ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, January 6, 2016

ಮಬ್ಬುಗತ್ತಲಿಗೆ ಹಣತೆ ಹಚ್ಚಿಡುವ ಕಥೆಗಳು

'ನಡೆದೂ ಮುಗಿಯದ ಹಾದಿ'ಯ ನೆನಪು ಇನ್ನೂ ಹಸಿಯಾಗಿರುವಾಗ ಮಾರುತಿ ದಾಸಣ್ಣವರ ಅವರು 'ಮಬ್ಬುಗತ್ತಲ ಮಣ್ಣ ಹಣತೆ'ಯನ್ನು ಹಚ್ಚಿಟ್ಟಿದ್ದಾರೆ. ಆ ಹಣತೆಯ ಬೆಳಕಲ್ಲಿ ಮಗುವೊಂದನ್ನು ಮಲಗಿಸುವ ಹಾಗೆ ಕಥೆ ಹೇಳಲು ತೊಡಗಿದ್ದಾರೆ. ಅದಕ್ಕಾಗಿಯೇ ಅವರು ಸರಳ- ಸಲೀಸಾದ ಅಭಿವ್ಯಕ್ತಿಯ ಮಾದರಿಯನ್ನು ಆಯ್ದುಕೊಂಡಿದ್ದಾರೆ. ಪರಂಪರೆಯನ್ನು ಅನುಕರಿಸದೆ ಅಥವಾ ಹೊಸತನಕ್ಕೆ ಹಪಹಪಿಸದೆ, ಉಕ್ಕಿದಂತೆ ಉಸುರಿದ್ದಾರೆ. ಲೋಕದ ಮಬ್ಬುಗತ್ತಲೆಯನ್ನು ಪರಿಚಯಿಸುತ್ತಲೇ ಹಣತೆ ಹಚ್ಚಿಟ್ಟು ಕತ್ತಲನ್ನು ದೂರೀಕರಿಸುವ ಮಾರ್ಗವನ್ನು ಶೋಧಿಸಿದ್ದಾರೆ.


ಹತ್ತು ಕಥೆಗಳಿರುವ 'ಮಬ್ಬುಗತ್ತಲ ಮಣ್ಣ ಹಣತೆ'ಯ ಮೊದಲ ಹಾಗೂ ಶಕ್ತವಾದ ಕಥೆ 'ಸುದಾರಣಾ'. ಇದು ಹೊಲೆಯರು ಮತ್ತು ಮೇಲ್ಜಾತಿಯವರ ನಡುವಿನ ಮುಖಾಮುಖಿ. ಸುಧಾರಣೆಯ ಕನಸು ಹೊತ್ತ ಹನುಮನ ಚಿಂತನೆಗಳು ತನ್ನ ಸಮುದಾಯದಿಂದಲೇ ತಿರಸ್ಕೃತಗೊಳ್ಳುವ ಕಥೆ. ಹೊಲೆಯರ ಸಮಾಜ ಮಂದಿರಕ್ಕೆ ಮಂಜೂರಾದ ಹಣವನ್ನು ಊರ ಗೌಡನು ಗುಡಿ ಕಟ್ಟಲು ಬಳಸಿಕೊಳ್ಳುವ ತಂತ್ರ ಹೂಡುತ್ತಾನೆ. ಅದನ್ನು ಪ್ರಶ್ನಿಸುವ ಹನುಮನಿಗೆ ತನ್ನವರಿಂದಲೇ ಬೆಂಬಲ ವ್ಯಕ್ತವಾಗುವುದಿಲ್ಲ. ಗೌಡನಿಂದ ಕೊಲೆ - ಬಹಿಷ್ಕಾರದ ಬೆದರಿಕೆಗಳನ್ನು ಅನುಭವಿಸಬೇಕಾಗುತ್ತದೆ. ಈ ನಡುವೆ ಗೌಡನು ತನ್ನ ಎದುರಾಳಿ ಚೇರ್ಮನ್ ಬಸಪ್ಪನನ್ನು ಕೊಲ್ಲಿಸುವುದು, ಅದರ ಆಪಾದನೆ ಹನುಮನ ಮೇಲೆ ಬರುವುದು- ಇವು ಇಂದಿನ ರಾಜಕೀಯ ಸ್ಥಿತಿಯ ಮತ್ತು ದಮನಿತರ ದಾರುಣ ಸ್ಥಿತಿಯ ಅನಾವರಣ. ದಲಿತರ ಸುಧಾರಣೆಯ ಸ್ವರೂಪವನ್ನು ತಾತ್ತ್ವಿಕವಾಗಿ ವಿವೇಚಿಸುವ ಈ ಕಥೆಯು, ಗುಡಿ ಎನ್ನುವ ಸಮಾಜ ಮಂದಿರ, ಅದರ ಎದುರಿಗಿರುವ ಟೊಳ್ಳು ಬಸರೀಗಿಡವನ್ನು ಭಯ ಮತ್ತು ಅಭದ್ರತೆಯ ಕಾರಣಗಳಿಂದ ಒಪ್ಪಿಕೊಳ್ಳುವುದನ್ನು ವಿಶ್ಲೇಷಿಸಲಾಗಿದೆ.

ಚಂದ್ರು ಎಂಬ ಯುವಕ ಚಂದ್ರಿಯಾಗುವ, ಸಾಮಾಜಿಕ ಮೌಢ್ಯತೆಗೆ ಸಿಕ್ಕಿ ದೇವದಾಸಿಯಾಗಿ ಬದುಕನ್ನು ಸುಟ್ಟುಕೊಳ್ಳುವ ದುರಂತಕತೆಯಾಗಿ 'ಮಾಯಕಾರ್ತಿ ನೀನೇ' ವ್ಯಕ್ತವಾಗಿದೆ.

ಬಾಲ್ಯ ಮತ್ತು ಗ್ರಾಮೀಣ ಬದುಕು ಇಲ್ಲಿನ ಎಲ್ಲ ಕಥೆಗಳ ಮುಖ್ಯ ಆಕರ. ಕಥೆಗಾರರು ತಮ್ಮ ಯಾನವನ್ನು ಹಲವು ದಿಕ್ಕುಗಳಿಗೆ ವಿಸ್ತರಿಸಿದರೂ, ಮತ್ತೆ ಮತ್ತೆ ಮರಳುವಂತೆ ಮಾಡುವ ಹಳ್ಳಿಯ 'ಕಾಂತತ್ವ' ಇಲ್ಲಿ ಕೆಲಸ ಮಾಡುತ್ತದೆ. ಜಾತಿ ಮತ್ತು ಅಂತಸ್ತುಗಳು ಸ್ನೇಹವನ್ನು ಕಸಿಯುವ ಸಂಗತಿಗಳು 'ಚೆಳಮಾರ ಹಾದಿ' ಕಥೆಯಲ್ಲಿ ಕಾಣುತ್ತವೆ. ಗೆಳೆಯ ಮಹೇಶ ತನ್ನೂರಿನ ಹುಡುಗಿಯನ್ನು ಬಸಿರು ಮಾಡಿದರೂ, ನಿರೂಪಕರ ಸಾಂಗತ್ಯದಿಂದ ಅವಳನ್ನೇ ಮದುವೆಯಾಗಿ ಸಾರ್ಥಕ ಜೀವನ ನಡೆಸುವ ಕಥೆಯಿದು.

'ಅವನೆಂಬ ಇವನು' ಕಥೆಯು ಅಸಂಗತ ನೆಲೆಯಲ್ಲಿ ಮೊದಲ್ಗೊಂಡು ಸಂಗತವಾಗುತ್ತಾ ಮತ್ತೆ ಅಸಂಗತತೆಯಲ್ಲಿ ಕೊನೆಗೊಳ್ಳುತ್ತದೆ. ಜಾತಿ ಮತ್ತು ಆರ್ಥಿಕ ಅಸಮಾನತೆಗಳು ಪ್ರೀತಿಯನ್ನು ಇನ್ನಿಲ್ಲವಾಗಿಸುವ ದುರಂತ ಚಿತ್ರಣ ಈ ಕಥೆಯಲ್ಲಿದೆ.ಉಳಿದೆಲ್ಲ ಕಥೆಗಳಿಗಿಂತ ಭಿನ್ನತೆಯನ್ನು ಈ ಕಥೆಯು ಕಾಯ್ದುಕೊಂಡಿದೆ.

'ಮನಕೊಂದು ಮಾತ ಹೇಳದೇ' ಕಥೆಯು ಮಧ್ಯಮ ವರ್ಗದ ಆರ್ಥಿಕ ಬವಣೆಗಳನ್ನು ಹೇಮಂತನ ಮಾನಸಿಕ ಆಘಾತ; ಶಿಕ್ಷಕನಾಗಿದ್ದರೂ ಬದುಕು ನಿರ್ವಹಿಸಲಾಗದೆ ಆತ್ಮಹತ್ಯೆಗೆ ಶರಣಾಗುವ ಸಂಗತಿಗಳ ಮೂಲಕ ಕಟ್ಟಿಕೊಡುತ್ತದೆ.

'ಈಶ್ವರ್ ಅಲ್ಲಾ ತೇರೇ ನಾಮ್' - ಕೋಮು ಸಾಮುರಸ್ಯಕ್ಕೆ ಹೆಸರಾಗಿದ್ದ ರಾಮಾಪುರವು ರಾಜಕೀಯ ಪ್ರವೇಶಿಸುವಿಕೆಯ ಮೂಲಕ vote bank ಎನ್ನುವುದು ಹೇಗೆಲ್ಲ ಸಮಾಜವನ್ನು ಛಿದ್ರಗೊಳಿಸುತ್ತದೆ ಎಂಬ ಕಥೆ. ಊರ ಗೌಡ ಮಾರುತೆಪ್ಪನ ಮಗ ರಮೇಶ ಮತ್ತು ಕುದುಸಾಬನ ಮಗಳು ಶಬನವ್ವ ಪರಸ್ಪರ ಪ್ರೀತಿಸಿ ಊರುಬಿಟ್ಟು ಸಾಮರಸ್ಯದಿಂದ ಬದುಕುವುದನ್ನು ಊರಿಗೇ ಕಲಿಸಿದ ಘಟನೆಯನ್ನು ಮೇಲ್ಮೆಗೆ ತಂದು, ಅದನ್ನೇ ರಾಮಾಪುರದ ಶಾಂತಿ ಸ್ಥಾಪನೆಗೆ ಔಷಧಿಯಂತೆ ಬಳಸುತ್ತಾರೆ ಕಥೆಗಾರರು.

ನಗರೀಕರಣದ ಸೂಚನೆ ಮತ್ತು ವೃದ್ಧಾಪ್ಯದ ಬವಣೆಗಳು ಸಿಂಗೆ ಮಾಸ್ತರರ ಮೂಲಕ ವ್ಯಕ್ತಗೊಂಡು ಆತ್ಮಹತ್ಯೆಯೇ ಪರಿಹಾರವಲ್ಲವೆಂಬುದನ್ನು ಸೂಚಿಸುತ್ತದೆ. ಮಗ ಮತ್ತು ಸೊಸೆಯಿಂದ ಹಿಂಸೆಗೆ ಒಳಗಾದರೂ, ಸೊಸೆಯ ಹೆಸರಿಗೆ ಉಯಿಲು ಬರೆದಿಡುವುದು, ಗುರು-ಶಿಷ್ಯರ ಸಂಬಂಧ - ಇವು 'ಮಾಸ್ತರರು ಮತ್ತು ಬಸರೀ ಮರವು' ಕಥೆಯನ್ನು ತುಂಬಿಕೊಂಡಿವೆ.
*

ಬಾಲ್ಯ ಹಾಗೂ ಹಳ್ಳಿಯನ್ನು ಒಟ್ಟೊಟ್ಟಾಗಿಟ್ಟು ಗಾಢವಾಗಿ ಜೀವಿಸುತ್ತಾ ಹೆಣೆದ ಕಥೆಗಳಿವು. ಮತ್ತೆ ಮತ್ತೆ ಪ್ರವೇಶಿಸುವ ಚಳಮಾರ ಬೀದಿ, ಬಸರೀಮರ, ಕಾಲೇಜಿನ ದಿನಗಳು, ಗೋಕಾಕ, ಶಿಕ್ಷಕ ವೃತ್ತಿ.. ಹೀಗೆ ಬಾಲ್ಯ ಹಾಗೂ ಭೂತಕ್ಕೆ ಹಿಂತಿರುಗುವ ಪುನರಾವರ್ತನೆಗಳು ಜೀವನಾನುಭವಗಳ ಸಾಂದ್ರ ಅಭಿವ್ಯಕ್ತಿಗಳಾಗಿ ಕಾಣಸಿಗುತ್ತವೆ. ಹಾಗೆಯೇ ಜಾತಿ ಪದ್ಧತಿ , ಮೂಢನಂಬಿಕೆ, ದೇವದಾಸಿ ಪದ್ಧತಿ, ಬಾಲ್ಯವಿವಾಹ, ಕೌಟುಂಬಿಕ ವಿಘಟನೆ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಮೀರುವ ದಾರಿಯನ್ನು ಶೋಧಿಸುತ್ತವೆ.

ಇಲ್ಲಿ ಕಾಡುವ ಸಂಗತಿಯೆಂದರೆ- ಸಾಹಿತ್ಯವನ್ನು ಅಗಾಧವಾಗಿ ಓದಿಕೊಂಡಿರುವ ಮಾರುತಿ ದಾಸಣ್ಣವರ ಅವರು ಯಾಕೆ ತಮ್ಮ ಕಥೆಗಳಿಗೆ ಈ ಬಗೆಯ ಅಭಿವ್ಯಕ್ತಿಯ ಮಾರ್ಗವನ್ನು ಹುಡುಕಿಕೊಂಡರು ಎನ್ನುವುದು. ಏಕೆಂದರೆ ಕಥಾಸಂರಚನೆಯು ಇಷ್ಟು ಸರಳವಾಗುತ್ತಾ ಹೋದಾಗ ತಾತ್ತ್ವಿಕವಾಗಿ ಕಥೆಯು ಸಡಿಲಗೊಂಡು 'ವಾಚ್ಯ'ವಾಗುವ ಅಪಾಯವನ್ನೆದುರಿಸುತ್ತದೆ! ಮಿಕ್ಕಂತೆ ನೆಲಮೂಲದ ಓರ್ವ ಉತ್ತಮ ಕಥೆಗಾರರನ್ನು ಇವರಲ್ಲಿ ಕಾಣಬಹುದು.

"ಅವರಿಗೆ ಕತ್ತಲನ್ನೂದೂ ಎಷ್ಟೊಂದು ಒಗ್ಗಿ ಹೋಗೇತೆಲಾ" ಎಂಬ ಸುಧಾರಣಾವಾದಿ ಮಹೇಶನ ಮಾತುಗಳಂತೆ, ಇರುವ ಕತ್ತಲಿಗೆ ಮದ್ದಾಗಿ ಮಣ್ಣ ಹಣತೆ ಹಚ್ಚಿದ್ದಾರೆ. ಕೃತ್ರಿಮತೆಯ ಸೋಗಿಲ್ಲದ ಆ 'ಮಣ್ಣ' ಹಣತೆಯಲ್ಲಿ ಎಣ್ಣೆ ತೀರದಿರಲಿ ಎಂಬ ಕಥೆಗಾರರ ಆಶಯ ನಮ್ಮೆಲ್ಲರದೂ ಹೌದು.

ಮತ್ತೆ ಮತ್ತೆ ಪ್ರೀತಿಯನ್ನು ತಮ್ಮ ಬರಹ ಮತ್ತು ಬದುಕುಗಳ ಮೂಲಕ ಹಂಚುತ್ತಿರುವ ಮಾರುತಿ ದಾಸಣ್ಣವರ ಅವರಿಗೆ ಅತ್ಯಂತ ಕಿರಿಯವನಾಗಿ ಶುಭಾಶಯಗಳನ್ನು ಕೋರುತ್ತೇನೆ.
**
-ಕಾಜೂರು ಸತೀಶ್


1 comment:

  1. ಉತ್ತಮ ಬರಹ, ಬರೆಯುವ ಕಾಯಕ ನಿರಂತರ ಮುಂದುವರಿಯಲಿ. ಶುಭವಾಗಲಿ.

    ReplyDelete