ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 16, 2014

ಅಲಂಕಾರ

ಸತ್ತಾಯಿತು
ಇನ್ನು ಅಲಂಕಾರವಷ್ಟೆ ಬಾಕಿ.




ಹೊರಬಿದ್ದ ಕಣ್ಣಗುಡ್ಡೆಗಳನ್ನು
ಮುಚ್ಚಿಡಲಾಗಿದೆ.
ಕಾಡಿಗೆಯಲ್ಲಿ ತಿದ್ದಿ ಕಪ್ಪಾಗಿಸಿದ
ಕಣ್ಣಿನ ಕಡೆಯ ಕನಸ್ಸನ್ನು
ಬಿಡುಗಡೆಗೊಳಿಸಲಾಗಿದೆ.





ಕನ್ನಡಕ ಬಿಚ್ಚದೆಯೇ ಇವತ್ತಿನ ಸ್ನಾನ.




ಬೇಗ ..
ಅಲಂಕಾರಕ್ಕೆ ಸಿದ್ಧಗೊಳಿಸಿ,
ಇನ್ನೂ ಎಷ್ಟೊಂದು ಕೆಲಸಗಳು ಬಾಕಿ ಇವೆ.




ಮೊದಲು ಹಣೆಗೆ ಬೊಟ್ಟು ಇಡೋಣ
ಅದು ಸಿಂಧೂರವಾಗಿರಲಿ
ವೃತ್ತಾಕಾರದಲ್ಲಿರಲಿ.
ಅಂಟುವ ಸಿಂಧೂರ ಬೇಡ
ಅದರ ಕಲೆ ಅಲ್ಲೇ ಉಳಿಯುತ್ತದೆ .
ಗಂಧದ ಬೊಟ್ಟು ಬೇಕಾ?
ವಿಭೂತಿಯಾದರೆ ಚೆನ್ನ
ಸ್ಮಶಾನಕ್ಕಲ್ಲವೇ?




ಕಣ್ರೆಪ್ಪೆಗಳಿಗೆ ಕಾಡಿಗೆ ಬೇಡ
ಕಣ್ಣೀರು ಜಿನುಗಿದರೆ
ಶುಭ್ರವಾಗಿ ಕಾಣಿಸಬಹುದು .



ಮೂಗಿನಲ್ಲಿ ಹತ್ತಿ ಇಡಲು ಮರೆಯಬಾರದು
ನಮ್ಮ ವಾಸನೆ ಹಿಡಿದು ಹಿಂದೆಯೇ ಬಂದರೆ?





ಸತ್ತು ಬಿಳುಚಿದ ತುಟಿಗಳು
ಕಳೆಗುಂದಿದ ಹಲ್ಲುಗಳು
ದಂಗೆಯೇಳದೆ ಇರುವುದಿಲ್ಲ .
ಒಂದು ಹೊಸ ಹತ್ತಿ ಬಟ್ಟೆ ಹರಿದುಕೊಡಿ
ಸೇರಿಸಿ ಕಟ್ಟಿ ಹಾಕೋಣ
ಪಾಠ ಕಲಿಸಬೇಕು .






ನಾಲಗೆಯಿಂದಿಳಿಯುತ್ತಿರುವ ವಿಷ
ಹೊರಗಿಳಿಯದಂತೆ ನೋಡಿಕೊಳ್ಳಬೇಕು
ಕೆನ್ನೆಯ ಈ ಒಂಟಿ ಕುಳಿಯನ್ನು ಮುಚ್ಚಿಡಬೇಕು
ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಲಿ.






ರಕ್ತ ಇಳಿಯುತ್ತಿರುವ ಕಿವಿಗಳಲ್ಲಿ
ಹತ್ತಿಯುಂಡೆಗಳನ್ನು ತುರುಕೋಣ
ಎಂಥ ಆಲಿಸುವ ಸಾಮರ್ಥ್ಯವಿತ್ತು-
ನಾವು ಹೇಳದಿರುವುದೇ ಕೇಳಿಸುತ್ತಿತ್ತು.
ಹೊಳೆಯುವ ಈ ವಾಲೆಗಳನ್ನು
ಬಿಚ್ಚಿಡಲು ಮರೆಯಬೇಡಿ
ಅದು ಹೊಳೆದದ್ದು ಸಾಕು.





ಕೈಗೆ ಕಟ್ಟಿದ ಕಪ್ಪು ದಾರದಲ್ಲಿರುವ
ತಾಯತವನ್ನು ಕತ್ತರಿಸಿಹಾಕಬೇಕು
ನೋಡೋಣ
ಇನ್ನ್ಯಾವ ರಕ್ಷೆಯಿದೆ ಇವಳಿಗೆ .






ಉಬ್ಬಿದ ನರಗಳಿರುವ ಕೈಗಳ
ಊದಿದ ಬೆರಳುಗಳನ್ನೆಲ್ಲ ಸೇರಿಸಿ
ಈಗಲೇ ಕಟ್ಟಿಹಾಕಬೇಕು
ಬಲೆ ಹೆಣೆಯುವ ಬೆರಳುಗಳವು
ಎಷ್ಟು ವೇಗ ಅವಕ್ಕೆ!
ಬೆರಳಿಗೆ ಅಂಟಿಕೊಂಡಿರುವ ಯಾವುದಾದರೂ
ಉಂಗುರವಿದೆಯೇ ನೋಡಿಕೊಳ್ಳಿ.



ಖಾಲಿ ಹಸ್ತಗಳನ್ನು
ಕ್ಷಮೆ ಕೇಳುವ ಹಾಗೆ ಜೋಡಿಸಿಡಿ.




ಘಲ್ಲು ಘಲ್ಲೆನ್ನುವ ಕಾಲ್ಗೆಜ್ಜೆಗಳನ್ನು
ಬಿಚ್ಚಿಟ್ಟುಬಿಡಿ
ಶ್..ಜಾಗ್ರತೆ
ಶಬ್ದ ಕೇಳಿಸಬಾರದು.
ಕಾಲುಗಳನ್ನು ಸುಮ್ಮನೆ ಬಿಡಬಾರದು -
ಕಟ್ಟಿಹಾಕಬೇಕು.
ಮತ್ತೆ ಎದ್ದು ಬರಬಾರದು
ಯಾರ ನೆನಪಿನಂಗಳಕ್ಕೂ.





ಸಾಕು
ಎಲ್ಲ ತಯಾರಿಗಳೂ ಮುಗಿದವು
ಈಗ ನೋಡುವ ಸಮಯ.



ಕಡೆಯ ಬಾರಿ ಒಮ್ಮೆ ನೋಡಿ ಹೋಗೋಣ .





ಏನನ್ನೂ ಕೊಂಡು ಹೋಗುತ್ತಿಲ್ಲವೆಂದು
ಸರಿಯಾಗಿ ನೋಡಿ ಖಾತ್ರಿಪಡಿಸಿಕೊಳ್ಳಿ.





ಸ್ವಲ್ಪ ದೂರ ನಿಂತು
ಕಣ್ಣುಗಳನ್ನು ಒರೆಸೋಣ
ಸುಡುವ ಅವಳ ಎದೆಯ ಮೇಲೊಂದು
ಹೂವನ್ನಿಡೋಣ
ಎದೆಬಿರಿಯುವಂತೆ ಜೋರಾಗಿ ಅತ್ತುಬಿಡೋಣ.





ಆದರೆ ಹೆಚ್ಚು ಹೊತ್ತು ಮಲಗಿಸುವುದು ಬೇಡ
ಗುಂಡಿ ತೋಡಿ ಮುಚ್ಚಿಹಾಕಬೇಕು ಬೇಗ.




ಹಿರಿಯರು ಇನ್ನೂ ಬದುಕಿದ್ದಾರೆ.
ಶವ ಸುಡಲು
ಮಾವಿನ ಮರವನ್ನು ಕತ್ತರಿಸುವುದು ಬೇಡ.




ಸುಡುವುದೇ ಬೇಡ ಬಿಡಿ
ಸುಟ್ಟರೆ ಬೂದಿ ಉಳಿದುಬಿಡುತ್ತದೆ.

**
ಮಲಯಾಳಂ ಮೂಲ: ಕೀರ್ತನಾ ವಿಶ್ವನಾಥ್




ಕನ್ನಡಕ್ಕೆ - ಕಾಜೂರು ಸತೀಶ್

2 comments: