ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, June 22, 2014

ಒಂದು ಪೆದ್ದು- ಪೆದ್ದಾದ ಪತ್ರ !

ಪ್ರೀತಿಯ ಸ್ಮಿತಾ ಮೇಡಂ,

ನಮಸ್ಕಾರ . ಕವಿತೆಗಳು ನಿಮ್ಮ ಜೊತೆಯಲ್ಲಿರುವಾಗ ನೀವು ಆರೋಗ್ಯದಿಂದ್ದೀರಿ ಎಂದುಕೊಳ್ಳುತ್ತೇನೆ!!

ಒಂದು ದಿನ ಮಯೂರದಲ್ಲಿ ಒಂದು ಚುಟುಕ ಓದಿದ್ದೆ.ಅಲ್ಲಿ ನನ್ನನ್ನು ಕಾಡಿದ್ದು ನಿಮ್ಮ ಹೆಸರಲ್ಲ- ಅದರ ಮುಂದಕ್ಕಿದ್ದ 'ಸಂಪಾಜೆ' ಎಂಬ ಹೆಸರು . ಅದೇ ಚುಟುಕು ಮಯೂರದಲ್ಲಿ ಮತ್ತೊಮ್ಮೆ ಪ್ರಕಟಗೊಂಡಾಗ ಅದು 'ಪಂಪಾಜೆ' ಎಂದು ಓದಿಸಿಕೊಂಡಿತ್ತು! ಆಮೇಲೆ , ಕೊಡಗಿನ ಇಂಥದ್ದೊಂದು ಊರಲ್ಲಿ ಇಂಥವರೊಬ್ಬರು ಬರೆಯುತ್ತಿದ್ದಾರೆ ಎಂದು ಗುರುತು ಮಾಡಿಕೊಂಡೆ.

ಮೂರ್ನಾಲ್ಕು ವರ್ಷಗಳ ಹಿಂದೆ 'ಕೊಡಗಿನ ಶತಮಾನದ ಕಾವ್ಯ ' ಎಂದು ಒಂದಷ್ಟು ಶ್ರಮವಹಿಸಿ ಹೊರತಂದ ಕೃತಿಯಲ್ಲಿ ನಿಮ್ಮ ಕವಿತೆ ಇರಬೇಕಿತ್ತು ಎಂದು ಅದರ ಸಂಪಾದಕಿ ಡಾ. ಕವಿತಾ ರೈಯವರಿಗೆ ಬರೆದ ಉದ್ದದ ಪತ್ರದಲ್ಲಿ ಸೂಚಿಸಿದ್ದೆ.

ಮತ್ತೊಂದು ದಿನ ನೀವು ಫೇಸ್ಬುಕ್ಕಿನಲ್ಲಿ ಕಾಣಿಸಿಕೊಂಡಾಗ , ಹೀಗೀಗೆ 'ಬೇರೆ ಬೇರೆ ' ಕಡೆಗಳಲ್ಲಿ ನಿಮ್ಮನ್ನು ಓದಿಕೊಂಡಿದ್ದೇನೆ ಎಂದು ಮೆಸೇಜು ಟೈಪಿಸಿದ್ದೆ.

ಆಮೇಲಾಮೇಲೆ, ಮಡಿಕೇರಿ ಆಕಾಶವಾಣಿಯ ರಾತ್ರಿ 8ರ ಯುವವಾಣಿಯಲ್ಲಿ ಮೊದಲ ಬಾರಿಗೆ ನಿಮ್ಮ ದನಿಯನ್ನು ಗುರುತಿಸಿದ್ದೆ. ಮತ್ತೆ , ಚೌತಿಗೋ/ದೀಪಾವಳಿಗೋ ಕಾವೇರಿ ಎಕ್ಸಪ್ರೆಸ್ಸಿನಲ್ಲಿ ಬಡಿಸಿದ ಖಾದ್ಯವನ್ನು ನನ್ನ ಮೊಬೈಲಿಗೆ ತುಂಬಿಟ್ಟಿದ್ದೆ.[ಕಳೆದ ಮಾರ್ಚ್ ನಲ್ಲಿ ಯಾವುದೋ ವೈರಸ್ಸೊಂದು ಅವುಗಳನ್ನು ಓದಿಕೊಳ್ಳಲು ಪಡೆದು ಹಿಂತಿರುಗಿಸಲೇ ಇಲ್ಲ !!]
*

ಕವಿತೆಯನ್ನು,ಬದುಕನ್ನು ಬೆಂಕಿಚೆಂಡಿನಂತೆ ಉಳ್ಳಾಡಿಸುತ್ತಿರುವ ನಾನು , ಕೆಸದ ಎಲೆ ಮೇಲಿನ ನೀರಿನ ಹಾಗೆ ಎತ್ತಿ ಅಂಗೈಯಲ್ಲಿಟ್ಟುಕೊಳ್ಳುವಾಗ ಎಲ್ಲಿ ಜಾರಿ ಹೋಗುತ್ತದೋ ಎನ್ನುವಂತಿರುವ ನಿಮ್ಮ ಕವಿತೆಗಳ ಕುರಿತು ನಾನೇನು ಹೇಳಲಿ ನೀವೇ ಹೇಳಿ ! ನನ್ನ ಮಾತುಗಳೀಗ ತುಟಿಯಂಚಲ್ಲೇ ಉ'ಳಿ'ಯುತ್ತಿವೆ ! ಹಹ್ಹಹ್ಹಾ..

