ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, November 28, 2015

ದಿನಚರಿ -11

ಆ ಕಡೆ ಹೋದಾಗಲೆಲ್ಲ ರಸ್ತೆಯ ಬದಿಯಲ್ಲಿ ಯಾರಾದರೊಬ್ಬರು ವಿಚಿತ್ರ ಭಂಗಿಯಲ್ಲಿ ಬಿದ್ದುಕೊಂಡಿರುತ್ತಾರೆ. ಹಾಗೆ ಬಿದ್ದುಕೊಂಡವರೆಲ್ಲ ಹಳೆಯದೊಂದು ಪಂಚೆಯನ್ನು ತೊಟ್ಟಿರುತ್ತಾರೆ. ಕೆಲವೊಮ್ಮೆ ಭಂಗಿಯಲ್ಲಿ ಸ್ವಲ್ಪ ವ್ಯತ್ಯಾಸವಾದಾಗ ಅವರ ಗುಪ್ತಾಂಗವು ದಾರಿಹೋಕರನ್ನು ನೋಡುತ್ತಾ , ಒಳವಸ್ತ್ರದ ಕೊರತೆಯನ್ನೂ, ಬಡತನವನ್ನೂ ಕವಿತೆಯಂತೆ ಹೇಳುತ್ತಿರುತ್ತದೆ. ಆಗ ಒಳಗೊಳಗೇ ನಕ್ಕು ಮುಖ ತಿರುಗಿಸುವ ದಾರಿಹೋಕರ ದರ್ಶನವಾಗುತ್ತದೆ.


ನಮ್ಮ ಸರ್ಕಾರಗಳು ಯಾವುದನ್ನು 'ಅಭಿವೃದ್ಧಿ' ಎಂದುಕೊಂಡಿವೆ? ಜನ ಹೀಗೆ ಹೊಟ್ಟೆ ತುಂಬುವಂತೆ ಕುಡಿದಾಗ ಅದರ ಖಜಾನೆ ತುಂಬುವುದೇನೋ ನಿಜ. ಆದರೆ 'ಸುಖೀ ರಾಜ್ಯ'ದ ಕಲ್ಪನೆ ಸಾಕಾರಗೊಳ್ಳುವುದಾದರೂ ಹೇಗೆ? ಹಾಗೆ ಎಲ್ಲವನ್ನೂ ತೋರಿಸುತ್ತಾ ರಸ್ತೆಯಂಚಲ್ಲಿ ಮಲಗಿರುವವರು ಬಡತನದ ಬೇಗೆಯಿಂದ ಬೇಯುತ್ತಿರುವವರು. ಅವರನ್ನೇ ನಂಬಿಕೊಂಡಿರುವ ಅವರ ಮನೆಮಂದಿಯ ಕಥೆಯಾದರೂ ಏನಾಗಬೇಡ?

ನಾನು ಹೈಸ್ಕೂಲಿನಲ್ಲಿದ್ದಾಗ, ಮೊದಲ ಬಾರಿಗೆ ಕುಡಿದು ಶಾಲೆಯ ಸಮೀಪದ ಪೊದೆಯಲ್ಲಿ ಬಿದ್ದಿದ್ದ ಗೆಳೆಯ ಶಶಿಕುಮಾರನ ಚಿತ್ರ ಕಣ್ಣಿಗೆ ಅಂಟುತ್ತದೆ. ಕುಡಿತದಿಂದ ಬೀದಿಪಾಲಾದ ಕುಟುಂಬಗಳ ಸಂಖ್ಯೆಯಂತೂ ಬೀದಿಗೇ ನೆನಪಿರುವುದಿಲ್ಲ.

ತಂಬಾಕು, ಮದ್ಯಪಾನದ ಸಂಪೂರ್ಣ ನಿಷೇಧದಿಂದ ಸ್ವಲ್ಪಮಟ್ಟಿಗಾದರೂ ಆರ್ಥಿಕ ಸಮಾನತೆಯನ್ನು ಸಾಧಿಸಬಹುದೇನೋ. ದುರಂತವೆಂದರೆ, ನಮ್ಮ ರಾಜಕಾರಣದ ಬೇರಿಗೆ ಇದರ ಅಗತ್ಯವಿರುವುದರಿಂದ ಯಾವ ಟೊಂಗೆಯನ್ನೂ, ಗೂಡುಗಳನ್ನು ಅಷ್ಟು ಸುಲಭವಾಗಿ ಅದು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ!
**
-ಕಾಜೂರು ಸತೀಶ್

No comments:

Post a Comment