ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, June 29, 2014

ಕೊಡಗು

ಆಹಾ...
ಇಲ್ಲಿ ಶಬ್ದಗಳೆಲ್ಲ ಸ್ತಬ್ಧ!

ಹಸಿರು :
ನೀರ್ಮಣ್ಣುಗಳಣುಗಳು ಜೀವರಸವ ಕಡೆದು
ಎಲೆಗಳಿಗುಣೆಸಿ ಮುದ್ದಿಸುವ ತುತ್ತು
ದಿಟ್ಟಿಸುವ ಕಣ್ಣೊಳಗೊಂದೇ ವರ್ಣ
ಅದು ಉಸುರುವ ಉಸಿರಿಗೆ
ಜಗದ ನಾಸಿಕಗಳೆಲ್ಲ ಕೊಳಲು.


ಗಿರಿ:
ತಡಿಯಂಡಮೋಳ್,ಬ್ರಹ್ಮಗಿರಿ
ಕೋಟೆಬೆಟ್ಟ, ಪುಷ್ಪಗಿರಿಗಳ
ಬಲಿಷ್ಠ ತೋಳುಗಳು
ಆಕಾಶಕ್ಕೆ ಹೆಗಲು
ಮೋಡಗಳಿಗೆ ತೊಟ್ಟಿಲು,
ಮೆಟ್ಟಿಲು
ಸೂರ್ಯನಿಗೆ ಮುತ್ತಿಕ್ಕಿ
ಸುಟ್ಟುಕೊಂಡ ತುಟಿಗಳು .


ನೆಲ-ಜಲ:
ಉಮ್ಮತ್ತಾಟ್,ಬೊಳಕಾಟ್
ಹೆಜ್ಜೆ ಎತ್ತಿಟ್ಟರೆ ಸಾಕು
ಅಲ್ಲೇ ಅಚ್ಚು
ಅಷ್ಟು ಕೆಚ್ಚು
ಕಾಫಿ,ಕಿತ್ತಳೆ ಏಲಕ್ಕಿಗಳೆಂಬೊ
ಹಚ್ಚಿಟ್ಟ ಹಣತೆ
ಒಂಭತ್ತು ದ್ವಾರಗಳಿಂದ
ಅಬ್ಬಿ,ಇರ್ಪು,ಮಲ್ಲಳ್ಳಿಗಳ ತಿಳಿಹಾಲು
ಕಾವೇರಿಗೆ ಕಾವೇರಿಸುವಷ್ಟು ಪುರುಷತ್ವ.


ಮಾಗಿ:
ಬಿರುಸು ನಾಲಿಗೆ
ದೈತ್ಯನ ಬಾಯಿ
ನೆಕ್ಕಿದರೆ ಸೀಳಿ ಬರುವುದು
ನೆಲಾಕಾಶಗಳ ಸಿಪ್ಪೆ .




ಮಳೆ:
ಆಕಾಶ  ನಕ್ಕೂ ನಕ್ಕೂ
ಧುಮ್ಮಿಕ್ಕುವ ಆನಂದಬಾಷ್ಪ .



-2-

ಉಹೂಂ ...
ಇಲ್ಲಿ ಬಿಕ್ಕುಗಳೂ ಸ್ತಬ್ಧ!

ಕಛೇರಿ :
ಒಳಗೆ ಕಾಲಿಡುವ ಮುಗ್ಧ ಮೈಗೆ
ಕಟಕಟ ಮರಕುಟಿಕನ ಕುಟುಕು
ಇಷ್ಟುದ್ದದ ಹಸ್ತ
ತೆರೆದು-ಮುಚ್ಚುವ ಡ್ರಾಯರ್.




ರಸ್ತೆ:
ಚಚ್ಚಿಸಿಕೊಂಡು ಅರೆಜೀವವಾಗಿ
ಮುದುಡಿ ಮಲಗಿದ ಕೇರೆ ಹಾವು
ಕಾಡಾನೆಯ ಲದ್ದಿಯ ಸಿಂಡು
ಹುಲಿಯ ಹೆಜ್ಜೆಯ ಹಚ್ಚೆ
ಆಚೀಚೆ ಅಪ್ಪಿಕೊಳ್ಳಲು ಹವಣಿಸುವ
ಬೇಲಿಯ ಭಯದ ನೆರಳು.

ಕಾರ್ಮಿಕ:
ಆಕಾಶದ ತಾರಸಿ
ನೆಲದ ಗಟ್ಟಿ ಅಡಿಪಾಯ
ಚಂದಿರನ ಚಿತ್ರ ಪ್ರದರ್ಶನ
' ಠೇಂಽಽ..' ಓಂದೇ ಒಂದು ಗುಂಡೇಟಿಗೆ
ಪೂರ್ಣವಿರಾಮ.




ಕಾಡು:
ಬೇಸಿಗೆಗೆ ಬೆದರಿ ನರಸತ್ತ ತೇಗ
ಅಲ್ಲಲ್ಲಿ ತಂತಿ ಬೇಲಿಗೆ ಬೊಜ್ಜು
ಸರಾಗ ನಡೆದಾಡಲು ಸುಗಮ ದಾರಿ.


-3-

ಬೇಲಿಗಳೇ ಇಲ್ಲದ
ಕಾಂಪೌಂಡುಗಳೇ ಇಲ್ಲದ
ಹಚ್ಚಹಸುರಿನ ಕೊಡಗೆಂದರೆ ಮಾತ್ರ ನಂಗಿಷ್ಟ.



ಪ್ರಭೂ,
ಪ್ರಭುತ್ವದ ಆಸೆಗೆ ಬಿದ್ದ
ಎಂಥ ಮಳೆಗೂ
ನೆಲ ಬಿರುಕುಬಿಡದಂತೆ ನೋಡಿಕೊಂಡಿರು!


**
-ಕಾಜೂರು ಸತೀಶ್ 

No comments:

Post a Comment