ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, November 21, 2016

ಮಳೆ

ಅವಳು ಸುರಿಯಲಾರಂಭಿಸಿದಳು.

'ನನ್ನ ಕಣ್ಣೀರೇ ಹೆಂಚಿನಿಂದ ತೊಟ್ಟಿಕ್ಕುತ್ತಿರುವುದು. ನನ್ನ ಏದುಸಿರೇ ಗಾಳಿಯಾಗಿ ಬೀಸುತ್ತಿರುವುದು. ನನ್ನ ರೋಷವೇ ಮಿಂಚು ಗುಡುಗುಗಳಾಗಿ ಕೇಳಿಸುತ್ತಿರುವುದು..'

ಅವಳ ಸುರಿಯುವ ಅಷ್ಟೂ ಮಾತುಗಳನ್ನು ಆಲಿಸಿ ತನಗೆ ತಾನೇ ಹೇಳಿಕೊಂಡ- 'ಇನ್ನು ಮಾಡಲಿಕ್ಕಿರುವುದು ಅದೊಂದೇ..'

ಆಮೇಲೆ ಅವನು ತನ್ನ ಮೈಯನ್ನು ಮಡಿಸಿ ಒಂದು ಕಾಗದದ ದೋಣಿಯಾಗಿಸಿ ಅವಳೊಳಗೆ ಹರಿಯಲಾರಂಭಿಸಿದ.
*

ಮಲಯಾಳಂ ಮೂಲ- ಪಿ.ಕೆ.ಪಾರಕ್ಕಡವು

ಕನ್ನಡಕ್ಕೆ- ಕಾಜೂರು ಸತೀಶ್

ದೇವರು ಭೂಮಿಗಿಳಿದರೆ

ಜಗದ ಅಷ್ಟೂ ದೇವರುಗಳು ಭೂಮಿಗಿಳಿದಾಗ
ಅವರ ಕೊರಳಪಟ್ಟಿ ಗುಡಿಸಲಿನ ಅಂಗೈನಲ್ಲಿರುತ್ತದೆ
ಅವರ ಪಾದರಕ್ಷೆ ಬಂಗಲೆಗಳ ನೆತ್ತಿಯ ಮೇಲಿರುತ್ತದೆ!
*
ಕಾಜೂರು ಸತೀಶ್

Sunday, November 20, 2016

ಆಕಾಶ

ಆಕಾಶ ಕುಸಿದುಬೀಳುತ್ತದೆ ಎಂಬ ಸುದ್ದಿ ಕೇಳಿದ್ದೇ ತಡ ಸುರಕ್ಷಿತ ಸ್ಥಳವನ್ನು ಹುಡುಕಿ ನನ್ನ ಹೆಂಡತಿ ಮಕ್ಕಳೊಂದಿಗೆ ಹೊರಟೆ.

ಎಲ್ಲೇ ಹೋದರೂ ಸರಿ ಬದುಕುಳಿಯಬೇಕು. ಏನು ಮಾಡುವುದು? ಆಕಾಶ ಬೀಳುವಾಗ ಕಂಬಕೊಟ್ಟು ನಿಲ್ಲಿಸೋಣವೆಂದರೆ ಆ ಕೆಲಸಕ್ಕೆ ಸುಮಾರು ಖರ್ಚು ಬೀಳುತ್ತದೆ.

ಕೊನೆಗೆ, 'ದ್ರಾಕ್ಷಿ ಹುಳಿಯಾಗಿದೆ' ಎಂದ ನರಿ ನನ್ನ ರಕ್ಷಣೆಗೆ ಬಂತು. ಅದೊಂದು ಉಪಾಯ ಹೇಳಿಕೊಟ್ಟಿತು.ಆಕಾಶವನ್ನು ಯಾರು ಬೀಳಿಸುವರೋ ಅವರ ಜೊತೆಗೆ ಸೇರಿಕೊಳ್ಳಿ. ಸ್ವತಃ
ಜೀವವನ್ನು ರಕ್ಷಿಸಿಕೊಳ್ಳದೆ ಯಾರೂ ಆ ಕೆಲಸವನ್ನು ಮಾಡುವುದಿಲ್ಲ.

ಈಗ ಅದೇ ಮಾರ್ಗ ಹಿಡಿದು ಹೊರಟಿದ್ದೇನೆ!
*

ಮಲಯಾಳಂ ಮೂಲ- ಸಿ. ರಾಧಾಕೃಷ್ಣನ್

ಕನ್ನಡಕ್ಕೆ- ಕಾಜೂರು ಸತೀಶ್