ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, August 18, 2017

ಗಾಯದ ಹೂವುಗಳು: ಮಾನವತ್ವದ ಕವಿತೆಗಳು

ಗಾಯದ ಹೂವುಗಳು
ಲೇ: ಕಾಜೂರು ಸತೀಶ್
ಪುಟ:120, ಬೆಲೆ:75/-
ಪ್ರಕಾಶನ: ಫಲ್ಗುಣಿ ಪುಸ್ತಕ ಬೆಂಗಳೂರು


ಕಾಜೂರು ಸತೀಶ್ ನಮ್ಮ ನಡುವೆ ಹೊಸ ಭರವಸೆ ಮೂಡಿಸಿರುವ ಸೂಕ್ಷ್ಮ ಸಂವೇದನಾಶೀಲ ಕವಿ ಮತ್ತು ಅನುವಾದಕ. ಮೂಲತಃ ಪರಿಸರ ಪ್ರೇಮಿಯಾದ ಇವರ ಕಾವ್ಯದಲ್ಲಿ ನೆಲಮೂಲದ ತುಡಿತವನ್ನು, ಜೀವಪರಿಸರದ ಅಭೀಪ್ಸೆಯನ್ನು, ಸಾಮಾಜಿಕ ಸಮಾನತೆಯನ್ನು ನಿಚ್ಚಳವಾಗಿ ಕಾಣಬಹುದು. ಮೆಲುಮಾತಿನಲ್ಲಿಯೇ ತನ್ನ ಬೆಂಕಿ ಒಡಲನ್ನು ತೆರೆದಿಡಬಲ್ಲ ಕಾಜೂರು ಸತೀಶ್ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಇವರ ಮನಸ್ಸು ತುಡಿಯುವುದು ಪ್ರೀತಿ ಮತ್ತು ಸ್ನೇಹದ ಪಾತಳಿಯಲ್ಲಿ.
ಪ್ರಸ್ತುತ ಗಾಯದ ಹೂವುಗಳು ಕಾಜೂರು ಸತೀಶ್ ಅವರ ಪ್ರಥಮ ಕವನಸಂಕಲನ. ಇದು 2015ರ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಕೃತಿ. ಈ ಕವನಸಂಕಲನದಲ್ಲಿ ಒಟ್ಟು ಐವತ್ತಮೂರು ಕವಿತೆಗಳಿವೆ. ಸಾಹಿತ್ಯದ ಯಾವ ಚಳವಳಿಗಳ ಹಣೆಪಟ್ಟಿ ಹಚ್ಚಿಕೊಳ್ಳದೆ ಬದುಕಿನಂಗಳದಲ್ಲಿ ನಿಂತು ನಡೆಯುವುದನ್ನೆಲ್ಲಾ ಕಂಡುಂಡು ಚಿತ್ರಿಸಿರುವುದನ್ನು ಇಲ್ಲಿ ಕಾಣುತ್ತೇವೆ. ಈ ಸಂಕಲನದ ಎಲ್ಲಾ ಕವಿತೆಗಳು ವಾಸ್ತವಿಕತೆಯ, ವಸ್ತುಸ್ಥಿತಿಯ, ವರ್ತಮಾನದ ಅನುಭವದಾಳದಿಂದ ಹೊರಹೊಮ್ಮಿವೆ. ಬದುಕಿನ ವಿಷಮತೆ, ಮೋಸ, ವಂಚನೆ, ನೋವು-ನಲಿವು, ಉಪದೇಶ, ಪ್ರೀತಿ, ಪ್ರೇಮ, ಹತಾಶೆ -ಹೀಗೆ ಬದುಕಿನಲ್ಲಿ ಕಂಡು ಕೇಳಿದ ವಿವಿಧ ರೀತಿಯ ಅನುಭವಗಳೇ ಇಲ್ಲಿಯ ಕವಿತೆಗಳ ವಸ್ತು. ಕಾಜೂರು ಸತೀಶ್ ಅವರದು ಆರ್ಭಟಿಸುವ ಕಾವ್ಯವಲ್ಲ. ಮೆಲುದನಿಯಲ್ಲಿಯೇ ಆಪ್ತವಾಗಿ ಮಾತನಾಡಿಸಲು ಹವಣಿಸುವ ಕಾವ್ಯ. ಕಾಜೂರು ಪ್ರಯತ್ನಪೂರ್ವಕವಾಗಿ ಕಾವ್ಯ ಹೊಸೆಯುವುದಿಲ್ಲ. ನಿಸ್ಸಂಶಯವಾಗಿ ಅವರದ್ದು ಭಾವಕ್ಕೆ ಮೂಡಿದ ಭಾಷೆ. ಅವರ ಕವಿತೆಗಳ ಒಡಲಿನಲ್ಲಿರುವ ತಣ್ಣನೆಯ ಬೆಂಕಿ ಓದುಗರನ್ನು ತಕ್ಷಣವೇ ತಟ್ಟುತ್ತದೆ. ಕಾಜೂರು ಅವರ ಕಾವ್ಯಗುಣ ವರ್ತಮಾನದ ದುಃಸ್ಥಿತಿಯ ಕುರಿತು ಭೀತಗೊಂಡಿದೆ. ಕಾವ್ಯಾಲಂಕಾರ ಅರ್ಥಾಲಂಕಾರವನ್ನು ಮೀರಿಸುವ ಭಾವಾಲಂಕಾರ ಪ್ರತಿಯೊಂದು ಕವಿತೆಯಲ್ಲಿಯೂ ಸ್ಪಂದಿಸುತ್ತದೆ. ಸಮಾನತೆಯ, ಆರೋಗ್ಯಪೂರ್ಣ, ಮಾನವೀಯ ಸಮಾಜವೊಂದು ರೂಪುಗೊಳ್ಳಬೇಕೆಂಬ ಹಂಬಲ ಸತೀಶ್‍ರ ಕಾವ್ಯಭೂಮಿಕೆಯನ್ನು ರೂಪಿಸಿದೆ. ಈ ಸಂಕಲನದ ಪ್ರತಿಯೊಂದು ಕವಿತೆಗಳಲ್ಲಿಯೂ ಅವರ ಈ ದನಿಯನ್ನು ಓದುಗರು ಕೇಳಿಸಿಕೊಳ್ಳಬಹುದು. ಇಲ್ಲಿನ ಕವಿತೆಗಳ ಸ್ಥಾಯಿಭಾವ ದಟ್ಟವಾದ ವಿಷಾದ ಮತ್ತು ಮಡುಗಟ್ಟಿದ ನೋವಿನ ಜಿನುಗುವಿಕೆ ಆಗಿದೆ.

ನನ್ನ ನಿನ್ನ ನಡುವೆ ಕಡಲಿಲ್ಲ
ಈ ಹೂವುಗಳನ್ನು ಮುಟ್ಟಲು
ಸುಟ್ಟುಹೋಗುತ್ತೇನೋ ಎಂಬ
ಭಯವಿದೆ ನನಗೆ

(ಕಡಲಾಚೆಯ ಹುಡುಗಿಗೆ)

ಎಂದು ಆತ್ಮಶೋಧ ಮಾಡಿಕೊಳ್ಳುತ್ತ ಕಾಜೂರು ಸತೀಶ್ ತಾನು ಪ್ರೀತಿಸಿದ ಹುಡುಗಿಯಿಂದ ತಿರಸ್ಕೃತನಾದ ನೋವು ಎದೆಯಲ್ಲಿ ಉಳಿದಿದೆ. ಆ ಪ್ರೇಮದ ಬಗೆಯನ್ನು ಅರಿಯುವ ಕ್ರಮ, ತನ್ನ ಪ್ರಿಯತಮೆಗೆ ಮನವರಿಕೆ ಮಾಡುವ ಕ್ರಮವಾಗಿ ಅನೇಕ ಕಡೆ ಕಾಣುತ್ತದೆ. ತನ್ನೆಲ್ಲ ವಿಹ್ವಲತೆ, ಸ್ವಪ್ನಗುಣ, ಜೀಕುಗಳಿಂದ ಈ ಕವಿತೆ ಆತ್ಮಶೋಧನೆಗೆ ಪ್ರೇರೇಪಿಸುತ್ತದೆ. ನೋಡಿದ್ದು, ಅನುಭವಿಸಿದ್ದು ಏನೋ ಇದೆಯಾದರೂ, ಕವಿಗೆ ಯಾವುದನ್ನು ಮುಟ್ಟಿ ಮಿಡಿಸುವ ಮನಸ್ಸಿಲ್ಲವಾದರೂ ಎಲ್ಲವನ್ನು ಹೇಳಿ ಮುಗಿಸಿಬಿಡಬೇಕೆಂಬ ನಿರ್ಧಾರವಿದೆ.

ಈ ರಾತ್ರಿಗಳಲ್ಲಿ ನಿದ್ರಿಸಲಾರೆ
ಹೃದಯ ರಿಂಗಣಿಸುತ್ತಲೇ ಇದೆ
ವ್ಯಾಪ್ತಿ ಪ್ರದೇಶಗಳಾಚೆಗೂ ಕೂಡ
ಉಗಾಂಡದ ಹುಡುಗ ಮುಲುಗುಡುತಿರಬಹುದು
ಅಮೀನನ ಉದ್ದ ಕೋರೆಗಳ ನಡುವೆ
ನಿದ್ದೆಹೋಗಿರಬಹುದು ನನ್ನೂರ ಹಸಿದ ಜನ ಹಸುಳೆಯಂತೆ

( ಈ ರಾತ್ರಿಗಳಲ್ಲಿ ನಿದ್ರಿಸಲಾರೆ)

ಜಗತ್ತು ಈಗ ಗಂಡಾಂತರದಲ್ಲಿದೆ. ಈ ಕವಿತೆಯ ಸಾಲುಗಳಲ್ಲಿರುವ ಸತ್ಯ, ವ್ಯಂಗ್ಯ ಸಾರ್ಥಕವಾಗಿದೆ. ಕವಿ ಸತೀಶ್ ಸಾಮಾಜಿಕವಾಗಿ ಎಷ್ಟು ಅಶಾಂತವಾಗಿದ್ದಾರೆ, ಅಸಹಾಯಕವಾಗಿದ್ದಾರೆ ಎಂಬುದನ್ನು ಈ ಕವಿತೆಯ ಸಾಲುಗಳಲ್ಲಿ ಸಹಜವಾಗಿ ಕಾಣಬಹುದು. ಇಂತಹ ವಾಸ್ತವ ಬದುಕಿನ ಬಗೆಗೆ ಕಾಳಜಿಯ ಸಾಲುಗಳು ಇಲ್ಲಿವೆ. ಹೀಗೆ ಕವಿಯ ವಿಚಾರ ಮಾರ್ಮಿಕವಾಗಿದೆ. ಜೀವನ ಮೌಲ್ಯಗಳ ಬಗೆಗೆ ಚಿಂತಿಸುವ ಕವಿ ಪ್ರಚಲಿತ ಸಮಸ್ಯೆಗಳ ಕುರಿತು ತಮ್ಮ ವಿಚಾರವನ್ನು ಹರಿಸಿದ್ದು ಸಮಂಜಸವಾಗಿದೆ.

ಸಾಕಿದ ಕಂತ್ರಿನಾಯಿ ಸಾವು ಸುಳಿವ ಹೊತ್ತಲ್ಲಿ
ಮನೆಬಿಟ್ಟು ದೂರ ಹೋದಂತೆ
ಜೋರುಮಳೆಯಲ್ಲಿ ನದಿಯೊಳಗಿನ ಮೀನು ಸತ್ತಂತೆ
ನೀನು ಸತ್ತ ಹೊತ್ತಲ್ಲಿ ನನಗೆ ಸಾವು ಬರಲಿ

(ನಾವಿಬ್ಬರು ತೀರಿಕೊಂಡ ಮೇಲೆ)

ಪ್ರೀತಿ-ಪ್ರೇಮದ ಪವಿತ್ರ ಆವಿಷ್ಕಾರವನ್ನು ಕವಿ ಮನೋಜ್ಞವಾಗಿ ಈ ಕವಿತೆಯಲ್ಲಿ ಚಿತ್ರಿಸಿದ್ದಾರೆ. ಪ್ರೇಮಿಗಳಿಬ್ಬರ ಬದುಕನ್ನು ಅದರೆಲ್ಲ ಸಮಗ್ರತೆಯೊಳಗೆ ತೆರೆದಿಡುವ ಈ ಕವಿತೆ ಹಲವು ಬಗೆಯ ಧ್ವನಿಸಾಮರ್ಥ್ಯವನ್ನು, ಅರ್ಥಛಾಯೆಯನ್ನು ಬಿಟ್ಟುಕೊಡುತ್ತದೆ. ಜೀವನದ ಮಿತಿಯನ್ನು ಕುರಿತಂತಹ ಹೆಚ್ಚು ಗಾಢವಾದ ಚಿಂತನೆ ಈ ಕವಿತೆಯಲ್ಲಿ ಅರಳಿದೆ. ಮನುಷ್ಯನ ಜೀವನ ಸುಖ-ದುಃಖಗಳ ಸಂಗಮ ತತ್ವದಿಂದ ಕೂಡಿರುವಂತಹದ್ದು. ಬದುಕು ಯಾತನೆ, ನೋವು, ಸೂತಕ, ಮೌನ ಮರ್ಮಗಳ ಜಾತ್ರೆ; ಈಗ ಹೊರಟಿದೆ ಹಾದಿ ಎದೆಯ ಮೇಲೆ ಬಿಳಿ ಹೆಣಮೋಡದ ಯಾತ್ರೆ.

ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ ಮುಂಜಾವದವರೆಗೂ
ಬೆಕ್ಕಿನ ಬೆಚ್ಚನೆಯ ಗುರುಗುರು ಲಾಲಿಹಾಡಿಗೆ
ಉರಿಯುತ್ತಾ ನಿದ್ದೆಹೋಗುತ್ತದೆ ಒಲೆ

(ಒಲೆ ಮತ್ತು ಅವ್ವ)

ಶ್ರಮಜೀವಿ ತಾಯಿಯನ್ನು ಕೇಂದ್ರವಾಗಿಟ್ಟುಕೊಂಡು ಅವಳೊಂದಿಗಿನ ಅನುಭವಕ್ಕೆ ಉತ್ಕಟವಾಗಿ ಪ್ರತಿಕ್ರಿಯೆ ನೀಡುತ್ತಾ, ಬದುಕಿನ ಇತರ ಸಂಗತಿಗಳ ಬಗ್ಗೆ ಬೆಳಕು ಬೀರುವ ಕಾವ್ಯದ ಕೌಶಲ್ಯವನ್ನು ಕಾಜೂರು ಸತೀಶ್‍ರು ಈ ಕವಿತೆಯಲ್ಲಿ ಸಾಧಿಸಿದ್ದಾರೆ. ಅವರು ತಾಯಿಯ ಮೂಲಕ ಕಾಣಿಸುವುದು, ಮತ್ತೆ ಮತ್ತೆ ಧ್ಯಾನಿಸುವುದು ಬದುಕಿನ ಬಹು ಮುಖ್ಯ ಮೂಲಭೂತ ಪ್ರಶ್ನೆಗಳನ್ನೇ; ಮನುಷ್ಯಪ್ರೀತಿ, ವ್ಯಾಮೋಹ, ತ್ಯಾಗ, ಚಡಪಡಿಕೆಗಳು ಈ ಕವಿತೆಯಲ್ಲಿ ಪರಿಣಾಮಕಾರಿಯಾಗಿ ರೂಪು ಪಡೆದಿವೆ.

ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ
ಒಸರುವ ಅಷ್ಟೂ ರಕ್ತವೂ ಹೂವಿಗೆ ಅಂದ ನೀಡಬೇಕು

ಸುಡಬಾರದು ಪಾದಗಳ ತೊಟ್ಟಿಕ್ಕುವ ಕೆಂಪುಹನಿಗಳು ಬೀದಿಬೀದಿಗಳಲ್ಲಿ
ಜಗದ ಅವ್ವಂದಿರು ಸುಡುವ ರೊಟ್ಟಿಯ ಎಸಳುಗಳಾಗಿ ಹಾರಿ ಹೂವಾಗಬೇಕು

(ಗಾಯದ ಹೂವುಗಳು)

ಹೀಗೆ ಸರಳ ಮಾತುಗಳಲ್ಲಿ ಬಿಚ್ಚಿಕೊಳ್ಳುವ ಈ ಕವಿತೆ ದುಃಖದ ಗಂಭೀರತೆಯನ್ನು ನಿಶ್ಯಬ್ದದಲ್ಲಿ ಹಿಡಿದುಕೊಡುತ್ತದೆ. ಈ ಜಗತ್ತಿನಲ್ಲಿ ಅಳಲುಗಳ ಹೊಳೆ ಹರಿಯುತ್ತಲೇ ಇದೆ; ಅದು ಮುಗಿಯುವ ಹಾಗೆ ಕಾಣುವುದಿಲ್ಲವೆಂಬ ವಿಷಾದ ಕವಿತೆಯದು. ಇಡೀ ಕವಿತೆ ಕಥನ ರೂಪದಲ್ಲಿ ರಚನೆಯಾಗಿದ್ದು ಹೃಸ್ವತೆಯಲ್ಲಿ ಅಪಾರತೆಯನ್ನು ತುಂಬಿಕೊಂಡಿದೆ. ಈ ಕವಿತೆಯ ಪರಿಣಾಮಶೀಲತೆಗೆ ಬಹುಮುಖ್ಯ ಕಾರಣ ಅದು ಬಿಡಿಸಿಡುವ ಸರಳ, ನೇರ, ಶಕ್ತ ಅಭಿವ್ಯಕ್ತಿ ಕ್ರಮ. ಅಲ್ಲದೆ ಅದು ಆತ್ಮೀಯವಾದ ಸಾಮಾಜಿಕ,ಸಾರ್ವತ್ರಿಕ ಚಿತ್ರಗಳ ಮುಖಾಂತರ ಜಿನುಗುವ ದುಃಖ ಮತ್ತು ವಿಷಾದ.

ಕಾರು ಸರಿಯದ ಕಾಡ ನಡುದಾರಿಯಲ್ಲಿ
ಹೂತುಬಿಡಿ ನನ್ನ
ಜೊತೆಗೆ ನನ್ನ ಹೆಸರು-ಭಾವಚಿತ್ರಗಳನ್ನು
ಬಿರಬಿರನೆ ಸರಿವ ನನ್ನವರ ಬರಿಗಾಲ ಚುಂಬನಕೆ
ಒಳಗೊಳಗೆ ಬಿರಿದು ಪುಳಕಗೊಳ್ಳುವೆನು

(ಉಯಿಲು)

ಇಂತಹ ಪಂಕ್ತಿಗಳು ಅಲ್ಲಲ್ಲಿ ಮಿನುಗುತ್ತವೆ. ಕವಿಯ ಅಂತರಂಗದಲ್ಲಿ ಮೂಡಿರುವ ಈ ಸಂಚಾರಿ ಭಾವ ಸಂಪೂರ್ಣವಾಗಿ ಹೃದಯತಾಪವಾಗಿದೆ. ಕಾಲದ ವಾಸ್ತವ ರೂಪಗಳ ಕುರಿತು ಗಾಢವಾದ ಅರಿವಿದ್ದು, ತನ್ನ ಸಮಚಿತ್ತ ಕಳೆದುಕೊಳ್ಳದ ಅನುಭವ ವಿನ್ಯಾಸದ ಈ ಕ್ರಮ ಮೆಚ್ಚುವಂತಹದ್ದು. ನಿಸರ್ಗ-ಮನುಷ್ಯ ಇವರ ನಡುವಿನ ಸಂಬಂಧ ಜಟಿಲವಾದದ್ದು. ಇಡೀ ಕವಿತೆಯನ್ನು ಓದುವಾಗ ಬಲಗೊಳ್ಳುತ್ತಾ ಹೋಗುವುದು ‘ನಾಯಕ’ನ ಪರದಾಟ ಮತ್ತು ನಿಸ್ಸಹಾಯಕತೆಗಳ ಭಾವನೆ.

ಕಾಜೂರು ಸತೀಶ್‍ರ ಕವಿತೆಗಳಲ್ಲಿ ಚೆಲುವಿದೆ; ಒಲವಿದೆ, ಉತ್ಸಾಹವಿದೆ, ಜೀವನದ ಗೆಲುವಿದೆ. ಆದರೆ ಆ ನಲಿವಿನ ಹಿಂದೆ ದುಃಖ ಮತ್ತು ವಿಷಾದಗಳ ತಳುಕು ಹಾಕಿಕೊಂಡಿವೆ. ಅವರ ಕಾವ್ಯದಲ್ಲಿ ಒಳಿತನ್ನು ನೋಡುವ ಕಣ್ಣಿಗೆ ಸಾವಿರದ ಮುಖ ದರ್ಶನವಾಗುತ್ತದೆ. ಸಾವು ಇಲ್ಲಿನ ಹಲವು ಕವಿತೆಗಳ ಶ್ರುತಿಯಾಗಿದೆ. ಇದು ನೋವು, ಸಂಕಟ,ತಳಮಳ, ಆತಂಕ, ಭಯ, ದಿಗ್ಭ್ರಮೆ, ವ್ಯರ್ಥತೆಗಳನ್ನು ಹೊಮ್ಮಿಸುವ ನೆಲೆಯಲ್ಲಿ ಆಕಾರ ಪಡೆದಿದೆ. ಜೀವಸಂಬಂಧಗಳ ಅನೂಹ್ಯ ನೆಲೆಗಳನ್ನು ಮೀಟುವಂತೆ ಈ ಕವಿತೆಗಳು ಬೆಳೆದಿರುವುದು ಪ್ರಮುಖವಾಗಿದೆ. ತಮ್ಮ ತೀವ್ರ ಕಂಪನದ ಕವಿತೆಯ ಸಾಲುಗಳಲ್ಲಿ ಶಕ್ತ ರೂಪಕಗಳನ್ನು ಸೃಷ್ಟಿಸಬಲ್ಲ ಕವಿ ಕಾಜೂರು ಸತೀಶ್ ಅಬ್ಬರಗಳಿಂದ ಹೊರತಾದ ಕವಿತೆಗಳನ್ನು ಈ ಸಂಕಲನದಲ್ಲಿ ಕೊಟ್ಟಿದ್ದಾರೆ. ಆದರೆ ಅವರ ಕೆಲವು ಕವಿತೆಗಳ ಸಂಯೋಜನೆಯ ನೆಲೆಯಲ್ಲಿ ಕಲಾತ್ಮಕತೆ ಕಡಿಮೆಯಾಗಿರುವುದರಿಂದ ಹಲವು ಕಡೆಗೆ ಇಲ್ಲಿಯ ಕವಿತೆಗಳು ಸೋಲುತ್ತವೆ.

