ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, December 4, 2017

ಅನ್ಯಾಯ

ಲೋಕ ನುಂಗಿದವನ ಕಾಲಡಿಗೆ
ಒಂದು ಬಾಳೆಹಣ್ಣು ಕದ್ದು ಸಿಪ್ಪೆ ಎಸೆದವನ ಕೊರಳಿಗೆ ಒಂದು ಹಗ್ಗವನ್ನು ಅಂಟಿಸುವುದಾದರೆ
ಆ ಹಗ್ಗ ನೇಯ್ದವನ ಬೆವರು ಅನ್ಯಾಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು.

ಅನ್ಯಾಯ!
*

ಕಾಜೂರು ಸತೀಶ್

Sunday, November 26, 2017

ಸಾಹಿತ್ಯ ಸಮ್ಮೇಳನ ಮತ್ತು...

ಮೈಸೂರಿಗೆ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆಂದು ತಿಂಗಳ ಮುಂಚೆಯೇ ನಿರ್ಧರಿಸಿದ್ದೆ. ಹೋಗಲು ಸಾಧ್ಯವಾಗಲಿಲ್ಲ. ಆ ಕುರಿತ ಕೊರಗೇನೂ ನನ್ನೊಳಗೆ ಅಂಟಿಕೊಂಡಿಲ್ಲ.
*

ಅದು ೭೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ನನ್ನನ್ನು ನಮ್ಮ ಜಿಲ್ಲೆಯಿಂದ ಕವಿಗೋಷ್ಠಿಗೆ ಆಯ್ಕೆ ಮಾಡಿದ್ದರು.

ಹೊರಡಬೇಕಾದ ದಿನದಂದು ಇಲಾಖೆಯ ತುರ್ತು ಕೆಲಸವೊಂದಿತ್ತು. ಮುಗಿಸಿ, ಹೊರಟು, ರಾಜಧಾನಿಗೆ ತಲುಪಿ, ವಸತಿಗೃಹ ಸೇರುವಷ್ಟರಲ್ಲಿ ರಾತ್ರಿಯೂಟದ ಸಮಯ ಮೀರಿತ್ತು.

ಆ ರಾತ್ರಿಯ ಉಪವಾಸ, ತಲೆತುಂಬಿಕೊಂಡಿದ್ದ ಕವಿತೆ, ದಿಗಿಲು ಹುಟ್ಟಿಸುತ್ತಿದ್ದ ಟ್ರಾಫಿಕ್ಕು, ಅಪರಿಚಿತ ಸ್ಥಳ... ಇವೆಲ್ಲ ಒಟ್ಟಿಗೆ ಸೇರಿ ಸುಖನಿದ್ದೆ ಕಣ್ಣ ತುಂಬಿಕೊಂಡಿತ್ತು.

ಮರುದಿನ ಗೆಳೆಯ ಜಗದೀಶ್ ಜೋಡುಬೀಟಿ ಸಿಕ್ಕರು. ಕವಿಗೋಷ್ಠಿಯ ಸಂದರ್ಭ ಕಿಕ್ಕಿರಿದು ತುಂಬಿದ ಸಭಾಂಗಣ. ಒಂದು ಗಂಭೀರವಾದ ಪದ್ಯವನ್ನು ಓದಿದೆ.

ಅಲ್ಲಿದ್ದ ಮಂದಿಗೆ ಫೊಟೊ ಹುಚ್ಚು ಇರಲಿಲ್ಲ.ಎಂದಿನಂತೆ ಭಾವೋದ್ರೇಕದ, ಏರುಸ್ವರದ ಸಾಲುಗಳಿಗೆ ಹೆಚ್ಚು ಚಪ್ಪಾಳೆ ಬಂದರೂ, ಒಳ್ಳೆಯ ಕೇಳುಗರವರು. ಮುಗಿಯುವವರೆಗೆ ಕುಳಿತು ಕವಿತೆಗಳಲ್ಲಿ ಮಿಂದರು. ಅದರ ಪಟವನ್ನು ಕವಿತೆ ಓದಿದ ನಾವ್ಯಾರೂ ಇಟ್ಟುಕೊಳ್ಳಲಿಲ್ಲ. (ಗೆಳೆಯ ದೂರದಿಂದ ಕ್ಲಿಕ್ಕಿಸಿದ ಮಬ್ಬುಚಿತ್ರವೊಂದು ಸಾಕ್ಷಿಗಿದೆ, ಅಷ್ಟೆ !)

*

ಈಗ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸ್ನೇಹವಲಯದ ಸಮ್ಮಿಲನ ಸಾಧ್ಯವಾದರೂ, ಸಾಹಿತ್ಯ ಪ್ರಜ್ಞೆ ದೂರವಾಗುತ್ತಿದೆ. ಯುವಸಮೂಹ ಫೊಟೊಗಳಿಗಾಗಿ ವಿವಿಧ ಭಂಗಿಗಳಲ್ಲಿ ಪೋಸು ಕೊಡುತ್ತಾ ಸೀಮಿತ ನಿಲುವಿನ ಗುಂಪುಗಳಲ್ಲಿ ಕಳೆದುಹೋಗುತ್ತಿರುವುದು ದಿಗಿಲು ಹುಟ್ಟಿಸುತ್ತಿದೆ.
*

ಕಾಜೂರು ಸತೀಶ್

Saturday, November 25, 2017

ತಟ್ಟೆ ಮತ್ತು ನಾನು

ನವೆಂಬರ್ ೬. ಮೈಸೂರಿನ ಕ್ಯಾಂಟೀನೊಂದರಲ್ಲಿ ಮಧ್ಯಾಹ್ನ ಊಟ ಮಾಡಿಯಾದ ಮೇಲೆ "ತಟ್ಟೆ ಎಲ್ಲಿಡಲಿ?" ಎಂದೆ.
"ಆ ಕಟ್ಟೆ ಮೇಲೆ ಇಡಿ ಸಾ", ಎಂದರು.
"ತೊಳೆದು ತರ್ಬೇಕಾ?" ಕೇಳಿದೆ.
"ಯೇ,ಏ.. ಬೇಡಬೇಡ, ಅಲ್ಲಿಡಿ ಸಾಕು" ಎಂದರು.

ಅದೀಗ ನೆನಪಾಗ್ತಾ ಇದೆ. ನಾನು ತಿಂದ ತಟ್ಟೆಯನ್ನು ಮತ್ತೊಬ್ಬರ ಹತ್ತಿರ ತೊಳೆಸೋದಾ?! ಹಣ ಕೊಡುತ್ತೇನೇನೋ ಹೌದು. ಹಾಗಂತ ಅವ್ರಿಂದ ತೊಳೆಸಿಬಿಡೋದಾ?

ಆದರೆ, ಒಮ್ಮೆಯೂ ನಾನು ಹಾಗೆ ತೊಳೆಯಲಿಲ್ಲ.ಮುಂದೆಯೂ ತೊಳೆಯಲಾರೆನೇನೋ!

ನನ್ನ ಪಾಪಪ್ರಜ್ಞೆಯ ಪಟ್ಟಿ ಬೆಳೆಯುತ್ತಲೇ ಇದೆ!
*

ಕಾಜೂರು ಸತೀಶ್

Saturday, November 18, 2017

ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ

'ಕಕ್ಕಸು' ಪದ ಬಳಸಲು ಜನ ಹಿಂಜರಿದಾಗ
ಪದಕ್ಕೆ ಪದ ಬೆಳೆದು ಬೀದಿಯಲ್ಲದು ಕಟ್ಟಿನಿಂತಾಗ
ಮತ್ತ್ಯಾರೂ ಸಲೀಸಾಗಿ ಒಳಗಿಳಿಯದಿರುವಾಗ
ಕವಿತೆಯೊಂದಿಳಿಯಿತು ಬಳುಕದೆ ಮ್ಯಾನ್ಹೋಲಿನ ಒಳಗೆ

ನುಗ್ಗಿ ಕೈಯಾಡಿಸಲು ಒಳಗೆ
ಎಷ್ಟೆಷ್ಟೋ ಪದಗಳು ಮೈಲಿಗೆಗೊಂಡು
ಸಾಲು-ಸಾಲು ಕಟ್ಟಿನಿಂತಿವೆ, ಕೆಟ್ಟುನಿಂತಿವೆ

ಎಲ್ಲ ಸ್ವಚ್ಛಗೊಂಡು ಹೊರಬರಬೇಕೆನ್ನುವಾಗ
ಮೂಗುಮುಚ್ಚಿದ, ಬೆಚ್ಚಿದ ಕವಿತೆಗಳೆಲ್ಲ ಬಂದು ಮುಚ್ಚಳ ಮುಚ್ಚಿದವು

ಮ್ಯಾನ್ಹೋಲಿನಲ್ಲಿ ಉಸಿರುಗಟ್ಟಿ ಸತ್ತ ಕವಿತೆಯ ಶವ
ಕವಿಗೂ ಸಿಗಲಿಲ್ಲ ,ಟಿವಿಗೂ ಸಿಗಲಿಲ್ಲ.
*


ಕಾಜೂರು ಸತೀಶ್

Sunday, November 12, 2017

ಗುಡಿಸಲು

ಗುಡಿಸಲಿನ ಕಣ್ಣು ಚಾಪೆಯ ಮೇಲೆರಗಿ
ಒಂದು ಎರಡು ಮೂರು... ನಕ್ಷತ್ರಗಳೆಣಿಕೆ

ಗುಡಿಸಲಿನ ಕಿವಿ ಮಿಡತೆಗಳ ಒಳಬಿಟ್ಟುಕೊಂಡು
ಚಿರ್ ಚಿರ್ರ್ ಸಂಗೀತ ಕಚೇರಿ

ಗುಡಿಸಲಿನ ಕಾಲು ಸುಯ್ಯೋ ಗಾಳಿಗೆ
ತಕ್ಕ ತಕ ತಕ್ಕ ತಕ

ಗುಡಿಸಲಿನ ಅಂಗೈಗೆ ಸಲಾಕೆಯ ಚುಂಬಿಸಿದ
ಗುಂಡುಗುಂಡು ಕೆಂಪುಕೆಂಪು ನೆನಪು

ಗುಡಿಸಲಿನ ಎದೆಗೆ ಗಿಡಬೆಳೆಸಿದ ಖುಷಿಯಲ್ಲಿ
ನೆರೆಮನೆಯ ಡಿಜೆಯ ಡುಬ್ಬುಡುಬ್ಬು ಡುಬ್ಬುಡುಬ್ಬು

ಗುಡಿಸಲಿನ ಹೊಟ್ಟೆಗೆ ಒಂದು ಮಗು
ಗೇರುಬೀಜದ ಹಾಗೆ ಅಂಟಿಕೊಂಡು
*


ಕಾಜೂರು ಸತೀಶ್

Thursday, November 9, 2017

ಪ್ರತಿಭೆ

ಎಲ್ಲಿ ಫಲವತ್ತಾದ ನೆಲವಿರುತ್ತೋ ಮತ್ತು ಹಚ್ಚಹಸಿರಿನಿಂದ ಸಮೃದ್ಧವಾಗಿರುತ್ತೋ, ಅಲ್ಲಿ ಪ್ರತಿಭಾನ್ವಿತ ಕಲಾಕಾರನೊಬ್ಬ ಹುಟ್ಟಿಬರಲು ಸಾಧ್ಯವಿಲ್ಲ. ಎಲ್ಲಿ ನೆಲ ಬರಡಾಗಿರುತ್ತೋ, ಹಸಿವು, ಬಡತನ, ನೋವಿರುತ್ತೋ, ಅಲ್ಲಿ ಓರ್ವ ಶುದ್ಧ ಪ್ರತಿಭೆಯ ಕಲಾಕಾರ ಹುಟ್ಟಿಕೊಳ್ಳುತ್ತಾನೆ. ಸೌಂದರ್ಯಾನುಭವದಲ್ಲಿ ಜಾಗೃತಗೊಳ್ಳುವ ಪ್ರತಿಭೆಗಿಂತ, ಅವಮಾನವು ಎಬ್ಬಿಸುವ ಪ್ರತಿಭೆಯ ತರಂಗಗಳು ಹೆಚ್ಚು.

ಆದರೆ, ಜಗತ್ತು ಅಂಥವನನ್ನು ತುಳಿಯುತ್ತದೆ!
*

ಕಾಜೂರು ಸತೀಶ್

Tuesday, November 7, 2017

ಹಲ್ಲು ಕೀಳದ ಹಾವು

ಎಷ್ಟೋ ಸಲ ನಾನು ಟೈಪಿಸಿದ ಅಕ್ಷರಗಳನ್ನು ಅಳಿಸುವಾಗ ನಾನೊಬ್ಬ ಹಲ್ಲು ಕೀಳದ ಹಾವಾದರೂ ಆಗಬೇಕಿತ್ತು ಎನಿಸಿದ್ದಿದೆ.
*

ಕಾಜೂರು ಸತೀಶ್

ಹಿಂಸೆ

ಈ ವ್ಯವಸ್ಥೆ ಹೇಗಿದೆ ಅಂದ್ರೆ ಯಾರಾದ್ರೂ ಚೆನ್ನಾಗಿ ದುಡೀತಾರೆ ಅಂತ ಕಂಡುಬಂದ್ರೆ ಸಿಕ್ಕಾಪಟ್ಟೆ ದುಡಿಸಿಕೊಳ್ತಾರೆ; ದುಡಿಸಿಯೇ ಕೊಲ್ತಾರೆ!

ಯಾರ ಮೇಲೆಯೂ ಕೊಲೆಯ ಆರೋಪ ಬರೋದಿಲ್ಲ.

ಸತ್ತ ದಿನ ನಾಲ್ಕು ಹೊನ್ನಶೂಲಕ್ಕೇರಿಸುವ ಮಾತುಗಳು!

ಆಮೇಲೆ ಉಳಿಯುವವ್ರು ಕಳ್ಳರು, ಖದೀಮರು, ಭ್ರಷ್ಟರು, ಸೋಮಾರಿಗಳು... ಇವರೆಲ್ಲಾ ಗಣ್ಯಾತಿ ಗಣ್ಯ ವ್ಯಕ್ತಿಗಳಾಗಿ ಬಾಳ್ತಾರೆ. ಸತ್ತ ಮೇಲೆಯೂ ಬದುಕುವಷ್ಟು ಚಾಣಾಕ್ಷರಾಗಿಬಿಡ್ತಾರೆ!
*

ಕಾಜೂರು ಸತೀಶ್

ಬಯಲ ನುಂಗಿದ ಕಥೆ

ನಾನು ಸಣ್ಣವನಿದ್ದಾಗ ಎಷ್ಟೊಂದು ಬಯಲು(ಬಾಣೆ)ಗಳಿದ್ದವು! ನಾವಲ್ಲಿ ದನ ಕಟ್ಟುತ್ತಿದ್ದೆವು, ಕಬಡ್ಡಿ, ಜೂಟಾಟ, ಬುಗುರಿಯಾಟ ಹೀಗೆ ಏನೇನೆಲ್ಲ ಆಟವಾಡಿಕೊಳ್ಳುತ್ತಿದ್ದೆವು.

ಇವತ್ತು ಅವೇ ಬಯಲುಗಳ ಎದೆಯ ಮೇಲೆ ಸಿರಿವಂತರ ಹೆಸರುಗಳು ಹಾರೆ ಗುದ್ದಲಿಗಳಲ್ಲಿ ಕೆತ್ತಲ್ಪಟ್ಟಿವೆ. ಅಮಾಯಕ ಕಾಫಿ ಗಿಡಗಳು, ಕರಿಮೆಣಸು ಬಳ್ಳಿಗಳು ಅಲ್ಲಿ ಸತ್ತ ನಮ್ಮ ಬಾಲ್ಯದ ಕಳೇಬರದ ಸಾರಹೀರಿ ಬೆಳೆಯುತ್ತಿವೆ.

ಮುಂದಿನ ಸರದಿ ನದಿಗಳು, ಅರಣ್ಯಗಳು ಇತ್ಯಾದಿ!
*

ಕಾಜೂರು ಸತೀಶ್

Wednesday, October 18, 2017

ಎಂ ಆರ್ ಕಮಲ ಅವರ ಮಾರಿಬಿಡಿ ಕವನ ಸಂಕಲನದ ಕುರಿತು

ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣಗಳಿವು.


ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ಜಾರಿಕೊಳ್ಳುತ್ತಿರುವ ಬಗೆಗೆ ಹತಾಶೆಯನ್ನು ವ್ಯಕ್ತಪಡಿಸುತ್ತಲೇ ಮರುಸ್ಥಾಪಿಸುವ ಹಂಬಲವನ್ನೂ ಇಟ್ಟುಕೊಂಡಿದೆ.

ಬೀದಿಯಲ್ಲಿ ಯಾರೋ ಅಮ್ಮ ಎಂದರೆ
ದಿಢೀರನೆ ಏಳುತ್ತಾಳೆ ತನ್ನನ್ನೇ ಕರೆದಂತೆ!

(ಅವಳಿಗೀಗ ಐವತ್ತು )

ಢಿಕ್ಕಿ ಹೊಡೆದರೂ, ಎಡವಿ ಬಿದ್ದರೂ ಕತ್ತೆತ್ತದ,
ಕೀಲಿಮಣೆಯಲ್ಲೇ ಕೀಲಿಸಿದ ಕೀಲುಗೊಂಬೆಗಳು

(ಮೌನೇಶನೊಂದಿಗೆ ವಾಕಿಂಗ್)

*

ಎಮೋಟಿಕಾನ್ಗಳಲ್ಲಿ ಹೊಮ್ಮುವ ಬದುಕಿದು . ಇಲ್ಲಿ ಎದೆಯ ಭಾಷೆ ಸತ್ತರೂ ದಿಗಿಲಾಗಬೇಕಿಲ್ಲ . ಏಕೆಂದರೆ ಈಗಾಗಲೇ ಸಂಭ್ರಮದ ಬದುಕಿನ ಗೆಜ್ಜೆ ಕಟ್ಟಿ ಅಟ್ಟಕ್ಕಿಟ್ಟಾಗಿದೆ. ಹೀಗಾಗಿ ಮನುಷ್ಯನ ಮುಗ್ಧತೆಯನ್ನು ಇಲ್ಲಿ ಮಾರಲಾಗುತ್ತದೆ. 'ಮಾರಿಬಿಡಿ' ಎಂದು ಕವಿ ಹೇಳುತ್ತಿಲ್ಲ; ಯಾರೋ ಟಿವಿಯಲ್ಲಿ ಅರಚುತ್ತಿದ್ದಾರೆ. ಇಂತಹ ವಿಷಾದಗಳ ನಡುವೆ ಬೆಳೆದು ನಿಲ್ಲುವ ಎಂ.ಆರ್.ಕಮಲ ಅವರ ಆಶಯ ನ್ಯಾಯೋಚಿತ ಮಾರ್ಗವನ್ನು ಹಂಬಲಿಸುತ್ತದೆ.

ಮೊಗದಲ್ಲಿನ ನಗು ಮಾಸದಂತೆ ಕಾದಿರಿಸುವ
ಮುಖಪುಸ್ತಕದ ಮುಖಚಿತ್ರವಾಗಬೇಕು

(ಮುಖಪುಸ್ತಕವೆಂಬ ಮಾರುಕಟ್ಟೆ)

ಇಷ್ಟಾದರೂ ಕಾಲಕ್ಕೆ ಒಗ್ಗಿಕೊಳ್ಳಲೇಬೇಕು. ಅದಕ್ಕಾಗಿ ಕೊನೆಗೆ ಕೀಲಿಮಣೆಯಲ್ಲಿ ಮುಂಜಾನೆಯ ಸಂದೇಶ ಒತ್ತಿ ಕಳಿಸಿ ಕೃತಕೃತ್ಯರಾಗುತ್ತಾರೆ

*

ಬಾಲ್ಯದ ಮುಗ್ಧ ಶಬ್ದ ಚಿತ್ರಗಳಿವೆ ಇಲ್ಲಿನ ಅನೇಕ ಕವಿತೆಗಳಲ್ಲಿ . ಸ್ತ್ರೀಪರ ದನಿಯು ಸ್ತ್ರೀವಾದದ ಆಚೆಗೆ ಚಾಚಿಕೊಂಡಿದೆ.

ಉರಿದುರಿದು ಈಗ ಕರಕಲಾದವಳು
ಇರುಳಿಗೇ ಕರಿಬಣ್ಣ ಮೆತ್ತಿದ್ದೇನೆ

(ನಿನ್ನ ರಾತ್ರಿಗಳಲ್ಲಿ)

ಅಪ್ಪ ಮನ್ನಿಸಿ ನಾನೀಗ ಜಾಲಾರಿಯ ದಾರಿಯಲ್ಲಿ
(ಜಾಲಾರಿ ಹೂ ಪರಿಮಳವರಸಿ)

'ನೋವು' ಯಾರೋ ಕೂಗಿದರು
ಹೆಣ್ಣುಮಕ್ಕಳೆಲ್ಲ ದಬದಬನೆ
ಹೊರಗೋಡಿ ಸಿಕ್ಕಸಿಕ್ಕವರ
ಕಣ್ಣಲ್ಲೆಲ್ಲ ಮುಖ ನೋಡಿಕೊಂಡರು

(ನೋವು).

*

ರಾಚನಿಕವಾಗಿ ಕವಿತೆಗಳಲ್ಲಿ ವೈವಿಧ್ಯತೆಯಿದೆ. ಎಲ್ಲ ಕವಿತೆಗಳಿಗೂ ಧ್ಯಾನಸ್ಥ ಭಂಗಿ. ಸರಳ, ಸಹಜ ಅಭಿವ್ಯಕ್ತಿಕ್ರಮದ ಜೊತೆಗೆ ಪ್ರಯೋಗಶೀಲ ಆಕೃತಿಗಳಿವೆ. ಸಮಕಾಲೀನ ಕವಯಿತ್ರಿ ಸವಿತಾ ನಾಗಭೂಷಣ ಅವರ ಕವಿತೆಗಳನ್ನು ಜೊತೆಗಿಟ್ಟುಕೊಂಡು ವಿವಿಧ ಆಯಾಮಗಳಲ್ಲಿ ಓದುವ ತುರ್ತನ್ನೂ ಕಾವ್ಯಾಭ್ಯಾಸಿಗಳಲ್ಲಿ ಇವು ಬೇಡುತ್ತವೆ.
*

ಕಾಜೂರು ಸತೀಶ್

Friday, September 1, 2017

ಉತ್ತಮ ಶಿಕ್ಷಕ ಪ್ರಶಸ್ತಿಗಳೂ , ಆದರ್ಶ ಶಿಕ್ಷಕರೂ..

೧. "ಮೊದಲು ಇಲ್ಲಿಂದ ತೊಲಗಿ, ನಿಮ್ಮಂಥವರು ನಮಗೆ ಬೇಕಾಗಿಲ್ಲ!"
ಸಭೆಯಲ್ಲಿ ಪೋಷಕರು ಹೀಗೆ ಛೀಮಾರಿ ಹಾಕಿದ್ದು ಒಬ್ಬ ಮೇಷ್ಟ್ರಿಗೆ! ಆ ಮೇಷ್ಟ್ರು ಮೂರು ವರ್ಷ ಆ ಶಾಲೆಯಲ್ಲಿದ್ದರು. ಅಬ್ಬಬ್ಬಽ ಎಂದರೆ ನೂರು ದಿನ ಶಾಲೆಗೆ ಬಂದಿರಬಹುದು. ಒಂದೇ ಒಂದು ದಿನವೂ ತರಗತಿಗೆ ಹೋಗಿ ಅವರಿಗೆ ಕೊಟ್ಟಿದ್ದ ವಿಷಯವನ್ನು ಬೋಧಿಸಲಿಲ್ಲ!

ಅವರಿಗೆ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿತು!!

೨. ಅವರು ಮೇಷ್ಟ್ರು ಎಂದು ಬಹುತೇಕ ಮಂದಿಗೆ ತಿಳಿದೇ ಇರಲಿಲ್ಲ; ದೊಡ್ಡ ಅಧಿಕಾರಿ ಎಂದುಕೊಂಡಿದ್ದರು! ಕೆಲಸಕ್ಕೆ ಸೇರಿ ಸುಮಾರು ವರ್ಷಗಳಾಗಿದ್ದರಿಂದ ಕಚೇರಿಯಲ್ಲಿ 'ಶಿಕ್ಷಣ ಸಂಯೋಜಕ'ನಾಗಿ ದರ್ಪದಿಂದ ಕಾರ್ಯನಿರ್ವಹಿಸುತ್ತಿದ್ದರು.ಅಧಿಕಾರಿಗಳನ್ನು ನಯವಿನಯಗಳ ಸೋಗಿನಿಂದ ತನ್ನೆಡೆಗೆ ಸೆಳೆದುಕೊಂಡಿದ್ದರು. ಯಾವ ಶಾಲೆಗೆ ತೆರಳಿದರೂ "ನಿಮಗೆ ನಾವು ಸುಮ್ಮನೆ ಸಂಬಳ ಕೊಡುತ್ತಿಲ್ಲ" ಎಂದು ಅಧಿಕಾರ ಚಲಾಯಿಸುತ್ತಿದ್ದರು. ಹೊಸದಾಗಿ ನೇಮಕವಾದ ಶಿಕ್ಷಕರುಗಳೇ ಆತನ ಟಾರ್ಗೆಟ್ ! ಅವರ ಸಂಬಳ ತಡೆಹಿಡಿಯುವಂತೆ ಮಾಡುವುದು, ಚಾಡಿ ಹೇಳುವುದು...ಹೀಗೆ ಮಾಡುತ್ತಾ ವಿಕೃತ ಸುಖ ಅನುಭವಿಸುತ್ತಿದ್ದರು!

ಹೀಗೆ ಹೊಟ್ಟೆಬೆಳೆಸಿಕೊಂಡು ಕಾಲ ಕಳೆದ ಅವರಿಗೆ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿತು!!

ಇವರಿಬ್ಬರೂ ಇತಿಹಾಸದಲ್ಲಿ 'ಆದರ್ಶ ಶಿಕ್ಷಕರು' ಎಂದು ಅಚ್ಚಾದರು.
*

೧. ನಾನು ಒಂದನೇ ತರಗತಿಯಲ್ಲಿದ್ದಾಗ ನನ್ನ ತುಂಟತನವನ್ನು ಸಹಿಸದ ಹೇಮಾವತಿ ಟೀಚರ್ ತಕ್ಕ ಶಾಸ್ತಿಯನ್ನೇ ಮಾಡಿದ್ದರು. ನನ್ನ ಅಳು ಗಂಟಗಟ್ಟಲೆ ಮುಂದುವರಿದಾಗ ಕಂಗಾಲಾದರು ಟೀಚರ್. ಮಧ್ಯಾಹ್ನದ ಊಟವನ್ನೂ ಬಿಟ್ಟು ಅಳು ಮುಂದುವರಿಸಿದಾಗ ನನ್ನನ್ನು ಎತ್ತಿಕೊಂಡು ತುತ್ತು ಕೊಟ್ಟಿದ್ದರು! ಒಂದನೇ ತರಗತಿಯಲ್ಲಿದ್ದಾಗಲೇ ನನ್ನಂಥವರಿಗೆ ಕನ್ನಡವನ್ನು ಓದಲು, ಬರೆಯಲು ಕಲಿಸಿದ ಆ ಟೀಚರ್ ಒಮ್ಮೆಯೂ ಇಂತಹ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲಿಲ್ಲ; ರಾಜಕೀಯ ಮಾಡಲಿಲ್ಲ!


೨. ಪ್ರೌಢ ಶಾಲೆಯಲ್ಲಿದ್ದಾಗ ಗಣಿತ ಮೇಷ್ಟ್ರಾಗಿದ್ದವರು ಗುರುಸ್ವಾಮಿ ಸರ್ . ಅವರ ಬ್ಯಾಗಿನಲ್ಲಿ ಒಂದು ಟಾರ್ಚ್ ಇರುತ್ತಿತ್ತು! ಬೆಳಕು ಮೂಡುವ ಹೊತ್ತಲ್ಲಿ ಮನೆಬಿಟ್ಟರೆ, ಮನೆ ತಲುಪಿದ್ದದ್ದು ಕತ್ತಲು ಕವಿದ ಮೇಲೆಯೇ ! ಅವರ ಅಸಾಧಾರಣ ಕರ್ತವ್ಯ ಪ್ರಜ್ಞೆ , ಉದಾತ್ತ ಗುಣಗಳು ನನ್ನಂಥವರ ಹೃದಯಗಳನ್ನು ಎಂದೆಂದೂ ಆಳುತ್ತಿರುತ್ತದೆ. ಅವರು ಒಮ್ಮೆಯೂ ಪ್ರಶಸ್ತಿಗಳ ಬೆನ್ನುಬೀಳಲಿಲ್ಲ.

*

ಎಂಥವರನ್ನು ಬೆಳೆಸುತ್ತಿದ್ದೇವೆ ನಾವು! ಎಂಥವರನ್ನು ಮತ್ತಷ್ಟೂ ಕೊಬ್ಬುವಂತೆ ಮಾಡುತ್ತಿದ್ದೇವೆ!

ಎಂಥವರನ್ನು ಈ ಕಾಲ ಸ್ಮರಿಸಿಕೊಂಡು ಅವರನ್ನು ಇತಿಹಾಸದಲ್ಲಿ 'ಉದಾತ್ತ ಪುರುಷ' ಎಂದು ಪೋಷಿಸುತ್ತಿದೆ!


Sunday, August 27, 2017

ಮುಖಾಮುಖಿ

ಅವರ ಕಣ್ಣಿಗೆ ಬೀಳದಿರಲೆಂದು
ಬೆಳದಿಂಗಳನ್ನು ತಳ್ಳಿ ಆಚೆ ಕಳಿಸಿದೆ
ಪಾದಚಾರಿ ರಸ್ತೆ
ಭಯಪಡುವ ಅಗತ್ಯವಿಲ್ಲ
ಕ್ಯಾಂಪಿನಿಂದ ತಪ್ಪಿಸಿಕೊಂಡು ಹೊರನಡೆದೆ.

ಮರೆತುಹೋದ ದಾರಿ
ಗುಂಡಿಗಳು, ತಿರುವುಗಳು
ನಾಜಿ಼ ಗೋಡೆಗಳು
ಕೊಲೆಯಾದ ಜಾಗಗಳು...
ಉಕ್ಕಿ ಹರಿಯಲು
ಕಣ್ಣೀರೋ, ಹೊಳೆಯೋ...
ಬಿದ್ದು ಒದ್ದಾಡಲು
ಹೃದಯವೋ, ಭೂಮಿಯೋ...

ಖಾತ್ರಿಯಾಗಿತ್ತು
ಯಾವುದೂ ಸಾಕ್ಷಿಯಾಗಲಾರವೆಂದು.
ದಾರಿ ಇನ್ನೂ ದೂರವಿದೆ
ಮನಸ್ಸು ನಿನ್ನ ಕನಸಿನಲ್ಲಿ ಮುಳುಗಿದೆ
ನಿನ್ನ ಹಸಿಹಸಿ ತುಟಿಗಳ ನೆನಪು
ಇನ್ನೂ ಅಂಟಿಕೊಂಡಿದೆ ನನ್ನ ತುಟಿಗಳಲ್ಲಿ.

ಮುಂದೆ ಎಲ್ಲೋ ಸಿದ್ಧತೆಗಳ ಸದ್ದು
ಉಜ್ಜಿ ಹರಿತಗೊಳಿಸಿದ ಖಡ್ಗಗಳು
ಆರ್ಭಟಿಸುವ ಹಾಗೆ
ಬಂದೂಕಿನ ಉಂಡೆಗಳು
ಆಲಂಗಿಸಲು ಬರುವ ಹಾಗೆ.

ಚಂಗನೆ ಜಿಗಿದು
ಅಲ್ಲಿಂದ ತಪ್ಪಿಸಿಕೊಂಡು
ಪೊದೆಯಲ್ಲಿ ಅಡಗಿ ಕುಳಿತೆ
ಏದುಸಿರು ಬಿಟ್ಟು
ಗಡಗಡನೆ ನಡುಗಿ
ಅರೆಜೀವವಾಗಿ
ಹಿಂತಿರುಗಿ ನೋಡಿದರೆ
ಬೆನ್ನ ಹಿಂದೆಯೇ ನೀನು!
ಅಳು ತಡೆಯಲಾರದೆ ಅತ್ತುಬಿಟ್ಟೆ
ನೀನು ನಗುತ್ತಾ ಅಪ್ಪಿಕೊಂಡೆ.

ನನ್ನ ಮುದ್ದಿಸುವಾಗ
ನಿನ್ನ ನೀಳ ಅಂಗಿಯಲ್ಲಿ
ಸ್ವಸ್ತಿಕ್# ಚಿಹ್ನೆಯನ್ನು ಕಂಡೆ
ಕಪ್ಪು ಸಮವಸ್ತ್ರಕ್ಕೆ ಅಂಟಿಕೊಂಡ
ಅದ ನೋಡುತ್ತಲೇ
ಗುಂಡು ಎದೆ ಸೀಳುವ ಮೊದಲೇ
ನಾನು ಸತ್ತುಹೋಗಿದ್ದೆ.
*

ಮಲಯಾಳಂ ಮೂಲ - ಸುತಾರ್ಯ ಸಿ

ಕನ್ನಡಕ್ಕೆ- ಕಾಜೂರು ಸತೀಶ್

# ಸ್ವಸ್ತಿಕ್-ಹಿಟ್ಲರ್‍ನ ಚಿಹ್ನೆ

Monday, August 21, 2017

ಘಾಟಿಲ್ಲದ ಪರಿಮಳ - ಪಾರಿಜಾತದಂಥದೇ ಸ್ನಿಗ್ಧ ಸುವಾಸನೆ

ಒಂದೇ ವಿಷಯವನ್ನಾಧರಿಸಿ ಹಲವರು ಬರೆದ ಲೇಖನಗಳನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸುವುದಕ್ಕೂ, ಸಂಪಾದಕರು ಸೂಚಿಸಿದ ವಿಷಯವನ್ನು ಕುರಿತು ಆಹ್ವಾನಿತರು ಬರೆದದ್ದನ್ನು ಪ್ರಕಟಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದೇ ಇವೆ. ಇನ್ನು ಪ್ರಬಂಧ, ಕತೆ, ಕವಿತೆಗಳನ್ನು ಒಂದು ಸೂಚಿತ ವಿಷಯಾಧಾರಿಸಿ ಬರೆಸಿ ಸಂಪಾದಿಸಿ ಪ್ರಕಟಿಸುವುದಂತೂ ಅಪಾರ ಪರಿಶ್ರಮ, ತಾಳ್ಮೆ ಮತ್ತು ಲೇಖಕರ ಒಡನಾಟಗಳನ್ನಿಟ್ಟುಕೊಂಡ ಸಂಪಾದಕನಿಂದ ಮಾತ್ರ ಸಾಧ್ಯವಿರುವ ಸಂಗತಿ. ಇಂಥ ಕೆಲಸಗಳನ್ನು ಸಹಜವಾಗಿ ಪರಿಷತ್ತು ಅಥವ ಅಕಾಡೆಮಿಗಳು ಈಗಾಗಲೇ ಆಯಾ ಕ್ಷೇತ್ರದಲ್ಲಿ ಹೆಸರು ಮಾಡಿರುವವರಿಂದ ಒಂದು ವಿಶೇಷ ಸಂದರ್ಭಕ್ಕಾಗಿ ಮಾತ್ರ ಹಮ್ಮಿಕೊಳ್ಳುತ್ತವೆ. ಉದಾರಹರಣೆಗೆ ಹೇಳಬೇಕೆಂದರೆ ಸ್ವಾತಂತ್ರ್ಯ-೬೦, ಹಿಂದ್ ಸ್ವರಾಜ್-೧೦೦, ಮೈಸೂರುಮಲ್ಲಿಗೆಗೆ ಐವತ್ತು, ಗಾಂಧೀ ಸ್ತವನ, ಇತ್ಯಾದಿ ಇತ್ಯಾದಿ. ಆದರೆ ವ್ಯಕ್ತಿಯೊಬ್ಬರ ಖಾಸಗಿ ಸಮಾರಂಭಕ್ಕೆ ಒಂದು ವಿಷಯವನ್ನಾಧರಿಸಿ ಹಲವರ ಲೇಖನ/ಕವಿತೆಗಳನ್ನು ಪ್ರಕಟಿಸುವುದು ವಿಶೇಷವೇ ಸರಿ. ಶಿವಮೊಗ್ಗೆಯ ಸಾಹಿತ್ಯಾಭಿಮಾನಿಯೊಬ್ಬರು ಅವರ ಮನೆಯ ಗೃಹಪ್ರವೇಶಕ್ಕೆ ಮನೆ ಕುರಿತಂತೆ ರವಿ ಬೆಳಗೆರೆ ಯವರ ವಿಚಾರ ಸಿಡಿ ಮಾಡಿಸಿ ಉಡುಗೊರೆ ಕೊಟ್ಟ ಉದಾಹರಣೆಯಿದೆ.

ಈಗ ಅಂಥದೇ ಒಂದು ಖಾಸಗಿ ಉದ್ದೇಶಕ್ಕಾಗಿ ಪ್ರಕಟಿಸಲಾಗಿರುವ ಕವನ ಸಂಕಲನ " ಪಾರಿಜಾತ- ಪರಿ ಕವಿತೆಗಳು". ಕವಿ ವಾಸುದೇವ ನಾಡಿಗ್ ಸಂಪಾದಕತ್ವದಲ್ಲಿ ಕೆ.ಪಿ.ಮಂಜುನಾಥ ಮತ್ತು ಶುಭಮಂಗಳ ದಂಪತಿಯ ಹೊಸ ಮನೆ "ಪಾರಿಜಾತ" ದ ಗೃಹಪ್ರವೇಶ ಸಮಾರಂಭಕ್ಕಾಗಿ ನಾಡಿನ ಹಿರಿಕಿರಿಯ ಕವಿಗಳಿಂದ ಪಾರಿಜಾತ ಹೂವನ್ನು ಕುರಿತಂತೆ ಕವಿತೆಗಳನ್ನು ಆಹ್ವಾನಿಸಿ ಪ್ರಕಟಿಸಿರುವ ಕವನ ಸಂಕಲನ.


೨೯ ಕವಿಗಳು ಪಾರಿಜಾತ ಹೂವನ್ನು ಕುರಿತಂತೆ ಚಿಂತಿಸಿರುವ ಕ್ರಮವೇ ಚೇತೋಹಾರಿಯಾಗಿದೆ. ಸಹಜವಾಗಿ ಪಾರಿಜಾತ ಪುರಾಣದ ಹಿನ್ನೆಲೆ ಇರುವ ಹೂವಾಗಿರುವುದರಿಂದ ಕೃಷ್ಣ ಸತ್ಯಭಾಮೆ ರುಕ್ಮಿಣಿಯರ ಪ್ರಸಂಗ ನೆನಪಾಗುತ್ತದೆ. ಸ್ವರ್ಗದಿಂದ ಭೂಮಿಗೆ ತಂದ ಹೂ ಇದಾದ್ದರಿಂದ ಮತ್ತು ರಾತ್ರಿಯಲ್ಲರಳಿ ಹಗಲ ಬೆಳಕಿಗೆ ನಲುಗಿ ಹೋಗುವ ಸೂಕ್ಷ್ಮತೆಯ ಈ ಹೂವು ತನ್ನ ಪರಿಮಳಕ್ಕೆ ಹೆಸರುವಾಸಿ.

ಕಾಜೂರು ಸತೀಶ್, ಕೃಷ್ಣ ದೇವಾಂಗಮಠ, ಸ್ವಾಮಿ ಪೊನ್ನಾಚಿಯಂಥ ಭರವಸೆಯ ಯುವ ಕವಿಗಳ ಜೊತೆಗೇ ಸ್ವತಃ ಸಂಪಾದಕ ವಾಸುದೇವ ನಾಡಿಗ್, ಸತ್ಯನಾರಾಯಣ ರಾವ್ ಅಣತಿ, ಸುಬ್ರಾಯ ಚೊಕ್ಕಾಡಿ ಮುಂತಾದ ಹಿರಿಯರ ಕವಿತೆಗಳೂ ಈ ಸಂಕಲನದಲ್ಲಿರುವ ಕಾರಣ ಕುತೂಹಲ ಹುಟ್ಟಿಸುತ್ತದೆ. ಪಾರಿಜಾತದ ನೆವದಲ್ಲಿ ಪುರಾಣದೊಂದಿಗೆ ಮುಖಾಮುಖಿಯಾಗುತ್ತಲೇ ವರ್ತಮಾನದ ಸಂಕಟಗಳನ್ನು ಒಳಗೊಂಡಿರುವ ಈ ಸಂಕಲನದ ಬಹುತೇಕ ಕವಿತೆಗಳು ಅದನ್ನು ಪ್ರಕಟಿಸಿರುವ ವ್ಯಾಪ್ತಿಯಾಚೆಗೂ ನಿಂತು ಹಲವು ಕಾಲ ಕಾಡುತ್ತಲೇ ಇರುತ್ತವೆ.

ಆಗಾಗ ರೆಂಬೆ ಕತ್ತರಿಸಬೇಕು ಕಾಲದ
ಹೂವಿಗಾಗಿ
ಬೆಳಕಿಗಾಗಿ


ಎನ್ನುವ ನಿಲುವು ಕಾಜೂರು ಸತೀಶ ಅವರದ್ದಾದರೆ
ನಿನ್ನೆಯ ನೆನಪೇ ಇಲ್ಲದಂತೆ
ಹವಳದಂಟಿನ ಪಾರಿಜಾತ
ಎನ್ನುವ ಗಾಯತ್ರೀ ರಾಘವೇಂದ್ರ, ಆಗಸದ ಅಂಗೈ ಕೆಳಗೆ ಮಣ್ಣ ಹೂವಿನ ಬಂಧ ಎನ್ನುವ ಚೀಮನಹಳ್ಳಿ ರಮೇಶಬಾಬು, ಪಾರಿಜಾತದಲ್ಲಿ ರಾಧೆಯನ್ನರಸುವ ದೇವಯಾನಿಯವರ ಪ್ರಯತ್ನ, ನಿರ್ಮಲಾ ಶೆಟ್ಟರ್ ಮುಂದುವರೆಸಿ

ಉತ್ತರ ತಿಳಿದೂ ಗೊತ್ತಿಲ್ಲದಂತೆ ಕಾಡುತ್ತಲಿರಬಹುದು
ನಿನ್ನೊಳಗೂ
ಕತ್ತಲಿಗಷ್ಟೇ ಯಾಕೆ ನೀ ಮೀಸಲು
ಅಂತ ಕೇಳುತ್ತಾರೆ.

ಪುರಾಣವನ್ನೇ ಆಶ್ರಯಿಸಿದ ಸಿ.ಪಿ.ರವಿಕುಮಾರ್ ತಮ್ಮ " ಸತ್ಯಭಾಮೆ ಮತ್ತು ಪಾರಿಜಾತ" ದಲ್ಲಿ ರುಕ್ಮಿಣಿಯನ್ನು ತಾರದೆಯೂ ಪಾರಿಜಾತಕ್ಕೆ ಮತ್ತೊಂದು ಆಯಾಮವನ್ನೇ ನೀಡಿದ್ದಾರೆ.

ಇದ್ದರೆ ಇರಬೇಕು ಮರಳಿ ಏನನ್ನೂ ಬೇಡದೆ
ಹರ್ಷ ಸುರಿಸುವ ಪಾರಿಜಾತದಂತೆ
ಎಂದು ಮುಂದುವರೆಯುತ್ತದೆ.

ಹಗಲ ಬೆಳಕಲ್ಲರಳದ ಪಾರಿಜಾತ
ಇರುಳ ಸೆರಗಲ್ಲೇ ಅರಳಿ ನಗುವ ಹಾಗೇ
ಬದುಕ ಬೆದೆಯಲ್ಲರಳದ ಕವಿತೆ
ವಿಷಾದದ ಹಬೆಯಲ್ಲೇ ಕುಡಿಯೊಡೆಯುವುದು ಏಕೆ
(ಡಿ.ಎಸ್.ರಾಮಸ್ವಾಮಿ)ಎನ್ನುವ ಜಿಜ್ಞಾಸೆಯೂ ಇಲ್ಲಿದೆ.

ಒಬ್ಬೊಬ್ಬರಿಗೆ ಒಂದೊಂದು ವಾಸನೆಯ ನಾಳ
ನಿನ್ನ ಒಡಲೊಳಗೆ
ಮೈಮರೆತರೆ ಕೆಳಗೆ ನೆಲಕ್ಕೆ
ಬಿಟ್ಟರೆ ಹಗುರ ಮೇಲೆ
ಎನ್ನುವ ವಸಂತ ಕುಮಾರ ಪೆರ್ಲ,

ನಾಳೆ ಎಲ್ಲ ಬಿಟ್ಟು ಹೊರಡುವಾಗ
ಗಂಧ ಉಳಿಯಬೇಕು
ಅಂಗಿ ಕಳಚುವ ಹಾಗೆ ತೊಟ್ಟು ಕಳಚುವೆಯಲ್ಲ
ಬದುಕ ಮೋಹದ ಮರದಲಿರುವವರಿಗೆಲ್ಲ
ಬಿಟ್ಟು ಹೊರಡುವುದು ಯಾರಿಗೂ ಕಷ್ಟವಲ್ಲ
( ವಿದ್ಯಾರಶ್ಮಿ ಪೆಲ್ಲತಡ್ಕ)

ಹಾಸಿಗೆಯ ಮೇಲೆ ನಲುಗಿದ ಪಾರಿಜಾತಕ್ಕೀಗ
ಮಿಲನದ ನಂತರದ ಮತ್ತೇರಿಸುವ ಗಂಧ (ಶ್ರೀದೇವಿ ಕೆರೆಮನೆ)

ಮುಟ್ಟಿದರೆ ಮಾಸುವ ನರುಗಂಪು ದಳವೇ
ನಡುವೆ ನಸುಗೆಂಪು ಬೊಟ್ಟಿನ ಶೀಲ ಸಂಪನ್ನೆ ( ಅಣತಿ) ಎಂದೆಲ್ಲ ಕೊಂಡಾಡುತ್ತಿರುವಾಗ ಸ್ವಾಮಿ ಪೊನ್ನಾಚಿ
ಕೈ ಕೊಟ್ಟ ಪ್ರೇಮಿಯನು
ನೆನೆದು ಗೋಳಾಡುವ ನಿಮಗೆ
ಜೊತೆಯಾಗಬಹುದು ಈ ಹೂವು
ಭಗ್ನ ಹೃದಯದ ಸಾಂತ್ವನಕೆ
ಎನ್ನುವವರೆಗೂ ಮತ್ತೊಂದು ಆಯಾಮಕ್ಕೆ ಜಿಗಿಯುತ್ತದೆ.

ಸ್ಮಿತಾ ಅಮೃತರಾಜ್ ಪಾರಿಜಾತವನ್ನು ಆಯುವಾಗಲೆಲ್ಲ ಕೃಷ್ಣನನ್ನೇ ಕಂಡರೆ, ಚೊಕ್ಕಾಡಿಯವರಿಗೆ ಅದು ಧ್ಯಾನಸ್ಥವಾಗಿ ಆಕಾಶಕ್ಕೆ ಲಗ್ಗೆ ಇಟ್ಟಿದೆ.

ಹೀಗೆ ಪಾರಿಜಾತದ ಪರಿಯನ್ನು ಪರಿ ಪರಿಯಾಗಿ ಒಳಗೊಂಡ ಈ ಸಂಕಲನ ಸದ್ಯ ಬರೆಯುತ್ತಿರುವ ಹಲವು ವಿಭಿನ್ನ ಮನಸ್ಕ ಕವಿಗಳನ್ನು ಒಟ್ಟಿಗೆ ಸೇರಿಸಿದೆ. ಹಾಗೇ ಇಂಥ ಭಿನ್ನತೆಯಲ್ಲೂ ಇರುವ ಕವಿತೆಯೆಂಬ ಏಕೈಕ ಮೋಹಕ್ಕೆ ಆಡೊಂಬೊಲವನ್ನೂ ಕರುಣಿಸಿದೆ. ವಾಸುದೇವ ನಾಡಿಗರ ಶ್ರಮಕ್ಕೆ ಸಾಥಿಯಾದ ಪ್ರಕಾಶಕರು ಮುಖಪುಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿದ್ದಿದ್ದರೆ ಚೆನ್ನಿತ್ತು.
*

ಡಿ.ಎಸ್. ರಾಮಸ್ವಾಮಿ

############################
ಪುಸ್ತಕ - ಪಾರಿಜಾತ ಪರಿ ಕವಿತೆಗಳು
ಪ್ರಕಾರ - ಕವನ ಸಂಕಲನ
ಸಂಪಾದಕ - ವಾಸುದೇವ ನಾಡಿಗ್
ಪ್ರಕಾಶಕರು- ಇಂಡಿಗೋ ಮಲ್ಟಿಮೀಡಿಯ

Friday, August 18, 2017

ಗಾಯದ ಹೂವುಗಳು: ಮಾನವತ್ವದ ಕವಿತೆಗಳು

ಗಾಯದ ಹೂವುಗಳು
ಲೇ: ಕಾಜೂರು ಸತೀಶ್
ಪುಟ:120, ಬೆಲೆ:75/-
ಪ್ರಕಾಶನ: ಫಲ್ಗುಣಿ ಪುಸ್ತಕ ಬೆಂಗಳೂರು


ಕಾಜೂರು ಸತೀಶ್ ನಮ್ಮ ನಡುವೆ ಹೊಸ ಭರವಸೆ ಮೂಡಿಸಿರುವ ಸೂಕ್ಷ್ಮ ಸಂವೇದನಾಶೀಲ ಕವಿ ಮತ್ತು ಅನುವಾದಕ. ಮೂಲತಃ ಪರಿಸರ ಪ್ರೇಮಿಯಾದ ಇವರ ಕಾವ್ಯದಲ್ಲಿ ನೆಲಮೂಲದ ತುಡಿತವನ್ನು, ಜೀವಪರಿಸರದ ಅಭೀಪ್ಸೆಯನ್ನು, ಸಾಮಾಜಿಕ ಸಮಾನತೆಯನ್ನು ನಿಚ್ಚಳವಾಗಿ ಕಾಣಬಹುದು. ಮೆಲುಮಾತಿನಲ್ಲಿಯೇ ತನ್ನ ಬೆಂಕಿ ಒಡಲನ್ನು ತೆರೆದಿಡಬಲ್ಲ ಕಾಜೂರು ಸತೀಶ್ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಇವರ ಮನಸ್ಸು ತುಡಿಯುವುದು ಪ್ರೀತಿ ಮತ್ತು ಸ್ನೇಹದ ಪಾತಳಿಯಲ್ಲಿ.
ಪ್ರಸ್ತುತ ಗಾಯದ ಹೂವುಗಳು ಕಾಜೂರು ಸತೀಶ್ ಅವರ ಪ್ರಥಮ ಕವನಸಂಕಲನ. ಇದು 2015ರ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಕೃತಿ. ಈ ಕವನಸಂಕಲನದಲ್ಲಿ ಒಟ್ಟು ಐವತ್ತಮೂರು ಕವಿತೆಗಳಿವೆ. ಸಾಹಿತ್ಯದ ಯಾವ ಚಳವಳಿಗಳ ಹಣೆಪಟ್ಟಿ ಹಚ್ಚಿಕೊಳ್ಳದೆ ಬದುಕಿನಂಗಳದಲ್ಲಿ ನಿಂತು ನಡೆಯುವುದನ್ನೆಲ್ಲಾ ಕಂಡುಂಡು ಚಿತ್ರಿಸಿರುವುದನ್ನು ಇಲ್ಲಿ ಕಾಣುತ್ತೇವೆ. ಈ ಸಂಕಲನದ ಎಲ್ಲಾ ಕವಿತೆಗಳು ವಾಸ್ತವಿಕತೆಯ, ವಸ್ತುಸ್ಥಿತಿಯ, ವರ್ತಮಾನದ ಅನುಭವದಾಳದಿಂದ ಹೊರಹೊಮ್ಮಿವೆ. ಬದುಕಿನ ವಿಷಮತೆ, ಮೋಸ, ವಂಚನೆ, ನೋವು-ನಲಿವು, ಉಪದೇಶ, ಪ್ರೀತಿ, ಪ್ರೇಮ, ಹತಾಶೆ -ಹೀಗೆ ಬದುಕಿನಲ್ಲಿ ಕಂಡು ಕೇಳಿದ ವಿವಿಧ ರೀತಿಯ ಅನುಭವಗಳೇ ಇಲ್ಲಿಯ ಕವಿತೆಗಳ ವಸ್ತು. ಕಾಜೂರು ಸತೀಶ್ ಅವರದು ಆರ್ಭಟಿಸುವ ಕಾವ್ಯವಲ್ಲ. ಮೆಲುದನಿಯಲ್ಲಿಯೇ ಆಪ್ತವಾಗಿ ಮಾತನಾಡಿಸಲು ಹವಣಿಸುವ ಕಾವ್ಯ. ಕಾಜೂರು ಪ್ರಯತ್ನಪೂರ್ವಕವಾಗಿ ಕಾವ್ಯ ಹೊಸೆಯುವುದಿಲ್ಲ. ನಿಸ್ಸಂಶಯವಾಗಿ ಅವರದ್ದು ಭಾವಕ್ಕೆ ಮೂಡಿದ ಭಾಷೆ. ಅವರ ಕವಿತೆಗಳ ಒಡಲಿನಲ್ಲಿರುವ ತಣ್ಣನೆಯ ಬೆಂಕಿ ಓದುಗರನ್ನು ತಕ್ಷಣವೇ ತಟ್ಟುತ್ತದೆ. ಕಾಜೂರು ಅವರ ಕಾವ್ಯಗುಣ ವರ್ತಮಾನದ ದುಃಸ್ಥಿತಿಯ ಕುರಿತು ಭೀತಗೊಂಡಿದೆ. ಕಾವ್ಯಾಲಂಕಾರ ಅರ್ಥಾಲಂಕಾರವನ್ನು ಮೀರಿಸುವ ಭಾವಾಲಂಕಾರ ಪ್ರತಿಯೊಂದು ಕವಿತೆಯಲ್ಲಿಯೂ ಸ್ಪಂದಿಸುತ್ತದೆ. ಸಮಾನತೆಯ, ಆರೋಗ್ಯಪೂರ್ಣ, ಮಾನವೀಯ ಸಮಾಜವೊಂದು ರೂಪುಗೊಳ್ಳಬೇಕೆಂಬ ಹಂಬಲ ಸತೀಶ್‍ರ ಕಾವ್ಯಭೂಮಿಕೆಯನ್ನು ರೂಪಿಸಿದೆ. ಈ ಸಂಕಲನದ ಪ್ರತಿಯೊಂದು ಕವಿತೆಗಳಲ್ಲಿಯೂ ಅವರ ಈ ದನಿಯನ್ನು ಓದುಗರು ಕೇಳಿಸಿಕೊಳ್ಳಬಹುದು. ಇಲ್ಲಿನ ಕವಿತೆಗಳ ಸ್ಥಾಯಿಭಾವ ದಟ್ಟವಾದ ವಿಷಾದ ಮತ್ತು ಮಡುಗಟ್ಟಿದ ನೋವಿನ ಜಿನುಗುವಿಕೆ ಆಗಿದೆ.

ನನ್ನ ನಿನ್ನ ನಡುವೆ ಕಡಲಿಲ್ಲ
ಈ ಹೂವುಗಳನ್ನು ಮುಟ್ಟಲು
ಸುಟ್ಟುಹೋಗುತ್ತೇನೋ ಎಂಬ
ಭಯವಿದೆ ನನಗೆ

(ಕಡಲಾಚೆಯ ಹುಡುಗಿಗೆ)

ಎಂದು ಆತ್ಮಶೋಧ ಮಾಡಿಕೊಳ್ಳುತ್ತ ಕಾಜೂರು ಸತೀಶ್ ತಾನು ಪ್ರೀತಿಸಿದ ಹುಡುಗಿಯಿಂದ ತಿರಸ್ಕೃತನಾದ ನೋವು ಎದೆಯಲ್ಲಿ ಉಳಿದಿದೆ. ಆ ಪ್ರೇಮದ ಬಗೆಯನ್ನು ಅರಿಯುವ ಕ್ರಮ, ತನ್ನ ಪ್ರಿಯತಮೆಗೆ ಮನವರಿಕೆ ಮಾಡುವ ಕ್ರಮವಾಗಿ ಅನೇಕ ಕಡೆ ಕಾಣುತ್ತದೆ. ತನ್ನೆಲ್ಲ ವಿಹ್ವಲತೆ, ಸ್ವಪ್ನಗುಣ, ಜೀಕುಗಳಿಂದ ಈ ಕವಿತೆ ಆತ್ಮಶೋಧನೆಗೆ ಪ್ರೇರೇಪಿಸುತ್ತದೆ. ನೋಡಿದ್ದು, ಅನುಭವಿಸಿದ್ದು ಏನೋ ಇದೆಯಾದರೂ, ಕವಿಗೆ ಯಾವುದನ್ನು ಮುಟ್ಟಿ ಮಿಡಿಸುವ ಮನಸ್ಸಿಲ್ಲವಾದರೂ ಎಲ್ಲವನ್ನು ಹೇಳಿ ಮುಗಿಸಿಬಿಡಬೇಕೆಂಬ ನಿರ್ಧಾರವಿದೆ.

ಈ ರಾತ್ರಿಗಳಲ್ಲಿ ನಿದ್ರಿಸಲಾರೆ
ಹೃದಯ ರಿಂಗಣಿಸುತ್ತಲೇ ಇದೆ
ವ್ಯಾಪ್ತಿ ಪ್ರದೇಶಗಳಾಚೆಗೂ ಕೂಡ
ಉಗಾಂಡದ ಹುಡುಗ ಮುಲುಗುಡುತಿರಬಹುದು
ಅಮೀನನ ಉದ್ದ ಕೋರೆಗಳ ನಡುವೆ
ನಿದ್ದೆಹೋಗಿರಬಹುದು ನನ್ನೂರ ಹಸಿದ ಜನ ಹಸುಳೆಯಂತೆ

( ಈ ರಾತ್ರಿಗಳಲ್ಲಿ ನಿದ್ರಿಸಲಾರೆ)

ಜಗತ್ತು ಈಗ ಗಂಡಾಂತರದಲ್ಲಿದೆ. ಈ ಕವಿತೆಯ ಸಾಲುಗಳಲ್ಲಿರುವ ಸತ್ಯ, ವ್ಯಂಗ್ಯ ಸಾರ್ಥಕವಾಗಿದೆ. ಕವಿ ಸತೀಶ್ ಸಾಮಾಜಿಕವಾಗಿ ಎಷ್ಟು ಅಶಾಂತವಾಗಿದ್ದಾರೆ, ಅಸಹಾಯಕವಾಗಿದ್ದಾರೆ ಎಂಬುದನ್ನು ಈ ಕವಿತೆಯ ಸಾಲುಗಳಲ್ಲಿ ಸಹಜವಾಗಿ ಕಾಣಬಹುದು. ಇಂತಹ ವಾಸ್ತವ ಬದುಕಿನ ಬಗೆಗೆ ಕಾಳಜಿಯ ಸಾಲುಗಳು ಇಲ್ಲಿವೆ. ಹೀಗೆ ಕವಿಯ ವಿಚಾರ ಮಾರ್ಮಿಕವಾಗಿದೆ. ಜೀವನ ಮೌಲ್ಯಗಳ ಬಗೆಗೆ ಚಿಂತಿಸುವ ಕವಿ ಪ್ರಚಲಿತ ಸಮಸ್ಯೆಗಳ ಕುರಿತು ತಮ್ಮ ವಿಚಾರವನ್ನು ಹರಿಸಿದ್ದು ಸಮಂಜಸವಾಗಿದೆ.

ಸಾಕಿದ ಕಂತ್ರಿನಾಯಿ ಸಾವು ಸುಳಿವ ಹೊತ್ತಲ್ಲಿ
ಮನೆಬಿಟ್ಟು ದೂರ ಹೋದಂತೆ
ಜೋರುಮಳೆಯಲ್ಲಿ ನದಿಯೊಳಗಿನ ಮೀನು ಸತ್ತಂತೆ
ನೀನು ಸತ್ತ ಹೊತ್ತಲ್ಲಿ ನನಗೆ ಸಾವು ಬರಲಿ

(ನಾವಿಬ್ಬರು ತೀರಿಕೊಂಡ ಮೇಲೆ)

ಪ್ರೀತಿ-ಪ್ರೇಮದ ಪವಿತ್ರ ಆವಿಷ್ಕಾರವನ್ನು ಕವಿ ಮನೋಜ್ಞವಾಗಿ ಈ ಕವಿತೆಯಲ್ಲಿ ಚಿತ್ರಿಸಿದ್ದಾರೆ. ಪ್ರೇಮಿಗಳಿಬ್ಬರ ಬದುಕನ್ನು ಅದರೆಲ್ಲ ಸಮಗ್ರತೆಯೊಳಗೆ ತೆರೆದಿಡುವ ಈ ಕವಿತೆ ಹಲವು ಬಗೆಯ ಧ್ವನಿಸಾಮರ್ಥ್ಯವನ್ನು, ಅರ್ಥಛಾಯೆಯನ್ನು ಬಿಟ್ಟುಕೊಡುತ್ತದೆ. ಜೀವನದ ಮಿತಿಯನ್ನು ಕುರಿತಂತಹ ಹೆಚ್ಚು ಗಾಢವಾದ ಚಿಂತನೆ ಈ ಕವಿತೆಯಲ್ಲಿ ಅರಳಿದೆ. ಮನುಷ್ಯನ ಜೀವನ ಸುಖ-ದುಃಖಗಳ ಸಂಗಮ ತತ್ವದಿಂದ ಕೂಡಿರುವಂತಹದ್ದು. ಬದುಕು ಯಾತನೆ, ನೋವು, ಸೂತಕ, ಮೌನ ಮರ್ಮಗಳ ಜಾತ್ರೆ; ಈಗ ಹೊರಟಿದೆ ಹಾದಿ ಎದೆಯ ಮೇಲೆ ಬಿಳಿ ಹೆಣಮೋಡದ ಯಾತ್ರೆ.

ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ ಮುಂಜಾವದವರೆಗೂ
ಬೆಕ್ಕಿನ ಬೆಚ್ಚನೆಯ ಗುರುಗುರು ಲಾಲಿಹಾಡಿಗೆ
ಉರಿಯುತ್ತಾ ನಿದ್ದೆಹೋಗುತ್ತದೆ ಒಲೆ

(ಒಲೆ ಮತ್ತು ಅವ್ವ)

ಶ್ರಮಜೀವಿ ತಾಯಿಯನ್ನು ಕೇಂದ್ರವಾಗಿಟ್ಟುಕೊಂಡು ಅವಳೊಂದಿಗಿನ ಅನುಭವಕ್ಕೆ ಉತ್ಕಟವಾಗಿ ಪ್ರತಿಕ್ರಿಯೆ ನೀಡುತ್ತಾ, ಬದುಕಿನ ಇತರ ಸಂಗತಿಗಳ ಬಗ್ಗೆ ಬೆಳಕು ಬೀರುವ ಕಾವ್ಯದ ಕೌಶಲ್ಯವನ್ನು ಕಾಜೂರು ಸತೀಶ್‍ರು ಈ ಕವಿತೆಯಲ್ಲಿ ಸಾಧಿಸಿದ್ದಾರೆ. ಅವರು ತಾಯಿಯ ಮೂಲಕ ಕಾಣಿಸುವುದು, ಮತ್ತೆ ಮತ್ತೆ ಧ್ಯಾನಿಸುವುದು ಬದುಕಿನ ಬಹು ಮುಖ್ಯ ಮೂಲಭೂತ ಪ್ರಶ್ನೆಗಳನ್ನೇ; ಮನುಷ್ಯಪ್ರೀತಿ, ವ್ಯಾಮೋಹ, ತ್ಯಾಗ, ಚಡಪಡಿಕೆಗಳು ಈ ಕವಿತೆಯಲ್ಲಿ ಪರಿಣಾಮಕಾರಿಯಾಗಿ ರೂಪು ಪಡೆದಿವೆ.

ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ
ಒಸರುವ ಅಷ್ಟೂ ರಕ್ತವೂ ಹೂವಿಗೆ ಅಂದ ನೀಡಬೇಕು

ಸುಡಬಾರದು ಪಾದಗಳ ತೊಟ್ಟಿಕ್ಕುವ ಕೆಂಪುಹನಿಗಳು ಬೀದಿಬೀದಿಗಳಲ್ಲಿ
ಜಗದ ಅವ್ವಂದಿರು ಸುಡುವ ರೊಟ್ಟಿಯ ಎಸಳುಗಳಾಗಿ ಹಾರಿ ಹೂವಾಗಬೇಕು

(ಗಾಯದ ಹೂವುಗಳು)

ಹೀಗೆ ಸರಳ ಮಾತುಗಳಲ್ಲಿ ಬಿಚ್ಚಿಕೊಳ್ಳುವ ಈ ಕವಿತೆ ದುಃಖದ ಗಂಭೀರತೆಯನ್ನು ನಿಶ್ಯಬ್ದದಲ್ಲಿ ಹಿಡಿದುಕೊಡುತ್ತದೆ. ಈ ಜಗತ್ತಿನಲ್ಲಿ ಅಳಲುಗಳ ಹೊಳೆ ಹರಿಯುತ್ತಲೇ ಇದೆ; ಅದು ಮುಗಿಯುವ ಹಾಗೆ ಕಾಣುವುದಿಲ್ಲವೆಂಬ ವಿಷಾದ ಕವಿತೆಯದು. ಇಡೀ ಕವಿತೆ ಕಥನ ರೂಪದಲ್ಲಿ ರಚನೆಯಾಗಿದ್ದು ಹೃಸ್ವತೆಯಲ್ಲಿ ಅಪಾರತೆಯನ್ನು ತುಂಬಿಕೊಂಡಿದೆ. ಈ ಕವಿತೆಯ ಪರಿಣಾಮಶೀಲತೆಗೆ ಬಹುಮುಖ್ಯ ಕಾರಣ ಅದು ಬಿಡಿಸಿಡುವ ಸರಳ, ನೇರ, ಶಕ್ತ ಅಭಿವ್ಯಕ್ತಿ ಕ್ರಮ. ಅಲ್ಲದೆ ಅದು ಆತ್ಮೀಯವಾದ ಸಾಮಾಜಿಕ,ಸಾರ್ವತ್ರಿಕ ಚಿತ್ರಗಳ ಮುಖಾಂತರ ಜಿನುಗುವ ದುಃಖ ಮತ್ತು ವಿಷಾದ.

ಕಾರು ಸರಿಯದ ಕಾಡ ನಡುದಾರಿಯಲ್ಲಿ
ಹೂತುಬಿಡಿ ನನ್ನ
ಜೊತೆಗೆ ನನ್ನ ಹೆಸರು-ಭಾವಚಿತ್ರಗಳನ್ನು
ಬಿರಬಿರನೆ ಸರಿವ ನನ್ನವರ ಬರಿಗಾಲ ಚುಂಬನಕೆ
ಒಳಗೊಳಗೆ ಬಿರಿದು ಪುಳಕಗೊಳ್ಳುವೆನು

(ಉಯಿಲು)

ಇಂತಹ ಪಂಕ್ತಿಗಳು ಅಲ್ಲಲ್ಲಿ ಮಿನುಗುತ್ತವೆ. ಕವಿಯ ಅಂತರಂಗದಲ್ಲಿ ಮೂಡಿರುವ ಈ ಸಂಚಾರಿ ಭಾವ ಸಂಪೂರ್ಣವಾಗಿ ಹೃದಯತಾಪವಾಗಿದೆ. ಕಾಲದ ವಾಸ್ತವ ರೂಪಗಳ ಕುರಿತು ಗಾಢವಾದ ಅರಿವಿದ್ದು, ತನ್ನ ಸಮಚಿತ್ತ ಕಳೆದುಕೊಳ್ಳದ ಅನುಭವ ವಿನ್ಯಾಸದ ಈ ಕ್ರಮ ಮೆಚ್ಚುವಂತಹದ್ದು. ನಿಸರ್ಗ-ಮನುಷ್ಯ ಇವರ ನಡುವಿನ ಸಂಬಂಧ ಜಟಿಲವಾದದ್ದು. ಇಡೀ ಕವಿತೆಯನ್ನು ಓದುವಾಗ ಬಲಗೊಳ್ಳುತ್ತಾ ಹೋಗುವುದು ‘ನಾಯಕ’ನ ಪರದಾಟ ಮತ್ತು ನಿಸ್ಸಹಾಯಕತೆಗಳ ಭಾವನೆ.

ಕಾಜೂರು ಸತೀಶ್‍ರ ಕವಿತೆಗಳಲ್ಲಿ ಚೆಲುವಿದೆ; ಒಲವಿದೆ, ಉತ್ಸಾಹವಿದೆ, ಜೀವನದ ಗೆಲುವಿದೆ. ಆದರೆ ಆ ನಲಿವಿನ ಹಿಂದೆ ದುಃಖ ಮತ್ತು ವಿಷಾದಗಳ ತಳುಕು ಹಾಕಿಕೊಂಡಿವೆ. ಅವರ ಕಾವ್ಯದಲ್ಲಿ ಒಳಿತನ್ನು ನೋಡುವ ಕಣ್ಣಿಗೆ ಸಾವಿರದ ಮುಖ ದರ್ಶನವಾಗುತ್ತದೆ. ಸಾವು ಇಲ್ಲಿನ ಹಲವು ಕವಿತೆಗಳ ಶ್ರುತಿಯಾಗಿದೆ. ಇದು ನೋವು, ಸಂಕಟ,ತಳಮಳ, ಆತಂಕ, ಭಯ, ದಿಗ್ಭ್ರಮೆ, ವ್ಯರ್ಥತೆಗಳನ್ನು ಹೊಮ್ಮಿಸುವ ನೆಲೆಯಲ್ಲಿ ಆಕಾರ ಪಡೆದಿದೆ. ಜೀವಸಂಬಂಧಗಳ ಅನೂಹ್ಯ ನೆಲೆಗಳನ್ನು ಮೀಟುವಂತೆ ಈ ಕವಿತೆಗಳು ಬೆಳೆದಿರುವುದು ಪ್ರಮುಖವಾಗಿದೆ. ತಮ್ಮ ತೀವ್ರ ಕಂಪನದ ಕವಿತೆಯ ಸಾಲುಗಳಲ್ಲಿ ಶಕ್ತ ರೂಪಕಗಳನ್ನು ಸೃಷ್ಟಿಸಬಲ್ಲ ಕವಿ ಕಾಜೂರು ಸತೀಶ್ ಅಬ್ಬರಗಳಿಂದ ಹೊರತಾದ ಕವಿತೆಗಳನ್ನು ಈ ಸಂಕಲನದಲ್ಲಿ ಕೊಟ್ಟಿದ್ದಾರೆ. ಆದರೆ ಅವರ ಕೆಲವು ಕವಿತೆಗಳ ಸಂಯೋಜನೆಯ ನೆಲೆಯಲ್ಲಿ ಕಲಾತ್ಮಕತೆ ಕಡಿಮೆಯಾಗಿರುವುದರಿಂದ ಹಲವು ಕಡೆಗೆ ಇಲ್ಲಿಯ ಕವಿತೆಗಳು ಸೋಲುತ್ತವೆ.

ಕಾಜೂರು ಸತೀಶ್‍ರ ಈ ಸಂಕಲನದ ‘ಚಪ್ಪಲಿಗಳು’, ‘ಮರಣದ ಹಾಡು’, ‘ಮೈಲಿಗೆ’, ‘ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ’, ‘ನೆಲವಿಲ್ಲದವನ ಉಯಿಲು’, ‘ಕಾಡು ಕವಿತೆ’, ‘ಕಡಲಾಚೆಯ ಹುಡುಗಿಗೆ’, ‘ಈ ರಾತ್ರಿಗಳಲ್ಲಿ ನಿದ್ರಿಸಲಾರೆ’, ‘ಗಾಯದ ಹೂವುಗಳು’-ಮುಂತಾದ ಕವಿತೆಗಳು ಒಳ್ಳೆಯ ಕಾವ್ಯಾನುಭವ ನೀಡಿ ಓದುಗರ ಮನವನ್ನು ಕಲಕುತ್ತವೆ. ವಿಷಾದ, ದುಃಸ್ವಪ್ನಗಳನ್ನು ಈ ಕವಿತೆಗಳು ಅಭಿವ್ಯಕ್ತಿಸಿವೆ. ಕಾಜೂರು ವರ್ತಮಾನದ ವಿಷಾದದ ದನಿಯನ್ನು ದಾಖಲಿಸಿದ್ದಾರೆ. ಇಲ್ಲಿನ ಅನೇಕ ಕವಿತೆಗಳು ಆಧುನಿಕ ಜಗತ್ತಿನ ಬದುಕನ್ನು ಸಮರ್ಥವಾಗಿ ದರ್ಶಿಸುತ್ತವೆ. ಕಾಜೂರು ಸತೀಶ್ ಅನೇಕ ಕಡೆ ಹೊಸದೆನ್ನಿಸುವ ವಿಭಿನ್ನ ಪ್ರತಿಮೆ-ರೂಪಕಗಳನ್ನು ಈ ಸಂಕಲನದಲ್ಲಿ ಸಮರ್ಥವಾಗಿ ಬಳಸಿದ್ದಾರೆ. ಇದು ಸಾಮಾಜಿಕ ಕಾಳಜಿ ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಭಾವನೆಗಳನ್ನೊಳಗೊಂಡ ಕೃತಿ. ಈ ಸಂಕಲನದ ಕವಿತೆಗಳಲ್ಲಿ ಸಮಾನತೆ, ಭರವಸೆ, ಮಾನವತೆಗಳಿಗೆ ಪ್ರಾಧಾನ್ಯತೆ ಮತ್ತು ವೈಚಾರಿಕತೆಗೂ ಸ್ಥಾನ ದೊರಕಿದೆ. ಆದ್ದರಿಂದ ಇಲ್ಲಿಯ ಕವಿತೆಗಳು ಓದುಗರನ್ನು ಯೋಚನಾಮಗ್ನರನ್ನಾಗಿಸುತ್ತವೆ. ಸಂಕಲನದ ಹಲವಾರು ಕವಿತೆಗಳು ಒಂದೇ ಓದಿಗೆ ತನ್ನೆಡೆಗೆ ಸೆಳೆಯಬಲ್ಲ ಶಕ್ತಿ ಪಡೆದಿವೆ. ಪ್ರತಿಯೊಂದು ಕವಿತೆಗಳಿಗೂ ಸೂಕ್ತವಾದ ಚಿತ್ರಗಳನ್ನು ರಚಿಸಿರುವುದು ಈ ಕವನಸಂಕಲನದ ಪ್ರಮುಖ ಆಕರ್ಷಣೆಯಾಗಿದೆ.
*


ಸಿ.ಎಸ್.ಭೀಮರಾಯ
ಆಂಗ್ಲ ಉಪನ್ಯಾಸಕರು
ಅ/ಔ. ಸಿದ್ದಣ್ಣ ಬಿ. ಪೂಜಾರಿ
‘ಅಪೂರ್ವ ನಿವಾಸ’,
ಯಮುನಾ ನಗರ, ಕುಸನೂರ ರಸ್ತೆ,
ಕಲಬುರಗಿ-585105
ಮೊ. ನಂ-9008438993/9741523806




E-mail:csbhimaraya123@gmail.com

Saturday, August 12, 2017

ನಾನೊಬ್ಳೇ ಇದ್ದಾಗ ರಾತ್ರಿ ಕಳ್ಳನಾದ್ರೂ ಬಂದ್ಬಿಡ್ಲಿ

ಹೇ ಕಳ್ಳಾ...
ನೀನಾದ್ರೂ ಬಂದು ಸ್ವಲ್ಪ ಜೊತೆಗಿದ್ದು ಹೋಗು
ಆಗಾಗ ಮೊಬೈಲ್ನೊಳಗೆ ಇಣುಕಿ ಇಣುಕಿ ನೋಡೋದನ್ನ ಬಿಟ್ಟು
ಬ್ಯುಜಿ಼ ಗಿಜಿ಼ ಅಂತೆಲ್ಲಾ ಸುಳ್ಸುಳ್ಳು ಹೇಳೋದನ್ನೆಲ್ಲ ಬಿಟ್ಟು
ಏನಾದ್ರೂ ಒಂದಷ್ಟು ಹೊತ್ತು ಜೊತೆಗಿದ್ದು ಮಾತಾಡಿ ಹೋಗು.

'ಆಮೇಲೆ? ಆಮೇಲೆ?' ಅಂತ ನಾನು ಕೇಳ್ತಿರ್ತೀನಲ್ಲಾ ಆಗ
'ಆಮೇಲೇನೂ ಇಲ್ಲ' ಅಂತ ಮೂತಿ ಊದ್ಸಿ ಮಾತು ಮುಗ್ಸದೆ
ಏನಾದ್ರೂ ಮಾತಾಡ್ತನೇ ಇರು.

ಆದ್ರೆ ಈ ಚಿನ್ನ ಬೆಳ್ಳಿ ಬಗ್ಗೆ ಗ್ಯಾಸ್ ರೇಟಿನ್ಬಗ್ಗೆ
ಸಂಬ್ಳ ಬಡ್ತಿ ಬಗ್ಗೆ ಏನೂ ಮಾತಾಡ್ಬೇಡ ಪ್ಲೀಸ್.

ನಿನ್ಮಕ್ಳು ಮರಿಗಳು
ನನ್ಬೊಟ್ಟು ಅಲಂಕಾರ
ಹಾಳುಮೂಳು ಮಣ್ಣುಮಸಿ...
ಮಾತಾಡ್ತಲೇ ಇರು.

ನಾನೇ ಮಾಡಿಟ್ಟ
ಹಲ್ಸಿನ್ಕಾಯಿ- ಸೀಗ್ಡಿ ಚಟ್ನಿ ತಿಂದು
'ಹಾ... ಖಾರಽ... ಖಾರಾಽಽ..' ಅಂತ ಕಿರ್ಚಾಡ್ತಾ
ಅಪ್ಪಿ ಮುದ್ದುಮಾಡು ನನ್ನ.

ನಿನ್ಮಡ್ಲಲ್ಲಿ ನನ್ನ ಕೂರ್ಸಿ
ಕಳ್ತನ ಮಾಡ್ದ ಕತೆಗಳ್ನ ಹೇಳು
ಪ್ರೀತಿ ಇದ್ರೆ ಕದ್ದೂ ಮುಚ್ಚಿಯಲ್ಲ, ನೇರವಾಗೇ ಮುದ್ದು ಮಾಡು.

ನಾನೊಬ್ಳೇ ಇಲ್ಲಿ ಕೂತು ಸತ್ಯವಂತರ ಕತೆ ಓದುವಾಗ
ಮೆಲ್ಮೆಲ್ಲೆ ಬಂದು ಅದ್ರಲ್ಲಿರೋ ಸುಳ್ಳುಗಳ್ನ ಕದ್ಕೊಂಡ್ಹೋಗ್ಬಿಡು.

ಹೇ ಕಳ್ಳಾ..
ನಾನಿಲ್ಲಿ ಒಬ್ಳೇ ಇದ್ದೀನಿ ಕಣೋ..
ಸತ್ಯ!
*


ಮಲಯಾಳಂಮೂಲ- ಅಧೀನ ಡೈಸಿ

ಕನ್ನಡಕ್ಕೆ- ಕಾಜೂರು ಸತೀಶ್

Wednesday, July 26, 2017

ಕಾಜೂರು ಸತೀಶರ ಕಾವ್ಯ: ಮಣ್ಣಿನಪ್ಸರೆಯರ ಸಖ್ಯವೂ, ಕೆಂಡದಲ್ಲಿ ಸುಟ್ಟ ಮೀನೂ

ಸುಬ್ಬು ಒಂದು ವಚನದ ಹಾಡು ಕೇಳ್ಸಿದ್ದು ನೆನಪಾಯ್ತು. ಅದು 'ಅಪ್ಪನು ನಮ್ಮ ಮಾದಾರ ಚನ್ನಯ್ಯ' ಅನ್ನೋ ಹಾಡು ಎಂ. ವೆಂಕಟೇಶಕುಮಾರರು ಆರೋಹಣದಲ್ಲಿ ಆ ಹಾಡನ್ನಾ ತಗೊಳ್ತಾ ಹೋಗ್ತಾರೆ ಎಷ್ಟು ಆರೋಹಣ ಅಂದ್ರೆ ಪಂಚಭೂತಗಳಲ್ಲಿ ಲೀನ ಆಗೋದು ಅಂತಾ ನಾವು ಕೇಳ್ತೀವಲ್ಲ ಹಂಗೆ. ಅಂದ್ರೆ ಅಲ್ಲಿ ಅದು ಮೆಲ್ಟ್ ಆಯ್ತು ಅನ್ನೋಹಾಗೆ. ಹೀಗೆ ಎಲ್ಲ ನಿರೂಪಗಳೊಂದಿಗೆ ಮೆಲ್ಟ್ ಆದ ಆ ಸ್ವರದ ಎಳೆ ಒಂದನ್ನು ಹಿಡಿದು ವಿವರಿಸುವುದು ಶಬ್ದಗಳ ವೆಚ್ಚವಷ್ಟೆ. ಇಲ್ಲಿ ನೋಡಿ ಜಿಡ್ಡು ಕೃಷ್ಣಮೂರ್ತಿಯವರು ಮಾತು."ಶಬ್ದ ರೂಪ ಕೊಡದೇ ಆಲೋಚಿಸುವುದು ಸಾಧ್ಯವೆ? ಸಂಕೇತಗಳಿಲ್ಲದ ಚಿಂತನೆ ಇದೆಯೆ? ಆಲೋಚನೆಗೆ ಶಬ್ದಗಳು ಅವಶ್ಯಕವೆ? ಸಂಕೇತಗಳು, ಉಲ್ಲೇಖಗಳು ಇಲ್ಲದಿದ್ದಲ್ಲಿ ನಾವು ಹೇಳುವ ಚಿಂತನೆ ಇರುವುದೆ? ಎಲ್ಲ ಚಿಂತನೆಗಳು ಶಾಬ್ದಿಕವೆ? ಅಥವಾ ಶಬ್ದರಹಿತ ಚಿಂತನೆ ಇದೆಯೆ?" ಅಂತಾ. ನಾವು ಓದುವ ಸಾಹಿತ್ಯದ ಎಲ್ಲ ಪ್ರಕಾರವು ಈ ಮೇಲಿನವುಗಳಿಲ್ಲದೆ ಸಾಧ್ಯವೇ ಇಲ್ಲ. ಹಾಗಾದ್ರೆ ಸಾಹಿತ್ಯದಲ್ಲಿ ಶಬ್ದರಹಿತ ಚಿಂತನೆ ಇಲ್ಲಾ ಅಂತ್ಲೂ ಅಲ್ಲ. ಓದಿದ ಮೇಲೆ ಕೃತಿಯು ಹೇಳದೆ ಉಳಿಸುವುದಿದೆಯಲ್ಲ ಅದೆಲ್ಲವೂ ಶಬ್ದರಹಿತ. ಶಬ್ದಗಳಲ್ಲಿ ಹಿಡಿದಿಟ್ಟಂತೆಲ್ಲ ಅದು ಶಾಬ್ದಿಕವೆ. ಇಲ್ಲಿ ಶಬ್ದಗಳಿಗೆ ಅತೀತವಾದದನ್ನು ಹಿಡಿದಿಡೋದು ಒಂದು ಕ್ರಮ. ಜೆಕೆಯವರು ಹೇಳಿದ್ದು ಶಬ್ದದಲ್ಲಿಯೇ. ಇದೆಲ್ಲ ವಿಪರ್ಯಾಸ ಅನ್ಸಿದ್ರು ಶಬ್ದಗಳ ಹೊಸೆದು ಅತೀತತೆಯನ್ನು, ನಿರೂಪಗಳನ್ನು ಕಾಣಿಸುವುದು ಕೆಲ ಮಟ್ಟಿಗಾದರೂ ನೀಗಬಲ್ಲದ್ದು ಕಾವ್ಯ ಅಂತಾ ನಾನು ತಿಳಿದಿದ್ದೀನಿ.

ಇಷ್ಟೆಲ್ಲಾ ಪೂರ್ವ ಪೀಠಿಕೆ ಕಾಜೂರು ಸತೀಶರ ಕವಿತೆಗಳ ಕುರಿತ ನನ್ನ ಅಭಿಪ್ರಾಯಕ್ಕೆ ಪೂರಕವಾಗಿ ಹೇಳಬೇಕಿತ್ತು. ಸತೀಶರ ಎಷ್ಟೆಲ್ಲಾ ನಿರೂಪಗಳ ಸ್ವರಗಳನ್ನು ಕಾಣಿಸಿದ್ದಾರೆ ಅಂದ್ರೆ ಅದು ಕಾವ್ಯದ ಸಹಜತೆಗೆ ಮುಕ್ಕಾಗದ ಹಾಗೆ. ಮತ್ತದು ಕಾವ್ಯದ ಒಟ್ಟು ಬಂಧದಲ್ಲಿ ಹೊಸೆದುಕೊಂಡ ಪರಿಯು ಮತ್ತೆ ಮತ್ತೆ ಓದಿಕೊಳ್ಳಲೂ ಒಂದು ಕಾರಣ. ಕವಿತೆಗೆ ಮೊದಲಿನಿಂದ ಹೋಗುವುದಾದರೆ- ಒಂದು ಸಾಲಿದೆ ಅರ್ಪಣೆಯದು ನನ್ನನ್ನೇ ಉಸಿರಾಡಿಕೊಳ್ಳುತ್ತಿರುವ ಅಂತ. ಇಲ್ಲಿಯ ಎಷ್ಟೋ ಕವಿತೆಗಳು ಉಸಿರಿನಷ್ಟು ಸಹಜವಾಗಿಯೂ, ವಿಮರ್ಶಾ ಲೋಕ ಬೇಡುವ ಬೌದ್ಧಿಕ ಪರಿಶ್ರಮ, ಹುಡುಕಾಟವೂ ಎಲ್ಲ ಕವಿತೆಗಳಲ್ಲಿದೆ.ಇಲ್ಲಿ ಬೌದ್ಧಿಕ ಪರಿಶ್ರಮವು ಅನೇಕ ಜ್ಞಾನಶಾಖೆಗಳ ಆಳದಲಿ ಕುಡಿಯೊಡೆದ ಭಾವತೀವ್ರತೆ ಅನ್ನುವ ಅರ್ಥದಲ್ಲಿ ನೋಡುವುದಾದರೆ

ತನುವ ಶುದ್ಧಿಗೊಳಿಸಿದ
ಬಚ್ಚಲ ಮನೆಯ ನೀರು
ಹಿತ್ತಲ ಬಸಳೆ ಬಳ್ಳಿಗೆ ಹಾಲುಣಿಸುವುದು


ಕೊಳೆತ ಮಾವಿನ ಹಣ್ಣಿನ ಒಳಗೆ
ಮೊಳಕೆಯೊಡೆದಿದೆ ಗೊರಟೆ
ಸಿಪ್ಪೆ ಸೀಳದೆ ಒಳಗೆ ನುಸುಳಿದ ಹುಳುಗಳಿಂದ
ಕಚಗುಳಿ ಅದಕೆ
ಮಣ್ಣಲ್ಲಿ ಅಂಬೆಗಾಲಿಡುವ ತವಕ

( ಮೈಲಿಗೆ -30)

ನನ್ನ ಮರಣದ ನಂತರ
ಏಕವಾಗುವ , ಅಭೇದವಾಗುವ
ನನ್ನೊಲುಮೆಯ ಬ್ಯಾಕ್ಟೀರಿಯಾಗಳದು
ಅಹರ್ನಿಶಿ ನೃತ್ಯ

(ಉಯಿಲು -96)

ಅಮೀಬಾದ ತಾಯೇ
ಬುದ್ಧ ನ್ಯೂಟನ್ನರ ಗುರುವೇ
ಮಣ್ಣಿನಬ್ಬೆಯ ಅಬ್ಬೆಯೇ
ನಿನಗೆ ಶರಣು

(ಮರ -92)

ಹೀಗೆ ಸಂಕಲನದ ತುಂಬ ತುಂಬಿ ಹೋಗಿರುವ ಸಾಲುಗಳು ತಾಳ್ಮೆಯ ಓದಿಗೆ ದಕ್ಕಿಬಿಡುತ್ತವೆ. ಕೆಲವು ಕವಿತೆಗಳನ್ನು ಸ್ಪರ್ಶಿಸಿಯೇ ಓದಬೇಕಾಗುತ್ತದೆ. ಇಲ್ಲಿ ಸ್ಪರ್ಶ ಅಪಾರ ತಾಳ್ಮೆಯನ್ನು ಕೆಲವು ಸಿದ್ಧತೆಗಳನ್ನು ಬೇಡುತ್ತದೆ. ಅಡಿಗರ ಕಾವ್ಯದಲ್ಲಿ ಸಿಗುವ ಹಲವು ಹೊಳಹುಗಳು ಸಿಗುವುದು, ಬೇಂದ್ರೆ ಅಜ್ಜನ ಹಲವು ಕವಿತೆಗಳಲ್ಲಿ 'ನೃತ್ಯ ಯಜ್ಞ' ಉತ್ತಮ ಉದಾಹರಣೆ. 'ಒಡೆದ ಮಣಿಗಳಿಲ್ಲಿ ಒಂದುಗೂಡುವವಿಲ್ಲಿ' ಅಂತಾ ಹೇಳ್ತಾರಲ್ಲ ಎಸ್ ಮಂಜುನಾಥ್ ಹಾಗೆ.
*
ಇಲ್ಲಿ ಕವಿಗೆ ಎಲ್ಲವೂ ಮುಖ್ಯ ಅಂತ್ಲೆ ಅನಿಸಿದೆ. ಅಮುಖ್ಯ ಅಂತಾ ಅನಿಸುವುದೆ ಸಿಗಲ್ವೇನೊ ಅನ್ನೊ ಹಾಗೆ. ಇಲ್ಲಿ ನೆಡೆಯುವುದೆಲ್ಲ ಒಂದಕ್ಕೆ ಒಂದು ಹೊಸೆದುಕೊಂಡು ಹುಟ್ಟಿವೆ. ಪೂರಕತತ್ವ ಅನ್ನೊ ಮಾತನ್ನು ಇಲ್ಲಿ ಲಗತಿಸುವುದಾದ್ರೆ.

ಮೊಲದ ಮಲದ ಹರಳು ಕಣಗಳನ್ನು
ಎಲ್ಲೋ ಕಂಡುಹಿಡಿದ ದೇವಕಣದಂತೆ
ಪ್ರೀತಿಸಿ ಪರೀಕ್ಷಿಸುತ್ತೇನೆ
(ಕಾಡು ಕವಿತೆ - 44)

ನನ್ನೂರಿಂದಂಟಿದ ಜಿಗಣೆಯೊಂದು
ಹೆದ್ದಾರಿಯಲ್ಲೆಲ್ಲೋ ಕಳಚಿಬಿದ್ದಿದೆ
ಅಂಟಲಾರದು ಬೂಟುಕಾಲು, ಕೀಲಿಮಣೆಗಳಿಗೆ
ಕಡೆಯ ಉಸಿರೇ ಕೊಂಚ ನಿಲ್ಲು
ನನ್ನ ಕುದಿವ ನೆತ್ತರನೋಮ್ಮೆ ಅದಕ್ಕುಣಿಸುವೆ
(ಈ ರಾತ್ರಿಗಳಲ್ಲಿ ನಿದ್ರಿಸಲಾರೆ - 54 )

ಹೀಗೆ ಕವಿತೆಯ ತುಂಬಿಹೋದ ಸಾಲುಗಳು ಸುಸೂಕ್ಷ್ಮ ಪದಗಳಿವೆ. ಇಲ್ಲಿ ಬಳೆಸಿದಂತೆಲ್ಲ ಹೊಸ ಹೊಳಪನ್ನೇ ಹೊತ್ತು ತರುತ್ತವೆ. ಎಷ್ಟು ಹೇಳಿದರು ಕವಿಗೆ ಸಮಾದಾನವೇ ಇಲ್ಲ. ಮಣ್ಣಿನೊಂದಿಗೆ ಕಟ್ಟಿದ ಈಡಿಮ್ ಇದೆಯಲ್ಲ ಇಲ್ಲಿ ಅದು ಈ ಕವಿಯ ಮುಖ್ಯ ಕಾವ್ಯ ಸೆಲೆಯ ಜ್ಞಾನಧಾರೆಗಳಲ್ಲಿ ಒಂದು ಅನಿಸಿದೆ. ಒಂದು ಸಾಲು ನೋಡಿ:

ಉದ್ದುದ್ದ ಬೇರಿನ ಬೆರಳ ಚಾಚಿ
ಮಣ್ಣಿನಪ್ಸರೆಯ ಬಾಚಿ ತಬ್ಬಿಕೊಳ್ಳಬೇಕೆಂದು (ಬೋನ್ಸಾಯ್ ಸ್ವಗತ -61)

ಮಣ್ಣಾಗಿಹೋದ ನಾನು
ಸಿಕ್ಕಿಸಿಕ್ಕ ಕಾಡುಹೂಗಳೊಂದಿಗೆ ಕೂಡಿ
ಸುಂದರ ಹೆಂಗಳೆಯರ ಹೆರಳಲ್ಲಿ
ಹಾಯಾಗಿ ನಿದ್ರಿಸುತ್ತೇನೆ
(ನಾವಿಬ್ಬರು ತೀರಿಕೊಂಡ ಮೇಲೆ -56)
*


ನೋವನ್ನೂ ,ವಿಷಾದವನ್ನೂ ಓದುಗನಿಗೆ ದಾಟಿಸಿಬಿಡುವುದು, ಮತ್ತೆ ಮತ್ತೆ ಓದುವಂತೆ ಕಾಡುವ ಕವಿತೆ ಬರೆಯುವುದು ಬಲು ಸವಾಲಿನದು. ಇಲ್ಲಿ ಭಾಷೆ, ರೂಪಕ, ಇಮೇಜ್ಗಳು ಎಷ್ಟು ಮುಖ್ಯವೂ ಅಷ್ಟೆ ಪದದ ಮಿತ ಬಳಕೆ ಭಾವತೀವ್ರತೆಯೂ ಅಷ್ಟೇ ಮುಖ್ಯ ಅನ್ಸಿದೆ ನನಗೆ. ನನ್ನ ಓರಿಗೆ ಎಷ್ಟೋ ಗೆಳೆಯರು ಶಬ್ದಗಳಿಂದ ಕವಿತೆಯನ್ನು ಮುಚ್ಚಿಟ್ಟಿದ್ದಿದೆ. ಅಪವಾದವೆಂಬಂತೆ ಬರೆಯುವ ಅನೇಕರಿದ್ದಾರೆ. ಇವರು ನೋವನ್ನು, ವಿಷಾದವನ್ನೂ ಎಷ್ಟೊಂದು ಅಬ್ಜರ್ವಡಾಗಿ ಕಾಣ್ಸಿದಾರೆ ಅನ್ನೋದೆ ನನಗೆ ಸೋಜಿಗ. ನನ್ನ ಓದಿನ ಮಿತಿಗೆ ಸದ್ಯಕ್ಕೆ ಕಂಡ ದೊಡ್ಡಕಲ್ಲಹಳ್ಳಿಯ ಒಂದು ಕವಿತೆ ಹೀಗಿದೆ.

ಎಲೆ ಉದುರುವಷ್ಟು ಹಗುರವಾಗಿ
ಇಬ್ವನಿ ಕರಗುವಷ್ಟು ಹಿತವಾಗಿ
ಬಿಡಿಸಿಕೋ ತಂದೆ
ನಿನ್ನ ಬನದ ಕುಸುಮಗಳನು


ನಡೆವ ಹಾದಿಯ ತುಂಬ ಬಿದ್ದ ನೋವಿನ ಮುಳ್ಳ ಹೆಕ್ಕಿ ತೆಗೆದೆವು ಕತ್ತಲಲಿ
ಆಸರೆಗೆ ಒರಗಿ ನಿಂತಾಗ ಮರವೊಂದು ನಮ್ಮಿಬ್ಬರನು ಒದ್ದೆಯಾಗಿಸಿತು

ಇದು ಹೊಸ್ಮನೆಯ ಗಜಲ್.

ನೋಡಲಾಗದು ಗೆಳತಿ
ಹೂಮನೆಯ ಮಂದಿಯ
ನಗೆಮಾಸಿದ ಮುಖ
ನೀನೇನೆ ಅನ್ನು
ನಾಲ್ದೆಸೆಯ ಬೀಸುಗಾಳಿಗೆ
ಮುಂದಣ ಜಗಲಿ ಹೇಳಿಮಾಡಿಸಿದ್ದಲ್ಲ

-ಕಾವ್ಯಶ್ರೀ ಮನ್ಮನೆಯವರದು.

ಇನ್ನೂ ಒಂದು ನೋಡೋಣ:

ನನಗೆ ಗೊತ್ತು
ಆ ಎಂದಾದರೊಂದು ದಿನ
ಈ ಅತೃಪ್ತ ಲೋಕ ಕೆಂಪಾಗಲಿದೆ
ಮೇಲೆ ಹಾರುವ ಮೋಡಗಳೂ
ನೆತ್ತರಲಿ ಅದ್ದಿದ ಹತ್ತಿ ಹಿಂಜುಗಳಂತೆ
ಉದುರಲಿವೆ ಜಗದ ತುಂಬ

ಈ ಸಾಲು ಬಸವರಾಜ್ ಹೃತ್ಸಾಕ್ಷಿಯದು.

ಸತೀಶರ ಕವಿತೆ ಕೇಳಿ:
ನಾನು ಸತ್ತ ಮೇಲೆ
ಅಳುವವರ ಕಂಬನಿಗಳ ಸಂಗ್ರಹಿಸಿ
ಚಿಮುಕಿಸಿಬಿಡಿ ಮಣ್ಣತುಂಬ
ಹೂವು ಬಿರಿಯಲಿ ಕಾಡ ಕಂಗಳಲಿ
ಲವಣಗಳ ಕುಡಿಕುಡಿದು


ಕಂಬನಿಗಳು ಉದುರುವುದಿದ್ದರೆ
ಎಣಿಸಿ, ಗುರುತುಮಾಡಿ
ಬಿದ್ದಲ್ಲೆಲ್ಲಾ ಪೈರು ನೆಡಬೇಕು


ದೇಹ ಹೊತ್ತರೆ
ಹೊಟ್ಟೆಯೊಳಗಿನ ಮಲವನ್ನೂ ಹೊತ್ತಂತೆ
ಆ ಭಂಗಿಯ ಹಿಂಸೆ ಬೇಡ
ದರದರ ಎಳೆದೊಯ್ಯಬೇಕು
ಮೃತಕೋಶಗಳು ಒಡೆದು
ಚರಿತ್ರೆಯಿಂದ ಬಿಡುಗಡೆಗೊಳ್ಳಲಿ


ಮರೆತುಬಿಡಿ ನನ್ನ
ನಿತ್ಯದ ನಿಮ್ಮ ವಿಸರ್ಜನೆಯ ಹಾಗೆ

(ನೆಲವಿಲ್ಲದವನ ಉಯಿಲು -38 ಉಯಿಲು -96)

ದೀಪ ಆರಿಸಿ ಬೂದಿಯ ಹಾಸಿ ಮಲಗಿದರೂ
ಸುಡುವ ಕೆಂಡ ಒಳಗೆ..

ಅವ್ವನ ಉಸಿರು ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ ಮುಂಜಾವದವರೆಗೂ..

ಹೊಗೆಯಿರದ ಮಹಾನಗರದ ಒಲೆಗಳಲ್ಲಿ
ಸುಟ್ಟ ಸಂಬಂಧಕ್ಕೆ ಸಾಕ್ಷಿಯಾಗಿ
ಬೂದಿ ಕೂಡ ಉಳಿಯುವುದಿಲ್ಲ

ಹೊತ್ತಿಕೊಂಡಿರಲಿ ಒಲೆ
ಅನ್ನ ಬೇಯುವವರೆಗೂ
(ಒಲೆ ಮತ್ತು ಅವ್ವ - 58)

ಹೀಗೆ ನೋವುಗಳನ್ನಾ ಅಟ್ಯಾಕ ಮಾಡೋದು ತೀರ ದುರ್ಲಬದ ಕೆಲಸ. ಕವಿತೆ ಆಳದಲ್ಲಿ ಕೆಣಕುವಿಕೆಯ ಈ ಪರಿ ಬರಹ ಉರ್ದು ಕಾವ್ಯಗಳಲ್ಲಿ ಹೆಚ್ಚು ಅಂತಾ ಕೇಳಿದ್ದಿದೆ. ಭಕ್ತಿಯನ್ನು ಒಲುಮೆಯನ್ನಾಗಿಸಿ ದೈವ ಸಂಬಂಧವಾಗಿಸುವ ವಿರಹವೂ ದೇಹಾತೀತವಾಗಿ ಬೆಸೆಯುವುದಿದೆ. ಕವಿತೆ ಭಾಷಾಲಯಕ್ಕೆ ಜೊಳ್ಳೂ ಅನಿಸಿದೆ ತೀರ ಬಿಗುವೂ ಅನಿಸದ ಹುಟ್ಟುವ ರಚನೆಗಳನ್ನು ಸತೀಶರ ಕವಿತೆಗಳಲ್ಲಿ ಕಾಣಬಹುದು. ಹಾಗೆ ಶಬ್ದಗಳ ಹೊರಮೈಗೆ ಮಾರುಹೋಗದ ರಚನೆಗಳೂ ಇಲ್ಲಿವೆ. "ಹಾಗೆ ನೋಡಿದರೆ ಶಬ್ದಗಳ ಹೊರಮೈಗೆ ಮಾರು ಹೋಗುವುದೇ ಕಾವ್ಯ" ಅಂತಾ ಪ್ರವೀಣ ಹೇಳಿದ ನೆನಪು. ಅವನ ಮಾತನ್ನು ಒಪ್ತಾನೆ ಇಲ್ಲಿ ಒಂದನ್ನ ಕೇಳುವುದಾದ್ರೆ,

ನಿಜಕ್ಕೂ ಬೇಕಿರಲಿಲ್ಲ
ಇದೊಂದಾದರೂ ಇರಲಿ
ಅಕ್ಷರ ಕಲಿತ ಸಾಕ್ಷಿಗೆ
ಗೋರಿಯಂತೆ
( ನೆಲವಿಲ್ಲದವನ ಉಯಿಲು- 38)




ಉಯಿಲು, ಮರ, ಗಾಯದ ಹೂವುಗಳು ಸಾರ್ಥಕ ಕವಿತೆಗಳು ಅನಿಸಿವೆ. ಇವೆ ಯಾಕೆ ಸಾರ್ಥಕ ಕವಿತೆಗಳು ಅನಿಸಿವೆ ಎಂಬ ಪ್ರಶ್ನೆಗೆ ಮತ್ತೆ ನನ್ನನ್ನೇ ನಾನು ನೋಡಿಕೊಳ್ಳಬೇಕಾಗುತ್ತೆ ಅಥವಾ ಕಾವ್ಯಮಿಮಾಂಸೆಯಲ್ಲಿ ಉದಾಹರಣೆಗಳನ್ನೇ ಕೊಡೋಣಾಂದ್ರೆ ಅದು ನನಗೆ ಅರ್ಥವೇ ಆಗಿಲ್ಲ ಅಂತ್ಲೆ ಹೇಳಬೇಕಾಗುತ್ತೆ. ಆದ್ರೆ ಹೀಗೆ ನಾನು ಹೇಳಿದ್ದರಲ್ಲಿಯದನ್ನೇ ಹೇಳಿಬಿಡ್ತಿನಿ. ಇಲ್ಲಿ ಅಭೇದವಾಗುವ ಸಾಲುಗಳಿಲ್ಲ ಅಂದ್ರೆ ತಾನು ಏನು ಹೇಳಬೇಕು ಅಂತಿದ್ದಾನೊ ಆ ಕಡೆಗೇ ಕವಿಯ ಲಕ್ಷವಿದೆ ಇಲ್ಲಿ. ಇನ್ನೊಂದು ಮಾತು ಅಂದ್ರೆ ಉಯಿಲು ರಚನೆಯಲ್ಲಿ ಸ್ವಲ್ಪ ವಾಲಿದರೂ ಒಟ್ಟು ಕಾವ್ಯ ನೋಡುವಲ್ಲಿ, ಮಿತಪದಗಳಲ್ಲಿ ಹಿಡಿದಿಡುವ ಗುಣ, ರೂಪಕದೊಂದಿಗೆ ಹೊಸೆದ ಕಲ್ಪನಾ ಪ್ರತಿಭೆ ಎನ್ನುವುದಾದಲ್ಲಿ ಈ ಕವಿತೆ ಅಷ್ಟರ ಮಟ್ಟಿಗೆ ದಕ್ಕಿದೆ. ಮರ, ಗಾಯದ ಹೂವುಗಳು ಪೂರ್ಣತೆಯನ್ನು ನಿಲುಕಿಸಿವೆ. ಬಹುಕಾಲ ಕಾಡುತ್ತವೆ ಡಿಸ್ಟರ್ಬ್ ಅನ್ನುವ ಅರ್ಥದಲ್ಲಿ. ಇಲ್ಲಿ ಮತ್ತೆ ಮತ್ತೆ ಬರುವ ಜಿಗಣೆ, ಹಿಕ್ಕೆ, ಸಾವು, ಹುಳು-ಹುಪ್ಪಟೆ, ಇತಿಹಾಸಗಳೆಲ್ಲೂ ಎಷ್ಟೊಂದಿವೆ ಇಲ್ಲಿ. ನಾವು ಕೇಳದ ಲೋಕದಿಂದಲೇ ಹೊಸ ರೂಪಕವೂ ಆಗಿ ಇಮ್ಯಾಜಿನ್ಗೂ ಸಿಗದ ರೀತಿಯಲ್ಲಿ ಬರುತ್ತಿರುವುದು ಬರವಸೆ ಹುಟ್ಟಿಸುತ್ತದೆ. ಹಾಗೆ ರೂಪಕವೇ ಕವಿತೆಯನ್ನು ತಾಳಿಸಲಾರದು ಎಂಬುದೂ ಸಹ. ಹೀಗೆ ಹೇಳಿದ ಕಾರಣಕ್ಕೆ ಸತೀಶರು ತಮ್ಮ ಕವಿತೆಗಳಲ್ಲಿ ತರುವ ನವೀನ ರೂಪಕಗಳು ಸೋತಿಲ್ಲ. ಒಂದು ಅಂತರದಲ್ಲಿಯೇ ಹುಟ್ಟುವ ಹಾಗೇ ಪೂರಕವೂ ಆಗವ ಗುಣದಿಂದ ನನಗೆ ಹಿಡಿಸಿವೆ. ಕಿ ರಂ, ಎನ್ಕೆಯವರನ್ನು ರೂಪಕಗಳ ಚಕ್ರವರ್ತಿ ಅಂದಾಗ ನಾನು ಅವರ ಕವಿತೆಗಳನ್ನು ಓದಿದ್ದು ಅಲ್ಲಿಯ ರೂಪಕಗಳಂತು ದಂಗುಬಡಿಸುತ್ತವೆ. ಭಾಷೆಯ ಹೊಸ ವಿನ್ಯಾಸಗಳು ಕವಿತೆಗಳಲ್ಲಿವೆ ಒಂದೇ ಲಯಕ್ಕೆ ಮತ್ತೆ ಮತ್ತೆ ಹೋಗದೆ ಹೊಸದನ್ನೇ ತರುತ್ತಾರೆ. ಹೊಸದೊಂದು ತಾತ್ವಿಕತೆಯನ್ನೇ ಕಟ್ಟಿಕೊಡುವ( ಹೀಗೆ ಅನ್ನಬೇಕೆ) ಒಂದು ಕವಿತೆಯಾಗಿ ‘ಎಡ ಮತ್ತು ಬಲ’ ಕಂಡಿದೆ:

ದೊಡ್ಡವನಾದ್ಮೇಲೆ
ಎಡಕ್ಕೂ ಬೇಡ ಬಲಕ್ಕೂ ಬೇಡ
ನೀನೇ ಒಂದು ವಾಹ್ನ ಕೊಂಡು
ಮಧ್ಯದಲ್ಲೇ ಹೋಗು
ಎಡ ಬಲದಲ್ಲಿ ಚಲ್ಲಿದ ರಕ್ತ
ಸ್ವಲ್ಪ ಉಬ್ಬಿಕೊಂಡಿರೋ ಅಲ್ಲಿ
ನಿಲ್ಲೋದಿಲ್ಲ ಮಗಾ
ನಿಲ್ಲೋದೇ ಇಲ್ಲ
(ಎಡ ಮತ್ತು ಬಲ -89)

*

ನನಗೆ ಇಷ್ಟವಾದ ಕವಿತೆಗಳಿವು: ಮೈಲಿಗೆ, ಕೇಳಿಸಿಕೊಳ್ಳಿ, ಒಂಟಿ, ನಾವಿಬ್ಬರು ತೀರಿಕೊಂಡಮೇಲೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ಒಲೆ ಮತ್ತು ಅವ್ವ, ನೀನು ನನ್ನ ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯಿ ಸ್ವಗತ, ಸಲಾಮು, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಅಪ್ಪ ಮತ್ತವನ ಹತ್ಯಾರಗಳು, ಆಲ್ಬಮ್, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ಎಡ ಮತ್ತು ಬಲ.

ಸತೀಶರ ಕವಿತೆಗಳ ಬಗ್ಗೆ ಇಷ್ಟನ್ನು ಹೇಳಿದ ಮೇಲೆ ಇಲ್ಲಿರುವ ಅಥವಾ ನನಗೆ ಹಾಗೆ ತೋರುವ ದೋಷಗಳನ್ನು ( ಹೀಗೆ ಅನ್ನಬೇಕೊ- ಬೇಡ್ವೊ ಅಂತಾ ಸುಬ್ಬು, ಪ್ರವೀಣ ನನ್ನ ಜೊತೆ ಜಗಳವಾಡಿದ್ದು ನೆನಪಾಗ್ತಿದೆ. ಇರಲಿ) ಹೇಳದಿದ್ದಲ್ಲಿ ಅಪಚಾರವಾದೀತು ಅಂತಾ ಅನ್ಸಿದೆ. ಇಲ್ಲಿ ಅನೇಕ ಕವಿತೆಗಳು ನಡು ನಡುವೆ ಮಾತಿಗಿಳಿಯುತ್ತವೆ. (ಚಪ್ಪಲಿಗಳು, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ಕಡಲಾಚೆಯ ಹುಡುಗಿಗೆ...) ತನ್ನನ್ನು ತಾನು ಸ್ಪಷ್ಟಪಡಿಸಿಕೊಳ್ಳುವಂತೆ ತೋರುವ ಕೆಲ ರಚನೆಗಳಲ್ಲೇ ಮಾತುಗಳು ತೂರುತ್ತವಾದರೂ ಕೆಲ ಕಡೆ ಕತ್ತರಿಸಿಟ್ಟಂತೆ ತೋರುವ ಸಾಲುಗಳು ಏನು ಹೇಳಲು ಹೊರಟಿವೆ ಅನ್ನುವುದೆ ಸ್ಪಷ್ಟವಾಗುವುದಿಲ್ಲ. ಈ ಎರಡು ಒಂದೇ ಮಗ್ಗುಲಲ್ಲಿರುವುದರಿಂದ ಕವಿಗೆ ಈ ಮಿತಿಗಳನ್ನು ಮೀರುವುದೇನು ಕಷ್ಟದ್ದಲ್ಲ. ನಾಡಿಗರು ಹೇಳುವುದನ್ನು ನೆನಪಿಸುವುದಾದ್ರೆ 'ಸಾವಯವ ಬಂಧವು ಅವರು ತಲುಪಬೇಕಾದ ಗಮ್ಯದೆಡೆಗೇ ದುಡಿಯಬೇಕು'. ಇಲ್ಲಿ ಬಳಸಿರುವ ಕೆಲ ಪರಭಾಷೆಯ ಪದಗಳು ಕವಿತೆ ಜೊತೆ ಬಾಗಿಕೊಂಡಿಲ್ಲ ಅನ್ನಿಸ್ತು.

ನಾನು ಕಟ್ಟಿಕೊಂಡ ಅರ್ಥಲೋಕದ ಟಿಪ್ಪಣೆಗಳಿವು. ನನ್ನ ಓದಿನ ಮಿತಿ ಈ ಕವಿತೆಗಳನ್ನು ಗ್ರಹಿಸಲು, ಆಳದಲ್ಲಿ ಸ್ಪರ್ಶಿಸಲು ಆಗದೆ ಹೋಗಿರಬಹುದು. ಹಾಗೆ ಕೆಲ ಕವಿತೆಗಳು ನನಗೆ ದಕ್ಕದೆಯೂ ಹೋಗಿರಬಹುದು. ಹೀಗೆ ಒಪ್ಪಿಕೊಂಡಿರುವುದು ನಾನು ಹೇಳಿದ ಅಭಿಪ್ರಾಯಗಳಿಂದ ನುಣಿಚಿಕೊಳ್ಳುವುದಕ್ಕಲ್ಲ ನಾನು ಹೇಳಿದ ಮಾತುಗಳಿಗೆ ಬದ್ಧವಾಗಿಯೂ ಈ ಮಾತು ಸೇರಿಸಿದ್ದೇನೆ. ಓ ಎಲ್ ನಾಗಭೂಷಣ ಸ್ವಾಮಿಯವರ ಈ ಮಾತುಗಳು ನಾನು ಹೇಳಬೇಕಿದ್ದಿದ್ದಕ್ಕಿಂತ ಸ್ಪಷ್ಟವಾದ ರೂಪದಲ್ಲಿವೆ ಕೇಳಿ."ಕವಿತೆಯನ್ನು ಕುರಿತು ಚರ್ಚಿಸುವುದೆಂದರೆ ನಾವು ಅನುಭವ ಪಡೆದ ರೀತಿಯನ್ನು ಚರ್ಚಿಸುವುದೇ. ಹಾಗೆ ಹೊಸ ನೋಟವನ್ನು, ಅರ್ಥದ ಹೊಸ ಸಾಧ್ಯತೆಗಳನ್ನು ಒಳಗೊಂಡಿರುವ, ತೋರುವ ಕವಿತೆಯೇ ನಿಜವಾದ ಕವಿತೆಯಾಗಿರುತ್ತದೆ. ಆದರೆ ಕೇವಲ ಅರ್ಥ ಪ್ರತಿಪಾದನೆಯ ಉದ್ದೇಶದಿಂದ ಬರೆದ ಕವಿತೆಗಳು ಸಾಮಾನ್ಯವಾಗಿ ಅಲ್ಪಾಯುಗಳಾಗಿರುತ್ತವೆ. ಬುದ್ಧಿ ವಿಲಾಸಕ್ಕೆ, ತರ್ಕಕ್ಕೆ ಅತಿಹೆಚ್ಚಿನ ಮನ್ನಣೆಯನ್ನು ನೀಡದೆ ಭಾಷೆಯ ಮೂಲಕ ಭಾವಸೂಚನೆಗಳನ್ನು ಒಳಗೊಂಡಿರುವ ಕವಿತೆ ಹೆಚ್ಚು ತಾಳುತ್ತದೆ. ಭಾವ ಪ್ರಾಮಾಣಿಕತೆ ಉತ್ತಮ ಕವಿತೆಯ ಮುಖ್ಯ ಲಕ್ಷಣ. ಆದರೆ ಅದೊಂದೇ ಉತ್ತಮ ಕವಿತೆಯ ಸೃಷ್ಟಿಗೆ ಕಾರಣವಾಗಲಾರದು. ಸೂಕ್ತ ಮತ್ತು ಸಮರ್ಥ ಭಾಷಿಕ ರೂಪ ಮತ್ತು ಲಯವೈವಿಧ್ಯತೆಯ ಸಾಧನೆ ಉತ್ತಮ ಕವಿತೆಯ ಇನ್ನೆರಡು ಲಕ್ಷಣಗಳು. ಕಲಾತ್ಮಕತೆಯ ಲಕ್ಷಣಗಳು ಕಾಲಕಾಲಕ್ಕೆ ಬದಲಾಗಬಹುದು....ಅರ್ಧ ಹೇಗೆ ನಮ್ಮ ಗ್ರಹಿಕೆಯ ಸಾಮರ್ಥ್ಯದ ಮಿತಿಗೆ ಅನುಗುಣವಾಗಿ ನಮಗೆ ದಕ್ಕುವುದೋ ಹಾಗೆಯೇ ಕವಿತೆಯೊಂದರ ಅರ್ಥವೂ ನಮ್ಮ ಗ್ರಹಿಕೆಯ ಮಿತಿಗೆ ಒಳಪಟ್ಟಿದೆ. ಆದ್ದರಿಂದಲೇ ಕವಿತೆಯೊಂದರ ಅರ್ಥವನ್ನು ವಿವರಿಸಿ ಮುಗಿಸಲು ಸಾಧ್ಯವಿಲ್ಲ. ಒಂದೊಂದು ಓದಿನ ಸಂದರ್ಭದಲ್ಲೂ ಕವಿತೆ ಮತ್ತೆ ಜೀವತಾಳುತ್ತದೆ. ಓದುವ ಕ್ರಿಯೆಯಲ್ಲಿ ಕವಿತೆ ಜೀವತಾಳುವುದರಿಂದಲೇ ಒಂದೊಂದು ಕವಿತೆಯೂ ಒಂದೊಂದು 'ಕೃತಿ' ಓದುಗರು ತಮ್ಮ 'ಇಷ್ಟ' ಮತ್ತು 'ಸಾಮರ್ಥ್ಯ'ಕ್ಕೆ ಅನುಸಾರವಾಗಿ ನಿರ್ಮಿಸಿಕೊಳ್ಳುವ 'ಕೃತಿ'. ಆದ್ದರಿಂದಲೇ ಕವಿತೆಯನ್ನು ಕುರಿತು ಮಾಡುವ ಯಾವುದೇ ವ್ಯಾಖ್ಯಾನವೂ ಕವಿತೆಯಿಂದ ಓದುಗರು ಪಡೆವ ಅನುಭವಕ್ಕೆ ಪರ್ಯಾಯವಾಗಲಾರದು. ವ್ಯಾಖ್ಯಾನವೂ ಇನ್ನೊಂದು ಕೃತಿ ಅಷ್ಟೆ." ಇಷ್ಟು ಸಾಕು ಮುಂದೆ ಈ ಕವಿತೆಗಳ ಕುರಿತು ಮಾತು ಬಂದಾಗ ಖಂಡಿತಾ ಮಾತನಾಡೋಣ. ಕವಿಯ ಸಾಲುಗಳಿಂದಲೇ ಮಾತು ಮುಗಿಸುವುದಾದರೆ.

ಸುಡುವ ಬೀದಿ ಬೀದಿಗಳಲ್ಲಿ
ಪಾದಗಳ ಊರಿ ನಡೆದುಹೋಗುತ್ತೇನೆ
ಊರಿದ
ಒಂದು ಪಾದದಡಿಯ
ನೆಲ ಯಾರದು?
ಗಾಳಿಯಲ್ಲಿರುವ
ಇನ್ನೊಂದು ಪಾದದ ಬಗ್ಗೆ
ನನಗೆ ಭಯವಿಲ್ಲ
ಅಲ್ಲಿ ಯಾರೂ
ಬೇಲಿ ಹಾಕುವುದನು ಕಲಿತಿಲ್ಲ (ಯಾರದಿದು? - 81)

*



ಎಚ್ ಎಸ್ ರಾಮನಗೌಡ,
ಕೊಂಡಿಕೊಪ್ಪ




--------------------
ಕಾಜೂರು ಸತೀಶ್
ಗಾಯದ ಹೂಗಳು
ಫಲ್ಗುಣಿ ಪ್ರಕಾಶನ
₹- 75
2015

Sunday, July 9, 2017

'ಕಡಲ ಕರೆ'ಯ ಕುರಿತು ಆರ್. ವಿಜಯರಾಘವನ್

ಕೆ ಸಚ್ಚಿದಾನಂದನ್, ರಾಜೀವನ್ ಹೊರತಾಗಿ ಇಲ್ಲಿ ಸೇರಿರುವ ಕವಿಗಳು ಹೊಸಬರು ಎಂಬಂತಿದೆ. ಅವರೆಲ್ಲರ ಕಾವ್ಯದ ಭಾಷೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆಗಳು ಭಿನ್ನವಾದವು. ಇವತ್ತಿನ ಅಂದರೆ ಪಕ್ಕಾ ವರ್ತಮಾನದ ಕಾವ್ಯದ ಹಾಗೆ ಕನ್ನಡದ ಓದುಗರಿಗೆ ತೋರುವ ರಚನೆಗಳು ಇವು. ಈ ಬಗೆಯ ಬರೆಹಗಳು ಕನ್ನಡದಲ್ಲಿ ಕಡಿಮೆ. ಹಾಗಾಗಿಯೇ ಎಲ್ಲವೂ ಕನ್ನಡಕ್ಕಿಂತ ಭಿನ್ನವಾಗಿವೆ ಅನ್ನಿಸುತ್ತವೆ. ಇದ್ದರೂ ಯಾವ ಭಾಷೆಯಲ್ಲಾದರೂ ಬರೆಯಬಹುದಾದ ಅರ್ಬೇನ್ ಅನುಭಾವದ ಕವಿತೆಗಳಿವು.


ಈ ಕವಿತೆಗಳನ್ನು ನಿರ್ದಿಷ್ಟ ಹಿನ್ನೆಲೆಯಿಂದ ಗಮನಿಸುವುದು ಸಾಧ್ಯವಾಗಿಲ್ಲ ಏಕೆಂದರೆ ಇವು ಯಾವ ಜಿಯಾಗ್ರಫಿಯ ಹುಟ್ಟುಗಳೆಂಬ ಮಾಹಿತಿಯಿಲ್ಲ. ಕವಿತೆಗಳ ಆಯ್ಕೆಯಲ್ಲಿ ಗಮನಿಸಿದ ಮಾನದಂಡಗಳೇನು ಎನ್ನುವುದೂ ತಿಳಿಯದು. ಆದ್ದರಿಂದ ಇದು ಪ್ಯಾನ್ ಕೇರಳೈಟ್ ಆದ ಅನುಭವವೇ? ಇಡೀ ಕೇರಳದ ಕಾವ್ಯ ಇದೇ ಬಗೆಯ ನರಳುವಿಕೆಯಲ್ಲಿ ತೊಡಗಿಕೊಂಡಿದೆಯೇ? ಸಾಮುದಾಯಿಕ ಅನುಭವ ಗ್ರಹಣವೇ ನಾಪತ್ತೆಯಾಗಿ ಬರೀ ಸ್ವಕೇಂದ್ರಿತ ಅನುಭವಗಳು ಮಾತ್ರವೇ ಕಾವ್ಯವೆಂಬುದಕ್ಕೆ ಸಾಮಗ್ರಿಯಾಗಿ ಒದಗುತ್ತಿದೆಯೇ? ಅಥವಾ ಈ ಹಳಹಳಿಕೆ ಇಡೀ ಮಲಯಾಳಂ ಭಾಷಿಕ ಕವಿಗಳಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿದೆಯೇ? ಇಂದಿನ ಅಮೆರಿಕನ್ ಕಾವ್ಯದ ಹಾಗೆ ಎಸೋಟೆರಿಕ್ ಅನ್ನುವುದಕ್ಕೆ ಹಿಂದಿನ ದಶಕಗಳ (ಸಂತೆಗಳಲ್ಲಿ ಕವಿತೆಯೋದುತ್ತಿದ್ದ ಕವಿಯೊಬ್ಬರು ನೆನಪಾಗುತ್ತಾರೆ) ಮಲಯಾಳಂನಲ್ಲಿ ಬಹು ಪ್ರಖ್ಯಾತವಾಗಿದ್ದ ಎಕ್ಸೋಟೆರಿಕ್ ಮಾರ್ಗವು ದಾರಿ ಮಾಡಿಕೊಟ್ಟಿದೆಯೇ? ಇದೊಂದು ಬಗೆಯಲ್ಲಿ ಗಮನವನ್ನು ಅಪೇಕ್ಷಿಸುತ್ತದೆ.

ಇದ್ದರೂ ಕೆಲವು ಕವಿತೆಗಳು ಭಿನ್ನವಾಗಿವೆ. ಪರ್ಷಿಯನ್ ಸೂಫಿಯ ಕಾವ್ಯವನ್ನು ನೆನಪಿಸುವಂತೆ ಒಂದೆರಡಿವೆ; ಒಂದು ಕ್ರೈಸಿಸ್ ಅನ್ನು, ಒಂದು ಹಳವಂಡವನ್ನು ಕುರಿತು ಸಂಯಮದಿಂದ ಹಾಡುವ ಕನಸುಗಳಿವೆ; ಬದುಕಿನ ನಂಬಿಕೆಗಳಿಂದ ಮನುಷ್ಯನನ್ನು ಡಿಲೀಟ್ ಮಾಡಬಹುದೆಂಬ ಕಳವಳದ ಕವಿತೆಯಿದೆ; ಅಳತೆ ಮೀರಿದ ಅಪನಂಬಿಕೆಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಕಾವ್ಯಾಭ್ಯಾಸಿಗೆ ಭಿನ್ನ ಅನುಭವವನ್ನು ಕೊಡುವ ಕವಿತೆಗಳಿವೆ. ಆದ್ದರಿಂದ ಇದರ ಪ್ರಕಟಣೆ ಅಗತ್ಯವಿದೆ ಎನ್ನಿಸುತ್ತದೆ, ನನಗೆ.
*

-ಆರ್. ವಿಜಯರಾಘವನ್

Friday, June 23, 2017

ಗಾಯದ ಹೂವುಗಳ ಕುರಿತು ಸಂಗೀತಾ ರವಿರಾಜ್

ತಮ್ಮ ಚೊಚ್ಚಲ ಕೃತಿಗೆ 2015ರ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದಿರುವ ಪ್ರತಿಭಾವಂತ ಕವಿ ಕಾಜೂರು ಸತೀಶ್ರವರ ಕವನ ಸಂಕಲನ ಗಾಯದ ಹೂವುಗಳು . ಯಾವ ಕೋನದಿಂದ ಆಲೋಚಿಸಿದರೂ ಅತ್ಯಂತ ಭಿನ್ನವಾದ ಅರ್ಥಗಳನ್ನು ಹುಟ್ಟಿಸುವ ಗಾಯದ ಹೂವುಗಳು ಎಂಬ ಶೀರ್ಷಿಕೆಯೇ ವಿಶಿಷ್ಟವಾಗಿದೆ. ಮೊಸರಿನೊಳಗವಿತ ನವನೀತದಂತೆ ಗಾಯದ ಹೂವುಗಳಲ್ಲಿರುವ ಕವಿತೆಗಳ ಆಂತರ್ಯವನ್ನು ಕಡೆದು ಕಡೆದು ನಾವು ಪಡೆದುಕೊಳ್ಳಬೇಕು. ಇಲ್ಲಿರುವ ಕವಿತೆಗಳನ್ನು ಓದುತ್ತಿದ್ದರೆ ಇದು ಯುವ ಕವಿಯೋರ್ವರ ಕವಿತೆಗಳೆಂದು ಖಂಡಿತ ನಮಗನಿಸುವುದಿಲ್ಲ. ಹಿಂದಿನ ಕಾಲದಂತೆ ಓದುಗರಿಗೆ ಬರಹಗಳ ಪರಿಚಯ ಮಾತ್ರ ಇರುವಂತಿದ್ದರೆ ಪ್ರಾಯ ಮಾಗಿರುವ ಕವಿಯೊಬ್ಬರ ಬರಹವೆಂದೇ ಎಲ್ಲರೂ ಭಾವಿಸುತ್ತಿದ್ದರೋ ಏನೋ! ಏಕೆಂದರೆ ಕಲ್ಪನೆಗಿಂತ ಹೆಚ್ಚಾಗಿ ಆಳವಾದ ಜೀವನಾನುಭವದಿಂದ ವಿರಚಿತಗೊಂಡಿರುವ ಇಲ್ಲಿರುವ ಕವಿತೆಗಳು ಅಭೂತ ಪೂರ್ವವಾಗಿವೆ.

**ಕೇಳಿಸಿಕೊಳ್ಳಿ
ಒಂದು ಇರುವೆ ಸತ್ತಿದೆ
ನನ್ನ ಕಾಲಬುಡದಲ್ಲಿ

ಏನು?
ಕೇಳಿಸುತ್ತಿಲ್ಲವೇ?

ದನಿ ಎತ್ತರಿಸಿ ಹೇಳುತ್ತಿದ್ದೇನೆ
ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ
*
ಪ್ರಭೂ
ನಾನು ಸಾಯುವಾಗಲೂ
ಹೀಗೇ ಕೂಗಿ ಕರೆಯಲು
ಒಂದು ಇರುವೆಯನ್ನಾದರೂ ಬದುಕಿಸು
ನನ್ನ ಕಾಲಬುಡದಲ್ಲಿ

ಬದುಕನ್ನು ನೋಡುವ ಕ್ರಮವೇ ಇಲ್ಲಿನ ಕವನಗಳ ಧಾಟಿ. ಹಾಗಾಗಿ ಪ್ರಾಮಾಣಿಕ ವಿಷಯಗಳ ಅಭಿವ್ಯಕ್ತಿಯೇ ಇಲ್ಲಿರುವ ಕವಿತೆಗಳ ಜೀವಾಳ. ಬಡತನದ ಬವಣೆಯನ್ನು ಅಪ್ರಾಮಾಣಿಕತೆಯನ್ನು, ಹುಸಿ ಪ್ರೀತಿಯನ್ನು, ನಂಬಿಕೆದ್ರೋಹವನ್ನು, ಭ್ರಷ್ಟತೆಯನ್ನು ದಿಕ್ಕರಿಸುವ ಎದೆಗಾರಿಕೆ ಕವಿಯ ನಿರ್ದಿಷ್ಟ ಮನೋಬಲದ ಕುರುಹಾಗಿದೆ.

ಹಸಿದ ಹುಡುಗ
ಪರೀಕ್ಷೆಯಲ್ಲಿ
ಅರಮನೆಯ ವೈಭೋಗವನ್ನು
ವಿವರಿಸುತ್ತಿದ್ದಾನೆ.

ಅವನ ದು:ಖ
ನಡುನಡುವೆ ನುಸುಳಿ
ಉತ್ತರ ನಿರಾಭರಣವಾಗುತ್ತಿದೆ..

ಅನುಭವಗಳೊಂದಿಗೆ ಉತ್ತಮ ಮುಂದಾಲೋಚನೆಗಳು ಸಮೀಕರಿಸಿದರೆ ಹುಟ್ಟುವಂತಹ ಅನನ್ಯ ಚಿಂತನೆ ಇವರ ಬರಹದಲ್ಲಿದೆ. ಬದುಕಿನ ಏರಿಳಿತದ ಹಾದಿಯಲ್ಲಿ ಅಚಾನಕ್ಕಾಗಿ ಸಿಕ್ಕ ಕವಿತೆಗಳನ್ನೆಲ್ಲಾ ಆಗಲೇ ಆಯ್ದಿರಿಸಿ, ಕಾಯ್ದಿರಿಸಿಕೊಂಡಿದ್ದಾರೆ.

ಜೀವ ಚಡಪಡಿಸುವ ಹೊತ್ತಲ್ಲಿ ವೈದ್ಯರ ಬಳಿ ಹೋದೆ
ಹರಿದ ನನ್ನ ಜೇಬು ತಡಕಾಡಿದರು
ಹೊರಬರುವ ಹೊತ್ತಲ್ಲಿ
ಜೇಬಿನ ತುತ್ತತುದಿಯ ದಾರಕ್ಕೆ ಪದ್ಯಗಳು ಜೋತುಬಿದ್ದಿದ್ದವು

ಅದರ ಬಲದಲ್ಲಿ ನಾನೀಗಲೂ ಬದುಕಿಕೊಂಡಿದ್ದೇನೆ

ಎಂಬುದಾಗಿ ಹೇಳುವ ಕವಿಯಲ್ಲಿ ಜೀವನದ ಬಗ್ಗೆ ಅದಮ್ಯ ಆಶಾವಾದವಿದೆ. ಇಂತಹ ಭರವಸೆಯ ಹಾದಿಯೇ ಇವರ ಜೀವನದ ಕವಿತಾ ಹಾದಿ.
ಕಾಲದ ಸರಹದ್ದು ಎಲ್ಲೆ ಮೀರಿ ಬೆಳೆದದ್ದನ್ನು ಕವಿ ಚಿತ್ರಿಸಿದ ಪರಿ ತುಂಬಾ ಪರಿಣಾಮಕಾರಿಯಾಗಿದೆ. ತಮ್ಮ ತಂದೆ ತಾಯಿ ಹಿರಿಯರ ಜೀವಿತವೆ ಕಣ್ಣ ಮುಂದಿನ ಸಾಲುಗಳಾಗಿ ಪಡಿಮೂಡಿವೆ. ಬವಣೆಗಳು ಬವಣೆಗಳಾಗಿ ಉಳಿಯದೆ ಶಿಲ್ಪಿಯ ಉಳಿಯ ಪೆಟ್ಟಿನ ತೆರೆದಿ ರೂಪುಗೊಂಡ ಜೀವದ ತುಡಿತವೆ ಧ್ವನಿಗಳಾಗಿ ವಿರಚಿತಗೊಂಡಿವೆ. ಒಂದು ಹೃದ್ಯವಾದ ರೂಪದಲ್ಲಿ ಕವಿತೆಯಾಗಿ ರೂಪ ತಳೆದಿದೆ.

ನಿದ್ರಿಸಿದರೂ ಹೊಗೆಯಾಡುತ್ತದೆ
ಗತದ ಹಾಳೆ ತಾಗಿದೊಡನೆ
ಒಂದೇ ಉಸಿರಿಗೆ ಓದಿ ಮುಗಿಸುತ್ತದೆ

ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ..

ಗಾಯದ ಹೂವುಗಳಲ್ಲಿ ಮುಖ್ಯವಾಗಿ ತೋರುವ ಗುಣ ಕಾಳಜಿ. ಕವಿಯಾದವನು ಸಮಾಜದ ಮುಖ್ಯವಾಹಿನಿಯಲ್ಲಿ ತ್ವರಿತವಾಗಿ ಮಾಡಬೇಕಾದ ಕೆಲಸವೆಂದರೆ ಇದು.
ಸಮಾಜದಲ್ಲಿ ಶೋಷಿತರ ಪರವಾದ ಸ್ವರವಾಗಬೇಕು. ಬಂಡಾಯ ಧೋರಣೆ ಸ್ವರೂಪದಲ್ಲಿರುವ ಇಲ್ಲಿರುವ ಕವಿತೆಗಳು ಕೂಲಿ ಸಿಗದ ಕಾರ್ಮಿಕರ ಬಗ್ಗೆ, ಸುಡುವ ಬೀದಿಯಲ್ಲಿ ನಡೆವ ಪಾದದ ಕುರಿತು, ಅರ್ಜಿ ನೀಡಿ ಅಲೆದಾಡುವ ಸಾಮಾನ್ಯ ಜನರ ಕುರಿತು, ಹಸಿದ ಹೊಟ್ಟೆಯ ಸಂಕಟದ ಬಗ್ಗೆ ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ನಾನು ಎಲ್ಲರಂತೆ ಸಾಮಾನ್ಯ ಮನುಷ್ಯ ಎಂಬುದಾಗಿ ಹೇಳುವ, ಎಲ್ಲರನ್ನು ನನ್ನ ಜನರೇ ಎಂಬುದಾಗಿ ಸಂಭೋದಿಸುವ ಇವರ ವಿನಯವಂತಿಕೆಯೇ ಕವಿತೆಯ ಜೀವದ್ರವ್ಯ. ಕ್ರಾಂತಿ, ಅಶಾಂತಿ, ಅಸಹಿಷ್ಣುತೆಗಳನ್ನು ಸಹಿಸದ ಧ್ಯೇಯ ಹೊಂದಿರುವ ಕವಿತೆಗಳು ನಮಗಿಲ್ಲಿ ಗೋಚರಿಸುತ್ತವೆ. ಇದರಿಂದಾಗಿ ಕವಿತೆಯ ಒಳಹೊರಗನ್ನು ಆಸ್ವಾದಿಸುವ ನಮ್ಮ ಸಂಯಮ ಇಮ್ಮಡಿಗೊಳ್ಳುತ್ತದೆ.

ಉಣಿಸುವವರ ವಿಷದ ಹಲ್ಲು ಕಿತ್ತರೆ
ಹಾಲೂ ಕುಡಿಯಬಲ್ಲದು
ಹಣ್ಣೂ ತಿನ್ನಬಲ್ಲದು

ಎಲ್ಲಾದರೂ ದೂರ ಸರಿ
ಮೈಯೆಲ್ಲಾ ಕಿವಿಯಾದ ಹಾವೇ
ಚಪ್ಪಲಿಗಳಿಗಾದರೋ ದನಿಯಿದೆ
ಬರಿಯ ಪಾದಗಳ ಚಲನೆಯ ಗ್ರಹಿಸು

ಬುಸುಗುಡಲು ಹೆಡೆಯಿರದಿದ್ದರೆ
ಬಡಿಯಲು ಬಾಲವನ್ನಾದರೂ ಎತ್ತು
ಕಳಚು ಸುತ್ತಲಿನ ಪೊರೆ
ಚರಿತ್ರೆಯ ಸಾಲ ತೀರಿಸಬೇಕು

ಆ ಕ್ಷಣದ ಸತ್ಯವನ್ನು ಕವಿತೆಯಲ್ಲಿ ಹಿಡಿದಿಟ್ಟರೂ ಅದು ಭವಿಷ್ಯದ ಅದ್ಭುತ ಸತ್ಯವಾಗಬಹುದು ಎಂಬುದನ್ನು ನಮ್ಮರಿವಿಗೆ ತಂದಿದೆ. ಇದರಿಂದ ಕವಿತೆಯ ಬಲ ಇನ್ನೂ ಹಿಗ್ಗಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಇಲ್ಲಿರುವ ಕವಿತೆಗಳು ಎಂದೆಂದಿಗೂ ತನ್ನ ತಾಜಾತನವನ್ನು ಕಾಯ್ದಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಬೂಟಾಟಿಕೆಯ ಬದುಕನ್ನು, ಬಹುಪರಾಕ್ ಹೇಳುವ ಹೊಗಳುಭಟರ ತೆವಲನ್ನು, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರನ್ನು ನಕಾರಾತ್ಮಕವಾಗಿ ಗುರುತಿಸಿದ ಗುರುತರ ಹೊಣೆಗಾರಿಕೆಯನ್ನು ಇಲ್ಲಿನ ಕವಿತೆಗಳು ಹೊತ್ತಿವೆ. ಎಲ್ಲೋ ಒಂದು ಕಡೆ ಈ ಗುರುತಿಸುವಿಕೆ ಸರ್ವರಿಗೂ ಒಳಿತನ್ನು ಉಂಟುಮಾಡಬಲ್ಲುದು ಎಂಬ ಆಶಾವಾದವನ್ನು ಲೇಖಕರು ಹೊಂದಿದ್ದಾರೆ.

ಸಾವಿರಾರು ಬಿಳಿಕೂದಲುಗಳ ಒಡೆಯರೇ
ಒಳಗಿನ ಜೀವದ್ರವ್ಯ ಒಣಗಲು ಬಿಟ್ಟ
ನನ್ನ ಬರಿಮೈಯನ್ನೆ ನೋಡಿ
ಇನ್ಯಾವ ರೂಪಕಗಳು ಬೇಕು ನಿಮಗೆ?

ಹಠಾತ್ತನೆ ಕುಸಿದ ಭಾವವು ಅಲ್ಲೆಲ್ಲೋ ಕವಿತೆಗಳಲ್ಲಿ ಇಣುಕಿದಂತೆ ಭಾಸವಾದರೂ ಅದು ಭಾವಪರವಶತೆ ಎಂದೆನಿಸಿಬಿಡುತ್ತದೆ! ಒಂದು ವಿಷಯದ ಮೇಲೆ ಅತೀ ತೀವ್ರವಾಗಿ ಒಳಗೊಳ್ಳಲು ಎಲ್ಲರಿಂದ ಸಾಧ್ಯವಾಗದ ಮಾತು .ಇಲ್ಲಿ ಕವಿಗೆ ತನ್ನ ಒಡಲ ಅಳಲನ್ನು ತೋಡಿಕೊಳ್ಳಲು ಕವಿತೆಯಿದ್ದರೆ ಮಾತ್ರ ಸಾಕು ಅಥವಾ ಸಾಕೇ? ಎಂಬ ಭಯಮಿಶ್ರಿತ ಪ್ರಶ್ನೆ ಅರೆಕ್ಷಣ ಕಾಡಿಬಿಡುತ್ತದೆ. ಅದರಾಚೆಗೆ ತಲೆಯಾನಿಸಿ ಮಲಗಲು ಇನ್ನೇನರದ್ದೋ ಇರುವ ಕೊರತೆಯನ್ನು ಕವಿತೆಯೆ ಅವರಿಗೆ ತುಂಬಿ ಬಿಡುತ್ತದೆ. ಈ
ಅಜ್ಞಾನಿಯ ದಿನಚರಿ**ಯಲ್ಲಿ ಜ್ಞಾನದ ಹೂವು ಅನವರತ ಅರಳುತ್ತಿದೆ. ಆ ಹೂವಿಗೆ ಗಾಯದ ಹಂಗಿಲ್ಲ. ಗಾಯ ಮಾಗುವುದೆಂತು ಎಂದು ಕಾಯುವ ಹಪಾಹಪಿಯೂ ಇಲ್ಲ. ಕವಿ ಕಾಜೂರು ಸತೀಶ್‍ರವರ ಕವಿ ಬದುಕು ಸುಂದರ ಹೂವಾಗಿ ಅರಳಿ ನಿಲ್ಲುವ ಎಲ್ಲಾ ನಿಖರತೆಯೂ ಸ್ಪಷ್ಟವಾಗಿ ಗೋಚರಿಸುತ್ತದೆ.
*

ಸಂಗೀತ ರವಿರಾಜ್

ವಿಳಾಸ :
ಸಂಗೀತ ರವಿರಾಜ್
ಬಾಲಂಬಿ ಅಂಚೆ
ಚೆಂಬು ಗ್ರಾಮ
ಮಡಿಕೇರಿ ತಾಲೂಕು
ಕೊಡಗು ಜಿಲ್ಲೆ -574234
ಚಲನವಾಣಿ : 7259135346

Saturday, June 3, 2017

ಗಾಯದ ಹೂವುಗಳು ಮತ್ತು ಕಡಲ ಕರೆ ಕುರಿತು ಡಾ. ಪಾರ್ವತಿ

ಪ್ರಿಯ ಸತೀಶ್,

ನೀವು ಪ್ರೀತಿಯಿಂದ ಕಳುಹಿಸಿ ಕೊಟ್ಟ ನಿಮ್ಮ ಕವಿತಾ ಸಂಕಲನ ಗಾಯದ ಹೂವುಗಳು ಓದಿದೆ. ಅಬ್ಬ! ಅದೆಷ್ಟು ಮನಕದಡುವಂತೆ ನಿಮ್ಮ ಅಂತರಂಗದ ತುಡಿತಗಳಿಗೆ ಅಭಿವ್ಯಕ್ತಿ ನೀಡಿದ್ದೀರಿ! ನೀವು ಅಲ್ಲಿ ಜೋಡಿಸಿಟ್ಟ ಪ್ರತಿಯೊಂದು ಗುಲಾಬಿಯನ್ನು ಪಡೆಯಬೇಕಿದ್ದರೂ ನಾವು ಮುಳ್ಳುಗಳಿಂದ ಚುಚ್ಚಿಸಿಕೊಳ್ಳಬೇಕೇನೋ ಅನ್ನುವ ಹಾಗೆ. ಓದುತ್ತಿದ್ದಂತೆ ನನಗೆ ಷೆಲ್ಲಿಯ ಮಾತುಗಳು ನಿಮ್ಮ ಕವಿತೆಗಳ ಸಂದರ್ಭದಲ್ಲಿ ತುಂಬ ಅರ್ಥಪೂರ್ಣ ಅನ್ನಿಸಿತು: ಅವರ್ ಸ್ವೀಟೆಸ್ಟ್ ಸಾಂಗ್ಸ್ ಆರ್ ದೋಸ್ ದ್ಯಾಟ್ ಟೆಲ್ ಅಸ್ ಆಫ್ ಸ್ಯಾಡೆಸ್ಟ್ ಥಾಟ್ಸ್ ಅಂತ. ಕೌಟುಂಬಿಕ ಬದುಕಿನಲ್ಲಿ ಎದುರಿಸಿದ ಕರುಳಿರಿಯುವ ಬಡತನದ ನೋವು, ಪರಿಸರ ನಾಶ ಮತ್ತು ಸುತ್ತಲಿನ ಭೂಮಿ ಬೋಳಾಗುತ್ತಿರುವ ಬಗೆಗಿನ ಕಾಳಜಿ, ನಿಸರ್ಗ ಪ್ರೇಮ, ಗಂಡು ಹೆಣ್ಣಿನ ನಡುವಣ ಅರ್ಥಪೂರ್ಣ ಸಂಬಂಧ, ಗ್ರಾಮೀಣ ಬದುಕಿನ ಸಹಜತೆಯ ವಿರುದ್ಧ ನಿಲ್ಲುವ ನಾಗರಿಕತೆಯ ಕೃತಕತೆ, ಏನುಂಟು-ಏನಿಲ್ಲ ನಿಮ್ಮ ಕವಿತೆಗಳಲ್ಲಿ! ನಿಜವಾಗಿಯೂ ಅವು ಕೆಂಡದಲ್ಲಿ ಸುಟ್ಟ ಹಸಿಮೀನುಗಳೇ ಹೌದು.

ಎಷ್ಟೋ ಕವಿತೆಗಳ ಸಾಲುಗಳು ಅರ್ಥವಾಗುವುದಿಲ್ಲ.ಅರ್ಥಗಳನ್ನು ಸಾಲುಗಳ ನಡುವೆ ಆಳದಲ್ಲೆಲ್ಲೋ ಹುಗಿದಿಟ್ಟಿದ್ದೀರಿ. ರೂಪಕಗಳು, ಪ್ರತಿಮೆ ಸಂಕೇತಗಳು ಎಲ್ಲದರಲ್ಲೂ ನಿಮ್ಮದೇ ವಿಶಿಷ್ಟ ಛಾಪು. ಪ್ರೇಮ ಕವಿತೆಗಳಲ್ಲಿ ಒಂದೆರಡು ಕಡೆ ಇಂಗ್ಲಿಷ್ ಕವಿ ಜಾನ್ ಡನ್ ಶೈಲಿಯನ್ನು ಕಂಡೆ. ಬಿಡಿ ಕವಿತೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಿದರೂ ಒಟ್ಟು ಕವಿತೆಗಳ ಓದು ನೀಡುವ ಕಾವ್ಯಾನುಭೂತಿ ಮಾತ್ರ ಮೈ ಝುಮ್ಮೆನ್ನಿಸುವಂಥದ್ದು. ಯಾವುದೋ ಲೋಕಕ್ಕೆ ಕರೆದೊಯ್ಯುವಂಥದ್ದು. ದುಃಖವು ನಿಮ್ಮ ಕವಿತೆಗಳ ಸ್ಥಾಯೀಭಾವ ಅನ್ನಿಸುತ್ತದೆ. ಕೊಡಗಿನ ಮಂಜು ಮುಸುಕಿದ ಅಥವಾ ಮೋಡ ತುಂಬಿದ ವಾತಾವರಣದಲ್ಲಿ ಕೊಂಡು ಹೋಗಿ ಬಿಟ್ಟಂತೆ. ಈ ಅನುಭೂತಿಯನ್ನು ಓದುಗ ಅನುಭವಿಸಲು ಮಾತ್ರ ಸಾಧ್ಯ. ಅದು ವಿವರಣೆಗೆ ನಿಲುಕುವಂಥದ್ದಲ್ಲ. ಪ್ರಾಯಶಃ ಅದರ ಅಗತ್ಯವೂ ಇಲ್ಲ ಅಲ್ಲವೆ?


ನೀವು ಮಲೆಯಾಳದಿಂದ ಅನುವಾದಿಸಿದ ಕಡಲ ಕರೆ ಸಂಕಲನಕ್ಕೆ ನೀವು ಆಯ್ಕೆ ಮಾಡಿಕೊಂಡ ಕವನಗಳೂ ನಿಮ್ಮ ಅಭಿರುಚಿಯನ್ನ ಸಾರಿ ಹೇಳುತ್ತವೆ. ನಿಮ್ಮದೇ ಕವಿತೆಗಳಗಿಂತ ಅವು ಬಹಳ ಭಿನ್ನವಾಗೇನೂ ಇಲ್ಲ. ಓರ್ವ ಅನುವಾದಕರಾಗಿಯೂ ನೀವು ನಿಮ್ಮ ಸೃಜನಶೀಲತೆಯನ್ನು ಮೆರೆದಿದ್ದೀರಿ.ಅಲ್ಲದೆ ಅಷ್ಟೆಲ್ಲ ಮಂದಿ ಕವಿಗಳ ನೂರಾರು ಕವಿತೆಗಳನ್ನು ಓದಿ ಆಯ್ಕೆ ಮಾಡಿ ಅವರನ್ನೆಲ್ಲ ಸಂಪರ್ಕಿಸಿ ಅನುವಾದವನ್ನು ಪ್ರಕಟಿಸುವುದೆಂದರೆ ಹರಸಾಹಸವೇ ಸರಿ. ಡಾ ಅಶೋಕ ಕುಮಾರ್ ಹೇಳಿರುವಂತೆ ನಿಮ್ಮ ಮಾತುಗಳಲ್ಲಿ ನೀವು ಮಾಡಿರುವ ಉಪಕಾರ ಸ್ಮರಣೆ ನಿಮ್ಮ ಅಮಿತ ಸೌಜನ್ಯದ ಪ್ರತೀಕ. ನೀವು ಕವಿತೆಗಳಿಗೆ ಬಳಸುವ ಪದಗಳ ಲಾಲಿತ್ಯ, ನಿಮ್ಮ ಶೈಲಿಯ ಸೌಂದರ್ಯ, ನಿಮ್ಮ ಧ್ವನಿಯ ಗಾಂಭೀರ್ಯ, ಕವಿತೆಗಳಲ್ಲಿ ಕಾಣಿಸುವ ನಿಮ್ಮೊಳಗಿನ ಸೂಕ್ಷ್ಮ ಸಂವೇದನೆಗಳು- ಎಲ್ಲವೂ ಮುಂದೆ ನೀವೊಬ್ಬ ಅತ್ಯುತ್ತಮ ಕವಿಯಾಗಿ ಎತ್ತರಕ್ಕೆ ಏರುತ್ತೀರಿ ಎಂಬುದನ್ನು ಸೂಚಿಸುತ್ತವೆ. ಸತೀಶ್, ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.
*


02.06.2017 ಡಾ. ಪಾರ್ವತಿ ಜಿ. ಐತಾಳ್, ಕುಂದಾಪುರ

Saturday, May 27, 2017

'ಗಾಯದ ಹೂವುಗಳು' ಕುರಿತು ಸ್ವಾಮಿ ಪೊನ್ನಾಚಿ

ಕೇಳಿಸಿಕೊಳ್ಳಿ ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ...

ಪ್ರಭೂ,
ನಾನು ಸಾಯುವಾಗಲೂ ಕೂಡ
ಹೀಗೇ ಕೂಗಿ ಕರೆಯಲು
ಒಂದು ಇರುವೆಯನ್ನಾದರೂ ಬದುಕಿಸು
ನನ್ನ ಕಾಲ ಬುಡದಲ್ಲಿ


ಎಂಥಾ ಸಾಮ್ಯತೆ..ಪಕ್ಕದಲ್ಲಿ ಕೂತಿರುವ ಮಂದಿ ನರಳುತ್ತಿದ್ದರೂ ಗಮನಿಸಲಾಗದಷ್ಟು ಗಡಿಬಿಡಿತದಲ್ಲಿರುವ ಈ ಸಂತೆಯಲಿ ಒಂದು ಜೀವವನ್ನಾದರೂ ನನಗಾಗಿ ಕೊಡು ಎಂದು ಕೇಳುವ ಕವಿ ಈ ಜಗತ್ತಿನ ಹೃದಯ ಹೀನತೆಯನ್ನು ಹೀಗೂ ಬೆತ್ತಲು ಮಾಡುತ್ತಾರೆ .

ಖಾಲಿ ಎಂದೊಡನೆ
ಅವಮಾನಿತನಿಗೆ ಬಾಂಬಿಡುವ ಕನಸು
ಬೀದಿನಾಯಿಗೆ ಕಾಲೆತ್ತುವ ಕನಸು


ಹೌದು.. ಇಲ್ಲಿ "ಖಾಲಿ "ಎಂದರೆ ಬರೀ ಖಾಲಿಯಷ್ಟೇ ಅಲ್ಲ.!ಕಳೆದುಕೊಂಡಿದ್ದನ್ನು ತಿರುಗಿ ಪಡೆಯುವ ;ಮತ್ತೆ ಮತ್ತೆ ಹುಡುಕುವ ;ತನ್ನ ಎದೆಯಲ್ಲಡಗಿರುವ ಕರಾಳ ಮುಖವನ್ನು ಅಥವಾ ನಿಜಮುಖವನ್ನು ಬರಿಗನ್ನಡಿಯಲ್ಲಿ ನೋಡಿಕೊಳ್ಳುವ ಮತ್ತು ಖಾಲಿ ಎಂದಾಕ್ಷಣ ಮನುಷ್ಯ ಮನುಷ್ಯನಾಗಿ ಇರುವ ಻ದಮ್ಯ ಸುಖ....ಖಾಲಿ ಇರುವ ಒಂಟಿ ಹೆಣ್ಣನ್ನೂ ಬುಟ್ಟಿಗೆ ಹಾಕಿಕೊಳ್ಳುವ ತವಕದಲ್ಲಿರುವ ನಮಗೆ..

ಒಳಗೆ ಸೇರಿಕೊಂಡ ಇರುವೆ/
ಜಿರಳೆ, ಹಲ್ಲಿಯ ಸುದ್ದಿ /ಊರು ಸುತ್ತುವ ಗಾಳಿಗೂ ತಿಳಿಯದಂತೆ


"ಖಾಲಿ"ತನದೊಳಗಡಗಿರುವ ದುಃಖ ದುಮ್ಮಾನ ನೋವು ನಲಿವುಗಳು ನಮಗೆ ತಿಳಿಯುವುದಿಲ್ಲ. ಖಾಲಿ ಎಂದರೆ ಖಾಲಿಯಷ್ಟೇ ಅಲ್ಲ. ಻ಅದರೊಳಗೆ ಅನಂತ ಸತ್ಯವಿದೆ ...

'ಚಪ್ಪಲಿಗಳು' ಕವಿತೆಯಲ್ಲಿ ಜಾತಿ, ಧರ್ಮ,ಕೊಲೆ, ಮೋಸ ,ವಂಚನೆ,ಮೌಢ್ಯತೆ, ಕೆಲಸಕ್ಕೆ ಬರದ ಒಣ ಸಿದ್ಧಾಂತ ಚಪ್ಪಲಿ ಸವೆದು ಬಾಳುದ್ದಕ್ಕೂ ಕೂಡ ಹೋಲಿಸಲಾಗದ ಻ಅಸಹಾಯಕತೆಯಲ್ಲಿ ಕೊನೆಗೆ

ನಮ್ಮ ತಿನ್ನುವ ಹಸಿದ ನರಪೇತಲ ನಾಯಿಗಳೇ ನಿಮಗೆ ಶರಣು

ಎನ್ನುವ ಮೂಲಕ ಚಪ್ಪಲಿಯ ಧನ್ಯತೆ ಕುರಿತು ಹೇಳುತ್ತಾರೆ.

ಬುಸುಗುಡಲು ಹೆಡೆಯಿರದಿದ್ದರೆ
ಬಡಿಯಲು ಬಾಲವನ್ನಾದರೂ ಎತ್ತು
ಕಳಚು ಸುತ್ತಲಿನ ಪೊರೆ


ಕಡಲಿನ ಆಚೆಬದಿಯಲ್ಲಿ
ನಿನ್ನದೊಂದು ತೊಟ್ಟು ರಕ್ತ
ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ
ಚೆಲ್ಲಿಬಿಡೋಣ
ಸುತ್ತಲಿನ ಶಾರ್ಕುಗಳು
ಏನು ಮಾಡುತ್ತವೆಂದು ಕಾದು ಕೂರೋಣ


ನನ್ನ ಹೊರಮೈಯ ಮಾಂಸವನ್ನು
ಹಿಂಡಿ ಒಣಗಿಸಿಡುತ್ತೇನೆ
ಕಾಮವಿಲ್ಲದ ಅದನ್ನ ನೀನು ಪ್ರೀತಿಯಿಂದ ಅಪ್ಪಿಕೊಳ್ಳಬಹುದು


ಈ ಸಾಲುಗಳಿಗೆ ಯಾವ ಮಾತುಗಳೂ ಬೇಡವೆನಿಸಿ ಸುಮ್ಮನೆ ಓದಬೇಕೆನಿಸುತ್ತದೆ.

ಆಸ್ಪತ್ರೆಯ ತುಂಬ ತುಂಬಿ ಹೋಗಿರುವ
ಪ್ಯಾರಾಸೆಟಮೆಲ್ ಗಳು
ಜ್ವರದಿಂದ ಬಳಲುತ್ತಿವೆ ಹೊಟ್ಟೆಗಳಲ್ಲಿ


ನಿಜ...ಸದಾ ಒಂದಿಲ್ಲೊಂದು ಪ್ಯಾರಸಿಟಮೋಲ್ ಗಳನ್ನು ಮನಸಿಗೆ ಹೊಟ್ಟೆಗೆ ಹಾಕಿಕೊಳ್ಳುವ ನಾವು ಯಾವಾಗಲೂ ರೋಗಗ್ರಸ್ಥರೆ....ಅತ್ತ ಜೀರ್ಣವಾಗದೇ ಇತ್ತ ನೋವು ವಾಸಿ ಮಾಡದೆ ಸದಾ "ಮದ್ದೀಡಿ"ನಂತೆ ಹೊಟ್ಟೆಯೊಳಗೆ ಇದ್ದು ನರಳಿಸಿ ಹಿಂಡಿ ಹಿಪ್ಪೆ ಮಾಡಿ ನಮ್ಮತನವನ್ನ ಸಾಯಿಸಿ ಬರೀ ದೇಹವನ್ನಷ್ಟೇ ಉಳಿಸುತ್ತದೆ.(ನೆನಪಿರಲಿ ಖಾಯಿಲೆ ಎಂಬುದು ಬರೀ ದೇಹಕ್ಕಷ್ಟೇ ಅಲ್ಲ) ಈ ಜಗತ್ತನ್ನು ಒಂದು ಆಸ್ಪತ್ರೆ ಅಂದುಕೊಂಡರೆ ಸಾಕು ನಮ್ಮ ಖಾಯಿಲೆ ಏನೆಂಬುದು ನಮಗೆ ಥಟ್ಟನೆ ಅರ್ಥವಾಗಿಬಿಡುತ್ತದೆ.ಅಷ್ಟರ ಮಟ್ಟಿಗೆ ಕಾಜೂರರು ಕವಿತೆಯ ಸೂಜಿ ಚುಚ್ಚಿಬಿಟ್ಟಿದ್ದಾರೆ ಎದೆಯಲ್ಲಿ.........!ಹೀಗೆ ಬುಟ್ಟಿತುಂಬ ಘಮಘಮಿಸುವ ಹೂಗಳನ್ನು ತುಂಬಿಕೊಂಡು ಹೊರಡುವ ಕವಿಯ ಕೈಯಲ್ಲಿರುವ ಹೂಗಳನ್ನೇ ನೋಡುವ ನಮಗೆ ಹೂವಿಗಾದ ಗಾಯವನ್ನು ನೋಡುವ ಒಳಗಣ್ಣಿದ್ದರೆ ಕಾಜೂರರ ಕವಿತೆ ನಿಜಕ್ಕೂ ಕಾಡಿಸುತ್ತದೆ...
*


ಸ್ವಾಮಿ ಪೊನ್ನಾಚಿ

Saturday, May 20, 2017

'ಕಡಲ ಕರೆ' ಅನುವಾದಿತ ಮಲಯಾಳಂ ಕವಿತೆಗಳ ಕುರಿತು ಡಾ.ಅಶೋಕ್ ಕುಮಾರ್ ಅನಿಸಿಕೆ

​ಪ್ರಿಯ ಸತೀಶ್,

ಇದೀಗ ಕಡಲ ಕರೆ ಕೈಸೇರಿದೆ.​

​ನಿಮ್ಮ ಮುನ್ನುಡಿಯ ಮೇಲೆ ಕಣ್ಣಾಡಿಸಿದೆ. ಬಲು ಆಪ್ತವಾಗಿ ಪ್ರಬುದ್ಧವಾಗಿ ಬರೆದಿದ್ದೀರಿ. ಹಲವು ಅನುವಾದಕರ ಹಲಬಗೆಯ ಅನುವಾದಗಳ ಸುರಿಮಳೆಯಾಗುತ್ತಿರುವ ​​ಈ ಕಾಲದಲ್ಲಿ , ಕವಿತೆಗೆ ಓದುಗರ ಬಾಹುಳ್ಯ ಇಲ್ಲದ ವಾಸ್ತವದಲ್ಲಿ, ಅನೇಕ ಸಹೃದಯ ಕವಿಗಳ( ಎರಡೂ ಭಾಷೆಗಳ) ಸಂಪರ್ಕ,ಸ್ನೇಹ ಬೆಳೆಸಿ ಸಫಲರಾಗಿ, ಕು.ಭಾ.ಭಾ ಪ್ರಾಧಿಕಾರ ಕವಿತೆಯ ಪುಸ್ತಿಕೆ ಹೊರತರುವಂತೆ ಮಾಡಿರುವ ತಮ್ಮ ಸಾಧನೆ ಅಪಾರ. ಅದ್ಭುತ. ಎಲ್ಲ ಪ್ರೋತ್ಸಾಹಕರನ್ನೂ ಮರೆಯದೆ ನೆನೆದು ಬರೆದು ದೊಡ್ಡ ಗುಣ ಮೆರೆದಿದ್ದೀರಿ. ( ದೊಡ್ಡವರನೇಕರು ಮನಃಪೂರ್ವಕ ತಾವು ಮೇಲೇರಿದ ಏಣಿಯನ್ನು ತುಳಿದು ದೂರಾಗಿಸಿ ಮುಸಿನಗುವ ದೃಶ್ಯ ಈಗ ನಿತ್ಯದ ಹಾಡು ).


ಅನುವಾದಕರಿಗೆ ಭಿನ್ನ ವಿಭಿನ್ನ ದೃಷ್ಟಿಕೋನ ಇದ್ದರೂ ಸ್ವಾತಂತ್ರ್ಯ ಕೆಲವೊಮ್ಮೆ ಸಾಧ್ಯವಾದರೂ ಸ್ವೇಚ್ಛೆ ಸರ್ವಥಾ ಸಲ್ಲದು ಎಂಬುದೇ ನನ್ನ ಅಭಿಮತ.
ಅಹಂಕಾರಕ್ಕೂ ಬೊಕ್ಕತನಕ್ಕೂ ಮದ್ದಿಲ್ಲ ಎಂಬ ಗಾದೆಯನ್ನು ನೆನಪಿಗೆ ತರುವಂತಹ ಅನೇಕ ಅನುವಾದಾಪರಾಧಿಗಳು ನಮ್ಮ ನಡುವೆಯೇ ಇರುವುದರಿಂದ ಈ ಮಾತು ನಾ ಹೇಳಬೇಕಾಯಿತು. ತಮ್ಮಂತಹ ವಿನಯಶೀಲರನ್ನು ಕಂಡಾಗ ತಂಗಾಳಿ ತೀಡಿದನುಭವವಾಗುತ್ತಿದೆ.

ಗದ್ಯ, ಪದ್ಯ, ನಾಟಕ, ಲೇಖನ ಇತ್ಯಾದಿ ಅನುವಾದಗಳು ಬಗೆ ಬಗೆಯ ಸವಾಲುಗಳ್ನ್ನು ಒಡ್ಡ ಬಹುದು. ಈ ಕುರಿತು ' ಓದುಗ, ನೋಡುಗ, ಕೇಳುಗ' ಅಥವಾ ರಸಿಕರದೇ ಅಂತಿಮ ನಿರ್ಣಯ ಎಂಬ ಗಿರೀಶ್ ಕಾರ್ನಾಡ್ ರ ನಿಲುವೇ ನನ್ನದೂ ಸಹ.
*


ಡಾ. ಅಶೋಕ್ ಕುಮಾರ್

Wednesday, April 12, 2017

ಎದೆಯೊಳಗಿಳಿವ ಪಿಸುಮಾತುಗಳು

ಈಗಾಗಲೇ ಕಣ್ಣೆವೆಯಲ್ಲಿನ ಚಿತ್ರಗಳು ಎಂಬ ಲೇಖನಗಳ ಗುಚ್ಛವನ್ನು ಹೊರತಂದು ಸಾಹಿತ್ಯ ವಲಯಕ್ಕೆ ಪರಿಚಿತರಾಗಿರುವ ಕೊಡಗು ಜಿಲ್ಲೆಯ ಕುಶಾಲನಗರದ ಸುನೀತಾ ಲೋಕೇಶ್ , ತಮ್ಮ ಲೋಕದ ಗ್ರಹಿಕೆಗಳನ್ನು ‘ಕಾವ್ಯ'ದ ಬಾಯಿ ತೊಡಿಸಿ ಪಿಸುನುಡಿಯುತ್ತಿದ್ದಾರೆ .


ಮೌನ ಸಂವಾದ ನಮಗೇಕೆ?
ನಮಗಾಗಿ ಪಿಸುಮಾತುಗಳಿಲ್ಲವೇ?

(ಮಂದಸ್ಮಿತಳಾಗಿ ಬಾ) ಎಂದು ಗೆಳತಿಯನ್ನು ಕರೆಯುವ ಹಾಗೆ ತಮ್ಮೊಳಗೆ ಹರಿಯುತ್ತಿರುವ ಪಿಸುಮಾತುಗಳನ್ನು ನಮಗೂ ಕೇಳಿಸುತ್ತಿದ್ದಾರೆ . ಅದು ಹಿಮನದಿಯ ಪಿಸುಮಾತು ಗಳಂತೆ ಕೇಳಿಸುತ್ತಿವೆ. ಆ ಹಿಮನದಿಗೆ ಒಮ್ಮೊಮ್ಮೆ ಘನೀಭವಿಸಿದ ಹಿಮದ ಕತ್ತಿಯಂಚು ಪ್ರಾಪ್ತವಾದರೆ, ಮತ್ತೊಮ್ಮೆ ಸ್ವಲ್ಪ _ ಸ್ವಲ್ಪವೇ ಕರಗಿ ತೊಟ್ಟಿಕ್ಕುವ , ತಣ್ಣಗೆ ಹರಿಯುವ ಸಂಭ್ರಮ. ಅದು ಅವರಿಂದ ಹಿತಮಿತದ ಇಂಪಾದ ,ಜೀವಪರ ಆಸ್ಥೆಯುಳ್ಳ ನುಡಿಗಳನ್ನಾಡಿಸುತ್ತದೆ.

ಮಬ್ಬು ಮುಸುಕುವುದು ನಿಜ
ಮೊಣಕೈಯ ತಿವಿದುಬಿಡು


ಇಳಿ ಸಮಯದ ಇರುಳಿಗೆ
ಹೆದರಿಸುವ ಎಡರುಗಲ್ಲುಗಳಿಲ್ಲ
ಕೆಕ್ಕರಿಸುವ ನೋಟ ಇಲ್ಲವೇ ಇಲ್ಲ

(ಮಂದಸ್ಮಿತಳಾಗಿ ಬಾ)

ಎರಡು ದಶಕಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ, ಪ್ರಾಮಾಣಿಕ ಸೇವೆಗೆ ಹೆಸರಾಗಿರುವ ಸುನೀತಾ ಲೋಕೇಶ್ ಅವರು, ಅಷ್ಟೇ ಪ್ರಾಮಾಣಿಕತೆಯಿಂದ ಕವಿತೆಗಳೊಂದಿಗೂ ಬಾಳುತ್ತಿರುವವರು. ಇಷ್ಟಾಗಿಯೂ ಕವಿತೆಗಳಿಂದ ಏನೇನನ್ನೋ ಸಾಧಿಸಬೇಕೆಂಬ, ಖ್ಯಾತಿ ಪಡೆಯಬೇಕೆಂಬ ಹಂಬಲ ಅವರಿಗೆ ಇದ್ದಂತಿಲ್ಲ . ಅದೊಂದು ಬಿಡುಗಡೆ ಅಷ್ಟೆ. ಕವಿತೆಯನ್ನು ಹೆರುವಾಗಲೆಲ್ಲ ಅವರು ಬಾಲ್ಯಕ್ಕೆ ಹಿಂತಿರುಗುತ್ತಾರೆ. ಆ ಮಗುತನ ಅವರನ್ನು ಬರೆಸುತ್ತದೆ. ಇರುವ ಮತ್ತು ಆಗಿಹೋಗಿರುವ ಕಾಲಗಳ ಜಿಜ್ಞಾಸೆ ಅವರ ಬಹುತೇಕ ಕವಿತೆಗಳಲ್ಲಿ ಕಾಣಸಿಗುತ್ತವೆ:

ಈಗ
ನಾಲ್ಕು ಬಾಹುಗಳ ಗಾಜ
ಪಂಜರದೊಳಗಿನ ಕಾಲವಾದರೂ
ಈ ಬಂಧನದಲೊಂದು ಚಂದವಿದೆ

(ಬಂಧಿ).


ಸುನೀತಾ ಲೋಕೇಶ್ ಅವರ ಕಾವ್ಯದ ಕೇಂದ್ರವನ್ನು ಗುರುತಿಸಬೇಕಾದದ್ದು ಇಕೊ - ಫೆಮಿನಿಸಂ ನೆಲೆಗಳಿಂದ. ಹೆಣ್ತನ ಮತ್ತು ಅದರ ಪಡಿಯಚ್ಚಿನಂತಿರುವ ನಿಸರ್ಗವನ್ನು ಕವಿತೆಗಳಲ್ಲಿ ತುಂಬಿಡುವುದು ಎಲ್ಲ ಕಾಲಕ್ಕೂ ಒಂದು ಸಾಮಾಜಿಕ , ಸಾಂಸ್ಕೃತಿಕ ಹೊಣೆಗಾರಿಕೆಯೇ ಆಗಿಬಿಡುತ್ತದೆ. ಓರ್ವ ಮಹಿಳೆ ತನ್ನ ಸಂಕಟಗಳನ್ನು , ಸಂಭ್ರಮಗಳನ್ನು ಅಭಿವ್ಯಕ್ತಿಸುವಾಗ ಅದಕ್ಕೆ ಲೋಕಾಂತದ ಆಯಾಮಗಳು ಸಹಜವಾಗಿಯೇ ಪ್ರಾಪ್ತವಾಗುತ್ತವೆ. ಈ ಸಾಲುಗಳು ಅದನ್ನು ಸಾಕ್ಷೀಕರಿಸುತ್ತವೆ:

ಪ್ರಕೃತಿಯೊಳಗೆ ಲೀನವಾದ ಮನ
ಪ್ರಫುಲ್ಲತೆಯಲಿ ತೇಲಲಿ

(ಆ ಮುಂಜಾನೆ)

ಮನದೊಳಗೆ ನದಿಯೊಂದು ಹರಿಯುತಾ ಕೇಳುತಿದೆ
ಬೊಗಸೆ ನೀರಿನೊಡನೆ ಚೆಲ್ಲಾಟವೇಕೆ?

(ಸಂಜೆಯೊಡನೆ ಪ್ರೇಮವೇಕೆ?)

ಬದುಕನಾವರಿಸಿದ ಗಿಡಮರಗಳೆಲ್ಲವೂ
ಬಾಡುತ್ತಿವೆ ಕಣ್ಣೀರಿನಲ್ಲಿ ನೆನೆಸಿದರೂ

(ಪರಾಧೀನ ಕಾಲ)

ಬಹುತೇಕ ಕವಿತೆಗಳಲ್ಲಿ ವಿಷಾದದ ಎಳೆಗಳು ಮಿಳಿತಗೊಂಡಿದ್ದರೂ , ನಮ್ರವಾದ ಪ್ರಾರ್ಥನೆ ಮತ್ತು ಮಹತ್ತಾದ ಆಶಯವೊಂದು ಮೈಪಡೆದು ಅದು ಕವಿತೆಗಳನ್ನು ಮಾನವೀಯಗೊಳಿಸುತ್ತದೆ:

ಉರಿದು ಹೊತ್ತೊಯ್ಯಿರಿ
ಮನದ ಮಲಿನಗಳನೂ

(ಪುಟ್ಟ ಮಣ್ಣ ಹಣತೆಗಳೇ)

ನನ್ನ ಅಳುವಿಗೆ ತಡೆಗೋಡೆಯಾಗಿ
ಕಣ್ಣ ವಹಿಯೊಳಗಿರಲಿ
ಭದ್ರವಾಗಿ

(ಆ ಹನಿ)

ಚುಚ್ಚು ನುಡಿ ದಾಟಿಗೆ
ಕಾಳ ನರ್ತನ ಮಾಡದಿರಲಿ ನಾಲಗೆ ...
ದ್ವೇಷಾಗ್ನಿಯನ್ನು ಮೌನದಲಿ ನಂದಿಸು

(ಮೌನಿಯಾಗು ಮನವೆ).

ಮೌಲ್ಯಗಳ ಪಲ್ಲಟ ಇಲ್ಲಿನ ಸುಮಾರು ಕವಿತೆಗಳ ಸರಕು. ಬಂಧಿ ಕವಿತೆಯು ಹೆಣ್ಣಿನ ವ್ಯಕ್ತಿ ಸ್ವಾತಂತ್ರ್ಯವೆಂಬ ಹಿಮದ ಜಾರುವಿಕೆಯು ಭೂತಕ್ಕಿಂತ ವರ್ತಮಾನದಲ್ಲಿಯೇ ಸುಂದರವಾಗಿದೆ ಎಂದು ವ್ಯಂಗ್ಯಾತ್ಮಕವಾಗಿ ಒಪ್ಪಿಕೊಳ್ಳುತ್ತದೆ:

ಕೆಂಪು ಹರಳಿನೋಲೆ
ಎರಡೆಳೆಯ ದೊಡ್ಡ ಮಾಂಗಲ್ಯ
ಝರಿ ಬಾರ್ಡರಿನ ರೇಷ್ಮೆ ಸೀರೆ
ಕುಂಕುಮ ಹಣೆಗೇರಿ
ಗಣಕ ಯಂತ್ರದ ಕೈಚಳಕದಿ
ಬಯಕೆಗಳೆಲ್ಲವೂ ಈಡೇರಿದೆ


ಹಿಮನದಿಯ ಪಿಸುಮಾತುಗಳಲ್ಲಿ ಗಾಢವಾಗಿ ತಟ್ಟುವುದು ಸಂಜೆಯೊಡನೆ ಪ್ರೇಮವೇಕೆ?, ಪುಟ್ಟ ಮಣ್ಣ ಹಣತೆಗಳೇ, ಪ್ರಣಯ ಮಳೆ, ಪರಾಧೀನ ಕಾಲ, ಆ ಹನಿ, ಮನಸಿನ ಹೊಸ್ತಿಲಲೆ, ನನ್ನೂರಿನ ಬಸ್ಸು, ಒಣಮರದೊಡತಿ ಮುಂತಾದವು. ಇವೆಲ್ಲಾ _ ಕವಯಿತ್ರಿಗೆ ಕವಿತೆಯ ಕುರಿತು ಇರುವ ಆಳವಾದ ಅರಿವನ್ನು ಪ್ರತಿನಿಧಿಸುತ್ತವೆ. ಮೃದುವಾದ ಮಾತು , ಹದವಾದ ಭಾಷೆ, ಭಿನ್ನವಾದ ಇಮೇಜುಗಳು ಅವರ ಕಾವ್ಯಪ್ರಜ್ಞೆಯನ್ನು ಸಾರುತ್ತವೆ. ನನ್ನೂರಿನ ಬಸ್ಸು ಕವಿತೆಯ ಈ ಸಾಲುಗಳನ್ನೇ ಗಮನಿಸಿ :

ಬಸ್ಸು ದೂರ ಸಾಗಿದೆ
ಅದರ ಬಣ್ಣ ಮಾಸುತ್ತಿದೆಯೇ ?
ಮತ್ತೀಗ ಕಾಣುತ್ತಿರುವುದು ಮರವೊಂದೆ
ಕಹಿಸತ್ಯ ಬಚ್ಚಿಟ್ಟ ಮರ
ನಿದ್ದೆಗೆ ಜಾರಿದೆ




ಸುನೀತಾ ಇಲ್ಲಿ ಕಟ್ಟಿಕೊಡುವ ಹೆಣ್ಣಿನ ಜಗತ್ತು ಯಾತನಾಮಯವಾದದ್ದು. ಕೌಟುಂಬಿಕ ಹಿಂಸೆ , ಅತ್ಯಾಚಾರದ ಕರಾಳತೆಯನ್ನು ಕವಿತೆಗಳಲ್ಲಿ ತುಂಬುತ್ತಲೇ
ಗಾಳಿ ನೀರು ಇಹದಷ್ಟು ಅನಿವಾರ್ಯ / ಈ ನನ್ನ ಸಖಿಯರು ಎನ್ನುತ್ತಾರೆ . ಆದರೆ, ಜ್ಞಾನ ಪರಂಪರೆಯ ಮಹಿಳಾ ಕಾವ್ಯದ ನೆಲೆಗಳಿಗಿಂತ ಭಿನ್ನವಾಗಿ ತಮ್ಮ ಕಾವ್ಯದ ಅಸ್ಮಿತೆಯನ್ನು ಕಂಡುಕೊಳ್ಳುವ ಮಾದರಿಗಳು ಇಲ್ಲಿ ಕಾಣಿಸುವುದಿಲ್ಲ. ಸಮಾಜಮುಖಿ ನಿಲುವುಗಳು ಕಾವ್ಯದಲ್ಲಿ ಇಣುಕುವಾಗಲೆಲ್ಲ ಅವುಗಳಿಗೆ ಬಂಡಾಯದ ಲೇಪನವಿದ್ದರೂ, ತೆಳುಪದರದ ಕಾವ್ಯಾನುಭವವನ್ನು ಪಡೆಯುವ ಅಪಾಯವನ್ನೂ ಎದುರಿಸುತ್ತವೆ(ನನ್ನ ಸಖಿಯರು, ಅಶ್ರುತರ್ಪಣ , ಅಕ್ಷಯ ಪಾತ್ರೆ, ಪೌರುಷ, ಚಿಂತೆಯ ಗೆರೆಗಳ ಮೇಲೆ)


ಭಿನ್ನ ಅಭಿರುಚಿಯ ಕೊಡಗಿನಲ್ಲಿ ಸಾಹಿತ್ಯ ಕೃತಿಯೊಂದು ಬಿಡುಗಡೆಗೆ ಸಿದ್ಧವಾಗಿದೆಯೆಂದರೆ ಅದೊಂದು ವಿಶೇಷವಾದ ಸಂಗತಿ; ಸಂಭ್ರಮ. ಅದರಲ್ಲೂ ಮಹಿಳಾ ಕಾವ್ಯದ ಧಾರೆ ಇಲ್ಲಿ ಭಿನ್ನವಾಗಿ ಹರಿಯುತ್ತಿರುವುದು ಸಂತೋಷದ ವಿಚಾರ. ಸುನೀತಾ ಅವರ ಈ ಕೃತಿ ಹೊರಬರುತ್ತಿರುವುದು ನಮಗೆಲ್ಲಾ ಸಂಭ್ರಮಿಸುವ ಸಂಗತಿಯೇ ಸರಿ.

ತಮ್ಮ ಮಿತಿಗಳನ್ನು ಮೀರುವ, ನಿರ್ವಹಿಸುವ ಸಾಮರ್ಥ್ಯ ಸುನೀತಾ ಲೋಕೇಶ್ ಅವರ ಕವಿತೆಗಳಿಗೆ ಇದ್ದೇ ಇದೆ . ಅದು _ ಮಾತಿನ ಮಿತವ್ಯಯದಿಂದ, ಪ್ರತೀಕಗಳಿಂದ ಗಟ್ಟಿಗೊಂಡು, ಆಶಯದಲ್ಲಿ ಸಾಧಿಸಿದ ಪ್ರಬುದ್ಧತೆಯನ್ನು ಅಭಿವ್ಯಕ್ತಿಯಲ್ಲೂ ಸಾಧಿಸಿದಾಗ ಹೊಸನೆಲೆಗಳನ್ನು ಮುಟ್ಟುತ್ತದೆ. ಅವರ ಕಾವ್ಯ ಜೀವನವು ಸದಾ ಬೆಳಗುತ್ತಿರಲೆಂದು ಅತ್ಯಂತ ಕಿರಿಯವನಾಗಿ ಪ್ರೀತಿಯಿಂದ ಆಶಿಸುತ್ತೇನೆ.
*

ಕಾಜೂರು ಸತೀಶ್
sathishkajooru@gmail.com

Thursday, March 16, 2017

ಮನಸು ಅಭಿಸಾರಿಕೆ ಮತ್ತು ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ

ನೂರಾ ಐದು ವರ್ಷಗಳ ಹಿಂದೆ ಜನಿಸಿದ ಅಪ್ರತಿಮ ಕತೆಗಾರ್ತಿ ಕೊಡಗಿನ ಗೌರಮ್ಮ. ತಮ್ಮ ಇಪ್ಪತ್ತೇಳನೆ ವರ್ಷಕ್ಕೇ ದಾರುಣವಾಗಿ ತೀರಿಕೊಂಡ ಗೌರಮ್ಮ ಅಷ್ಟರಲ್ಲಾಗಲೇ ತಮ್ಮ ಕಥಾ ಪ್ರತಿಭೆಯನ್ನು ನಾಡಿನ ಉದ್ದಗಲಕ್ಕೂ ಬೆಳಗಿದವರು. ಚಿರಸ್ಥಾಯಿಯಾಗುಳಿವ ಅವರ ಕಂಬನಿ(1939), ಮತ್ತು ಚಿಗುರು(1942) ಅದಕ್ಕೆ ಸಾಕ್ಷಿ.

*

ಈ ಸಾಲಿನ _ಕೊಡಗಿನ ಗೌರಮ್ಮ ದತ್ತಿ ನಿಧಿ_ ಪ್ರಶಸ್ತಿಗೆ ಹನ್ನೊಂದು ಕೃತಿಗಳು ಸ್ಪರ್ಧಾಕಣದಲ್ಲಿದ್ದವು. ಗಂಭೀರ ಬರವಣಿಗೆಗಳಿಂದ ಸದಾ ದೂರ ಉಳಿದ ಕೊಡಗು ಈ ಬಾರಿ ಇಷ್ಟು ಪ್ರಮಾಣದಲ್ಲಿ ಕೃತಿಗಳನ್ನು ಸ್ಪರ್ಧೆಗಿಳಿಸಿದೆಯಲ್ಲಾ ಎಂಬ ಸಂತೋಷ ಉಕ್ಕಿಸಿತು. ಅದು ಒಳ್ಳೆಯ ಬೆಳವಣಿಗೆಯೇ ಸರಿ.
*

ಯಾವತ್ತೂ ಒಂದು ಗಟ್ಟಿ ಕೃತಿ ನೂರ್ಕಾಲ ಬಾಳುತ್ತದೆ. ಯಾವ ಪೂರ್ವಗ್ರಹದ, ಭಟ್ಟಂಗಿಗಳ ಬೆಂಬಲವಿಲ್ಲದಿದ್ದರೂ ಅದು ಬೆಳೆಯುತ್ತದೆ. ಬರೆಯುವವರೆಲ್ಲರೂ ಪುಸ್ತಕ ಪ್ರಕಟಿಸುತ್ತಿರುವ ಇಂದಿನ ಕಾಲದಲ್ಲಿ ಉಳಿಯುವುದು ಮತ್ತು ಉಳಿಯಬೇಕಾದದ್ದು ಉತ್ತಮ ಕೃತಿಗಳಷ್ಟೆ.
*

ಮಹಿಳಾ ಸಾಹಿತ್ಯದ ಸಶಕ್ತ ಸಂವೇದನೆಗಳು ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿಗಿಂತಲೂ ಮೊದಲೇ ಗುರುತಿಸಬಹುದು. ಜೀವನಾನುಭವದ ಜನಪದ ಸಾಹಿತ್ಯ ಈ ನಿಟ್ಟಿನಲ್ಲಿ ಗಮನಾರ್ಹವಾದುದು. ಸ್ವಾತಂತ್ರ್ಯಾ ಪೂರ್ವದಲ್ಲೇ ಕನ್ನಡದ ಆರ್. ಕಲ್ಯಾಣಮ್ಮ, ನಂಜನಗೂಡು ತಿರುಮಲಾಂಬ, ಕೊಡಗಿನ ಗೌರಮ್ಮ ಮುಂತಾದವರು ಸಾಧಿಸಿದ ಸಿದ್ಧಿ ನಿಜಕ್ಕೂ ಅಭೂತಪೂರ್ವ.

*

ಸ್ಪರ್ಧೆಗೆ ಬಂದಿದ್ದ ಕೃತಿಗಳ ಒಳಪ್ರವೇಶ ಮಾಡಿದಂತೆಲ್ಲಾ ನಿರಾಸೆಯೇ ಆವರಿಸತೊಡಗಿತು. ಬರಹದ ಬಾಲಿಶತನ ಇನ್ನೂ ಯಾಕೆ ಈ ನೆಲದಲ್ಲಿ ಮನೆಮಾಡಿದೆ ಎಂಬ ಕೊರಗು ಕಾಡಿತು. ಆದರೆ ಅಷ್ಟೂ ಕೊರಗುಗಳನ್ನು ಸುಳ್ಳುಮಾಡುವಂತೆ ಶಾಂತಿ ಕೆ ಅಪ್ಪಣ್ಣ ಅವರ ಮನಸು ಅಭಿಸಾರಿಕೆ ಓದಿಸಿಕೊಂಡಿತು. ಕೊಡಗಿನ ಗೌರಮ್ಮ ಕಟ್ಟಿಕೊಟ್ಟ ವಿಶಿಷ್ಟ ಕಥಾಲೋಕದ ಹರಿವು ಈಗ ಈ ಕಾಲಘಟ್ಟದಲ್ಲಿ ಶಾಂತಿ ಅವರಿಂದ ಮುಂದುವರಿಯುತ್ತಿದೆ ಎನ್ನಲು ಹರ್ಷವಾಗುತ್ತಿದೆ.


ಶಾಂತಿ ಅವರು ಮೊದಲ ಸಂಕಲನದಲ್ಲೇ ತೋರಿದ ಸಾಧನೆ ನಿಜಕ್ಕೂ ಈ ನೆಲಕ್ಕೆ ಹೆಮ್ಮೆ ತರುವ ಸಂಗತಿ. ಏಕೆಂದರೆ, ಈ ಹೊತ್ತಿನಲ್ಲಿ ನಮ್ಮ ಕಥಾ ಸಂಸ್ಕೃತಿಯ/ ಪರಂಪರೆಯ ಎಳೆಯನ್ನಿರಿಸಿಕೊಂಡೇ ಹೊಸ ಹಾದಿಗೆ ಜಿಗಿಯುವುದು ಮಹತ್ತಾದ ಸವಾಲು. ಅದು ಅವರಿಗೆ ಅಷ್ಟು ಸಹಜವಾಗಿ, ಸಲೀಸಾಗಿ ಸಿದ್ಧಿಸಿದೆ. ಹೀಗಾಗಿಯೇ ಶ್ರೀಮತಿ ಶಾಂತಿ ಕೆ ಅಪ್ಪಣ್ಣ ಅವರ ಮನಸು ಅಭಿಸಾರಿಕೆ ಕಥಾಸಂಕಲನವನ್ನು 2016-17ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಮಾಡಿದ್ದು. ಈ ಕಥೆಗಾರ್ತಿ ಕ್ರಮಿಸುವ ನಾಳಿನ ಹಾದಿಗಳು ನಿಜಕ್ಕೂ ಕುತೂಹಲಕಾರಿ.


ಸ್ಪರ್ಧೆಗೆ ಬಂದಿದ್ದ- ಒಂದು ಲಲಿತ ಪ್ರಬಂಧ, ಒಂದು ನಾಟಕ, ನಾಲ್ಕು ಸಣ್ಣ ಕತೆ, ಎರಡು ಕಾದಂಬರಿ, ಒಂದು ಸಂಶೋಧನಾ ಕೃತಿ, ಒಂದು ಹಾಸ್ಯ ಬರಹ, ಒಂದು ವೈಚಾರಿಕ ಲೇಖನ- ಪುಸ್ತಕಗಳ ಪೈಕಿ ಸಂಗೀತಾ ರವಿರಾಜ್ ಅವರ ಕಪ್ಪು ಹುಡುಗಿ(ಪ್ರಬಂಧ), ಮುಲ್ಲೇಂಗಡ ರೇವತಿ ಪೂವಯ್ಯ ಅವರ ಕೊಡವ ಜನಪದ ನೃತ್ಯಗಳು ಒಂದು ಅಧ್ಯಯನ , ಹಾನಗಲ್ಲು ಜಲಾ ಕಾಳಪ್ಪ ಅವರ ಕ್ಷಮಯಾಧರಿತ್ರಿ(ಕಾದಂಬರಿ) ಗಮನ ಸೆಳೆದವು; ಭರವಸೆ ಮೂಡಿಸಿದವು. ಇಲ್ಲಿನ ಸಾಹಿತ್ಯದ ಜೀವಂತಿಕೆಗೆ ಸಾಕ್ಷಿ ಅವು.
*

**ಶಾಂತಿ ಅಪ್ಪಣ್ಣ ಅವರ ಕತೆಗಳು ಮತ್ತು ಮನುಷ್ಯ ಸ್ವಭಾವದ ನಿಗೂಢ ತಂತುಗಳ ಅನಾವರಣ**

ಒಂದು ಐಡಿಯಾಲಜಿಯನ್ನು ಹೊರಗೆಡುವುದಕ್ಕೆ ಕತೆಯನ್ನು ಮಾಧ್ಯಮವಾಗಿಸುವುದು ಸೃಜನಶೀಲ ನಿರ್ಬಂಧ. ಕತೆ ಹೇಳುತ್ತಾ ಕತೆಗಾರ ಬದುಕಿನ ಹೊಸ ಸಾಧ್ಯತೆಗಳನ್ನು ಮುಟ್ಟುತ್ತಾನೆ. ಪಾತ್ರಗಳಿಗೆ ಸೃಷ್ಟಿಶೀಲ ಗುಣಗಳು ಪ್ರಾಪ್ತಿಯಾಗುತ್ತಾ ಕತೆಗಾರ ಬೆಳೆಯುತ್ತಾನೆ. ಯಾವಾಗ ಕತೆಹೇಳುವ ಧಾವಂತ ಇರುವುದಿಲ್ಲವೋ ಮತ್ತು ಅದೊಂದು ತಾತ್ವಿಕ ಹುಡುಕಾಟವಾಗುತ್ತದೋ, ಆಗ ಕತೆ ಗೆಲ್ಲುತ್ತದೆ. ಶಾಂತಿ ಅಪ್ಪಣ್ಣ ಅವರ ಕತೆಗಳು ಗೆಲ್ಲುವುದೂ ಈ ಕಾರಣದಿಂದಾಗಿಯೇ.

ಹಾಗೆ ನೋಡಿದರೆ ಕೊಡಗಿನ ಗೌರಮ್ಮ ಅವರಿಗೂ ಶಾಂತಿ ಅವರಿಗೂ ತಾತ್ವಿಕ ಸಾಮ್ಯಗಳಿವೆ. ಈ ಇಬ್ಬರೂ ಬದಲಾಗುತ್ತಿರುವ ಸಮಾಜದ ಸಂಬಂಧಗಳ ಸ್ಥಿತ್ಯಂತರಗಳ ಕುರಿತು ಹೇಳುತ್ತಾರೆ. ಇಂತಹ ಪಲ್ಲಟಗಳನ್ನು ತಲ್ಲಣಗೊಂಡು ಹೇಳುವುದಿಲ್ಲ. ತೆರೆದ ಕಣ್ಣುಗಳಿಂದ ನೋಡುತ್ತಾರೆ. ತೀರ್ಪುಗಾರಿಕೆ ಕೊಡುವುದಿಲ್ಲ; ವಕಾಲತ್ತು ವಹಿಸುವುದಿಲ್ಲ. ಇಬ್ಬರೂ ಬಳಸುವುದು ಆಡು ಭಾಷೆ ಮತ್ತು ಗಂಭೀರ ಭಾಷೆಗಳ ನಡುವಿನ ಭಾಷೆ. (ಶಾಂತಿಯವರು ಪರಶುವಿನ ದೇವರು, ಪರಿಹಾರ ಕತೆಗಳಲ್ಲಿ ಹಾಸನ-ಮೈಸೂರು ಜಿಲ್ಲೆಯ ಹಳ್ಳಿಯ ಭಾಷೆಯನ್ನು ಬಳಸುವಲ್ಲಿಯೂ ಯಶ ಕಾಣುತ್ತಾರೆ).ಇಬ್ಬರದೂ 'ಸ್ವ'ವನ್ನು ವರ್ಜಿಸುವ ಕಥಾಭಿವ್ಯಕ್ತಿ. ಅಥವಾ ತಮ್ಮೊಳಗು ಮತ್ತು ಬದುಕಿನ ಬಹುತ್ವಗಳನ್ನು ಬೇರೆಯಾಗಿಸದೆ ನೋಡುವ ಕ್ರಮ.

ಶಾಂತಿ ಅಪ್ಪಣ್ಣ ಅವರ ದಾರಿ ಕತೆಯಲ್ಲಿ ಬರುವ ಮದುವೆಯಾದ ತಿಂಗಳಲ್ಲೇ ಗಂಡ ತೀರಿಕೊಂಡು ಮೈದುನನಿಂದ ಲೈಂಗಿಕ ಹಿಂಸೆಗೆ ಒಳಗಾಗುವ ಚಂದ್ರಾಮಳನ್ನು ಸಮಾಜ ಶೋಷಿಸತೊಡಗಿದಾಗ ಕಾಸೀಂ ಸಾಬಿಯನ್ನು ಮದುವೆಯಾಗಿ ಚಾಂದ್ಬೀ ಆದದ್ದು, ಗೌರಮ್ಮ ಅವರ ಅಪರಾಧಿಯರು ಕತೆಯ ಪಾರ್ವತಿ ತನ್ನ ಜಾತಿಯಿಂದ ಬಹಿಷ್ಕರಿಸಲ್ಪಟ್ಟಾಗ ರಜಿಯಾ ಆಗಿ ಉನ್ನೀಸನನ್ನು ಮದುವೆಯಾಗುವುದು ಇದಕ್ಕೊಂದು ಉದಾಹರಣೆ.

ಶಾಂತಿಯವರ ಕತೆಗಳ ಅಭಿವ್ಯಕ್ತಿಯ ದಾರಿ ಕೊಂಚ ಭಿನ್ನ. ಕೆಲವು ಕತೆಗಳು ಅವಾಸ್ತವದ ಬೆನ್ನುಬಿದ್ದು ನಿರೂಪಣೆಗೊಂಡರೆ, ಗೌರಮ್ಮ ಅವರದ್ದು ಪಕ್ಕಾ ಅನುಭವನಿಷ್ಠ, ನೇರ- ನಿರಾಡಂಬರ ಶೈಲಿಯದ್ದು. ಆದರೂ,ಗೌರಮ್ಮ ಅವರು ತಮ್ಮ ನಿಜಜೀವನದ ಪರಿಸರದ ಸೂಚನೆಯನ್ನು ನೀಡದೆ ರಾಷ್ಟ್ರೀಯವಾದದ ನೆಲೆಯಲ್ಲಿ ಕತೆ ಕಟ್ಟುತ್ತಾರೆ.

ಮನಸು ಅಭಿಸಾರಿಕೆಯ ಒಟ್ಟೂ ಸ್ವರೂಪವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ- ಅವು ಮನೋವಿಶ್ಲೇಷಣಾತ್ಮಕ ಕತೆಗಳು. ಸಂಕೇತನಿಷ್ಠ, ಫ್ಲ್ಯಾಷ್ ಬ್ಯಾಕ್ ತಂತ್ರ, ಉಪಕಥಾ ಮಾರ್ಗಗಳಲ್ಲಿ ಸಾಗಿ ಓದುಗರನ್ನು ತಡೆದು ನಿಲ್ಲಿಸಿ ಓದಿಸುತ್ತವೆ. ಪಾತ್ರಗಳೇ ನಿರೂಪಕರನ್ನೂ, ಓದುಗರನ್ನೂ ಏಕಕಾಲದಲ್ಲಿ ಬೆಳೆಸುವ ಪರಿ ಮನಸು ಅಭಿಸಾರಿಕೆಯ ಹೆಚ್ಚುಗಾರಿಕೆ.


ಶಾಂತಿ ಅಪ್ಪಣ್ಣ ಅವರ ಕತೆಗಳಲ್ಲಿ ಕಾಲ ಪ್ರಧಾನ ಪಾತ್ರ ವಹಿಸುತ್ತದೆ. ಕ್ಷಣಕ್ಷಣಕ್ಕೂ ಮಿಂಚಿ ಮರೆಯಾಗುವ 'ಅತ್ಯಾಧುನಿಕ'ವಾದ ಈ ಕಾಲದ ವಿಶ್ಲೇಷಣೆಯಿದೆ. ಎಲ್ಲ ಪಾತ್ರಗಳಿಗೂ ಆ ಕ್ಷಣದ ಗಾಢತೆಯಷ್ಟೆ. ಬಹುತೇಕ ಕತೆಗಳಲ್ಲಿ ಕಾಣಬರುವ ಪ್ರೇಮದ ವ್ಯಾಖ್ಯಾನವೂ ಆಧುನಿಕ ಪರಿಭಾಷೆಯಲ್ಲಿ ಕ್ಷಣಿಕತೆಯಿಂದ ಕೂಡಿದ್ದು. ಮುಖವಾಡ, ಸ್ವಾರ್ಥ, ಕಾಮ ಅವುಗಳನ್ನು ಆಕ್ರಮಿಸುತ್ತವೆ. ಉದಾಹರಣೆಗೆ:
_ಹಳೆಯ ಇಮೇಜುಗಳು ತಂತಾನೇ delete ಆಗುತ್ತಾ refresh ಆಗ್ತಿರಬೇಕೇನೊ ಅನ್ನಿಸಿ ಮಜ_(ನೆರಳು)

_ಕಾಲದ ನದಿಯ ಹರಿವು ನೋಡುತ್ತ ಅವನು_(ಬಿಂಬ)

_We just have to love the moment and move on_(ಪಾಸಿಂಗ್ ಕ್ಲೌಡ್ಸ್)

_ನಾವು ಸತ್ಯವನ್ನು ಶೋಧಿಸಬಾರದು ಆ ಕ್ಷಣವನ್ನಷ್ಟೆ ನಂಬಬೇಕು_(ಪಯಣ)

ಬಾಹುಗಳು ಕತೆಯಲ್ಲಿ ನಿರೂಪಕಿ ಹಾಸಿಗೆಯಿಂದ ಏಳುವಾಗ ಎದುರಾಗುವ ವಿಚಿತ್ರ ಜೀವಿ ಪ್ರಭುತ್ವದ ಶೋಷಣೆ, ಸರಿ-ತಪ್ಪುಗಳನ್ನು ಸಮಾನಾರ್ಥಕಗಳೆಂದುಕೊಳ್ಳುವ ನವೀನ ಪರಿಭಾಷೆಯನ್ನು ಹೇಳುತ್ತದೆ. ಪ್ರಸಿದ್ಧ ಕಾದಂಬರಿಕಾರ ಕಾಫ್ಕಾನ ಮೆಟಮಾರ್ಫಸಿಸ್ನಲ್ಲಿ ಕಥಾ ನಾಯಕ ಗ್ರಿಗರ್ ಸಂಸ ತಾನೇ ಹುಳುವಾಗಿ ರೂಪಾಂತರ ಹೊಂದುತ್ತಾನೆ. ಅದೇ ಬಗೆಯ ಮ್ಯಾನಿಫೆಸ್ಟೊ ಉಳ್ಳ ಅಸ್ತಿತ್ವವಾದಿ ಆಲೋಚನೆಗಳೂ ಶಾಂತಿಯವರ ಕತೆಗಳಲ್ಲಿ ಗುರುತಿಸಬಹುದು(ಆದರೂ ಆ ವಿಚಿತ್ರ ಜೀವಿಯ ಉಪದೇಶಾತ್ಮಕ ನುಡಿಗಳು ಕ್ಲೀಷೆಯಂತೆ ಕಾಣುತ್ತವೆ). ಪಾಸಿಂಗ್ ಕ್ಲೌಡ್ಸ್, ಬಿಂಬ, ಪ್ರಶ್ನೆ ಕತೆಗಳಲ್ಲೂ ಅಸ್ತಿತ್ವವಾದದ ಎಳೆಗಳನ್ನು ಗುರುತಿಸಬಹುದು. ಪ್ರಶ್ನೆ ಕತೆಯಲ್ಲಿ ಅತ್ತೆಯು ಗುಲಗಂಜಿ ಬೆರೆಸಿ ತನ್ನ ಗಂಡನನ್ನು ಕೊಲ್ಲುತ್ತಿರುವ ಸಂಗತಿಯನ್ನು ಹೀಗೆ ಹೇಳುತ್ತಾರೆ: ಅವನಿಗೆ ಊಟವಿಟ್ಟು ಆರಾಮಾಗಿ ಕೂತು ಮಾತಾಡಿದ್ದಳು. ಈಗ ಹೇಳೇ ಹೇಳಿದ್ದಳು. ತಾನು ಕೊಂದವರ ಬಗ್ಗೆ, ಮತ್ತೀಗ ಕೊಲ್ಲುತ್ತಿರುವವರ ಬಗ್ಗೆ. ಮಾವ ಅತ್ತ, ಅಕ್ಷರಶಃ ಅತ್ತ.

ಶೋಷಣೆಗೆ ಈಡಾಗುವ ಅನೇಕ ಮುಗ್ಧ ಜೀವಗಳು ಶಾಂತಿಯವರ ಕತೆಗಳಲ್ಲಿ ನಿಚ್ಚಳವಾಗಿ ಕಾಣಸಿಗುತ್ತವೆ. ಪರಶುವಿನ ದೇವರು ಕತೆಯಲ್ಲಿ ಪರಶುವಿನ ಹೆಂಡತಿ ಸುಜಾತಳಿಗೆ ಶ್ರೀಮಂತೆಯಾಗುವ ಕನಸು ಬಿದ್ದು ತನ್ನೂರಿನ ಅಷ್ಟೂ ಶ್ರೀಮಂತರನ್ನೂ ದುಡಿಸಿ ದಣಿಸುತ್ತಿದ್ದಳು. ಮೈಮೇಲೆ ದೇವರು ಬರುವ ಪರಶುವಿನ ಪಾತ್ರ ಕ್ರಾಂತಿಕಾರಕವಾದದ್ದು. ಒಂದೆಡೆ ತಮ್ಮ ಜಾತಿಯನ್ನೇ ಬಚ್ಚಿಟ್ಟು ಸುಖವಾಗಿ ಬದುಕಿಸಲು ಹವಣಿಸುವ ಸುಜಾತ, ಮತ್ತೊಂದೆಡೆ ತನ್ನ ಜಾತಿಯನ್ನು ದೇವರ ಮೂಲಕ ಬಟಾಬಯಲು ಮಾಡುವ ಪರಶು. ಒಡೆಯ ದೇವಯ್ಯನಿಗೆ ಹೇಳುವ ನಿನ್ನ ಹೆಂಡತಿ ಪರಶುವಿನೊಂದಿಗೆ ಮಲಗಿದ್ದಳು ಎಂಬ ಪರಶುವಿನ ದೇವರ ನುಡಿ ಮತ್ತು ಇಂತಹ ಕಾರಣಗಳಿಂದಾಗಿಯೇ ಕುಟುಂಬವನ್ನು ಕಟ್ಟಿಕೊಂಡು ಊರೂರು ಅಲೆಯಬೇಕಾದ ಸುಜಾತಾಳ ಅಸಹಾಯಕತೆ. ಪಾಸಿಂಗ್ ಕ್ಲೌಡ್ಸ್ ಕತೆ ಚಿತ್ರಿಸುವ ಬದುಕನ್ನೇ ಡಾಕ್ಯುಮೆಂಟರಿ ಮಾಡುವ, ಹೊಟ್ಟೆಯಲ್ಲಿರುವ ಇನ್ನೂ ಹುಟ್ಟದ ಮಗುವನ್ನು ಮಾರಲು ತೀರ್ಮಾನಿಸುವ ತಾಯಿ ಸೆಲ್ವಿ ಮನಕಲಕುವ ಸದ್ಯೋವರ್ತಮಾನದ ವಾಸ್ತವಗಳು. ನಗರೀಕರಣ ಏಕಕಾಲದಲ್ಲಿ ಸೃಷ್ಟಿಸುವ ಔದ್ಯೋಗೀಕರಣ ಮತ್ತು ಹಿಂಸೆ ಮುಳ್ಳುಗಳು ಕತೆಯಲ್ಲಿ ತೆರೆದುಕೊಳ್ಳುತ್ತವೆ(ಹಳ್ಳಿಯಿಂದ ಉದ್ಯೋಗ ಹುಡುಕಿ ಹೊರಟ ಟಿಪ್ಪು, ಅವನನ್ನು ಹುಡುಕಿ ಹೋಗುವ ಹೆಂಡತಿ ಸುಷ್ಮ, ಕಾಂಟ್ರಾಕ್ಟರುಗಳು ಅತ್ಯಾಚಾರವೆಸಗಿ ಅವಳನ್ನು ಕೊಲೆಮಾಡುವ, ಟಿಪ್ಪುವನ್ನೂ ಮುಗಿಸುವ ಕತೆ).

ದಾರಿ, ಸುಳಿ, ಪ್ರಶ್ನೆ, ಪಯಣ, ಪಾಸಿಂಗ್ ಕ್ಲೌಡ್ಸ್, ಪರಶುವಿನ ದೇವರು, ನೆರಳು, ಮನಸು ಅಭಿಸಾರಿಕೆ ಇವು ಈ ಸಂಕಲನದ ಮಹತ್ವದ ಕತೆಗಳು. ಇವು ಕನ್ನಡ ಸಾಹಿತ್ಯದಲ್ಲಿ ಸದಾ ಜೀವಂತವಾಗಿರಬಹುದಾದ ಕಸುವುಳ್ಳ ಕತೆಗಳು. ನೆರಳು, ನನ್ನ ಹಾಡು ನನ್ನದು, ಬಾಹುಗಳು ಈ ಕತೆಗಳ ವಸ್ತು, ಆಶಯ ಉತ್ತಮವಾಗಿದ್ದರೂ ಅನಗತ್ಯ ವಿವರಗಳು ಇಡಿಕಿರಿದು ಟಾಕೇಟಿವ್ ಎನಿಸುತ್ತದೆ.

ಶಾಂತಿಯವರ ದಿಟ್ಟವಾದ ಕಥಾ ನಿರೂಪಣೆ ಮಹಿಳಾ ಸಾಹಿತ್ಯವು ಹೊಸ ತಲೆಮಾರಿನಲ್ಲಿ ಪುಟಿದೇಳುತ್ತಿರುವ ಸೂಚನೆಯನ್ನು ಕೊಡುತ್ತದೆ. ಮಹಿಳೆಯನ್ನು ಹತ್ತಿಕ್ಕಲಾದ ಸಿದ್ಧಮಾದರಿಗಳಿಂದ ಹೊರಬರುವ ಅವರ ಚಿಂತನೆಗಳು ಸಮಕಾಲೀನ ತುರ್ತುಗಳೂ ಹೌದು. ಅವರ ದಿಟ್ಟ ಅಭಿವ್ಯಕ್ತಿಗಳಿಗೆ ಸಾಕ್ಷಿ ಈ ಸಾಲುಗಳು:
_ಅವನ ತೊಡೆಯನ್ನು ನನ್ನ ಕಾಲು ತಲುಪಿದೆ. ಬೆಡ್ಶೀಟ್ನಿಂದ ಕಾಲುಗಳನ್ನ ಮುಚ್ಚಿಕೊಂಡಿದ್ದೇನಾದರೂ ಯಾವುದೋ ಒಂದು ಹಿತವಾದ ಶಾಖ? ಶಾಖದಂಥದ್ದೇ ಏನೋ ಒಂದು ಅವನ ತೊಡೆಗಳಿಂದ ಹಾದು ನನ್ನ ಹೆಬ್ಬೆರಳಿಗೆ ಇಳಿದು ಕಾಲುಂಗುರದ ಬೆರಳಿಗೆ ಹಾದು, ಅಂಗಾಲಿಡೀ ತುಂಬಿ, ಮೀನಖಂಡದ ಮೇಲೆ ಹತ್ತಿ, ತೊಡೆಯನ್ನೆಲ್ಲ ತುಂಬಿ, ಮುಂಬರಿದು ಮತ್ತೆಲ್ಲೋ ಜಮೆಯಾಗಿ, ಮತ್ತೂ ಹಾಗೆ ಮೇಲು ಮೇಲಕ್ಕೆ ತಲುಪಿ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ ಅನಿಸಿತು_(ಪಯಣ)

_ಕಮಲದ ಹೂವನ್ನು ಕಿತ್ತವರ ಕಾಲು ಕೆಸರಾಗಬಹುದು. ಹೂವಿಗೆ ಆ ಭಯವಿಲ್ಲ_ (ನನ್ನ ಹಾಡು ನನ್ನದು)

_ಮುಖದಲ್ಲಿನ್ನೂ ಒಂದು ಕಾಂತಿಯಿದೆ. ಹಾಗೇ ಚೂಡಿಯನ್ನೊಮ್ಮೆ ಸೊಂಟದ ಹಿಂದೆ ಕೈ ಹಾಕಿ ಬಿಗಿ ಮಾಡಿ ನೋಡಿದರೆ ಹೊಟ್ಟೆ ಒಂಚೂರು ಮುಂದೆ ಉಬ್ಬಿಕೊಂಡಿರುವುದು ಕಾಣುತ್ತದೆ..ಹಾಗಿಲ್ಲವಾದರೂ ಅನಾರ್ಕಲಿ ಚೂಡಿಯಲ್ಲಿ ಹೊಟ್ಟೆಯ ಉಬ್ಬು ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆ ಉಸಿರು ಒಳಕ್ಕೆಳೆದು ಹೊಟ್ಟೆಯನ್ನು ಒಳಕ್ಕೆಳೆದುಕೊಂಡು ನೋಡಿಕೊಂಡೆ..ಮೈಮಾಟ ಚೆನ್ನಾಗಿದೆ ಅನಿಸಿ ಖುಷಿಯಾಯ್ತು_(ಮನಸು ಅಭಿಸಾರಿಕೆ)


ಶಾಂತಿ ಕೆ ಅಪ್ಪಣ್ಣ ಅವರಿಗೆ ಅಭಿನಂದನೆಗಳು! ಕೊಡಗಿನ ಸದ್ಯದ ಮಹಿಳಾ ಸಾಹಿತ್ಯದ ದರ್ಶನಕ್ಕೆ ಅವಕಾಶವನ್ನಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೂ ಋಣಿ.
*

ಕಾಜೂರು ಸತೀಶ್

(ಫೆಬ್ರವರಿ ೪, ೨೦೧೭ರಂದು ಮಡಿಕೇರಿ ಪ್ರೆಸ್ ಕ್ಲಬ್ನಲ್ಲಿ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಂದರ್ಭ ವ್ಯಕ್ತಪಡಿಸಿದ ಅನಿಸಿಕೆಯ ಆಯ್ದ ಭಾಗ)