ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, August 29, 2014

ನನಗೆ ಸ್ವಾತಂತ್ರ್ಯ ಸಿಗುವ ದಿನ

-೧-

ನನಗೆ ಸ್ವಾತಂತ್ರ್ಯ ಸಿಗುವ ದಿನ:



ಗಾಳಿಯನ್ನು ಕಿಟಕಿ -ಬಾಗಿಲುಗಳಲ್ಲಿ ಊಳಿಡಲು ಬಿಡುತ್ತೇನೆ;
ಹೊರಗಿರುವ ನಾಯಿಯೂ ಅದನ್ನೇ ಅನುಕರಿಸಿದರೆ ಸುಮ್ಮನಿರುತ್ತೇನೆ.





ಬೆಳಕಿಗಾಗಿ ಗೋಡೆಯನ್ನೆಲ್ಲ ತೂತುಮಾಡಿ ಕೆಡವುತ್ತೇನೆ;
ಕೋಣೆಯೊಳಗೂ ಹೊರಗೂ ಒಂದೇ ಬಟ್ಟೆ ತೊಟ್ಟು ನಡೆಯುತ್ತೇನೆ.







ನೋಟು -ನಾಣ್ಯಗಳನ್ನು ಮೇಜಿನ ಮೇಲೆ ಹರಡಿಡುತ್ತೇನೆ;
ಅಡುಗೆ ಪಾತ್ರೆಗೆ ಮುಚ್ಚಳ ಬಳಸುವುದನ್ನೇ ನಿಷೇಧಿಸುತ್ತೇನೆ.






ಕವಿತೆ ಬರೆದಿಟ್ಟ ಹಾಳೆಗಳಲ್ಲಿ ತಿಂಡಿ ಪೊಟ್ಟಣ ಕಟ್ಟುತ್ತೇನೆ;
ಬೀಗದ ಕೀಗಳನ್ನು ಗುಜರಿಯಂಗಡಿಗೆ ಬಿಟ್ಟಿಯಾಗಿ ಕೊಡುತ್ತೇನೆ .






ನಡುರಾತ್ರಿಯಲ್ಲಿ ದೀಪಗಳನ್ನು ಬಹಿಷ್ಕರಿಸುತ್ತೇನೆ;
ಸುಂದರಿ ಗೆಳತಿಯನ್ನು ಅದೇ ಹೊತ್ತಿಗೆ ಕುಂಟಾಬಿಲ್ಲೆ ಆಡಲು ಕಳಿಸುತ್ತೇನೆ.






ಹುಟ್ಟುವ ಕತೆ-ಕವಿತೆಗಳನ್ನು ಕೊಲ್ಲುತ್ತೇನೆ;
ರಸ್ತೆಯ ಕಪ್ಪು ಕಂಬಳಿಯಲ್ಲಿ ಮಲಗಿ ಹಾಯಾಗಿ ನಿದ್ರಿಸುತ್ತೇನೆ.










-೨-


ನನಗೆ ಸ್ವಾತಂತ್ರ್ಯ ಸಿಗುವ ದಿನ:


ಮನೆ-ದೇಶ-ರಾಜ್ಯಗಳುದುರುತ್ತವೆ.
ಆಮೇಲೆ -ನಕ್ಷೆಯೆಂದರೆ ನೆಲ ಮತ್ತು ನೀರು,ಅಷ್ಟೆ .







ಜಗತ್ತು ಮನೆಯಾಗುತ್ತದೆ;
ನಾವೆಲ್ಲ ಅದರ ಮಕ್ಕಳಾಗುತ್ತೇವೆ.










ಹಿಂಸಿಸುವ ಎಲ್ಲವೂ ಮಾಯವಾಗುತ್ತದೆ;
ಬಾಂಬು ,ಬಂದೂಕು ,ಕತ್ತಿ ,ಮಾತು, ಕವಿತೆ...
ಎಲ್ಲವೂ ಆರ್ಟ್ ಗ್ಯಾಲರಿಗಳಲ್ಲಿ ಖುಷಿಯಾಗಿರುತ್ತವೆ.


**

-ಕಾಜೂರು ಸತೀಶ್




Wednesday, August 6, 2014

ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು .

ಎಷ್ಟು ನೆನಪುಗಳ ಭಾರ
ನಾನು ಧರಿಸಿದ ನಿನ್ನ ಅಂಗಿಯಲ್ಲಿ.


