ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, September 4, 2015

ಎದೆಯಲ್ಲಿ ಉಳಿದದ್ದು ...

ಹಿಂದೊಮ್ಮೆ ನನ್ನ ಎಂದಿನ ಪೆದ್ದುತನವನ್ನು ಬಳಸಿ ಗೆಳೆಯನನ್ನು -"ಶಿಫಾರಸ್ಸಿಲ್ಲದೆ, ಲಾಬಿಯಿಲ್ಲದೆ ಕನ್ನಡ ಸಾಹಿತ್ಯದಲ್ಲಿ ಪ್ರಶಸ್ತಿಗಳು ಸಿಗುತ್ತವೆಯೇ? ಹಾಗೆ ಪ್ರಶಸ್ತಿ ಗಳಿಸಿದವರು ಯಾರಾದರೂ ಇದ್ದಾರೆಯೇ? ಅವರ ಹೆಸರು ಕೇಳಬೇಕೆಂಬ ಆಸೆಯಿದೆ" ಎಂದು ಪ್ರಶ್ನಿಸಿದ್ದೆ!

"ಇದ್ದಾರೆ " ಎಂದಿದ್ದೇ ತಡ, "ಯಾರವರು"? ಎಂದಿದ್ದಕ್ಕೆ ಕವಿಯೊಬ್ಬರ ಹೆಸರನ್ನು ಹೇಳಿದ್ದರು.
*

ಒಂದು ದಿನ ಕವಯಿತ್ರಿ ಸ್ಮಿತಾ ಅಮೃತರಾಜ್ ಅವರು ಕರೆಮಾಡಿ "ಕಡೆಂಗೋಡ್ಲು ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನಿಸಿದ್ದಾರೆ, ಆ ಪ್ರಶಸ್ತಿ ನಿಮಗೇ ಸಿಗುತ್ತದೆ " ಎಂದು ಹೇಳಿ ನನ್ನ ಮುಜುಗರವನ್ನು ಹೆಚ್ಚು ಮಾಡಿದ್ದರು. ನಾನು ನಗುತ್ತಾ ತಿರುಗುಬಾಣ ಬಿಡಲು ಪ್ರಯತ್ನಿಸಿದರೂ ಅವರ ಮಾತನ್ನು ತಿರಸ್ಕರಿಸುವಲ್ಲಿ ಸೋತಿದ್ದೆ. ಪ್ರೀತಿಯ ಕವಿ ವಾಸುದೇವ ನಾಡಿಗ್ ಅವರಿಂದ ವಿಮರ್ಶೆಯನ್ನು ಬರೆಸಿಕೊಂಡಿದ್ದ ಹಸ್ತಪ್ರತಿಗೆ ಒಂದಿಷ್ಟನ್ನು ಸೇರಿಸಿ(ಅವರಿಗೂ ತಿಳಿಸದೆ), ಕಳುಹಿಸಿ, ನಿರಾಳವಾಗಿ, ಆ ಕಡೆಗೆ ಯೋಚಿಸುವುದಕ್ಕೂ ಪುರುಸೊತ್ತಿಲ್ಲದಂತೆ ಬದುಕಿನ ಯಾತ್ರೆಯಲ್ಲಿ ತಲ್ಲೀನನಾಗಿದ್ದೆ.
*

ಮತ್ತೊಂದು ದಿನ ಎಂ.ಜಿ.ಎಂ. ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಗ್ರಂಥಪಾಲಕ , ಸ್ನೇಹಜೀವಿ ವೆಂಕಟೇಶ್ ಅವರು ಕರೆ ಮಾಡಿ ಕಡೆಂಗೋಡ್ಲು ಪ್ರಶಸ್ತಿಗೆ ಆಯ್ಕೆಯಾಗಿದ್ದನ್ನು ತಿಳಿಸಿದರು. ನಾನು ದಂಗಾಗಿ ಹೋದೆ! ಸುಡುವ ಏಕಾಂತದಲ್ಲಿ, ಸಾಹಿತ್ಯ ವಲಯದ ಪರಿಧಿಯ ಹೊರಗೆ ಕನಕನಂತೆ ಬದುಕುತ್ತಿರುವ ನನಗೆ ಅದೊಂದು ಬೆರಗು.ಇಂತಹ ಬೆರಗನ್ನು ಹುಟ್ಟಿಸಿದವರ ನ್ಯಾಯಪರತೆ, ಶಿಸ್ತು, ವಸ್ತುನಿಷ್ಠತೆಯು, ನನ್ನಂಥ ಕವಿತೆಯ ಕೊರಳಪಟ್ಟಿ ಹಿಡಿದು ನ್ಯಾಯ ಕೇಳ ಹೊರಡುವ ಮತ್ತಿನ್ನೆಷ್ಟೋ ಹುಡುಗರಿಗೆ ಬದುಕನ್ನೂ,ಸಾಹಿತ್ಯವನ್ನೂ ದಟ್ಟವಾಗಿ ಪ್ರೀತಿಸಲು ಕಲಿಸುವ ಸಂಗತಿ. ಶರಣು ಕಡೆಂಗೋಡ್ಲು ಪ್ರತಿಷ್ಠಾನಕ್ಕೆ ಮತ್ತು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ. ಜೊತೆಗೆ ಪ್ರೋತ್ಸಾಹಿಸಿದ ಪ್ರೊ. ಕೃಷ್ಣ ಭಟ್, ಡಾ. ಜಯರಾಮ ಕಾರಂತ, ಪ್ರೊ. ಮುರಳೀಧರ ಹಿರಿಯಡ್ಕ, ಡಾ.ಪ್ರಜ್ಞಾ ಮಾರ್ಪಳ್ಳಿ, ಡಾ. ಮಹಾಬಲೇಶ್ವರ ಭಟ್, ಸುಕನ್ಯ ಕಳಸ, ಡಾ.ನರೇಂದ್ರ ರೈ ದೇರ್ಲ ಅವರಿಗೆ .


ಈ ನೆಪದಲ್ಲಿ ಗೆಳೆಯರಾದ ಪ್ರವೀಣ್,ಭರಮಪ್ಪ , ಪ್ರವೀಣಕುಮಾರ ದೈವಜ್ಞಾಚಾರ್ಯರು ತುಂಬಿಕೊಟ್ಟ ಮರೆಯಲಾಗದ ಅನುಭವಗಳನ್ನು ಹೊತ್ತೊಯ್ಯುತ್ತಿದ್ದೇನೆ. ರಮ್ಯ ಕೆ.ಜಿ. ಮೂರ್ನಾಡು ,ಶುಭಲಕ್ಷ್ಮಿಯವರ ಉಪಸ್ಥಿತಿ ಹರ್ಷದ ಸಂಗತಿ.



**

-ಕಾಜೂರು ಸತೀಶ್

2 comments: