ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 31, 2016

ಸಾವೊಂದನು ಬಿಟ್ಟು

ಇಂದಿನ ಸನ್ನಿವೇಶಗಳನ್ನು ಗಮನಿಸಿದರೆ ಫೇಸ್ಬುಕ್ಕು, ವಾಟ್ಸಾಪ್ಪು, ಗೋಷ್ಠಿಗಳಲ್ಲಿ ಗುರುತಿಸಿಕೊಂಡರೆ ಮಾತ್ರ ಕವಿ. ಎಲ್ಲೋ ತಮ್ಮ ಪಾಡಿಗೆ ತಾವು ಬರೆಯುತ್ತಿರುವ ಅದೆಷ್ಟೋ ಮಂದಿ ಮುಖ್ಯವಾಹಿನಿಗೆ ಬರದೆ ಒದ್ದಾಡುತ್ತಿದ್ದಾರೆ. ಪಾಪ, ಅವರಿಗೆ ಪ್ರಚಾರದ ಗಿಮಿಕ್ಕೂ ಗೊತ್ತಿರುವುದಿಲ್ಲ. ಕೆಲವೊಮ್ಮೆ ಪತ್ರಿಕೆಗಳೂ ಪ್ರೋತ್ಸಾಹ ನೀಡುವುದಿಲ್ಲ. ಮತ್ತೊಂದು ವಿಷಾದವೆಂದರೆ ಕೆಲವು ಖ್ಯಾತನಾಮರಿಗೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಪ್ರಶಸ್ತಿ, ಅದೂ ಇದೂ ಅಂತ ಸಿಗುತ್ತಿದೆ. ಇದು ಪ್ರತಿಭೆಗೆ ಸಂದದ್ದೋ ಅಥವಾ ಹೆಸರಿಗೆ ಸಂದದ್ದೋ ಎನ್ನುವುದೇ ಗೊಂದಲ. ಅದೇನೇ ಇರಲಿ ಕನ್ನಡದಲ್ಲಿ ಹಲವು ಯುವಕವಿಗಳು ತಮ್ಮ ಪಾಡಿಗೆ ತಾವು ಬರೆಯುತ್ತಾ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸುತ್ತಿರುವುದನ್ನು ಗಮನಿಸಿದರೆ ಖುಷಿಯಾಗುತ್ತದೆ

ಸ್ವಾಮಿ ಪೊನ್ನಾಚಿ swamyponnachi123@gmail.com

ಸಮಕಾಲೀನ ಕಾವ್ಯಲೋಕದ ಮುಖವಾಡಗಳನ್ನು ಹೀಗೆ ಬಯಲುಮಾಡುವ ಸ್ವಾಮಿ ಪೊನ್ನಾಚಿಯವರ ಸಾವೊಂದನು ಬಿಟ್ಟು ಎಂಬ ತಮ್ಮ ಪ್ರಥಮ ಕವನ ಸಂಕಲನವನ್ನು ಮೊನ್ನೆಯಷ್ಟೇ ಓದಿದೆ. ಪ್ರಚಾರದ ಬೆನ್ನುಹತ್ತದ (ಪತ್ರಿಕೆಗಳ ಪ್ರಿಜ್ಯುಡೀಸ್ಗೆ ತುತ್ತಾಗದ)ಈ ಕವಿ, ಪ್ರಥಮ ಸಂಕಲನದಲ್ಲೇ ಸಾಧಿಸಿದ ಸಿದ್ಧಿಯನ್ನು ನೋಡಿ ಬೆರಗುಗೊಂಡು ಇದನ್ನೆಲ್ಲ ಇಲ್ಲಿ ಬರೆಯುತ್ತಿದ್ದೇನೆ.
ಪ್ರೀತಿ, ವಿರಹ, ಅರಾಜಕತೆ, ಅಸಮಾನತೆಗಳನ್ನು ಕಾವ್ಯದ ವಸ್ತುವಾಗಿಸಿಕೊಂಡ ಪೊನ್ನಾಚಿಯವರ ಕವಿತೆಗಳು ಹೊಸಬಗೆಯ, ಎಚ್ಚರದ ಅಭಿವ್ಯಕ್ತಿ. ಎಲ್ಲೂ ಅವು ಬಂಡಾಯದ ಬೀಸು ಹೇಳಿಕೆಗಳಂತೆ, ಘೋಷಣೆಗಳಂತೆ ಕಾಣಿಸುವುದಿಲ್ಲ.

'ಸಾವೊಂದನು ಬಿಟ್ಟು' ಸಂಕಲನದ ಕೆಲವು ಕಾಡುವ ಸಾಲುಗಳು:

ರಾತ್ರಿಯಿಡೀ ಕನಸು ಕಂಡು ಕನವರಿಸಿದ ತಲೆ
ಎಲ್ಲಿ ಮಾಯವಾಯಿತು

(ಭವಾವಳೀ)


ಕಿತ್ತುಹೋದ ಯಕ್ಕಡಕ್ಕೆ ಪಿನ್ನು ಸಿಕ್ಕಿಸಿಕೊಂಡು ನಡೆದ ಈ ರಾಜಬೀದಿಯಲ್ಲೇ
ಚಕ್ರವರ್ತಿಯೊಬ್ಬ ದಿಗ್ವಿಜಯದ ಮೆರವಣಿಗೆ ಮಾಡಿಸಿಕೊಂಡಿದ್ದು

(ಮೋಟುಗೋಡೆ)


ಈ ರಾಜ್ಯದಲ್ಲಿ ಗಿಡಮರವೆಲ್ಲಾ ಚಿನ್ನದ ಹಣ್ಣು ಬಿಡತೊಡಗಿ
ರೆಕ್ಕೆಯಿಲ್ಲದ ನಾನು ಗಿಡದಿಂದ ಮುಗಿಲಿಗೆ ಹಾರತೊಡಗುತ್ತೇನೆ
ಪುಕ್ಕವಿಲ್ಲದ ಹಕ್ಕಿಗಳು ಗೂಬೆಗಳಂತೆ ಬೆಪ್ಪನೆ ನೋಡುತ್ತವೆ
ಹೊಲ ಗದ್ದೆಗಳಲಿ ನೋಟು ಚಿಗುರಿ ಚಿಲ್ಲರೆ ಉದುರುದುರಿ
ಝಣಝಣಗುಡಿಸಿ ಒಕ್ಕಣೆ ಮಾಡಿ ಚೀಲ ತುಂಬಿಸಿ ಸಾಗಿಸಿ
ಎಣಿಸಿಡುವುದರೊಳಗೆ ಆಕಾಶದಲ್ಲಿ ಬೆಳ್ಳಿಚುಕ್ಕೆ ಮೂಡಿಬಿಡುತ್ತದೆ

(ಚಿಗುರೊಡೆಯದ ಕನಸುಗಳು)


ಇರುವ ಒಂದು ಜಗತ್ತಿಗೆ
ಅದೆಷ್ಟು ಮಂದಿ ಜಗದ್ಗುರುಗಳೋ?

(ಗುಂಡುಬದನೆಕಾಯಿ)


ಬರಡು ಹೃದಯದಲಿ ಪ್ರೀತಿಬೀಜ ಬಿತ್ತಹೊರಟಿದ್ದು ನಿಮ್ಮದೇ ತಪ್ಪು
ಸುಂಕದ ಕಟ್ಟೆಯಲ್ಲಿ ಭಾವುಕತೆಯ ಕಣ್ಣೀರಿಟ್ಟಿದ್ದು ನಿಮ್ಮದೇ ತಪ್ಪು

(ನಿಮ್ಮದೇ ತಪ್ಪು)

*
ಇಂತಹ ಹೊಸ ಸಂವೇದನೆಗಳಿಗೆ ತೆರೆದುಕೊಳ್ಳೋಣ. ನಿಜದ ಕವಿತೆಗಳನ್ನು ಗೆಲ್ಲಿಸೋಣ.
ಸ್ವಾಮಿ ಪೊನ್ನಾಚಿಯವರಿಗೆ ಅಭಿನಂದನೆಗಳು.
*

ಕಾಜೂರು ಸತೀಶ್

ಕವಿತೆಯೊಂದು ಜನಿಸುವಾಗ

ನೋಡಿದ್ದು ನಾನೇ
ಹಣೆ ಹಣೆ ಚಚ್ಚಿಕೊಂಡಿದ್ದೂ ನಾನೇ
ಅತ್ತೂ ಅತ್ತೂ ಸ್ಫೋಟಗೊಂಡಿದ್ದೂ ನಾನೇ

ಕಾಲಿನ ಬೆರಳುಗಳ ಬಿಗಿದದ್ದು
ಸ್ನಾನ ಮಾಡಿಸಿದ್ದು
ಮೇಜಿನ ಮೇಲಿಂದೆತ್ತಿದ್ದು
ಅಗರಬತ್ತಿ ಹಚ್ಚಿಟ್ಟಿದ್ದೂ ನಾನೇ

ಜನವೋ ಜನ
ಹೂ ಹಾರ ಹಾಕಿ
ಹೊದಿಸಿದರು ಶ್ವೇತ ವಸ್ತ್ರ
ಕಡೆಯ ಚುಂಬನವೆಂಬಂತೆ
ಬೆನ್ನಿಗೊಂದು ಮುದ್ರೆ

ಇಷ್ಟೆಲ್ಲ ಜವಾಬ್ದಾರಿ ಹೊತ್ತು
ದುಃಖದ ಕೆಂಪು ಪೆಟ್ಟಿಗೆಯೊಳಗೆ
ಮಲಗಿಸಿದ್ದೂ ನಾನೇ

ಇದಕ್ಕಿಂತ ಹೆಚ್ಚಾಗಿ
ಮಣ್ಣು ಮುಚ್ಚಲಿಕ್ಕೆ
ಇನ್ನು ನನ್ನಿಂದಾಗದು
ನನ್ನಿಂದಾಗದು!
*

ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ- ಕಾಜೂರು ಸತೀಶ್

ಅಲೆ ತಾಕಿದರೆ ದಡ

ಕವಿತೆಯನ್ನು ಬರೆದು ಮುಗಿಸಿದ ಮೇಲೆ ಏರ್ಪಡುವ ತೃಪ್ತಿಯಷ್ಟೇ ಅತೃಪ್ತಿಯದ್ದೂ ಪಾಲಿರುತ್ತದೆ. ಈ 'ಅತೃಪ್ತಿ'ಯೇ ಕವಿತೆಯಾದಿಯಾಗಿ ಎಲ್ಲ ಕಲೆಗಳನ್ನು ಪಕ್ವಗೊಳಿಸುತ್ತಾ ಸಾಗುವುದು. ಯಾವುದೋ ಕ್ಷಣದಲ್ಲಿ 'ಸಂಭವಿಸುವ' ಈ ಪವಾಡ ಎಲ್ಲ ಕಲಾಕಾರರಿಗೊಂದು ಬೆರಗು.

' ಈ ಹೊತ್ತಿನ ಕವಿತೆಗೆ ನೈರಾಶ್ಯ ಬಾಧಿಸಿದೆ' - ಹೀಗೆಂದುಕೊಳ್ಳುತ್ತಲೇ ಕವಿತೆಗೆ ಮುಖಾಮುಖಿಯಾಗುತ್ತಿದ್ದೇವೆ. ಕಾವ್ಯದ ಕುರಿತ ಈ ಬಗೆಯ ನೇತ್ಯಾತ್ಮಕ ಅಂಶಗಳನ್ನು ನೀಗಿಸಿಬಿಡುವ ಸಂಕಲನಗಳು ಈಚೆಗೆ ಪ್ರಕಟವಾಗುತ್ತಿರುವುದು ಸಂತೋಷದ ಸಂಗತಿ. ವಾಸುದೇವ ನಾಡಿಗ್ ಅವರ ಅಲೆ ತಾಕಿದರೆ ದಡ ಅವುಗಳಲ್ಲಿ ಮುಖ್ಯವಾದುದು.

ವಾಸುದೇವ ನಾಡಿಗ್ ಅವರ ಆರನೆಯ ಕವನ ಸಂಕಲನವಿದು. ವಿಮರ್ಶೆ, ಪ್ರಬಂಧ, ಸಣ್ಣ ಕತೆ ಮುಂತಾದ ಪ್ರಕಾರಗಳ ಒಳಗೆ ಇಳಿಯಬಲ್ಲವರಾದರೂ, 'ಕವಿತೆ' ಎಂಬ ಧ್ಯಾನಸ್ಥ ಮಾರ್ಗವನ್ನೇ ತಮ್ಮ ಪ್ರಧಾನ ಅಭಿವ್ಯಕ್ತಿಯಾಗಿಸಿಕೊಂಡವರು.

ನಾಡಿಗರ ಹಿಂದಿನ ಎರಡು ಸಂಕಲನಗಳನ್ನು( ವಿರಕ್ತರ ಬಟ್ಟೆಗಳು , ನಿನ್ನ ಧ್ಯಾನದ ಹಣತೆ) ಓದಿಕೊಂಡಿರುವ ಅನುಭವದ ನೆಲೆಯಲ್ಲಿ ಸಾದೃಶ್ಯವೆನಿಸಿದರೂ, 'ಅಲೆ ತಾಕಿದರೆ ದಡ' ಅದಕ್ಕಿಂತ ಬೇರೆಯದೇ ಆದ ಗಟ್ಟಿ ಕಲಾಕೃತಿಯಾಗಿ ರೂಪಿತವಾಗಿದೆ.

ಇಲ್ಲಿನ ಕವಿತೆಗಳು ಬದುಕಿನ ತಾತ್ವಿಕತೆಯನ್ನು ಚಿಂತಿಸುವಲ್ಲಿ ತಳವೂರಿದೆ. ಬದುಕಿನ ವೈರುಧ್ಯಗಳ ಮೇಲಿನ ಗಹನ ಆಲೋಚನೆಯೇ ನಾಡಿಗ್ ಅವರ ಕವಿತೆಗಳು. ಅವು 'ನಿಶಬ್ದಗಳಲಿ ಏಳುವ ಶಬ್ದಗಳು', 'ಬದುಕಿನ ಸಂತೆಗಳಲಿ ಜೀವಪಡೆದು ಗದ್ದಲಗಳ ನಡುವೆ ಗದ್ದಲವಾಗದ ಹಾಗೆ' ಮೂಡುವಂಥವು. 'ಮನುಷ್ಯನೆಂಬ ಸೋಜಿಗದ ಪ್ರಾಣಿ ಮತ್ತು ಜೀವನವೆಂಬ ಅನೂಹ್ಯ ಬಯಲು ಎರಡನ್ನೂ ಕುರಿತು ಗಾಢವಾಗಿ ಚಿಂತಿಸುತ್ತಾ ಹೋದಾಗ' ಅಭಿವ್ಯಕ್ತಗೊಂಡುಬಿಡುತ್ತವೆ.


ವಾಸುದೇವ ನಾಡಿಗರ ಮಾಗುವಿಕೆಗೆ ಸಾಕ್ಷಿ ಅವರ ಶ್ರದ್ಧೆಯ ಕಾವ್ಯ ಕಟ್ಟುವಿಕೆ( ದೇಸೀಯ ಮತ್ತು ಐರೋಪ್ಯ ಮಾದರಿಗಳ ಹದಬೆರೆತ ಪಾಕ) ಮತ್ತು ಪ್ರತಿಮೆ, ನುಡಿಗಟ್ಟುಗಳನ್ನು ಸಹಜವಾಗಿ - ಪ್ರಮಾಣಬದ್ಧವಾಗಿ ದುಡಿಸಿಕೊಳ್ಳುವ ಕಲೆ. (ಅಡಿಗ+ಕೆ.ಎಸ್.ನ. ಹಾಗೆ)

ಇಷ್ಟು ಸುದೀರ್ಘವಾಗಿ ಕವನ ಸಂಕಲನವೊಂದು ನನ್ನನ್ನು ಓದಿಸಿಕೊಂಡ ಉದಾಹರಣೆಗಳಿಲ್ಲ. ಆ ಶ್ರೇಯಸ್ಸು 'ಅಲೆ ತಾಕಿದರೆ ದಡ'ಕ್ಕೆ ಸಲ್ಲಬೇಕು. ಅವರ ಕಾವ್ಯದ 'ನದಿಹರಿವು' ನಮ್ಮೊಳಗೆ ಹರಿಯುತ್ತಿರುವಾಗಲೇ ಕ್ಷಣಕ್ಷಣವೂ ನಿಂತು


ಏನನ್ನೋ ಗಹನವಾಗಿ ಆಲೋಚನೆಗೆ ಹಚ್ಚುತ್ತದೆ. ಅಂತಹ ಆಲೋಚನೆಗಳಲ್ಲಿ ಓಶೋ, ಬುದ್ಧ , ಗಾಂಧಿ ಮತ್ತಿತರ ಪಾತ್ರಗಳು ಬಂದುಹೋಗುತ್ತವೆ. ಬಹುದೊಡ್ಡ ಮಾನವೀಯ ಕಾಳಜಿ , ಕಾರುಣ್ಯದ ಹಂಬಲ, ನಾನತ್ವದ ಮತ್ತು ಪ್ರಭುತ್ವದ ವಿಡಂಬನೆ, ಸಂಬಂಧಗಳ ಶೋಧ, ನೆಲಮೂಲ ಪ್ರಜ್ಞೆಯ ವಿನಾಶ, ಸ್ತ್ರೀ ಪ್ರಜ್ಞೆ.. ಹೀಗೆ ವಿಭಿನ್ನ ಆಯಾಮಗಳ ಮೇಲೆ ಧ್ಯಾನ ಹೊರಳುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಇವು ಗಾಂಧೀಜಿಯವರ 'My Experiment with Truth' ಮಾದರಿಯವು.

'ಅಲೆ ತಾಕಿದರೆ ದಡ'ದ ಒಳಗಿಳಿಯುವ ಕೆಲವು ಸಾಲುಗಳು :
ಸಂದುಹೋದ ಅಪ್ಪ
ಪ್ರತಿ ವಸಂತಕ್ಕೂ ನೆನಪಾಗುತ್ತಾನೆ

(ಕಳೆದ ಶಿಶಿರಗಳಲಿ ಉದುರಿದ ಎಲೆಗಳು)
*

ಹೆಳವನ ಹೆಗಲು ಖಾಲಿಯಿದೆ
ಕುರುಡ ಕೂಡದಂತೆ ಕಾಯಬೇಕು

*

ಬೆಳಕನ್ನು ಕೆಣಕಲೆಂದೇ
ಜನ್ಮವೆತ್ತಿದ ಕತ್ತಲಿಗೆ
ಬೆಳಕನ್ನುಳಿದು ಬಾಳಿಲ್ಲ

(ಅಲೆ ತಾಕಿದರೆ ದಡ)
*

ಹಿಮದ ತರಗತಿಯಲ್ಲಿ
ಬರೀ ಬೆಂಕಿ ಕುರಿತೇ ಪಾಠ

(ನಿಂತರೆ ನೆಲೆ ಸೋತರೆ ಮುಕ್ತಿ)
*

ಏನೂ ಮಾತಾಡಲೊಲ್ಲದ
ಬೇರಿಗೆ ಎಲ್ಲ ಗೊತ್ತು

(ಸತ್ಯದ ಸಂಗ ಮೌನ)
*

ನೀರ ಸಖ್ಯಕ್ಕೆ ಬಿದ್ದ ಉಪ್ಪು
ಬಿಸಿಲ ಬಾಹುಗಳಲ್ಲಿ ಸಿಕ್ಕ ಸಮುದ್ರ
ಕಾಲ ಕಟಕಟೆಯಲ್ಲಿ ಸತ್ಯ ಚಿಗುರಿ
ಉಪ್ಪು ಸಮುದ್ರವಾಗಿ ಸಮುದ್ರ ಉಪ್ಪಾಗಿ
ರೂಪ ರೂಪಾಂತರಗಳಾಚೆ ಎಲ್ಲ ನಿರೂಪ

(ಸಮುದ್ರ ಮತ್ತು ಉಪ್ಪು)
*

ನದಿಗಳಲೂ ಉಳಿಯದ ಸುಖ
ಸಮುದ್ರದ ಪಾಲಾಯಿತು
ಉಪ್ಪು ತಿನ್ನುವುದಕೆ ಅಣಿಯಾಗಬೇಕು

(ಗಮ್ಯ)
*

ನನಗೆ ನಾನೇ ದುರ್ಗಂಧ ಬೀರುವ ಸತ್ಯ
ತಡವಾಗಿಯಾದರೂ ಅರಿವಾಯಿತು

(ನನಗೆ ನಾನೇ ದುರ್ಗಂಧ )
*

ಬದುಕುಗಳೆಲ್ಲ ಕತೆಗಳಾಗದೆ
ಕತೆಗಳ ಕೊನೆಯೇ ಬದುಕಾಗಿದ್ದರೆ
ಇಷ್ಟೊಂದು ಕತೆ ಹೇಳುವ ಹಾಗಿರಲಿಲ್ಲ ಕೇಳುವ ಹಂಗಿರಲಿಲ್ಲ

(ಕತೆಗಳ ಜೊತೆಜೊತೆಗೆ)
*

ಲೂಟಿಕೋರರೇ ರಾಜರಾದರೋ
ರಾಜರೇ ಲೂಟಿ
ಮಾಡಿದರೋ
ಗಾಯಗೊಂಡ ಮಣ್ಣು ಮಂದಿ
ಕೊತ್ತಲ ತುದಿಗೆ ಕಿಸಕ್ಕನೆ
ನಕ್ಕ ಲಾಂಛನ

(ಇತಿಹಾಸ )

ಹೊಸ ತಲೆಮಾರಿನ ಹುಡುಗರೊಂದಿಗೆ ಹುಡುಗನಾಗಿ ಬೆರೆಯುವ ನಾಡಿಗರ ಗುಣವೇ ಕವಿತೆಯಂತೆ . ಅವರ ಕವಿತೆಗಳಿಗೆ ಒಳ್ಳೆಯ ಓದುಗರು ಸಲ್ಲಲಿ; ಈ ಲೋಕದ ಆತ್ಮಶೋಧನೆಗೆ ಅವಕಾಶ ಒದಗಿ ಬರಲಿ.
ಅವರೇ ಹೇಳುವಂತೆ -
ದ್ವೀಪಗಳೆದುರು
ಹಚ್ಚಿಡಿ ದೀಪಗಳ
ಬೆಳಕಿಗಾಗಿ ಅಲ್ಲ
ಬದುಕಲಿಕೆ

(ದ್ವೀಪಗಳಲಿ ಬದುಕುವುದು ಸಾಕಾಗಿದೆ)
*

ಕಾಜೂರು ಸತೀಶ್

Saturday, December 24, 2016

RIP(ಇದು ಕವಿತೆಯಲ್ಲ)

RIP ಮೇಷ್ಟ್ರಿಗೆ!


ಎಂದೋ ಚುಚ್ಚಿದ ಆ ಸಿರಿಂಜು
ಸ್ವಲ್ಪ ಸ್ವಲ್ಪವೇ ಜೀವ ನೆಕ್ಕಿ
ಪೂರ್ಣ ಉಂಡು ತೇಗಿದಾಗ
ಆತ ಕೊಲೆಗೀಡಾದ ನನ್ನೊಳಗೆ
RIP

ಸಾಯುವುದಕ್ಕೆ ಎಷ್ಟು ಚಂದದ ತರಬೇತಿ!
ಮೊದಲು ರಗಸದಅ
ಕಾಗುಣಿತ ಎಬಿಸಿಡಿ
ಕೂಡು ಕಳೆ..

ಟಿಎ ಡಿಎ ಇಲ್ಲದಿದ್ದರೇನು?

ಹಕ್ಕಿ ಹೇಗೆ ಹಾರುತ್ತೆ
ನಾಯಿ ಹೇಗೆ ಬೊಗಳುತ್ತೆ
ಮಗು ಹೇಗೆ ಅಳುತ್ತೆ..
ಎಷ್ಟು ಚಂದದ ತರಬೇತಿ!

ತಿನ್ನುವ ಕೂರುವ
ಮಲಗುವ ಕೈತೊಳೆಯುವ
ಉಚ್ಚೆ ಹುಯ್ಯುವ ವಿಧಾನಗಳನ್ನು
ಪುಟಗಟ್ಟಲೆ ಬರೆಯುವುದನ್ನು
ಎಷ್ಟು ಚಂದ ಕಲಿಸಲಾಗುತ್ತದೆ

ಮೂಟೆ ಹೊರುವುದನ್ನು
ಕಸ ಗುಡಿಸುವುದನ್ನು
ಉಗಿದ ಉಗುಳನ್ನು
ಮುಖದಲ್ಲೇ ಇಟ್ಟುಕೊಳ್ಳುವುದನ್ನು
ಷಂಡನಾಗುವುದನ್ನು
ಎಷ್ಟು ಚಂದ ಕಲಿಸಲಾಗುತ್ತದೆ!

ಮಕ್ಕಳು ಬೀದಿಗೆ ಬಿದ್ದಾಗ
ಇಲ್ಲಿ ಹಸಿರು ಶಾಯಿಯಲ್ಲಿ
ಎದೆ ಸೀಳಿಸಿಕೊಳ್ಳಲು
ಮಗು ಅಲ್ಲಿ ಹಠ ಹಿಡಿದಾಗ
ಇಲ್ಲಿ
ಪೋಸ್ಟ್ಮಾರ್ಟಂ ಮಾಡಿಸಿಕೊಳ್ಳಲು
ಎಷ್ಟು ಚಂದ ಕಲಿಸಲಾಗುತ್ತದೆ!

ಕವರಿನಲ್ಲಿ ತುರುಕಿ
ಡ್ರಾಯರಿಗೆ ತುತ್ತುಣಿಸಲು
ಹಿಂಸೆಯ ಸಿರಿಂಜು ಚುಚ್ಚಿಸಿಕೊಳ್ಳಲು
ಎಷ್ಟು ಚಂದದ ತರಬೇತಿ!

RIP ನನ್ನೊಳಗಿನ ಮೇಷ್ಟ್ರಿಗೆ
RIP ಅವನ ಅಸಂಖ್ಯ ಮುದ್ದು ಮಕ್ಕಳಿಗೆ

ಉಘೇ ಉಘೇ ಕೊಲೆಗಡುಕರಿಗೆ!
*

ಕಾಜೂರು ಸತೀಶ್

Tuesday, December 13, 2016

ಆ ವೈದ್ಯ

ಆ ಸೊಳ್ಳೆ ಬಂದು ಚಿಕೂನ್ ಗುನ್ಯಾವನ್ನು ಈ ಊರಿಗೆ ಹಂಚಿ ಹೋಗಿತ್ತು. ಪರೀಕ್ಷಿಸಿಕೊಳ್ಳಲು ಸಮೀಪದಲ್ಲಿರುವ ಕೇರಳ ರಾಜ್ಯಕ್ಕೆ ಸೇರಿದ ಪ್ರಾಥಮಿಕ ಆರೋಗ್ಯ ಕೇಂದ್ರ(ನಮ್ಮ ತಾಲೂಕು/ಜಿಲ್ಲಾಸ್ಪತ್ರೆಯನ್ನು ಹೋಲುವ)ಕ್ಕೆ ಗೆಳೆಯನ ಜೊತೆ ಹೋಗಿದ್ದೆ.

ಆ ವೈದ್ಯರ (ಸಹಾಯಕ ಸರ್ಜನ್) ಮಲಯಾಳಂನಲ್ಲಿ ಅಷ್ಟು ಸ್ಪಷ್ಟತೆ ಇರಲಿಲ್ಲ. 'ತಮಿಳುನಾಡಿನವರಾ ಸರ್?' ಎಂದೆ. 'ಕರ್ನಾಟಕದವನು' ಎಂದರು. ಕನ್ನಡದಲ್ಲಿ ನಮ್ಮ ಮಾತು ಬೆಳೆದು ಅವರ ಊರಾದ ತುಮಕೂರಿನ 'ಶಿರ'(ಶಿರಾ)ಕ್ಕೆ ತಲುಪಿದೆವು.

ಆಮೇಲೆ ಸಿಕ್ಕಾಗಲೆಲ್ಲ ಸಿಕ್ಕಾಪಟ್ಟೆ ಖುಷಿಯಿಂದ ಮಾತನಾಡುತ್ತಿದ್ದರು.

ಕೇರಳದ ಎಲ್ಲೋ ಒಂದು ಕಡೆ- ಹೃದಯದಲ್ಲಿ ಕನ್ನಡ ತುಂಬಿದ ಅದೇ ಮಲಯಾಳಂನಲ್ಲಿ ವ್ಯವಹರಿಸುತ್ತಿರುವ ಆ ವೈದ್ಯರ ನೆನಪಾಗುತ್ತಿದೆ ಈಗ.
*

ಕಾಜೂರು ಸತೀಶ್

Saturday, December 3, 2016

ಹಿಂಸೆ

ಇಷ್ಟು ದಿನ ಅವರು ಒಟ್ಟಿಗಿದ್ದರು. ಇವನು ಕವಿತೆಗಳ ಕುರಿತು ಸೊಲ್ಲೆತ್ತಿದಾಗ, ಅವರು ಹಣದ ಕುರಿತು ಮಾತನಾಡುತ್ತಿದ್ದರು. ಇವನು ಹಸಿವಿನ ಕುರಿತು ಮಾತನಾಡಿದಾಗ, ಅವರು ಬಾಡೂಟದ ಕುರಿತು ಮಾತನಾಡುತ್ತಿದ್ದರು. ಇವನ ಕಥೆ-ಕವಿತೆಗಳು ಅರ್ಧಕ್ಕೆ ತಲುಪಿದಾಗ, ಅವರು ರಾಜಕೀಯದ ಮಾತೆತ್ತಿ ಅದನ್ನು ಸಾಯಿಸಿಬಿಡುತ್ತಿದ್ದರು.

ಅವರೆಲ್ಲ ಹೋದಮೇಲೆ ಹುಟ್ಟಿದ ದಟ್ಟ ಮೌನ ಎಷ್ಟು ಖುಷಿಕೊಡತೊಡಗಿತು ಎಂದರೆ, ಇವನಿಗೆ ಕುಣಿದಾಡಬೇಕೆನಿಸಿತು. ಅವರಿದ್ದಾಗ ಅರಿವಾಗದ ಅವರು ಕೊಡುತ್ತಿದ್ದ ಹಿಂಸೆ ಈ ಖುಷಿಯಲ್ಲಿ ಮತ್ತೆ ಮತ್ತೆ ಕಾಡತೊಡಗಿತು. ಇಷ್ಟು ಕಾಲ ಇಂತಹ ಪರಮ ಸುಖವನ್ನು ಕಳೆದುಕೊಂಡೆನಲ್ಲಾ ಎಂದು ಕ್ಷಣಕ್ಷಣವೂ ಕೊರಗಿ ಆಸ್ಪತ್ರೆ ಸೇರಿದ ಮತ್ತು ಸತ್ತೇ ಹೋದ.

ಅವರು ಮತ್ತೆ ಬಂದರು!
*

ಕಾಜೂರು ಸತೀಶ್

!

ಬೀದಿಯಲ್ಲಿ ಆಶ್ಚರ್ಯಸೂಚಕ ಚಿಹ್ನೆಯೊಂದು ಬಿದ್ದಿತ್ತು. ಯಾರಾದರೂ ಎತ್ತಿಕೊಳ್ಳಬಹುದೆಂದು ಆಸೆಯಿಂದ ದಾರಿಹೋಕರನ್ನು ನೋಡುತ್ತಿತ್ತು.

ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಒಂದು ದಿನ ಅದು ಕಂಪ್ಯೂಟರ್ , ಲ್ಯಾಪ್ಟಾಪ್, ಮೊಬೈಲ್ ಫೋನಿನೊಳಗೆ ಸೇರಿಕೊಂಡು ನಿದ್ದೆಗೆ ಜಾರಿತು.

ಮತ್ತೆ ಏಳಲಿಲ್ಲ!
*

ಕಾಜೂರು ಸತೀಶ್

Thursday, December 1, 2016

ಆಮೇಲೆ ?

ಒಂದು ಕಾಡು ಇತ್ತು
ಆಮೇಲೆ ?
ಒಂದು ಊರು ಇತ್ತು
ಆಮೇಲೆ ?
ನದಿ, ಕೆರೆ, ತೋಡುಗಳಿದ್ದವು
ಆಮೇಲೆ ?
ಕಾಡು, ನಾಡು, ನದಿ, ಕೆರೆ, ತೋಡುಗಳಿದ್ದವು

ಅಷ್ಟೆ !
*
ಮಲಯಾಳಂ ಮೂಲ- ಸೆಬಾಸ್ಟಿಯನ್

ಕನ್ನಡಕ್ಕೆ- ಕಾಜೂರು ಸತೀಶ್

ಮನಃಶಾಸ್ತ್ರಜ್ಞ

ಜನಜಂಗುಳಿಯಲ್ಲಿ ಎಷ್ಟು ಜನ ಹುಚ್ಚರಿದ್ದಾರೆಂದು ತಿಳಿಯಲು
ಒಂದು ದಾಸವಾಳವನ್ನು ಎತ್ತಿ ತೋರಿಸಿದ.

ಅದ ನೋಡಿದ ಕೆಲವರು ಬಿರುಸಾಗಿ ನಡೆದುಹೋದರು
ಕಣ್ಣೆತ್ತಿಯೂ ನೋಡಲಿಲ್ಲ ಕೆಲವರು.

ಕರಗತೊಡಗಿತು ಜನಜಂಗುಳಿ
ಉಳಿದದ್ದು ತಾನೊಬ್ಬನೇ.

ಮನುಷ್ಯರ ಕುರಿತು ನೆನೆನೆನೆದು
ಉಕ್ಕಿದ ನಗು ಬೆಳೆದು ಅಟ್ಟಹಾಸ.

ಎತ್ತಿ ಹಿಡಿದಿದ್ದ ಆ ಹೂವ ಕಿವಿಯ ಮೇಲಿಟ್ಟು
ಹುಡುಕಿ ಹೊರಟ
ಮತ್ತೊಂದು ನಗರಕ್ಕೆ
*
ಮಲಯಾಳಂ ಮೂಲ- ಸೆಬಾಸ್ಟಿಯನ್

ಕನ್ನಡಕ್ಕೆ- ಕಾಜೂರು ಸತೀಶ್

Monday, November 21, 2016

ಮಳೆ

ಅವಳು ಸುರಿಯಲಾರಂಭಿಸಿದಳು.

'ನನ್ನ ಕಣ್ಣೀರೇ ಹೆಂಚಿನಿಂದ ತೊಟ್ಟಿಕ್ಕುತ್ತಿರುವುದು. ನನ್ನ ಏದುಸಿರೇ ಗಾಳಿಯಾಗಿ ಬೀಸುತ್ತಿರುವುದು. ನನ್ನ ರೋಷವೇ ಮಿಂಚು ಗುಡುಗುಗಳಾಗಿ ಕೇಳಿಸುತ್ತಿರುವುದು..'

ಅವಳ ಸುರಿಯುವ ಅಷ್ಟೂ ಮಾತುಗಳನ್ನು ಆಲಿಸಿ ತನಗೆ ತಾನೇ ಹೇಳಿಕೊಂಡ- 'ಇನ್ನು ಮಾಡಲಿಕ್ಕಿರುವುದು ಅದೊಂದೇ..'

ಆಮೇಲೆ ಅವನು ತನ್ನ ಮೈಯನ್ನು ಮಡಿಸಿ ಒಂದು ಕಾಗದದ ದೋಣಿಯಾಗಿಸಿ ಅವಳೊಳಗೆ ಹರಿಯಲಾರಂಭಿಸಿದ.
*

ಮಲಯಾಳಂ ಮೂಲ- ಪಿ.ಕೆ.ಪಾರಕ್ಕಡವು

ಕನ್ನಡಕ್ಕೆ- ಕಾಜೂರು ಸತೀಶ್

ದೇವರು ಭೂಮಿಗಿಳಿದರೆ

ಜಗದ ಅಷ್ಟೂ ದೇವರುಗಳು ಭೂಮಿಗಿಳಿದಾಗ
ಅವರ ಕೊರಳಪಟ್ಟಿ ಗುಡಿಸಲಿನ ಅಂಗೈನಲ್ಲಿರುತ್ತದೆ
ಅವರ ಪಾದರಕ್ಷೆ ಬಂಗಲೆಗಳ ನೆತ್ತಿಯ ಮೇಲಿರುತ್ತದೆ!
*
ಕಾಜೂರು ಸತೀಶ್

Sunday, November 20, 2016

ಆಕಾಶ

ಆಕಾಶ ಕುಸಿದುಬೀಳುತ್ತದೆ ಎಂಬ ಸುದ್ದಿ ಕೇಳಿದ್ದೇ ತಡ ಸುರಕ್ಷಿತ ಸ್ಥಳವನ್ನು ಹುಡುಕಿ ನನ್ನ ಹೆಂಡತಿ ಮಕ್ಕಳೊಂದಿಗೆ ಹೊರಟೆ.

ಎಲ್ಲೇ ಹೋದರೂ ಸರಿ ಬದುಕುಳಿಯಬೇಕು. ಏನು ಮಾಡುವುದು? ಆಕಾಶ ಬೀಳುವಾಗ ಕಂಬಕೊಟ್ಟು ನಿಲ್ಲಿಸೋಣವೆಂದರೆ ಆ ಕೆಲಸಕ್ಕೆ ಸುಮಾರು ಖರ್ಚು ಬೀಳುತ್ತದೆ.

ಕೊನೆಗೆ, 'ದ್ರಾಕ್ಷಿ ಹುಳಿಯಾಗಿದೆ' ಎಂದ ನರಿ ನನ್ನ ರಕ್ಷಣೆಗೆ ಬಂತು. ಅದೊಂದು ಉಪಾಯ ಹೇಳಿಕೊಟ್ಟಿತು.ಆಕಾಶವನ್ನು ಯಾರು ಬೀಳಿಸುವರೋ ಅವರ ಜೊತೆಗೆ ಸೇರಿಕೊಳ್ಳಿ. ಸ್ವತಃ
ಜೀವವನ್ನು ರಕ್ಷಿಸಿಕೊಳ್ಳದೆ ಯಾರೂ ಆ ಕೆಲಸವನ್ನು ಮಾಡುವುದಿಲ್ಲ.

ಈಗ ಅದೇ ಮಾರ್ಗ ಹಿಡಿದು ಹೊರಟಿದ್ದೇನೆ!
*

ಮಲಯಾಳಂ ಮೂಲ- ಸಿ. ರಾಧಾಕೃಷ್ಣನ್

ಕನ್ನಡಕ್ಕೆ- ಕಾಜೂರು ಸತೀಶ್

Wednesday, October 19, 2016

ಒಂದಾದರೂ ಬರಬಾರದೇ ?

ಎಷ್ಟೊಂದು ಹಕ್ಕಿಗಳಿವೆ ಇಲ್ಲಿ ಒಂದಾದರೂ ಬರಬಾರದೇ?

ಒಂದು ಮರಕುಟಿಗವಾದರೂ ಬಂದು ಕುಟುಕುಟು ಕುಟುಕಿ
ಮೊಬೈಲಿನಲ್ಲೊಂದು ತೂತುಮಾಡಿ ನುಗ್ಗಿ
ಜೋರಾಗಿ ಹಾಡಿ...

ಆಮೇಲೆ ಅದರ ಹಾಡೇ ರಿಂಗ್ಟೋನಾಗಿ
ಅದರ ಚಿತ್ರವೇ ಡಿಪಿಯಾಗಿ
ಅದರ ಹಾಡು ಅಪಶಕುನವೆಂಬೊ ಮಾತು ಕೂಡ ಅಳಿಯುವಂತಾಗಿ
ಅದು ಪುರ್ರೆಂದು ಹಾರಿಹೋಗುವಾಗ ಬಿದ್ದ ಹಿಕ್ಕೆಯಲ್ಲೊಂದು ಬೀಜ ಮೊಳೆತು ಮರಹುಟ್ಟಿ
ಒಂದಾಗಿ ಹತ್ತಾಗಿ ನೂರು-ಸಾವಿರವಾಗಿ 
ನೆಲದ ಇಂಚಿಂಚುಗಳಲ್ಲೆಲ್ಲ ಮರಗಳೇ ಆಗಿ
ಟವರುಗಳೆಲ್ಲ ನೆಲಕ್ಕಚ್ಚಿ
ಸಿಗ್ನಲ್ಲುಗಳಿಗೆ ಅಪಘಾತವಾಗಿ
ಚಕ್ರಗಳೆಲ್ಲ ಟುಸ್ಸಾಗಿ
ಗಾಜುಗಳೆಲ್ಲ ಪುಡಿಪುಡಿಯಾಗಿ...


ಮತ್ತೆ ಈ ನರಸತ್ತ ನರರೆಲ್ಲ ಸರಸರ ನಡೆಯುವಂತಾದಾಗ
ರಾತ್ರಿ ಬೆಳದಿಂಗಳನ್ನೇ ನಂಬಿ ಬದುಕುವಂತಾದಾಗ...

ಆಕಾಶದಲ್ಲಿ ಚಂದ್ರ ತಾರೆಯರಿಗೆ ಮರುಜೀವ ಬಂದು
ಭೂಮಿಯಲ್ಲಿ ಹಕ್ಕಿಗಳ ಹಾಡುಹುಟ್ಟಿ
ಛಿಲ್ಲೆಂದು ರಕ್ತ ಚಿಮ್ಮಿದರೂ ಸರಿಯೆ
ಎದೆಯೊಳಗೆ ಹೊಕ್ಕ ಮರಕುಟಿಗ ಕುಟುಕುಟು ಕುಟುಕಿ
ಎದೆಗೊಂದು ಹೆದ್ದಾರಿ ಮಾಡಿ
ಹಕ್ಕಿಗಳು ಒಳನುಗ್ಗಿ ಹಾಡಿದಾಗ
ಹಚ್ಚಹಸಿರ ಹೃದಯದ ಮನುಷ್ಯರ ನೋಡಬಹುದಿತ್ತು.

ಛೆ!
ಎಷ್ಟೊಂದು ಹಕ್ಕಿಗಳಿವೆ ಇಲ್ಲಿ ಒಂದಾದರೂ ಬರಬಾರದೇ ?
*

ಕಾಜೂರು ಸತೀಶ್

Monday, October 17, 2016

ಅಪ್ಪ ತೀರಿದ ಬಳಿಕ

ತೀರಿದ ಬಳಿಕ ಅಪ್ಪ ಮಗುವಾಗಿ ಮಲಗಿದ್ದಾನೆ ಇಲ್ಲಿ-ನನ್ನ ಹೃದಯದಲ್ಲಿ

ಅವನ ಸುಡಲು ಮಲಗಿಸಿದ ಸೌದೆಯಲ್ಲಿ ನಾನು ಬೆಂದು ಬೂದಿಯಾಗಿದ್ದೇನೆ
ಅಪ್ಪ ಮಗುವಾಗಿ ಮಲಗಿದ್ದಾನೆ ಇಲ್ಲಿ- ನನ್ನ ಹೃದಯದಲ್ಲಿ.

ಅಗ್ನಿಸ್ಪರ್ಶಗೈಯ್ದ ನನ್ನ ಕೈಗಳು ಬೂದಿಯೊಳಗಿಂದಲೂ ಬೇಯುತಿವೆ
ಆರುವ ಮೊದಲೇ ಗೋರಿ ಕಟ್ಟಬೇಕು ಇನ್ನು ನನ್ನ ಚಿತಾಭಸ್ಮದ ಮೇಲೆ.

ಎದ್ದು ಕೂರುತ್ತಾನೆ ಅಪ್ಪ ನನಗೆ ನೆನಪಾದಾಗಲೆಲ್ಲ
ದುಃಖವಿಲ್ಲದ ಜೋಗುಳವ ಹಾಡಲು ಕಲಿಯಬೇಕು ಇನ್ನು.


ಅವನು ತೀರಿದ ಮೇಲೆ 'ಅಪ್ಪ' ಎಂಬ ಶಬುದ ಅನಾಥ
ಅಕ್ಕ ಅಣ್ಣ ನಾನು ಅದರ ಬೆನ್ನುಬಿದ್ದಿದ್ದೇವೆ ಬೊಗಸೆಯೊಡ್ಡುತ್ತಾ.

ತೀರಿದ ಮೇಲೆ ಅಪ್ಪ ಮಗುವಾಗಿ ಹುಟ್ಟಿದ್ದಾನೆ
ಅವನು ತೀರಿದ ಮೇಲೆ ನಾನು ಅಪ್ಪನಾಗಿ ತೀರಿಹೋಗಿದ್ದೇನೆ.