ಹೊರಡುವ ಮುನ್ನ
ಯಾವ ವಿಷಜಂತುಗಳಿರುವ ಕಾಡು ನುಗ್ಗಿದ್ದೆ ನೀನು -
ಅವುಗಳಿಗೆ ಸರಿದಾರಿ ತೋರಿಸಿ ಬರಲು.
ಅಂಗಿಗಂಟಿದ ಚುಂಗು ಎಷ್ಟು ಕಿತ್ತರೂ
ಅಲ್ಲೊಂದಿಲ್ಲೊಂದರಂತೆ ಚುಚ್ಚುತ್ತಾ
ನಿನ್ನ ನೆನಪಿಸಲೆಂಬಂತೆ ಉಳಿದುಕೊಂಡಿವೆ.


ನೀನು ಹೊರಟುಹೋದ ಮೇಲೂ
ನೀಲಿಗಟ್ಟಿದ ನಿನ್ನ ಮೈಗೆ ಅಂಟಿ
ಬಲೂನಾಗಲು ಹೊರಟ
ಉಣ್ಣಿಯ ನೆನಪು ನನಗೀಗ.


ನಿನ್ನಂಗಿಯ ಕ್ಯಾನ್ವಾಸಿನಲ್ಲಿ
ಗಾಯದ ಕೆಂಪುಗೆರೆ
ಗೇರು ಹಣ್ಣಿನ ಗುರುತು
ಬಾಳೆಯೆಲೆಯ ಕಲೆ
ಸೆಗಣಿ ಗೊಬ್ಬರದ ಕಂಪು.




ನೀನು ಗೀಚಿ ಜೇಬಲ್ಲಿಟ್ಟ ಪ್ರೇಮ ಕವಿತೆ
ಸುರಿದ ಹಾಳು ಮಳೆಯ ಕೃತಿಚೌರ್ಯಕ್ಕೆ ಸಿಲುಕಿದೆ
ಒದ್ದೆಯಾದ ಬಿಳಿಯ ಹಾಳೆ
ಅವಳ ಊದಿದ,ಬಿಳುಚಿಕೊಂಡ ಮುಖ
ಹೃದಯದ ಕೆಂಪು ಬಸಿದು
ಜೇಬಲ್ಲಿರಿಸಿದ ಗುಲಾಬಿಯದ್ದೂ ಅದೇ ಕಥೆ.




ಹಾದಿ-ಬೀದಿಯಲ್ಲಿ ನಿನ್ನ ಅಂಗಿ ತೊಟ್ಟು ನಡೆವಾಗ
ಹಿಂಬದಿಯಿಂದ ಯಾರೋ ನಿನ್ನ ಹೆಸರ ಕೂಗಿ ಕರೆವಾಗ
ಹಿಂತಿರುಗಿಯೂ ನೋಡದೆ ನಡೆದುಹೋಗುತ್ತೇನೆ
ನಿನ್ನ ಬದುಕಿಸುವ ಮಹದಾಸೆಯಿಂದ.




ವ್ಯಾಲಿಡಿಟಿ ಮುಗಿದ ನಿನ್ನ ಮೊಬೈಲ್ ಸಂಖ್ಯೆಯನ್ನು ರಿಚಾರ್ಜ್ ಮಾಡಲು ಹೊರಟಿದ್ದೇನೆ
ನಿನ್ನ ಬೇಟೆಯಾಡಿದ್ದಕ್ಕೆ
ನಮ್ಮ ಬೇಟೆಯಾಡುತ್ತಿರುವುದಕ್ಕೆ
ಕಾರಣ ಕೇಳಬೇಕು .




ಬೆಳಕಾಗುವವರೆಗೂ
ಕರೆಮಾಡಿ ಕೇಳುತ್ತಲೇ ಇರುತ್ತೇನೆ.

**

-ಕಾಜೂರು ಸತೀಶ್

Saturday, August 2, 2014

ಸೆರೆಸಿಕ್ಕದವ

ಪ್ರಿಯ ಪೊಲೀಸಣ್ಣಾ..
ಎಷ್ಟೆಂದು ಕಾಯಲಿ ನಿನ್ನ .





ನೀ ಬರಬಹುದೆಂದು
ಅವರು ಕರೆಮಾಡಿ ತಿಳಿಸಿದ ರಾತ್ರಿ
ಒಂದು ರಂ ಬಾಟಲಿ ತಂದಿಟ್ಟೆ.
ಚಿಕನ್ ಬಿರಿಯಾನಿ ಮಾಡಿಟ್ಟೆ.
ದಾರಿ ತಪ್ಪದಿರಲೆಂದು
ರಾತ್ರಿಯಿಡೀ ದೀಪ ಹಚ್ಚಿಟ್ಟೆ.






ಆದಾಗ್ಯೂ ದಾರಿ ತಪ್ಪಿದೆ ನೀನು .
ಯಾರೋ ತಪ್ಪಿಸಿದರು.
ದೂರದ ಮೊಬೈಲ್ ಟವರಿನ ಕೆಳಗೆ ನಿನ್ನ ಕರೆಗಳೆಲ್ಲ
ಹತಾಶವಾಗುರುಳುತ್ತಿದ್ದದ್ದು ನನಗರಿಯಿತು.






ನಾನು ಕೊಲೆಗೈದ ವ್ಯಕ್ತಿ
ಆ ರಾತ್ರಿ ಕನಸಿನಲ್ಲಿ ಬಂದಿದ್ದ.
ನಿನಗೆಂದು ಮಾಡಿಟ್ಟ ಬಿರಿಯಾನಿಯನ್ನು
ನಾನವನಿಗೆ ಕೊಟ್ಟೆ.
ಜೊತೆಗೆ ಒಂದು ಲೋಟ ತಣ್ಣೀರು .
ತಿಂದು , ಈ ಬೆಂಚಿನಲ್ಲಿ ಮಲಗಿ ನಿದ್ದೆಹೋದ.







ಈಗಲೂ ,
ನನ್ನೊಳಗಿನ ಆ ಬೆಂಚಿನಲ್ಲಿ
ಆತ ನಿದ್ರಿಸುತ್ತಿದ್ದಾನೆ.
ನನಗ್ಗೊತ್ತು,ಆತ ಎದ್ದೇ ಏಳುತ್ತಾನೆ;
ನನ್ನ ನೋಡುತ್ತಾನೆ .
ಅವನಿಗಷ್ಟೆ ಸಾಧ್ಯವಿರುವ
ಕರುಣೆ ತುಂಬಿದ ಧ್ವನಿಯಲ್ಲಿ ಪ್ರಶ್ನಿಸುತ್ತಾನೆ.
ಏನೆಂದು ಉತ್ತರಿಸಲಿ ನಾನು ?






ಕತ್ತಿಯ ಅಂಚು ನಾನಾಗಿದ್ದೆ;
ಹಿಡಿತ ಅವರದಾಗಿತ್ತು ಎನ್ನಲೇ?
ಬೆರಳಚ್ಚು ನನ್ನದು;
ಮಾತಿನ ಅಚ್ಚು ಅವರದಾಗಿತ್ತು ಎನ್ನಲೇ?
ಪ್ರಯೋಗ ನಾನು ;
ಆದರ್ಶ ಅವರು ಎನ್ನಲೇ?







ಅದನ್ನೆಲ್ಲ ನೆನೆಯುವಾಗ
ಒಂದೊಂದು ನೆರಳೂ ನನ್ನ ಉಸಿರುಗಟ್ಟಿಸುತ್ತಿದೆ.
ಒಂದೊಂದು ನಿಮಿಷವೂ ಸುಡುತ್ತಿದೆ.
ನಾನು ನನ್ನನ್ನೇ ಬಂಧಿಸಿಕೊಳ್ಳುತ್ತಿದ್ದೇನೆ.
ಬಿಡುಗಡೆಗೊಳ್ಳುತ್ತಲೂ ಇದ್ದೇನೆ.
ಯಾರೋ ಸೇದುವ ಬೀಡಿಯ ಹಾಗೆ
ಕ್ಷಯಿಸುತ್ತಾ ಬರುತ್ತಿದ್ದೇನೆ.
ಯಾರೋ ಜಗಿಯುವ ಚ್ಯುಯಿಂಗ್ ಗಮ್ಮಿನ ಹಾಗೆ
ವೃದ್ಧಿಸುತ್ತಲೇ ಇದ್ದೇನೆ.
ಹಗಲುಗಳು ನನ್ನ ಅಡಗಿಸಿಡುತ್ತವೆ,
ರಾತ್ರಿಗಳು ನನ್ನ ಬಯಲಾಗಿಸುತ್ತವೆ.






ಪೊಲೀಸಣ್ಣಾ ..
ನೀ ಯಾಕೆ ಬರಲಿಲ್ಲ ಹೇಳು.







