ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, December 18, 2014

ಕವಿತೆ,ಹಸ್ತಪ್ರತಿ ಮತ್ತು ನಾನು

ಎರಡು ಸಾವಿರ್ದ ಹತ್ರಲ್ಲಿ ಯಾರೋ ಕೇಳಿದ್ರು ಅಂತ ನನ್ನ ಕವಿತೆಗಳ್ನೆಲ್ಲ ಗುಡ್ಡೆಹಾಕಿ ಹೊಸ್ದಾಗಿ ಬಟ್ಟೆ ಹೊಲಿಯೋ ಟೈಲರ್ ಥರ ಒಂದು ಹಸ್ತಪ್ರತಿ ಹೊಲ್ದಿದ್ದೆ; ಕೇಳಿದ್ದವ್ರಿಗೆ ಕೊಟ್ಕಳ್ಸಿದ್ದೆ. ತಮಾಷೆ ಅಂದ್ರೆ ಅದೀಗ ಅವ್ರ ಹತ್ರ ಇಲ್ವಂತೆ. ಹಿಂಗೆ ಹೇಳ್ಕೊಳ್ತಿರೋ ಸಾಕ್ಷಿಯೊಂದನ್ನ ಬಿಟ್ರೆ ಹಸ್ತಪ್ರತಿ ಮಾಡಿದ್ದೆ ಅನ್ನೋದಕ್ಕೆ ನನ್ಹತ್ರ ಯಾವ್ದೇ ಸಾಕ್ಷಿಗಳಿಲ್ಲ.ಆ ಕವಿತೆಗಳೂ ಇಲ್ಲ;ಕವಿತೆ ಬರ್ದ ಆ ಕ್ಷಣಗಳೂ ಕೂಡ.



ಮೊನ್ನೆ ಯಾವ್ದೋ ಒಂದು ಸಂದರ್ಭ ನನ್ನ ಎರಡನೇ ಹಸ್ತಪ್ರತಿಯನ್ನೂ 'ಬಿಡುಗಡೆ'ಗೊಳಿಸ್ಲಿಕ್ಕೆ ಒತ್ತಾಯ ಹೇರ್ತು. ಮತ್ತೆ ಗುಡ್ಡೆಹಾಕಿ ಒಂದಿಬ್ರಿಗೆ ಕಳಿಸ್ದೆ. ಪ್ರೀತಿಯ ಕವಿ ವಾಸುದೇವ ನಾಡಿಗ್ ಸರ್ ಅದ್ರಲ್ಲಿದ್ದ ಪೆಕ್ರು-ಪೆಕ್ರಾದ ಕವಿತೆಗಳನ್ನು ಚನ್ನಾಗಿ ವಿಶ್ಲೇಷಿಸಿ ಒಳ್ಳೆ ಸಲಹೆಗಳ್ನ ನೀಡಿದ್ರು. ಓದಿ ಖುಷಿಪಟ್ಟಿದ್ದೆ.



ನಾಳೆ ಒಂದು ಒಳ್ಳೆಯ ಏಕಾಂತದಲ್ಲಿ ಒಲೆ ಉರಿಸ್ಲಿಕ್ಕೆ ,ಧೂಳು ಒರೆಸ್ಲಿಕ್ಕೆ,ಮತ್ತೊಂದು ಕವಿತೆ ಮತ್ತೆ ಇನ್ನೇನೇನೋ ಗೀಚ್ಲಿಕ್ಕೆ ಸದ್ಯಕ್ಕೆ ಉಳ್ದಿರೋ ಈ ಹಸ್ತಪ್ರತೀನ ಬಳಸಿದ್ರೂ ನನ್ನಲ್ಲಿ ಅಂತದ್ದೇನೂ ಬದ್ಲಾವಣೆ ಕಾಣ್ಸೋದಿಲ್ಲ.ಮಳೆ-ಚಳಿಗಾಲ್ದಲ್ಲಿ ಉರ್ಸಿದ್ರೆ ಒಂದಷ್ಟು ಉಪಕಾರವಾದ್ರೂ ಆಗ್ಬಹುದು ಅನ್ನಿಸ್ತಿದೆ.



ನಾನು ಬರ್ದವೆಲ್ಲ ನನ್ನವೇ ಕೂಸುಗಳು ಅಂತ ಪತ್ತೆಹಚ್ಲಿಕ್ಕೆ ಯಾವ DNA ಪರೀಕ್ಷೆಯ ತಂತ್ರಜ್ಞಾನನೂ ಇನ್ನೂ ಬಂದಿಲ್ಲ ಅನ್ಸುತ್ತೆ .ಕವಿತೆ ಹುಟ್ಟುತ್ತಲ್ಲ -ಆ ಕ್ಷಣ ಯಾರ್ದು? ನನ್ನದಾ ಅಥವಾ ಇದ್ದಕ್ಕಿದ್ಹಂಗೆ ಗರ್ಭ ಕಟ್ಟಿಸೋ ಪರಿಸರದ್ದಾ? ಆದ್ರೆ ಒಂದು ವಿಷ್ಯ - ನನ್ನೊಳ್ಗೆ ಬರ್ಸ್ಕೊಂಡ ಎಲ್ಲ ಸಾಲುಗಳನ್ನೂ ನಾನು scientific ಆಗಿ prove ಮಾಡ್ತೀನಿ . ಅದಕ್ಕೆ ಬೇಕಾದ documents / witnesses ನನ್ಹತ್ರ ಇವೆ. ಅದೇ ದೊಡ್ಡ ಖುಷಿ ನಂಗೆ. ನಿಮ್ಗಿದೆಲ್ಲಾ ತಮಾಷೆ ಅನ್ನಿಸ್ಬಹುದೇನೋ!


ನಂಗೆ ಕವಿತೆ ಅನ್ನೋದು ಒಂದು defence mechanism . ಈ ಕವಿತೆಗಳ ಮೇಲೆ ಯಾಕೆ ಅಷ್ಟೊಂದು ಸಿಟ್ಟು ಅಂದ್ರೆ ,ಅವ್ಗಳ ಓದು ನಮ್ಮ ಸಾಹಿತ್ಯ ವಲಯದಲ್ಲಿ prejudice based ಆಗಿರೋದು.ಈಗಾಗ್ಲೇ ಕವಿ ಅಂತ ಗುರುತಿಸ್ಕೊಂಡವ್ರು,ನಾಲ್ಕಾರು ಪ್ರಶಸ್ತಿಗಳ್ನ ತಲೆ ಮೇಲೆ ಅಂಟಿಸ್ಕೊಂಡವ್ರು,famous ಆದವ್ರು ಏನು ಗೀಚಿದ್ರೂನೂ ಕವಿತೇನೇ.ಈ ಕಾಲ್ದಲ್ಲಿ ದಿನಕ್ಕೆ ಹತ್ತೊ- ಹದಿನೈದೊ ಕವಿತೆ ಹಡ್ಯೋರೂ ಇದ್ದಾರೆ ! ಕಾರಲ್ಲೇ ಹೋಗೋರು ಕಾಲ್ನಡಿಗೆಯ ಕವಿತೆಗಳ್ನ ತುಂಬಾ ಚೆನ್ನಾಗಿ ಕಟ್ತಿದ್ದಾರೆ! ನಂಗೆ ನಗು ಬರುತ್ತೆ.


ಹಿಂಗೆ ಹಸ್ತಪ್ರತಿಗಳ್ನ ಆಗಾಗ ಬಿಡುಗಡೆಗೊಳ್ಸೋ ಭಾಗ್ಯ ನಂಗೆ ಬರ್ತಾ ಇರ್ಲಿ ಅಂತ ಕಾಯ್ತಾನೇ ಇರ್ತೀನಿ. ಈ ವರ್ಷ ಕವಿತೆಗಳು ಹೆಚ್ಚೆಚ್ಚು ಸಯಾಮಿಗಳಾಗಿ ಹುಟ್ಟಿ ಮೂರ್ನೇ ಹಸ್ತಪ್ರತೀನ ನಾನೇ ಚಪ್ಪಾಳೆ ತಟ್ಟಿ ನಾನೇ ಬಿಡುಗಡೆಗೊಳಿಸ್ಕೋಬೇಕು ಅನ್ನೋ ಪ್ಲ್ಯಾನೂ ಇದೆ.


ನಿಜ, ಆಮೇಲೆ ನನ್ನನ್ನೇ ನಾನು ಬಿಡುಗಡೆಗೊಳಿಸ್ಕೋಬೇಕು ಅನ್ನೋ ಪ್ಲ್ಯಾನೂ ಕೂಡ ಬಾಕಿ ಇದೆ!!

**

-ಕಾಜೂರು ಸತೀಶ್