ಚರಿತ್ರೆಯಾಗಲಿಲ್ಲ ಅಪ್ಪ
ಮಗುವಾದ
ನನ್ನ ಮಗುವಾದ.
*
ಕಾಜೂರು ಸತೀಶ್

Sunday, October 16, 2016

ಸಾವು ಹೃದಯವನ್ನು ಪ್ರೀತಿಸುತ್ತದೆ

ಅಪ್ಪ ತೀರಿಕೊಂಡ ಮೇಲೆ ಒಂದು ವಿಷಯವನ್ನು ತಿಳಿಸಲೇಬೇಕು:


ಬೀಡಿ-ಸಿಗರೇಟು ಸೇದದ, ಹೆಂಡ ಮುಟ್ಟದ, ಪಾನ್ ಮಸಾಲ- ಹೊಗೆಸೊಪ್ಪು ಜಗಿಯದ, ಕೊಬ್ಬಿನಂಶವಿರುವ ಆಹಾರ ವಸ್ತುಗಳಿಂದ ದೂರವಿರುವ, ಹೋಟೆಲಿನಲ್ಲಿ ಟೀ-ಕಾಫಿ ಕುಡಿಯುವುದಾಗಲೀ, ಊಟ ಮಾಡುವುದಾಗಲೀ ಮಾಡದ, ನಿತ್ಯ ವಾಕಿಂಗ್ ಮಾಡುವ, ವಿಪರೀತ ಕೆಲಸ ಮಾಡುವ, ಶಿಸ್ತಿನಿಂದ ಬದುಕುವ, ಒಂದು ರೂಪಾಯಿ ಹೆಚ್ಚಿಗೆ ಸಿಕ್ಕರೂ ಅದನ್ನು ವ್ಯಕ್ತಿ/ಅಂಗಡಿಗಳಿಗೆ ಹಿಂತಿರುಗಿಸುವ(ಕಡಿಮೆ ಇದ್ದರೆ ಕೇಳಿ ಪಡೆದುಕೊಳ್ಳುವ), ತಮ್ಮ ಪಾಡಿಗೆ ತಾವು ಬದುಕುವಂತಹ ಜನರ ಹೃದಯವನ್ನು ಸಾವು ತುಂಬಾ ತುಂಬಾ ಪ್ರೀತಿಸುತ್ತದೆ!

Friday, October 14, 2016

ಸೈಫ್ ಜಾನ್ಸೆ ಕೊಟ್ಟೂರರು ಕಂಡ 'ಗಾಯದ ಹೂವುಗಳು'

ಗೆಳೆಯ ಕಾಜೂರು ಸತೀಶ್ ರವರ ಬಿಡಿ ಪದ್ಯಗಳನ್ನು ಹಾಗೂ ಮಲಯಾಳಂ ಕವಿತೆಯ ಅನುವಾದಗಳನ್ನು ಕಂಡುಂಡ ನನಗೆ ಗಾಯದ ಹೂಗಳು ಎಂಬ ಸಂಕಲನ ಓದುವ ಖುಷಿಯನ್ನು ಇಮ್ಮಡಿಗೊಳಿಸಿದೆ.

ಕವಿತೆಯೆಂದರೇನೆಂದೇ ತಿಳಿಯದ, ನನ್ನನ್ನೇ ಉಸಿರಾಡುತ್ತಿರುವ ಅಪ್ಪ-ಅಮ್ಮನಿಗೆ ಎಂದಾರಂಭಿಸುವ ಕವಿ ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ ಕವಿತೆಯ ತೆಕ್ಕೆಯೊಳಗೆ ಬಿದ್ದೆ.
ಖಿನ್ನತೆಯ ಶಿಖರದಲ್ಲಿದ್ದಾಗಲೂ ಒಂದು ಹೂವನ್ನೇ ಧ್ಯಾನಿಸುತ್ತಾ ಕೂರುವವನು ನಾನು. ಇಷ್ಟಾದರೂ ಬದುಕಿಕೊಳ್ಳಲು ಹಡೆದ ಕವಿತೆಗಳು ಎದೆಯ ಟನ್ನುಗಟ್ಟಲೆಯ ಭಾರವನ್ನು ಕೊಂಚ ಇಳಿಸಿವೆ
ಎನ್ನುವಂತಹ ಆಳದ ಮಾತುಗಳಿಂದ ತನ್ನ ಕವಿತೆಯ ಆಶಯಗಳನ್ನು ಕಟ್ಟಿಕೊಡುತ್ತಾರೆ.

ಸುಡುವ ತಣ್ಣನೆಯ ಹೂ ಹುಡುಕುತ್ತಾ ಎಂಬ ಶೀರ್ಷಿಕೆಯ ಅಡಿಯ ಮುನ್ನುಡಿಯಲ್ಲಿ ವಾಸುದೇವ್ ನಾಡಿಗ್ ಅವರು ಇಡೀ ಕವಿತಾ ಸಂಕಲನದ ಹಂದರವನ್ನು ಚಿಕಿತ್ಸಕ ಕಾಳಜಿಯಿಂದ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಲ್ಲಿ ಉದಾಹರಣೆಗಳಿಗಿಂತಲೂ ಹೆಚ್ಚು ಸ್ವಯಂ ಓದಿ ಅನುಭವಿಸುವ ತಾಜಾತನ ಆಪ್ತವಾಗಬಲ್ಲದು. ಪ್ರವೀಣ್ ಕುಮಾರ ದೈವಜ್ಞಾಚಾರ್ಯರವರು ಟಂಕಿಸಿರುವ ಬೆನ್ನುಡಿ ಬರಹದ ದಿಟ್ಟತೆ ಸಾರುವಂತೆ ಇವು ಯಾರು ಬೇಕಾದರೂ ಮುಡಿಯಬಹುದಾದ ಹೂಗಳು. ಸತೀಶ್ ಬದುಕು ಮತ್ತು ಕವಿತೆಯನ್ನು ಒಟ್ಟೊಟಿಗೆ ಸಮೀಕರಿಸುವ ಭರವಸೆಯ ಕವಿ. ಅವರ ಗಾಯದ ಹೂಗಳು ನಮ್ಮೊಲ್ಲೊಂದು ಆತ್ಮದೀಪ ಸ್ಫುರಿಸಬಲ್ಲದೆಂಬ ಭಾವ ಈ ಹೊತ್ತು ದಟ್ಟವಾಗಿದೆ ಎನ್ನುವ ಸಾಲುಗಳು ಸಂಕಲನದ ಪ್ರಾಣಕ್ಕೆ ದೀವಟಿಗೆ ಹಿಡಿಯಬಲ್ಲ ಕೈಯಾಸರೆಯಂತೆ ಕಾಣುತ್ತಿವೆ.

ಚುಟುಕೂ ಅಲ್ಲದೆ ನೀಳ್ಗವಿತೆಯೂ ಅಲ್ಲದ ನಡುಗಾತ್ರದ ಪರಿಮಿತಿಯಲ್ಲಿ ತನ್ನ ಪದ್ಯಗಳನ್ನು ಅಚ್ಚುಕಟ್ಟುತನದಿಂದ ನಿರ್ವಹಿಸುತ್ತಿರುವ ಕವಿ ಪದ್ಯ ಓದುವ ಕಾಲದ ದರ್ದುಗಳನ್ನು ಪ್ರಜ್ಞಾಪೂರಕವಾಗಿ ಮುಖಾಮುಖಿಯಾದಂತಿದೆ.

ಕವಿ, ಕವಿತೆ ಮತ್ತು ಚರಿತ್ರೆ ಎನ್ನುವ ಪದಗಳನ್ನು ಬಹುತೇಕ ಕವಿತೆಗಳಲ್ಲಿ ಮರು ಮಾತಿಗೆ ಕರೆಯುತ್ತಾರೆ. ಆ ಮಾತುಕತೆಯಲ್ಲೊಂದು ಸನಿಹವಿದೆ, ಗುದ್ದಾಟವಿದೆ, ಅನುಭವವಿದೆ, ಅನುಸಂಧಾನವಿದೆ. ಕವಿತೆ ಬರೀ ಕವಿತೆಗಾಗಿ ಅನ್ನಿಸದೇ ಬದುಕಿನ ಒಟ್ಟು ಅಭಿವ್ಯಕ್ತಿ ಎನಿಸಿದೆ.

ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ ಎನ್ನುವ ಸಾಲು ಸಾಕು ಉಳಿದದ್ದು ನೆಪವಾಗಿಬಿಡಬಹುದು.ಇನ್ನು ಕವಿಗೆ ಚರಿತ್ರೆಯೆಂದರೆ ಓದಿಕೊಳ್ಳುವ ಒಣ ಪ್ರಕ್ರಿಯೆಯೆನಿಸದೆ ಜೀವನದ ಪರಸ್ಪರ ಎದುರುಗೊಳ್ಳುವ ಸಂವಾದವಾಗಿಯೂ ಆಗಿಂದಾಗ್ಗೆ ನವೀಕರಿಸುವ ಇಂಧನದ ಒರತೆಯಂತೆಯೂ ಕಾಣಿಸಿದೆ. ಮುರಿದು ಕಟ್ಟುಕಟ್ಟುವ ಚಲನಶೀಲ ಕಾರ್ಯಗತಿಯೂ ಅನ್ನಿಸಿದೆ. ಆ ಕಾರಣಕ್ಕಾಗಿಯೇ ಇತಿಹಾಸದ ಕೊಂಡಿ ಕವಿತೆಗಳಲ್ಲಿ ಪ್ರತಿಧ್ವನಿಸಿದೆ.


ತನ್ನ ಸುತ್ತಲಿನ ತೆಕ್ಕೆಯಲ್ಲಿ ಹಾಯುವ ಕಾಡು ಬೀಜ ಮರ ಹೂವು ಹಣ್ಣು ಜಿಂಕೆ ಮೊಲ ಹಾವು ಹಕ್ಕಿ ಗೊಬ್ಬರಗಳಂಥಹ ನಿಸರ್ಗವಾದಿ ಪರಿಕರಗಳೇ ಕವಿತೆಯ ಮೂಲ ದ್ರವ್ಯವಾಗಿದ್ದಾಗಲೂ ಕವಿಯ ಧ್ಯಾನಕ್ರೇಂದ ಗಟ್ಟಿಯಾಗಿ ಮಾತನಾಡುತ್ತಿರುವುದು ಕಡೆಗಣಿಸಲ್ಪಟ್ಟ ಧ್ವನಿ ಮತ್ತು ಜಾಗತೀಕರಣದ ಸಿಡಿಲ ಸ್ಫೋಟಕ್ಕೆ ಕರಕಲಾದ ಮಿಣುಕು ನಕ್ಷತ್ರಗಳ ಬದುಕಿನ ಹಕ್ಕಿನ ಪ್ರಶ್ನೆಯನ್ನು ಕವಿಯ ತಾಕಲಾಟಗಳು ತಾರ್ಕಿಕ ಅಂತ್ಯಕ್ಕೆ ದಾಟಿಸುವ ಪ್ರಯತ್ನದಂತೆ ಕಾಣಿಸುತ್ತವೆ.

ಇಲ್ಲಿನ ಕವಿತೆಗಳಲ್ಲಿ ನಳನಳಿಸುವ ಜೀವಂತಿಕೆ ಇದೆ. ಶಬ್ದಗಳಿಗೆ ಸಂವೇದನೆಯಿದೆ. ಕಟ್ಟ ಕಡೆಯ ಕ್ಷಣಗಳಲ್ಲಿಯೂ ಬದುಕಿತೋರಿಸುವ ತ್ರಿವಿಕ್ರಮ ಛಲವಿದೆ. ಜಗತ್ತಿನ ಸಮಸ್ತವನ್ನು ಅಪ್ಪಿಕೊಳ್ಳುವ ಜೀವಪರತೆ ಇದೆ. ತುಳಿಯಲ್ಪಟ್ಟ ದನಿಗಳಿಗೆ ಪ್ರಾಣಮಿತ್ರನಂತೆ ಮಿಡಿಯುವ ಕವಿ ಗಹನವಾದ ನೋವನ್ನೂ ಕುಲುಮೆಯಲ್ಲಿ ಕಾಯಿಸಿ ಬಡಿದು ತಿದ್ದಿ ತೀಡಿ ದಾಟಿಸುವ ನುರಿತ ಲೋಹಗಾರನಂತೆ. ಇಲ್ಲಿ ಉರಿಗಟ್ಟುವ ಪ್ರತಿ ನೋವು ಹೆಪ್ಪುಗಟ್ಟಿದ ತಣ್ಣನೆಯ ರೂಪಾಂತರಗಳಲ್ಲಿ ಲೋಕದ ದೇಹ ಮತ್ತು ಮೆದುಳುಗಳೊಳಗೆ ದಾಟಿ ಆವರಿಸುವ ಕ್ರಮ ಕವಿಯ ಗಟ್ಟಿತನಕ್ಕೆ ಪುರಾವೆ ಒದಗಿಸುತ್ತಿವೆ.

ಕವಿ ತನ್ನ ಸುತ್ತಲೂ ತಾನೇ ಗರೆ ಎಳೆದುಕೊಂಡ ಗಮ್ಯಕೇಂದ್ರವನ್ನು ಒಡೆದು ಹೊರಬರಬೇಕಿದೆ. ತಪ್ಪಿಹೋದ ಅನುಭವದ ಕಡೆಗೂ ನೋಟ ಹಾಯಿಸಬೇಕಿದೆ. ಕಳಚಿಕೊಂಡ ನೆಲೆಗಳನ್ನು ಮರು ವಿಮರ್ಶಿಸಬೇಕಿದೆ;ಕಟ್ಟಿ ಬದುಕಿಸಬೇಕಿದೆ. ನೆಲಕ್ಕೆ ಪಿಡುಗಿನಂತೆ ಕಾಡುತ್ತಿರುವ ಕೋಮುವಾದ, ಲಂಪಟ, ದುರಾಸೆಯಿಂದ ಹುಟ್ಟುವ ವ್ಯಕ್ತಿಕೇಂದ್ರಿತ ಬದುಕಿನ ಅಧ್ವಾನಗಳು,ಮಹಿಳಾ ಅಸಮಾನತೆ, ನಗರಗಳು ಹಡೆದ ಅನಾಮಿಕ ಸರಪಳಿಗಳ ಕಡೆಗೊ ಕಾಜೂರರ ಕಾವ್ಯ ಹೊರಳುವ ಕಾಲವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇನೆ.
ಬದುಕಿನ ರಾಚುವ ರೌದ್ರವ ದಾರುಣತೆಯನ್ನು ಹೇಳುವ ಮಾರ್ಗಕ್ಕೂ ಸತೀಶ್ ರವರ ಕಾವ್ಯ ಝರಿಗೆ ಜಾಗವಿರಲಿ.

ವಿಮರ್ಶಕರ ಕಸರತ್ತಿನಾಚೆಗೂ
ಬೆನ್ನುಡಿಯ ಬೆಂಬಲದಾಚೆಗೂ
ಪರಿಚಯಕರ ಸಂಕಟಗಳಾಚೆಗೂ
ಓದುಗರ ಹಪಾಹಪಿಗಳಾಚೆಗೂ
ಈ ಕೃತಿ ಓದಿನ ಖುಷಿ ಅನುಭವಿಸಲು ರವಷ್ಟನ್ನು ಖಂಡಿತಾ ಉಳಿಸಿಕೊಟ್ಟಿದೆ. ಅದಕ್ಕಾಗಿ ಕಾಜೂರು ಸತೀಶ್ ಅಭಿನಂದನಾರ್ಹರು.
*

ಸೈಫ್ ಜಾನ್ಸೆ, ಕೊಟ್ಟೂರು

ಇಂಥವರಿದ್ದಾರೆ ನಮ್ಮ ನಡುವೆ (ದಿನಚರಿ -23)

ಮನುಷ್ಯರು ನಾವು!

ಯಾರದಾದರೂ ತಲೆಯೊಡೆದು ಖಜಾನೆಗಳ ನಿರ್ಮಿಸಿಕೊಳ್ಳುತ್ತೇವೆ. ಬಂಗಲೆಗಳ ಕಟ್ಟಿಕೊಳ್ಳುತ್ತೇವೆ. ಆಧುನೀಕತೆಯ ಸಿ.ಸಿ. ಕ್ಯಾಮರಾಗಳ ಕಣ್ಣಿಗೆ ಮಣ್ಣೆರಚಿ, ಕಣ್ಣುಮುಚ್ಚಿ ಹಾಲು ಕುಡಿದು ಸಭ್ಯತೆಯ ಸೋಗುಹಾಕಿಕೊಳ್ಳುತ್ತೇವೆ. ಹೊಟ್ಟೆ ತುಂಬಿದಷ್ಟೂ ಆಸೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತೇವೆ; ಪೂರೈಕೆಗೆ ಅನ್ಯಾಯದ ಹಾದಿ ಹಿಡಿಯುತ್ತೇವೆ. ಅದನ್ನೇ ತಲೆತಲಾಂತರಗಳಿಗೆ ಹಂಚಿಬಿಡುತ್ತೇವೆ...
*
ಆದರೆ, ಇವರಿಬ್ಬರು?!
ಮೇಲಿನ ಅಷ್ಟೂ ಮಾತುಗಳನ್ನು ಸುಳ್ಳಾಗಿಸಿಬಿಡುತ್ತಾರೆ!


*

ಗೆಳೆಯ ಜಾನ್ ಸುಂಟಿಕೊಪ್ಪ ಅವರು ಪರಿಚಯಿಸಿದ ಇವರ ಬಗ್ಗೆ ಬರೆಯಲೇಬೇಕೆಂದು ಕುಳಿತೆ. ಇವತ್ತಿಗೆ ಆರನೇ ದಿನ!!

ಮೊದಲ ದಿನ ಇವರಿಬ್ಬರ ಬಗ್ಗೆ ಒಂದು ವಾಕ್ಯ ಬರೆದೆ. ಆಮೇಲೆ ಅದು ಮುಂದಕ್ಕೆ ಹೊರಳಲೇ ಇಲ್ಲ. ಎರಡನೇ ದಿನ ಒಂದಕ್ಷರವೂ ಮೊಳೆಯಲಿಲ್ಲ. ಮೂರನೇ ದಿನ ನಾಲ್ಕಾರು ಸಾಲುಗಳು ಹುಟ್ಟಿದವು- ವಸ್ತುಸ್ಥಿತಿಯ ನೇರಾನೇರ ನಿಲ್ಲಬಲ್ಲ ಕಸುವನ್ನು ಕಳೆದುಕೊಡಿದ್ದವು. ನಾಲ್ಕನೇ ದಿನ ಬರೆಯಲೇಬೇಕೆಂಬ ಹಠತೊಟ್ಟು ಕುಳಿತೆ; ಆಗಲಿಲ್ಲ. ಐದನೇ ದಿನವೂ ಹೀಗೇ...

ಹೃದಯವಷ್ಟೇ ಬರೆಯಬಲ್ಲ ಸಾಲುಗಳನ್ನು ನಾನೇ ಬರೆಯಲು ಹೊರಟದ್ದರಿಂದಾಗಿಯೇ ಹೀಗೆ ತಿಣುಕಾಡಿದ್ದು, ತಿಣುಕಾಡುತ್ತಿರುವುದು!

*

ಅಂದ ಹಾಗೆ ನಾನು ಬರೆಯಲು ಹೊರಟ ಇವರಿಬ್ಬರು- ಬೆಂಗಳೂರಿನ ಶ್ರೀ ಗುರುಪ್ರಸಾದ್ ಎನ್. - ಶ್ರೀಮತಿ ಪೂರ್ಣಿಮಾ ಅಯ್ಯಂಗಾರ್ ದಂಪತಿಗಳು.ಅವರ ಮೇರು ವ್ಯಕ್ತಿತ್ವವನ್ನು ಬರೆಯಬೇಕೆಂದುಕೊಂಡಾಗಿನಿಂದ(ಜೂನ್ ೧೮ರಿಂದ) ಇಲ್ಲಿಯವರೆಗೆ ನಾಲ್ಕು ತಿಂಗಳುಗಳೇ ಸರಿದುಹೋಗಿವೆ.



ಕುಗ್ರಾಮದಲ್ಲಿರುವ ಸೌಲಭ್ಯವಂಚಿತ ಸರ್ಕಾರಿ ಶಾಲೆಯ ಮಕ್ಕಳೇ ಇವರ ಟಾರ್ಗೆಟ್. ಎಂಥ ಕುಗ್ರಾಮವಾದರೂ ಸರಿ, ತಿಂಗಳಾನುಗಟ್ಟಲೆ ಯೋಚಿಸಿ, ಯೋಜಿಸಿ ಅಂತಹ ಶಾಲೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಪೋಷಕರೊಂದಿಗೆ, ಮಕ್ಕಳೊಂದಿಗೆ ದಿನ ಕಳೆಯುತ್ತಾರೆ. ಕಂಪ್ಯೂಟರ್, ಅಮೂಲ್ಯವಾದ ಪುಸ್ತಕಗಳು, ಪ್ರತೀ ಮಗುವಿಗೆ ಹೈಜೀನ್ ಕಿಟ್, ನೋಟ್ ಪುಸ್ತಕಗಳು, ಕ್ರೀಡಾ ಸಾಮಗ್ರಿಗಳು, ಬಟ್ಟೆ , ಶೂ- ಸಾಕ್ಸ್, ವಿದ್ಯುತ್  ಸೌಲಭ್ಯವಿಲ್ಲದ ಮಕ್ಕಳಿಗೆ ಸೋಲಾರ್ ಲ್ಯಾಂಪ್ .. ಹೀಗೆ ಸರ್ಕಾರ ಮಾಡಬೇಕಾದ ಕೆಲಸವನ್ನು ತಾವು ಮಾಡಿ, ಪ್ರತೀ ಮಗುವಿನಲ್ಲೂ ಭವ್ಯ ಭಾರತದ ಕನಸ್ಸನ್ನು ಕಟ್ಟಿಕೊಳ್ಳುತ್ತಾರೆ. ಶಾಲೆಯೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಾ ಸಲಹೆ-ಸಹಕಾರ ನೀಡುತ್ತಾರೆ. ಶಾಲೆಗಳಿಂದಾಚೆಗೂ ಅವರ ಸೇವೆ ವಿಸ್ತರಿಸಿಕೊಳ್ಳುತ್ತಾರೆ.


*

ಸಿಕ್ಕಿದ್ದನೆಲ್ಲ ಕೊಳ್ಳೆಹೊಡೆಯುವ ವರ್ತಮಾನದ ಭ್ರಷ್ಟ ವ್ಯವಸ್ಥೆಯ ನಡುವೆಯೂ ಇಂಥವರಿದ್ದಾರೆ ಎನ್ನುವುದು ಮನುಷ್ಯತ್ವದ ಮೇಲೆ, ಮನುಷ್ಯರ ಮೇಲೆ ಭರವಸೆಯನ್ನು ಮೂಡಿಸುತ್ತದೆ. ಯಾವ ಫಲಾಪೇಕ್ಷೆಯ ಹಂಬಲವಿಲ್ಲದೆ ಪರರಿಗಾಗಿ ತಮ್ಮ ಬದುಕನ್ನೇ ತೆತ್ತುಕೊಳ್ಳುವ ಇಂತಹ ಉದಾತ್ತ ವ್ಯಕ್ತಿತ್ವಗಳ ಸಂಖ್ಯೆ ಸಾವಿರವಾಗಲಿ.

ಶರಣು ತಮ್ಮಿಬ್ಬರಿಗೆ!

*
ಕಾಜೂರು ಸತೀಶ್

Saturday, September 17, 2016

ಅಪ್ಪ ಹೋದರು

ಅಪ್ಪ ಹೋದರು
ಮರಳಿ ಬರಬೇಕಾದ ಹಾದಿಯಲ್ಲಿ
ಮುಗಿಯದ ಕರ್ಫ್ಯೂ.
*

ಅಪ್ಪ ಹೋದರು
ಇನ್ನಾವ ಮೀಸೆ-ಗಡ್ಡಗಳು ಚುಚ್ಚಲು ಬರುತ್ತವೆ
ನನ್ನ ಕೆನ್ನೆಯ ಮೇಲೆಲ್ಲ?
*

ಅಪ್ಪ ಹೋದರು
ಯಾರೋ ಈಗ ನನ್ನ ಹೆಗಲ ಮೇಲೆ ಕುಳಿತಿದ್ದಾರೆ
ಅಪ್ಪನಿಗಿಂತಲೂ ತೂಕ!
*


ಅಪ್ಪ ಹೋದರು
ನನ್ನ ಹೃದಯವೀಗ ನಿರುದ್ಯೋಗಿ.
ತಾತ್ಕಾಲಿಕವಾಗಿ ಕರವಸ್ತ್ರದ ಕೆಲಸ ಕೊಟ್ಟಿದ್ದೇನೆ!
*

ಅಪ್ಪ ಹೋದರು
ಊರ ಮುದಿಕೈಗಳು ಕಿತ್ತೆಸೆದ ಬಳೆಯ ತೊಡಲು, ಬೊಟ್ಟು ಇಡಲು ಹೇಳಿದೆ ಅಮ್ಮನಿಗೆ.
ಎದ್ದು ಬರುವಂತಿರುವ ಅಪ್ಪನ ಫೊಟೊ ಕೊಡ ಅದನ್ನೇ ಹೇಳುವಂತಿದೆ
*

ಅಪ್ಪ ಹೋದರು
ಈ ನಾಯಿಗೇಕೆ ವಾಸನೆ ಸಿಗಲಿಲ್ಲ
ಸಿಕ್ಕಿದ್ದಿದ್ದರೆ ಅದು ಈಗ ಇಲ್ಲಿರುತ್ತಿರಲಿಲ್ಲ.
*

ಅಪ್ಪ ಹೋದರು
ಅದೆಂಥಾ ಮರೆವೋ ಏನೋ ಅವರಿಗೆ-
ನನ್ನ ಮೊಬೈಲ್ ಸಂಖ್ಯೆಯನ್ನೂ ಮರೆಯುವಷ್ಟು!
*

ಕಾಜೂರು ಸತೀಶ್

Friday, September 16, 2016

ಅಪ್ಪ


ನಾ ಬರುವ ದಾರಿ ಕಾಯುತ್ತಿದ್ದ ಅಪ್ಪ
ಈಗ ಈ ದಾರಿಗಳ ಅನಾಥವಾಗಿಸಿದ
ಈ ಕೋಣೆಗಳ ಮಾತು ಕಸಿದ
ಹಲವು ಬಟ್ಟೆಗಳ ಬಿಟ್ಟುಹೋದ
ನನ್ನ ಕಣ್ಣೀರ ಬಸಿದ
ಕನ್ನಡಕ ಕಳಚಿಟ್ಟ
ನನ್ನೆದೆಯೊಳಗೆ ಸಾಗರಗಳ ಸುರಿದುಹೋದ...
~

ಸಾವು ಕಡೆಗೂ ಅವನ 'ಹೃದಯ'ದ ಜೊತೆಗೇ ಆಟವಾಡಿತು
'ಆ ನೇರಳೆ ಮರದ ಮೇಲಿದೆ' ಎಂದು ಸುಳ್ಳು ಹೇಳಲಿಲ್ಲ ಸಾವಿನ ಬಳಿ
ಹೀಗೆ ಇದ್ದಕ್ಕಿದ್ದಂತೆ ಹೊರಟೇಬಿಟ್ಟರು ಅಪ್ಪ
ಹೋಗುವಾಗ ನನಗೆ ಸಾಯುವುದನ್ನೂ ಕಲಿಸಿ ಹೋದರು.
~

ಬೇಡ ಬೇಡವೆಂದರೂ ಮಣ್ಣಿನ ಜೊತೆಗೇ ಆಟವಾಡುತ್ತಿದ್ದ ಅಪ್ಪ
ಕಡೆಗೂ ನನ್ನ ಮಾತು ಕೇಳಲಿಲ್ಲ
ಹಠಾತ್ತಾಗಿ ಕೈ ಹಿಡಿದೆಳೆದ ಮಣ್ಣು
ನನ್ನ ಮುದ್ದಿಸಲು ಅವನ ಮತ್ತೆ ಬಿಡಲಿಲ್ಲ ಇತ್ತ...
~

ಎಷ್ಟು ರಾತ್ರಿ ಕಾದಿದ್ದೆ ಅಪ್ಪನ ಬರುವಿಕೆಗಾಗಿ!
ಕತ್ತಲಿಗೆ, ಬೆವರಿಗೆ ಕರುಣೆಯಿಲ್ಲ ಎಂದು ತಿಳಿದಿದ್ದು ಆಗಲೇ
ಬೆವರು, ಮಣ್ಣು, ಮಳೆಯಲ್ಲಿ ತೋಯ್ದ ಪುಸ್ತಕ-ಪತ್ರಿಕೆಗಳು
ದುಃಖವಿಲ್ಲದೆ ಓದಿಸಿಕೊಂಡಿದ್ದವು ಆವಾಗಲೆಲ್ಲ
*

ಕಾಜೂರು ಸತೀಶ್

Saturday, September 10, 2016

ಸಾವಿನ ಮನೆ: ಸಹಾಯ ಮತ್ತು ಶೋಷಣೆ

ಸಾವು ಸಹಜ. ಈ ಸತ್ಯ ಎಲ್ಲರಿಗೂ ತಿಳಿದಿದ್ದರೂ ಪ್ರೀತಿಪಾತ್ರರನ್ನು ಬೀಳ್ಕೊಡುವುದು ಅಷ್ಟು ಸುಲಭವಲ್ಲ. ಎದೆಯೊಳಗೆ ಯಾರೋ ಮೆಣಸಿನ ಹೊಗೆ ಹಾಕಿದ ಹಾಗೆ- ಕಣ್ಣು, ಮೂಗುಗಳನ್ನು ತೇವಗೊಳಿಸುತ್ತಲೇ ಇರುತ್ತದೆ. ಸಹಜ ಸ್ಥಿತಿಗೆ ಮರಳುವುದು ಸಾಧ್ಯವಿಲ್ಲದಿದ್ದರೂ ಮರೆಯುವ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡು ಬದುಕಬೇಕಾದ ಸ್ಥಿತಿಯನ್ನು ಸ್ಥಾಪಿಸಿಕೊಳ್ಳುವುದು ನಮಗಿರುವ ಸವಾಲು; ಪ್ರಕೃತಿಯ ನಿಯಮ.

ಸಾವಿನ ಮನೆ ಮತ್ತು ಸಹಕಾರ

'ಸಾವು' ಎಂದೊಡನೆ ಸಾವಿನ ಮನೆಯಲ್ಲಿ ಜನಜಂಗುಳಿ ನೆರೆಯುತ್ತದೆ. ತಾವು ಸತ್ತರೂ ಹೀಗೇ ಜನಗಳು ಸೇರಿ ಅಂತ್ಯಸಂಸ್ಕಾರಕ್ಕೆ ಸಹಾಯ ಮಾಡಲಿ ಎಂಬ ದೂರಾಲೋಚನೆ ಅದರ ಹಿಂದಿರುವ ಸಂಗತಿ. ವಾಸನೆ ಬರದಿರಲೆಂದು ಅಗರಬತ್ತಿ ಹಚ್ಚುವ, ಕುಟುಂಬಕ್ಕೆ ನೆರವಾಗಲೆಂದು ಹಣವನ್ನು ಇಡುವ ಕ್ರಮವೂ ಇದೆ. ಜನ ಹಣದ ಅಪೇಕ್ಷೆಯಿಲ್ಲದೆ ಸಾವಿನ ಮನೆಯಲ್ಲಿ ದುಡಿಯುತ್ತಾರೆ. ಶತ್ರು-ಮಿತ್ರರೆನ್ನದೆ, ಜಾತಿ ಭೇದವಿಲ್ಲದೆ ಎಲ್ಲರೂ ಒಟ್ಟಾಗುತ್ತಾರೆ.[ಶವಸಂಸ್ಕಾರದ ಸಿದ್ಧತೆ ನಡೆಸುವ ಗುಂಪು ಹೆಂಡವನ್ನು ಬಯಸುವುದು ಬೇರೆ ಮಾತು!]


ಸಾವು ಮತ್ತು ಶೋಷಣೆ

ಸಾವಿನ ಮನೆಯಲ್ಲಿ 'ಶೋಷಣೆ'ಗೆ ಹೆಚ್ಚಿನ ಪಾಲು ದಕ್ಕುತ್ತದೆ. ಅದು ಜನರ ಗುಸುಗುಸು ಪಿಸಪಿಸಗಳಿಂದ ಮೊದಲ್ಗೊಳ್ಳುತ್ತದೆ. ಯಾರು ಹೇಗೆಲ್ಲ ಅಳುತ್ತಾರೆ, ಅವರ ಬಾಯಿಂದ ಯಾವೆಲ್ಲ ದುಃಖತಪ್ತ ನೆನಪುಗಳು ಅಳುತ್ತಾ ಹೊರಬರುತ್ತವೆ ಎನ್ನುವುದಕ್ಕಾಗಿ ಅವರ ಕಣ್ಣು-ಕಿವಿಗಳು ಕಾದು ಕೂತಿರುತ್ತವೆ. ಅಂತಹ ದುಃಖದ ಕ್ಷಣದಲ್ಲೂ ಉಟ್ಟ ಬಟ್ಟೆಯನ್ನು ಕಳಚಿ ಬಿಳಿ ಬಟ್ಟೆ ತೊಡುವಂತೆ ಮನೆಮಂದಿಯವರನ್ನು ಬಲವಂತ ಮಾಡಲಾಗುತ್ತದೆ. ಒಬ್ಬೊಬ್ಬ 'ಸಾಂಸ್ಕೃತಿಕ ಚಿಂತಕ'ನೂ ಸಂಪ್ರದಾಯದ ಗೆದ್ದಲು ಹಿಡಿದ ಒಂದೊಂದು ಸೌಟು ಹಿಡಿದು ಮನೆಯವರನ್ನು ಕಲಕಲು ತೊಡಗುತ್ತಾನೆ.

ಶವವನ್ನು ಸ್ನಾನ ಮಾಡಿಸುವ ಕೆಟ್ಟ ಪದ್ಧತಿಯು ಒಂದು 'ಮನರಂಜನಾ ಸಂಗತಿ'ಯಾಗುತ್ತಿರುವುದು ಮನುಷ್ಯನ ವಿಕೃತ ಮನಸ್ಥಿತಿಗಳನ್ನು ನೆನಪಿಸುತ್ತದೆ. ಅಂಗಾಂಗಗಳನ್ನು ವರ್ಣಿಸುವ, ಕಿಸಕ್ಕೆಂದು ನಗುವ ವರ್ತನೆಗಳು ಮನೆಯವರನ್ನು ಜೀವಂತ ಶವವಾಗಿಸುತ್ತವೆ.ಮನೆಮಂದಿಯಿಂದ ಶವದ ಸ್ನಾನ ಮಾಡಿಸಿ ಅವರ ದುಃಖವನ್ನು ಹೆಚ್ಚಿಸಿ ಶೋಷಿಸುವ ಪದ್ಧತಿ ನಮ್ಮ ನಡುವೆ ಬೀಡುಬಿಟ್ಟಿದೆ.

ಸ್ತ್ರೀ ಶೋಷಣೆ

ಸಾವಿನ ಮನೆಯಲ್ಲಿ ಸ್ತ್ರೀಯರ ಶೋಷಣೆಯಂತೂ ಘೋರ. ಹೆಂಡತಿಯ ತಾಳಿ ಕಳಚುವುದು, ಕೈಬಳೆಗಳನ್ನು ಪುಡಿಗಟ್ಟುವುದು, ಬೋಳು ಕೈ, ಬೋಳು ಹಣೆ, ಬೋಳು ಕುತ್ತಿಗೆಯಲ್ಲಿರಿಸಿ ಶವದ ಜೊತೆ ಆಟವಾಡಿಸುವ ಹೇಯ ವಿಧಾನಗಳು ಎದೆಬಿರಿಸಿಬಿಡುತ್ತವೆ. ಹೀಗೆ ಶೋಷಿಸುವವರಲ್ಲಿ ಪುರುಷರಷ್ಟೇ ಪಾಲು ಮಹಿಳೆಯರದ್ದೂ ಇದೆ.
ಅಕಾಸ್ಮಾತ್ ಮಹಿಳೆಯೊಬ್ಬಳು ಅವನ್ನೆಲ್ಲ ನಿರಾಕರಿಸಿದಳೆಂದರೆ ಮುಗಿಯಿತು - ಹೆಂಗಸರ ಮಾತಿಗೊಂದು ದೊಡ್ಡ ಸರಕು ಸಿಕ್ಕಿಬಿಟ್ಟಂತೆ!

ಮುಂದುವರಿಯುವ ಶೋಷಣೆ

ಅಂತಿಮ ಕ್ರಿಯಾವಿಧಿಯ ಸಂದರ್ಭದಲ್ಲೂ ಶೋಷಣೆಯು ಶೃಂಗವನ್ನು ಮುಟ್ಟಿರುತ್ತದೆ. ಶವದ ಸುತ್ತ ಹತ್ತಾರು ಸುತ್ತು ಬರುವುದು, ಮಡಿಕೆ ಒಡೆಯುವುದು ಇತ್ಯಾದಿ ಇತ್ಯಾದಿ. ಶವಸಂಸ್ಕಾರದ ನಂತರವೂ ಶೋಷಣೆ ಮುಂದುವರಿಯುತ್ತದೆ. ಸಮಾಧಾನಪಡಿಸಬೇಕಾದ ಮನಸುಗಳೇ ಸಂಪ್ರದಾಯದ ಅಮಲೇರಿಸಿಕೊಂಡು ಹೀಗೆಲ್ಲ ನರಳಿಸುತ್ತವೆ.

ದುಃಖವನ್ನು ಹಂಚಿಕೊಳ್ಳಲಾಗುವುದಿಲ್ಲ

ನಮ್ಮ ನಮ್ಮ ಆಪ್ತರನ್ನು ಕಳಕೊಂಡ ದುಃಖ ನಮಗಷ್ಟೇ ಆಗುತ್ತದೆ. ದುಃಖವನ್ನು ಹೆಂಡದ ಹಾಗೆ, ಹಾಸಿಗೆಯ ಹಾಗೆ ಹಂಚಿಕೊಳ್ಳಲು ಬರುವುದಿಲ್ಲ. ಹಾಗಾಗಿ ಮತ್ತೊಬ್ಬರಿಗೆ ಅದರ ಅನುಭವವಾಗುವುದಿಲ್ಲ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಸಹಜ ಸ್ಥಿತಿಗೆ ಹೊಂದಿಕೊಳ್ಳಲು ಬಿಡುವುದರ ಬದಲು ಮತ್ತಷ್ಟೂ ಹಿಂಸೆಯ ಕಂದಕಕ್ಕೆ ನೂಕಲಾಗುತ್ತದೆ.

ಆಯ್ಕೆಗಳು

ಇಷ್ಟೆಲ್ಲ ಹೇಳಿದ ಮೇಲೆ ನನಗೆ ಎರಡು ಆಯ್ಕೆಗಳಿವೆ: ನನ್ನ ಮರಣದ ನಂತರ ನನ್ನ ಕಣ್ಣು ಮತ್ತಿತರ ಅಂಗಗಳನ್ನು ದಾನ ಮಾಡಿ ಒಂದೋ ನನ್ನ ದೇಹವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸುವುದು ಅಥವಾ ಸತ್ತ ಕೂಡಲೇ ಯಾವುದಾದರೂ ನಿರ್ಜನ ಪ್ರದೇಶದಲ್ಲಿ ಎಸೆದು ಬರುವಂತೆ ಮಾಡುವುದು . ಕನಿಷ್ಟ ಬ್ಯಾಕ್ಟೀರಿಯಾ ವೈರಸ್ಸುಗಳಿಗಾದರೂ ನನ್ನಿಂದ ಉಪಯೋಗವಾಗಲಿ.

ಬುದ್ಧಂ ಶರಣಂ ಗಚ್ಛಾಮಿ.
*

ಕಾಜೂರು ಸತೀಶ್

Monday, August 29, 2016

ಅಪ್ಪ



ಅಪ್ಪತೀರಿಕೊಂಡರು.
ನನ್ನೆದೆಯೊಳಗೆ
ಅಪ್ಪನೆಂಬೊ ಮಗು ಬೆಳೆಯುತಿದೆ
ನಾನೀಗ ಅಪ್ಪನ ಅಪ್ಪ.
*

ಸಂತೆಯಲ್ಲಿ ನಾವಿಬ್ಬರು ನಡೆದುಹೋಗುತ್ತಿದ್ದೆವು
ನನ್ನ ಕಿರುಬೆರಳ ಹಿಡಿದುಕೊಂಡ ಅಪ್ಪನ ಕೈ ಜಾರಿತು
ಎಲ್ಲೂ ಹೋಗಿಲ್ಲ ಬಿಡಿ
ಹುಡುಕಿ ತರುವೆ ಈ ಜನಜಂಗುಳಿಯಿಂದ ಅಪ್ಪನನ್ನು
*

ನನ್ನ ಕಣ್ಣೊಳಗೊಂದು ಸಮುದ್ರವಿದೆಯೆಂದುಕೊಂಡಿದ್ದೆ
ಅಪ್ಪ ಹೋದ ಮರುದಿನವೇ
ಹನಿ ನೀರಿಗೂ ಬರ ಬಂದಿದೆ
ದೋಣಿ ನಿಂತುಹೋಗಿದೆ
ಅಮ್ಮ ಬಾಯಾರಿದ್ದಾಳೆ.
*
ಒಂದು ಕ್ಷಣ
ಒಂದೇ ಒಂದು ಕ್ಷಣ
ಅಪ್ಪನಿಗೆ ಜೀವ ಬಂದಿದ್ದರೆ
ನಾನು ಅಳುತ್ತಿರಲಿಲ್ಲ
ಅಪ್ಪ ನನ್ನ ನೆನೆದು ಅಳುವುದನ್ನೇ ನೋಡುತ್ತಿದ್ದೆ.
*

ಅಪ್ಪ ಎಷ್ಟು ಶ್ರಮಜೀವಿ
ಇನ್ನೀಗ ಕಡಲೂ ಕೂಡ ಅನಾಥ
*

ಮಧ್ಯರಾತ್ರಿಯಲ್ಲಿ ಮನೆಗೆ ಬಂದೆ
ಅಪ್ಪ ಮಲಗಿದ್ದರು
ನಿದ್ರಿಸುತ್ತಿದ್ದರು
ಎಚ್ಚರಿಸಲು ಮನಸು ಬರಲಿಲ್ಲ.
*
ಹೊರಟುಹೋಗಿ ವಾರವಾಯಿತು
ಅಪ್ಪನಿಗೆ ನನ್ನ ಮೊಬೈಲ್ ಸಂಖ್ಯೆ ಮರೆತುಹೋಗಿದೆ
*

Sunday, August 21, 2016

ಅಯ್ಯಂಗಾರಿಯ ಹತ್ತುಪೈಸೆಯ ಬ್ರೆಡ್ಡು



'ಯಾವುದೇ ವ್ಯವಸ್ಥೆಯಾದರೂ ಪರಾಕಾಷ್ಠೆಯ ಹಂತವನ್ನು ತಲುಪಿ ನಿಂತಾಗ ತನ್ನೊಳಗೆ ಕುದಿಯುತ್ತಿರುವ ಮನಸ್ಥಿತಿಯಿಂದಲೇ ಸಾಮಗ್ರಿಗಳನ್ನು ಆಯ್ದುಕೊಂಡು ಪರ್ಯಾಯವನ್ನು ರೂಪಿಸುತ್ತದೆ. ಜಗತ್ತು ಅದನ್ನು ಸದಾ ಸಾಧಿಸುತ್ತಲೇ ಬಂದಿದೆ. ನಾನು ಇಲ್ಲಿ ಅಂತಹದೇ ದಾಳಿಯನ್ನು ಕಾಣಬಯಸುತ್ತೇನೆ..'

ತಮ್ಮ ಕಾವ್ಯದ ದಾರಿ ಮತ್ತು ಚಹರೆಗಳ ಕುರಿತು ಹೀಗೆ ಬರೆದುಕೊಳ್ಳುವ ‪ಸೈಫ್ ಜಾನ್ಸೆ ಕೊಟ್ಟೂರು‬ ಅವರ ಮೊದಲ ಕವನ ಸಂಕಲನ ಅಯ್ಯಂಗಾರಿಯ ಹತ್ತುಪೈಸೆಯ ಬ್ರೆಡ್ಡು


ಕಾಲದ ಹಿಂಸೆ, ಬದುಕಿನ ಅಸಹಾಯಕತೆಗಳು ಮತ್ತು ಅವುಗಳನ್ನೇ ಅಪ್ಪಿ ಬದುಕಬೇಕಾದ ಅನಿವಾರ್ಯತೆಯನ್ನು ವಿಶಿಷ್ಟ ನುಡಿಚಿತ್ರಗಳಲ್ಲಿ ಕೊಟ್ಟೂರರು ಕಟ್ಟಿಕೊಡುತ್ತಾರೆ. ಕವಿತೆಗಳು ಇಂತಹ ಅಸಹಾಯಕತೆಗಳನ್ನು, ಅಮಾನುಷ ಸಂಗತಿಗಳನ್ನು ಬೆನ್ನುಹತ್ತಿವೆಯೆಂದರೆ- ಮಾನವೀಯತೆಯ ತುಡಿತವೇ ಅವುಗಳ ಕೇಂದ್ರಪ್ರಜ್ಞೆ ಎಂದರ್ಥ.
‪ಡಾ. ಅರುಣ್ ಜೋಳದಕೂಡ್ಲಿಗಿ‬ ಅವರು 'ಬೆನ್ನುಡಿ'ಯಲ್ಲಿ ಹೇಳುವಂತೆ 'ಸೈಫ್ ಪದ್ಯಗಳನ್ನು ಓದಿದಾಗ, ನಮ್ಮ ಕಾಲದಲ್ಲಿ ಉಸಿರುಗಟ್ಟಿದ ಧ್ವನಿ ಇಲ್ಲಿನ ಒಳತೋಟಿಯಾಗಿ ಉಸಿರಾಡಿದ' ಅನುಭವವನ್ನು ನೀಡುತ್ತದೆ:

~ಅವನು ದೊಡ್ಡ ದನಿಯಲಿ ಪಾಠ ಹೇಳುತ್ತಿರುವಾಗ
ತೂಕಡಿಸುತ್ತಿದ್ದ ಹುಡುಗ
ಬೆಚ್ಚಿಬಿದ್ದು ಮೈ ಕೊಡವಿದ್ದಾನೆ
ನಾನು ಹೇಳಿಯೇ ಇಲ್ಲವೆಂದು
ದೇವರು ಆರೋಪಿಸುತ್ತಿದ್ದಾನೆ.
[ರಕ್ತಬಾನಿ/೭]

~ಹಿಟ್ಟಾದ ಮಾಂಸದ ಚೂರೊಂದು
ಜೀವ ಪಡೆದು
ಗಂಟಲಲ್ಲಿ ಕೂತು ಕೂಗಿದ ಹಾಗೆ.
[ಕುಸಿತ/೫]

~ಕುರ್ಚಿಗಳಾಗಿರುವುದರಿಂದಲೋ ಏನೋ
ಕುಳಿತುಕೊಳ್ಳುವ ಹಂಬಲ
ಹೊರಟುಹೋಗಿದೆ.
[ಗೋರಿಗಳಿವೆ/೩೩]

~ಬಿಸಿಯ ಉಮ್ಮಳಿಕೆ ತಾಳಲಾರದೆ
ಸೂರ್ಯ ತನ್ನ ನೆರಳನ್ನೇ ವಾಂತಿಮಾಡಿಕೊಂಡ.
[ಅನಾಥ ಬೀಜ ಮತ್ತು ಅವರು/೪೧]

~ನಿನ್ನೆಯೇ ಸತ್ತ ಜೀನ್ಸ್ ಪ್ಯಾಂಟಿಗೆ
ಕಾಲುಗಳ ತೂರಿ ಜೀವ ತುಂಬುತ್ತಾರೆ.
[ಅಮಲೇರಿದ ಹುಡುಗಿಯರು/೪೩]

~ನಾಳೆ ಬೀಳುವ ಮಳೆಯನ್ನೇ
ಲೆಕ್ಕಕ್ಕಿಟ್ಟು ಹೇಳುವುದೆಂದರೆ
ಕನಿಷ್ಟ ಚೆಂಬುಗಳಷ್ಟಾದರೂ ನೀರು
ಇಂದು ಕುಡಿಯಲೇಬೇಕು.
[ಪಥ ಮತ್ತು ದೃಷ್ಟಿ/೭೧]

'ಅಯ್ಯಂಗಾರಿಯ ಹತ್ತುಪೈಸೆಯ ಬ್ರೆಡ್ಡು' ಎಂಬ ಸಂಕಲನದ ಪ್ರಧಾನ ಕವಿತೆಯು ಹಸಿವಿನ ರೂಪಾಂತರಗಳನ್ನು ಭೂತ-ವರ್ತಮಾನ-ಭವಿಷ್ಯತ್ತಿನ ಅಸ್ಥಿಪಂಜರದಲ್ಲಿ ಸಿಕ್ಕಿಸಿ ಮಾತನಾಡುತ್ತದೆ. ಭೂತದ ಬವಣೆಗಳನ್ನು ಎಷ್ಟು ಮರೆತರೂ ವಾಸ್ತವ ಅದನ್ನು ಮತ್ತೆ-ಮತ್ತೆ ನೆನಪಿಸುತ್ತದೆ. ಆ ಕಾಲದ ಹತ್ತುಪೈಸೆಯ ಬ್ರೆಡ್ಡು ಸಮಕಾಲೀನ 'ಫೈವ್ ಸ್ಟಾರ್'ಗಳಾಗಿ ಇಂಗದ ಹಸಿವಿನ ರೂಪಾಂತರವು-
~ಕಾಲದ ಸಿಕ್ಕುಗಳಲ್ಲಿ
ಸೀರಿನಿಂದ ಹೇನಾಗಿ ಬಡ್ತಿ ಹೊಂದುತ್ತಾ[೪೭]
ಸಾಗುತ್ತದೆ.

ಕಾಲದ ಆರ್ತ ಸ್ವರಗಳನ್ನು ತುಂಬಿಕೊಂಡ ಇಂತಹ ಕವಿತೆಗಳೇ ಕವಿಯನ್ನು ಬರೆಸಿಕೊಳ್ಳುವ ತುರ್ತಿನಲ್ಲಿ /ಭಾವತೀವ್ರತೆಯಲ್ಲಿ 'ಇಡಿ'ಯಾದ ಸ್ಪರ್ಶ(ಮಾಂತ್ರಿಕ ಸ್ಪರ್ಶ)ವನ್ನು ಸಾಧಿಸುವುದಿಲ್ಲ ಎನ್ನುವ ಅಂಶವನ್ನೂ ಇಲ್ಲಿ ಗಮನಿಸಬೇಕು:

~ಜಗದ ಮೊದಲ ತಂದೆ ತಾಯಿಗಳು
ಪಕ್ಕದ ತೊರೆಯಲ್ಲಿ ಊದಿಕೊಂಡು
ಪ್ರಶ್ನೆಗಳಾಗಿ ತೇಲುತ್ತಿರುವಾಗ
ಕಾಗೆಯೊಂದು ಗುಬ್ಬಿಗೆ
ಮೈಥುನದ ವೀಳ್ಯವಿಟ್ಟರೆ
ಪ್ರಾಣಿ-ಪಕ್ಷಿ ಸಂಕುಲದ ಊರಿನಲಿ
ಅಪನಂಬಿಕೆಯ ಮೊಳೆ ನೆಟ್ಟಿದೆ.
[ಸಲಿಂಗ/೧೩]

ಹೊಸ ಹಾದಿಯ, ಹೊಸ ನಡಿಗೆಯ ರೂಪಕಗಳನ್ನೂ, ಕವಿತೆಗಳನ್ನೂ ಕರುಣಿಸಿದ ಸೈಫ್ ಜಾನ್ಸೆ ಕೊಟ್ಟೂರರು ಹೊಸ ತಲೆಮಾರಿನ ಗಮನಾರ್ಹ ಕವಿ.
೨೦೧೧ರಲ್ಲಿ ಮುದ್ರಣವಾದ ಸಂಕಲನವಿದು. ಇದರ ಉತ್ತರಕಾಲದಲ್ಲಿ ಕಾಣುತ್ತಿರುವ ಕೊಟ್ಟೂರರ ಕವಿತೆಗಳು ನಿಖರವಾಗಿ ಹೇಳುವ, ಗಮ್ಯವನ್ನು ಮುಟ್ಟುವ ಕಸುವನ್ನು ಪಡೆದುಕೊಳ್ಳುತ್ತಿವೆ. ಅವರ ಕವಿತೆಯೇ ಹೇಳುವಂತೆ-

~ಸುಳ್ಳು ಹೊರಟುಹೋಗಿದೆ
ಸತ್ಯ ತೆರೆದುಕೊಂಡಿದೆ
ಕಳೆದದ್ದು ಸಿಕ್ಕಿದೆ
[ಕಳೆದದ್ದು ಸಿಕ್ಕಾಗ/೫೯]
*

ಕಾಜೂರು ಸತೀಶ್‬

ಸೂಜಿಗಣ್ಣಿಗೆ ಒಳಹೊರಗಿಲ್ಲ

ಡಾ. ಕೃಷ್ಣ ಗಿಳಿಯಾರ್ ಅವರ ಸೂಜಿಗಣ್ಣಿಗೆಒಳಹೊರಗಿಲ್ಲ ಕವನ ಸಂಕಲನದ ಕೆಲವು ಪಂಚಿಂಗ್ 'ಹನಿ'ಗಳು:

ನಿಂತ ಗಡಿಯಾರ ಕೂಡ
ದಿನದಲ್ಲಿ
ಎರಡು ಬಾರಿ
ಸರಿಯಾದ ಸಮಯ
ತೋರಿಸುತ್ತೆ-
ಹಾಗಾಗಿ
ಇದು
ಕವಿತೆಯಲ್ಲ!

*
ನೀ ಬಂದಾಗ ಬಾಗಿಲಿಕ್ಕಿದರೆ
ತೆರೆಯುವವರೆಗೆ
ಕಾಯಬೇಡ
ಒಳಗೆ
ಬಂದುಬಿಡು.
*
ನಾಕೇ ಗೆರೆ ಏನನ್ನೋ ಹೇಳಹೊರಡುತ್ತದಾದರೆ
ಖಾಲಿ ಹಾಳೆಯದೂ ಎರಡು ಮಾತಿರಬಹುದು.
*
ನೆರಳಿಗೆ ಹೆದರಿ
ಆರಿಸಲು ಹೋದವನ
ತಲೆ ಮೇಲೆ
ದೀಪ ಇಟ್ಟು
ಬುದ್ಧ
ನಕ್ಕ.
*
ಈ ಕಗ್ಗಾಡಿನಲ್ಲಿ
ಕೊಡಲಿ ಗರಗಸ ಶಬ್ದ
ಕೇಳದ ದಿನಗಳು
ಇಲ್ಲವೇ ಇಲ್ಲ.
*
ಅದೇ ಜಾಗ, ನದಿ
ಎಂಬ
ನನ್ನ
ಬೇಸರಕ್ಕೆ
ನೀರು
ನಕ್ಕಿತು.
*

ಕಾಜೂರು ಸತೀಶ್

Saturday, August 6, 2016

ആരുടേത്?

പോള്ളുന്ന പാതകളിൽ
പാദങ്ങൾ പതിയുന്നു.
അമർന്ന ഒരു പാദത്തിന്നടിയിലായ
ഇടം ആരുടേത്?
ഇനിയൊരു പാദം  കാറ്റിൽ...
എങ്കിലും എനിക്കതിനെക്കുറിച്ച്
വേവലാതിയില്ല
കാറ്റിനു
വേലി കെട്ടാനാരും പഠിച്ചിട്ടില്ല.
*

കന്നട കവിത - കാജൂരു സതീശ്


പരിഭാഷ- സുനീതാ കുശാലനഗര


ಬಂತಾ?



ಮಳೆ ಬಂತಾ?
ಇಲ್ಲ
ಮಳೆ ಬಂತಾ?
ಇಲ್ಲ
ಬಂತಾ?
ಇಲ್ಲ.

ಅಳು ಬಂತಾ?
ಬಂತು
ಅಳು ಬಂತಾ?
ಬಂತು
ಬಂತಾ?
ಬಂತು.

ಕೊಳ ತುಂಬ್ತಾ?
ತುಂಬ್ತಿದೆ
ಮಳೆ ಬಂತಾ?
ಇಲ್ಲ.

ಮಳೆ ಬಂತಾ?
ಬರ್ತಿದೆ
ಅಳು ಬಂತಾ?
ಬಂತು.

ಮಳೆ ಬಂತಾ?
ಬಂತು
ಅಳು ಬಂತಾ?
ಬಂತು.

ಬಂತಾ?
ಬಂತು.

ತುಂಬ್ತಾ?
ತುಂಬ್ತು!
*

ಕಾಜೂರು ಸತೀಶ್

Tuesday, August 2, 2016

ಗಾಳ

ಅಲೆಗಳ ಮೇಲಿನ ಹಳಿಗಳ ಮೇಲೆ
ಕೊನೆ ಮೊದಲಿಲ್ಲದ ರೈಲೊಂದು ಚಲಿಸುತ್ತಿದೆ
ಬೋಗಿಗಳ ತುಂಬೆಲ್ಲ ಜನವೋ ಜನ.

ಗಾಳ ಹಾಕುತ್ತಿದ್ದಾರೆ ಕೆಲವರು
ಕಿಟಕಿಗಳ ಮೂಲಕ.

ಶಾರ್ಕುಗಳು
ತಿಮಿಂಗಿಲಗಳು
ಸಣ್ಣಪುಟ್ಟ ಮೀನುಗಳು
ಸಿಲುಕಿಕೊಳ್ಳುತ್ತಿವೆ ಗಾಳಕ್ಕೆ.

ಸಿಲುಕಿಕೊಂಡ ಮೀನುಗಳ ಮೇಲೆತ್ತದೆ
ನೀರಲ್ಲೇ ಎಳೆದಾಡುತ್ತಾ ಸುಖಿಸುತ್ತಿದ್ದಾರೆ ಕೆಲವರು
ದೈತ್ಯ ಮೀನುಗಳ ಎಳೆಯಲಾರದೆ
ದುಃಖಿಸುತ್ತಿದ್ದಾರೆ ಕೆಲವರು.

ಕೆಲವು ಗಾಳಕ್ಕೆ ಮಾತ್ರ ಏನೂ ಸಿಕ್ಕಿಹಾಕಿಕೊಳ್ಳುತ್ತಿಲ್ಲ.

ಸಾಗುತ್ತಿದೆ ಕಡಲ ರೈಲು...
ನನ್ನ ಬಳಿ ಒಂದೂ ಗಾಳವಿಲ್ಲ
ಎಸೆಯುತ್ತಿದ್ದೇನೆ ನನ್ನನ್ನೇ
ಕಿಟಕಿಯಿಂದಾಚೆಗೆ!
*

ಮಲಯಾಳಂ ಮೂಲ- ಸೆಬಾಸ್ಟಿಯನ್

ಕನ್ನಡಕ್ಕೆ- ಕಾಜೂರು ಸತೀಶ್

ಭಾರ ಇಳಿಸುವ ಕವಿತೆಗಳು


ಇವರು


ಇವನು ಬುದ್ಧಿವಂತ
ಮಿದುಳು ನೆನಪಿಟ್ಟುಕೊಳ್ಳುತ್ತದೆ ಇವನ.

ಇವನು ನೀತಿವಂತ
ಹೃದಯ ನೆನಪಿಟ್ಟುಕೊಳ್ಳುತ್ತದೆ ಇವನ.

ಇವನು ಕ್ರೂರಿ
ಗುಪ್ತಾಂಗ ನೆನಪಿಟ್ಟುಕೊಳ್ಳುತ್ತದೆ ಇವನ.
*

Teaching Aid


ಇವತ್ತಿನ ಪಾಠ 'ಹಿಟ್ಲರ್'

'ಮಿಂಚಿನ ಸಂಚಾರ'ಕ್ಕೆ ಬಂದ ಅಧಿಕಾರಿ
Teaching Aid ಇಲ್ಲವೆಂದು
ತಾರಾಮಾರಾ ಬೈಯ್ದರು ತರಗತಿಯಲ್ಲೇ..

ಹೊರಹೋದ ತಕ್ಷಣ
ಮಕ್ಕಳು ಕೇಳಿದರು
' ಏನ್ Teaching Aid ಸಾರ್?'

'ಬಹುಶಃ ಹಿಟ್ಲರ್ನ ಚಿತ್ರ ಇರ್ಬೇಕು' ಅಂದೆ.

ಕಿಟಕಿಯಿಂದ ಹೊರನೋಡುತ್ತಾ
ಮಕ್ಕಳು ಕೂಗತೊಡಗಿದರು
'ಹಿಟ್ಲರ್ನ ನೋಡಿದ್ವಿ, ಹಿಟ್ಲರ್ನ ನೋಡಿದ್ವಿ...'

ಅಂದ ಹಾಗೆ
ನೆನ್ನೆಯ ಪಾಠ 'ಭಯೋತ್ಪಾದನೆ'

ಎರಡಕ್ಕೂ
Teaching Aid ಸಿಕ್ಕವು!
*

ರಸ್ತೆ


ರಸ್ತೆ
ಗಾಢ ನಿದ್ದೆಯಲ್ಲೂ
ಜನರ ಹೊತ್ತೊಯ್ಯುತ್ತದೆ.

ರಸ್ತೆ 'Politics'
ಗಿಡ ನೆಡಬಹುದು ಗುಂಡಿಗಳಲ್ಲಿ
ಬೇಕಿದ್ದರೆ ಈಜಬಹುದು
ಕಾಲು ಮುರಿಯಬಹುದು
ಡಿಕ್ಕಿಯೊಡೆಸಿ ಕೊಲ್ಲಬಹುದು...

ನೋಡುತ್ತಿರಿ
Footpathಗಳನ್ನೂ ನುಂಗುವ
ದಿನಗಳು ಬರಲಿವೆ.

ಕಪ್ಪೆಗಳಿಗೆ ಅಭ್ಯಾಸವಾಗಿದೆ
ನಾವೇನು ಮಾಡುವುದು?
*

ಕೊಲೆ


'ಯಾರೋ ಒಬ್ಬ
ನನ್ನ ಎದೆ ಸೀಳಲು ಬಂದ ಹೊತ್ತು
ಏನು ಮಾಡುತ್ತೀಯ?'
ಕೇಳಿಕೊಂಡೆ ನನ್ನನ್ನೇ.

'ಹೂ ಕೊಡುತ್ತೇನೆ'
ನಡುವೆ ಬಾಯಿ ಹಾಕಿತು ಕವಿತೆ.

ಅದರ ಬಾಯಿ ಮುಚ್ಚಿ ಯೋಚಿಸಿದೆ
ಏನು ಮಾಡಲಿ
ಹೂಗಳು ಕೊಲೆಯಾದ ಕಾಲದಲ್ಲಿ ?
*

ಹಸಿವು

ಹಸಿವಿಗೆ ಹೊಟ್ಟೆಹಸಿವು
ಅದೂ ಕೂಡ ಅಂದುಕೊಂಡಿದೆ-
ಹೊಟ್ಟೆಯೊಳಗೊಂದು ರೈಲು ಇದೆ
ಅದು ಕರುಳಿನ ಹಳಿಗಳಲ್ಲಿ ಓಡುತ್ತದೆ
*

ಬೇಕಾ?

ಜೇನು ಬೇಕಾ ಜೇನು?
ಕೇಳಿದ.

ಬೇಡ
ಎಂದೆ.

ಲಡ್ಡು ಬೇಕಾ ಲಡ್ಡು?
ಕೇಳಿದ.

ಬೇಡ
ಎಂದೆ.

ಸಕ್ಕರೆ ಬೇಕಾ ಸಕ್ಕರೆ?
ಕೇಳಿದ.

ಬೇಡ
ಎಂದೆ.

ಬೆಣ್ಣೆ ಬೇಕಾ ಬೆಣ್ಣೆ?
ಕೇಳಿದ.

ಬೇಕು
ಎಂದೆ.

ಹೊರಟುಹೋದ.
ಮತ್ತೆ ಕೇಳಲಿಲ್ಲ.
*

ಕಾಜೂರು ಸತೀಶ್

Sunday, July 24, 2016

ಭೇಟಿ

ಕಳೆದ ಸಲ
ಅವರಿಬ್ಬರ ಮೊದಲ ಭೇಟಿ.
ಪರಸ್ಪರ ಪರಿಚಯಿಸಿಕೊಂಡರು.
ಏನೂ ಮಾತನಾಡದೆ
ಗಂಟೆಗಟ್ಟಲೆ ಕಳೆದರು.


ಈ ಬಾರಿ
ಅವರಿಬ್ಬರು ಭೇಟಿಯಾದಾಗ
'ಉಂ', 'ಉಹೂಂ'ಗಳಲ್ಲೇ
ದಿನಗಳನ್ನು ಕಳೆದರು.


ಅವರಿಬ್ಬರೂ ಕಾಯುತ್ತಿದ್ದಾರೆ
ಮುಂದಿನ ಭೇಟಿಗಾಗಿ!
*
ಮಲಯಾಳಂ ಮೂಲ- ಸಂತೋಷ್ ಅಲೆಕ್ಸ್

ಕನ್ನಡಕ್ಕೆ- ಕಾಜೂರು ಸತೀಶ್

ಮಾತು, ಮೌನ ಮತ್ತು ಕವಿತೆ

ಹೊಸ ತಲೆಮಾರು ತುಂಬು ಉತ್ಸಾಹದಲ್ಲಿ ಪುಸ್ತಕಗಳನ್ನ ಪ್ರಕಟಿಸುತ್ತಿದೆ. ಪ್ರತಿ ವಾರ ಹತ್ತಾರು ಪುಸ್ತಕಗಳು ಬಿಡುಗಡೆಯಾಗುತ್ತವೆ. ಈ ಎಲ್ಲ ಪುಸ್ತಕಗಳನ್ನು ಓದಿ ವಿಮರ್ಶಿಸುವುದು ದುಸ್ಸಾಧ್ಯದ ಮಾತು. ಇವುಗಳಲ್ಲಿ ಆದಷ್ಟು ಪುಸ್ತಕಗಳನ್ನು ಈ ಅಂಕಣದಲ್ಲಿ ಪರಿಚಯಿಸುವುದರ ಜೊತೆಗೆ ತುಲನಾತ್ಮಕವಾಗು ವಿಮರ್ಶಿಸಲಾಗುವುದು. ಹೊಸ ಹುಡುಗರ ಹೊಸ ಸಂವೇದನೆಗಳಿಗೆ ಮೊದಲ ಆದ್ಯತೆ.

ಕಾಜೂರು ಸತೀಶ ಅವರು ಈಚೆಗೆ ತಮ್ಮ ಮೊದಲ ಕವನ ಸಂಕಲನ ‘ಗಾಯದ ಹೂವುಗಳು’ ಎಂಬುದನ್ನು ಪ್ರಕಟಿಸಿದ್ದಾರೆ. ಎಲ್ಲ ಕವಿತೆಗಳನ್ನು ಓದುವಾಗ ಕವಿತೆಯ ಮೇಲೆ ಅವರಿಗಿರುವ ಬದ್ಧತೆಯನ್ನು ತೋರಿಸುತ್ತದೆ. ಇಲ್ಲಿನ ಬಹುತೇಕ ಪದ್ಯಗಳು ಕವಿತೆಯ ಅಂತರಂಗದ ಜತೆಗೆ ನಡೆಸುವ ಸಂವಾದವೇ ಆಗಿದೆ. ಮಾಮೂಲಿಯಂತೆ ಸತೀಶ್ ಅವರು ಪ್ರೇಮದ ಬೆನ್ನಿಗೆ ಬಿದ್ದು ಪದಗಳನ್ನು ವ್ಯರ್ಥಮಾಡಿಲ್ಲ. ಇರುವ ಪ್ರೇಮವಾದರೂ ಪದ್ಯವನ್ನು ಕಟ್ಟುವ ಇರಾದೆಯಲ್ಲಿ; ತನಗೆ ಕಂಡ ಸಮಾಜವನ್ನು ಅನಾವರಣಗೊಳಿಸುವಲ್ಲಿ ಇದೆ ಅನಿಸುತ್ತದೆ.ಮೊದಲ ಸಂಕಲನದಲ್ಲಿ ಅವರು ದೊಡ್ಡ ಬಗೆಯ ತಾತ್ವಿಕ ಸಿದ್ದಾಂತಗಳ ಕಡೆ ತಮ್ಮನ್ನು ಒಪ್ಪಿಸಿಕೊಳ್ಳುವುದಿಲ್ಲ. ಬದಲಿಗೆ ‘ಅನುಭವ ಹೆಪ್ಪುಗಟ್ಟುವ ತನಕ ಕವಿತೆಗೆ ಕೈಹಾಕಬೇಡ’ ಎಂಬ ಕೆ.ಎಸ್.ನ ಅವರ ನುಡಿಗಳನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ಇದರ ಪ್ರಾಮಾಣಿಕತೆಯ ಹಿಂದೆ ಕಾವ್ಯಮೀಮಾಂಸೆಯ ಹುಡುಕಾಟವೂ ಇದೆ.

ಕಾಜೂರು ಅವರು ಅಭಿವ್ಯಕ್ತಿಸುವ ಗಾಯದ ಹೂವುಗಳು ಯಾವ ಬಗೆಯವು? ಗಾಯಗೊಂಡಿರುವುದು ಹೂವುಗಳೊ ಅಥವಾ ರೂಪಕಗಳೊ?. ಸತೀಶ್ ಗೆ ರೂಪಕಗಳನ್ನು ನಿರ್ಮಿಸಿ ಪದ್ಯ ಕಟ್ಟುವುದುಕ್ಕಿಂತ ಕವಿತೆಯಲ್ಲಿ ಚಿತ್ರಗಳನ್ನು ತರುವುದರಲ್ಲಿ ಹೆಚ್ಚು ಆಸಕ್ತಿ ಇದೆ ಎಂದು ಕಾಣುತ್ತದೆ. ಈ ಬಗೆಯ ಚಿತ್ರಗಳು ಹೆಚ್ಚು ‘ಹೇಳುವ’ ಧಾಟಿಯಲ್ಲಿ ಕಾಣುತ್ತವೆ. ಆದರೆ ಅವುಗಳಿಗೆ ಗಂಭೀರವಾದ ಪದಗಳನ್ನು ತುಂಬುವ ಶಕ್ತಿ ಸತೀಶ್ ಅವರಿಗೆ ಖಂಡಿತ ಇದೆ.
ಕುವೆಂಪು ಅವರು ಗೊಬ್ಬರವನ್ನು ವಸ್ತುವನ್ನಾಗಿ ಮಾಡಿಕೊಂಡು ಪದ್ಯಬರೆದದ್ದು ತಿಳಿದೇ ಇದೆ. ಸತೀಶ್ ಮಲವನ್ನು ಕೆಲವುಪದ್ಯಗಳಲ್ಲಿ ಬಳಸುತ್ತಾರೆ. ಇದು ಖಂಡಿತ ಪದ್ಯಕ್ಕಿರುವ ಮಡಿವಂತಿಕೆಯನ್ನು ಬಿಡಿಸುವುದೇ ಆಗಿದೆ. ಒಂದು ಕಡೆ ಅವರು ‘ಮಲದ ಮೇಲೆದ್ದಿದೆ ಹಲಸಿನ ಸಸಿ’ಎಂದು ಬರೆಯುತ್ತಾರೆ. ಪಂಚಭೂತಗಳಿಗೆ ಮೈಲಿಗೆ ಅಂಟಿಸಿರುವ ಮನುಷ್ಯ ತಾನೋಬ್ಬ ಕೊಳಕು ಎಂದು ಮರೆತಿದ್ದಾನೆ. ಆದರೆ ನಿಸರ್ಗಕ್ಕೆ ಆ ಬಗೆಯ ಮೈಲಿಗೆಗಳು ಇಲ್ಲ.ಮನುಷ್ಯನ ಕೊಳಕನ್ನು ಹೀರಿಕೊಂಡೇ ಹಲಸಿನ ಹಣ್ಣನ್ನು ನೀಡಬಲ್ಲದು. ಹಸಿದ ಲೋಕವನ್ನು ಇಲ್ಲಿನ ಅನೇಕ ಸಾಲುಗಳು ಮಾತನಾಡಿವೆ. ಅವು ಬೇಗ ಸಿಟ್ಟನ್ನು ತೀರಿಸಿಕೊಳ್ಳವ ಮಾತುಗಳಲ್ಲ. ಕವಿತೆಯ ಅಂತರಂಗ, ಪರಂಪರೆಯ ಅಂತರಂಗ ಹಾಗೂ ಬದುಕಿನ ಮುಖಾಮುಖಿ ಇವುಗಳ ಮೂಲಕವೇ ಬರುತ್ತವೆ.

‘ಒಲೆ ಮತ್ತು ಅವ್ವ’ ಇದರ ಒಳ್ಳಯ ಪದ್ಯಗಳಲ್ಲಿ ಒಂದು. ಪದ್ಯ ಅನುಭವವನ್ನು ಹೆಪ್ಪುಗಟ್ಟಿಸಿಕೊಂಡು ಅಚ್ಚುಕಟ್ಟಾಗಿ ನಿಂತಿದೆ. ಇಲ್ಲಿ ಒಲೆ ಮತ್ತು ಅವ್ವ ಅದ್ವೈತ.ಬದುಕು ಮತ್ತು ಪದಗಳು ಇಲ್ಲಿ ಏಕವಾಗಿವೆ. ‘ಹಾವು’ಎಂಬ ಕವಿತೆ ಮನುಷ್ಯನ ವೈರುದ್ಯಗಳನ್ನು ಅನಾವರಣ ಮಾಡುತ್ತದೆ. ಧ್ವನಿಯನ್ನು ಚನ್ನಾಗಿ ಬಳಸಿಕೊಂಡಿದ್ದಾರೆ. ಇಲ್ಲಿನ ಹಾವು ಪಾರಂಪರಿಕ ಸಂಕೇತವಲ್ಲ. ಮುಗ್ಧತೆ ಮತ್ತು ಕ್ರೌರ್ಯಗಳ ಮುಖಾಮುಖಿ ಇದೆ. ‘ಉಣಿಸುವವರ ವಿಷದ ಹಲ್ಲು ಕಿತ್ತರೆ/ ಹಾಲೂ ಕುಡಿಯಬಲ್ಲದು / ಹಣ್ಣು ತಿನ್ನಬಲ್ಲದು.ಎಂಬ ಮಾತುಗಳು ಇವನ್ನೇ ಹೇಳುತ್ತವಲ್ಲವೇ?.ಕಾಜೂರು ಕವಿತೆಯನ್ನು ಬರೆಯುವಾಗ ಪರಂಪರೆಯ ಹೆಸರುಗಳನ್ನು ಪ್ರಸ್ತಾಪ ಮಾಡದೇ ಅದರೊಂದಿಗೆ ಸಂವಾದ ನಡೆಸುತ್ತಾರೆ. ಹಿಂದಿನದನ್ನು ಅರಿಗಿಸಿಕೊಳ್ಳದೇ, ಇಂದಿನ ಜಗತ್ತನ್ನು ನೋಡಲಾರೆವು ಎಂಬ ಅರಿವು ಅವರ ಅನೇಕ ಕವಿತೆಗಳಲ್ಲಿ ವ್ಯಕ್ತಗೊಂಡಿದೆ.

‘ಅಸ್ವಸ್ಥ ಕವಿತೆಗಳು’ ಎಂಬ ಪದ್ಯದಲ್ಲಿ ‘ಇದುವರೆಗೆ ಬರೆಸಿಕೊಂಡ ನನ್ನ ಕವಿತೆಗಳೆಲ್ಲವೂ/ ವೈದ್ಯನಿಗೆ ಕೊಡಲು ಕಾಸಿಲ್ಲದೆ/ ನರಳುತ್ತಲೇ ಇವೆ ಹಸಿನೆಲದ ಮೇಲೆ’. ಎಂದು ಬರೆಯುತ್ತಾರೆ. ಮೊದಲ ಸಂಕಲದಲ್ಲಿ ಈ ಬಗೆಯ ಅತೃಪ್ತಿ ಕಾಡುವುದು ಸಹಜವೇ. ಅವರ ಅನೇಕ ಪದ್ಯಗಳು ಸಾದಾ ಪ್ರತಿಮೆಗಳನ್ನು ಅನಾವರಣ ಗೊಳಿಸುತ್ತವೆ. ಮಾತು ಮತ್ತು ಅದನ್ನು ಬಳಸಿಕೊಂಡು ಹೇಳುವ ಧಾಟಿ ಗಟ್ಟಿ ಕವಿತೆಯಾಗುವುದು ಕಷ್ಟ. ಇದು ಕಾಜೂರು ಅವರಿಗೂ ಗೊತ್ತು. ಕವಿತೆಯನ್ನು ಗಂಭೀರವಾಗಿ ಅಭ್ಯಾಸ ಮಾಡುವ ಕಾಜೂರು ಮುಂದಿನ ಪದ್ಯಗಳಲ್ಲಿ ಮಾಗಬಲ್ಲರು. ಅವರ ಮಾತಿನಲ್ಲೇ ಹೇಳುವುದಾದರೆ,
‘ ದೊಡ್ಡವನಾದ್ಮೇಲೆ
ಎಡಕ್ಕೂ ಬೇಡ ಬಲಕ್ಕೂ ಬೇಡ
ನೀನೇ ಒಂದು ವಾಹ್ನ ಕೊಂಡು
ಮಧ್ಯದಲ್ಲೇ ಹೋಗು.’
ಈ ವಾಹನ ಅವರ ಕವಿತೆಯ ದಾರಿಯಾಗಬಹುದೆ?.

ಬೆಲೆ:

ಎಪ್ಪತ್ತೈದು ರೂಪಾಯಿಗಳು

ಪ್ರಕಾಶಕರು:

ಫಲ್ಗುಣಿ ಪುಸ್ತಕ, ನಂಬರ್ ೧೩/೧, ಒಂದನೇ ದೇವಸ್ಥಾನ ಬೀದಿ, ೯ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-೩

ದೂರವಾಣಿ: ೯೯೦೦೦೦೦೯೨೧


ಸುರೇಶ್ ನಾಗಲಮಡಿಕೆ

ಇತ್ತೀಚಿನ ಬರಹಗಾರರಲ್ಲಿ ಸುರೇಶ್ ರವರ ಹೆಸರು ಮುಖ್ಯವಾದುದು. ಮುತ್ತು ಬಂದಿದೆ ಕೇರಿಗೆ, ತಕ್ಕ ಮಣ್ಣಿನ ತೇವಕ್ಕಾಗಿ, ಜನಪದ ಲೋಕದೃಷ್ಟಿಯ ಮುಖೇನ ಕನ್ನಡ ಸಾಹಿತ್ಯ, ಇವು ಅವರ ಪ್ರಕಟಿತ ಕೃತಿಗಳು ಕಾಣ್ಕೆ ಮತ್ತು ಕಣ್ಕಟ್ಟು ಅವರ ಹೊಸ ವಿಮರ್ಶಾ ಸಂಕಲನ

ಜಾಣರು

ನಿನ್ನ ಮಗ
ಸೈಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ.
ನನ್ನ ಮಗಳು
ವಿವೇಕಾನಂದ ವಿದ್ಯಾಭವನದಲ್ಲಿ.
ಅವನ ಮಗನೂ,ಮಗಳೂ
ಇಸ್ಲಾಮಿಕ್ ಪಬ್ಲಿಕ್ ಶಾಲೆಯಲ್ಲಿ.
ಒಂದೇ ಬೆಂಚಲ್ಲಿ ಕೂತು
ಒಂದೇ ಪುಸ್ತಕವನ್ನು ಹಂಚಿಕೊಂಡು
ಒಂದೇ ಹಸಿವನ್ನು ಓದಿ
ನಾವು ಕಲಿಯದ ಪಾಠವನ್ನು ಕಲಿತ
ಆ ಹಳೆಯ ಇಸ್ಕೂಲು ಈಗಲೂ ಇದೆ-
ಹಳೆಯ ಕಾಲದ ನಮ್ಮ ಅಪ್ಪ-ಅಮ್ಮಂದಿರಂತೆ.
ಪರಮ ದರಿದ್ರರಾದ
ಕೆಲವರ ಮಕ್ಕಳು ಅಲ್ಲಿ ಕಲಿಯುತ್ತಿದ್ದಾರೆ
ಶಿಲುಬೆ,ಖಡ್ಗ,ಶೂಲಗಳೊಂದಿಗೆ.
ನಮ್ಮ ಮಕ್ಕಳು
ಒಮ್ಮೊಮ್ಮೆ ಕೋಪದಿಂದ ಗುಡುಗುವಾಗ
ಮಧ್ಯಬಂದು ತಡೆಯಲು
ಅವರಾದರೂ ಜಾಣರಾಗಲಿ.
*

ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ - ಕಾಜೂರು ಸತೀಶ್

Wednesday, July 13, 2016

ಮಳೆ ಹುಡುಗಿ

ಎಲ್ಲೆಯಿರದಷ್ಟು ಕನಸ ಕಾಣಿಸಿ
ಆಕಾಶವೆಂದಿತು
'ನಿನ್ನ ಮನೆಯಿದು; ನಿನ್ನೂರು'

ಮೊಗೆದಷ್ಟೂ ಮುಗಿಯದ ಪ್ರೀತಿಯ ತೋರಿಸಿ
ಸಮುದ್ರವೆಂದಿತು
'ನಿನ್ನ ದಾರಿಯಿದು; ನಿನ್ನದೇ ಯಾತ್ರೆ'

ತುಂಬಿಕೊಂಡ ಕಣ್ಣುಗಳ ಮುಚ್ಚಿ
ಪ್ರಾರ್ಥಿಸಿದಳವಳು
'ಕೊಂಡೊಯ್ಯದಿರಿ ನನ್ನ
ಕೊಂಡೊಯ್ಯದಿರಿ ದಯವಿಟ್ಟು'
*

ಮಲಯಾಳಂ ಮೂಲ- ಓ.ಎಂ. ರಾಮಕೃಷ್ಣನ್

ಕನ್ನಡಕ್ಕೆ- ಕಾಜೂರು ಸತೀಶ್

ದಿನಚರಿ - 22


ಅವರು ನಮ್ಮ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು. ಸಣ್ಣ ಪ್ರಾಯ.

ಆ ಮನುಷ್ಯನಿಗೆ ನನ್ನ ಮೇಲೆ ಒಂದು ಬಗೆಯ ಅವ್ಯಕ್ತ ಪ್ರೀತಿ. ' ನೀವು ಯಾವಾಗ ಹೇಳ್ತೀರೋ ಆಗ, ಒಂದಿನ ಮುಂಚೆ ಹೇಳಿ ಸಾಕು... ಮಕ್ಳನ್ನೂ ಕರ್ಕೊಂಡ್ಹೋಗೋಣ' ಎನ್ನುತ್ತಾ ದೂರದಲ್ಲಿದ್ದ ಆ ಬೆಟ್ಟವನ್ನು ಕತ್ತನ್ನೆತ್ತಿ ನೋಡುತ್ತಿದ್ದರು.

ಕಳೆದ ವರ್ಷವು 'ಈ' ಮಳೆಯ ಹಾಗೆ ಜಾರಿಹೋಯಿತು. ಈ ವರ್ಷದ ಅಕ್ಟೋಬರ್ಗೆ ಅದನ್ನು ಮುಂದೂಡಿದ್ದೆ.

ಮೊನ್ನೆ ಅವರ ಶವ ನೋಡಲು ಹೋಗಿದ್ದೆ! ಊರ ತುಂಬೆಲ್ಲಾ ಮನುಷ್ಯರ ಜೀವವನ್ನು ನೆಕ್ಕಿ ನೋಡಲು ಬಂದ 'ಡೆಂಗಿ'ಯ ನಾಲಗೆಗೆ ಅವರ ಜೀವವೂ ತಗುಲಿಬಿಟ್ಟಿತ್ತು!

ಈಗ ಪ್ರೀತಿಯಷ್ಟೇ ಉಳಿದಿದೆ. ಜೊತೆಗೆ ಕೆ.ಕೆ. ರಾಮಚಂದ್ರ ಎಂಬ ಆ ಹೆಸರೂ...

ದೂರದಲ್ಲಿರುವ ಆ ಬೆಟ್ಟ ಮತ್ತಷ್ಟೂ ದೂರದಲ್ಲಿರುವಂತೆ ಕಾಣಿಸುತ್ತಿದೆ!
*
-ಕಾಜೂರು ಸತೀಶ್

Saturday, June 18, 2016

ದಿನಚರಿ-21


....ಹಾಗೆ ಕಚೇರಿಯ ಒಳನುಗ್ಗಿದ ಅವರು 'ನಾನು ಎನ್.ಕೆ. ಗೋಪಾಲ್, ಈ ಶಾಲೆಯ ಹಳೆಯ ವಿದ್ಯಾರ್ಥಿ.. ಸುಂಟಿಕೊಪ್ಪದಲ್ಲಿ ವೈದ್ಯನಾಗಿ ಕೆಲಸ ಮಾಡ್ತಿದ್ದೇನೆ' ಎಂದು ತಮ್ಮನ್ನು ಪರಿಚಯಿಸಿಕೊಂಡರು. ತಮ್ಮ ಕಾರಿನಲ್ಲಿ ನಮ್ಮ ಶಾಲೆಯ 83 ಮಕ್ಕಳಿಗೆಂದು ಇಡೀ ವರ್ಷಕ್ಕಾಗುವುಷ್ಟು ನೋಟ್ ಪುಸ್ತಕಗಳನ್ನು ತಂದಿದ್ದರು. ಮಧ್ಯಾಹ್ನ ಪಾಯಸ ಮಾಡಿಸಿ ಹಂಚಿದರು. ಇನ್ನೊಮ್ಮೆ ಬಂದಾಗ ದತ್ತಿನಿಧಿಯನ್ನು ಆರಂಭಿಸಿ ಮಕ್ಕಳನ್ನು ಪ್ರೋತ್ಸಾಹಿಸುವುದಾಗಿ ಹೇಳಿದರು.

ಶಾಲೆಯಿಂದ ಹೊರಡುವಾಗ ಏನನ್ನೋ ಸಾಧಿಸಿದ ಸಂಭ್ರಮವಿತ್ತು ಅವರ ಮುಖದಲ್ಲಿ.

ಯಾವ ಫಲಾಪೇಕ್ಷೆ ಇಲ್ಲದೆ ಸೇವೆಗೈಯ್ಯುವ ಇಂಥವರನ್ನು ನೆನೆದಾಗ ಮನುಷ್ಯರ ಬಗ್ಗೆ ಪ್ರೀತಿ ಹುಟ್ಟುತ್ತದೆ.

Monday, June 6, 2016

ನಮ್ಮ ಮನೆಗಳಲ್ಲಿ

ಊರ ಹಬ್ಬಕ್ಕೆಂದು ಡೊನೇಷನ್ನಿಗೆ ಹೋದಾಗ
ಪಾರ್ಟಿ ಮೀಟಿಂಗಿಗೆ ಕರೆಯಲು ಹೋದಾಗ
ಗ್ರಂಥಾಲಯದ ಉದ್ಘಾಟನೆಗೆ ಆಹ್ವಾನಿಸಲು ಹೋದಾಗ
ಬಾಗಿಲ ಬಳಿ ಬಂದು ಅಜ್ಜಿ ಅದನ್ನೇ ಹೇಳಿದ್ದು:
'ಇಲ್ಲಿ ಯಾರೂ ಇಲ್ಲ!'

ನಿಜ
ಅಜ್ಜಿಗೆ ತಾನೇನೂ ಅಲ್ಲ ಎಂದು ಅರಿವಾಗಿರಬಹುದು
ಅಥವಾ
ನಿತ್ಯವೂ ಮಾತ್ರೆ, ಔಷಧಿಗಳನ್ನು ಕೊಡುವವರು
ಹಾಗೆ ಮನದಟ್ಟು ಮಾಡಿಕೊಟ್ಟಿರಬಹುದು.
*

ಮಲಯಾಳಂ ಮೂಲ- ವೈಶಾಖ್ ವಿ

ಕನ್ನಡಕ್ಕೆ- ಕಾಜೂರು ಸತೀಶ್

ಮನೆ

ಸುಮಾರು ಕಿಟಕಿಗಳಿರುವ ಕೋಣೆಯಲ್ಲಿ
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಣ್ಣದ ಪೆನ್ಸಿಲುಗಳು.
ಮಗುವೊಂದು
ಗೋಡೆಗಳೇ ಇಲ್ಲದ
ಮನೆಯ ಚಿತ್ರ ಬಿಡಿಸುತ್ತಿದೆ.

ಆ ಮನೆ
ಮನೆಯಿಂದೆದ್ದು
ಬೀದಿಯಲ್ಲಿ ನಡೆದಾಡುತ್ತಿದೆ.

ಬೀದಿಯಲ್ಲೊಬ್ಬಳು ಹಾಡುಗಾರ್ತಿ
ಮತ್ತವಳ ಮಗು.
ಅವಳು ಗಡಿಗಳೇ ಇಲ್ಲದ ಲೋಕದ ಕುರಿತು
ಹಾಡುತ್ತಿದ್ದಾಳೆ.
ಮಗು ಮುದ್ದು ಮುದ್ದಾಗಿ ನಗುತ್ತಿದೆ.
ಅವಳ ಕಣ್ಣುಗಳು ಬೆಳಗುತ್ತಿವೆ.

ಆ ಬೀದಿ
ಬೀದಿಯಿಂದೆದ್ದು
ತನ್ನ ಮನೆಗೆ
ನಡೆದುಹೋಗುತ್ತಿದೆ.

ಮಗು ಬಿಡಿಸಿದ ಆ ಮನೆ
ಅಂಗಳದ ಬೇವಿನ ಮರವ ಸುತ್ತಿ
ಅದನ್ನು ಬಳಸಿದ ಮಲ್ಲಿಗೆ ಬಳ್ಳಿಯನ್ನು ಸುತ್ತಿ
ಗಿಳಿಗಳ ಕಣ್ಣಲ್ಲಿ ಕುಳಿತು
ಹಾರಿ ಹಾರಿ ಆಕಾಶಕ್ಕೇರುತ್ತಿದೆ.
*


ಮಲಯಾಳಂ ಮೂಲ- ಚಿತ್ರಾ ಕೆ ಪಿ

ಕನ್ನಡಕ್ಕೆ- ಕಾಜೂರು ಸತೀಶ್

Friday, June 3, 2016

ನಾವೊಂದು ಟ್ರಿಪ್ ಹೊರಟರೆ ಹೇಗೆ?

ನಾವೊಂದು ಟ್ರಿಪ್ ಹೊರಟರೆ ಹೇಗೆ?
ತುಂಬಾ ದೂರ ಏನೂ ಬೇಡ
ಇಲ್ಲೇ
ಕಣ್ಣ ಎದುರಿಗೆ
ಮೂಗಿನ ತುದಿಗೆ
ಒಂದು ಮುಳ್ಳುಬೇಲಿಯ ಆಚೆಗೆ
ಒಂದು ಕೂಗಳತೆಯ ದೂರಕ್ಕೆ
ಒಮ್ಮೆ ಇಣುಕಿ ನೋಡುವಷ್ಟು
ಒಂದು ಮಾರುತ್ತರ ಕೊಡುವಷ್ಟು.

ಅಲ್ಲಿ ಆ ಮರದಲ್ಲಿ
ಹಸುವೊಂದನ್ನು ಕಟ್ಟಿದ್ದಾರೆ
ತುಂಬು ಗರ್ಭಿಣಿ
ಇವತ್ತೋ ನಾಳೆಯೋ ಕರುಹಾಕುತ್ತೆ.

'ಅಯ್ಯೋ ಅದರಲ್ಲೇನು ವಿಶೇಷ
ನಿನ್ನ ಕವಿತೆ ಸರಿಯಿಲ್ಲ'
ಬಯ್ಯುತ್ತೀರಿ ನೀವು.

ಆದರೆ
ಕವಿತೆ ನಿಮ್ಮನ್ನು ಕರೆದೊಯ್ಯುವುದು
ಹಸುವಿನ ಬಳಿಯಲ್ಲ.
ಮರದ ಪೊಟರೆಯಲ್ಲಿ
ಹಾವೊಂದು ಮೊಟ್ಟೆಯಿಟ್ಟಿದೆ.
ಒಂದಲ್ಲ ಐದು!
ಅವನ್ನು ನಿಧಿಯ ಹಾಗೆ ಬಚ್ಚಿಟ್ಟಿವೆ.

'ಅಯ್ಯೋ
ಹಾವಿಗೆ ಮರಿಯಾಗುವುದರಲ್ಲೇನು ವಿಶೇಷ?
ನಿನ್ನ ಕವಿತೆ ಒಂದು ಕ್ಲೀಷೆ'
ಬಯ್ಯುತ್ತೀರಿ ನೀವು.

ಆದರೆ
ಕವಿತೆ ನಿಮ್ಮನ್ನು ಕರೆದೊಯ್ಯುವುದು
ಆ ಪೊಟರೆಯೊಳಕ್ಕಲ್ಲ.
ಮರದ ಕೊಂಬೆಯಲ್ಲಿ
ಕಾಗೆಯ ಗೂಡೊಂದಿದೆ.
ಮೊಟ್ಟೆಗಳಿಗೆ ಕಾವು ಕೂರುತ್ತಿದೆ ಕಾಗೆ.
ಅದೇನೂ ದೊಡ್ಡ ವಿಷಯವಲ್ಲ ಬಿಡಿ
ಕಾಗೆ ಮೊಟ್ಟೆ ಹಾಕಲ್ವಾ ಮತ್ತೆ?
ಆದರೆ ಗೂಡಿನ ಮೊಟ್ಟೆಗಳಲ್ಲೊಂದು
ಕಾಗೆಯದಲ್ಲ.
ಅದೂ ಸಹಜ ಬಿಡಿ
ಕೆಲವೊಮ್ಮೆ ಮೈಗಳ್ಳ ಕೋಗಿಲೆ
ಕಾಗೆಯನ್ನು ವಂಚಿಸುತ್ತದೆ.

'ನಿನ್ನದು ಸವೆದುಹೋದ ಕವಿತೆ'
ಬಯ್ಯುತ್ತೀರಿ ನೀವು.

ಆದರೆ
ಕವಿತೆ ನಿಮ್ಮನ್ನು ಕರೆದೊಯ್ಯುವುದು
ಕಾಗೆಯ ಗೂಡಿಗಲ್ಲ.
ಆ ಗೂಡಿನ ಪಕ್ಕದ ಕೊಂಬೆಯಲ್ಲಿ
ನೇತಾಡುತ್ತಿರುವ ಎರಡು ದೇಹಗಳಿವೆ
ಮೇಲ್ನೋಟಕ್ಕೆ ಎರಡು ದೇಹಗಳು ಅಲ್ಲಿ ಕಾಣಿಸುವುದಿಲ್ಲ.
ಆದರೆ ಎರಡು ದೇಹಗಳವು.
ತುಂಬು ಹೊಟ್ಟೆಯ
ಒಬ್ಬಳು ಹತ್ತನೇ ತರಗತಿ ಹುಡುಗಿ.

ಹಸು, ಹಾವು, ಕಾಗೆಗಳಿಗಾದರೆ
ಯಾರಿಗೂ ಉತ್ತರ ಕೊಡಬೇಕಾಗಿಲ್ಲ.

ಆದರೆ ಅವಳಿಗೆ ಹಾಗಲ್ಲ
ಅಪ್ಪ ಕೊಟ್ಟ
ಹುಟ್ಟುಹಬ್ಬದ ಉಡುಗೊರೆ
ದೊಡ್ಡದಾಗುತ್ತಿರುವಾಗ
ಉತ್ತರ ಹೇಳಲೇಬೇಕಲ್ಲ!
*

ಮಲಯಾಳಂ ಮೂಲ- ವೈಶಾಖ್ ವಿ

ಕನ್ನಡಕ್ಕೆ- ಕಾಜೂರು ಸತೀಶ್

Thursday, May 26, 2016

ಈ ಪ್ರೀತಿ ಅನ್ನೋದೇ ಹೀಗೆ

ಈ ಪ್ರೀತಿ ಅನ್ನೋದೇ ಹೀಗೆ
ಒಂಥರಾ ಸಾಂಕ್ರಾಮಿಕ ಜ್ವರದ ಹಾಗೆ.
ಮೊದಮೊದಲು ಕೆಮ್ಮು
ಆಮೇಲಾಮೇಲೆ ಮೈಕೈ ನೋವು
ಬಿಸಿಬಿಸಿ ಕೆಂಡದ ಹಾಗೆ ದೇಹ
ವಾರವಿಡೀ ಕೆಟ್ಟ ಕನಸುಗಳು.
ಇಷ್ಟಾದರೂ ಮರೆವು ನಮ್ಮನ್ನು ಬದುಕಿಸಿಬಿಡುತ್ತದೆ.

ಈ ಪ್ರೀತಿ ಅನ್ನೋದೇ ಹೀಗೆ
ಒಂಥರಾ ಸಿಡುಬಿನ ಹಾಗೆ.
ಒಡೆಯುವುದು ಚಳಿಯೋ, ಹಣ್ಣೋ, ಬೀಜವೋ
ಏನೂ ತಿಳಿಯದೆ ಆತಂಕಕ್ಕೊಳಗಾಗುತ್ತೇವೆ
ಪ್ರೀತಿಯ ತಾಪದಲ್ಲಿ ಸುಟ್ಟು
ಕೆಂಪುಗಟ್ಟಿ ಹಣ್ಣಾಗುತ್ತದೆ ಒಡಲು.
ಹೇಗೋ ಬದುಕಿಕೊಳ್ಳುತ್ತೇವೆ ನಾವು.
ಆದರೆ ಸಂಕಟಗಳು ಒಳಗೇ ಉಳಿದುಬಿಡುತ್ತವೆ
ಜೀವನಪರ್ಯಂತ ಕಾಡುತ್ತವೆ
ನಾವು ಸಹಿಸಿಕೊಳ್ಳುತ್ತೇವೆ.

ಈ ಪ್ರೀತಿ ಅನ್ನೋದೇ ಹೀಗೆ
ಕ್ಯಾನ್ಸರ್ ರೋಗದ ಹಾಗೆ.
ಮೊದಮೊದಲು ತಿಳಿಯುವುದೇ ಇಲ್ಲ
ನೋವು ಶುರುವಾಗುವಷ್ಟರಲ್ಲಿ
ಕಾಲ ಮಿಂಚಿಹೋಗಿರುತ್ತದೆ
ಅವಳು ಮತ್ತೊಬ್ಬನ ತೋಳಲ್ಲಿರುತ್ತಾಳೆ
ಸುಮ್ಮನೇ ಬೆಳೆಯುವ ಪ್ರಣಯಕೋಶಗಳಿಗಿರುವ ಔಷಧಿಗಳು
ಹಿಂಡಿ ಹಿಪ್ಪೆ ಮಾಡುತ್ತವೆ ನಮ್ಮನ್ನು.
ಮತ್ತೆ ಮತ್ತೆ ಕಾಡಿದರೆ
ಕತ್ತಿಯೊಂದು ಬೇಕಾಗಬಹುದು
ಆಮೇಲೆ ಅಂಗವೊಂದನ್ನು ಕಳಕೊಂಡವರ ಹಾಗೆ
ನರಳುತ್ತಾ ಬದುಕುತ್ತೇವೆ
ಮತ್ತೂ ಅದು ಆವರಿಸಿದಾಗ
ಮರದ ಕೊಂಬೆಯಲ್ಲೋ, ನದಿಯಲ್ಲೋ
ಮನೆಯ ಬಾಲ್ಕನಿಯ ಮೇಲಿಂದಲೋ
ಒಂದು ಸಣ್ಣ ಸೀಸೆಯೊಳಗಿಂದಲೋ
ಸಾವು ಕೃಪೆ ತೋರುತ್ತದೆ.
ಹೀಗಿದ್ದಾಗ್ಯೂ ಹೇಗೋ ಬದುಕಿಕೊಳ್ಳುತ್ತೇವೆ ನಾವು.

ಕೆಲವು ಪ್ರಣಯಗಳೇ ಹೀಗೆ
ಹುಚ್ಚು ಹಿಡಿದ ಹಾಗೆ.
ಬರೀ ಭಾವನೆಗಳ ಪ್ರಪಂಚದಲ್ಲೇ ಮಗ್ನ
ಮತ್ತೊಬ್ಬರಿಗೆ ಅದು ಗೊತ್ತಾಗುವುದಿಲ್ಲ.
ಮೆತ್ತಗೆ ಮಾತನಾಡುತ್ತೇವೆ, ಹಾಡುತ್ತೇವೆ
ಒಬ್ಬೊಬ್ಬರೇ ನಗುತ್ತೇವೆ, ಕೋಪಗೊಳ್ಳುತ್ತೇವೆ
ಸುಮ್ಮನೆ ಸುತ್ತಾಡುತ್ತೇವೆ.
ಸರಪಳಿಯಿಂದ, ಶಾಕ್ ಟ್ರೀಟ್ಮೆಂಟಿನಿಂದ
ಗುಣಪಡಿಸಲಾಗುವುದಿಲ್ಲ ಅದನ್ನು.
ಏಕೆಂದರೆ ಅದು ರೋಗವೇ ಅಲ್ಲ
ಅದೊಂದು ಕನಸಿನ ಲೋಕ
ತಾರೆಗಳ ಲೋಕ.

ಒಮ್ಮೆಯೂ ಸಾಕ್ಷಾತ್ಕರಿಸಲಾಗದ ಪ್ರೀತಿಯೇ
ನಿಜವಾದ ಪ್ರೀತಿ
ಅದು ಅಳಿಯುವುದಿಲ್ಲ
ರಾಧೆಯೊಂದಿಗಿನ ಪ್ರೇಮದ ಹಾಗೆ.
*

ಮಲಯಾಳಂ ಮೂಲ- ಕೆ. ಸಚ್ಚಿದಾನಂದನ್

ಕನ್ನಡಕ್ಕೆ- ಕಾಜೂರು ಸತೀಶ್

Wednesday, May 25, 2016

ಮುಖಾಮುಖಿ

ಸಾಲು ಸಾಲು ಗಾಳಿಮರಗಳಿರುವ ಬೆಟ್ಟದ ತುದಿ.
ಮರದ ಕೊಂಬೆಯಲ್ಲಿ ಕುಳಿತು
ಅವನು ಹೇಳಲಾರಂಭಿಸಿದ:

'ಸತ್ಯವನ್ನೇ ನುಡಿಯಲು ಕಲಿಸಿದ ಚಾಮಯ್ಯ ಮೇಷ್ಟ್ರೇ,
ಸಮಸ್ಯೆಗಳ ಹಿಮ್ಮೆಟ್ಟಿಸಲು ಕಲಿಸಿದ ತಂದೆಯೇ,
ಭರವಸೆಯ ಬೆಳಕಾದ ತಂಗಿಯೇ,
ಹಂಚಿಕೊಂಡು ಬದುಕಲು ಕಲಿಸಿದ ತಮ್ಮನೇ,
ಕರುಣೆಯ ಕಡಲಾದ ಅವ್ವಾ..

ಈ ಲೋಕದಲ್ಲಿ
ಯಾರ ಎದುರೂ
ತಲೆತಗ್ಗಿಸದೆ ನಿಲ್ಲಬೇಕು ನನಗೆ'.

ಹೀಗೆನ್ನುತ್ತಾ ಕೊರಳಿಗೆ ಹಗ್ಗ ಬಿಗಿದು
ಕೆಳಕ್ಕೆ ಹಾರಿದ

ಮತ್ತು
ತಲೆ ತಗ್ಗಿಸದೇ ನಿಂತ!
*

ಮಲಯಾಳಂ ಮೂಲ- ಡಾ. ಸಂತೋಷ್ ಅಲೆಕ್ಸ್

ಕನ್ನಡಕ್ಕೆ- ಕಾಜೂರು ಸತೀಶ್

Saturday, May 21, 2016

ಜೊತೆಯಾಟ

ಬಿರುಬೇಸಿಗೆಯಿದ್ದರೂ
ಮಳೆ ಸುರಿಯುತಿದೆ
ಮಳೆಯಿದ್ದರೂ
ಬಿಸಿಲು ತಣಿಯುತ್ತಿಲ್ಲ.

ಬಿಸಿಲೂ ಮಳೆಯೂ ಕೂಡಿದರೂ
ನರಿಗಳು ಮದುವೆ ಮಂಟಪದಿಂದ ಇಳಿಯುತ್ತಿಲ್ಲ.

ಬಾರೀ ಮಳೆ
ಎಲ್ಲೆಲ್ಲೂ ಪ್ರಳಯ ಜಲ
ಒಂದೇ ಒಂದು ಬಿಸಿಲಿಗೆ
ನೀರೆಲ್ಲ ಬತ್ತಿಹೋಗಿದೆ.

ಸುಟ್ಟು ಕರಕಲಾಗಲು
ಇನ್ನೇನೂ ಉಳಿದಿಲ್ಲವಾದರೂ
ಬಿಸಿಲು ಇಳಿಯುತ್ತಿಲ್ಲ
ಮಳೆ ನಿಲ್ಲುತ್ತಿಲ್ಲವಾದರೂ
ಹನಿ ನೀರೂ ಉಳಿದಿಲ್ಲ.

ಮಣ್ಣಲ್ಲಿ ಸತ್ವವಿಲ್ಲದಿದ್ದರೂ
ಕೆದಕಿ ತಿನ್ನಲಿಕ್ಕೆಂದು
ಕೋಳಿಗಳು ಬರಲಾರಂಭಿಸಿವೆ.

ಮಳೆಯೂ ಬಿಸಿಲೂ
ಒಟ್ಟೊಟ್ಟಿಗೆ ಆಟವಾಡುವಾಗ
ನರಿಗಳು ಕೋಳಿಗಳನ್ನು
ಮದುವೆಯಾಗುತ್ತಿವೆ.
*

ಮಲಯಾಳಂ ಮೂಲ- ರಾಧಾಕೃಷ್ಣನ್ ಪೆರುಂಬಳ

ಕನ್ನಡಕ್ಕೆ- ಕಾಜೂರು ಸತೀಶ್

ಡಾ.ಸಾಗರ್ ಕುಮಾರ್,ಎಂ.ಆರ್.ಸಿ.ಪಿ. , ಗ್ರೀಷ್ಮಸದನ್, ನಿಮ್ಹ್ಯಾನ್ಸ್, ಬೆಂಗಳೂರು

ಹುಚ್ಚು ವಾಸಿಯಾಗಿ ಮನೆಗೆ ಹಿಂತಿರುಗಿದಾಗ
ಸಂಭ್ರಮಿಸಲು ನೀನು ನನ್ನನ್ನು ಕಡಲ ತೀರಕ್ಕೆ ಕರೆದೊಯ್ದೆ.
ಅವತ್ತು ನಾನು ನಿನ್ನ ಮಡಿಲಲ್ಲಿಟ್ಟ ಶಂಖ ಪ್ರಣಯದ ನಾದ ಹೊಮ್ಮಿಸಿತು.
ಆಗಷ್ಟೇ ಕ್ಷೌರಮಾಡಿದ ನನ್ನ ನುಣುಪುಗೆನ್ನೆಯ ಮೇಲೆ
ನೀನು ನಿನ್ನ ಸುಡುವ ತುಟಿಗಳನ್ನೊತ್ತಿದೆ.
ಬಿರುಬೇಸಿಗೆ. ತೀರಕ್ಕೂ, ತೆರೆಗಳಿಗೂ ತೀರದ ದಣಿವು.
ಜನ ಅದರ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳಲಿಲ್ಲ.
ನೀನು ನನ್ನ ಅಪ್ಪಿಕೊಳ್ಳುವುದರಲ್ಲಿ, ಬಿಸಿಯೇರಿಸುವುದರಲ್ಲಿ ನಿರತಳಾಗಿದ್ದೆ.
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಪ್ಪೆಚಿಪ್ಪುಗಳ ಬಾಚಿ ನಿನ್ನ ಕುಪ್ಪಸದೊಳಗಿಳಿಸಿದೆ.
ಮನೆಗೆ ತಲುಪಿದ ಮೇಲೆ ನಾನದನ್ನು ತೆಗೆದುಕೊಡಬೇಕೆಂದು ಹಠಹಿಡಿದೆ.
ಮೂರು ವರ್ಷ ಹುಚ್ಚಿನ ಹಬೆಯಲ್ಲಿ ಬೆಂದ ನನ್ನನ್ನೂ,
ತಂಪಾದ ಹಾಸಿಗೆಯಲ್ಲಿ ಮಲಗಿ ಒದ್ದೆಯಾದ ನಿನ್ನನ್ನೂ
ಸಮುದ್ರಕ್ಕೆ ಚೆನ್ನಾಗಿ ಗೊತ್ತು.
ಆದರೂ ಶಂಖವನ್ನೆತ್ತಿ ಎಸೆದು
ಜೋರಾಗಿ ಕಿರುಚಿಕೊಂಡು ನನ್ನ ಹುಚ್ಚಿನ ಲೋಕಕ್ಕೆ ಹಿಂತಿರುಗಿದೆ.

ಮನೋರೋಗತಜ್ಞ ಹಿಡಿದರೂ ಸಿಗದ
ಉಬ್ಬರವಿಳಿತಗಳ ಮೆದುಳಾಗಿ
ನಮ್ಮಿಬ್ಬರ ನಡುವಿನ ಕಡಲು ಕೈಕೈ ಹಿಸುಕಿತು.
ತೆರೆಯ ನೊರೆಗಳು
ರಕ್ಕಸನ ಬಾಯಿಂದುಕ್ಕುವ ಹಾಗೆ ಆರ್ಭಟಿಸತೊಡಗಿತು.
ತೆರೆಯಲ್ಲಿ ಮುದುರಿಬಿದ್ದ ಸೀರೆಯ ಕೆಳಗೆ
ಕಪ್ಪೆಚಿಪ್ಪುಗಳಿಗೆ ಸಿಡುಬು ಆವರಿಸಿತು.

ಮನೋರೋಗತಜ್ಞ ಮತ್ತು ನಾಯಿಗೆ
ಅಲೆಗಳ ಲಕ್ಷೋಪಲಕ್ಷ ನೊರೆಗಳ ಕಂಡು
ಒಳಗೊಳಗೇ ನಗು.

ಪ್ರೀತಿ-ದ್ವೇಷಗಳ ಹಳೆಯ ಕೋಟೆಯೊಳಗೆ
ನಗರದ ಎಲ್ಲ ಮೆದುಳುಗಳನ್ನೂ ಅವರು ಆಹ್ವಾನಿಸಿದರು
ಡ್ರಾಕುಲದ ಹಾಗೆ.
*

ಮಲಯಾಳಂ ಮೂಲ- ಎಂ.ಎಸ್. ಬನೇಶ್

ಕನ್ನಡಕ್ಕೆ- ಕಾಜೂರು ಸತೀಶ್

Wednesday, May 18, 2016

ಪರೀಕ್ಷೆಗಳು

ಮಳೆರಜೆಯ ಮೊದಲು
ನಂದಿಬಟ್ಟಲು, ನೆಲದಾವರೆ
ಸೇವಂತಿಗೆ, ಕನಕಾಂಬರಗಳು
ಅಂಗಳದಲ್ಲರಳಿ ನಗುವಾಗ
ಹೂಬಿಡಲೂ ಕೂಡ ಪುರುಸೊತ್ತಿಲ್ಲದ
ಬೆಳಗಿನ ಜಾವದಲ್ಲಿ
ಬಣ್ಣ ಬಣ್ಣದ ಹೂಗಳಿರುವ ಲಂಗತೊಟ್ಟು
ಆಟವಾಡಲು ಕರೆಯಿತೊಂದು
ಹೊಟ್ಟೆಕಿಚ್ಚುಳ್ಳ ಕಿರು ಪರೀಕ್ಷೆ.

ಬೇಕೋ ಬೇಡವೋ ಎಂದು ಬೇಗನೆ ಎದ್ದು
ಅಮ್ಮ ಕೊಟ್ಟ ಕರಿಕಾಫಿ ಕುಡಿದು
ತೂಕಡಿಸಿ ಪುಸ್ತಕದ ಮೇಲೆ ಬಿದ್ದು
ಮತ್ತೆ ತಲೆಕೊಡವಿ ಎದ್ದು
ಅಯ್ಯಪ್ಪನ ಶರಣಂ ಕೇಳುವಾಗ
ಚರ್ಚಿನಿಂದ ಕ್ರಿಸ್ಮಸ್ ಹಾಡು ಕೇಳಲು ದಿನಗಳಿರುವಾಗ
ಚಳಿಗೆ ಗಡಗಡ ನಡುಗುತ್ತಾ
ಬಂತೊಂದು ಅರ್ಧವಾರ್ಷಿಕ ಪರೀಕ್ಷೆ.

ಮಾವಿನಮಿಡಿ ಉದುರುವ,
ಬೇಸಿಗೆಯ ಮಳೆಗರಳಿದ ಮಲ್ಲಿಗೆಯಲ್ಲಿ
ವಸಂತವಿಡೀ ಪರಿಮಳವನ್ನು ಕಾಪಿಟ್ಟ ಮೊಗ್ಗುಗಳುದುರುವ,
ಬೆಳಿಗ್ಗೆ ಬೇಗ ಎದ್ದು ಕೋಗಿಲೆಗಳು ಹಾಡುವ
ಗ್ರೀಷ್ಮ ಋತುವಿನಲ್ಲಿ
ಬೆವರಿ ಓಡಿಬಂದು
ಅಪ್ಪಿಕೊಂಡಿತೊಂದು ವಾರ್ಷಿಕ ಪರೀಕ್ಷೆ.

ಮಳೆರಜೆ-ಚಳಿ-ಕೋಗಿಲೆ
ಮೂವರೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯಲು ಹೊರಟಾಗ
ಆಟವಾಡಲು, ಆಟವಾಡಿಸಲು ಯಾರೂ ಸಿಗದೆ
ಊರುಬಿಟ್ಟು ಓಡಿಹೋದವು ಪರೀಕ್ಷೆಗಳು.
ಬದಲಿಗೆ ಬಂತು Examಗಳು.
ಟೈ-ಕೋಟು-ಬೂಟು ಹಾಕಿ
ಕಣ್ಣು ಅಗಲಿಸಿ
ದುರುಗುಟ್ಟಿ ನೋಡಿ
ನಾಲಗೆ ಚಾಚಿ
ಮಕ್ಕಳ ಹೆದರಿಸತೊಡಗಿದವು.
*

ಮಲಯಾಳಂ ಮೂಲ- ಡಾ. ಸಂಧ್ಯ ಇ.

ಕನ್ನಡಕ್ಕೆ- ಕಾಜೂರು ಸತೀಶ್

Tuesday, May 17, 2016

ಮಧ್ಯವಯಸ್ಸಿನಲ್ಲಿ ಕವಿತೆ ಬರೆದದ್ದು

ಎರಡು ದಶಕಗಳ ದೀರ್ಘ ಅಂತರದ ನಂತರ
ನೆನ್ನೆ ಸಂಜೆ
ನಾನೊಂದು ಕವಿತೆ ಬರೆಯಲು ಕುಳಿತೆ.
ಎರಡನೇ ಸಾಲು ತಲುಪುವಷ್ಟರಲ್ಲಿ
ಉತ್ಪ್ರೇಕ್ಷೆಯ ಏರುದಾರಿಯಲ್ಲಿ ಎಡವಿ
ಜೋರಾಗಿ ಬಿದ್ದುಬಿಟ್ಟೆ.

ಗೆಳೆಯರು ನನ್ನನ್ನು ಸೇರಿಸಿದ್ದು
ವ್ಯಾಕರಣದ ಸರ್ಕಾರಿ ಆಸ್ಪತ್ರೆಗೆ.

ಎಷ್ಟೊಂದು ಕಾಯಿಲೆಗಳು!
ಪ್ರೀತಿಗೆ ಕಾಮಾಲೆ
ಕ್ರಾಂತಿಗೆ ರಕ್ತದೊತ್ತಡ
ಆತ್ಮವಿಶ್ವಾಸಕ್ಕೆ ಬೊಜ್ಜು
ಕನಸಿಗೆ ಖಿನ್ನತೆ.

ವ್ಯಾಯಾಮ ಕಡ್ಡಾಯ ಪ್ರತೀ ದಿನ.

ಹಾಗಾಗಿ
ಗದ್ದೆ ಉತ್ತು
ಹೂದೋಟದಲ್ಲಿ ಅಗೆದು
ಭತ್ತದ ಹೊರೆ ಹೊತ್ತು
ತೆಂಗಿನ ಮರ ಹತ್ತಿ
ಬೆವರಲ್ಲಿ ಸ್ನಾನ ಮಾಡಿದ ನನ್ನ ಕವಿತೆ
ಪ್ರತೀ ದಿನ ಬೆಳ್ಳಂಬೆಳಿಗ್ಗೆ
ಟ್ರ್ಯಾಕ್ ಸ್ಯೂಟ್ ಹಾಕಿ
ಜಾಗಿಂಗ್ ಹೊರಡುತ್ತದೆ.
*

ಮಲಯಾಳಂ ಮೂಲ- ನಿರಂಜನ್ ಟಿ.ಜಿ.

ಕನ್ನಡಕ್ಕೆ- ಕಾಜೂರು ಸತೀಶ್

Monday, May 16, 2016

ಮುದ್ದಿಸಿ ಮುದ್ದಿಸಿ ದಣಿಯುತ್ತೇನೆ

ನಾನು ನನ್ನನ್ನೇ ಮುದ್ದಿಸಿ ಮುದ್ದಿಸಿ ದಣಿದು
ನನ್ನನ್ನೇ ತಿರಸ್ಕರಿಸಬೇಕೆಂದುಕೊಳ್ಳುತ್ತೇನೆ.

'ತಿರಸ್ಕರಿಸ್ತೀಯಾ?' ಅಂತ
ನನ್ನನ್ನೇ ಕೇಳಿಕೊಳ್ಳುತ್ತೇನೆ.

'ತಿರಸ್ಕರಿಸದೆ ಇರಲು ಸಾಧ್ಯವಿಲ್ವಾ?' ಅಂತ
ಕೇಳುತ್ತೇನೆ.

ಕೇಳಿ ಕೇಳಿ ಮುದ್ದಿಸುತ್ತೇನೆ
ಮುದ್ದಿಸಿ ಮುದ್ದಿಸಿ ದಣಿಯುತ್ತೇನೆ.

ಈಗಲೇ ತಿರಸ್ಕರಿಸಿಬಿಡೋಣ ಅಂತ
ಅಂದುಕೊಳ್ಳುತ್ತೇನೆ.

'ಈಗ್ಲೇನಾ?' ಅಂತ ಕೇಳುತ್ತೇನೆ.

'ಸ್ವಲ್ಪ ಹೊತ್ತಾದ ಮೇಲೆ ಆಗಲ್ವಾ?' ಅಂತ ಕೇಳುತ್ತೇನೆ.

ಕೇಳಿ ಕೇಳಿ ಮುದ್ದಿಸುತ್ತೇನೆ
ಮುದ್ದಿಸಿ ಮುದ್ದಿಸಿ ದಣಿಯುತ್ತೇನೆ.
*

ಮಲಯಾಳಂ ಮೂಲ- ವಿಷ್ಣು ಪ್ರಸಾದ್

ಕನ್ನಡಕ್ಕೆ- ಕಾಜೂರು ಸತೀಶ್

ಅರಸೀಕೆರೆಯ ಹಳೆಯ ಉಗಿಬಂಡಿ


ಮೊನ್ನೆ ಮಲಯಾಳಂ ಕವನ ಸಂಕಲನವೊಂದು ಕೈ ಸೇರಿತು. ಎರ್ಣಾಕುಳಂನಿಂದ ಡಾ. ವಿಶಾಖ್ ವರ್ಮ ಅವರು ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದರು.

ಅದರ ಶೀರ್ಷಿಕೆಯೇನು ಗೊತ್ತೇ? 'അ൪ശിക്കരെയിലെ പഴയ കരിഎഞ്ചി൯'(ಅರಸೀಕೆರೆಯ ಹಳೆಯ ಉಗಿಬಂಡಿ)!

ಸ್ವಂತ ಪರಿಶ್ರಮದಿಂದ ಕನ್ನಡವನ್ನು ಓದಲು, ಬರೆಯಲು ಕಲಿತ ಈ ಪ್ರೊಫೆಸರ್, ಈ ನೆಲದ ಬಗ್ಗೆ ಅಪಾರ ಪ್ರೀತಿಯನ್ನಿಟ್ಟುಕೊಂಡವರು. ಸಂಕಲನದ ಅನೇಕ ಕವಿತೆಗಳು ಮಂಗಳೂರು, ಕೊಡಗು, ದಾವಣಗೆರೆ, ಅರಸೀಕೆರೆ ಮುಂತಾಗಿ ಇಡೀ ಕರ್ನಾಟಕವನ್ನೇ ಧ್ಯಾನಿಸಿವೆ.

ಕನ್ನಡ ನೆಲದ ಜೊತೆಗಿನ ತಮ್ಮ ಒಡನಾಟವನ್ನು 'Kannada Connections' ಎಂಬ ಶೀರ್ಷಿಕೆಯನ್ನಿತ್ತು ಪುಸ್ತಕರೂಪದಲ್ಲಿ ದಾಖಲಿಸಲು ಹೊರಟಿದ್ದಾರೆ.  ಅದರ ಎರಡು ಅಧ್ಯಾಯಗಳನ್ನು ಓದಿ, ಅವರ ಅನುಭವ ಪ್ರಾಮಾಣಿಕತೆಗೆ ತಲೆಬಾಗಿದ್ದೇನೆ.


Thursday, May 12, 2016

ಲಿಂಗದ ಹಸಿವು


'ಸ್ವಲ್ಪ ಕೊಡ್ತೀಯ' ಎಂದು
ಅವಳ ಬಳಿ ಕೇಳಲಾಗದ್ದಕ್ಕೆ
ಆಗುತ್ತಿರುವ ದುಃಖ ಅಷ್ಟಿಷ್ಟಲ್ಲ.

ಒಂದು ವೇಳೆ ಕೇಳಿದ್ದಿದ್ದರೆ?

ಅವಳ ಜೊತೆಯಷ್ಟೇ ಅಲ್ಲ
ಎಷ್ಟೋ ಸ್ತ್ರೀಯರ ಬಳಿ
ಹೀಗೇ ಕೇಳಬೇಕೆನಿಸಿದೆ.

ಮನಸ್ಸಿನಲ್ಲಿ ಮಲಗಿಸಿ
ನಿಲ್ಲಿಸಿ
ಕೂರಿಸಿ
ಕಾಮಸೂತ್ರದ ಎಲ್ಲ ಭಂಗಿಗಳನ್ನೂ
ಪ್ರಯೋಗ ಮಾಡಿದ್ದಾಗಿದೆ.

ಆದರೂ..
ಒಮ್ಮೆಯೂ ಕೇಳಲಿಲ್ಲ ಹಾಗೆ.


ಹೀಗೆ ಬಹಿರಂಗಪಡಿಸುವುದರ ಮೂಲಕ
ಅವಮಾನದ ಕೂಪಕ್ಕೆ ತಳ್ಳಿಬಿಡುತ್ತಾರೊ ಎಂಬ ಭಯದಲ್ಲಿ
ಸ್ವತಃ ಲಿಂಗವನ್ನು, ಅದರ ಅನಾದಿ ಹಸಿವನ್ನು ನಿಗ್ರಹಿಸಿ
ಅಂತಹದ್ದೊಂದು ಜೀವಿ ಇಲ್ಲಿ ಬದುಕುತ್ತಿಲ್ಲವೆಂದು
ಎಲ್ಲರ ಹಾಗೆ
ನಾನೂ ಒಂದು ಬೋರ್ಡು ಅಂಟಿಸಿದ್ದೇನೆ.

ಸ್ವಲ್ಪ ಯಾಮಾರಿದರೂ
ಅಪರಿಚಿತರೊಂದಿಗೆ ಸಂಗ ಬಯಸುವ
ಪಾಪಿ ನಾನು.

ಗೆಳೆಯಾ,
ವೀರ್ಯ ಬಿದ್ದು
ಹರಿದುಹೋಗುವ
ನಮ್ಮ ಒಳವಸ್ತ್ರ
ಎಂದೂ ಸುಳ್ಳುಹೇಳುವುದಿಲ್ಲ.

ಮಲಯಾಳಂ ಮೂಲ-
ವಿಷ್ಣು ಪ್ರಸಾದ್

ಕನ್ನಡಕ್ಕೆ-
ಕಾಜೂರು ಸತೀಶ್

Tuesday, May 10, 2016

ವಾಯು

ಹರಿದೂ ಹರಿದೂ ಸುಸ್ತಾಗಿ
ನದಿಯೊಂದು
ಹಳ್ಳ-ಕೊಳ್ಳಗಳಲ್ಲಿ ನಿಂತುಬಿಟ್ಟಿರಬಹುದು.

ಸ್ವಲ್ಪವೂ ಬಾಗದೆ ನಿಂತೂ ನಿಂತೂ ದಣಿದು
ಬೆಟ್ಟಗಳು
ಲಾರಿಗಳಲ್ಲಿ ಹತ್ತಿ ಹೊರಟುಹೋಗಿರಬಹುದು.

ಆಕಾಶವ ಹೊತ್ತೂ ಹೊತ್ತೂ ಸೊಂಟನೋವು ಬಂದು
ಮರಗಳು
ಮಿಲ್ಲಿನ ಕಡೆಗೆ ಹೊರಟುಹೋಗಿರಬಹುದು.

ಗಾಳಿಯೇ
ನಿನಗೇಕೆ ಸ್ವಲ್ಪವೂ ದಣಿವಿಲ್ಲ?
ಸ್ವಲ್ಪ ಯೋಚಿಸಿನೋಡು ನಿನ್ನ ಬಗ್ಗೆ
ಒಂದು ನೀರುಬಾಟಲಿಯಷ್ಟೂ ಬೆಲೆಯಿಲ್ಲ ನಿನಗೆ.

ಒಂದು ಬಾಟಲಿಯೊಳಗಾದರೂ ಹೋಗಿ ಕೂರಬಾರದೇ
ವಯಸ್ಸಾದ ಕಾಲದಲ್ಲಿ ?


ಮಲಯಾಳಂ ಮೂಲ- ವಿಷ್ಣು ಪ್ರಸಾದ್

ಕನ್ನಡಕ್ಕೆ- ಕಾಜೂರು ಸತೀಶ್


ಬಿಸಿಲು

ಬಿಸಿಲನ್ನು ಮಡಿಲಲ್ಲಿ ಕೂರಿಸಿ
ಹೇನು ನೋಡಿದವು ಎಲೆಗಳು.

ಬಿಸಿಲು ಕೊಸರಾಡಿ
ಎಲೆಗಳಿಂದ ಬಿಡಿಸಿಕೊಂಡು ಓಡಿತು.

ಹತ್ತು ಗಂಟೆಯಾದಾಗ
ಕೊಳದಲ್ಲಿ ಚಿತ್ರವೊಂದನ್ನು ಬಿಡಿಸಿತು.
'ಹುಚ್ಚು' ಅದು ಕೊಟ್ಟ ಚಿತ್ರದ ಶೀರ್ಷಿಕೆ.

ಜೋಡಿ ದುಂಬಿಗಳು ಬಂದು
ಚಿತ್ರದಲ್ಲಾಗಬೇಕಾದ ಬದಲಾವಣೆಗಳನ್ನು ಸೂಚಿಸಿ
ಹಾರಿಹೋದವು.
*

ಮಲಯಾಳಂ ಮೂಲ- ವಿಷ್ಣು ಪ್ರಸಾದ್

ಕನ್ನಡಕ್ಕೆ- ಕಾಜೂರು ಸತೀಶ್

ಈ ಚಳಿಗಾಲದಲ್ಲಿ

ಕಳೆದ ಚಳಿಗಾಲ ಎಷ್ಟು ಭೀಕರವಾಗಿತ್ತು!
ಈ ಚಳಿಗಾಲ ಅಷ್ಟು ಕಠೋರವಾಗಿರದಿದ್ದರೂ
ನೆನಪಿಸಿಕೊಂಡರೆ ನಡುಕ ಹುಟ್ಟುತ್ತಿದೆ

ಕಳೆದ ಚಳಿಗಾಲದಲ್ಲಿ ಅವ್ವ ತೀರಿಕೊಂಡಳು
ಜೋಪಾನವಾಗಿರಿಸಿದ್ದ ಪ್ರೇಮ ಪತ್ರ ಎಲ್ಲೋ ಕಳೆದುಹೋಯಿತು
ಇದ್ದ ಕೆಲಸವೂ ಹೋಯಿತು
ಆ ರಾತ್ರಿಗಳಲ್ಲಿ ಎಲ್ಲೆಲ್ಲಿ ಅಲೆದೆನೋ
ಯಾರ್ಯಾರಿಗೆ ಕರೆಮಾಡಿದೆನೋ ನೆನಪಿಲ್ಲ
ಇಟ್ಟ ವಸ್ತುಗಳೆಲ್ಲ ಬೀಳುತ್ತಿದ್ದವು ನನ್ನ ಮೇಲೇ.

ಈ ಚಳಿಗಾಲದಲ್ಲಿ
ಕಳೆದ ಚಳಿಗಾಲದಲ್ಲಿ ಧರಿಸಿದ ಬಟ್ಟೆಗಳನ್ನು
ಒಂದೊಂದಾಗಿ ತೆಗೆದು ನೋಡುತ್ತಿದ್ದೇನೆ
ಕಂಬಳಿ, ಟೊಪ್ಪಿ, ಸಾಕ್ಸ್, ಮಫ್ಲರ್,
ಮತ್ತೆ ಮತ್ತೆ ನೋಡುತ್ತಿದ್ದೇನೆ

ಮತ್ತೀಗ ಯೋಚಿಸುತ್ತಿದ್ದೇನೆ
ಈ ಚಳಿಗಾಲ ಯಾಕೆ ಅದರಂತೆ ಕಠೋರವಾಗಿರಬೇಕು
ಅದೆಲ್ಲ ಕಳೆದುಹೋದದ್ದಲ್ಲವೇ?!
**
ಹಿಂದಿ ಮೂಲ- ಮಂಗಲೇಶ್ ಡಬರಾಲ್

ಕನ್ನಡಕ್ಕೆ- ಕಾಜೂರು ಸತೀಶ್

Monday, May 9, 2016

ಅರಿಶಿಣ ಹಚ್ಚಿ ಸ್ನಾನ ಮಾಡುತ್ತಾಳೆ

ಅರಿಶಿಣ ಹಚ್ಚಿ ಸ್ನಾನ ಮಾಡುತ್ತಾಳೆ
ಹುಡುಗಿ
ಅರಿಶಿಣ ಹಚ್ಚಿ ಸ್ನಾನ ಮಾಡುತ್ತಾಳೆ

ಕಣ್ಣು ಕಾಣದ ಹುಡುಗಿ
ಅರಿಶಿಣ ಹಚ್ಚಿ ಸ್ನಾನ ಮಾಡುತ್ತಾಳೆ

ಕಚ್ಚಿ ಎಳೆಯುತ್ತವೆ ಅವಳ
ಬೆಳದಿಂಗಳ ಎಳೆಹಳದಿಯ ಕಣ್ಣುಗಳು

ಅವಳ ದೇಹ
ಹಳದಿ ಲೋಹ

ಅರಿಶಿಣದ ಘಮಘಮ
ಮೈಯ ತುಂಬ

ಹೊಕ್ಕುಳಲ್ಲೀಗ ಕಪ್ಪಾಗಿ ಬೆಳೆಯುತ್ತಿದೆ
ಒಂದು ಅರಿಶಿಣ ಗಿಡ.



ಮಲಯಾಳಂ ಮೂಲ-
ಚಿತ್ರ ಕೆ.ಪಿ.

ಕನ್ನಡಕ್ಕೆ-
ಕಾಜೂರು ಸತೀಶ್

Sunday, May 8, 2016

ബസൂ കവിതകൾ

കക്കൂസ്ക്കുഴിയില്‍ വീണ മനുഷ്യന്‍
മരിച്ചുപോയ ദിവസം
മുഖ്യമന്ത്രിയുടെ കോട്ട്
അത്തറും തേടി നടന്നു.
* *
എന്ത് ചെയ്യാന്‍ പറ്റും
എന്‍റെ മുറ്റം ഇത്രയല്ലേയുള്ളു;
നീ വരികയാണെങ്കില്‍
എന്‍റെ കാല്‍പ്പാടില്‍ തന്നെ
ചവിട്ടി വരണം.
* *

എന്നെപോലെ നിനക്കും
ഈ ലോകം 'സുന്ദര'മെന്നു കണ്ടാല്‍
വേറൊന്നുമില്ല
എനിക്കുള്ള അന്ധത നിനക്കുമുണ്ട്.
* *
വീശിയെറിഞ്ഞ കല്ല്
ചികഞ്ഞു തിന്നുന്ന കോഴിയുടെ കാലില്‍ കൊണ്ടു;
ഞൊണ്ടുന്ന കോഴി
കല്ലെറിഞ്ഞവന്‍റെ മുറ്റത്ത്
ഒരു മുട്ടയിട്ടു പോയി.
* *

കന്നട കവിത - ബസൂ

വിവ൪ത്തനം  - കാജൂരു സതീശ്