ಆ ಮಚ್ಚನ್ನು
ಪವಿತ್ರ ಗ್ರಂಥದ ಹಾಗೆ ಜೋಪಾನವಾಗಿರಿಸಿದ್ದೇನೆ.
ನಡುನಡುವೆ ಓದುತ್ತೇನೆ.
ಲೋಹದಲ್ಲಿ ಬರೆದಿದ್ದು.
ಅದರರ್ಧ ರಕ್ತ
ಇನ್ನರ್ಧ ಮಾಂಸ.









ಆದರೂ ,ಅದಲ್ಲ ವಂಚನೆ
ಅದಲ್ಲ ಅಪರಾಧ .





ನನ್ನ ಜನರೇ,
ಎಂಥ ವಂಚಕ ನಾನು !
ನನ್ನಂಥವರ ಸೃಷ್ಟಿಸಲೇನು
ನೀವು ಸಂಘಟನೆ ಮಾಡಿದ್ದು?
ಸಹಿಸಿದ್ದು,ತ್ಯಜಿಸಿದ್ದು?
ನನ್ನ ಅಡಗಿಸಿಡಲೇನು
ನೀವು ನಿವಾಸಗಳನ್ನು ಸಿದ್ಧಗೊಳಿಸಿದ್ದು?
ನನ್ನನ್ನು ಬರೆಯಲೇನು
ನೀವು ರಕ್ತ ಬೆರೆಸಿದ್ದು?
ನನ್ನನ್ನು ಸ್ವತಂತ್ರಗೊಳಿಸಲೇನು
ನೀವು ಸ್ವಾತಂತ್ರ್ಯ ಸ್ವಾತಂತ್ರ್ಯ ಎಂದು ಕೂಗಿದ್ದು?



ಪ್ರಿಯ ಪೊಲೀಸಣ್ಣಾ...
**


ಮಲಯಾಳಂ ಮೂಲ- ಪಿ.ಎನ್. ಗೋಪಿಕೃಷ್ಣನ್

ಕನ್ನಡಕ್ಕೆ -ಕಾಜೂರು ಸತೀಶ್

Friday, August 1, 2014

ಮಹಜರು

ಯಾರು ಬಾಗಿಲು ಮುರಿದು ಒಳಹೋಗಿದ್ದು?
ನಾನು ,ಸಾಬು ಮತ್ತು ಲಾಡ್ಜ್ ಮ್ಯಾನೇಜರ್.
ಬಾಡಿ ಮೊದಲು ಕಂಡಿದ್ದು ಯಾರು ?
ನಾನು ಮತ್ತು ಈ ರೂಂ ಬಾಯ್.
ಎಲ್ಲಿ ?
ಒಂದು ಮಂಚದಲ್ಲಿ
ಇನ್ನೊಂದು ನೆಲದಲ್ಲಿ .
ಹೇಗೆ?
ಊದಿಕೊಂಡು,ವಾಸನೆ ಬಂದಿತ್ತು .
ಮೈಮೇಲೆ ಬಟ್ಟೆಯಿರಲಿಲ್ಲ.
ಓಹೋ..ಆಗ ಎಲ್ಲ ಮುಗಿದಿತ್ತು?
ಆಮೇಲೆ ?
ಮೈಮೇಲೆ ಬಟ್ಟೆ ಮುಚ್ಚಿದೆವು.
ತಪ್ಪು..ಸಾಕ್ಷಿ ನಾಶಪಡಿಸಬಾರದಿತ್ತು.
ಹುಂ..ಆಮೇಲೆ ?
ಸ್ಟೇಷನ್ನಿಗೆ ಫೋನ್ ಮಾಡಿ ಹೇಳ್ದೆ.
ಏನಾದ್ರೂ ಪತ್ರ-ಗಿತ್ರ ಸಿಕ್ತಾ?
ಈ ಕಾಗದದ ಚೂರು ಸಿಕ್ತು.
'ಅಮ್ಮಾ,ದಯವಿಟ್ಟು ಕ್ಷಮಿಸು' ಅಂತ ಇದೆ.
ಯಾರು ಇವ್ರಿಬ್ರು?
ಆಶಿಕ್ ಮತ್ತು ರಾಧ.
ಬೆಂಗಳೂರಿನವ್ರು.
ಪ್ರಾಯ?
20, 25.






ಕಷ್ಟ ,ಹೂವಿನಂಥ ಯೌವ್ವನದಲ್ಲಿ
ಯಾಕೆ ಹೀಗೆ ಮಾಡ್ಕೊಂಡ್ರು?
ಅದೂ ಈ ಪುಣ್ಯಕ್ಷೇತ್ರದಲ್ಲಿ.
ರತಿಯೂ ಇವರ ಪ್ರಣಯಲೀಲೆಗಳನ್ನು
ಅನುಭವಿಸಲಿಲ್ಲ ಅನ್ಸುತ್ತೆ.
ಇಲ್ದಿದ್ರೆ ಸಾಯ್ತಿರ್ಲಿಲ್ಲ.
ರತಿಯಲ್ವೆ ಪ್ರಣಯಕಥೆಯ ಏರಿಳಿತಗಳ ಸಾರ?
ಹೋಗ್ಲಿ ಬಿಡಿ,
ಪೊಲೀಸ್ರಿಗೆ ಅವೆಲ್ಲ ಯಾಕೆ?




ಮುಖಭಾವ ಹೇಗೆ?
ಹತಾಶೆ?ದುಃಖ ?ಖಿನ್ನತೆ?
ಅದೆಲ್ಲ ಸಹಜ ಸಾರ್ ಈಗ-
ಭಕ್ತರ ಮುಖದಲ್ಲೂ ಕೂಡ .
ಇಲ್ಲೆಷ್ಟು ದಿನ ಇದ್ರು?
ಹತ್ತು.




ಏಯ್ ರೂಂ ಬಾಯ್..
ನಗು ,ಅಳು ಅಥವಾ
ಏನಾದ್ರೂ ಕಿರುಚಾಟ ಕೇಳಿಸ್ತಾ ಅಲ್ಲಿಂದ?
ಹುಚ್ಚುಹುಚ್ಚಾದ ಒಂದು ಹಾಡು ಕೇಳಿದ್ದೆ.
ಯಾವ ಹಾಡು?
'ಅಮ್ಮ ಲೂಸಾ..
ಅಪ್ಪ ಲೂಸಾ..'
ಹಾಗಾದ್ರೆ ನೀನು ಬಾಗಿಲಿಗೆ ಕಿವಿಗೊಟ್ಟು ನಿಂತಿದ್ದೆ;
ಏನ್ ನಿನ್ನ್ ಹೆಸ್ರು?
ಇಲ್ಲ ಸಾರ್.. ನಾನಂಥವನಲ್ಲ.
ಹೆಸ್ರು?
ಭವದಾಸ್.
ಭವದಾಸಾ..ಹೇಳು ,ಏನು ಕೇಳಿಸ್ಕೊಂಡೆ?
ಹೊಸ ಗೆಸ್ಟುಗಳನ್ನು ರೂಮಿನೊಳಗೆ ಬಿಟ್ಟು
ವೆರಾಂಡದಲ್ಲಿ ಬರ್ತಿದ್ದಾಗ
ಆ ಹಾಡಿನ ಬಾಕಿ ಕೇಳಲು ಕಿವಿಗೊಟ್ಟೆ.
ಆದರೆ ಕೇಳಿದ್ದು:
ರಿಪೇರಿಯಾಗಿದ್ದ ಫ್ಯಾನ್
ಗಾಳಿ ಸಿಗದೆ ನರಳುತ್ತಿದ್ದದ್ದು,
ರಾತ್ರಿಯೆಂಬೊ ಹಕ್ಕಿಯ
ಕಡೆಗಾಲದ ಬಿಕ್ಕುವಿಕೆ.
ಹಾಡಿನ ದನಿ ಕಡಿಮೆಯಾಗುತ್ತಾ
ನಿಂತೇ ಹೋದದ್ದನ್ನು ಕೇಳಿ
ಅತ್ತುಬಿಟ್ಟೆ..
ಆ ಅಳು ನನ್ನ ಸಾವಿನ ಹಾಗೆ ಸಾರ್.







ಈಚೆ ಬಾ.
ನೀನೇನೊ ಮುಚ್ಚಿಡ್ತಿದ್ದೀಯ.
ಕವಿತೆಯ ಹಾಗೆ ಮಾತಾಡಿ
ಮರೆಮಾಚಬೇಡ.
ಕೀ ಹಾಕುವ ಕಿಂಡಿಯೊಳಗೆ
ಕಣ್ಣು ತೊರಿಸಿ ನೋಡಿಲ್ವಾ ನೀನು ?
ಇಲ್ಲ ಸಾರ್.
ನಿಜ ಹೇಳು-
ನಿನಗೂ ,ಆ ಹುಡುಗಿಗೂ ಸಂಬಂಧವಿರ್ಲಿಲ್ವಾ?
ಅದಕ್ಕಲ್ವಾ ಅವ್ರಿಬ್ರೂ ಸತ್ತಿದ್ದು?
ಹೇಳು, ಎಷ್ಟು ಮಂದಿಗೆ ನೀನವಳ ಬಿಟ್ಟುಕೊಟ್ಟೆ?
ಅವರಲ್ಲಿ ಯಾರು ಯಾರನ್ನು ಕೊಂದರು?
ನಿಜ ಹೇಳು,ನೀನು ಯಾರನ್ನು ಕೊಂದೆ?




ಅಯ್ಯೋ ಸಾರ್
ನನಗ್ಗೊತ್ತೇ ಇಲ್ಲ ಅವ್ರು.
ಸುಂಟಿಕೊಪ್ಪದವ್ನು ನಾನು,
ಮಡಿಕೇರಿಯ ಹತ್ರ.



ನಿಮ್ಮಲ್ಲಿ ಎಷ್ಟು ಜನ ಸ್ಟಾಫ್?
ನಲ್ವತ್ತು.
ಅಷ್ಟೇನಾ?
ಅಷ್ಟೆ.
ನೀವೇನಾ ಆಲಿಬಾಬಾ ಮತ್ತು ನಲ್ವತ್ತು ಕಳ್ಳರು ?
ಏನ್ ಸಾರ್?
ಇನ್ನೂ ಕೇಳಲು ಬಾಕಿಯಿದೆ-
ಹಾಡಿನ ಬಗ್ಗೆ ,ಸಾವಿನ ಬಗ್ಗೆ ..
ಪೋಸ್ಟ್ ಮಾರ್ಟಂ ರಿಪೋರ್ಟ್ ಬರಲಿ.




ಆತ್ಮಹತ್ಯೆ ಯಾವತ್ತೂ ನಡೆಯುತ್ತಾ ಇಲ್ಲಿ?
ಇದೇ ಮೊದ್ಲು ಸಾರ್.
ಇಲ್ಲಿಯವರೆಗೆ
ಎಲ್ಲೂ ಸಿಗದ
ಸಾವಿಲ್ಲದ ಲಾಡ್ಜಿನ ಸಾಸಿವೆ
ಇಲ್ಲೇ ಸಿಗುತ್ತಿತ್ತು ಸಾರ್.



ಏನು?
ಸಾರಿ ಸಾರ್.




ಸಂದರ್ಶಕರ ರಿಜಿಸ್ಟರ್ ಇದೆಯಾ?
ಇದೆ ಸಾರ್.
ರಾತ್ರಿ ಗೇಟಿಗೆ ಬೀಗ ಹಾಕ್ತೀರಾ?
ಹಾಕ್ತೇವೆ ಸಾರ್.
ಬೀಗ ಹಾಕಿದ್ರೂ
ವಿಐಪಿಗಳಿಗೆ ಬರಬಹುದಲ್ವೇ?
ರಿಜಿಸ್ಟರ್ನಲ್ಲಿ ಹೆಸರು ಬರೆಯಬಾರದಂಥವರಿಗೆ?




ಕಡೆಯ ಬಾರಿಗೆ
ಯಾರು ಆ ಕೋಣೆಗೆ ಹೋಗಿದ್ದು?
ಯಾವಾಗ?





ಸಾರ್..
ಮೂರನೇ ತಾರೀಕು ರಾತ್ರಿ;
ಮರೆತುಬಿಟ್ರಾ?!
ಫುಲ್ ಟೈಟ್ ಆಗಿದ್ರಿ ನೀವು.
ಮತ್ತೆ
ಇವತ್ತು ಬಾಗಿಲು ಮುರಿದು
ನಾನು ಮತ್ತು ಮ್ಯಾನೇಜರ್.




ಮತ್ತೆ..
ಎರಡನೇ ಸಲ ನೀವು!!
**
ಮಲಯಾಳಂ ಮೂಲ- ಕೆ.ಜಿ. ಶಂಕರಪಿಳ್ಳೆ



ಕನ್ನಡಕ್ಕೆ - ಕಾಜೂರು ಸತೀಶ್