ಅಂದ ಹಾಗೆ, ನೀವು ಓದುವ ಶೈಲಿಯಲ್ಲೇ ನಾನು ನಿಮ್ಮ ಕವಿತೆಗಳನ್ನು ಓದಿ ಮುಗಿಸಿದ್ದು! ಪುಸ್ತಕ ಕಳಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ ಆಯ್ತಾ..

*

ನನಗೆ ಖುಷಿಕೊಟ್ಟ ಸಾಲುಗಳು :

ನಿನ್ನೆಗಳೆಲ್ಲವನ್ನೂ ಮರೆತು/
ಲಾಲಿ ಹಾಡುತ್ತಿದೆ ಮರೆಗುಳಿ /
ಮರ.[ಎಲೆ-ಮರ]

ಅವರಿವರ ಕೈದಾಟುತ್ತಾ ಬಾಡುವ/
ಅನಾಥ ಕೂಸು ಮಾತು.[ಮೌನದ ಪದಗಳು ]

ಬಲವಂತದಲ್ಲಿ ಹುಟ್ಟುವುದಿಲ್ಲ ಕವಿತೆ[ಕವಿತೆಗೆ].

ಸುರುಳಿ ಸುತ್ತುವ ಅಲೆಗಳು /
ಕೆಲ ಕ್ಷಣವಾದರೂ ನನ್ನವೇ ಅಲ್ಲವೇ?[ಒಂದು ಬಿನ್ನಹ]

ಸುರಿವ ಬೆವರೊರೆಸಿಕೊಳ್ಳದೆಯೇ/
ಒಡಲೊಳಗೆ ಇಳಿದುಬಿಟ್ಟ..
[ತೊರೆಯ ಅಹವಾಲು]

ಬೆಳಕಿನುರಿಯಲ್ಲಿ ಕಿಸಕ್ಕನೆ/
ನಕ್ಕವರು ಎಲ್ಲಿ ?[ಪ್ರೀತಿ ದೀಪ ]

'ಮುಂಬಾಗಿಲ ಕವಿತೆ ' ನನಗೆ ಹೆಚ್ಚು ಇಷ್ಟವಾದ ಕವಿತೆ.

***

ಇನ್ನು ,ನನ್ನ ಹಾಗೆ ಹೆಚ್ಚು ಮಾತನಾಡುವ ಕವಿತೆಗಳೂ ಇವೆ!!

ಈ ವರ್ಷದಲ್ಲಿ ಮತ್ತೊಂದು ಸಂಕಲನ ಹೊರತನ್ನಿ. ಹೀಗೆ ಏನೇನೋ ತೀರಾ ಪೆದ್ದುಪೆದ್ದಾಗಿ ಗೀಚುವ ನನ್ನನ್ನು ಪ್ರೋತ್ಸಾಹಿಸುತ್ತಿರಿ!!

ಹೆಚ್ಚು ಬರೆಯಲು ಗೊತ್ತಿಲ್ಲ . ವಿರಮಿಸುತ್ತೇನೆ.

ವಂದನೆಗಳು ಮೇಡಂ..

-ಕಾಜೂರು ಸತೀಶ್



1 comment:

  1. ಕಳೆದ ಮಾರ್ಚ್ ನಲ್ಲಿ ಯಾವುದೋ ವೈರಸ್ಸೊಂದು ಅವುಗಳನ್ನು ಓದಿಕೊಳ್ಳಲು ಪಡೆದು ಹಿಂತಿರುಗಿಸಲೇ ಇಲ್ಲ !!]
    *
    ಪೆದ್ದುಪೆದ್ದಾಗಿ ಗೀಚುವ ನನ್ನನ್ನು ಪ್ರೋತ್ಸಾಹಿಸುತ್ತಿರಿ!!

    ಹೆಚ್ಚು ಬರೆಯಲು ಗೊತ್ತಿಲ್ಲ . ವಿರಮಿಸುತ್ತೇನೆ.
    ​ಇದೇ ಇರಬೇಕು ಕವಿ(ನಯ)ತೆ!!​

    ReplyDelete