ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 23, 2014

ದೇವರು ಕಟ್ಟಕಡೆಗೆ ಸೃಷ್ಟಿಸಿದ್ದು ನನ್ನನ್ನೇ

ಅಯ್ಯೋ ನನ್ನ ದೇವರೇ,
ನೀನು ಅತ್ತಿದ್ದು ಯಾಕೆ?
ಕಡೆಯ ಕವಿತೆ ಬರೆಯುತ್ತಿರುವ ಕವಿಯ ಹಾಗೆ
ಹೊರಳಾಡಿದ್ದು ಯಾಕೆ?
ಕಣ್ಣೆದುರಿಗೇ ಸಾವು ಕಂಡ ಹಾಗೆ
ಚಕಿತನಾಗಿದ್ದು ಯಾಕೆ?

ಇಷ್ಟಿಷ್ಟೇ ನಿನ್ನ ಬೆರಳುಗಳಲ್ಲಿ
ಆಕಾರ ಪಡೆಯುತ್ತಾ ಬಂದೆ ನಾನು .
ನನ್ನ ಕಣ್ಣುಗಳು ,ಮುಖ,ಮೊಲೆ..
ಎಲ್ಲವನ್ನೂ ಉರುಟುರುಟಾಗಿಸಿದೆ ನೀನು .
ಜೇಡಿ ಮಣ್ಣಲ್ಲಿ ಕನ್ನಡಿ ಮಾಡಿ
ಸೊಂಟವ ಬಳುಕುವ ಹಾಗೆ ಮಾಡಿದೆ.
ಎಲ್ಲ ನಕ್ಷತ್ರಗಳು
ನನ್ನ ಮೇಲೆ ಮುಗಿಬಿದ್ದು
ಮಿನುಗಲು ತೊಡಗಿದವು.


ನೀನು
ತಂದೆಯೋ ಕಾಮುಕನೋ ಎಂದು
ಒಂದು ಕ್ಷಣ ಸಂದೇಹ ಪಟ್ಟೆ ನಾನು .


ಹೀಗಿದ್ದರೂ
ಮೋಡದಿಂದ ಮಳೆ ಸುರಿಯುವ ಹಾಗೆ
ನಿನ್ನಿಂದ ಹೊರಬಂದೆ.
ನಿನ್ನ ಬೆರಳುಗಳು ನನ್ನ ಹಿಂದೆ
ತಟಸ್ಥವಾಗಿ ನಿಂತವು.


ಹಿಂತಿರುಗಿ ನೋಡಿದರೆ
ಒಮ್ಮೆಯೂ ಹೋಗಲಾಗುವುದಿಲ್ಲ ಎಂದುಕೊಂಡು
ಮುಂದಕ್ಕೇ ನಡೆದೆ.


ನನ್ನ ಮುಂದೆಯೇ ಅವರು ನಡೆದುಹೋಗುತ್ತಿದ್ದರು.
ನಿನ್ನಿಂದ ಕೇವಲ
ಆರೇ ಆರು ದಿನಗಳಲ್ಲಿ ಸೃಷ್ಟಿಯಾದವರು.
ಎರಡು ಕೊಂಬುಳ್ಳವರು.
ನಾಲ್ಕು ಕಾಲು ಮತ್ತು ಬಾಲವುಳ್ಳವರು.


ಸ್ವಲ್ಪವೇ ಮುಂದೆ ಅವನೂ..
ಅವನು
ಕಬ್ಬಿಣ ,ಪ್ಲಾಸ್ಟಿಕ್ಕುಗಳಿಂದಾದವನು.
ನೆಲವನ್ನು ಗ..ಟ್ಟಿಯಾಗಿ ತುಳಿಯುವವನು.
ಅಗತ್ಯಕ್ಕಿಂತ ಹೆಚ್ಚು ಮಾತನಾಡುವವನು.
ತುಸು ಹೆಚ್ಚಾಗಿಯೇ ಅಭಿನಯಿಸುವವನು.


ಆದರೂ ,
ಒಂದನ್ನೂ ಸರಿದೂಗಿಸದವನು.
ಆ ದೇಹವನ್ನು ಮುಗಿಸಲು
ಮುಂದೆ ಹೋಗುತ್ತಿರುವವರ ಮೈಮೇಲೆ
ಚಾಟಿಯೇಟು ಕೊಡುವವನು.
ಒದೆಯುವವನು.
ಕೊಲ್ಲುವವನು.


ದೇವರೇ,
ನಿನ್ನ ಒಮ್ಮೆಯೂ ಮುಖತಃ ಕಾಣದಿರಲೆಂದು
ನಿನ್ನ -ಅವನ ನಡುವೆಯೊಂದು ಪರದೆಯಾಗಿ
ನನ್ನ ನಿಯೋಜಿಸಿದ್ದೇಕೆ?
ನನ್ನಿಂದಾಚೆಗೆ ಕಣ್ಣುಗಳು ಸೋತುಹೋದರೂ...
ಅವನು ಈಗಲೂ ಸುಳ್ಳನ್ನೇ ಹೇಳುತ್ತಿದ್ದಾನೆ:
"ನಾನೇ ಹಿಂದಿನಿಂದ ಮೊದಲಿಗನು".


ಆ ಸುಳ್ಳನ್ನು ಬಯಲು ಮಾಡಲು
ಅವನು ಮಿಂಚನ್ನು ಸೃಷ್ಟಿಸಿದ .
ಪ್ರಳಯ ಎಬ್ಬಿಸಿದ.
ಹಣದ ಪೆಟ್ಟಿಗೆ ನಿರ್ಮಿಸಿದ .
ಭಾಷೆಗಳನ್ನು ಕಲಸಿದ.
ದೇಶಗಳ ವಿಭಜಿಸಿದ.
ಅದೆಲ್ಲವನ್ನೂ ಸೇರಿಸಿ
ಹೊಸ ಪವಿತ್ರ ಗ್ರಂಥವನ್ನು ಬರೆದ.


ವಾಸ್ತವವಾಗಿ ,
ಪವಿತ್ರ ಗ್ರಂಥ ತುಂಬಾ ಸಣ್ಣದು.
ದೇವರೇ,
ನನಗೂ ನಿನಗೂ ಗೊತ್ತೇ ಇದೆ-
ಅದರಲ್ಲಿರೋದು ಎರಡೇ ಎರಡು ವಾಕ್ಯಗಳು ..


"ದೇವರು ಕಟ್ಟಕಡೆಯದಾಗಿ
ಸ್ತ್ರೀಯನ್ನು ಸೃಷ್ಟಿಸಿದರು.
ಆಮೇಲೆಲ್ಲ
ಅವಳೇ ಲೋಕವನ್ನು ಸೃಷ್ಟಿಸಿದಳು".
**
ಮಲಯಾಳಂ ಮೂಲ - ಪಿ.ಎನ್. ಗೋಪಿಕೃಷ್ಣನ್

ಕನ್ನಡಕ್ಕೆ- ಕಾಜೂರು ಸತೀಶ್



No comments:

Post a Comment