ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, August 2, 2014

ಸೆರೆಸಿಕ್ಕದವ

ಪ್ರಿಯ ಪೊಲೀಸಣ್ಣಾ..
ಎಷ್ಟೆಂದು ಕಾಯಲಿ ನಿನ್ನ .





ನೀ ಬರಬಹುದೆಂದು
ಅವರು ಕರೆಮಾಡಿ ತಿಳಿಸಿದ ರಾತ್ರಿ
ಒಂದು ರಂ ಬಾಟಲಿ ತಂದಿಟ್ಟೆ.
ಚಿಕನ್ ಬಿರಿಯಾನಿ ಮಾಡಿಟ್ಟೆ.
ದಾರಿ ತಪ್ಪದಿರಲೆಂದು
ರಾತ್ರಿಯಿಡೀ ದೀಪ ಹಚ್ಚಿಟ್ಟೆ.






ಆದಾಗ್ಯೂ ದಾರಿ ತಪ್ಪಿದೆ ನೀನು .
ಯಾರೋ ತಪ್ಪಿಸಿದರು.
ದೂರದ ಮೊಬೈಲ್ ಟವರಿನ ಕೆಳಗೆ ನಿನ್ನ ಕರೆಗಳೆಲ್ಲ
ಹತಾಶವಾಗುರುಳುತ್ತಿದ್ದದ್ದು ನನಗರಿಯಿತು.






ನಾನು ಕೊಲೆಗೈದ ವ್ಯಕ್ತಿ
ಆ ರಾತ್ರಿ ಕನಸಿನಲ್ಲಿ ಬಂದಿದ್ದ.
ನಿನಗೆಂದು ಮಾಡಿಟ್ಟ ಬಿರಿಯಾನಿಯನ್ನು
ನಾನವನಿಗೆ ಕೊಟ್ಟೆ.
ಜೊತೆಗೆ ಒಂದು ಲೋಟ ತಣ್ಣೀರು .
ತಿಂದು , ಈ ಬೆಂಚಿನಲ್ಲಿ ಮಲಗಿ ನಿದ್ದೆಹೋದ.







ಈಗಲೂ ,
ನನ್ನೊಳಗಿನ ಆ ಬೆಂಚಿನಲ್ಲಿ
ಆತ ನಿದ್ರಿಸುತ್ತಿದ್ದಾನೆ.
ನನಗ್ಗೊತ್ತು,ಆತ ಎದ್ದೇ ಏಳುತ್ತಾನೆ;
ನನ್ನ ನೋಡುತ್ತಾನೆ .
ಅವನಿಗಷ್ಟೆ ಸಾಧ್ಯವಿರುವ
ಕರುಣೆ ತುಂಬಿದ ಧ್ವನಿಯಲ್ಲಿ ಪ್ರಶ್ನಿಸುತ್ತಾನೆ.
ಏನೆಂದು ಉತ್ತರಿಸಲಿ ನಾನು ?






ಕತ್ತಿಯ ಅಂಚು ನಾನಾಗಿದ್ದೆ;
ಹಿಡಿತ ಅವರದಾಗಿತ್ತು ಎನ್ನಲೇ?
ಬೆರಳಚ್ಚು ನನ್ನದು;
ಮಾತಿನ ಅಚ್ಚು ಅವರದಾಗಿತ್ತು ಎನ್ನಲೇ?
ಪ್ರಯೋಗ ನಾನು ;
ಆದರ್ಶ ಅವರು ಎನ್ನಲೇ?







ಅದನ್ನೆಲ್ಲ ನೆನೆಯುವಾಗ
ಒಂದೊಂದು ನೆರಳೂ ನನ್ನ ಉಸಿರುಗಟ್ಟಿಸುತ್ತಿದೆ.
ಒಂದೊಂದು ನಿಮಿಷವೂ ಸುಡುತ್ತಿದೆ.
ನಾನು ನನ್ನನ್ನೇ ಬಂಧಿಸಿಕೊಳ್ಳುತ್ತಿದ್ದೇನೆ.
ಬಿಡುಗಡೆಗೊಳ್ಳುತ್ತಲೂ ಇದ್ದೇನೆ.
ಯಾರೋ ಸೇದುವ ಬೀಡಿಯ ಹಾಗೆ
ಕ್ಷಯಿಸುತ್ತಾ ಬರುತ್ತಿದ್ದೇನೆ.
ಯಾರೋ ಜಗಿಯುವ ಚ್ಯುಯಿಂಗ್ ಗಮ್ಮಿನ ಹಾಗೆ
ವೃದ್ಧಿಸುತ್ತಲೇ ಇದ್ದೇನೆ.
ಹಗಲುಗಳು ನನ್ನ ಅಡಗಿಸಿಡುತ್ತವೆ,
ರಾತ್ರಿಗಳು ನನ್ನ ಬಯಲಾಗಿಸುತ್ತವೆ.






ಪೊಲೀಸಣ್ಣಾ ..
ನೀ ಯಾಕೆ ಬರಲಿಲ್ಲ ಹೇಳು.







ಆ ಮಚ್ಚನ್ನು
ಪವಿತ್ರ ಗ್ರಂಥದ ಹಾಗೆ ಜೋಪಾನವಾಗಿರಿಸಿದ್ದೇನೆ.
ನಡುನಡುವೆ ಓದುತ್ತೇನೆ.
ಲೋಹದಲ್ಲಿ ಬರೆದಿದ್ದು.
ಅದರರ್ಧ ರಕ್ತ
ಇನ್ನರ್ಧ ಮಾಂಸ.









ಆದರೂ ,ಅದಲ್ಲ ವಂಚನೆ
ಅದಲ್ಲ ಅಪರಾಧ .





ನನ್ನ ಜನರೇ,
ಎಂಥ ವಂಚಕ ನಾನು !
ನನ್ನಂಥವರ ಸೃಷ್ಟಿಸಲೇನು
ನೀವು ಸಂಘಟನೆ ಮಾಡಿದ್ದು?
ಸಹಿಸಿದ್ದು,ತ್ಯಜಿಸಿದ್ದು?
ನನ್ನ ಅಡಗಿಸಿಡಲೇನು
ನೀವು ನಿವಾಸಗಳನ್ನು ಸಿದ್ಧಗೊಳಿಸಿದ್ದು?
ನನ್ನನ್ನು ಬರೆಯಲೇನು
ನೀವು ರಕ್ತ ಬೆರೆಸಿದ್ದು?
ನನ್ನನ್ನು ಸ್ವತಂತ್ರಗೊಳಿಸಲೇನು
ನೀವು ಸ್ವಾತಂತ್ರ್ಯ ಸ್ವಾತಂತ್ರ್ಯ ಎಂದು ಕೂಗಿದ್ದು?



ಪ್ರಿಯ ಪೊಲೀಸಣ್ಣಾ...
**


ಮಲಯಾಳಂ ಮೂಲ- ಪಿ.ಎನ್. ಗೋಪಿಕೃಷ್ಣನ್

ಕನ್ನಡಕ್ಕೆ -ಕಾಜೂರು ಸತೀಶ್

No comments:

Post a Comment