ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, July 9, 2017

'ಕಡಲ ಕರೆ'ಯ ಕುರಿತು ಆರ್. ವಿಜಯರಾಘವನ್

ಕೆ ಸಚ್ಚಿದಾನಂದನ್, ರಾಜೀವನ್ ಹೊರತಾಗಿ ಇಲ್ಲಿ ಸೇರಿರುವ ಕವಿಗಳು ಹೊಸಬರು ಎಂಬಂತಿದೆ. ಅವರೆಲ್ಲರ ಕಾವ್ಯದ ಭಾಷೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆಗಳು ಭಿನ್ನವಾದವು. ಇವತ್ತಿನ ಅಂದರೆ ಪಕ್ಕಾ ವರ್ತಮಾನದ ಕಾವ್ಯದ ಹಾಗೆ ಕನ್ನಡದ ಓದುಗರಿಗೆ ತೋರುವ ರಚನೆಗಳು ಇವು. ಈ ಬಗೆಯ ಬರೆಹಗಳು ಕನ್ನಡದಲ್ಲಿ ಕಡಿಮೆ. ಹಾಗಾಗಿಯೇ ಎಲ್ಲವೂ ಕನ್ನಡಕ್ಕಿಂತ ಭಿನ್ನವಾಗಿವೆ ಅನ್ನಿಸುತ್ತವೆ. ಇದ್ದರೂ ಯಾವ ಭಾಷೆಯಲ್ಲಾದರೂ ಬರೆಯಬಹುದಾದ ಅರ್ಬೇನ್ ಅನುಭಾವದ ಕವಿತೆಗಳಿವು.


ಈ ಕವಿತೆಗಳನ್ನು ನಿರ್ದಿಷ್ಟ ಹಿನ್ನೆಲೆಯಿಂದ ಗಮನಿಸುವುದು ಸಾಧ್ಯವಾಗಿಲ್ಲ ಏಕೆಂದರೆ ಇವು ಯಾವ ಜಿಯಾಗ್ರಫಿಯ ಹುಟ್ಟುಗಳೆಂಬ ಮಾಹಿತಿಯಿಲ್ಲ. ಕವಿತೆಗಳ ಆಯ್ಕೆಯಲ್ಲಿ ಗಮನಿಸಿದ ಮಾನದಂಡಗಳೇನು ಎನ್ನುವುದೂ ತಿಳಿಯದು. ಆದ್ದರಿಂದ ಇದು ಪ್ಯಾನ್ ಕೇರಳೈಟ್ ಆದ ಅನುಭವವೇ? ಇಡೀ ಕೇರಳದ ಕಾವ್ಯ ಇದೇ ಬಗೆಯ ನರಳುವಿಕೆಯಲ್ಲಿ ತೊಡಗಿಕೊಂಡಿದೆಯೇ? ಸಾಮುದಾಯಿಕ ಅನುಭವ ಗ್ರಹಣವೇ ನಾಪತ್ತೆಯಾಗಿ ಬರೀ ಸ್ವಕೇಂದ್ರಿತ ಅನುಭವಗಳು ಮಾತ್ರವೇ ಕಾವ್ಯವೆಂಬುದಕ್ಕೆ ಸಾಮಗ್ರಿಯಾಗಿ ಒದಗುತ್ತಿದೆಯೇ? ಅಥವಾ ಈ ಹಳಹಳಿಕೆ ಇಡೀ ಮಲಯಾಳಂ ಭಾಷಿಕ ಕವಿಗಳಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿದೆಯೇ? ಇಂದಿನ ಅಮೆರಿಕನ್ ಕಾವ್ಯದ ಹಾಗೆ ಎಸೋಟೆರಿಕ್ ಅನ್ನುವುದಕ್ಕೆ ಹಿಂದಿನ ದಶಕಗಳ (ಸಂತೆಗಳಲ್ಲಿ ಕವಿತೆಯೋದುತ್ತಿದ್ದ ಕವಿಯೊಬ್ಬರು ನೆನಪಾಗುತ್ತಾರೆ) ಮಲಯಾಳಂನಲ್ಲಿ ಬಹು ಪ್ರಖ್ಯಾತವಾಗಿದ್ದ ಎಕ್ಸೋಟೆರಿಕ್ ಮಾರ್ಗವು ದಾರಿ ಮಾಡಿಕೊಟ್ಟಿದೆಯೇ? ಇದೊಂದು ಬಗೆಯಲ್ಲಿ ಗಮನವನ್ನು ಅಪೇಕ್ಷಿಸುತ್ತದೆ.

ಇದ್ದರೂ ಕೆಲವು ಕವಿತೆಗಳು ಭಿನ್ನವಾಗಿವೆ. ಪರ್ಷಿಯನ್ ಸೂಫಿಯ ಕಾವ್ಯವನ್ನು ನೆನಪಿಸುವಂತೆ ಒಂದೆರಡಿವೆ; ಒಂದು ಕ್ರೈಸಿಸ್ ಅನ್ನು, ಒಂದು ಹಳವಂಡವನ್ನು ಕುರಿತು ಸಂಯಮದಿಂದ ಹಾಡುವ ಕನಸುಗಳಿವೆ; ಬದುಕಿನ ನಂಬಿಕೆಗಳಿಂದ ಮನುಷ್ಯನನ್ನು ಡಿಲೀಟ್ ಮಾಡಬಹುದೆಂಬ ಕಳವಳದ ಕವಿತೆಯಿದೆ; ಅಳತೆ ಮೀರಿದ ಅಪನಂಬಿಕೆಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಕಾವ್ಯಾಭ್ಯಾಸಿಗೆ ಭಿನ್ನ ಅನುಭವವನ್ನು ಕೊಡುವ ಕವಿತೆಗಳಿವೆ. ಆದ್ದರಿಂದ ಇದರ ಪ್ರಕಟಣೆ ಅಗತ್ಯವಿದೆ ಎನ್ನಿಸುತ್ತದೆ, ನನಗೆ.
*

-ಆರ್. ವಿಜಯರಾಘವನ್

No comments:

Post a Comment