ಕಾಜೂರು ಸತೀಶ್‍ರ ಈ ಸಂಕಲನದ ‘ಚಪ್ಪಲಿಗಳು’, ‘ಮರಣದ ಹಾಡು’, ‘ಮೈಲಿಗೆ’, ‘ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ’, ‘ನೆಲವಿಲ್ಲದವನ ಉಯಿಲು’, ‘ಕಾಡು ಕವಿತೆ’, ‘ಕಡಲಾಚೆಯ ಹುಡುಗಿಗೆ’, ‘ಈ ರಾತ್ರಿಗಳಲ್ಲಿ ನಿದ್ರಿಸಲಾರೆ’, ‘ಗಾಯದ ಹೂವುಗಳು’-ಮುಂತಾದ ಕವಿತೆಗಳು ಒಳ್ಳೆಯ ಕಾವ್ಯಾನುಭವ ನೀಡಿ ಓದುಗರ ಮನವನ್ನು ಕಲಕುತ್ತವೆ. ವಿಷಾದ, ದುಃಸ್ವಪ್ನಗಳನ್ನು ಈ ಕವಿತೆಗಳು ಅಭಿವ್ಯಕ್ತಿಸಿವೆ. ಕಾಜೂರು ವರ್ತಮಾನದ ವಿಷಾದದ ದನಿಯನ್ನು ದಾಖಲಿಸಿದ್ದಾರೆ. ಇಲ್ಲಿನ ಅನೇಕ ಕವಿತೆಗಳು ಆಧುನಿಕ ಜಗತ್ತಿನ ಬದುಕನ್ನು ಸಮರ್ಥವಾಗಿ ದರ್ಶಿಸುತ್ತವೆ. ಕಾಜೂರು ಸತೀಶ್ ಅನೇಕ ಕಡೆ ಹೊಸದೆನ್ನಿಸುವ ವಿಭಿನ್ನ ಪ್ರತಿಮೆ-ರೂಪಕಗಳನ್ನು ಈ ಸಂಕಲನದಲ್ಲಿ ಸಮರ್ಥವಾಗಿ ಬಳಸಿದ್ದಾರೆ. ಇದು ಸಾಮಾಜಿಕ ಕಾಳಜಿ ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಭಾವನೆಗಳನ್ನೊಳಗೊಂಡ ಕೃತಿ. ಈ ಸಂಕಲನದ ಕವಿತೆಗಳಲ್ಲಿ ಸಮಾನತೆ, ಭರವಸೆ, ಮಾನವತೆಗಳಿಗೆ ಪ್ರಾಧಾನ್ಯತೆ ಮತ್ತು ವೈಚಾರಿಕತೆಗೂ ಸ್ಥಾನ ದೊರಕಿದೆ. ಆದ್ದರಿಂದ ಇಲ್ಲಿಯ ಕವಿತೆಗಳು ಓದುಗರನ್ನು ಯೋಚನಾಮಗ್ನರನ್ನಾಗಿಸುತ್ತವೆ. ಸಂಕಲನದ ಹಲವಾರು ಕವಿತೆಗಳು ಒಂದೇ ಓದಿಗೆ ತನ್ನೆಡೆಗೆ ಸೆಳೆಯಬಲ್ಲ ಶಕ್ತಿ ಪಡೆದಿವೆ. ಪ್ರತಿಯೊಂದು ಕವಿತೆಗಳಿಗೂ ಸೂಕ್ತವಾದ ಚಿತ್ರಗಳನ್ನು ರಚಿಸಿರುವುದು ಈ ಕವನಸಂಕಲನದ ಪ್ರಮುಖ ಆಕರ್ಷಣೆಯಾಗಿದೆ.
*


ಸಿ.ಎಸ್.ಭೀಮರಾಯ
ಆಂಗ್ಲ ಉಪನ್ಯಾಸಕರು
ಅ/ಔ. ಸಿದ್ದಣ್ಣ ಬಿ. ಪೂಜಾರಿ
‘ಅಪೂರ್ವ ನಿವಾಸ’,
ಯಮುನಾ ನಗರ, ಕುಸನೂರ ರಸ್ತೆ,
ಕಲಬುರಗಿ-585105
ಮೊ. ನಂ-9008438993/9741523806




E-mail:csbhimaraya123@gmail.com

2 comments: