ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 31, 2016

ಸಾವೊಂದನು ಬಿಟ್ಟು

ಇಂದಿನ ಸನ್ನಿವೇಶಗಳನ್ನು ಗಮನಿಸಿದರೆ ಫೇಸ್ಬುಕ್ಕು, ವಾಟ್ಸಾಪ್ಪು, ಗೋಷ್ಠಿಗಳಲ್ಲಿ ಗುರುತಿಸಿಕೊಂಡರೆ ಮಾತ್ರ ಕವಿ. ಎಲ್ಲೋ ತಮ್ಮ ಪಾಡಿಗೆ ತಾವು ಬರೆಯುತ್ತಿರುವ ಅದೆಷ್ಟೋ ಮಂದಿ ಮುಖ್ಯವಾಹಿನಿಗೆ ಬರದೆ ಒದ್ದಾಡುತ್ತಿದ್ದಾರೆ. ಪಾಪ, ಅವರಿಗೆ ಪ್ರಚಾರದ ಗಿಮಿಕ್ಕೂ ಗೊತ್ತಿರುವುದಿಲ್ಲ. ಕೆಲವೊಮ್ಮೆ ಪತ್ರಿಕೆಗಳೂ ಪ್ರೋತ್ಸಾಹ ನೀಡುವುದಿಲ್ಲ. ಮತ್ತೊಂದು ವಿಷಾದವೆಂದರೆ ಕೆಲವು ಖ್ಯಾತನಾಮರಿಗೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಪ್ರಶಸ್ತಿ, ಅದೂ ಇದೂ ಅಂತ ಸಿಗುತ್ತಿದೆ. ಇದು ಪ್ರತಿಭೆಗೆ ಸಂದದ್ದೋ ಅಥವಾ ಹೆಸರಿಗೆ ಸಂದದ್ದೋ ಎನ್ನುವುದೇ ಗೊಂದಲ. ಅದೇನೇ ಇರಲಿ ಕನ್ನಡದಲ್ಲಿ ಹಲವು ಯುವಕವಿಗಳು ತಮ್ಮ ಪಾಡಿಗೆ ತಾವು ಬರೆಯುತ್ತಾ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸುತ್ತಿರುವುದನ್ನು ಗಮನಿಸಿದರೆ ಖುಷಿಯಾಗುತ್ತದೆ

ಸ್ವಾಮಿ ಪೊನ್ನಾಚಿ swamyponnachi123@gmail.com

ಸಮಕಾಲೀನ ಕಾವ್ಯಲೋಕದ ಮುಖವಾಡಗಳನ್ನು ಹೀಗೆ ಬಯಲುಮಾಡುವ ಸ್ವಾಮಿ ಪೊನ್ನಾಚಿಯವರ ಸಾವೊಂದನು ಬಿಟ್ಟು ಎಂಬ ತಮ್ಮ ಪ್ರಥಮ ಕವನ ಸಂಕಲನವನ್ನು ಮೊನ್ನೆಯಷ್ಟೇ ಓದಿದೆ. ಪ್ರಚಾರದ ಬೆನ್ನುಹತ್ತದ (ಪತ್ರಿಕೆಗಳ ಪ್ರಿಜ್ಯುಡೀಸ್ಗೆ ತುತ್ತಾಗದ)ಈ ಕವಿ, ಪ್ರಥಮ ಸಂಕಲನದಲ್ಲೇ ಸಾಧಿಸಿದ ಸಿದ್ಧಿಯನ್ನು ನೋಡಿ ಬೆರಗುಗೊಂಡು ಇದನ್ನೆಲ್ಲ ಇಲ್ಲಿ ಬರೆಯುತ್ತಿದ್ದೇನೆ.
ಪ್ರೀತಿ, ವಿರಹ, ಅರಾಜಕತೆ, ಅಸಮಾನತೆಗಳನ್ನು ಕಾವ್ಯದ ವಸ್ತುವಾಗಿಸಿಕೊಂಡ ಪೊನ್ನಾಚಿಯವರ ಕವಿತೆಗಳು ಹೊಸಬಗೆಯ, ಎಚ್ಚರದ ಅಭಿವ್ಯಕ್ತಿ. ಎಲ್ಲೂ ಅವು ಬಂಡಾಯದ ಬೀಸು ಹೇಳಿಕೆಗಳಂತೆ, ಘೋಷಣೆಗಳಂತೆ ಕಾಣಿಸುವುದಿಲ್ಲ.

'ಸಾವೊಂದನು ಬಿಟ್ಟು' ಸಂಕಲನದ ಕೆಲವು ಕಾಡುವ ಸಾಲುಗಳು:

ರಾತ್ರಿಯಿಡೀ ಕನಸು ಕಂಡು ಕನವರಿಸಿದ ತಲೆ
ಎಲ್ಲಿ ಮಾಯವಾಯಿತು

(ಭವಾವಳೀ)


ಕಿತ್ತುಹೋದ ಯಕ್ಕಡಕ್ಕೆ ಪಿನ್ನು ಸಿಕ್ಕಿಸಿಕೊಂಡು ನಡೆದ ಈ ರಾಜಬೀದಿಯಲ್ಲೇ
ಚಕ್ರವರ್ತಿಯೊಬ್ಬ ದಿಗ್ವಿಜಯದ ಮೆರವಣಿಗೆ ಮಾಡಿಸಿಕೊಂಡಿದ್ದು

(ಮೋಟುಗೋಡೆ)


ಈ ರಾಜ್ಯದಲ್ಲಿ ಗಿಡಮರವೆಲ್ಲಾ ಚಿನ್ನದ ಹಣ್ಣು ಬಿಡತೊಡಗಿ
ರೆಕ್ಕೆಯಿಲ್ಲದ ನಾನು ಗಿಡದಿಂದ ಮುಗಿಲಿಗೆ ಹಾರತೊಡಗುತ್ತೇನೆ
ಪುಕ್ಕವಿಲ್ಲದ ಹಕ್ಕಿಗಳು ಗೂಬೆಗಳಂತೆ ಬೆಪ್ಪನೆ ನೋಡುತ್ತವೆ
ಹೊಲ ಗದ್ದೆಗಳಲಿ ನೋಟು ಚಿಗುರಿ ಚಿಲ್ಲರೆ ಉದುರುದುರಿ
ಝಣಝಣಗುಡಿಸಿ ಒಕ್ಕಣೆ ಮಾಡಿ ಚೀಲ ತುಂಬಿಸಿ ಸಾಗಿಸಿ
ಎಣಿಸಿಡುವುದರೊಳಗೆ ಆಕಾಶದಲ್ಲಿ ಬೆಳ್ಳಿಚುಕ್ಕೆ ಮೂಡಿಬಿಡುತ್ತದೆ

(ಚಿಗುರೊಡೆಯದ ಕನಸುಗಳು)


ಇರುವ ಒಂದು ಜಗತ್ತಿಗೆ
ಅದೆಷ್ಟು ಮಂದಿ ಜಗದ್ಗುರುಗಳೋ?

(ಗುಂಡುಬದನೆಕಾಯಿ)


ಬರಡು ಹೃದಯದಲಿ ಪ್ರೀತಿಬೀಜ ಬಿತ್ತಹೊರಟಿದ್ದು ನಿಮ್ಮದೇ ತಪ್ಪು
ಸುಂಕದ ಕಟ್ಟೆಯಲ್ಲಿ ಭಾವುಕತೆಯ ಕಣ್ಣೀರಿಟ್ಟಿದ್ದು ನಿಮ್ಮದೇ ತಪ್ಪು

(ನಿಮ್ಮದೇ ತಪ್ಪು)

*
ಇಂತಹ ಹೊಸ ಸಂವೇದನೆಗಳಿಗೆ ತೆರೆದುಕೊಳ್ಳೋಣ. ನಿಜದ ಕವಿತೆಗಳನ್ನು ಗೆಲ್ಲಿಸೋಣ.
ಸ್ವಾಮಿ ಪೊನ್ನಾಚಿಯವರಿಗೆ ಅಭಿನಂದನೆಗಳು.
*

ಕಾಜೂರು ಸತೀಶ್

No comments:

Post a Comment