ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, September 1, 2015

'ಗಾಯದ ಹೂವುಗಳು' ಕವನ ಸಂಕಲನದ ಕುರಿತು

"ಗಾಯದ ಹೂವುಗಳು" ಕುರಿತು ನನ್ನುಡಿ...

ಕೊಡಗಿನ ಸಾರಸ್ವತ ಲೋಕಕ್ಕೆ ತಮ್ಮ ವಿಶಿಷ್ಟ ಸಾಹಿತ್ಯ ಕೃಷಿಯ ಕೊಡುಗೆಯೊಂದಿಗೆ ಚಿರಪರಿಚಿತರಾಗಿರುವ ಪ್ರೀತಿಯ ಕವಿ ಶ್ರೀ ಕಾಜೂರು ಸತೀಶ್ ರವರಿಗೆ ೨೦೧೫ರ ಕಡೆಂಗೋಡ್ಲು ಕಾವ್ಯ ಪುರಸ್ಕಾರಕ್ಕಾಗಿ ತುಂಬು ಅಭಿನಂದನೆಗಳು...

ಪುಸ್ತಕ ಬಿಡುಗಡೆಯ ದಿನದಂದೇ ಕೈತಾಕಿದ ಕಾಜೂರರ "ಗಾಯದ ಹೂವುಗಳು"ನ್ನು ಮೂಸುತ್ತಲೇ ಇದ್ದೇನೆ... ಆಘ್ರಾಣಿಸಿದಷ್ಟೂ ಹಸಿ-ಹಸಿ ಕಾವ್ಯಗಳು ಕಣ್ತೆರೆದುಕೊಳ್ಳುತ್ತಲೇ ಇವೆ ನನ್ನೊಳಗೆ... ಕವಿತೆಗಳನ್ನು ವಿಮರ್ಶಿಸುವಷ್ಟು ಪ್ರಬುದ್ಧತೆ ನನ್ನಲ್ಲಿ ಇನ್ನೂ ಹುಟ್ಟಿಕೊಂಡಿಲ್ಲವಾದ್ದರಿಂದ ಪ್ರತೀ ಕವಿತೆಗಳನ್ನೂ ಹೃದಯಕ್ಕೇ ತೆಗೆದುಕೊಂಡು ಓದಿಕೊಂಡಿದ್ದೇನೆ... ಕೆಲವು ಕವಿತೆಗಳಲ್ಲಿ ವ್ಯಕ್ತಗೊಂಡ ಪ್ರತಿಮೆಗಳು ನನ್ನ ಗ್ರಹಿಕೆಗೆ ಒದಗದಿದ್ದರೂ ಹೊಸ-ಹೊಸ ಹೊಳಹುಗಳನ್ನು ನನ್ನೊಳಗೆ ಸ್ಫುರಿಸುತ್ತಿವೆ....

ಭಾವ ಬಾಂಧವ್ಯಗಳ ತಾಕಲಾಟದೊಳಗೆ ಜೀಕುತ್ತಿರುವ ಈ ಜೀವಜಗತ್ತಿನಲ್ಲಿ ಯಾವುದೂ ಮುಖ್ಯವಲ್ಲ ಎಂದುಕೊಳ್ಳುತ್ತಿರುವಾಗಲೇ ಯಾವುದೂ ಅಮುಖ್ಯವಲ್ಲ ಎಂದು ಕವಿತೆಗಳು ಮಾತಿಗಿಳಿದುಬಿಡುತ್ತವೆ.... ನೆಲ-ನಿಸರ್ಗದೊಂದಿಗೇ ಬದುಕು ಕಟ್ಟಿಕೊಂಡ ಈ ನೆಲದ ಕವಿಯ ಕವಿತೆಗಳೆಲ್ಲವೂ ಅನುಭವ ಪ್ರಾಮಾಣಿಕತೆಯಿಂದ ಅಭಿವ್ಯಕ್ತಗೊಂಡವುಗಳಾಗಿವೆ ಎಂಬುದು ನಿಸ್ಸಂದೇಹ... 'ಕಾಲ'ಬುಡದ ಇರುವೆ-ಚಪ್ಪಲಿಗಳು, ಸಂವೇದನೆಗಳನ್ನು ಉದ್ದೀಪನಗೊಳಿಸುವ ನದಿ, ಒಲೆ-ಅವ್ವನನ್ನು ಬಾಚಿ ತಬ್ಬಿಕೊಂಡ ಕವಿಯ ಆಂತರ್ಯ ನಿಜಕ್ಕೂ ಪರಿಪಕ್ವತೆಯ ವಿಕಾಸ....

ಸತೀಶ್ ರ ಎಲ್ಲಾ ಕವಿತೆಗಳನ್ನು ಆವಾಹಿಸಿಕೊಳ್ಳುವಾಗ,
ಇವು ದಮನಿತರ ದನಿಯಾಗಿ, ಆತ್ಮಾಭಿಮಾನವನ್ನು ಬಡಿದೆಬ್ಬಿಸಿಕೊಳ್ಳುವ ಕಾರಣವಾಗಿ ನಿಲ್ಲುತ್ತದೆ... ಕಲ್ಪನಾ ಸ್ವಾತಂತ್ರ್ಯವನ್ನು ಅತಿಯಾಗಿ ಬಳಸಿಕೊಳ್ಳದೆ ಅನುಭವದ ಹೊಳಹುಗಳೊಂದಿಗೆ ಹರವಿಕೊಂಡ ಕವಿತೆಗಳು ಆಪ್ತವೆನಿಸುತ್ತವೆ....
ಬೆರಗು ಹುಟ್ಟಿಸುತ್ತವೆ... ಕವಿಯ ಖಿನ್ನತೆಯೇ ಹಡೆದ ಈ ಕವಿತೆಗಳೆಲ್ಲಾ ಸಾರ್ವತ್ರಿಕತೆಯ ನೆಲೆಗಟ್ಟಿನಲ್ಲಿ ಗಟ್ಟಿಯಾಗಿ ಅನಾವರಣಗೊಂಡಿವೆ....
ಪ್ರಪಂಚದ ಬಹಿರ್ಮುಖತೆಯನ್ನು ಬಿಂಬಿಸಿದಷ್ಟೂ ಅಂತರ್ಮುಖತೆಯನ್ನು ಪ್ರತಿಬಿಂಬಿಸಿರುವುದು ವಿಶೇಷವೆನಿಸಿದೆ....

ಸಾವಿನಾಚೆಗೂ ಗುಟುರುಗುಟ್ಟುವ ಸಾಮಾಜಿಕ ತರತಮಗಳಾದ ಅಸ್ಪೃಶ್ಯತೆ, ಅತ್ಯಾಚಾರ, ಭ್ರಷ್ಟತೆ, ಮತಾಂಧತೆ, ಕುಟಿಲತೆ, ದುಷ್ಟತೆಗಳನ್ನು ಕಾಡುಕವಿತೆ, ಚಪ್ಪಲಿಗಳು, ಮೈಲಿಗೆ, ಕಡಲಾಚೆಗಿನ ಹುಡುಗಿಗೆ, ಹಾವು, ನಾವಿಬ್ಬರು ತೀರಿಕೊಂಡ ಮೇಲೆ- ಇವೇ ಮೊದಲಾದ ಕವಿತೆಗಳು ಅದ್ಭುತವಾಗಿ ಧ್ವನಿಸುತ್ತವೆ... ಜೊತೆಗೆ ಸಮಾಜಮುಖಿ ಸೂಕ್ಷ್ಮ ಸಂವೇದನೆಗಳ ದೃಷ್ಟಿಕೋನವನ್ನೂ; ದಿಟ್ಟಿಸಬೇಕಾದ ಪರಿಯನ್ನೂ; ಶೂನ್ಯತೆಯನ್ನು ತುಂಬಿಕೊಳ್ಳಬೇಕಾದ ತುರ್ತನ್ನೂ ಮುಂದಿಡುತ್ತವೆ... ಹೀಗಾಗಿ ಕವಿ ಪ್ರಬುದ್ಧರೆನಿಸುತ್ತಾರೆ... ಕರ್ತವ್ಯಪ್ರಜ್ಞರೆನಿಸುತ್ತಾರೆ...

ಈ ಲೋಕದೊಳಗಿನ ತಾಕಲಾಟಗಳಿಗೆ ಮೈಯೊಡ್ಡಿಕೊಂಡ ಭಾವದ ಹೂವುಗಳು ಗಾಯಗೊಂಡು ನರಳುತ್ತಿರುವ ಸಂದರ್ಭದಲ್ಲೇ ಕವಿ ತನ್ನ ಕವಿತೆಗಳ ಮೂಲಕವೇ ಮುಲಾಮನ್ನೂ ಹಚ್ಚುತ್ತಾರೆ...
ತಕ್ಷಣದ ಅಸಹಾಯಕತೆಯನ್ನು ಮೆಟ್ಟಿ ನಿಲ್ಲುವ ಛಲವನ್ನೂ ಮೂಡಿಸುತ್ತಾರೆ. ಕವಿತೆಗಳು ಜೀವಂತಿಕೆಯನ್ನು ಕಾಪಿಟ್ಟುಕೊಳ್ಳುವುದು ಇಂಥ ಮನೋಭೂಮಿಕೆಯಲ್ಲೇ. ಜಗದ ಗಾಯಗಳೆಲ್ಲವೂ ಬಿರಿದ ಹೂವುಗಳಾಗಲಿ ಎನ್ನುವ ಕವಿಯ ಆಶಯ ಹೃದ್ಯ, ಸುಂದರ.

ಒಂದು ಮಹಾಮೌನದೊಳಗಿನ ಚೈತನ್ಯ ಶಕ್ತಿಯಾಗಿರುವ ಶ್ರೀಯುತರು ನನ್ನ ಸಮಕಾಲೀನರು ಎನ್ನುವುದು ನನ್ನ ಅಭಿಮಾನ,ಹೆಮ್ಮೆ . ಅಪಾರ ಅಂತಃಶಕ್ತಿಯುಳ್ಳ ಇವರು ಇನ್ನೂ ಎತ್ತರಕ್ಕೆ ಏರಬಲ್ಲವರು, ಏರಲಿ. ತಮ್ಮ ಕಾವ್ಯದ ಮೂಲಕ ಮನಸ್ಸು-ಮನಸ್ಸುಗಳ ನಡುವಿನ ಅತೃಪ್ತಿಗಳನ್ನು ತಣಿಸುತ್ತಾ ಜನರನ್ನು ಮುಟ್ಟುತ್ತಿರಲಿ. ಶುಭವಾಗಲಿ.
**


-ರಮ್ಯ ಕೆ.ಜಿ. ಮೂರ್ನಾಡು


3 comments: