸನೆಯ ನಾಳ
ನಿನ್ನ ಒಡಲೊಳಗೆ
ಮೈಮರೆತರೆ ಕೆಳಗೆ ನೆಲಕ್ಕೆ
ಬಿಟ್ಟರೆ ಹಗುರ ಮೇಲೆ
ಎನ್ನುವ ವಸಂತ ಕುಮಾರ ಪೆರ್ಲ,

ನಾಳೆ ಎಲ್ಲ ಬಿಟ್ಟು ಹೊರಡುವಾಗ
ಗಂಧ ಉಳಿಯಬೇಕು
ಅಂಗಿ ಕಳಚುವ ಹಾಗೆ ತೊಟ್ಟು ಕಳಚುವೆಯಲ್ಲ
ಬದುಕ ಮೋಹದ ಮರದಲಿರುವವರಿಗೆಲ್ಲ
ಬಿಟ್ಟು ಹೊರಡುವುದು ಯಾರಿಗೂ ಕಷ್ಟವಲ್ಲ
( ವಿದ್ಯಾರಶ್ಮಿ ಪೆಲ್ಲತಡ್ಕ)

ಹಾಸಿಗೆಯ ಮೇಲೆ ನಲುಗಿದ ಪಾರಿಜಾತಕ್ಕೀಗ
ಮಿಲನದ ನಂತರದ ಮತ್ತೇರಿಸುವ ಗಂಧ (ಶ್ರೀದೇವಿ ಕೆರೆಮನೆ)

ಮುಟ್ಟಿದರೆ ಮಾಸುವ ನರುಗಂಪು ದಳವೇ
ನಡುವೆ ನಸುಗೆಂಪು ಬೊಟ್ಟಿನ ಶೀಲ ಸಂಪನ್ನೆ ( ಅಣತಿ) ಎಂದೆಲ್ಲ ಕೊಂಡಾಡುತ್ತಿರುವಾಗ ಸ್ವಾಮಿ ಪೊನ್ನಾಚಿ
ಕೈ ಕೊಟ್ಟ ಪ್ರೇಮಿಯನು
ನೆನೆದು ಗೋಳಾಡುವ ನಿಮಗೆ
ಜೊತೆಯಾಗಬಹುದು ಈ ಹೂವು
ಭಗ್ನ ಹೃದಯದ ಸಾಂತ್ವನಕೆ
ಎನ್ನುವವರೆಗೂ ಮತ್ತೊಂದು ಆಯಾಮಕ್ಕೆ ಜಿಗಿಯುತ್ತದೆ.

ಸ್ಮಿತಾ ಅಮೃತರಾಜ್ ಪಾರಿಜಾತವನ್ನು ಆಯುವಾಗಲೆಲ್ಲ ಕೃಷ್ಣನನ್ನೇ ಕಂಡರೆ, ಚೊಕ್ಕಾಡಿಯವರಿಗೆ ಅದು ಧ್ಯಾನಸ್ಥವಾಗಿ ಆಕಾಶಕ್ಕೆ ಲಗ್ಗೆ ಇಟ್ಟಿದೆ.

ಹೀಗೆ ಪಾರಿಜಾತದ ಪರಿಯನ್ನು ಪರಿ ಪರಿಯಾಗಿ ಒಳಗೊಂಡ ಈ ಸಂಕಲನ ಸದ್ಯ ಬರೆಯುತ್ತಿರುವ ಹಲವು ವಿಭಿನ್ನ ಮನಸ್ಕ ಕವಿಗಳನ್ನು ಒಟ್ಟಿಗೆ ಸೇರಿಸಿದೆ. ಹಾಗೇ ಇಂಥ ಭಿನ್ನತೆಯಲ್ಲೂ ಇರುವ ಕವಿತೆಯೆಂಬ ಏಕೈಕ ಮೋಹಕ್ಕೆ ಆಡೊಂಬೊಲವನ್ನೂ ಕರುಣಿಸಿದೆ. ವಾಸುದೇವ ನಾಡಿಗರ ಶ್ರಮಕ್ಕೆ ಸಾಥಿಯಾದ ಪ್ರಕಾಶಕರು ಮುಖಪುಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿದ್ದಿದ್ದರೆ ಚೆನ್ನಿತ್ತು.
*

ಡಿ.ಎಸ್. ರಾಮಸ್ವಾಮಿ

############################
ಪುಸ್ತಕ - ಪಾರಿಜಾತ ಪರಿ ಕವಿತೆಗಳು
ಪ್ರಕಾರ - ಕವನ ಸಂಕಲನ
ಸಂಪಾದಕ - ವಾಸುದೇವ ನಾಡಿಗ್
ಪ್ರಕಾಶಕರು- ಇಂಡಿಗೋ ಮಲ್ಟಿಮೀಡಿಯ

No comments:

Post a Comment