ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, October 16, 2014

ರಾಮ ಮತ್ತು ಲಕ್ಷ್ಮಣ

ಸಾಹುಕಾರ್ರು ರಾಮ.
ಸರಳತೆಯೆಂದರೇನೆಂದು
ಅವರನ್ನೇ ನೋಡಿ ಕಲೀಬೇಕು.


ಸರಳ ಉಡುಪು
ಮೃದು ಮಾತು
ಸಾತ್ವಿಕ ಆಹಾರ
ಸಾತ್ವಿಕ ಮುಖಭಾವ .


ಆರು ಕಾರುಗಳಿದ್ದರೂ
ಒಂದು ಕಾರಿನಲ್ಲಿ ಹೋಗುವುದನ್ನೂ
ನಾವೆಂದೂ ನೋಡಿಲ್ಲ.
ಕೋಟ್ಯಾಧಿಪತಿಯೆಂಬ ಭಾವ
ಇಲ್ಲವೇ ಇಲ್ಲ.


ವ್ಯಾಪಾರಕ್ಕೆಂದು
ವಾರಕ್ಕೆರಡು ಬಾರಿ
ಮುಂಬೈ-ಚೆನ್ನೈಗೆ ಪ್ರಯಾಣ .
ಹೋಗೋದು,ಬರೋದು
ಯಾರಿಗೂ ಗೊತ್ತಾಗಲ್ಲ.



ತನ್ನ ಉಗ್ರ ಪ್ರತಾಪ ತೋರಿ
ಊರೊಳಗೆ ಮೆರೆಯುವ
ಅಭ್ಯಾಸ ಇಲ್ಲವೇ ಇಲ್ಲ.


ಬಂಗಲೆಯಲ್ಲಿದ್ದಾಗ
ಒಂದು ಬನಿಯನ್ನು
ಒಂದು ಬರ್ಮುಡಾ ಚಡ್ಡಿ .
ಬಾಲ್ಕನಿಯಲ್ಲಿ ಕುಳಿತು
ಮೊಬೈಲಿನಲ್ಲಿ ಮಾತುಕತೆ .



ಬೆಳಿಗ್ಗೆ
ಸಂಜೆ
ದೇವಸ್ಥಾನದಲ್ಲಿ .



ಪ್ರಾರ್ಥಿಸಿದರೆ
ಈ ಸಾಹುಕಾರ್ರ ಹಾಗೆ
ಪ್ರಾರ್ಥಿಸಬೇಕು.


ಕಣ್ಮುಚ್ಚಿ
ಅಡ್ಡಬಿದ್ದು
ನಮಸ್ಕರಿಸುವುದು ನೋಡಿದರೆ
ಎಂಥ ದುಷ್ಟ ದೇವರುಗಳ
ಮನಸ್ಸೂ ಕರಗಿಬಿಡುತ್ತದೆ.



ಕೊಡುಗೈ ದಾನಿ
ದೇವಸ್ಥಾನ
ಮಸೀದಿ
ಚರ್ಚು
ಉತ್ಸವ
ಸಮ್ಮೇಳನ
ಎಲ್ಲಕ್ಕೂ ಇವರದೇ ಪ್ರಾಯೋಜಕತ್ವ.



ಯಾವಾಗ ಸಾಲ ಕೇಳಿದ್ರೂ
ಎಷ್ಟು ಕೇಳಿದ್ರೂ
ಇಲ್ಲವೆನ್ನೋದಿಲ್ಲ.
ಹಿಂತಿರುಗಿಸಲು ಕೇಳುವುದೂ ಇಲ್ಲ.
ಬಾಂಡ್ ಪೇಪರಿನಲ್ಲಿ ಒಂದು ಸಹಿ ಮಾಡಿದರೆ ಸಾಕು.



ಲಕ್ಷ್ಮಣ ಇವನ ತಮ್ಮ .
ಇಷ್ಟೊಳ್ಳೆ ಸಾಹುಕಾರ್ರ ತಮ್ಮ
ಇವನೇನಾ ಅಂತ ಎಲ್ಲರ ಪ್ರಶ್ನೆ .
ರಾಕ್ಷಸ ಕುಲದವನು
ದುಷ್ಟತನದ ಪರಮಾವಧಿ .


ಅಣ್ಣ ಕೊಟ್ಟ ಹಣವನ್ನು
ಹಿಂತಿರುಗಿ ಪಡೆದು
ಜನರಿಗೆ ದ್ರೋಹ ಬಗೆಯುವವನು
ಎಳೆದ ರೇಖೆ ಮೀರಿದರೆ
ಗೂಂಡಾಗಳನ್ನು ಬಿಟ್ಟು ಒದೆಸುವವನು
ಮನೆಯಿಂದ ಎಳೆದು ಹೊರಹಾಕುವವನು
ಕೊಲ್ಲಲೂ ಹಿಂಜರಿಯದವನು.


ಎಷ್ಟು ಆರೋಪಗಳು ಅವನ ಮೇಲೆ
ಅವೆಲ್ಲ ನಿರ್ನಾಮವಾದರೂ
ಕೊಲೆಕೇಸಿನ ಮೇಲೆ
ಕಂಬಿ ಎಣಿಸಿದ್ದೂ ಆಯಿತು .


ಅದರ ತಲೆನೋವೆಲ್ಲ
ಈ ಸಾಹುಕಾರ್ರಿಗೇ.


ಜಾಮೀನು ಪಡೆಯಲು
ಕೇಸು ನಡೆಸಲು
ಲಕ್ಷಗಟ್ಟಲೆ ಖರ್ಚುಮಾಡಿದ್ದಾನೆ
ಚಿನ್ನದಂಥ ಆ ಮನುಷ್ಯ .

**

ಮಲಯಾಳಂ ಮೂಲ- ರಾಧಾಕೃಷ್ಣನ್ ಪೆರುಂಬಳ




ಕನ್ನಡಕ್ಕೆ -ಕಾಜೂರು ಸತೀಶ್

No comments:

Post a Comment