ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 2, 2014

ಬಿಕ್ಕಟ್ಟಿನ ಕಾಲದಲ್ಲಿ ಅವಿಸ್ಮರಣೀಯ ಸಾಹಿತ್ಯ ಮೇಳಗಳು..

ಕವಿ,ಹೋರಾಟಗಾರ ಮೃದುಮನಸ್ಸಿನ ಬಸವರಾಜ ಸೂಳಿಭಾವಿಯವರ ಪರಿಚಯವಾದದ್ದು ಮೂರು ವರ್ಷಗಳ ಹಿಂದೆ . ಆಮೇಲೆ , ೮೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ವಾಚಿಸಲು ಮಡಿಕೇರಿಗೆ ಬಂದಿಳಿದಿದ್ದೇ ತಡ,ತುಂಬಾ ಆಪ್ತವಾಗಿ,ಗಂಭೀರವಾಗಿ ಮಾತನಾಡಿದ್ದರು.

ಮತ್ತೆ ,ಮೊನ್ನೆ ಹಾವೇರಿಯಲ್ಲಿ ನಡೆದ 'ಮೇ ಸಾಹಿತ್ಯ ಮೇಳ'ದ ಕವಿಗೋಷ್ಠಿಗೆ ಆಹ್ವಾನಿಸಿದ್ದರು.ತಮ್ಮ 'ಲಡಾಯಿ' ಪ್ರಕಾಶನದ ವತಿಯಿಂದ ಕೆಲವು ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಸಿದ ಮೇ ಸಾಹಿತ್ಯ ಮೇಳವು ಸದ್ಯದ ನಮ್ಮ ಸವಾಲುಗಳ ಕುರಿತು ಸೂಕ್ಷ್ಮವಾಗಿ ಬೆಳಕು ಚೆಲ್ಲಿತು. ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಪರಮ ಹಂಬಲವನ್ನಿಟ್ಟುಕೊಂಡ ಮೇಳವು- ಕೋಮುವಾದ, ಭಯೋತ್ಪಾದಕತೆ,ಬಂಡವಾಳಶಾಹಿ ಧೋರಣೆ ಮುಂತಾದ ಆತಂಕಕಾರಿ ಅಂಶಗಳನ್ನು ಪ್ರಬಲವಾಗಿ ಖಂಡಿಸಿತು.

ಮೇ ಸಾಹಿತ್ಯ ಮೇಳ-೨೦೧೪, ಈ ನಾಡಿನ ಅಪೂರ್ವ ಚಿಂತಕರ ಸಮಾಗಮ.ಅಲ್ಲಿ ವಿದ್ವತ್ ಪೂರ್ಣ ಗೋಷ್ಠಿಗಳು, ಹೋರಾಟದ ಗೀತೆಗಳು ,ನಾಟಕ, ಪುಸ್ತಕ ಪ್ರದರ್ಶನ-ಮಾರಾಟ, ಊಟೋಪಚಾರಗಳಿದ್ದವು.

'ನನ್ನ ಕಾವ್ಯ -ನನ್ನ ಬದುಕು ' ಕಾರ್ಯಕ್ರಮದಲ್ಲಿ ದು.ಸರಸ್ವತಿ , ಎಚ್.ಎನ್.ಆರತಿ, ಸತೀಶ ಕುಲಕರ್ಣಿಯವರು ತೆರೆದಿಟ್ಟ ಬದುಕು ಮತ್ತು ಅದರಂತೆಯೇ ಇದ್ದ ಕವಿತೆ ವಿಶಿಷ್ಟವಾಗಿತ್ತು. ದು. ಸರಸ್ವತಿಯವರ ಕವಿತೆಯಂತೂ ಎಂಥವರನ್ನೂ ಬೆಚ್ಚಿಬೀಳಿಸುವ ಪ್ರತಿಮೆಗಳಿಂದ ಕೂಡಿದ್ದವು.

ಎ.ರೇವತಿಯವರು ಬರೆದ ತಮ್ಮ ಹಿಜ್ರಾ ಜೀವನದ ನೋವು -ನಲಿವುಗಳನ್ನು ನಾಟಕದಲ್ಲಿ ತಾವೇ ಅಭಿನಯಿಸುವ ಮೂಲಕ ಪಾತ್ರಗಳಿಗೆ ಜೀವ ತುಂಬಿದರು.ಭಾರತೀಯ ನಾಟಕ ರಂಗದಲ್ಲಿ ಇದೊಂದು ವಿಶಿಷ್ಟ ಪ್ರಯೋಗ .

ತೆಲುಗಿನ ಖ್ಯಾತ ಕವಿಗಳಾದ ಕೆ. ಶಿವಾರೆಡ್ಡಿ ಹಾಗೂ ನಗ್ನಮುನಿಯವರ ಉಪಸ್ಥಿತಿ ಮತ್ತು ಅವರೊಂದಿಗಿನ ಸಂವಾದವು ಮೇಳದ ಗಂಭೀರತೆಯನ್ನು ಹೆಚ್ಚಿಸಿದವು. ಡಾ.ಟಿ.ಆರ್.ಚಂದ್ರಶೇಖರ, ಡಾ.ಚಂದ್ರ ಪೂಜಾರಿ, ಪ್ರೊ. ವಿ.ಎಸ್.ಶ್ರೀಧರ, ದಿನೇಶ್ ಅಮೀನ್ ಮಟ್ಟು, ಡಾ. ಭಂಜಗೆರೆ ಜಯಪ್ರಕಾಶ್, ಡಾ.ಬಿ.ಎನ್. ಸುಮಿತ್ರಾಬಾಯಿ,ಡಾ.ಲಕ್ಷ್ಮೀನಾರಾಯಣ, ಡಾ.ಮುಜಾಫ್ಘರ್ ಅಸಾದಿ,ಪ್ರೊ.ಬಿ. ಗಂಗಾಧರಮೂರ್ತಿ ಮೊದಲಾದ ಚಿಂತಕರು ಅಸಮಾನ ಕರ್ನಾಟಕದ ಪ್ರತಿರೋಧದ ನೆಲೆಗಳನ್ನು , ಸವಾಲುಗಳನ್ನು ವರ್ತಮಾನ ಹಾಗೂ ಭವಿಷ್ಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು.


ಕಿರಿಯರೆಂಬ ಭೇದವಿಲ್ಲದೆ ಬರೆದ ಬರೆಹಗಳಿಗೆ ಅನಿಸಿಕೆ ಹೇಳುತ್ತಿದ್ದ , ಬೆನ್ನು ತಟ್ಟುತ್ತಿದ್ದ ಶೂದ್ರ ಶ್ರೀನಿವಾಸ್, ಎಂ.ಎಸ್.ರುದ್ರೇಶ್ವರಸ್ವಾಮಿ ,ಡಾ. ಎಚ್.ಎಸ್.ಅನುಪಮಾ, ಡಾ.ಕೃಷ್ಣ ಗಿಳಿಯಾರ್ ,ಗಣೇಶ್ ಹೊಸ್ಮನೆ, ಚಿನ್ಮಯ್ ಹೆಗ್ಡೆ, ನಾಗರಾಜ ಹರಪನಹಳ್ಳಿ, ಮಮತಾ ಅರಸೀಕೆರೆ ಮೊದಲಾದವರನ್ನು ಮೊದಲ ಬಾರಿಗೆ ಮುಖತಃ ನೋಡುವ ಅವಕಾಶವನ್ನು ಮೇಳವು ಒದಗಿಸಿತ್ತು. ಜಿಲ್ಲೆಯಿಂದ ಜಾನ್ ಸುಂಟಿಕೊಪ್ಪ
ನನ್ನೊಂದಿಗಿದ್ದರು.

*

ಲಕ್ಷಾಂತರ ಜನ ಮಡಿಕೇರಿಯ ಬೀದಿ-ಬೀದಿಗಳಲ್ಲಿ ನಡೆದುಹೋಗುವುದೆಂದರೆ? ಮತ್ತೆ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಾಗುತ್ತಿದೆ. ಆ ಕ್ಷಣಗಳನ್ನು ನೆನೆದರೆ ರೋಮಾಂಚನವಾಗುತ್ತದೆ. ಅದರಲ್ಲಿ ಹಗಲು -ರಾತ್ರಿಯೆನ್ನದೆ ದುಡಿದ ಮಂದಿಗೆ 'ಆತ್ಮ ತೃಪ್ತಿ'ಯ ಬಹುದೊಡ್ಡ ಕಾಣಿಕೆ ಇದ್ದೇ ಇರುತ್ತದೆ . ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮತ್ತು ಬಳಗಕ್ಕೆ ಅದರ ಶ್ರೇಯಸ್ಸು ಸಲ್ಲಬೇಕು.

ಕೊಡಗಿನಲ್ಲಿ ಈ ಹಿಂದೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳನ್ನು ಹಿರಿಯ ಪತ್ರಕರ್ತರಾದ ಟಿ.ಕೆ. ತ್ಯಾಗರಾಜ್ ತಮ್ಮ ಜಾಲತಾಣದ ಗೋಡೆಯಲ್ಲಿ ಬರೆಯುತ್ತಿದ್ದರು. ಕೊಡಗನ್ನು ಇನ್ನೂ ಹೃದಯದಲ್ಲಿಟ್ಟುಕೊಂಡೇ ಬದುಕುತ್ತಿರುವ ಅವರ ಇಲ್ಲಿನ ನೆನಪುಗಳು ಆರ್ದ್ರವಾಗಿ ತಟ್ಟುತ್ತವೆ. ಪ್ರತೀ ಸಮ್ಮೇಳನಗಳೂ ಪ್ರತಿಯೊಬ್ಬರ ಎದೆಯಲ್ಲಿ ಉಳಿಯುತ್ತವೆ ಎನ್ನುವುದಕ್ಕೆ ಅವರ ಮಾತುಗಳು ಸಾಕ್ಷಿಯಾಗುತ್ತವೆ.

ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಅತ್ಯುತ್ತಮವಾಗಿ ವ್ಯವಸ್ಥೆ ಕಲ್ಪಿಸಲಾಗಿದ್ದ ಪುಸ್ತಕ ಮಳಿಗೆಗೆ ಹೋಗಿದ್ದೆ.ಲಡಾಯಿ ಬಸೂ ಅಲ್ಲೇ ಆ ಸಂಜೆ ಸಮಾನ ಮನಸ್ಕರ ಕವಿಗೋಷ್ಠಿಯೊಂದನ್ನು ಏರ್ಪಡಿಸುವ ಸಿದ್ದತೆಯಲ್ಲಿದ್ದರು. ಸಮಾನತೆಯ ಬೀಜ ಬಿತ್ತುವ ಅವರ ಕನಸು ಎಷ್ಪರ ಮಟ್ಟಿಗೆ ಜಾಗೃತಗೊಂಡಿದೆ ಎಂಬುದನ್ನು ಊಹಿಸಿಕೊಂಡೆ.

ಈಗಲೂ ,ಸಾಹಿತ್ಯ ಸಮ್ಮೇಳನದ ಕೆಲವು ಕ್ಷಣಗಳನ್ನು ಯೂಟೂಬಿನಲ್ಲಿ ನೋಡಿ ಸಂಭ್ರಮಿಸುತ್ತೇನೆ.

*

ಎಲ್ಲ ಸಾಹಿತ್ಯ ಕಾರ್ಯಕ್ರಮಗಳ ಆಶಯ ಒಂದೇ - ಅದು ಈ ನೆಲದ ನಾಡಿಮಿಡಿತವನ್ನು ಅರಿಯುವುದು.ಕೆಲವು ಸಾಹಿತಿಗಳೆನಿಸಿದವರು ಅದನ್ನು 'ಶೋಕಿ' ಮಾಡುವ ಸ್ಥಳಗಳೆಂದುಕೊಂಡಿದ್ದರೂ , ಸಾಮಾಜಿಕ -ಸಾಂಸ್ಕೃತಿಕ ಕಳಕಳಿಯಿಲ್ಲದ ಯಾವೊಬ್ಬ ಬರೆಹಗಾರನೂ 'ಸಾಹಿತಿ' ಎನಿಸಿಕೊಳ್ಳಲಾರ. ಯಾವುದೋ ಕೆಲವು ಸಿದ್ಧಾಂತಕ್ಕೆ ಕಟ್ಟುಬಿದ್ದ ಸಾಹಿತಿಗಳೆನಿಸಿದ ಕೆಲವು ಮಂದಿ ಬೌದ್ಧಿಕ ದೀವಾಳಿಗಳಾಗುತ್ತಿದ್ದಾರೆ.ಈ ಹೊತ್ತು ,ಸಿದ್ಧಮಾದರಿಯ ಸಮಾನತೆಯ ಕಲ್ಪನೆಗಳನ್ನು ಮರುರೂಪಿಸಿ ,ಸಾಂಸ್ಥಿಕ ನ್ಯಾಯವನ್ನು ದೊರಕಿಸಿಕೊಡಲು ಹೋರಾಡುತ್ತಿರುವ ಕೆಲವು ಮಂದಿಗಾದರೂ ಅಂಥ ಪ್ರಜ್ಞೆಯಿದೆಯಲ್ಲಾ ಎಂಬುದನ್ನು ನೆನೆದಾಗ ಖುಷಿಯಾಗುತ್ತದೆ.

*

-ಕಾಜೂರು ಸತೀಶ್



No comments:

Post a Comment